Friday, March 18, 2011

’ರಿಯಾಲಿಟಿ ಶೋ’ಗಳ ವೈನೋದಿಕ ಹಿಂಸೆ

[ಬಾಗಲಕೋಟೆ ಜಿಲ್ಲೆಯ ಕೆರಕಲ್ ಮಟ್ಟಿ ಹಳ್ಳಿಯಲ್ಲಿ ೬ ವರ್ಷದ ಬಾಲಕನನ್ನು ಪ್ಯ್ಯಾಟೆ ಹುಡುಗಿಯರು ಚಡ್ಡಿ ಬಿಚ್ಚಿ ಅಹ್ಲೀಲವಾಗಿ ಲೇವಡಿ ಮಾಡಿದ್ದು ಅಂತರ್ಜಾಲದಲ್ಲಿ ಚರ್ಚೆಯಾಗುತ್ತಿದೆ .ಸುವರ್ಣ ಚಾನಲ್ ಗಾಗಿ ಚಿತ್ರಿಕರಿಸಲಾಗುತ್ತಿದ್ದ ಈ ರಿಯಾಲಿಟಿ ಶೋ ಮುಗ್ಧ ಮನಸ್ಸಿನ ಮೇಲಾಗುತ್ತಿರುವ ನಗರ ಸಂಸ್ಕೃತಿಯ ದಾಳಿ ಎಂದೇ ನಾನು ಪರಿಗಣಿಸುತ್ತೇನೆ.
ಕಳೆದ ವರ್ಷ ಸೆಪ್ಟಂಬರದಲ್ಲಿ ನಾನು ’ರಿಯಾಲಿಟಿ ಶೋಗಳಲ್ಲಿ ವೈನೋದಿಕ ಹಿಂಸೆ’ ಎಂಬ ಲೇಖನ ಬ್ಲಾಗಿಗೆ ಪೋಸ್ಟ್ ಮಾಡಿದ್ದೆ. ಅದು ಈಗಲೂ ಪ್ರಸ್ತುತವಾಗಬಹುದೆಂದು ಮತ್ತೆ ಪೋಸ್ಟ್ ಮಾಡುತ್ತಿದ್ದೇನೆ ]


ಇಪ್ಪತ್ತು ವರ್ಷಗಳ ಹಿಂದಿನ ಸಮಾಚಾರ; ’ಮನ್ವಂತರ’ ಎಂಬ ರಾಜಕೀಯ ವಾರಪತ್ರಿಕೆಯ ಮುಖಾಂತರ ನಾನು ಪತ್ರಿಕಾರಂಗಕ್ಕೆ ಅಡಿಯಿಟ್ಟೆ. ಆ ಪತ್ರಿಕೆಯ ಸಹ ಪ್ರಕಟಣಾ ಮಾಸಪತ್ರಿಕೆಯೊಂದಿತ್ತು. ಅದರ ಹೆಸರು ’ಸುರತಿ’. ಮಾರುಕಟ್ಟೆಯಲ್ಲಿ ಅದಕ್ಕೆ ಪೈಪೋಟಿ ನೀಡುತ್ತಿರುವ ಇನ್ನೊಂದು ಮಾಸಪತ್ರಿಕೆಯಿತ್ತು. ಅದರ ಹೆಸರು ’ರತಿವಿಜ್ನಾನ’. ಸರ್ಕ್ಯೂಲೇಶನಿನಲ್ಲೂ ಪರಸ್ಪರ ಪೈಪೋಟಿ ನೀಡುತ್ತಿದ್ದ ಆ ಪತ್ರಿಕೆಗಳ ಒಟ್ಟು ಪ್ರಸರಣ ಸಂಖ್ಯೆ ಐದು ಲಕ್ಷ ದಾಟಿ ಹೋಗುತ್ತಿತ್ತು.

ಪ್ರಸರಣದ ದೃಷ್ಟಿಯಿಂದ ನೋಡಿದರೆ ಅವೆರಡು ಪತ್ರಿಕೆಗಳು ಜನಪ್ರಿಯವಾದ ಮಾಸಪತ್ರಿಕೆಗಳು. ಆದರೆ ಅವು ಮನುಷ್ಯನ ಬೇಸಿಕ್ ಇನ್ಸ್ಟಿಂಗ್ಟ್ ಆದ ಲೈಂಗಿಕ ಕುತೂಹಲವನ್ನು, ತಣಿಸುವ, ಕೆರಳಿಸುವ ಪುಸ್ತಕಗಳು ಅಷ್ಟೆ. ’ಸೆಗಣಿಯಲ್ಲಿ ಸಾವಿರ, ಮಧ್ಯಾಹ್ನಕ್ಕೆ ಲಯ’ ಎಂಬಂತೆ ಅದರಿಂದಾಚೆಗೆ ಅವುಗಳಿಗೆ ಪ್ರತ್ಯೇಕ ಐಡೆಂಟಿಟಿ ಇರಲಿಲ್ಲ.

ಅದು ಮುದ್ರಣ ಮಾಧ್ಯಮದ ಸಾರ್ವಭೌಮತ್ವದ ಕಾಲಘಟ್ಟ. ಈಗ ಏನಿದ್ದರೂ ದೃಶ್ಯ ಮಾಧ್ಯಮದ ಯುಗ. ಸರ್ಕ್ಯೂಲೇಷನ್ ಎಂಬುದು ಹಿಂದಕ್ಕೆ ಸರಿದು ಟಿ.ಆರ್.ಪಿ ಎಂಬ ಭೂತ ಟಿ.ವಿಯನ್ನು ಆಳುತ್ತಿರುವ ಕಾಲ. ಇಲ್ಲೂ ಅದೇ ಟೆಕ್ನಿಕ್; ಮನುಷ್ಯನ ಮೂಲಭೂತ ಕಾಮನೆಗಳನ್ನು ತಣಿಸುವುದು. ಮನುಷ್ಯ ಮೂಲತಃ ಕ್ರೂರಿ. ಆತ ಹಿಂಸ್ರಾ ಪಶು. ಆತನಲ್ಲಿರುವ ಆಕ್ರಮಣಶೀಲತೆ ಸೂಕ್ತ ಸಂದರ್ಭಕ್ಕಾಗಿ ಹೊಂಚು ಹಾಕುತ್ತಿರುತ್ತದೆ.

ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಟಿ.ವಿ ಧಾರಾವಾಹಿಗಳನ್ನೇ ನೋಡಿ; ಟಿ,ಅರ್.ಪಿ ಗ್ರಾಪ್ ಉರ್ಧ್ವಮುಖಿಯಾಗಿ ಸಾಗಿದ್ದು, ಸಾಗುತ್ತಿರುವುದು; ಸಚ್ ಕಾ ಸಾಮ್ನ್, ಇಮೋಷನಲ್ ಅತ್ಯಾಚಾರ್, ಕನ್ನಡದ ಹಳ್ಳಿಹೈದ ಪ್ಯಾಟೆಗೆ ಬಂದ...ಮುಂತಾದ ಭಾವಕೋಶವನ್ನು ಕಲುಷಿತಗೊಳಿಸುವ ದಾರಾವಾಹಿಗಳಿಗೆ ಮಾತ್ರ. ಇದರ ಜೊತೆಗೆ ಕೃತ್ರಿಮತೆಯನ್ನೇ ಢಾಳಾಗಿ ತೋರಿಸುವ ಸ್ವಯಂವರದ ಧಾರಾವಾಹಿಗಳು, ಖಾಸಗಿ ಬದುಕನ್ನು ನಾಟಕಿಯವಾಗಿ ರಂಗದ ಮೇಲೆ ತಂದು ಸಾರ್ವಜನಿಕರ ಬಾಯಿಗೆ ಎಲೆಯಡಿಕೆಯಾಗಿಸುವ ಕಥೆಯಲ್ಲ ಜೀವನಗಳು; ಬದುಕು ಜಟಕಾ ಬಂಡಿಗಳು. ಸಾವಿನಾಚೆಗೆ ಏನಿದೆ ಎಂಬ ಮನುಷ್ಯನ ಅನಾದಿ ಕಾಲದ ಜಿಜ್ನಾಸೆಯನ್ನು, ಸಹಜ ಕುತೂಹಲವನ್ನು ಮಾರುಕಟ್ಟೆಯ ಮೌಲ್ಯಗಳಿಗೆ ಬಾಗಿಸುತ್ತಿರುವ ಜನ್ಮಾಂತರಗಳು, ಹೀಗೇ ಉಂಟುಗಳು..!

ಟಿ.ಅರ್.ಪಿ ಗ್ರಾಪ್ ಮೇಲೆರಿದಂತೆಲ್ಲಾ ಚಾನಲ್ ಗಳಿಗೆ ಅಡ್ ರೆವಿನ್ಯು ಜಾಸ್ತಿಯಾಗುತ್ತದೆ. ಟಿ.ಅರ್.ಪಿ ಅಂದರೆ ಟಾರ್ಗೆಟ್ ರೇಟಿಂಗ್ ಪಾಯಿಂಟ್. ಇದು ಜನಪ್ರಿಯ ಟಿ.ವಿ ಪ್ರೋಗ್ರಾಮ್ ಗಳ ಪಟ್ಟಿಯನ್ನು ಕೊಡುತ್ತದೆ. ಕನ್ನಡದಲ್ಲಿ ಪ್ರತಿ ಬುದವಾರದಂದು ಈ ಪಟ್ಟಿ ಬಿಡುಗಡೆಯಾಗುತ್ತದೆ. ಹಾಗಾಗಿ ವಾರಕೊಮ್ಮೆ ಟಿ.ವಿ ನಿರ್ಮಾಪಕರ ಎದೆಬಡಿತ ಏರುಪೇರಾಗುತ್ತದೆ!. ಯಾಕೆಂದರೆ ರೇಟಿಂಗ್ ಇಲ್ಲ ಎಂಬ ಕಾರಣದಿಂದಾಗೆ ಹಲವು ಸದಭಿರುಚಿಯ ಕಾರ್ಯಕ್ರಮಗಳು ವೈಂಡ್ ಅಫ್ ಆದ ಉದಾಹರಣೆ ಟಿ.ವಿ ಇತಿಹಾಸಕ್ಕಿದೆ.

ಟಿ.ಅರ್.ಪಿಯನ್ನು ಯಾರು ನಿರ್ಧರಿಸುತ್ತಾರೆ? ವಿಕ್ಷಕರು. ಆದರೆ ಎಲ್ಲಾ ವಿಕ್ಷಕರಲ್ಲ. ಆಯ್ದ ವೀಕ್ಷಕರು. ಅದರ ನಿರ್ವಹಣೆಯನ್ನು ಏಜನ್ಸಿಯೊಂದು ಮಾಡುತ್ತದೆ. ಅವರು ಆಯ್ದ ಕೆಲವರ ಮನೆಗಳಲ್ಲಿ ’ಪೀಪಲ್ಸ್ ಮೀಟರ್’ ಎಂಬ ಉಪಕರಣವೊಂದನ್ನು ಅಳವಡಿಸುತ್ತಾರೆ. ಆ ಮನೆಯವರು ಯಾವ ಚಾನಲ್, ಯಾವ ಪ್ರೋಗ್ರಾಮನ್ನು ಎಷ್ಟೊತ್ತು ನೋಡುತ್ತಾರೆ ಎಂಬುದರ ಮೇಲೆ ಕಾರ್ಯಕ್ರಮಗಳ ಜನಪ್ರಿಯತೆಯನ್ನು ಏಜನ್ಸಿ ಸಂಯೋಜಿಸುತ್ತದೆ. ಅದೇ ಟಿ.ಅರ್.ಪಿ. ಆದರೆ ಅದರ ನಿಖರತೆಯ ಬಗ್ಗೆಯೇ ಈಗೀಗ ಸಂಶಯ ವ್ಯಕ್ತವಾಗುತ್ತಿದೆ.

ಕರ್ನಾಟಕದಲ್ಲಿ ಬೆಂಗಳೂರನ್ನು ಹೊರತುಪಡಿಸಿ ಒಟ್ಟು ೮ ಟಿ.ಅರ್.ಪಿ ಸೆಂಟರ್ ಗಳಿವೆ.ಅದನ್ನು ಟಿ.ವಿ ಭಾಷೆಯಲ್ಲಿ ಅರ್.ಒ.ಕೆ ಎಂದು ಕರೆಯುತ್ತಾರೆ. ಅಂದರೆ ರೆಸ್ಟ್ ಅಫ್ ಕರ್ನಾಟಕ. ಅವು ಮೈಸೂರು, ಮಂಗಳೂರು, ದಾವಣಗೆರೆ, ಹುಬ್ಬಳಿ, ಗದಗ, ಬೆಳಗಾವಿ, ಗುಲ್ಬರ್ಗಾ ಮತ್ತು ರಾಯಚೂರು. ಜಾಹಿರಾತುದಾರರು ಈ ಸೆಂಟರ್ ಗಳಿಗಿಂತಲೂ ಬೆಂಗಳೂರಿಗೇ ಹೆಚ್ಚು ಗಮನ ಕೊಡುತ್ತಾರೆ. ಯಾಕೆಂದರೆ ಬೆಂಗಳೂರಲ್ಲಿ ಹೆಚ್ಚು ದುಡ್ಡು ಓಡಾಡುತ್ತದೆ. ಇಲ್ಲಿಯ ಜನರ ಖರೀದಿ ಶಕ್ತಿ ಜಾಸ್ತಿ ಎಂಬುದು ಅವರ ತರ್ಕ. ಹಾಗಾಗಿ ಈ ನಗರವೊಂದರಲ್ಲೇ ಸುಮಾರು ೧೮೦ ಮನೆಗಳಲ್ಲಿ ಟಿ.ಅರ್.ಪಿ ಮಾಪನವಾದ ’ಪೀಪಲ್ಸ್ ಮೀಟರ್’ ಗಳನ್ನು ಅಳವಡಿಸಲಾಗಿದೆ.

ಇದರರ್ಥ ಇಷ್ಟೆ; ಟಿ.ವಿ ಮಾಧ್ಯಮದವರ ಲೆಕ್ಕಾಚಾರದಲ್ಲಿ ಗ್ರಾಮಾಂತರ ಪ್ರದೇಶದ, ಬಹುಸಂಖ್ಯಾತ ಜನರು ಟಿ.ವಿ ವೀಕ್ಷಕರೇ ಅಲ್ಲ. ಅಡ್ ರೆವಿನ್ಯೂ ತರುವ ಟಿ.ಅರ್.ಪಿ ಸೆಂಟರ್ ನ ಜನರಿಗಾಗಿ ಅವರು ಕಾರ್ಯಕ್ರಮವನ್ನು ತಯಾರಿಸಬೇಕು. ಅಂದರೆ ಆಧುನಿಕ ಮನೋಭಾವದ, ಉಳ್ಳವರ ಮನೋರಂಜನೆಗಾಗಿ ಕಾರ್ಯಕ್ರಮ ಹಣೆಯಬೇಕು. ನಿಜಕ್ಕೂ ಅದೊಂದು ಸವಾಲು. ಸಾಹಸ, ಹಾಸ್ಯ ಮತ್ತು ಭಾವುಕತೆಯ ಹದವಾದ ಮಿಶ್ರಣದ ಕಾರ್ಯಕ್ರಮಗಳು ಎಲ್ಲಾ ವರ್ಗದ ಪ್ರೇಕ್ಷಕರನ್ನು ಸೆಳೆಯುತ್ತದೆ. ಆದರ ತಯಾರಿಕೆಗೆ ಶ್ರಮ ಮತ್ತು ಪ್ರತಿಭೆ ಬೇಕು. ಮುಖ್ಯವಾಗಿ ಹೃದಯವಂತಿಕೆ ಬೇಕು. ಅದಿಲ್ಲವಾದರೆ ಏನಾಗುತ್ತದೆ ಎಂಬುದಕ್ಕೆ ಇತ್ತೀಚೆಗೆ ಪ್ರಸಾರವಾಗುತ್ತಿರುವ ’ಹಳ್ಳಿಹೈದ ಪ್ಯಾಟೆಗೆ ಬಂದ’ ರಿಯಾಲಿಟಿ ಶೋ ಉತ್ತಮ ಉದಾಹರಣೆ.
ಇಲ್ಲಿ ಎಲ್ಲವೂ ಇದೆ. ಆದರೆ ಹೃದಯವಂತಿಕೆ ಇಲ್ಲ. ಹಳ್ಳಿಯ ಎಳೆಂಟು ಹುಡುಗರನ್ನು ಪೇಟೆಗೆ ತಂದು ಹಾಕಿದ್ದಾರೆ. ಅವರಿಗೆ ನಾಗರಿಕೆ ನಡವಳಿಕೆಗಳನ್ನು[!] ಕಲಿಸಲು ಒಬ್ಬೊಬ್ಬ ಹುಡುಗಿಯರನ್ನು ನೇಮಿಸಲಾಗಿದೆ. ಅವರ ವೇಷ ಭೂಷಣಗಳನ್ನು ನೋಡಿಯೇ ಪಾಪ ಆಹುಡುಗರು ದಂಗಾಗಿರಬೇಕು! ಅಮೇಲೆ ಶುರು ನೋಡಿ, ಅವರಿಗೆ ನಾಗರಿಕ ನಡತೆಯನ್ನು ಕಲಿಸುವ ಪಾಠಗಳು; ಮಾಲ್ ಗಳಲ್ಲಿ ಬಿಕ್ಷೆ ಬೇಡುವುದು, ಬ್ರಿಗೇಡ್ ರೋಡ್ ನಲ್ಲಿ ಹುಡುಗಿಯರ ಮೊಬೈಲ್ ನಂಬರ್ ಗಳನ್ನು ಕಲೆಕ್ಟ್ ಮಾಡುವುದು, ಇಂಗ್ಲೀಷ್ ಕಲಿಯುವುದು, ಯಾರ್ಯರನ್ನೊ ಕಾಡಿ ಬೇಡಿ ಮೆಜೆಸ್ಟಿಕ್ ತಲುಪುವುದು, ಹುಡುಗಿಯರನ್ನು ಹೊತ್ತುಕೊಂಡು ಕೆಸರಿನಲ್ಲಿ ಓಡುವುದು. ಇದೆಲ್ಲಕಿಂತಲೂ ಬೀಬತ್ಸಕರವಾದ ಇನ್ನೊಂದು ಟಾಸ್ಕ್ ಇತ್ತು, ಅತೀ ಹೆಚ್ಚು ಯಾರು ತಿನ್ನುತ್ತಾರೆ, ಕುಡಿಯುತ್ತಾರೆ ಅಂತ. ಅದರಲ್ಲಿ ಸ್ಪರ್ಧಿಗಳಿಗೆ ಗೊತ್ತಿಲ್ಲದಂತೆ ಭೇದಿ ಮಾತ್ರೆ ಹಾಕಿರ್ತಾರೆ. ಆದರೆ ಟಾಯ್ಲೆಟ್ಗೆ ಹೋದ್ರೆ ಸ್ಪರ್ಧೆಯಿಂದ ಹೊರ ಹೋಗಬೇಕಾಗುತ್ತಾದೆ. ದೇಹ ಭಾದೆಯನ್ನು ತಡೆದುಕೊಂಡು ಅವರು ಒದ್ದಾಡುವುದು ನೋಡುವಾಗ ಇದು ಅಮಾನವೀಯ ಅನ್ನಿಸಿಬಿಡುತ್ತಾದೆ. ಇನ್ನು ಆ ಹಳ್ಳಿ ಹುಡುಗರ ಜೋತೆ ಪೇಟೆ ಹುಡುಗಿಯರನ್ನು ರೆಸ್ಲಿಂಗ್ [ಕುಸ್ತಿ] ಆಡಿಸುವುದು ಖಂಡಿತವಾಗಿಯೂ ಆರೋಗ್ಯಕರ ಟಾಸ್ಕ್ ಅನ್ನಿಸುವುದಿಲ್ಲ. ಯಾವ ಮನಸ್ಥಿತಿಯಿಂದ ಅವರು ಪ್ಯಾಟೆಗೆ ಬಂದರೋ ಅದೇ ಮನಸ್ಥಿತಿಯೊಂದಿಗೆ ಅವರು ಹಳ್ಳಿಗೆ ಮರಳಲು ಸಾಧ್ಯವೇ? ಅವರ ಮುಗ್ಧತೆಯನ್ನು ನಾಶ ಮಾಡಿದ ಶಾಪ ಯಾರನ್ನು ತಟ್ಟುತ್ತದೆ?

ಇದೇ ಚಾನಲಿನ ’ಪ್ಯಾಟೆ ಹುಡ್ಗೀರ ಹಳ್ಳಿ ಲೈಪ್’ ಇದಕ್ಕೆ ಹೋಲಿಸಿದರೆ ಚೆನ್ನಾಗಿತ್ತು, ಯಾಕೆಂದರೆ ಹಳ್ಳಿಯಲ್ಲಿ ಮುಕ್ತವಾದ ವಾತಾವರಣವಿರುತ್ತದೆ. ಅವರಲ್ಲಿ ಇನ್ನೂ ಅಂತಃಕರಣ ಉಳಿದಿರುತ್ತದೆ. ಹೊರಗಿನಿಂದ ಬಂದವರನ್ನು ಕೂಡ ಅವರು ಕ್ರಮೇಣ ತಮ್ಮವರೆಂದು ಒಪ್ಪಿಕೊಂಡುಬಿಡುತ್ತಾರೆ. ನಗರದ ಜನತೆಯದು ಕವರ್ಡ್ ಮನಸ್ಥಿತಿ, ಅವರು ಯಾರನ್ನು ನಂಬಲಾರರು. ಹಳ್ಳಿ ಹುಡುಗರಿಗೆ ಮೊಬೈಲ್ ನಂಬರ್ ಕಲೆಕ್ಟ್ ಮಾಡುವುದು, ಲಿಪ್ಟ್ ಪಡೆಯುವುದು ಹಾಗಾಗಿಯೇ ತುಂಬಾ ಕಷ್ಟವಾಗಿದ್ದು. ನಾಗರಿಕ ಜನರ ಕೈಯಲ್ಲಿ ಸಿಕ್ಕು ಅವರು ಪಡುವ ಪರಿಪಾಟಲು ಕಂಡಾಗ ೨೦ ವರ್ಷಗಳ ಹಿಂದೆ ಹಳ್ಳಿಯಿಂದ ನೇರವಾಗಿ ಬೆಂಗಳೂರೆಂಬ ಮಾಯಾಂಗನೆಯ ತೆಕ್ಕೆಗೆ ಬಂದು ಬಿದ್ದ ನನ್ನದೇ ಅನುಭವ ಮರುಕಳಿಸಿದಂತಾಯಿತು. ರಾಜೇಶನೆಂಬ ಹಳ್ಳಿ ಹುಡುಗನಲ್ಲಿ ನನ್ನನ್ನು ನಾನು ಕಂಡುಕೊಂಡೆ.

ಇನ್ನು, ನಿರೂಪಕ ಅಕುಲ್ ಬಾಲಾಜಿಯ ಇಂಗೀಷ್ ಶೈಲಿಯ ಕನ್ನಡ ಉಚ್ಛಾರಣೆ ಮತ್ತು ಅವರು ಹುಡುಗಿಯರನ್ನು ಬಹುವಚನದಲ್ಲೂ ಹುಡುಗರನ್ನು ಏಕವಚನದಲ್ಲೂ ಸಂಬೋಧಿಸುವುದು. ಹುಡಿಗಿಯರಿಗೆ ಗಂಭೀರವಾಗಿ ಬಯ್ಯುವುದು,ಹುಡುಗರಿಗೆ ಅದನ್ನೇ ಗೇಲಿ ಮಾಡುತ್ತಾ ಎಚ್ಚರಿಸುವುದು ಅವರು ನಗರ ಪಕ್ಷಪಾತಿ ಎಂಬುದನ್ನು ತೋರಿಸುತ್ತದೆ. ಇನ್ನು ಸ್ಕ್ರಿಪ್ಟ್ ಮತ್ತು ವಾಯ್ಸ್ ಒವರ್ ವೈನೋದಿಕ ಹಿಂಸೆಗೆ ಅತ್ಯುತ್ತಮ ಉದಾಹರಣೆ. ಅವಕಾಶ ಸಿಕ್ಕಾಗಲೆಲ್ಲಾ ಇಡೀ ಗ್ರಾಮೀಣ ಜನತೆಯನ್ನು, ಅವರ ನಂಬಿಕೆಗಳನ್ನು ಮತ್ತು ಅವರ ಕಪ್ಪು ವರ್ಣವನ್ನು ಲೇವಡಿ ಮಾಡಲಾಗಿದೆ. ಇದಲ್ಲದೆ ಆ ಹುಡುಗರ ಬಾಯಲ್ಲಿ ಪ್ರೀತಿ, ಪ್ರೇಮ, ಮುತ್ತು ಎಂಬ ಮಾತುಗಳನ್ನೆಲ್ಲಾ ಆಡಿಸಿ ಕಾಮನೆಗಳನ್ನು ಕೆರಳಿಸುವ ಪ್ರಯತ್ನವೂ ನಡೆಯುತ್ತಿದೆ.

ರಿಯಾಲಿಟಿ ಶೋಗಳಲ್ಲಿ ಕೆಲಸ ಮಾಡಿದ ನನ್ನ ಗೆಳತಿಯೊಬ್ಬಳು ಹೇಳುತ್ತಿದ್ದಳು; ಅಲ್ಲಿ ’ಡಿವೈಡ್ ಅಂಡ್ ರೂಲ್’ ಅಂದರೆ ಒಡೆದು ಆಳುವ ನೀತಿಯನ್ನು ಅನುಸರಿಸಲಾಗುತ್ತದೆಯೆಂದು. ಸ್ಪರ್ಧಿಗಳಲ್ಲೇ ಪೈಪೋಟಿಯನ್ನು ಹುಟ್ಟು ಹಾಕಿ ಪರಸ್ಪರ ಅಪನಂಬಿಕೆಯನ್ನು ಸೃಷ್ಟಿಸುವುದು. ಪ್ರತಿಯೊಬ್ಬರಿಗೂ ಗೆಲ್ಲುವ ತವಕ. ಹಳ್ಳಿಹೈದ....ದಲ್ಲಿ ಪ್ಯಾಟೆ ಸುಂದರಿಯರಿಗೆ ಮಾತ್ರ ಗೆಲ್ಲುವ ತವಕ .ಹೈದರಿಗೆ ಇಲ್ಲಿಂದ ತಪ್ಪಿಸಿಕೊಂಡು ಊರಿಗೆ ಓಡುವ ತುಡಿತ. ಬಹುಶಃ ಕಾರ್ಯಕ್ರಮದ ನಿಬಂಧನೆಗಳು ಮತ್ತು ಆಕರ್ಷಣೆಗಳು ಅವರನ್ನು ’ಇಲ್ಲಿರಲಾರೆ ಅಲ್ಲಿಗೆ ಪೋಗಲಾರೆ’ ಎಂದು ಕಟ್ಟಿ ಹಾಕಿರಬಹುದು.

ಹಳ್ಳಿ ಜನರ ಬಡತನ, ಅಸಹಾಯಕತೆ ಮತ್ತು ಮುಗ್ಧತೆ ಟಿ.ವಿಯಲ್ಲಿ ಮಾರಾಟದ ಸರಕಾಗುತ್ತಿದೆ. ಅದ್ದೂರಿಯ ಬಂಗಲೆಗಳಲ್ಲಿ ಕುಳಿತು, ಕುರುಕುಲು ತಿಂಡಿ ತಿನ್ನುತ್ತಾ ನಗರಗಳ ಸುಶಿಕ್ಷಿತ ಜನರು ಇದನ್ನು ಎಂಜಾಯ್ ಮಡುತ್ತಾರೆ! ಹಾಗೆಂದು ಅವರನ್ನು ಹೃದಯಹೀನರೆಂದು, ಗ್ರಾಮೀಣ ಜನರನ್ನು ಉಪೇಕ್ಷೆಸುವರೆಂದು ಅನ್ನುವ ಹಾಗಿಲ್ಲ. ಯಾಕೆಂದರೆ ಕಳೆದ ಬಾರಿ ಉತ್ತರ ಕರ್ನಾಟಕದ ಜನತೆ ನೆರೆ ಹಾವಳಿಯಿಂದ ಬದುಕು ಕಳೆದುಕೊಂಡಾಗ ಮುಖ್ಯಮಂತ್ರಿಗಳ ಜೋಳಿಗೆಗೆ ಕೋಟ್ಯಾಂತರ ರೂಪಾಯಿಗಳನ್ನು ಹಾಕಿದವರು ಇದೇ ಪೇಟೆ ಜನರು.

ಇದೇ ನಗರದ ಸೆಲೆಬ್ರಿಟಿಗಳನ್ನು ಅಚ್ಚರಿಯ ಕಣ್ಣುಗಳಿಂದ ನೋಡುತ್ತಿದ್ದ ಹಳ್ಳಿ ಜನರೆದುರು ಅವರ ಖಾಸಗಿ ಬದುಕನ್ನು ತೆರೆದಿಟ್ಟು ಮಾದರಿಗಳನ್ನು ಒಡೆಯುವ ಪ್ರಯತ್ನವೂ ಕಿರು ತೆರೆಯಲ್ಲಿ ನಿರಂತರ ನಡೆಯುತ್ತಿದೆ. ಸಾಮಾಜಿಕ ಹೊಣೆಗಾರಿಕೆಯೆಂಬುದು ದೃಶ್ಯ ಮಾಧ್ಯಮದ ನಿಘಂಟಿನಲ್ಲಿಲ್ಲದ ಪದ. ಇದೇ ಚಾನಲ್ ನವರು ಹಿಂದೆ ಸ್ವಯಂವರ ರಿಯಾಲಿಟಿ ಶೋ ಒಂದು ಮಾಡಿದ್ದರು. ಅದರಲ್ಲಿ ಭಾಗವಹಿಸಲು ವಧುಗಳು ಮುಂದೆ ಬರದಾದಾಗ ಕಿರುತೆರೆ ನಟಿಯರನ್ನೇ ಬಾಡಿಗೆ ವಧುಗಳಾಗಿ ತಂದು ವಿವಾಹಕಾಂಕ್ಷಿಗಳನ್ನು ಬೆಚ್ಚಿ ಬೀಳಿಸಿದ ಇತಿಹಾಸವೂ ಇದಕ್ಕಿದೆ.

ನಾನು ಇದನ್ನು ಬರೆಯುವ ಹೊತ್ತಿಗಾಗಲೇ ಪುತ್ತೂರಿನ ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ಮಾಧವ ಭಾವಿಕಟ್ಟೆಯವರು ’ ಹಳ್ಳಿ ಹೈದ ಪ್ಯಾಟೆಗೆ ಬಂದ’ ಕಾರ್ಯಕ್ರಮದ ಬಗ್ಗೆ ತೀವ್ರ ಅಸಮಾಧಾನಗೊಂಡು ನ್ಯಾಯಾಲಯದ ಮೊರೆ ಹೋಗಲು ಸಿದ್ಧತೆಗಳನ್ನು ಮಾಡಿಕೊಳ್ಳೊತ್ತಿದ್ದಾರೆ. ಹಳ್ಳಿ ಜನರನ್ನು ಸ್ನಾನ ಮಾಡದವರು, ತಲೆ ಬಾಚಿಕೊಳ್ಳದವರು, ಕಾಡುಜನರಂತೆ ಬದುಕುತ್ತಾರೆ ಎಂಬಂತೆ ಚಿತ್ರಿಸಲಾಗಿದೆ; ಗ್ರಾಮೀಣ ಜನರನ್ನು ಅವಮಾನಿಸಲಾಗಿದೆ ಎಂಬುದು ಅವರ ಆರೋಪ. ನಾನು ಮಾತಾಡಿಸಿದ ಬಹುತೇಕ ಜನರ ಅಭಿಪ್ರಾಯವೂ ಇದೇ ಆಗಿದೆ.


’ಹಳ್ಳಿ ಹೈದ ಪ್ಯಾಟೆಗೆ ಬಂದ’ ಎಂಬ ರಿಯಾಲಿಟಿ ಶೋದ ಕೆಲವು ಎಪಿಸೋಡುಗಳನ್ನು ನೋಡಿದೆ. ಅದು ನನಗೆ ಇಷ್ಟನ್ನೆಲಾ ಬರೆಯಲು ಪ್ರಚೋದಿಸಿತು. ಅದಕ್ಕಾಗಿ ಆ ಶೋ ದ ಕ್ರಿಯೇಟಿವ್ ಹೆಡ್ ಗೆ ನನ್ನ ಕೃತಜ್ನತೆಗಳು!

[ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ ]

Sunday, March 13, 2011

ಮೂರ್ತಿಗಳ ’ಇಂಗ್ಲೀಷ್ ಮನಸ್ಸು’ ಮತ್ತು ರೈಗಳ ’ದೇಸಿ ಮನಸ್ಸು’




ಇನ್ಫೋಸಿಸ್ ಟೆಕ್ನಲಾಜೀಸ್ ಸಂಸ್ಥೆಯ ಸಂಸ್ಥಾಪಕ ನಾಗವಾರ ರಾಮರಾಯ ನಾರಾಯಣಮೂರ್ತಿಯವರಿಗೆ ಕನ್ನಡ ಬರುತ್ತದೆಯೆಂದು ಕನ್ನಡ ಕುಲಕೋಟಿಗೆ ಕೊನೆಗೂ ಗೊತ್ತಾಯಿತು. ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಅವರು ಅಚ್ಚಕನ್ನಡದಲ್ಲಿ ಮಾತಾಡಿದರು. ಹಾಗೆಯೇ ಕನ್ನಡದ ಕುವರಿಯೆಂದೇ ಬಿಂಬಿಸಲಾಗುತ್ತಿರುವ ಬಾಲಿವುಡ್ ತಾರೆ ಐಶ್ವರ್ಯ ರೈಗೆ ಕನ್ನಡ ಬರುವುದಿಲ್ಲವೆಂದು ಕೂಡಾ ಸಾಬೀತಾಯಿತು.

ಮೂರ್ತಿಗಳ ಮಾತೃಭಾಷೆ ಕನ್ನಡ. ಹಾಗಾಗಿ ಅವರು ಕನ್ನಡದಲ್ಲಿ ತಡವರಿಸದೆ ಮಾತಾಡಿದರು. ಐಶ್ವರ್ಯಳ ಮಾತೃಭಾಷೆ ತುಳು. ಅದರಲ್ಲಾಕೆ ನಿರರ್ಗಳವಾಗಿ ಮಾತಾಡಬಲ್ಲಳು. ಕೆಲವು ವರ್ಷಗಳ ಹಿಂದೆ ಆಕೆ ಮಂಗಳೂರಿಗೆ ಬಂದಿದ್ದಳು. ಆಗ ಆಕೆಗಿನ್ನೂ ಮದುವೆಯಾಗಿರಲಿಲ್ಲ. ತನ್ನ ಹುಟ್ಟೂರಿನಲ್ಲಿ ತುಂಬಾ ಅಭಿಮಾನದಿಂದ ತುಳುವಿನಲ್ಲೇ ಭಾಷಣ ಮಾಡಿದ ಆಕೆ, "ಯಾನ್ ತುಳು ಆಣನೇ ಮದ್ಮೆ ಆಪಿನಿ" ಅಂದರೆ ’ನಾನು ತುಳು ಹುಡುಗನನ್ನೇ ಮದುವೆಯಾಗುತ್ತೇನೆ’ ಎಂದು ಹೇಳಿ ತುಳು ಹುಡುಗರಲ್ಲಿ ಪುಳಕವನ್ನು ತಂದಿದ್ದಳು.

ತುಳುವರು ಪ್ರಪಂಚದ ಯಾವ ಮೂಲೆಯಲ್ಲಿದ್ದರೂ ಅವರ ಮಾತೃಭಾಷೆ ತುಳುವೇ ಆಗಿರುತ್ತದೆ ಮತ್ತು ಅವರು ತಮ್ಮ ಮಕ್ಕಳಿಗೆ ತುಳು ಕಲಿಸುತ್ತಾರೆ, ಹಾಗಾಗಿ ಅವರ ಮಕ್ಕಳ ಮಾತೃಭಾಷೆ ತುಳುವೇ ಆಗಿರುತ್ತದೆ. ಈ ತುಳುನಾಡು ಕರ್ನಾಟಕವೆಂಬ ರಾಜ್ಯದೊಳಗೆ ಇರುವ ಕಾರಣದಿಂದಾಗಿ ಅವರನ್ನು ನಾವು ಕನ್ನಡಿಗರೆಂದೇ ಪರಿಗಣಿಸುತ್ತೇವೆ. ಅದನ್ನವರು ಪ್ರೀತಿಯಿಂದಲೇ ಒಪ್ಪಿಕೊಳ್ಳುತ್ತಾರೆ. ಇದೇ ಅಭಿಮಾನದಿಂದ ಐಶ್ವರ್ಯ ರೈ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿರಬಹುದು. ಬಾಳ ಠಾಕ್ರೆಯ ಬೆದರಿಕೆಯನ್ನೂ ಧಿಕ್ಕರಿಸಿ ಆಕೆ ಸಮ್ಮೇಳನದಲ್ಲಿ ಭಾಗವಹಿಸಿದಳೆಂಬುದನ್ನು ನಾವು ಗಮನಿಸಬೇಕು. ಬೇಕಾದರೆ ಹಿಂದಿ ತಾರೆಯರಾದ ಸುನಿಲ್ ಶೆಟ್ಟಿ, ಶಿಲ್ಪಶೆಟ್ಟಿ, ನಿರ್ದೇಶಕ ರೋಹಿತ್ ಶೆಟ್ಟಿ, ಸಂಗೀತ ನಿರ್ದೇಶಕ ಸಂದೀಪ್ ಚೌಟ ಅವರನ್ನು ಮಾತಾಡಿಸಿ ನೋಡಿ ಅವರು ತಾವು ತುಳುವರೆಂದು ಹೇಳಿಕೊಳ್ಳಲು ಹೆಮ್ಮೆಪಡುತ್ತಾರೆ, ತಮ್ಮ ಎದುರಿನಲ್ಲಿರುವವರು ತುಳುವರೆಂದು ಗೊತ್ತಾದರೆ ತುಳುವಿನಲ್ಲೇ ಮಾತು ಮುಂದುವರೆಸುತ್ತಾರೆ. ಇಂತಹ ನಡವಳಿಕೆಯನ್ನು ಕನ್ನಡದವರಿಂದ ನಿರೀಕ್ಷಿಸಲು ಸಾಧ್ಯವೇ?

ನಾರಾಯಣಮೂರ್ತಿಯವರು ಸಾರ್ವಜನಿಕವಾಗಿ ಕನ್ನಡ ಮಾತಾಡುವುದಿಲ್ಲ. ಎಲ್ಲಿಯೂ ತಾನು ಕನ್ನಡದವನೆಂದು ಹೆಮ್ಮೆಯಿಂದ ಹೇಳಿಕೊಳ್ಳುವುದಿಲ್ಲ. ಆದರೆ ಐಶ್ವರ್ಯ ರೈ ಸಾರ್ವಜನಿಕವಾಗಿ ತುಳು ಮಾತಾಡುತ್ತಾಳೆ, ತಾನು ತುಳುನಾಡಿನವಳು ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತಾಳೆ. ಇದು ಕನ್ನಡಿಗರಿಗೂ ತುಳುವರಿಗೂ ಇರುವ ವ್ಯತ್ಯಾಸ.

ನನ್ನ ಮಾತೃಭಾಷೆ ತುಳು. ತುಳು ಅಂದ ತಕ್ಷಣ ನನ್ನ ಚಿತ್ತಭಿತ್ತಿಯಲ್ಲಿ ಹಲವು ವಿಚಾರಗಳು ಮೂಡಿಬರುತ್ತವೆ. ಅದು ಯಕ್ಷಗಾನ, ನಾಗಮಂಡಲ, ಭೂತರಾಧನೆ, ಕಂಬಳ, ಕೋಲ, ತಂಬಿಲ, ಡಕ್ಕೆಬಲಿ, ಕೋಳಿ ಅಂಕ, ಖೆಡ್ಡಸ, ಕೋಟಿ-ಚನ್ನಯ್ಯ, ಸಿರಿಜಾತ್ರೆ....ಹೀಗೆ ನಂಬಿಕೆ, ಆಚರಣೆಗಳ ಮೆರವಣಿಗೆ ಸಾಗಿಬರುತ್ತದೆ. ಇದನ್ನೇ ನಾವು ’ತುಳುವ ಮನಸ್ಸು’ ಎಂದು ಕರೆಯುತ್ತೇವೆ. ತುಳು ಕೇವಲ ಒಂದು ಭಾಷೆ ಮಾತ್ರ ಅಲ್ಲ. ಯಕ್ಷಗಾನ, ಕಂಬಳ, ಸಿರಿಜಾತ್ರೆ, ಭೂತರಾದನೆಯ ಹೊರತಾದ ತುಳುನಾಡನ್ನು ಕಲ್ಪಿಸಿಕೊಳ್ಳುವುದಕ್ಕೆ ನನಗೆ ಸಾಧ್ಯವಿಲ್ಲ. ಅದರೆ ಕನ್ನಡ ಎಂದ ತಕ್ಷಣ ಇಷ್ಟು ಶಕ್ತಿಯುತವಾದ ಬಿಂಬಗಳು ನನ್ನ ಚಿತ್ತಭಿತ್ತಿಯಲ್ಲಿ ಮೂಡಿಬರುವುದೇ ಇಲ್ಲ. ನಮ್ಮ ಶಿಷ್ಟ ಸಂಸ್ಕೃತಿ-ಶಿಷ್ಟ ಸಾಹಿತ್ಯವು ಜನಪದ ಸಂಸ್ಕೃತಿ-ಜನಪದ ಸಾಹಿತ್ಯವನ್ನು ಕಡೆಗಣಿಸುತ್ತಿರುವ ಪರಿಣಾಮ ಇದಾಗಿರಬಹುದೇ? ಸಂಸ್ಕೃತ ವಿಶ್ವವಿದ್ಯಾಲಯವನ್ನು ಕಟ್ಟುವಲ್ಲಿನ ಆಸಕ್ತಿ ಜಾನಪದ ವಿಶ್ವವಿದ್ಯಾಲಯವನ್ನು ಕಟ್ಟುವುದರಲ್ಲಿ ಏಕಿಲ್ಲ?

ಕಳೆದ ವರ್ಷ ಧರ್ಮಸ್ಥಳದ ಉಜಿರೆಯಲ್ಲಿ ವಿಶ್ವ ತುಳು ಸಮ್ಮೇಳನ ನಡೆಯಿತು. ಮೂರು ದಿನಗಳ ಕಾಲ ನಡೆದ ಸಮ್ಮೇಳನದಲ್ಲಿ ನಿರೀಕ್ಷೆಗೂ ಮೀರಿ ತುಳುವರು ಭಾಗವಹಿಸಿದ್ದರು. ವೀರೇಂದ್ರ ಹೆಗ್ಗಡೆಯವರನ್ನು ’ಗುರ್ಕಾರ’[ ಯಜಮಾನ] ರನ್ನಾಗಿಸಿ ವೀಳ್ಯಕೊಟ್ಟ ಈ ಸಮ್ಮೇಳನಕ್ಕೆ ೩ಲಕ್ಷ ಜನರು ಬರುವವರೆಂದು ಅಂದಾಜಿಸಲಾಗಿತ್ತು. ಆದರೆ ೬ ಲಕ್ಷಕ್ಕೂ ಅಧಿಕ ತುಳು ಬಂಧುಗಳು ಪ್ರಪಂಚದಾದ್ಯಂತದಿಂದ ಉಜಿರೆಗೆ ಹರಿದು ಬಂದಿದ್ದರು. ಹಿಂದಿನ ಕಾಲದಲ್ಲಿ ಎತ್ತಿನ ಗಾಡಿ ಕಟ್ಟಿಕೊಂಡು ಮನೆ ಮಂದಿಯೆಲ್ಲಾ ಜಾತ್ರೆಗೆ ಬಂದಂತೆ ತುಳು ಬಾಂದವರು ವಾಹನಗಳನ್ನೇರಿ ಉಜಿರೆಗೆ ಬಂದಿದ್ದರು.

ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ದಕ್ಷಿಣ ಭಾಗ ಮತ್ತು ಕೇರಳದ ಉತ್ತರ ಭಾಗವಾದ ಕಾಸರಗೋಡು ಜಿಲ್ಲೆಯಲ್ಲಿ ವಾಸಿಸುವ ಬಹುಸಂಖ್ಯಾತರು ಮಾತಾಡುವ ಭಾಷೆ ತುಳು.ಇದರಲ್ಲಿ ಬಹಳಷ್ಟು ಜನ ದೂರದ ಮುಂಬಯಿ, ಮದ್ಯಪ್ರಾಚ್ಯ ದೇಶಗಳಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಆದರೂ ಅವರು ತುಳುನಾಡನ್ನು, ತುಳುಭಾಷೆಯನ್ನು ಮರೆತವರಲ್ಲ. ತಾವಿರುವೆಡೆಯಲ್ಲಿಯೇ ತಮ್ಮ ದೈವಗಳಿಗೂ ಒಂದು ’ಸ್ಥಾನ’ ಕಲ್ಪಿಸಿಕೊಳ್ಳುತ್ತಾರೆ. ವರ್ಷಕ್ಕೊಮ್ಮೆಯಾದರೂ ತಾಯ್ನಾಡಿಗೆ ಬಂದು ನೇಮ, ಕೋಲ, ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.

ಒಂದು ಅಂದಾಜಿನ ಪ್ರಕಾರ ಸುಮಾರು ೫೦ ಲಕ್ಷ ತುಳುವರು ಪ್ರಪಂಚದಾದ್ಯಂತ ಹರಡಿಕೊಂಡಿದ್ದಾರೆ. ಕರ್ನಾಟಕದ ಒಟ್ಟು ಜನಸಂಖ್ಯೆಯ ಶೇ ೪ರಷ್ಟು ಜನರು ತುಳುವರಾಗಿದ್ದಾರೆ. ಪಂಚದ್ರಾವಿಡ ಭಾಷೆಯಲ್ಲಿ ಒಂದಾದ ತುಳುವಿಗೆ ಸ್ವಂತ ಲಿಪಿಯಿಲ್ಲ; ಭವ್ಯ ಸಾಹಿತ್ಯ ಪರಂಪರೆಯಿಲ್ಲ. ಕೇವಲ ಮೌಕಿಕ ಸಾಹಿತ್ಯದ ಮೂಲಕವೇ ಉಳಿದುಕೊಂಡು ಬಂದಿರುವ ಸಂಸ್ಕೃತಿಯಿದು.

ಇಷ್ಟೆಲ್ಲಾ ಹೇಳಿದುದರ ಸ್ಪಷ್ಟ ಉದ್ದೇಶ ಇಷ್ಟೇ; ಜಾನಪದದ ಜೊತೆ ಅನುಸಂಧಾನ ನಡೆಸದ ಯಾವುದೇ ಭಾಷೆ ಜೀವಂತವಾಗಿ ಉಳಿಯುವುದು ಕಷ್ಟ. ಉಳಿದರೂ ದ್ವೀಪವಾಗಿಬಿಡುತ್ತದೆ. ಸಂಸ್ಕೃತ ಭಾಷೆಯೇ ಇದಕ್ಕೆ ಉದಾಹರಣೆಯಾಗಿ ನಮ್ಮ ಕಣ್ಣ ಮುಂದಿದೆ. ಕನ್ನಡದ ಮಟ್ಟಿಗೆ ಹೇಳುವುದಾರೆ ಮಣ್ಣಿನ ಜೊತೆ ನೇರ ಸಂಪರ್ಕ ಹೊಂದಿರುವ ಬಹುಸಂಖ್ಯಾತ ಜನಸಮುದಾಯವಾದ ರೈತರೊಡನೆ, ಶ್ರಮಿಕವರ್ಗದ ಜೊತೆ ಗುರುತಿಸಿಕೊಂಡು, ಪ್ರಭುತ್ವದ ಭಾಷೆಯಾಗಬೇಕು. ಇಲ್ಲದಿದ್ದರೆ ಜಾಗತೀಕರಣದ ಭರಾಟೆಯಲ್ಲಿ ಕನ್ನಡ ಕೊಚ್ಚಿ ಹೋಗುವ ಸಾಧ್ಯತೆಯಿದೆ. ಅಮೇರಿಕದ ಅಭಿವೃದ್ದಿಯನ್ನು ಮಾದರಿಯನ್ನಾಗಿರಿಸಿಕೊಂಡಿರುವ ನಾರಾಯಣಮೂರ್ತಿಯಂಥ ವ್ಯಾಪಾರಸ್ಥರು ಅದಕ್ಕೆ ಕಾರಣರಾಗುತ್ತಾರೆ.

ಸಂಸ್ಕೃತಿಯೆನ್ನುವುದು ಪ್ರಾದೇಶಿಕ ವೈಶಿಷ್ಟತೆಗಳನ್ನು ಒಳಗೊಂಡಿರುತ್ತದೆ. ಆಯಾಯ ಪ್ರದೇಶದ ಪರಿಸರ, ಜನಜೀವನ, ಆಚಾರ-ವಿಚಾರ, ಆಹಾರ ಪದ್ದತಿ, ಉಡುಗೆ-ತೊಡುಗೆಗಳು ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಪ್ರತಿ ಸಂಸ್ಕೃತಿಯೂ ಅನನ್ಯವಾದುದು. ಇದರ ಅಭಿವ್ಯಕ್ತಿಯೇ ಜನಪದ ಸಾಹಿತ್ಯ, ಜನಪದ ಸಂಸ್ಕೃತಿ. ಇದುವೇ ಕನ್ನಡ ಸಂಸ್ಕೃತಿಯ ಮೂಲದ್ರವ್ಯ. ಈ ಅನನ್ಯತೆಯನ್ನು ನಾಶಪಡಿಸುವ ಹುನ್ನಾರ ಬಹುರಾಷ್ಟ್ರೀಯ ಕಂಪೆನಿಗಳಿಂದ ನಡೆಯುತ್ತಿದೆ.

ಈ ಮೂಲದ್ರವ್ಯ ನಗರ ಕೇಂದ್ರಿತ ಮನಸ್ಸಿನ ಬಹುತೇಕ ಉದ್ದಿಮೆದಾರರಲ್ಲಿ ಇಲ್ಲ. ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭವಾದ ಮಾಧ್ಯಮದಲ್ಲಿ ಇಲ್ಲ. ರಾಜಕಾರಣಿಗಳಲ್ಲಿ ಇಲ್ಲ. ಪ್ರಭುತ್ವದಲ್ಲಿ ಇಲ್ಲ. ಇದ್ದಿದ್ದರೆ ಇವತ್ತು ವಿಶ್ವಕನ್ನಡ ಸಮ್ಮೇಳನದಲ್ಲಿ ಭಾಗವಹಿಸಲು ಬಂದ ಕಲಾತಂಡಗಳು ವಸತಿ ವ್ಯವಸ್ಥೆಯಿಲ್ಲದೆ ಬೀದಿಯಲ್ಲಿ ಮಲಗುವ ಪ್ರಮೇಯ ಬರುತ್ತಿರಲಿಲ್ಲ. ರೈತ ನಾಯಕನೊಬ್ಬ ಇದೇ ವೇದಿಕೆಯಲ್ಲಿ ಕಣ್ಣೀರು ಹಾಕುವ ದೈನ್ಯತೆ ಉಂಟಾಗುತ್ತಿರಲಿಲ್ಲ. ಕನ್ನಡಿಗರು ಸಂಭ್ರಮಪಡಬೇಕಾಗಿದ್ದ ಸಮ್ಮೇಳನದಲ್ಲಿ ಅಪಸ್ವರದ ಧ್ವನಿ ಏಳುತ್ತಿರಲಿಲ್ಲ.

ನಿಜ. ಇಂಗೀಷ್ ಭಾಷೆಯೆನ್ನುವುದು ಜ್ನಾನದ ಕೀಲಿ ಕೈ. ಅದಕ್ಕಿರುವ ಅಗಾದ ಸಾಧ್ಯತೆಗಳ ಅರಿವು ಪ್ರತಿಯೊಬ್ಬ ಕನ್ನಡಿಗನಿಗೂ ಇದೆ. ಅದರಿಂದಾಗಿಯೇ ಗ್ರಾಮಾಂತರ ಪ್ರದೇಶದ ಸರಕಾರಿ ಶಾಲೆಗಳು ಮುಚ್ಚುವ ಸ್ಥಿತಿ ತಲುಪಿದೆ. ಆದರೆ ನಮ್ಮ ಭಾವ ಪ್ರಪಂಚ ವಿಸ್ತಾರಗೊಳ್ಳುವುದು ಮಾತೃಭಾಷೆಯಿಂದ. ಕನ್ನಡದ ಮನಸ್ಸು ರೂಪುಗೊಳ್ಳುವುದು ಇಲ್ಲಿಯೇ. ಹಾಗಾಇಯೇ ಆಡಳಿತ ಭಾಷೆ ಕನ್ನಡವಾಗಬೇಕು. ನಮ್ಮ ದೈನಂಧಿನ ವ್ಯವಹಾರ ಕನ್ನಡದಲ್ಲಿಯೇ ಸರಾಗವಾಗಿ ಸಾಗುವಂತಾಗಬೇಕು. ಆದರೆ ಹಾಗಾಗಲು ಸಾಧ್ಯವೇ? ನಮ್ಮ ರಾಜಕಾರಣಿಗಳಲ್ಲಿ ಆ ಇಚ್ಛಾಶಕ್ತಿ ಬರಲು ಸಾಧ್ಯವೇ?

ಅಭಿವೃದ್ಧಿಯ ಹೆಸರಲ್ಲಿ ಪ್ರಕೃತಿಯ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಪ್ರಕೃತಿ ಮಾತೆ ಒಮ್ಮೆ ಮೈಕೊಡವಿ ಎದ್ದರೆ ಏನಾಗುತ್ತದೆಯೆಂಬುದು ಈಗ ಸುನಾಮಿಯಿಂದ ನರಳುತ್ತಿರುವ ಜಪಾನ್ ಅನ್ನು ನೋಡಿದರೆ ತಿಳಿಯುತ್ತದೆ. ಜಗತ್ತಿನಲ್ಲಿರುವ ಪರಮಾಣು ಸ್ಥಾವರಗಳಲ್ಲಿ ಕೆಲವೇ ಕೆಲವು ಸ್ಫೋಟಗೊಂಡರೂ ಸಾಮೂಹಿಕ ನರಹತ್ಯೆ ಸಂಭವಿಸಬಹುದಲ್ಲವೆ? ಇದು ಮನುಷ್ಯ ತಾನಾಗೇ ತೋಡಿಕೊಳ್ಳುತ್ತಿರುವ ಮರಣಗುಂಡಿಯಲ್ಲವೇ?

ಈ ಸಂದರ್ಭದಲ್ಲಿ ನಾವು ಮತ್ತೆ ದೇಶಿ ಚಿಂತನೆಯತ್ತ ಹೊರಳಬೇಕಾಗಿದೆ. ಅದಕ್ಕೆ ಕನ್ನಡದ ಮನಸ್ಸು ಬೇಕು; ತುಳು ಮನಸ್ಸು ಬೇಕು. ಅಂಥ ಮನಸ್ಸುಗಳನ್ನು ಕಟ್ಟುವ ಕೆಲಸ ಆಗಬೇಕಾಗಿದೆ. ಅದಕ್ಕೆ ಸಾಹಿತ್ಯ ಸಮ್ಮೇಳನಗಳು, ವಿಶ್ವಕನ್ನಡ ಸಮ್ಮೇಳನಗಳು ನೆರವಾಗಬೇಕು. ಆದರೆ ಈಗ ನಡೆಯುತ್ತಿರುವ ಜಾತ್ರೆಯಂಥ ಸಮ್ಮೇಳನಗಳಿಂದ ಇದು ಸಾಧ್ಯವೇ ಎಂಬುದು ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿದೆ.

Sunday, March 6, 2011

ಕಾಷ್ಠ ದೇವರಿಗೊಲಿದ ಕನ್ನೆಮನಸು



ಅಳು ಉಕ್ಕಿ ಬರುತ್ತಿತ್ತು
ಹೇಳಿಕೊಳ್ಳಲು ನೀನಾದರೂ ಇರುತ್ತಿದ್ದರೆ...?
ನೀನು ಕಿವಿಯಾಗುತ್ತಿದ್ದೆಯಾ? ಗೊತ್ತಿಲ್ಲ. ನನಗಾದರೋ ಹೇಳಲೇಬೇಕಾಗಿತ್ತು-

ಹದಿಹರೆಯವನ್ನು ಓದು ನುಂಗಿತು.
ಮದುವೆ ಮಬ್ಬಾಗಿಸಿತು ಯೌವನವನ್ನು
ಪ್ರೌಢತನದಲ್ಲಿ ಪ್ರೇಮಾನುಭೂತಿಯಾಯಿತು ; ಬದುಕು ತಲ್ಲಣಿಸಿತು
ಮೋಡಿಗಾರ ಅವನು, ಕಣ್ಣು ಕೀಳದಾದೆ
ಬದುಕಿನಾಚೆಗಿನ ಕನವರಿಕೆಗಳು;
ತಾಯಿಯಾದೆ, ಹಸ್ತ ಸಾಮುದ್ರಿಕಳಾದೆ, ತಲೆ ಮೊಟಕಿದೆ.
ಅಳುವ ಸಂಜೆಯಲಿ ಕಣ್ಣಿನಾರತಿಯ ಎತ್ತಿ ಬರಮಾಡಿಕೊಂಡೆ ಒಳಮನೆಗೆ
ಕನ್ನೆತನದಿಂದ ಎದೆಗೊರಗಿದೆ.
ಕರಸ್ಥಳದಲ್ಲಿ ಇಷ್ಟಲಿಂಗ; ಶುಕ್ರಸಂಗಮದ ಕನಸು
ಅರ್ಧದಲ್ಲಿ ಎದ್ದು ಹೊರಟ.ಶಿಖರದೆಡೆ ಕಣ್ಣು ನೆಟ್ಟಿತ್ತು.
ಮತ್ತೆ ಕನವರಿಕೆ; ಮಬ್ಬುಗತ್ತಲು
ಕಣ್ಣಿರ ಬಿಸಿಗೆ ಮೋಡ ಹೆಪ್ಪುಗಟ್ಟಿದೆ.
ಒಡಲ ತುಂಬಾ ಕನಸುಗಳ ಕಳ್ಳ ಬಸಿರು
ನಾ ಮಡಿಲಾದೆ; ನೀನು ಹೆಗಲಾಗಲಿಲ್ಲ
ಅವನು ಏಕಾಂಗವೀರ; ಇವಳು ಸಮರೋತ್ಸಾಹಿ.
ಬಸಿರನ್ನು ನೆತ್ತಿಯಲ್ಲಿ ಹೊತ್ತು ಅಷ್ಟ ಭುಜೆಯಾದಳು
ಅರೆದು, ಹುಡಿ ಹಾರಿಸಿ ಭೂಮಿಗೊರಗಿದಳು
ಬೇಡದ ಗರ್ಭಕ್ಕೆ ತಾಯಿಯಾಗುವ ಭಾಗ್ಯ!

ಎಲ್ಲಾ ವಿಪ್ಲವಗಳಾಚೆ ಹೊಸದೊಂದು ಕನಸು
ಬೆಳ್ಳಿರೇಖೆಯಂತೆ ಕುಣಿಕುಣಿದು ಇಳಿದು ಗರ್ಭದಾಳಕ್ಕೆ ಕನ್ನವಿಕ್ಕಿತು
ದ್ರಾವಿಡ ದೇವನವನು; ತಲೆಯಲಿ ಗಂಗೆ ಪಕ್ಕದಲಿ ಸತಿ
ಸುತ್ತೆಲ್ಲಾ ಗಂಧರ್ವ ಕನ್ಯೆಯರ ಲಾಸ್ಯ.
ಪದತಲದಲಿ ಕುಳಿತು ಬೊಗಸೆಯೊಡ್ಡಿ ಉಲಿದಳು
’ಕನ್ನೆಮನಸು ನನ್ನದು, ನಿನ್ನೊಳಗೆ ಐಕ್ಯಮಾಡಿಕೊ’
ಜೋಗಪ್ಪನವನು, ಕೈಗೆ ಕಪಾಲವನ್ನಿಟ್ಟು ಮಾಯವಾದ.

ಎದೆಗೆ ನಾಟಿದ ತ್ರಿಶೂಲ; ಕೈಯಲ್ಲಿ ಕಪಾಲ.
ಹಂಬಲದ ದೇವರಿಗೆ ಹೃದಯವಿಲ್ಲ!

[ ಕಾಲೇಜು ದಿನಗಳ ನಂತರ ಕವನ ಬರೆದಿರಲಿಲ್ಲ. ಮಹಿಳಾದಿನಕ್ಕೆಂದು ಬರೆಯಲು ಪ್ರಯತ್ನಿಸಿದೆ. ಇದು ಕವನವಾಗಿದೆಯೋ ಇಲ್ಲವೋ ನೀವು ಹೇಳಬೇಕು.]