Saturday, August 27, 2011
ಮಾಧ್ಯಮ ಲೋಕ; ಒಡೆದ ಕನ್ನಡಿ
ಪ್ರತಿ ಮಂಗಳವಾರ ಬೆಳಿಗ್ಗೆ ಎಂಟು ಗಂಟೆಗೆ ನಾನು ಎಫ಼್ ಎಮ್ ರೈನ್ ಬೋ ದಲ್ಲಿ’ ಕರ್ತ-ಪತ್ರಕರ್ತ’ ಕಾರ್ಯಕ್ರಮವನ್ನು ಕೇಳುತ್ತೇನೆ. ಪತ್ರಿಕೋದ್ಯಮದಲ್ಲಿ ಅಪಾರ ಅನುಭವವನ್ನು ಪಡೆದಿಕೊಂಡಿರುವ ಖ್ಯಾತ ಪತ್ರಕರ್ತರನ್ನು ಸ್ಟುಡಿಯೋಕ್ಕೆ ಅಹ್ವಾನಿಸಿಅವರ ಸಾಧನೆಯನ್ನು ಶೋತೃಗಳಿಗೆ ಪರಿಚಯಿಸುವ ಸಂದರ್ಶನವನ್ನಾಧರಿಸಿದ ನೇರ ಪ್ರಸಾರದ ಕಾರ್ಯಕ್ರಮವಿದು. ಎಸ್ ಎಸ್ ಉಮೇಶ್ ನಡೆಸುವ ಈ ಕಾರ್ಯಕ್ರಮ ಈಗಾಗಲೇ ನೂರು ಎಪಿಸೋಡ್ ದಾಟಿದೆ. ಇಂದು ಅದರ ಅತಿಥಿಯಾಗಿದ್ದವರು ಹಿಂದು ಪತ್ರಿಕೆಯ ಬೆಂಗಳೂರಿನ ಸ್ಥಾನಿಕ ಸಂಪಾದಕರಾಗಿದ್ದ ಅರಕರೆ ಜಯರಾಮ್ .
ಅರಕರೆ ಜಯರಾಮ್ ಎಂದರೆ ಸದಾ ಸೂಟ್ ದಾರಿಯಾಗಿರುವ, ಗಂಭೀರ ವ್ಯಕ್ತಿತ್ವದ, ಗುಂಡು ಮುಖದ ವ್ಯಕ್ತಿಯೊಬ್ಬರು ನಮ್ಮ ಕಣ್ಣ ಮುಂದೆ ನಿಲ್ಲುತ್ತಾರೆ. ಪ್ರೆಸ್ ಕ್ಲಬ್ ನಲ್ಲಿ ಅಗೊಮ್ಮೆ-ಈಗೊಮ್ಮೆ ದೂರದಿಂದ ಅವರನ್ನು ನೋಡಿದ್ದೆ. ಅವರಿಗೆ ಅಸ್ಖಲಿತವಾಗಿ ಕನ್ನಡ ಮಾತಾಡಲು ಬರುತ್ತದೆಯೆಂದು ನನಗೆ ಗೊತ್ತೇ ಇರಲಿಲ್ಲ.
ಜಯರಾಮ್ ಅವರು ಸಮಕಾಲಿನ ಪತ್ರಿಕೊಧ್ಯಮದ ಬಗ್ಗೆ ಮಾತಾಡುತಾ, ಬೆಂಗಳೂರಲ್ಲಿ ಐವತ್ತಕ್ಕಿಂತಲೂ ಜಾಸ್ತಿ ಕಾಲೇಜುಗಳಲ್ಲಿ ಪತ್ರಿಕೋಧ್ಯಮವನ್ನು ಕಲಿಸುತ್ತಾರೆ.ಆದರೆ ಗುಣಮಟ್ಟದ ಉಪನ್ಯಾಸಕರಿಲ್ಲ, ಆಲ್ಲದೆ ಪತ್ರಕರ್ತನೊಬ್ಬ ಕ್ಲಾಸ್ ರೂಮ್ ನಲ್ಲಿ ರೂಪುಗೊಳ್ಳುವುದಿಲ್ಲ, ಎಂದು ಹೇಳುತ್ತಾ ಹಿಂದಿನ ತಲೆಮಾರಿನ ಪತ್ರಕರ್ತರಲ್ಲಿದ್ದ ಬದ್ಧತೆ ಮತ್ತು ವೃತ್ತಿಪರತೆಯ ಬಗ್ಗೆ ಅಧಿಕಾರಯುತವಾಗಿ ಮಾತಾಡತೊಡಗಿದರು.
ಟೀವಿ ಜರ್ನಲಿಸ್ಟ್ ಗಳ ಬಗ್ಗೆ ಮಾತಾಡುತ್ತಾ ಅವರೊಂದು ಮಾತು ಹೇಳಿದರು; ಟೀವಿ ಜರ್ನಲಿಸ್ಟ್ ಗಳು ಎಮಿನೆಂಟ್ ಅಲ್ಲ, ಅವರೆಲ್ಲಾ ಪ್ರಾಮಿನೆಂಟ್ ಗಳು, ಅಂತ. ನಿಜ, ಹಿಂದೆ ಪತ್ರಿಕೋಧ್ಯಮವೆಂಬುದು ಸೇವಾಕ್ಷೇತ್ರವಾಗಿತ್ತು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಂತೆ ಪತ್ರಿಕಾರಂಗವು ಕೂಡಾ ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭವೆಂದು ಪರಿಗಣಿತವಾಗಿತ್ತು. ಸಮಾಜ ಸೇವೆಗೆ ಸಮೂಹ ಮಾಧ್ಯಮಗಳು ಪೂರಕವಾಗಿ ಕೆಲಸ ಮಾಡುತ್ತಿದ್ದವು. ಹಾಗಾಗಿ ಆದರ್ಶಗಳನ್ನಿಟ್ಟುಕೊಂಡ, ತತ್ವಬದ್ಧರಾದ ಯುವಕರು ನಾನಾ ಕ್ಷೇತ್ರಗಳಿಂದ ಪತ್ರಿಕಾರಂಗಕ್ಕೆ ಬರುತ್ತಿದ್ದರು.
ಆದರೆ ಇಂದು ಹಾಗಿಲ್ಲ. ಪತ್ರಿಕಾ ರಂಗ ಇವತ್ತು ಉದ್ಯಮ ಆಗಿದೆ. ಸಿನೇಮಾ, ಕ್ರೀಕೆಟ್ ನಂತೆ ಅದೊಂದು ಗ್ಲಾಮರ್ ಜಗತ್ತು. ಅಲ್ಲಿ ಹಣ ಮತ್ತು ಖ್ಯಾತಿ ಎರಡೂ ಇದೆ. ಹಾಗಾಗಿ ಅಲ್ಲಿ ಹಣ ಹಾಕಿ ದುಡ್ಡು ದುಡಿಯುವುದನ್ನು ಕರಗತ ಮಾಡಿಕೊಳ್ಳಲು ಹವಣಿಸುವವರ ದೊಡ್ಡ ವರ್ಗವೇ ಇದೆ. ರಿಯಲ್ ಎಸ್ಟೇಟ್ ಕುಳಗಳು ಸಿನೇಮಾರಂಗಕ್ಕೆ ಧಾಂಗುಡಿಯಿಟ್ಟ ಮೇಲೆ ಕನ್ನಡ ಸಿನೇಮಾ ಪ್ರಪಂಚ ಬದಲಾದ ಪರಿಯನ್ನೇ ಗಮನಿಸಿ. ಸುರೇಶ ಕಲ್ಮಾಡಿ ಒಬ್ಬ ಸಾಕಲ್ಲಾ; ಕ್ರೀಡಾ ಜಗತ್ತಿನಲ್ಲಿ ಹಣದ ಮೆರೆದಾಟದ ವೈಖರಿಯನ್ನು ತಿಳಿದುಕೊಳ್ಳಲು.
ಮಾಧ್ಯಮ ರಂಗಕ್ಕೆ ಬನ್ನಿ, ನೀರಾ ರಾಡಿಯಾ ಪ್ರಕರಣದಲ್ಲಿ ಶಾಮೀಲಾದರೆನ್ನಲಾದ ಬರ್ಕಾದತ್ತ, ವೀರಸಾಂಘ್ವಿ, ಪ್ರಭು ಚಾವ್ಲ ಮುಂತಾದವರೆಲ್ಲಾ ಈಗಲೂ ಸ್ವಲ್ಪವೂ ಪಾಪ ಪ್ರಜ್ನೆಯಿಲ್ಲದೆ ನ್ಯಾಯಾಧೀಶರ ಧಿಮಾಕಿನಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ.
ಸಾಂಸ್ಕೃತಿಕವಾಗಿ ಗುರುತಿಸಿಕೊಂಡಿರುವ ರಾಜಕಾರಣಿ ಬಿ.ಎಲ್. ಶಂಕರ್ ತಮ್ಮ ಮಾತುಗಳಲ್ಲಿ ಮತ್ತೆ ಮತ್ತೆ ಒತ್ತಿ ಹೇಳುತ್ತಾರೆ, ಕನ್ನಿಮೋಳಿ, ಎ. ರಾಜ ಮುಂತಾದವರೆಲ್ಲಾ ಆರೋಪ ಹೊತ್ತು ಜೈಲಿಗೆ ತಳ್ಳಲ್ಪಡುತ್ತಾರೆ. ಮಾಧ್ಯಮದವರಿಗೇಕೆ ವಿನಾಯಿತಿ? ನಿಜ, ತಪ್ಪು ಯಾರು ಮಾಡಿದರೂ ತಪ್ಪೇ. ನಮಗೆಲ್ಲರಿಗೂ ಇರುವುದು ಒಂದೇ ಸಂವಿಧಾನ ತಾನೇ?
ಈಗ ಕರ್ನಾಟಕವನ್ನೇ ನೋಡಿ. ಲೋಕಾಯುಕ್ತ ವರದಿ ಬಂದಿದೆ. ಯು.ವಿ.ಸಿಂಗ್ ವರಧಿಯಲ್ಲಿ ಸ್ಪಷ್ಟ ವಾಗಿ ಉಲ್ಲೇಖಿತವಾಗಿದೆ; ಕನ್ನಡದ ಕೆಲವೊಂದು ಪತ್ರಕರ್ತರು ಗಣಿಕಪ್ಪವನ್ನು ಪಡೆದಿದ್ದಾರೆಂದು.
ಗಣಿಗಾರಿಕೆಯಲ್ಲಿ ದಂತಕಥೆಯಾಗುತ್ತಿರುವ ರೆಡ್ಡಿ ಸಹೋದರರ ಗ್ಯಾಂಗ್ ವಿಷಯ ಬಿಟ್ಟುಬಿಡಿ. ಅವರು ವ್ಯಾಪಾರಿಗಳು. ’ವ್ಯಾಪಾರಂ ದ್ರೋಹ ಚಿಂತನಂ’ ಎಂಬ ಮಾತೇ ಇದೆಯಲ್ಲಾ. ದುಡ್ಡು ಬಾಚಿಕೊಳ್ಳುವುದೇ ವ್ಯಾಪಾರದ ಉದ್ದೇಶ. ಆದ್ರೆ ಪತ್ರಕರ್ತರ ಮುಖವಾಡಗಳನ್ನು ತೊಟ್ಟುಕೊಂಡು ಸಮಾಜಕ್ಕೆ ನೀತಿ ಪಾಠ ಹೇಳುವುದನ್ನು ಹಾಬಿಯನ್ನಾಗಿ ಇಟ್ಟುಕೊಂಡವರನ್ನು ಏನಂತ ಕರೆಯುವುದು?
ಕಳೆದವಾರ ಡೆಕ್ಕನ್ ಹೆರಾಲ್ಡ್ ಬಯಲು ಮಾಡಿದ ಗಣಿ ಕಪ್ಪ ಪಡೆದವರ ಹೆಸರುಗಳು ಒಂದು ಸಂಕೇತ ಮಾತ್ರ. ಮಧುಶ್ರೀಯಂಥ ನೂರಾರು ಕಂಪೆನಿಗಳಿವೆ ನೂರಾರು ’ಖಾರದ ಪುಡಿ ಮಹೇಶ’ರಿದ್ದಾರೆ. ಸಂಜಯ್ ಸರ್ ಗಳಿದ್ದಾರೆ, ಮೂರ್ತಿಗಳಿದ್ದಾರೆ. ಹಾಗೆಯೇ ನೂರಾರು ವಿ.ಭಟ್, ಆರ್.ಬಿಗಳಿದ್ದಾರೆ.
ಪತ್ರಿಕೋದ್ಯಮವೆಂಬ ಗ್ಲಾಮರ್ ಲೋಕದಲ್ಲಿ ಮುಖವಾಡ ತೊಟ್ಟಿರುವ ಕೆಲವು ಪತ್ರಕರ್ತರ ಸ್ವವೈಭವೀಕರಣ, ಐಷಾರಾಮಿ ಬದುಕು ಹೇಗಿದೆಯೆಂದರೆ ನಿಜವಾದ ಪತ್ರಕರ್ತರೆಂದರೆ ಹೀಗೆಯೇ ಇರಬೇಕೆಂಬ ಭ್ರಮೆಯನ್ನು ಸಾರ್ವಜನಿಕರಲ್ಲಿ ಉಂಟುಮಾಡುವಂತೆ ಅವರ ನಡವಳಿಕೆಯಿರುತ್ತದೆ. ಅವರಲ್ಲಿ ಗಣಿ ಮಾಲೀಕರಿದ್ದಾರೆ; ರಿಯಲ್ ಎಸ್ಟೇಟ್ ಎಜೆಂಟರಿದ್ದಾರೆ; ಬ್ಲಾಕ್ ಮೇಲ್ ಮಾಡುವವರಿದ್ದಾರೆ; ಹಿಡನ್ ಅಜೆಂಡಗಳನ್ನಿಟ್ಟುಕೊಂಡಿರುವ ರಾಜಕೀಯ ಪಕ್ಷ ಪ್ರಾಯೋಜಿತರಿದ್ದಾರೆ. ರಾಜಕೀಯ ದಲ್ಲಾಳಿಗಳಿದ್ದಾರೆ. ಕಾರ್ಪೋರೇಟ್ ಕಂಪೆನಿಗಳ ಪಿ.ಅರ್.ಓ ಗಳಿದ್ದಾರೆ. ಜಾತೀಯ ವಕ್ತಾರರಿದ್ದಾರೆ. ಇವರ ಮೆರೆದಾಟದಲ್ಲಿ ಬಹುಸಂಖ್ಯಾತರಾಗಿರುವ ಪತ್ರಕರ್ತರ ಪ್ರಾಮಾಣಿಕತೆ, ಸಮಾಜಿಕ ಕಾಳಜಿ ಮಸುಕಾಗಿ ಕಾಣುತ್ತದೆ. ರಾಜಕಾರಣಿಗಳೆಲ್ಲಾ ಭ್ರಷ್ಟರು, ಸ್ವಾರ್ಥಿಗಳು ಎಂದು ಸಾರಸಗಟಾಗಿ ಅನುಮಾನದಿಂದ ನೋಡಿದಂತೆ ಪತ್ರಕರ್ತರೆಲ್ಲಾ ಎಂಜಲು ಕಾಸಿಗೆ ಕೈಯೊಡ್ಡುವವರು ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡುತ್ತಿದೆ.
ಸಂಶಯವಂತೂ ಇದ್ದೇ ಇದೆ; ಗಣಿ ಲಾಬಿ ಮತ್ತು ಕಾರ್ಪೋರೇಟ್ ಜಗತ್ತು ಪತ್ರಿಕೋಧ್ಯಮವನ್ನು ನಿಯಂತ್ರಿಸುತ್ತದೆಯೆಂದು. ಕಳೆದ ಮೂರ್ನಾಲ್ಕು ವರ್ಷಗಳಿಂದ ಮಾಧ್ಯಮದ ಆದ್ಯತೆಗಳು ಬದಲಾಗಿರುವುದು ಸಾರ್ವಜನಿಕರ ಕಣ್ಣಿಗೂ ನಿಚ್ಚಳವಾಗಿ ಗೋಚರಿಸುತ್ತಿದೆ. ಇಲ್ಲವಾದರೆ ಕರ್ನಾಟಕದ ಮಟ್ಟಿಗೆ ಮೂರು ಪ್ರಮುಖ ವಿಷಯಗಳಾದ ಅಕ್ರಮ ಗಣಿಗಾರಿಕೆ, ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಇನ್ನೂ ಸಿಗದ ಪುನರ್ವಸತಿ, ರೈತರ ಕೃಷಿ ಭೂಮಿ ಸ್ವಾಧೀನ ಇವುಗಳಿಗೆ ಮಾಧ್ಯಮ ಲೋಕ ಸಶಕ್ತ ಧ್ವನಿಯಾಗಬೇಕಿತ್ತು. ಆದರೆ ಹಾಗಾಗಲಿಲ್ಲ. ಅವೆಲ್ಲಾ ವರಧಿಗಾರಿಕೆಯ ಮಟ್ಟದಲ್ಲಿ ಉಳಿದುಬಿಟ್ಟವು.
ಅಣ್ಣಾ ಹಜಾರೆಯವ ಬ್ರಷ್ಟಾಚಾರ ವಿರೋಧಿ ಹೋರಾಟದಲ್ಲೂ ಅಷ್ಟೇ. ಸುದ್ದಿಯನ್ನು ರೋಚಕವಾಗಿ, ರಂಜನೀಯವಾಗಿ, ಎಮೋಷನಲಾಗಿ ಕೊಡುತ್ತಿದೆ. ಕಾರ್ಪೋರೇಟ್ ಜಗತ್ತು ಪ್ರಜಾಪ್ರಭುತ್ವವನ್ನು ನಿಶ್ಯಕ್ತಗೊಳಿಸುತ್ತಿದೆಯೇನೋ ಎಂಬ ಸಂಶಯವೂ ಅವರನ್ನು ಕಾಡುವುದಿಲ್ಲ. ಆಡಳಿತ ಮಂಡಳಿಯಲ್ಲಿ ಬದ್ಧತೆಯಿಲ್ಲ. ಬದ್ಧತೆ ಕಾಣುತ್ತಿಲ್ಲ. ಬದ್ಧತೆಯಿರುತ್ತಿದ್ದರೆ ಬ್ರಷ್ಟಾಚಾರದ ಆಪಾದನೆ ಹೊತ್ತಿರುವ ಪತ್ರಕರ್ತರ ಮೇಲೆ ಮ್ಯಾನೇಜ್ ಮೆಂಟಿನವರು ಕ್ರಮ ಕೈಗೊಳ್ಳುತ್ತಿದ್ದರು. ದೃಶ್ಯ ಮಾಧ್ಯಮದ ಚರ್ಚೆಗಳಲ್ಲಿ ಭಾಗವಹಿಸುವವರಿಗೆಲ್ಲಾ ಗೊತ್ತಿದೆ, ತಾವು ಪರಸ್ಪರ ಕಳ್ಳರೆಂದು.
ಅಕ್ರಮ ಗಣಿಗಾರಿಕೆಯಿಂದ ದುಡ್ಡು ಸಂಪಾದನೆ ಮಾಡಿದವರು, ದುಡ್ಡು ಕೊಟ್ಟು ಎಂಪಿ ಸೀಟ್ ಖರೀದಿ ಮಾಡಿದವರು, ಸರಕಾರದ ಕೃಪಾಶ್ರಯದಿಂದ ಭೂಮಿ ಡಿನೋಟಿಪಿಕೇಶೆನ್ ಮಾಡಿಸಿಕೊಂಡವರು, ವೈಯಕ್ತಿಕ ವರ್ಚಸ್ಸು ಹೆಚ್ಚಿಸಿಕೊಳ್ಳಲು ಪತ್ರಿಕೆ ನಡೆಸುತ್ತಿರುವವರು- ಇವರೆಲ್ಲಾ ಮಾಧ್ಯಮವನ್ನು ಅಸ್ತ್ರ-ಶಸ್ತ್ರಗಳಂತೆ ಬಳಸುತ್ತಿದ್ದಾರೆ. ಇಂತವರಿಂದ ಸಾಮಾಜಿಕ ಹೊಣೆಗಾರಿಕೆಯನ್ನು ನಿರೀಕ್ಷಿಸಲು ಸಾಧ್ಯವೇ? ಇವರಿಗೆಲ್ಲಾ ಪತ್ರಕರ್ತರು ಬೇಕಾಗಿಲ್ಲ, ದಲ್ಲಾಳಿಗಳು ಬೇಕಾಗಿದ್ದಾರೆ. ಹಾಗಾಗಿ ಈ ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿಯ ಗಂಧ ಗಾಳಿ ಇಲ್ಲದವರು ಕೂಡಾ ಪತ್ರಕರ್ತರಾಗುತ್ತಿದ್ದಾರೆ.
ದಲ್ಲಾಳಿಗಳು ಯಾವಾಗಲೂ ಅರ್ಥಿಕರಾಗಿ ಬಲಾಢ್ಯರಾಗುತ್ತಲೇ ಹೋಗುತ್ತಾರೆ. ಇಲ್ಲವಾದರೆ ಪತ್ರಕರ್ತನೊಬ್ಬ ನೂರಾರು ಕೋಟಿಯ ಒಡೆಯನಾಗಲು ಸಾಧ್ಯವೇ ಇಲ್ಲ. ದುಡ್ಡು ಎಲ್ಲಾ ದೌರ್ಭಲ್ಯಗಳನ್ನು, ಅವಲಕ್ಷಣಗಳನ್ನು ಮುಚ್ಚಿ ಹಾಕುತ್ತದೆ.
ಆದರೆ ಇದರಿಂದೆಲ್ಲಾ ಆಘಾತಕ್ಕೊಳಗಾಗುವವರು ಜನಸಾಮಾನ್ಯರು, ಅವರ ಮುಗ್ದ ಮನಸು. ಅವರ ನಂಬಿಕೆಯ ಜಗತ್ತು. ಅವರ ಬದುಕಿನ ಮಾದರಿಗಳು ಛಿದ್ರಗೊಳ್ಳುತ್ತಿದೆ. ಛಿದ್ರಗೊಂಡ ಕನ್ನಡಿಯಲ್ಲಿ ಪೂರ್ಣ ಬಿಂಬವನ್ನು ಕಾಣಲು ಸಾಧ್ಯವಿಲ್ಲ.
Thursday, August 18, 2011
ಒಳಗೂ ಹೊರಗೂ ವ್ಯಾಪಿಸಿರುವ ’gloomy Sunday’ _ ಆತ್ಮಹತ್ಯೆಯ ಹಾಡು…..
The hours are slumberless
dearest the shadows
I live with are numberless
Little white flowers
will never awaken you,
not where the dark coach
of sorrow has taken you
Angels have no thought
of ever returning you
would they be angry
if I thought of joining you?
Gloomy Sunday
Gloomy Sunday
with shadows I spend it all
my heart and I
have decided to end it all
Soon there'll be prayers
and candles are lit, I know
let them not weep
let them know, that I'm glad to go
Death is no dream
for in death I'm caressing you
with the last breath of my soul
I'll be blessing you
Gloomy Sunday
Dreaming, I was only dreaming
I wake and I find you asleep
on deep in my heart, dear
Darling, I hope
that my dream hasn't haunted you
my heart is telling you
how much I wanted you
Gloomy Sunday
It's absolutely gloomy sunday
*rezso seress
Thursday, August 11, 2011
ನಾವೆಷ್ಟು ಸ್ವತಂತ್ರರು?
ನಾವೆಷ್ಟು ಸ್ವತಂತ್ರರು ಎಂಬ ಪ್ರಶ್ನೆ ಮೂಲಭೂತವಾಗಿ ಅಧ್ಯಾತ್ಮದ ಜಿಜ್ನಾಸೆ. ಆದರೆ ಈ ಪ್ರಶ್ನೆಯನ್ನು ಸಾಮಾಜಿಕ ಮತ್ತು ರಾಜಕೀಯದ ಹಿನ್ನೆಲೆಯಲ್ಲಿಟ್ಟು ನೋಡಿದರೆ ನಾವೆಷ್ಟು ಅಸಹಾಯಕರು ಎಂಬುದು ಅರಿವಾಗುತ್ತದೆ. ಮಾನವನ ನೆಲೆಯಲ್ಲಿ ನಿಂತು ಸ್ವಾತಂತ್ರ್ಯದ ಬಗ್ಗೆ ಯೋಚಿಸಿದಾಗ ವ್ಯಕ್ತಿಯೊಬ್ಬನಿಗೆ ಮೂರು ರೀತಿಯ ಸ್ವಾತಂತ್ರ್ಯದ ಅಪೇಕ್ಷೆ ಇರುತ್ತದೆ. ಅದು ವೈಯಕ್ತಿಕ ಸ್ವಾತಂತ್ರ್ಯ, ಸಾಮಾಜಿಕ ಸ್ವಾತಂತ್ರ್ಯ ಮತ್ತು ರಾಜಕೀಯ ಸ್ವಾತಂತ್ರ್ಯ. ಇದು ಅಪೇಕ್ಷೆ ಮಾತ್ರ. ಯಾಕೆಂದರೆ ನಾವೆಲ್ಲಾ ಒಂದಲ್ಲಾ ಒಂದು ರೀತಿಯಲ್ಲಿ ಅವಲಂಬಿತರೇ.
ಮೊನ್ನೆ ಮೊನ್ನೆ ಚಿಕ್ಕ ಬಳ್ಳಾಪುರದ ಚಿಂತಾಮಣಿ ತಾಲೂಕಿನ ಎರ್ರಾಕೋಟೆ ಮತ್ತು ಬಾರ್ಲಹಳ್ಳಿಯಲ್ಲಿ ನಡೆದ ಹತ್ತು ಮಂದಿಯ ಧಾರುಣ ಹತ್ಯೆಯನ್ನೇ ಗಮನಿಸಿ, ಅಲ್ಲಿ ನಾವು ಯಾರನ್ನು ತಪ್ಪಿತಸ್ಥರನ್ನಾಗಿ ನೋಡಬೇಕು? ನಾವು ಒಪ್ಪಿಕೊಂಡ ರಾಜಕೀಯ ವ್ಯವಸ್ಥೆಯನ್ನೇ? ಆ ರಾಜಕೀಯ ವ್ಯವಸ್ಥೆಯ ಭಾಗವಾಗಿರುವ ಪೋಲಿಸರ ನಿಷ್ಕ್ರೀಯತೆಯನ್ನೇ? ಅಥವಾ ಮನುಷ್ಯನ ಮನದಾಳದಲ್ಲಿ ಹುದುಗಿರುವ ಕ್ರೌರ್ಯದ ವಿಜೃಂಭಣೆಯೇ? ಇದನ್ನು ನೋಡುತ್ತಿರುವಾಗ ಸ್ವಾತಂತ್ರ್ಯದ ಜೊತೆಯಲ್ಲಿಯೇ ಜವಾಬ್ದಾರಿಯೂ ಇರಬೇಕು ಅನ್ನಿಸುತ್ತದೆಯಲ್ಲವೇ? ನಮ್ಮ ಸಂವಿಧಾನದಲ್ಲಿ ಅದು ಉಲ್ಲೇಖಿತವಾಗಿದೆ. ಆದರೆ ಅದನ್ನು ನಾವು ಪರಿಪಾಲಿಸುತ್ತಿದ್ದೇವೆಯೇ?
ನಾನೊಬ್ಬಳು ಮಹಿಳೆ.ನನ್ನ ಸ್ವಾತಂತ್ರ್ಯದ ಕಲ್ಪನೆಗೂ ಪುರುಷನೊಬ್ಬನ ಸ್ವಾತಂತ್ರ್ಯದ ಕಲ್ಪನೆಗೂ ಸಾಮಾಜಿಕ ನೆಲೆಯಲ್ಲಿ ಅಪಾರ ವ್ಯತ್ಯಾಸವಿದೆ. ನಾನು ಬದುಕನ್ನು ಅರ್ಥೈಸಿಕೊಳ್ಳುವ ರೀತಿಯೇ ಬೇರೆ ಆತನ ರೀತಿಯೇ ಬೇರೆ. ನನಗೆ ಆತ ಪ್ರತಿಸ್ಪರ್ಧಿಯಲ್ಲ. ಯಾಕೆಂದರೆ ಪ್ರಕೃತಿ ಇಬ್ಬರನ್ನೂ ಅನನ್ಯ ರೀತಿಯಲ್ಲಿ ಸೃಷ್ಟಿಸಿದೆ. ಇಬ್ಬರೂ ಸ್ವತಂತ್ರವಾಗಿ ಆದರೆ ಪೂರಕವಾಗಿ ಬದುಕಿ ಎಂದಿದೆ. ಆದರೆ ನಾವು ಹಾಗಿದ್ದೇವೆಯೇ?
ವ್ಯಯಕ್ತಿಕ ಮಟ್ಟದಲ್ಲಿ ನಾವು ನಮ್ಮ ಭಾವನೆಗಳಿಗೆ ದಾಸರಾಗಿರುತ್ತೇವೆ. ನಮ್ಮ ಹೆತ್ತವರಿಗೆ, ಬಂಧುಗಳಿಗೆ,ಸೇಹಿತರಿಗೆ ಮತ್ತು ಪ್ರೀತಿ ಪಾತ್ರರಿಗಾಗಿ ಹಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳುತ್ತೇವೆ. ಈ ಹೊಂದಾಣಿಕೆಗಳು ಹಲವು ಬಾರಿ ನಮಗೆ ನೆಮ್ಮದಿಯ ಬದುಕನ್ನು ಸಹಾ ಕಟ್ಟಿ ಕೊಡಬಲ್ಲುವು. ಆದರೆ ಇದರಿಂದಾಚೆಯ ಸಾಮಾಜಿಕ ಸಾತಂತ್ರ್ಯಕ್ಕಾಗಿ ಕೈಚಾಚಿದರೆ ಹಿಂದಿನಿಂದಲೂ ನಡೆದುಬಂದಿರುವ ರೂಢಿಗತ ಕಟ್ಟುಪಾಡುಗಳು ನಮ್ಮ ಸ್ವಾತಂತ್ಯವನ್ನು ನಿಯಂತ್ರಿಸುತ್ತವೆ. ಇದನ್ನು ಮೀರುವುದು ತುಂಬಾ ಸಾಹಸದ ಕೆಲಸವೇ ಸರಿ. ಇದಕ್ಕೆ ಒಳನೋಟದ ಮತ್ತು ಚಾಣಕ್ಷತೆಯ ನಡೆ ಬೇಕಾಗುತ್ತದೆ. ಇಲ್ಲವಾದರೆ ಅದು ಸ್ವೇಛ್ಚಾಚಾರವೆಂಬ ಮೂದಲಿಕೆಗೆ ಕಾರಣವಾಗಬಹುದು.
ಆದರೆ ರಾಜಕೀಯ ಸ್ವಾತಂತ್ರ್ಯದ ಮಾತು ಬಂದಾಗ ನಾವು ಇದೆಲ್ಲಕ್ಕಿಂತಲೂ ಹೆಚ್ಚು ಗೊಂದಲಕ್ಕಿಡಾದಂತೆ ನನಗೆ ಭಾಸವಾಗುತ್ತೇನೆ. ಯಾಕೆಂದರೆ ನಾವು ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡವರು. ಅಂದರೆ ಇಲ್ಲಿ ಪ್ರಜೆಗಳೇ ಪ್ರಭುಗಳು. ಆದರೆ ಎಂತಹ ಪ್ರಜೆಗಳು? ಎಂತಹ ಪ್ರಭುಗಳು?
ಕಣ್ಣೆದುರಿನಲ್ಲೇ ಇದೆ, ನಮ್ಮ ರಾಜ್ಯದ ರಾಜಕೀಯ ದೊಂಬರಾಟಗಳು. ಇದಕ್ಕೆ ನಾವು ಕೇವಲ ರಾಜಕಾರಣಿಗಳನ್ನು ದೂರಿ ಪ್ರಯೋಜನವಿಲ್ಲ. ಅವರು ನಾವು ಆರಿಸಿ ಕಳುಹಿಸಿರುವ ನಮ್ಮ ಪ್ರತಿನಿಧಿಗಳು. ಅವರು ತಪ್ಪು ಕಾರ್ಯಗಳನ್ನೆಸಗುತ್ತಿದ್ದರೆ ಅದರಲ್ಲಿ ನೈತಿಕವಾಗಿ ನಾವು ಕೂಡಾ ಪಾಲುದಾರರು!
ಒಂದು ದಶಕದಿಂದ ಈಚೆಗೆ ನಮ್ಮ ಆದ್ಯತೆಗಳು ಬದಲಾಗಿವೆ.ನಾವೀಗ ಜಾಗತೀಕರಣದ ಯುಗದಲ್ಲಿದ್ದೇವೆ. ಪ್ರಪಂಚವೇ ಒಂದು ಹಳ್ಳಿಯಾಗಿದೆ. ಇಲ್ಲಿ ಎಲ್ಲವೂ ಮಾರಟಕ್ಕಿಟ್ಟ ವಸ್ತುಗಳೇ. ಮೂರ್ತ ವಸ್ತುಗಳಾದ ಭೂಮಿ, ಚಿನ್ನ, ಕಬ್ಬಿಣ ಮುಂತಾದ ಖನಿಜ ಸಂಪತ್ತಿನ ಮಾತು ಹಾಗಿರಲಿ ,ಜಾತಿ, ಧರ್ಮ, ದೇವರು, ವೃತ್ತಿನಿಷ್ಟೆ, ಸೌಂದರ್ಯ ಕೊನೆಗೆ ಹೆಣ್ತತನದಂತಹ ಅಮೂರ್ತ ವಿಚಾರಗಳೂ ಕೂಡಾ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೈಪೋಟಿ ಬೆಲೆಗೆ ಮಾರಟವಾಗುತ್ತಿದೆ. ರಾಜಕಾರಣಿಗಳು ಇವುಗಳ ಪ್ರಮುಖ ದಲ್ಲಾಳಿಗಳಾಗುತ್ತಿದ್ದಾರೆ. ಹಣ ಎಲ್ಲವನ್ನೂ ಆಳುತ್ತಲಿದೆ. ಕುರುಡು ಕಾಂಚಾಣದ ಮೋಡಿ ಮನುಷ್ಯತ್ವವನ್ನೇ ಮಂಕಾಗಿಸಿದೆ.
ಸ್ವಾತಂತ್ರ್ಯವನ್ನು ಯಾರೋ ನಮಗೆ ಧಾರೆಯೆರೆದು ಕೊಡುವುದಿಲ್ಲ. ಅದನ್ನು ನಾವೇ ಕಂಡುಕೊಳ್ಳಬೇಕು; ಪಡೆದುಕೊಳ್ಳಬೇಕು. ಸ್ವಾತಂತ್ರ್ಯದ ಹಂಬಲ ಮೂಡಬೇಕಾದರೆ ತಾನು ಬಂಧನದಲ್ಲಿದ್ದೇನೆ ಎಂಬ ಅರಿವು ಮೂಡಬೇಕಲ್ಲವೇ? ಗ್ರಾಮೀಣ ಪ್ರದೇಶದಲ್ಲಿರುವ ಮಹಿಳೆಯೊಬ್ಬಳಿಗೆ ಕೂಡಾ ಸ್ವಾತಂತ್ರ್ಯದ ಬಗ್ಗೆ ತನ್ನದೇ ಆದ ಕಲ್ಪನೆಯಿರುತ್ತದೆ. ಆದರೆ ಅದು ನಮ್ಮಂತಹ ನಗರ ಕೇಂದ್ರಿತ ಬದುಕಿನ ಅರ್ಥಿಕ ಸ್ವಾತಂತ್ರ್ಯದ ಕಲ್ಪನೆಯ ಮೇಲೆ ರೂಪಿತವಾದ ಸ್ವಾತಂತ್ರ್ಯಕಿಂತ ಭಿನ್ನ. ಆಕೆ ಕೌಟುಂಬಿಕ ಚೌಕಟ್ಟುಗಳನ್ನು ಮೀರಲಾರಳು. ಅಲ್ಲಿದ್ದುಕೊಂಡೇ ತನ್ನ ಅಸ್ತಿತ್ವಕ್ಕಾಗಿ ಹೊರಾಡುತ್ತಾಳೆ. ಆದರೆ ಗಂಡಸು ಹಾಗಲ್ಲ.
ಪ್ರಕೃತಿ ಗಂಡಸನ್ನು ಸ್ವಛ್ಚಂದವಾಗಿ, ಮುಕ್ತವಾಗಿ ಸೃಷ್ಟಿಸಿದೆ. ಆತನಿಗೆ ಯಾವುದೇ ಜವಾಬ್ದಾರಿಗಳಿಲ್ಲ. ಕುಟುಂಬ ವ್ಯವಸ್ಥೆ ಜಾರಿಗೆ ಬಂದ ಮೇಲೆ ಮನೆಯ ಯಜಮಾನನಾಗಿ, ಗೃಹಸ್ಥನಾಗಿ ಆತನಿಗೆ ಕೆಲವೊಂದು ಜವಾಬ್ದಾರಿಗಳನ್ನು ಸಮಾಜ ನೀಡಿತ್ತು. ಅದನ್ನಾತ ತೀರಾ ಇತ್ತೀಚಿನವರೆಗೂ ತಕ್ಕ ಮಟ್ಟಿಗ ನಿರ್ವಹಿಸುತ್ತಾನೂ ಬಂದಿದ್ದ. ಆದರೆ ಈಗ ಆತ ಆ ಜವಾಬ್ದಾರಿಯನ್ನೆಲ್ಲಾ ಪತ್ನಿಯ ಹೆಗಲ ಮೇಲೆ ಜಾರಿಸಿದ್ದಾನೆ. ನಗರದಲ್ಲಿ ಈ ಬದಲಾವಣೆ ನಮಗೆ ಎದ್ದು ಕಾಣುತ್ತದೆ. ಅಂದರೆ ಆಧುನಿಕ ಮಹಿಳೆಗೆ ಗಂಡನ ಅವಶ್ಯಕತೆ ಇದೆಯೇ? ಬಹುಶಃ ಇದ್ದಂತಿಲ್ಲ.
ನಿಸರ್ಗ ಸ್ತ್ರೀಗೆ ಪಾಲನೆಯ ಮತ್ತು ವಂಶಾಭಿವೃದ್ಧಿಯ ಜವಾಬ್ದಾರಿಯನ್ನು ನೀಡಿದೆ. ಆಕೆಯ ಗುಣಮಟ್ಟದ, ಅಮೂಲ್ಯ ಬದುಕು ಇದಕ್ಕಾಗಿಯೇ ಕಳೆದು ಹೋಗುತ್ತದೆ. ಹಾಗೆ ಕಳೆದು ಹೋಗುತ್ತಿರುವುದರ ಬಗ್ಗೆ ಹಿಂದಿನ ಕಾಲದ ಮಹಿಳೆಗೆ ಅರಿವಿರಲಿಲ್ಲ. ಆದರೆ ಇಂದಿನ ಮಹಿಳೆಗೆ ಅದು ಅರಿವಾಗುತ್ತಲಿದೆ. ಹಾಗಾಗಿ ಆಕೆ ತನಗೆ ಪ್ರಕೃತಿ ಹೊರಿಸಿರುವ ಜವಾಬ್ದಾರಿಯನ್ನು ನಿಭಾಯಿಸುತ್ತಲೇ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಿದ್ದಾಳೆ. ತನ್ನೊಳಗೆ ಕಂಪಾರ್ಟ್ ಮೆಂಟ್ ಗಳನ್ನು ಸೃಷ್ಟಿಸಿಕೊಂಡು ಅದರೊಳಗೇ ತನ್ನ ಸುಖದ ಹಾದಿಯನ್ನು ಕಂಡುಕೊಳ್ಳುತ್ತಿದ್ದಾಳೆ. ಅಲ್ಲಿ ಆಕೆ ಯಾರಿಗೂ ಅವಲಂಬಿತಳಲ್ಲ.
ಸ್ವತಂತ್ರನಾಗುವುದು ಎಂದರೆ ಬಂದನಗಳನ್ನು ಕಳಚಿಕೊಳ್ಳುತ್ತಾ ಮುನ್ನಡೆಯುವುದು ಎಂದರ್ಥ. ತೊಟ್ಟು ಕಳಚಿ ಹಣ್ಣು ಕೆಳಗೆ ಬಿದ್ದಂತೆ. ಒಮ್ಮೆ ನೆಲಕ್ಕೆ ಬಿದ್ದ ಮೇಲೆ ಮತ್ತೆಂದೂ ಅದು ತೊಟ್ಟಿಗೆ ಅಂಟಿಕೊಳ್ಳದು. ಅದು ಬಿಡುಗಡೆಯ ಸುಖ. ಆದರೆ ನಾವು ಹುಲುಮಾನವರು; ಸಂಸಾರವೆಂಬ ಮೋಹಪಾಶದಲ್ಲಿ ಬಿದ್ದು ಒದ್ದಾಡುತಿರುವೆವು. ಒಂದು ಹಂತದಲ್ಲಿ ಇದಲ್ಲದರಿಂದ ಮುಕ್ತಿಯನ್ನು ಪಡೆಯಬೇಕು. ಅದು ನಮ್ಮೊಳಗೆ ನಡೆಯುವ ಅಂತರ್ಯುದ್ಧ. ಆ ಯುದ್ಧವನ್ನು ನಿಭಾಯಿಸಲು ಗೊತ್ತಾದರೆ ನಾವು ಪರಮ ಸುಖಿಗಳು. ಹೊರಗಿನ ಯಾವ ಬಂಧನಗಳೂ ನಮ್ಮನ್ನು ಎನು ಮಾಡಲಾಗದು.
[ ವಿಜಯ ನೆಕ್ಸ್ಟ್ ಗಾಗಿ ಬರೆದ ಲೇಖನ ]
Friday, August 5, 2011
ಡಿ ವಿ ಯವರ ಕಾಲ್ಗೆಟ್ ನಗು ಮತ್ತು ಒರಿಯೊರ್ದೊರಿ ಅಸಲ್’
ನಿನ್ನೆ ನಮ್ಮ ಮುಖ್ಯಮಂತ್ರಿಯಾಗಿ ಸದಾನಂದ ಗೌಡರು ಪದವಿ ಅಲಂಕರಿಸಿದ್ದನ್ನು ಕಣ್ತುಂಬಿಸಿಕೊಂಡ ಹೊತ್ತಿನಲ್ಲೇ ಅವರ ನಗುವನ್ನು ಶಾಶ್ವತವಾಗಿರಿಸಿಕೊಳ್ಳುವ ಹುಚ್ಚು ಆಲೋಚನೆಯೊಂದು ನನ್ನಲ್ಲಿ ಹುಟ್ಟಿಬಿಟ್ಟು ತುಳುವಿನ ಹಾಸ್ಯ ಚಲನಚಿತ್ರ ’ಒರಿಯೊರ್ದೊರಿ ಅಸಲ್’ ನೋಡಲೆಂದು ಸೀದಾ ಗೋಪಾಲನ್ ಮಾಲ್ ಗೆ ಬಂದುಬಿಟ್ಟೆ. ಮಲ್ಟಿಪ್ಲೆಕ್ಸ್ಗಳು ಬಂದುಬಿಟ್ಟ ಮೇಲೆ ನನ್ನಂತಹ ಒಬ್ಬಂಟಿ ಮಹಿಳೆಯರು ಬಯಸಿದಾಗ ಸಿನೇಮಾ ನೋಡುವುದು ಸುಲಭವಾಗಿದೆ ನೋಡಿ.
ನಿನ್ನೆನೇ ಆ ಸಿನೇಮಾ ನೋಡಲು ಎರಡು ಕಾರಣಗಳಿದ್ದವು. ಒಂದು; ಕೇವಲ ಒಂದು ವಾರದ ಮಟ್ಟಿಗೆ ಮಾತ್ರ ಆ ಸಿನೇಮಾವನ್ನು ಗೋಪಾಲನ್ ಮಲ್ಟಿಪ್ಲೆಕ್ಸ್ ನಲ್ಲಿ ಪ್ರದರ್ಶಿಸುತ್ತಿದ್ದಾರೆಂದು ನಿನ್ನೆ ತಾನೇ ನನ್ನ ಸ್ನೇಹಿತರೊಬ್ಬರು ಹೇಳಿದ್ದರು. ಎರಡನೆಯದಾಗಿ ಕರ್ನಾಟಕದ ಬಿಜೆಪಿ ರಾಜಾಕಾರಣದಲ್ಲಿರುವವರೆಲ್ಲಾ ’ಒರಿಯೊರ್ದೊರಿ ಅಸಲ್’ಗಳೇ. ತುಳುವಿನಲ್ಲಿ ಒರಿಯೊರ್ದೊರಿ ಅಸಲ್ ಗಳೆಂದೆರೆ ಒಬ್ಬರಿಗಿಂತ ಒಬ್ಬರು ಮಹಾಚಾಣಕ್ಷರು ಎಂದರ್ಥ. ಇಂತಹ ’ಅಸಲ್’ ಗಿರಾಕಿಗಳ ಮಧ್ಯೆ ಸದಾನಂದ ಗೌಡರು ತಮ್ಮ ಕಾಲ್ಗೇಟ್ ನಗುವನ್ನು ಬಹುಕಾಲ ಉಳಿಸಿಕೊಳ್ಳುವುದು ಕಷ್ಟ.
ಸದಾನಂದ ಗೌಡರು ನಮ್ಮ ತಾಲೂಕಿನವರು. ಅವರ ಮನೆತನದ ಬಗ್ಗೆ ಅಲ್ಪ-ಸ್ವಲ್ಪ ಗೊತ್ತಿದೆ. ಅವರು ರಬ್ಬರ್ ಸ್ಟಾಂಪ್ ಮುಖ್ಯಮಂತ್ರಿಯಾಗಲಾರರು. ಅವರು ಹುಬ್ಬು ಗಂಟಿಕ್ಕಿ, ತುಟಿ ಬಿಗಿ ಮಾಡುವ ಸಂದರ್ಭ ಮುಂದೆ ಖಂಡಿತಾ ಬರುತ್ತದೆ. ಆದರೆ ಮುಖ್ಯಮಂತ್ರಿಯಾಗಿ ಎಷ್ಟು ಕಾಲ ಮುಂದುವರಿಯಬಹುದು ಎಂಬುದನ್ನು ಈಗಲೇ ಹೇಳುವುದು ಕಷ್ಟ.
’ಒರಿಯೊರ್ದೊರಿ ಅಸಲ್’ ಸಿನಿಮಾಕೆ ಬಂದರೆ ಅದೊಂದು ಸಂಪೂರ್ಣ ಹಾಸ್ಯಮಯ ಚಿತ್ರ. ಇದು ಕರಾವಳಿಯ ಬಹು ಪ್ರಸಿದ್ಧವಾದ ತುಳು ನಗೆ ನಾಟಕದ ಸಿನಿಮಾ ರೂಪಾಂತರ. ಈ ನಾಟಕಕ್ಕೆ ಎರಡೂವರೆ ದಶಕದ ಇತಿಹಾಸವಿದೆ. ತುಳು ರಂಗಭೂಮಿಯಲ್ಲಿ ದೊಡ್ಡ ಹೆಸರು ಮಾಡಿರುವ ವಿಜಯಕುಮಾರ್ ಕೊಡಿಯಾಲ್ ಬೈಲ್. ಇವರು ತಮ್ಮ ನಾಟಕವನ್ನು ಸಿನಿಮಾ ಮಾಡಲು ಹೊರಟಾಗ ಅವರ ಕಣ್ಣಿಗೆ ಬಿದ್ದವರು ಕನ್ನಡದ ನಿರ್ದೇಶಕ ಹೂ ಸು. ರಾಜಶೇಖರ್. ಅವರು ತುಳು ಭಾಷೆಯ ಜಾಯಮಾನಕ್ಕೆ ಚ್ಯುತಿ ಬರದ ರೀತಿಯಲ್ಲಿ ಸಿನಿಮಾವನ್ನು ನಿರ್ದೇಶಿಸಿ ಕೊಟ್ಟಿದ್ದಾರೆ.
ತುಳುವಿನಲ್ಲಿ ’ಕುಸಲ್ದರಸ’ ಎಂದರೆ ಹಾಸ್ಯ ಚಕ್ರವರ್ತಿ ಎಂದು ಹೆಸರು ಮಾಡಿರುವ ನವೀನ್ ಡಿ. ಪಡೀಲ್ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇವರು ತುಳುವಿನ ಸ್ಟಾರ್ ಕಲಾವಿದ. ಯಾರೀ ನವೀನ್ ಎಂದರೆ, ಸುವರ್ಣ ಚಾನಲ್ ನಲ್ಲಿಪ್ರತಿ ಭಾನುವಾರ ಮಧ್ಯಾಹ್ನ ’ಗೊತ್ತಾನಗ ಪೊರ್ತಾಂಡ್’ ಎಂಬ ಧಾರಾವಾಹಿ ಬರುತ್ತಿತ್ತಲ್ಲಾ, ಅದರಲ್ಲಿನ ಕುಡುಕ-ಹಾಸ್ಯ ಪಾತ್ರಧಾರಿ. ನಾಯಾಕಿಯಾಗಿ ಕನ್ನಡದ ರಮ್ಯಾ ಬಾರ್ನಾ ಅಭಿನಯಿಸಿದ್ದಾರೆ. ಆರು ಹಾಡುಗಳಿವೆ. ಎಸ್.ಪಿ ಬಾಲಸುಬ್ರಹ್ಮಣ್ಯಂ, ಉದಿತ್ ನಾರಾಯಣ್, ತುಳುವಿನವರೇ ಆದ ಗುರುಕಿರಣ್ ಹಾಡುಗಳನ್ನು ಹಾಡಿದ್ದಾರೆ. ಹಾಡೊಂದಲ್ಲಿ ಗುರುಕಿರಣ್ ಅಭಿನಯಿಸಿದ್ದಾರೆ ಕೂಡಾ. ಸಾಹಸ ಥ್ರಿಲ್ಲರ್ ಮಂಜು ಅವರದ್ದು. ತುಳುವಿನ ಪ್ರಥಮ ಡಿ.ಟಿ ಎಸ್ ಚಿತ ಎಂಬ ಹೆಗ್ಗಳಿಕೆಯೂ ಈ ಚಿತ್ರಕ್ಕಿದೆ.
ತುಳು ಸಿನೆಮಾ ಇತಿಹಾಸಕ್ಕೆ ಅಂದರೆ ಕೋಸ್ಟಲ್ ವುಡ್ ಗೆ ನಲ್ವತ್ತು ವರ್ಷಗಳ ಇತಿಹಾಸವಿದೆ. ಆದರೆ ಇಷ್ಟೊಂದು ಪ್ರಚಾರ ಮತ್ತು ಜನಪ್ರಿಯತೆಯನ್ನು ಪಡೆದುಕೊಂಡ ಚಿತ್ರ ಇನೊಂದಿಲ್ಲ. ಅದಕ್ಕೆ ತುಳುವರ ಭಾಷಾಭಿಮಾನವೇ ಕಾರಣ. ಕರಾವಳಿಯಲ್ಲಿ ಒಮ್ಮೆಲೇ ಆರು ಥಿಯೇಟರ್ ಗಳಲ್ಲಿ ದಿನಾ ಇಪ್ಪತಮೂರು ಪ್ರದರ್ಶನಗಳನ್ನು ಕಂಡು ಶತದಿನೋತ್ಸವನ್ನು ಆಚರಿಸಿಕೊಂಡಿತ್ತು. ಜಗತ್ತಿನಾದ್ಯಂತ ಹರಡಿಕೊಂಡಿರುವ ತುಳುವರಿಗಾಗಿ ಇಗ ಅದನ್ನು ಮುಂಬೈ, ದುಬೈ, ಕತಾರಾ, ಬಹರೈನ್ ಗಳಲ್ಲಿ ಬಿಡುಗಡೆಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ.
ಪೂರ್ವಗ್ರಹಗಳಿಲ್ಲದೆ ಸದಾನಂದಗೌಡರ ಕ್ಲೋಸ್ ಆಫ್ ನಗೆಯನ್ನು ಎಂಜಾಯ್ ಮಾಡಿದಂತೆ, ಕಥೆ-ಗಿಥೆಯನ್ನೆಲ್ಲಾ ಮರೆತು ಸುಮ್ಮನೆ ಕುಳಿತು ಶುದ್ಧ ಮನಸ್ಸಿನಿಂದ ಈ ಚಿತ್ರವನ್ನು ನೋಡುತ್ತಾ ಹೊಟ್ಟೆ ತುಂಬಾ ನಗಬಹುದು.
Tuesday, August 2, 2011
ಧನ್ಯವಾದಗಳು !
ಶ್ರಾದ್ಧ ಮಾಡಬೇಕು. ಎಲ್ಲವೂ ಸಿದ್ದವಿದೆ...
ಗಲ್ಲಕ್ಕೆ ಕೈಯಿ, ದಿಟ್ಟಿ ದಿಗಂತದಲ್ಲಿ
ಹೇಗೆ ಮರೆಯಲೋ ಹುಡುಗಾ..!
ದೂರಕ್ಕೆ ಭಾವಬಂಧದ ಪಲುಕು.
ಸನಿಹಕ್ಕೆ ಭಾವಕಂಪನದ ಭೀತಿ.
ಕಣ್ಮುಚ್ಚಿ ಧೇನಿಸಿದರೆ ತೊಳಬಂಧಿಯ ಸುಖ.
’ನಿನ್ಯಾಕೋ ನಿನ್ನ ಹಂಗ್ಯಾಕೋ ರಂಗಾ
ನಿನ್ನ ನಾಮದ ಬಲವೊಂದಿದ್ದರೆ ಸಾಕು’
ನೆರಳುಗಳೊಡನೆ ಜೊತೆಯಾಟ, ಬಿಂಬದೊಡನೆ ಬದುಕು
ಅಹಾ! ಬದುಕು ಸುಂದರ.
’ನಿನಗೆ ನೀನೇ ಗೆಳೆಯ’
ಚೌಕಟ್ಟುಗಳ ಮೀರಿ ಬೆಳೆದೆ.
ಅಲ್ಲಿ-ಇಲ್ಲಿ ಎಲ್ಲೆಲ್ಲೂ ಹಸಿರು
ಮೊಗೆದಷ್ಟು ಜೀವಜಲ, ಮಿಡಿದರೆ ವಿದ್ಯುಲ್ಲತಾ
ಶರಧಿಯೊಳಗಣ ಜಲಬಿಂದು.
ಬಂದ ವಾಸ್ತವದ ದೇವದೂತ
ಗಾಳಿಯಲ್ಲಿ ಕೈಯಾಡಿಸಿದ...
ಕಟ್ಟ ಕಡೆಯ ಕಂಬನಿ.
ಪೂರ್ಣಾಹುತಿಯ ಹೊತ್ತಿನಲ್ಲಿ ಅಸ್ತಿತ್ವದ ಜಿಜ್ನಾಸೆ.
ಎಲ್ಲವೂ ಮುಗಿದೇ ಹೋಯ್ತು.
ಅದು ನನ್ನ ವಿಧಿ.
ಶ್ರಾದ್ಧ ಮಾಡಬೇಕು; ಎಲ್ಲವೂ ಸಿದ್ಧವಿದೆ.
ಮತ್ತೆ ಹುಟ್ಟಿ ಕಾಡಬೇಡ ನನ್ನ.
ಧನ್ಯವಾದಗಳು ನಿನಗೆ.