Monday, December 1, 2008

”ರಾಜಕಾರಣಿಗಳೇ ನೀವೀಗ ಅಸ್ಪ್ರ್ರಶ್ಯರು”




’ನಮ್ಮ ಮನೆಗೆ ರಾಜಕಾರಣಿಗಳು ಬರುವ ಅಗತ್ಯ ಇಲ್ಲ. ನಿಮ್ಮ ಸಾಂತ್ವನ ನಮಗೆ ಬೇಕಿಲ್ಲ. ಹಾಗೇನಾದ್ರು ಬಂದ್ರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’

ಹೀಗೆಂದು ಗುಡುಗಿದವರು ಉನ್ನಿಕೃಷ್ಣನ್. ಉನ್ನಿಕೃಷ್ಣನ್, ಮೊನ್ನೆ ಮುಂಬಯಿಯಲ್ಲಿ ನಡೆದ ಉಗ್ರಗಾಮಿ ವಿರುದ್ಧದ ಹೋರಾಟದಲ್ಲಿ ವೀರ ಮರಣವನಪ್ಪಿದ ಎನ್.ಎಸ್.ಜಿ ಪಡೆಯ ಮೇಜರ್ ಸಂದಿಪ್ ತಂದೆ.

ಕೇರಳದ ಮುಖ್ಯಮಂತ್ರಿ ಅಚ್ಯುತಾನಂದ ಮತ್ತು ಗೃಹ ಸಚಿವರಾದ ಕೋಡಿಹಾಳ್ ಬಾಲಕೃಷ್ಣ ಅವರು ನಿನ್ನೆ ಅಂದರೆ ಭಾನುವಾರದಂದು ಉನ್ನಿಕೃಷ್ಣ ಮನೆಗೆ ಬಂದಿದ್ದರು. ಇದು ಅವರಿಗೆ ಇಷ್ಟವಿರಲಿಲ್ಲ.

ಸಂದೀಪ್ ಉಗ್ರರೊಡನೆ ಸೆಣಸಾಡುತ್ತಾ ಹುತಾತ್ಮರಾದರು ಎಂದು ಗೊತ್ತಾದೊಡನೆ ಮಾದ್ಯಮದವರು ಸಹಜವಾಗಿಯೇ ಬೆಂಗಳೂರ್‍ಇನ ಇಸ್ರೋಲೇಔಟ್ ನಲ್ಲಿರುವ ಅವರ ನಿವಾಸಕ್ಕೆ ತೆರಳಿ ತಂದೆ ಉನ್ನಿಕೃಷ್ಣ ನಾಯರ್ ಅವರನ್ನು ಭೇಟಿಯಾಗಲು ಪ್ರಯತ್ನಿಸಿದ್ದಾರೆ. ಅವರ ಮುಂದೆ ಮೈಕ್ ಹಿಡಿದಿದ್ದಾರೆ. ಅಂಥ ನೋವಿನ ಸಂದರ್ಭದಲ್ಲೂ ಆ ತಂದೆ ಹೇಳಿದ್ದೇನು ಗೊತ್ತೆ? ” ನನ್ನ ಮಗ ದೇಶಕ್ಕೆ ತನ್ನ ಕೈಲಾದ ಸೇವೆಯನ್ನಷ್ಟೇ ಮಾಡಿದ. ಆ ಬಗ್ಗೆ ನನಗೆ ಹಿಮ್ಮೆಯಿದೆ, ಇದನ್ನು ಮಾರ್ಕೆಟೈಸ್ ಮಾಡುವುದು ನನಗಿಷ್ಟವಿಲ್ಲ”. ಎಂದು ಅಚ್ಚಕನ್ನಡದಲ್ಲಿ ಹೇಳಿದರು, ವೀರಯೋದನ ಸ್ವಾಭಿಮಾನಿ ತಂದೆ.

ಕೇರಳದ ಮುಖ್ಯಮಂತ್ರಿ ಕರ್ನಾಟಕಕ್ಕೆ ಬಂದು ಯಾಕೆ ಸಾಂತ್ವನ ಹೇಳಬೇಕಾಗಿತ್ತು?

ಉನ್ನಿಕೃಷ್ಣನ್ ಕೇರಳದ ಕಲ್ಲಿಕೋಟೆ ಮೂಲದವರು. ಬೆಂಗಳೂರಿನ ಇಸ್ರೋದಲ್ಲಿ ಉದ್ಯೋಗಿಯಾಗಿದ್ದವರು. ಸಂದಿಪ್ ಮರಣ ಸಂಭವಿಸಿದಾಗ ಅವರ ಕುಟುಂಬಕ್ಕೆ ಕೇರಳ ಮುಖ್ಯಮಂತ್ರಿ ಸಾಂತ್ವನ ಹೇಳಲಿಲ್ಲ ಎಂಬ ಆಕ್ಷೇಪ ಕೇರಳದಲ್ಲಿ ವ್ಯಕ್ತವಾಗಿತ್ತು. ಅದರ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅಚ್ಯುತಾನಂದನ್ ಉನ್ನಿಕೃಷ್ಣನ್ ಕುಟುಂಬಕ್ಕೆ ಸಂತಾಪಸೂಚಕ ಸಂದೇಶವೊಂದನ್ನು ಕಳುಹಿಸಿದ್ದರು. ಆ ಸಂದೇಶದಲ್ಲಿ ಸಂದಿಪನ ಹೆಸರು ತಪ್ಪಾಗಿ ಮುದ್ರಿತವಾಗಿತ್ತು.

ರಾಜಕಾರಣಿಗಳಿಗೆ ಎಲ್ಲವೂ ಯಾಂತ್ರಿಕ ಮತ್ತು ರಾಜಕೀಯ ಪ್ರೇರಿತ

ಮೊನ್ನೆಯ ಮುಂಬೈ ದುರ್ಘಟನೆಗೆ ಮಹಾರಾಸ್ಟ್ರದ ಗೃಹಸಚಿವರಾದ ಅರ್ ಅರ್ ಪಾಟೀಲ್ ನೀಡಿದ ಹೇಳಿಕೆಯನ್ನೇ ನೋಡಿ; ’ಮಹಾನಗರದಲ್ಲಿ ಇಂಥ ಸಣ್ಣ ಪುಟ್ಟ ಘಟನೆಗಳು ನಡೆಯುವುದು ಸಾಮಾನ್ಯ’ ಇಂದು ಈ ಸಾಮಾನ್ಯ ಘಟನೆ ಅವರ ಉಪಮುಖ್ಯ ಮಂತ್ರಿ ಮತ್ತು ಗೃಹಮಂತ್ರಿ ಗಾದಿಗಳನ್ನು ಕಿತ್ತುಕೊಂಡಿದೆ.

ಇನ್ನೊಬ್ಬರಿದ್ದಾರೆ ಗುಜರಾತಿನ ಮುಖ್ಯಮಂತ್ರಿ, ನರೇಂದ್ರ ಮೋದಿ. ಕಮಾಂಡೋಗಳುಗಳು ಉಗ್ರಗಾಮಿಗಳ ವಿರುದ್ದ ಸೆಣಸಾಟ ನಡೆಸುತ್ತಿರುವ ಸ್ಥಳಕ್ಕೆ ಬಂದ ಮೊದಲ ರಾಜಕಾರಣಿ. ಇದೇನೋ ಮೆಚ್ಚತಕ್ಕ ಅಂಶ. ಬಂದವರು ನಮ್ಮ ವೀರ ಯೋದರಿಗೆ ಸ್ಫೂರ್ತಿಯ ಎರಡು ಮಾತಾಡಿ ನೈತಿಕ ಬೆಂಬಲವಿತ್ತು ತೆರಳಬಹುದಾಗಿತ್ತು ಅಲ್ಲೂರಾಜಕೀಯ ತುರುಕಿದರು. ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸರಾವ್ ದೇಶ್ ಮುಖ್ ಘಟನಾ ಸ್ಥಳಕ್ಕೆ ಭೇಟಿ ನೀಡದ್ದಕ್ಕೆ ಆಕ್ಷೇಪಿಸಿದರು. ಮತ್ತೂ ಮುಂದುವರಿದು ಕರ್ಕೆರ ಕುಟುಂಬಕ್ಕೆ ೧ ಕೋಟಿ ರೂಪಾಯಿ ಪರಿಹಾರವನ್ನು ಘೋಶಿಸಿಬಿಟ್ಟರು ಆ ದಾನಶೂರ ಕರ್ಣ!. ನಾಚಿಕೆಯಾಗಬೇಕು ರಾಜಕಾರಣಿಗಳಿಗೆ. ಬಸಿದ ಬಿಸಿ ನೆತ್ತರು ಆರುವ ಮೋದಲೇ ಅದಕ್ಕೆ ಬೆಲೆ ಕಟ್ಟುವ ಅಮಾನವಿಯತೆಗೆ ನಮ್ಮದೊಂದು ಧಿಕ್ಕಾರ.

ಒಂದು ಕೋಟಿ ರೂಪಾಯಿ ಸರಕಾರಿ ನೌಕರನೊಬ್ಬನ ಕುಟುಂಬಕ್ಕೆ ಬಹು ದೊಡ್ಡ ಮೊತ್ತ. ಅದರೂ ಅದನ್ನು ಕರ್ಕೆರ ಪತ್ನಿ ತಿರಸ್ಕರಿಸಿದರು. ಈದೇಶದಲ್ಲಿ ಇನ್ನೂ ದೇಶ ಪ್ರೇಮ, ಸ್ವಾಬಿಮಾನ ಎಂಬುದು ಇಂತವರಿಂದಲೇ ಉಳಿದಿದೆ.

ಇನ್ನು, ಮಹಾರಾಷ್ಟ್ರದ ಮುಖ್ಯಮಂತ್ರಿ ವಿಲಾಸರಾವ್ ದೇಶ್ ಮುಖ್ ನಿಜವಾದ ಅರ್ಥದಲ್ಲಿ ವಿಲಾಸಿಯೇ!. ಬುದವಾರ ರಾತ್ರಿಯಿಂದಲೇ ಉಗ್ರಗಾಮಿಗಳು ತಮ್ಮ ಪೈಶಾಚಿಕ ಕೃತ್ಯ ತೋರಿಸುತ್ತಿದ್ದಾರೆ. ಮನೆಯಲ್ಲಿ ಬೆಚ್ಚಗೆ ಕುಳಿತಿದ್ದ ದೇಶ್ ಮುಖ್, ಎಲ್ಲವೂ ಮುಗಿದ ಮೇಲೆ ಭಾನುವಾರದಂದು ತಮ್ಮ ಪಡೆಯೊಂದಿಗೆ ತಾಜ್ ಹೋಟೇಲ್ ಗೆ ಆಗಮಿಸಿದ್ದಾರೆ. ”ಊರು ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ”

ದೇಶ್ ಮುಖ್ ಪಡೆಯಲಿದ್ದ ಪ್ರಮುಖರು ಯಾರು ಗೊತ್ತೆ? ಅವರ ಪುತ್ರನಾಗಿರುವ ಬಾಲಿವುಡ್ ನಟ ರಿತೇಶ್ ದೇಶ್ ಮುಖ್ ಮತ್ತು ನಿರ್ದೇಶಕ ರಾಮ್ ಗೋಪಾಲ್ ವರ್ಮ. ಅಂದರೆ ದೇಶ್ ಮುಖ್ ತಲೆಯಲ್ಲಿ ಸುಳಿಯುತ್ತಿದ್ದುದೇನು?. ಮುಂಬೈ ಘಟನೆ ಸಿನಿಮಾಕ್ಕೊಂದು ಪ್ಲಾಟ್. ಎಲ್ಲಿಗೆ ಬಂದು ನಿಂತಿದ್ದಾರೆ, ನಮ್ಮ ರಾಜಕಾರಣಿಗಳು. ಧಿಕ್ಕಾರವಿರಲಿ ಅವರ ಬಾಳಿಗೆ.

ಕೇಂದ್ರ ಗೃಹಮಂತ್ರಿ ಶಿವರಾಜ್ ಪಾಟೀಲ್, ಮಹಾರಾಷ್ಟ್ರ ಗೃಹಮಂತ್ರಿ ಅರ್.ಅರ್. ಪಾಟೀಲ್ ತಲೆ ದಂಡ ಆಗಿ ಹೋಗಿದೆ. ಕೆಲವೇ ಘಂಟೆಗಳಲ್ಲಿ ದೇಶ್ ಮುಖ್ ಗಾದಿಯೂ ಉರುಳಲಿದೆ. ಅಂತೂ ಕಾಂಗ್ರೇಸ್ ಎಚ್ಚೆತ್ತುಕೊಳ್ಳುತ್ತಲಿದೆ.

ಇವತ್ತು ಕರ್ನಾಟಕದ ಕಾಂಗ್ರೇಸಿನ ಕಾರ್ಯಕಾರಿ ಸಮಿತಿಯ ಸಭೆ ನಡೆದಿತ್ತು. ಅದರಲ್ಲಿ ಸಂಸತ್ ಮೇಲೆ ದಾಳಿ ನಡೆಸಿದ ತಂಡದ ಮುಖ್ಯಸ್ಥ ಅಪ್ಝಲ್ ಗುರುವಿನ ಗಲ್ಲು ಶಿಕ್ಷೆಯನ್ನು ತಕ್ಷಣವೇ ಜಾರಿಗೊಳಿಸಬೇಕೆಂದು ಕೇಂದ್ರ ಸರಕಾರವನ್ನು ಒತ್ತಾಯಿಸಲಾಗಿದೆ. ಇದು ನಿಜಕ್ಕೂ ಬದಲಾವಣೆಯ ಮುನ್ಸೂಚನೆಯಾಗಿದ್ದರೆ ಚೆನ್ನ. ಆದರೆ ಇದರಲ್ಲೂ ರಾಜಕೀಯ ದುರುದ್ದೇಶಗಳಿದ್ದರೆ..? ಯಾಕೆಂದರೆ ಸಧ್ಯದಲ್ಲೆ ಉಪಚುನಾವಣೆಯಿದೆ ಅದರ ಹಿಂದೆಯೇ ಲೋಕಸಭಾ ಚುನಾವಣೆ ಬರುತ್ತಲಿದೆ.

ಅಂತೂ ಅಫ್ಝಲ್ ಗುರುವನ್ನು ಗಲ್ಲಿಗೇರಿಸುವುದು ಈಗ ಕಾಂಗೇಸ್ಸಿಗೂ ಬೇಕು. ಅದು ಜನರ ಆಕ್ರೋಶವನ್ನು ಬೇರೆಡೆಗೆ ತಿರುಗಿಸಲು ಏನೆಲ್ಲಾ ಕಸರತ್ತು ಮಾಡಬೇಕಾಗಿದೆ. ಬಿಜೆಪಿಗೂ ಮುಸ್ಲಿಂ ಭಯೋತ್ಪಾದಕರಿಗೊಂದು ಛಡಿಯೇಟು ನೀಡಬೇಕಾಗಿದೆ.
ರಾಜಕೀಯ ಪಕ್ಷಗಳು ತಮ್ಮ ಇಚ್ಚಾಶಕ್ತಿಯನ್ನು ಪ್ರದರ್ಶಿಸಲೇಬೇಕಾದ ಕಾಲಘಟ್ಟವಿದು.

ಬೇಕಾದರೆ ಕೋಮುಸೌಹಾರ್ದ ವೇದಿಕೆಯ ಮುಖಂಡರು ತಮ್ಮ ’ಬ್ರದರ್’ನ್ನು ರಕ್ಷಿಸಿಕೊಳ್ಳಲಿ.
ಇನ್ನೊಂದು ಮಾತನ್ನು ಹೇಳಲೇಬೇಕು; ಪೇಜಾವರ ಮಠಾದೀಶರಂತ ಸ್ವಾಮೀಜಿಗಳು ತಮ್ಮ ಮಿತಿಯಲ್ಲಿ ಕೆಲವೊಂದು ಸಮಾಜ ಪರಿವರ್ತನೆಯ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾದೆ. ಅದನ್ಯಾಕೆ ಮುಸ್ಲಿಂ ಧರ್ಮ ಗುರುಗಳು ಮಾಡಬಾರದು? ದೆಹಲಿಯ ಜಾಮ ಮಸೀದಿಯಲ್ಲಿ ಇಂಥ ದಿನ ಚಂದ್ರ ದರ್ಶನವೆಂದರೆ ಅದನ್ನು ಭಾರತದ ಸಮಸ್ತ ಮುಸ್ಲಿಮರೂ ಅನುಸರಿಸುತ್ತಾರೆ. ಧಾರ್ಮಿಕ ಮುಖಂಡರು ಹೊರಡಿಸುವ ’ಪತ್ವಾ’ ವನ್ನು ಎಲ್ಲರೂ ಅನುಕರಿಸುತ್ತಾರೆ. ಭಯೋತ್ಪಾದನೆಯಂತ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೋಡಿರುವ ಯುವಕರನ್ನು ಇವರೇಕೆ ನಿರ್ಭಂದಿಸಬಾರದು?

ಇಸ್ರೇಲಿನಂತ ಪುಟ್ಟ ಸ್ವಾಭಿಮಾನಿ ರಾಷ್ಟ್ರ ನಮ್ಮ ಬದ್ರತಾ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಜಗತ್ತಿನೆದುರು ಇಷ್ಟು ದೊಡ್ಡ ರಾಷ್ಟ್ರ ಬೆತ್ತಲಾಗಿ ನಿಲ್ಲಬೇಕೆ..?

Tuesday, November 25, 2008

ವಾಟಾಳ್ ನಾಗರಾಜ್ ಉಚ್ಚೆ ಹೊಯ್ತಾರಂತೆ !

ವಾಟಾಳ್ ನಾಗರಾಜರ ಹೊಸ ಸಾಹಸದ ಬಗ್ಗೆ ಯಾರಾದರೂ ಬರೆದಿರಬಹುದೇ ಎಂದು ಗೊತ್ತಿರುವ ಬ್ಲಾಗ್ ಗಳನ್ನೆಲ್ಲಾ ಜಾಲಾಡಿದೆ. ಕಾಣಿಸಲಿಲ್ಲ. ’ಬೊಗಳೆ-ರಗಳೆ’ಯಲ್ಲಾದರೂ ಕಾಣಿಸಿಕೊಳ್ಳಬಹುದೆಂದು ಭಾವಿಸಿದ್ದೆ. ಅಲ್ಲೂ ಇರಲಿಲ್ಲ. ಹಾಗಾಗಿ ಈ ಕಾಯಕಕ್ಕೆ ಕೈ ಹಾಕುತ್ತಿದ್ದೇನೆ.

ವಿಷಯ ಏನಪ್ಪಾ ಅಂದ್ರೆ, ನಿನ್ನೆ ಇದ್ದಕ್ಕಿದ್ದಂತೆ ನಮ್ಮ ಕನ್ನಡದ ಉಟ್ಟು ಓರಾಟಗಾರ, ಪ್ರತಿಭಟನೆಗಳ ಸರದಾರ ವಾಟಾಳ್ ನಾಗರಾಜ್ ಪತ್ರಿಕಾ ಗೋಷ್ಟಿ ಕರೆದಿದ್ದರು. ಅಲ್ಲಿ ಅವರು ಹೇಳಿದ್ದು; ಸರಕಾರವು ರಾಜ್ಯಾದ್ಯಂತ ಸರ್ವಾಜನಿಕ ಶೌಚಾಲಯಗಳನ್ನು ನಿರ್ಮಿಸಬೇಕು. ಡಿಸೆ.ಬರ ಅಂತ್ಯದೊಳಗಾಗಿ ಸರಕಾರ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು. ಇಲ್ಲವಾದರೆ ತಾವು ರಾಜಭವನದ ಎದುರು ’ಉಚ್ಚೆ ಹೊಯ್ಯುವ ಚಳುವಳಿ’ ನಡೆಸುವುದಾಗಿ ಹೇಳಿದರು. ಮುಂದೆ ಈ ಚಳುವಳಿಯನ್ನು ಹಂತ ಹಂತವಾಗಿ ಮುಖ್ಯಮಂತ್ರಿಗಳು, ಸಚಿವರು, ಶಾಸಕರು, ಲೋಕಸಭಾ ಸದಸ್ಯರು ಹಾಗು ಐಎ ಎಸ್ ಅಧಿಕಾರಿಗಳ ನಿವಸಕ್ಕೂ ವಿಸ್ತರಿಸುವುದಾಗಿಯೂ ಸ್ಪಷ್ಟಪಡಿಸಿದರು

ಶೌಚಾಲಯಗಳ ಸಮಸ್ಯೆಗಳ ಕುರಿತು ಚರ್ಚಿಸಲು ನವೆಂಬರ ೨೯ರಂದು ಹಿರಿಯರ ಸಭೆ ಕರೆದಿರುವುದಾಗಿಯೂ ತಿಳಿಸಿದರು. ಇವರಿಗೆ ಹಿರಿಯರೇ ಯಾಕೆ ಬೇಕಿತ್ತು? ಅವರಲ್ಲಿ ಬಹಳಷ್ಟು ಜನರು ಡಯಾಬಿಟಿಕ್ ಇರಬಹುದು; ಅವರಿಗೆ ಮೂತ್ರ ಹಿಡಿದಿಟ್ಟುಕೊಳ್ಳುವುದು ಕಷ್ಟವೆಂದೇ? ಆದ ಕಾರಣ ಇವರ ಚಳುವಳಿಗೆ ಅವರ ಸಾಥ್ ಸಿಗಬಹುದೆಂಬ ಆಶಾ ಭಾವನೆಯಿರಬಹುದೇ?


ಪತ್ರಕರ್ತರ ಬುದ್ಧಿಯನ್ನು ಶತಶತಮಾನಗಳಿಂದ ಬಲ್ಲವರು ಈ ವಾಟಾಳ್. ಹಾಗಾಗಿಯೇ ಅವರು ಪತ್ರಕರ್ತರಿಗೆ ಅಲ್ಲಿಯೇ ತಾಕೀತು ಮಾಡಿದರು; ’ನೀವು ಬರೆಯುವಾಗ ಉಚ್ಚೆ ಹೊಯ್ಯುವ ಚಳುವಳಿ ಎಂದೇ ಬರೆಯಬೇಕು, ಬದಲಾಗಿ ಮೂತ್ರ ವಿಸರ್ಜನೆ ಚಳುವಳಿ ಎಂದು ಬರೆಯಬಾರದು’ ಪಾಪ ಸಜ್ಜನ ಪತ್ರಕರ್ತರು ಮುಸಿಮುಸಿ ನಗುತ್ತಾ ತಲೆಯಲ್ಲಾಡಿಸಿದರು.

ದೃಶ್ಯ ಮಾದ್ಯಮದವರು ಅವರು ಹೇಳಿದ್ದೆಲ್ಲವನ್ನೂ ಅಪ್ಪಣೆ ಸಮೇತ ಪ್ರಸಾರಮಾಡಿದರು. ಮುದ್ರಣ ಮಾದ್ಯಮದವರು ಪಾಪ ಮಾನವಂತರು, ಮೂತ್ರವಿಸರ್ಜನೆ ಚಳುವಳಿ ಎಂದೇ ಪ್ರಕಟಿಸಿದವು. ಪ್ರಜಾವಾಣಿ ಇವರ ಸಹವಾಸವೇ ಬೇಡ ಎಂದು ದಿವ್ಯ ನಿರ್ಲಕ್ಷ್ಯ ವಹಿಸಿತು. ಅಥವಾ ನಾಳೆ ಪ್ರಕಟಿಸುತ್ತೋ ಏನೋ, ಯಾಕೆಂದರೆ ಅದು ಪ್ರಜಾವಾಣಿ!

ಈಗ ನನ್ನಲ್ಲಿ ಕುತೂಹಲವಿದೆ; ಹಲವಾರು ಅನುಮಾನಗಳಿವೆ. ಅವರು ಹಿರಿಯರ ಸಭೆ ಕರಿದಿದ್ದಾರೆ. ಅದರಲ್ಲಿ ಮಹಿಳೆಯರು ಸೇರಿದ್ದಾರೆಯೇ? ಯಾಕೆಂದರೆ ಶೌಚಾಲಯದ ಸಮಸ್ಯೆಗಳು ಇದುವರೆಗೆ ಮಹಿಳೆಯರನ್ನು ಮಾತ್ರ ಕಾಡಿವೆ. ಪುರುಷರು ಮೋಟು ಗೋಡೆಯ ಮುಂದೆ ಬೇಕಾದರೂ ಪ್ಯಾಂಟ್ ಬಿಚ್ಚಿ ನಿಲ್ಲುತ್ತಾರೆ.

ಇವತ್ತು ವಿಜಯ ಕರ್ನಾಟಕ ಮೂತ್ರ ವಿಸರ್ಜನೆ ಎಂದೇ ಬರೆದಿದೆ. ಈಗ ವಾಟಾಳರು ವಿಜಯ ಕರ್ನಾಟಕದೆದುರು ಮೂತ್ರ ವಿಸರ್ಜಿಸಿ ಇದನ್ನು ಪ್ರತಿಭಟಿಸುತ್ತಾರೆಯೇ?

ನನ್ನ ಅಲ್ಪ ತಿಳುವಳಿಕೆಯ ಪ್ರಕಾರ ವಾಟಾಳ್ ಪಡೆಯಲ್ಲಿ ಮಹಿಳೆಯರಿಲ್ಲ. ಒಂದು ವೇಳೆ ಇದ್ದಲ್ಲಿ ಅವರೂ ಕೂಡ ಈ ಚಳುವಳಿಯಲ್ಲಿ ಪಾಲ್ಗೊಳ್ಳುವಂತೆ ಒತ್ತಾಯಿಸುತ್ತಾರೆಯೇ?

ಇನ್ನೊಂದು ಅನುಮಾನವಿದೆ; ಅಲ್ಲಾ,ಅದು ಕುತೂಹಲ ಶೋಭಾ ಕರಂದ್ಲಾಜೆ ಮನೆಯೆದುರು.... ಮಹಿಳಾ ಪೋಲಿಸರೆದುರು...

ದೊಂಬರಾಟಕ್ಕೂ ಒಂದು ಮಿತಿಯಿರಬೇಕಲ್ಲವೇ?
’ ಏನಕೇನಾ ಪ್ರಕರಣಂ ಪ್ರಸಿದ್ಧ ಪುರುಷಂ’

Friday, November 21, 2008

ಪುಸ್ತಕಗಳೊಂದಿಗೆ ನೆನಪುಗಳ ಮೆರವಣಿಗೆ





ಪುಸ್ತಕಗಳನ್ನು ಕೊಳ್ಳುವುದು ನನ್ನ ಹುಚ್ಚುಗಳಲ್ಲೊಂದು. ಎಲಿಮೆಂಟರಿ ಶಾಲೆಯಲ್ಲಿದ್ದಾಗ ಗೆಳತಿಯರ ಮನೆಯಿಂದ ಕಾಡಿ, ಬೇಡಿ ಚಂದಮಾಮ, ಬಾಲಮಿತ್ರಗಳನ್ನು ತರಿಸಿಕೊಂಡು ಓದುತ್ತಿದ್ದೆ. ಅವರಿವರ ಮನೆಯಿಂದ ಕಸ್ತೂರಿ, ಪ್ರಜಾಮತ, ಮಯೂರ, ತುಷಾರ ಮುಂತಾದವುಗಳನ್ನು ಬೇಡಿ ಪಡೆದು ಊಟ ತಿಂಡಿ ಬಿಟ್ಟು ಓದುತ್ತಿದ್ದೆ.

ಕ್ರಮೇಣ ಎನ್ ನರಸಿಂಹಯ್ಯನವರ ಪತ್ತೇದಾರಿ ಜಗತ್ತಿಗೆ ಹೊರಳಿಕೊಂಡೆ. ಆಮೇಲೆ ತ್ರಿವೇಣಿ, ಉಷಾನವರತ್ನರಾಮ್, ಕಾರಂತ, ಬೈರಪ್ಪ, ನಿರಂಜನ ಕುವೆಂಪು, ಬೇಂದ್ರೆ, ಅಡಿಗ, ಚಿತ್ತಾಲ,ಶರ್ಮ, ರಾಮಾನುಜನ್, ಶೆಲ್ಲಿ, ಕೀಟ್ಸ್, ಮ್ಯಾಥ್ಯು ಅರ್ನಾಲ್ಡ್, ಎಲಿಯೇಟ್, ಐ ಎ ರಿಚರ್ಡ್ಸ್ ......ವಿಶಾಲ ಜಗತ್ತು ತೆರೆದುಕೊಳ್ಳತೊಡಗಿತು.

ನನ್ನೂರಿನಲ್ಲಿ ಹೈಸ್ಕೂಲ್ ಇಲ್ಲ. ಸುತ್ತಮುತ್ತಲಿನ ಹಳ್ಳಿಗಳಲ್ಲೂ ಆಗ ಹೈಸ್ಕೂಲ್ ಇರಲಿಲ್ಲ. ಹಾಗಾಗಿ ಅವರಿವರ ಮನೆಯಲ್ಲಿದ್ದುಕೊಂಡು ಓದಿದವಳು ನಾನು. ರಜೆಯಲ್ಲಿ ಮನೆಗೆ ಹೋದಾಗ ಇಲ್ಲವೇ ಮನೆಯವರು ನಾನಿರುವಲ್ಲಿಗೆ ಬಂದಾಗ ’ಏನಾದರು ತಗೋ’ ಎಂದು ನನ್ನ ಕೈಲಿ ಒಂಚೂರು ದುಡ್ಡಿಡುತ್ತಿದ್ದರು. ಏನಾದರು ಎಂದರೆ ಅವರ ದೃಷ್ಟಿಯಲ್ಲಿ ತಿಂಡಿ. ನಾನದರಲ್ಲಿ ನಂಗೆ ಇಷ್ಟವಾದ ಪುಸ್ತಕ ಕೊಳ್ಳುತ್ತಿದ್ದೆ.

ಕಾಲೇಜು ಮೆಟ್ಟಲು ಹತ್ತಿದ ಮೇಲೆ ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಹಣ ನನ್ನ ಕೈಸೇರುತ್ತಿತ್ತು. ಅದಕ್ಕೆ ಮುಖ್ಯ ಕಾರಣ ಸರಿಕರ ಎದುರು ತಮ್ಮ ಮಗಳು ಒಳ್ಳೊಳ್ಳೆಯ ಬಟ್ಟೆ ಹಾಕಿಕೊಂಡು ಓಡಾಡಲಿ ಎಂಬುದೇ ಆಗಿತ್ತು. ಹಾಗಂತ ಆಗಾಗ ನನ್ನ ಹೆತ್ತವರು ಹೇಳುತ್ತಿದ್ದರು. ಆದರೆ ನಾನು ಬಹುಪಾಲು ದುಡ್ಡನ್ನು ಪುಸ್ತಕ, ನಿಯತಕಾಲಿಕಗಳನ್ನು ಕೊಳ್ಳಲು ಉಪಯೋಗಿಸುತ್ತಿದ್ದೆ.

ಎಂ.ಎ ಮಾಡುವಾಗ ನನಗೆ ಜೊತೆಯಾದವನು ಶರು. ಒಂದೇ ಅಭಿರುಚಿಯ ನಾವು ಬಹು ಬೇಗ ಆತ್ಮೀಯ ಸ್ನೇಹಿತರಾದೆವು. ಕಮ್ಮಟಗಳು, ವಿಚಾರ ಸಂಕಿರಣಗಳು, ನಾಟಕ, ಸಿನೇಮಾ... ಎಲ್ಲೆಲ್ಲೂ ನಾವೇ. ಮುಂಜಾವಿನ ದಿವ್ಯ ಮೌನದಲ್ಲಿ ಗಂಗೋತ್ರಿಯ ಕ್ಯಾಂಪಸ್ಸಿನಲ್ಲಿ ಜಾಗಿಂಗ್. ಎಳೆ ಬಿಸಿಲಿಗೆ ಮೈಯೊಡ್ಡಿ ಬೆಚ್ಚನೆಯ ಚಹ ಹೀರಿದರೆ ಅದೇ ಆ ದಿನಕ್ಕೆ ಸುಂದರ ಮುನ್ನುಡಿ.

ಒಂದು ಒಳ್ಳೆಯ ಪುಸ್ತಕ ಓದಿದರೆ ಅದನ್ನು ಓದುವಂತೆ ಆತ ನನಗೆ ಸಲಹೆ ನೀಡುತ್ತಿದ್ದ. ತನಗೊಂದು ಪುಸ್ತಕ ಇಷ್ಟವಾದರೆ ತನ್ನ ಜೊತೆ ನನಗೂ ಒಂದು ಪ್ರತಿ ಖರೀದಿಸುತ್ತಿದ್ದ. ನಾನೂ ಕೂಡ ಅಷ್ಟೇ; ಯ್ಯಾವ್ಯಾವುದೋ ನೆಪ ಮಾಡಿಕೊಂಡು ಅವನಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ಕೊಡುತ್ತಿದ್ದೆ.

ಬಿಸಿ ರಕ್ತದ ಆ ದಿನಗಳಲ್ಲಿ ಎಲ್ಲವನ್ನೂ ಪ್ರಶ್ನಿಸುವ, ಉಲ್ಲಂಘಿಸುವ ಮನೋಭಾವ. ಅದಕ್ಕೆ ಸಾಹಿತ್ಯದ ಹಿಮ್ಮೇಳ. ಆದರ್ಶಗಳ ಗುಂಗು. ಸಮಾಜ ಪರಿವರ್ತನೆಯ ಕನಸು. ಅದನ್ನವನು ಬದುಕಿನ ಭಾಗವಾಗಿಸಿಕೊಂಡ. ಪಶ್ಚಿಮ ಘಟ್ಟ ಶ್ರೇಣಿಯಲೆಲ್ಲೋ ಕರಗಿ ಹೋದ. ಆಮೇಲೆ ಅಂಥ ಗೆಳೆಯನನ್ನು ನನಗೆ ಪಡೆದುಕೊಳ್ಳಲಾಗಲಿಲ್ಲ.

ಇಂದು ನಾನು ಬೆಂಗಳೂರಲ್ಲಿದ್ದೇನೆ. ನನ್ನ ಮನೆಯಲ್ಲಿ ಒಳ್ಳೆಯ ಲೈಬ್ರರಿಯಿದೆ. ಅದರೆಡೆಗೆ ಕಣ್ಣು ಹಾಯಿಸಿದಾಗ ಮನಸ್ಸು ಮ್ಲಾನಗೊಳ್ಳುತ್ತದೆ. ಯಾಕೆಂದರೆ ಅದರಲ್ಲಿರುವ ಬಹಳಷ್ಟು ವೈಚಾರಿಕ ಪುಸ್ತಕಗಳು ಶರು ನನಗೆ ಉಡುಗೊರೆಯಾಗಿ ನೀಡಿದ್ದು. ಅದನ್ನು ಮತ್ತೆ ಓದುವುದಕ್ಕೆ ನನಗೆ ಒಂಥರ ಹಿಂಸೆ. ಅದರಲ್ಲಿ ಅತನ ಹಸ್ತಾಕ್ಷರವಿರುತ್ತದೆ. ನಲ್ಮೆಯ ಮಾತಿರುತ್ತದೆ. ಭರವಸೆಯ ನುಡಿಗಳಿರುತ್ತವೆ.

ಇಂದಿಗೂ ನಾನು ನನ್ನ ಆತ್ಮೀಯರಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ಕೊಡುತ್ತೇನೆ. ಮದುವೆ, ಹುಟ್ಟುಹಬ್ಬ, ಉಪನಯನ ಮುಂತಾದ ಶುಭ ಸಂದರ್ಭಗಳಲ್ಲಂತೂ ಪುಸ್ತಕಗಳಿಗೇ ಆದ್ಯತೆ. ಓಶೋನ ’ಸ್ತ್ರೀ ಮುಕ್ತಿ-ಆಧುನಿಕ ದೃಷ್ಟಿಕೋನ’ ನಾನು ಮದುಮಗಳಿಗೆ ಖಾಯಂ ಆಗಿ ಕೊಡುವ ಪುಸ್ತಕ. ನೀನು ಹರಸುವುದಕ್ಕಾಗಿ ಕೊಡುತ್ತಿಲ್ಲ, ಸಂಸಾರ ಒಡೆಯುವುದಕ್ಕಾಗಿ ಆ ಪುಸ್ತಕ ಕೊಡುತ್ತಿ ಎಂದು ನನ್ನ ಪತಿ ದೇವರು ಆಗಾಗ ತಮಾಷೆ ಮಾಡುತ್ತಿರುತ್ತಾರೆ.

ಅರಮನೆ ಮೈದಾನದಲ್ಲಿ ನಡೆಯುವ ಪುಸ್ತಕ ಮೇಳಕ್ಕೆ ನಾನು ಪ್ರತಿ ವರ್ಷ ಹೋಗುತ್ತೇನೆ. ಒಂದಷ್ಟು ಪುಸ್ತಕಗಳನ್ನು ಖರೀದಿ ಮಾಡುತ್ತೇನೆ. ಅದರಲ್ಲಿ ಒಂದೆರಡು ಪುಸ್ತಕಗಳು ನನ್ನ ಆತ್ಮೀಯರಿಗೆ. ಈ ಮಹಾನಗರದಲ್ಲಿ ಶರುವನ್ನು ಹೋಲುವ ವ್ಯಕ್ತಿಯೊಬ್ಬ ಹಲವು ವರ್ಷಗಳ ಹಿಂದೆ ನನಗೆ ಪರಿಚಯವಾಗಿದ್ದ. ಅವನಿಗೂ ಯ್ಯಾವ್ಯಾವುದೋ ನೆಪವಿಟ್ಟುಕೊಂಡು ಪುಸ್ತಕಗಳನ್ನು ಉಡುಗೊರೆಯಾಗಿ ಕೊಡುತ್ತಿದ್ದೆ. ನನ್ನ ಕಾಟ ತಡೆಯಲಾರದೆ ಏನೋ ಇತ್ತೀಚೆಗೆ ಆತನೂ ದೂರ್‍ಅವಾದ.

ಪುಸ್ತಕಗಳ ಜೋತೆಯೇ ಒಡನಾಡಿದ, ಅವುಗಳ ಜೊತೆಯೇ ಸಹಚರ್ಯ ಬೆಳೆಸಿಕೊಂಡ ನನಗೆ ಬೆಂಗಳೂರಿನಲ್ಲಿ ಪುಸ್ತಕಗಳೇ ಇಲ್ಲದ ಮನೆಗಳನ್ನು ಕಂಡಾಗ ಆಶ್ಚರ್ಯ ಆಗುತ್ತದೆ. ಅಲ್ಲಿ ವಾಸಿಸುವ ಜನರು ತಮ್ಮ ಬಿಡುವಿನ ವೇಳೆಯನ್ನು ಹೇಗೆ ಕಳೆಯುತ್ತಾರೆ? ಅವರು ತಮ್ಮೊಳಗಿನ ಆನಂದವನ್ನು ಹೇಗೆ ಕಂಡು ಕೊಳ್ಳುತ್ತಾರೆ?

ನಾವೇನೋ ಪುಸ್ತಕಗಳನ್ನು ಖರೀದಿಸುತ್ತೇವೆ. ಓದುತ್ತೇವೆ. ಉಡುಗೋರೆ ಕೊಡುತ್ತೇವೆ. ಆದರೆ ನಮ್ಮ ಮಕ್ಕಳು......?ಅವರಿಗೆ ಓದಿನ ಅಭಿರುಚಿಯನ್ನು ಚಿಕ್ಕಂದಿನಲ್ಲಿಯೇ ಕಲಿಸಬೇಕು.ಮಾಲ್ ಗಳಿಗೆ ಭೇಟಿ ಕೊಟ್ಟಂತೆಯೇ ಪುಸ್ತಕ ಮಳಿಗೆಗಳಿಗೂ ಭೇಟಿ ಕೊಡುತ್ತಿರಬೇಕು. ನಮ್ಮಲ್ಲಿ ಓದುವ ಹವ್ಯಾಸವಿದ್ದರೆ ನಮ್ಮ ಮಕ್ಕಳಲ್ಲಿಯೂ ಅದು ಮುಂದುವರಿಯುತ್ತದೆ. ಪುಸ್ತಕಗಳನ್ನು ಸಂಗಾತಿಯಾಗಿ ಒಪ್ಪಿಕೊಂಡವರು ಎಂದೂ ಒಂಟಿಯಲ್ಲ.

Tuesday, November 11, 2008

’ಬಿಂಬ’ದಿಂದ ’ಬಿಂಬ’ಕ್ಕೆ




ಅವನನ್ನು ನೋಡಿದ ಮೊದಲ ದಿನವೇ ಅವಳಿಗನ್ನಿಸಿತ್ತು ’ಇವನು, ಅವನನ್ನು ಹೋಲುತ್ತಾನಲ್ಲಾ..!’
ಅವಳು ನೋಡಿಯೇ ನೋಡಿದಳು... ಮತ್ತೆ ಮತ್ತೆ ನೋಡಿದಳು. ನೋಡುತ್ತಾ ಹೋದಳು.


ಒಂದು ದಿನ ಅವನು ತುಟಿಯಂಚಿನಲ್ಲಿ ನಕ್ಕ. ಇಲ್ಲಾ... ಅವನ ಕಣ್ಣು ನಕ್ಕಿತು. ಇವಳಲ್ಲಿ ಸಣ್ಣ ಕಂಪನ. ಅವನು ಬರುತ್ತಾನೆಂಬ ನಂಬಿಕೆಯಿಂದಲೇ ಕಲಾಕ್ಷೇತ್ರದಲ್ಲಿ ನಡೆಯುವ ಪ್ರತಿ ನಾಟಕಕ್ಕೂ ಅವಳು ಹಾಜರಾಗುತ್ತಿದ್ದಳು. ಅವನ ನಿರೀಕ್ಷೆಯೂ ಅದೇ ಆಗಿತ್ತು.

ಮನಸ್ಸಿನ ಮಾತು ಕಣ್ಣಲ್ಲಿ ಪ್ರತಿಪಲಿಸಲು ಕ್ಷಣಾರ್ಧ ಸಾಕು. ಆದರೆ ಬಾಯಿಗೆ ಬರಲು ವರ್ಷಗಳೇ ಹಿಡಿಯುತ್ತವೆ. ಬರದೆಯೂ ಹೋಗಬಹುದು. ಹಾಗೆ ಬಂದ ದಿನ ಇರುವ ಸಂಬಂಧ ಮತ್ತಷ್ಟು ಗಟ್ಟಿಯಾಗಬಹುದು, ಇಲ್ಲವೇ ಸಡಿಲವಾಗಲೂ ಬಹುದು. ಈ ಅರಿವೂ ಇಬ್ಬರಲ್ಲಿಯೂ ಇತ್ತು. ಹಾಗಾಗಿ ಆ ನವಿರು ಸಂಬಂಧ ಮೌನವಾಗಿ ಮುಂದುವರಿದಿತ್ತು.

ಆತನ ನಡವಳಿಕೆಯಲ್ಲಿ ಅವಳಿಗೆ ನಂಬಿಕೆ ಬೆಳೆಯುತ್ತಾ ಹೋಯಿತು. ಒಂದು ದಿನ ಆತ ’ಟೀ ಕುಡಿಯೋಣ ಬನ್ನಿ’ ಅಂದ. ಅವಳು ಸಮ್ಮತಿಸಿದಳು. ಇಬ್ಬರಿಗೂ ಲಿಂಬು ಟೀ ಇಷ್ಟ. ತಮ್ಮ ಅಭಿರುಚಿ ಒಂದೇ ಆಗಿರುವುದರ ಬಗ್ಗೆ ಪರಸ್ಪರ ಅಚ್ಚರಿ ವ್ಯಕ್ತಪಡಿಸಿಕೊಂಡರು.

ಅಮೇಲೆ ಅವರು ಅಲ್ಲಿ-ಇಲ್ಲಿ ಜೊತೆಯಾಗಿ ಕಾಣಿಸಿಕೊಳ್ಳತೊಡಗಿದರು. ಅದಕ್ಯಾರು ಅಂಥ ಮಹತ್ವ ಕೊಡಲಿಲ್ಲ. ಈ ಮಹಾನಗರದಲ್ಲಿ ಎಲ್ಲರೂ ಇಂಥಹದೊಂದು ಸಾಂಗತ್ಯಕ್ಕಾಗಿ ಹಾತೊರೆಯುವವರೇ ಆಗಿರುತ್ತಾರೆ. ಒಂದಷ್ಟು ಜನ ಅವರ ಭಾಗ್ಯಕ್ಕೆ ಕರುಬಿದರು.

ಅವನ ಪೀತಿಯ ಕಂಪನ ಅವಳ ಅನುಭವಕ್ಕೆ ಬರುತಿತ್ತು. ಭಾವನಾತ್ಮಕವಾಗಿ ಅವಳು ಅವನಲ್ಲಿ ಐಕ್ಯವಾಗುತ್ತಾ ಹೋದಳು. ನಂಬಿಕೆಯ ಶಿಖರದಲ್ಲಿ ಬೆಚ್ಚನೆಯ ಗೂಡು ಕಟ್ಟಿಕೊಳ್ಳತೊಡಗಿದಳು.

ಕನ್ಪೆಕ್ಷನ್ ಬಾಕ್ಸ್ ನಲ್ಲಿ ನಿಂತು ಎಲ್ಲವನ್ನೂ ಹೇಳಿಕೊಂಡ ಹಾಗೆ ಆಕೆ ಬಯಲಾಗುತ್ತಾ ಬಂದಳು. ಆತ ನಿರಂತರ ಆಲಿಸುತ್ತಲೇ ಹೋದ. ಅವಳ ಅವಲಂಬನೆ ಅತನಿಗೆ ಹಿತವೆನಿಸುತಿತ್ತು; ಹೆಮ್ಮೆಯಾಗುತಿತ್ತು.

ಈಗ ವೈಯಕ್ತಿಕ ಸಂಘರ್ಷವೊಂದರ ಸಂದರ್ಭದಲ್ಲಿ ತನ್ನ ಜೊತೆಯಾಗು ಎನ್ನುತಿದ್ದಾನೆ. ಅದವಳ ಜಾಯಮಾನಕ್ಕೆ ಒಗ್ಗಿದ್ದಲ್ಲ. ನಿರಾಕರಿಸಿದಳು.

ಅವನು ಸಿಡಿದು ನಿಂತ. ಅವನ ಹೊಸ ರೂಪ ಕಂಡು ಅವಳು ದಂಗಾದಳು. ’ನೀನು ನನ್ನಲ್ಲಿ ಎನೆಲ್ಲಾ ಹೇಳಿಕೊಂಡಿದ್ದಿ ಗೊತ್ತಾ...? ಅದನ್ನ ನಾನು ಇದುವರೆಗೂ ಯಾರಿಗೂ ಹೇಳಿಲ್ಲ...’ ಮೌನ ಮೊಗ್ಗೆಯನೊಡೆದು ಮಾತಾಗಿ ಹೊರಬರುತಿತ್ತು!

ಅವಳು ಜರ್ರನೆ ಇಳಿದು ಹೋದಳು. ಅವಳು ಪ್ರಾಕ್ಟಿಕಲ್ ಕಿಟಿಸಿಸಂ ವಿದ್ಯಾರ್ಥಿ. ಒಂದು ಶಬ್ದ ಕೊಡುವ ಹತ್ತಾರು ಅರ್ಥ, ಯಾವ ಕಾಂಟ್ಕ್ಸೆಟ್ ಒಳಗಡೆ ಯಾವ ಅರ್ಥ ಸ್ಫುರಿಸಬಲ್ಲುದು ಎಂಬುದೆಲ್ಲಾ ಅವಳಿಗೆ ಗೊತ್ತು. ಕ್ಷಣಾರ್ಧದಲ್ಲಿ ಅವಳು ನಿರ್ಧರಿಸಿಬಿಟ್ಟಳು; ಇಂದು ಈಸಂಬಂಧದ ಎಕ್ಸ್ ಪಯರಿ ಡೇಟ್. ಮುಗಿಯಿತು; ಎಲ್ಲವೂ ಮುಗಿಯಿತು.

ಆಯ್ಕೆಗಳು ಇಲ್ಲದಿದ್ದಾಗ್ಯೂ ನಿಷ್ಟೂರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಳು. ಅದವಳ ಶಕ್ತಿ.ಚಿಕ್ಕಂದಿನಿಂದಲೇ ಅದವಳಿಗೆ ಸಿದ್ಧಿಸಿತ್ತು. ಅಳು ಅವಳ ಪಾಲಿಗಂತೂ ಅಸಹಾಯಕತೆಯ ಲಕ್ಷಣ ಅಲ್ಲ. ಆಪ್ತರ ವಿಷಯಕ್ಕೆ ಬಂದಾಗ ಭಾವನೆಗಳೇ ಅವಳನ್ನಾಳುತ್ತವೆ.. ಇಷ್ಟರವರೆಗೆ ಅವನ ವಿಷಯಕ್ಕೆ ಭಾವನೆಗಳೇ ಮುನ್ನೆಲೆಗೆ ಬರುತ್ತಿದ್ದವು, ಈಗ..

ತಟ್ಟನೆ ಅವಳಿಗೆ ಹೊಳೆಯಿತು; ಅವನ ಇರವಿನ ಬಗ್ಗೆ ತನ್ನಲ್ಲಿ ಯಾವುದೇ ಆಧಾರ ಇಲ್ಲ, ಅವನ ಸಂಪರ್ಕದ ಕೊಂಡಿ ಕೇವಲ ಮೊಬೈಲ್ ಮಾತ್ರ, ಸಿಮ್ ಬದಲಾಯಿಸಿದರೆ ಅವನನ್ನು ಈ ಮಹಾನಗರದಲ್ಲಿ ಪತ್ತೆ ಮಾಡುವುದು ಸಾಧ್ಯವೇ ಇಲ್ಲ, ಆದರೆ ಅವನಿಗೆ ತನ್ನ ಮನೆ ಗೊತ್ತು, ಆಪೀಸು ಗೊತ್ತು, ಬಂಧು- ಬಾಂಧವರು ಗೊತ್ತು. ಪ್ರೆಂಡ್ಸ್ ಗೊತ್ತು. ಮನಸ್ಸು ಎಚ್ಚರಿಸಿತು ’ನೀನು ರೂಪಕಗಳಲ್ಲೇ ಉಳಿದು ಬಿಟ್ಟೆ. ವಾಸ್ತವಕ್ಕೆ ಬಾ’

ಅವನು ಯಾರಲ್ಲಿ ಹೇಳಬಹುದೆಂಬ ಸ್ಪಷ್ಟ ಕಲ್ಪನೆ ಅವಳಿಗಿತ್ತು. ಅಂದರೆ ಆತ ’ಅಲ್ಲಿಗೆ’ ತಲುಪಲು ತನ್ನನ್ನು ಏಣಿಯಾಗಿ ಬಳಸಿಕೊಂಡುಬಿಟ್ಟನೇ..?

ಅವಳಿಗೆ ತಡೆದುಕೊಳ್ಳಲಾಗಲಿಲ್ಲ. ಕುರ್ಚಿಯಲ್ಲಿ ಕುಳಿತಿದ್ದವಳು ತಟ್ಟನೆ ನೆಲಕ್ಕೆ ಕುಸಿದಳು. ಗೋಡೆಗೊರಗಿ ಮಂಡಿ ಮೇಲೆ ತಲೆಯಿಟ್ಟು ಬಿಕ್ಕಿ ಬಿಕ್ಕಿ ಅಳತೊಡಗಿದಳು. ತಲೆ ಭಾರವಾಯಿತು. ಗಂಟಲ ಪಸೆ ಆರಿ ಹೋಯಿತು. ನೀರು ಬೇಕೇ ಬೇಕು ಅನಿಸಿತು. ಗೋಡೆ ಹಿಡಿದುಕೊಂಡು ತಡವರಿಸುತ್ತಲೇ ಅಡುಗೆ ಕೋಣೆಗೆ ಹೋಗಿ ಜಗ್ಗಿನಿಂದ ನೀರು ಬಗ್ಗಿಸಿಕೊಂಡಳು. ಕೈ ನಡುಗಿ ನೀರು ಗ್ಲಾಸಿನ ಸುತ್ತೆಲ್ಲಾ ಹರಿದಾಡಿತು. ಜಗ್ಗಿಗೇ ಬಾಯಿಟ್ಟು ನೀರು ಹೀರತೋಡಗಿದಳು. ಧರಿಸಿದ್ದ ಟಾಪ್ ಒದ್ದೆಯಾಯಿತು,

ಹಾಸಿಗೆಯಲ್ಲಿ ಬಂದು ಬಿದ್ದುಕೊಂಡಳು. ದಿಂಬನ್ನು ಕೆನ್ನೆಗೆ ಒತ್ತಿಕೊಂಡು ಕವುಚಿ ಮಲಗಿದಳು. ತಲೆ ನೋಯಲು ಆರಂಭವಾಯಿತು. ಯಾರದಾದರು ಕೈಯನ್ನು ಬದ್ರವಾಗಿ ಹಿಡಿದುಕೊಳ್ಳಬೇಕು, ತೋಳನ್ನು ಅವುಚಿಕೊಳ್ಳಬೇಕೆನಿಸಿತು. ಆದರೆ ಇಹ ಲೋಕದ ಯಾರೂ ನೆನಪಾಗಲಿಲ್ಲ. ಡ್ರಾವರ್ ಎಳೆದು ಒಂದು ನಿದ್ರೆ ಮಾತ್ರೆ ನುಂಗಿ ಕಣ್ಮುಚ್ಚಿದಳು.

ಎಳೆ ಬಿಸಿಲು ಮುಖದ ಮೇಲೆ ಬಿದ್ದಾಗ ಎಚ್ಚರಾಯಿತು. ಕೈ ಅನಾಯಸವಾಗಿ ಮೊಬೈಲಿನತ್ತ ಹೋಯಿತು. ಮೊದಲ ಬಾರಿಗೆ ಅವನ ಮೆಸೇಜ್ ಮಿಸ್ ಆಗಿತ್ತು.

ಆಮೇಲೆಯೂ ಬರಲಿಲ್ಲ.

ಕೆಲವು ತಿಂಗಳು ಕಳೆಯಿತು. ಒಂದು ದಿನ ಅವಳು ಕೆನೆಟಿಕ್ ನಲ್ಲಿ ಹೋಗುತ್ತಿದ್ದಳು. ಪಕ್ಕದಲ್ಲೇ ಒಂದು ಪಲ್ಸರ್ ಪಾಸಾಯ್ತು ಅವಳು ತನ್ನಲ್ಲೇ ಅಂದುಕೊಂಡಳು ’ಇವನು ಅವನನ್ನು ಹೋಲುತ್ತಾನಲ್ಲಾ....’

ಅವಳು ಅಕ್ಸಿಲೇಟರ್ ತಿರುಗಿಸಿದಳು.

Saturday, October 25, 2008

ಡಾರ್ಕ್ ರೂಂನಲ್ಲಿ ಕುಳಿತ್ಯಾಕೆ ಬರೀಬೇಕು?


ಕೆಲವು ಜನ ಮೆಸೇಜ್ ಮಾಡಿ ’ಸುರಗಿ ನಿಮ್ಮ ನಿಜವಾದ ಹೆಸರಾ॥?’ ಎಂದು ಕೇಳಿದ್ದಾರೆ। ಹೆಸರಿನಲ್ಲೇನಿದೆ ಮಹಾ ಎಂದುಕೊಂಡರೂ, ಎಲ್ಲಾ ಇರುವುದು ಹೆಸರಲ್ಲೇ ಎಂಬುದು ನನಗೆ ಗೊತ್ತಿದೆ.

ಸಾರ್ವಜನಿಕ ಬದುಕಿನಲ್ಲಿ, ಸಮಾಜದಲ್ಲಿ ನಾವು ’ಎನೋ’ ಆಗಿರುತ್ತೇವೆ। ನಾವು ಆಡುವ ಮಾತುಗಳು, ವ್ಯಕ್ತಪಡಿಸುವ ಅಭಿಪ್ರಾಯಗಳು ’ನಮ್ಮವರ’ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ಹಾಗಾಗಿ ಅಳೆದು, ತೂಗಿ ಮಾತಾಡುತ್ತೇವೆ. ಆದರೆ ಹೇಳಲಾರದ ದುಃಖ-ದುಮ್ಮಾನಗಳು, ಆಸೆ-ಆಕಾಂಕ್ಷೆಗಳು, ಸಿಟ್ಟು-ಸೆಡವುಗಳು ಮನಸ್ಸಿನೊಳಗೆ ಹಾಗೇ ಉಳಿದು ಬಿಡುತ್ತಲ್ಲ, ಅದಕ್ಕೇನು ಮಾಡೋಣ?

’ಡೈರಿ ಬರೆದು ಬಿಡಿ’ ಅಂದು ಬಿಡಬಹುದು। ಆದರೆ, ಅದು ಖಾಸಗಿ ಹಂತದಲ್ಲೇ ಉಳಿದು ಬಿಡುತ್ತದೆ. ತನ್ನ ಕ್ರಿಯೆಗಳನ್ನು ಬೇರೆಯವರು ಗಮನಿಸಬೇಕು ಎಂಬುದು ಮನುಷ್ಯ ಸಹಜ ಗುಣ. ಹಾಗಾಗಿ ಬ್ಲಾಗ್ ಬರೆಯಲು ಆರಂಭಿಸಿದೆ. ಇದು ’ನನ್ನೊಡನೆ ನಾನು’ ಮಾತಾಡಿಕೊಂಡಂತೆ. ಇದನ್ನೇ ನಾನು ನನ್ನ ಬ್ಲಾಗ್ ಬರವಣಿಗೆಯ ಆರಂಭದಲ್ಲಿ ಹೇಳಿಕೊಂಡಿದ್ದೇನೆ.

’ಮನಸ್ಸಿಗೆ ತೋಚಿದಂತೆ ಬರೆಯಲು ಬ್ಲಾಗೇನು ಪರ್ಸನಲ್ ಡೈರಿಯಾ?’ ಎಂದು ವಿಜಯ ಕರ್ನಾಟಕದಲ್ಲಿ ಲೇಖಕರೊಬ್ಬರು ಪ್ರಶ್ಣಿಸಿದ್ದಾರೆ। ಹೌದು, ಒಂದು ರೀತಿಯಲ್ಲಿ ಅದು ಪರ್ಸನಲ್ ಡೈರಿಯೇ. ಯಾರೂ ಓದುಗರಿಲ್ಲದಿದ್ದರೂ ನಾನು ಮನಸ್ಸು ಬಂದಾಗಲೆಲ್ಲಾ ಬರಿತಾನೇ ಇರ್ತಿನಿ. ಇಷ್ಟಕ್ಕೂ ಬರವಣಿಗೆ ಅನ್ನೊದು ಬಿಡುಗಡೆ. ಅದು ಲೇಖಕನ ಮಡುಗಟ್ಟಿದ ಭಾವನೆಗಳ ಅಭಿವ್ಯಕ್ತಿ.

ಇಂತಹ ಬರವಣಿಗೆಯಲ್ಲಿ ಆತ್ಮಚರಿತ್ರೆಯ ಛಾಯೆಯಿರಬಹುದು। ಹೆಂಗಸರಲ್ಲಿ ಸ್ವಂತ ಐಡೆಂಟಿಟಿ ಇರುವವರು ಕಡಿಮೆ. ’ಇಂತಹವರ’ ಪತ್ನಿ, ಮಗಳು, ತಂಗಿ, ತಾಯಿ ಅಥವಾ ಗೆಳತಿ ಎಂದೇ ಗುರುತಿಸುತ್ತಾರೆ. ಅದರಲ್ಲೂ ಗಣ್ಯ ವ್ಯಕ್ತಿಯ ಪತ್ನಿಯಾಗಿದ್ದು, ಗಂಡನ ಕ್ಷೇತ್ರದಲ್ಲೇ ಚೂರು ಪಾರು ಹೆಸರು ಮಾಡಿದ್ದರೆ ಅವಳನ್ನು ಸಂಶಯದಿಂದಲೇ ನೋಡಲಾಗುತ್ತದೆ. ಪತಿಯ ನೆರಳಲ್ಲೆ ಪತ್ನಿಯ ಪ್ರತಿಭೆಯನ್ನು ಗುರುತಿಸಲಾಗುತ್ತದೆ.

ಇಲ್ಲಿ, ಡಾರ್ಕ್ ರೂಂನಲ್ಲಿ ನಾನು ’ನಾನು’ ಮಾತ್ರ ಆಗಿರುತ್ತೇನೆ। ನನ್ನ ಬರಹ ಮಾತ್ರ ನಿಮ್ಮ ಮುಂದಿರುತ್ತದೆ. ಅದು ಮಾತ್ರ ನಿಮ್ಮನ್ನು ತಲುಪುತ್ತದೆ. ಸಮಾಜವನ್ನು ತಿದ್ದುವ, ಬದಲಿಸುವ ದೊಡ್ಡ ದೊಡ್ಡ ಹೊಣೆಗಾರಿಕೆಗಳು ಖ್ಯಾತ ನಾಮರಿಗೇ ಇರಲಿ.

ಕನ್ನಡದ ಕೆಲವು ಪತ್ರಿಕೆಗಳು ಮತ್ತು ನಿಯತಕಾಲಿಕಗಳು ನನ್ನ ಲೇಖನಗಳನ್ನು ಪ್ರಕಟಿಸಲಿಲ್ಲ। ಹಿಂದೆ ಪ್ರಕಟಿಸುತ್ತಿದ್ದವು. ಯಾಕಿರಬಹುದೆಂದು ಕೆದಕಿದಾಗ ಗೊತ್ತಾಗಿದ್ದು; ನಾನು ’ಇಂತವರ’ ಪತ್ನಿಯೆಂದು, ಮತ್ತೊಂದು ಕಾರಣ ಆ ಪತ್ರಿಕೆಯ ದ್ಯೇಯಧೋರಣೆಗಳಿಗೆ ವ್ಯತಿರಿಕ್ತವಾಗಿ ನನ್ನ ಬರಹ ಇದ್ದದ್ದು. ’ನಿಮ್ಮ ಬರಹದಲ್ಲಿ ಸತ್ವ ಇದ್ದಿರಲಾರದು ಬಿಡಿ’ ಎಂದು ನೀವನ್ನಬಹುದು. ಆದರೆ ಅದೇ ಬರಹಗಳನ್ನು ಪ್ರಜಾವಾಣಿ ಸಮೂಹ ಪ್ರಕಟಿಸಿತು.’ ಓ॥ಗೊತ್ತಾಯ್ತು ಬಿಡಿ ನೀವು ಎಲ್ಲಿ ಗುರುತಿಸಲ್ಪಡುತ್ತೀರಿ ’ ಅಂತ ರಾಗ ಎಳೆದ್ರಾ.. ಇದೇ ಸ್ವಾಮಿ, ಪೂರ್ವಗ್ರಹ ಅಂದ್ರೆ.

ಮೊನ್ನೆ ’ಕೆಂಡ ಸಂಪಿಗೆ’ಯಲ್ಲಿ ಜೋಗಿ ಬರೆದ ಬೈರಪ್ಪನವರ ಬರಹಕ್ಕೆ ಕಮೆಂಟ್ ಬರೆಯೋಣವೆಂದುಕೊಂಡೆ। ಯಾಕೆಂದರೆ ಬೈರಪ್ಪನವರ ಸ್ತ್ರೀ ಪಾತ್ರಗಳು ಜೋಗಿಗೆ ಕಾಡದಿರಬಹುದು.ಆದರೆ ನನಗಂತೂ ಕಾಡಿವೆ. ಅವರ ಸ್ತ್ರೀ ಪಾತ್ರಗಳು ಕಾದಂಬರಿಕಾರರನ್ನು ಮೀರಿ ಬೆಳೆಯಲು ಪ್ರಯತ್ನಿಸುತ್ತವೆ. ಕಾದಂಬರಿಕಾರ ಅವರನ್ನು ಉಸಿರುಗಟ್ಟಿಸಿದರೂ ನನ್ನಂಥ ಓದುಗಳಲ್ಲಿ ಅದು ಮರು ಜೀವ ಪಡೆದು ಚಿಗುರಿಕೊಳ್ಳುತ್ತದೆ.

ಆದರೆ ಬರೆಯಲಿಲ್ಲ। ಅಲ್ಲಿರುವ ಕಮೆಂಟ್ ರಾಶಿ ನೋಡಿ ಬೆರಗಾಗಿ ಹೋದೆ. ನಮ್ಮ ಪರಿಸರ ನಮ್ಮ ವ್ಯಕ್ತಿತ್ವವನು ರೂಪಿಸುತ್ತದೆ. ಓದು ಮತ್ತು ಅನುಭವ ಅದಕ್ಕೆ ಇನ್ನೊಂದು ಆಯಾಮ ನೀಡಬಹುದು. ಆದರೆ ನಮ್ಮದಲ್ಲದ ವ್ಯಕ್ತಿತ್ವವನ್ನು ಅರೋಪಿಸಿ ಜಗ್ಗಾಡಿದರೆ ನೋವಾಗುವುದಿಲ್ಲವೇ? ಜೋಗಿಯ ಬರವಣಿಗೆ ಹಿನ್ನೆಲೆಗೆ ಸರಿದು ಜೋಗಿ ’ಇಂಥವರು’, ಕಮೆಂಟ್ ಮಾಡಿದವರು ’ಇಂತವರಿಗೆ ಸಂಬಂದಿಸಿದವರು’ ಎಂಬುದರ ಮೇಲೆ ಚರ್ಚೆ ಮುಂದುವರಿಯುತ್ತಿತ್ತು. ಸೂಕ್ಷ ಮನಸ್ಸಿನವರಿಗೆ ಇದನ್ನು ಅರಗಿಸಿಕೊಳ್ಳುವುದು ಸ್ವಲ್ಪ ಕಷ್ಟ.

ಯಾವುದೋ ಒಂದು ಸಮುದಾಯದ ಅಥವಾ ಸಿದ್ಧಾಂತದ ಚೌಕಟ್ಟಿನೊಳಗೆ ನನ್ನನ್ನು ನನಗೆ ಗುರುತಿಸಿಕೊಳ್ಳಲು ಸಾಧ್ಯವಾಗದು। ಆದರೆ ಪ್ರಭಾವಕ್ಕೊಳಗಾಗಬಹುದು. ಗುರುತಿಸಿಕೊಳ್ಳುವುದೇ ಅನಿವಾರ್ಯವಾದರೆ ಸ್ತ್ರೀವಾದಿಯಾಗಿ ಗುರುತಿಸಿಕೊಳ್ಳಲು ಬಯಸುತ್ತೇನೆ. ಹಾಗಾಗಿ ’ ಇಂಥವರ’ ನೆರಳಲ್ಲಿ ಗುರುತಿಸಿಕೊಂಡರೆ ನಮ್ಮ ಐಡೆಂಟಿಟಿ ಮಸುಕಾಗುತ್ತದೆ. ಇಲ್ಲವೇ ಸಂಶಯಕ್ಕೊಳಗಾಗುತ್ತದೆ.

ಡಾರ್ಕ್ ರೂಂನಿಂದ ಬರೆದಾಗಲೂ ಕಿರಿಕಿರಿಯಾಗುವುದುಂಟು। ಸುಮಾರು ಒಂದು ತಿಂಗಳಿಗೂ ಹಿಂದೆ ನಾನು ಕೆಲವು ಪರಿಚಿತರಿಗೆ ಮೆಸೇಜ್ ಮಾಡಿ ನನ್ನ ಬ್ಲಾಗ್ ನೋಡುವಂತೆ ಮನವಿ ಮಾಡಿದ್ದೆ. ಇಮೇಲ್ ಗಿಂತಲೂ ಮೆಸೇಜ್ ಸುಲಭ ಅಂದುಕೊಂಡು ಮೊಬೈಲ್ ನಂಬರ್ ಪ್ರೋಪೈಲ್ ನಲ್ಲಿ ನೀಡಿದ್ದೆ. ಇಂಗ್ಲೀಷ್ ಪತ್ರಕರ್ತನೊಬ್ಬ ’ಲೀವಿಂಗ್ ಟುಗೆದರ್’ ಲೇಖನ ಬರೆದಾಗ ಎಚ್ಚೆತ್ತುಕೊಂಡ. ಬೆನ್ನು ಬಿಡದ ಬೇತಾಳದಂತೆ ಕಾಡತೊಡಗಿದ. ಅವನು ಇನ್ನಾರೋ ಪತ್ರಕರ್ತೆ ತಾನೆಂದು ಭಾವಿಸಿದನಂತೆ!

ಈ ಬ್ಲಾಗ್ ಮನುಷ್ಯ ಸ್ವಭಾವದ ಕೆಲವು ಮುಖಗಳನ್ನು ಪರಿಚಯ ಮಾಡಿಕೊಟ್ಟಿದೆ। ಅದಕ್ಕಾಗಿ ಕೃತಜ್ನತೆಯಿದೆ. ನಿಜದ ಬದುಕಿನಲ್ಲಿ ಎಲ್ಲವನ್ನೂ ಬಿಚ್ಚಿಟ್ಟು ಬದುಕಲಾಗದು. ಇಲ್ಲಾದರೆ ಅಡ್ಡಗೊಡೆಯಲ್ಲಿಟ್ಟ ದೀಪದಂತೆ ಹೇಳಿಕೊಳ್ಳಬಹುದು. ಹೇಳಿ ಹಗುರಾಗಬಹುದು. ಕೆಲವೊಮ್ಮೆ ಪ್ರತಿಕ್ರಿಯೆಯೂ ಸಿಗಬಹುದು. ಭಾವನೆಗಳ ವಿನಿಮಯಕ್ಕೆ ಇಲ್ಲಿ ಮುಕ್ತ ಅವಕಾಶವಿದೆ. ಓದುಗರ ಜೋತೆ ನೇರ ಸಂಪರ್ಕವಿರುವುದರಿಂದ ಬ್ಲಾಗ್ ಒಮ್ಮೊಮ್ಮೆ ಆಪ್ತ ಸಲಹಾ ಕೇಂದ್ರದಂತೆಯೂ ಕೆಲಸ ಮಾಡುತ್ತದೆ.

ನನ್ನದೊಂದು ಪುಟ್ಟ ಭಾವ ಪ್ರಪಂಚ. ಅಲ್ಲಿರುವುದು ನಾನು ಮತ್ತು ನನ್ನ ಭಾವನೆಗಳು ಮಾತ್ರ. ಅಲ್ಲಿಗೆ ಆಕ್ರಮಣವಾಗದಂತೆ ನಾನು ಎಚ್ಚರ ವಹಿಸುತ್ತೇನೆ. ’ನಿನಗೆ ನೀನೇ ಗೆಳೆಯ’ ಎಂಬ ಮಾತಿನಲ್ಲಿ ನನಗೆ ಸಂಪೂರ್ಣ ವಿಸ್ವಾಸವಿದೆ.

Sunday, October 12, 2008

’ಲಿವಿಂಗ್ ಟುಗೆದರ್’ ಯಾಕೀ ರಗಳೆ?



ಶಾಸ್ತೋಕ್ತ ಅಥವಾ ಕಾನೂನು ಬದ್ಧ ವಿಧಿ ವಿಧಾನಗಳ ಹೊರತಾಗಿ ಯಾವುದೇ ಪುರುಷ ಮತ್ತು ಮಹಿಳೆ ಸಕಾರಣಗಳಿಂದಾಗಿ ದೀರ್ಘಕಾಲ ಒಟ್ಟಿಗೇ ವಾಸಿಸುತ್ತಿದ್ದರೆ ಅಂತಹ ಪ್ರಕರಣಗಳಲ್ಲಿ ಅವರನ್ನು ದಂಪತಿ ಎಂದೇ ಮಾನ್ಯ ಮಾಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.
ಸರಕಾರ ಯಾಕೆ ಈ ನಿರ್ಧಾರಕ್ಕೆ ಬಂತು?
ಯಾಕೆಂದರೆ, ಆನೇಕ ವರ್ಷಗಳ ಕಾಲ ಸಹಜೀವನ ನಡೆಸಿದ ಪುರುಷ ಸಂಗಾತಿ ಒಂದು ದಿನ ಇದ್ದಕ್ಕಿದ್ದಂತೆ ’ನಿನಗೂ ನನಗೂ ಯಾವ ಸಂಬಂಧವೂ ಇಲ್ಲ’ ಎಂದು ಎದ್ದು ಹೊರಟುಬಿಡುತ್ತಿದ್ದ. ಬಹುತೇಕ ಸಂದರ್ಭಗಳಲ್ಲಿ ಆತನ ಮುಂದೆ ಎರಡು ಆಯ್ಕೆಗಳಿರುತ್ತಿದ್ದವು. ಮೊದಲನೆಯದಾಗಿ ಆತ ಇನ್ನೊಂದು ಹೆಣ್ಣಿನತ್ತ ಈ ಮೊದಲೇ ಆಕರ್ಷಿತನಾಗಿರುತ್ತಿದ್ದ ಹಾಗಾಗಿ ಇಲ್ಲಿ ಸಂಬಂದ ಹರಿದುಕೊಂಡು ಅಲ್ಲಿ ಮುಂದುವರಿಸುತ್ತಿದ್ದ. ಎರಡನೆಯದಾಗಿ ಮನೆಯವರ ಒತ್ತಡಕ್ಕೆ ಮಣಿದು ಮದುವೆಯ ಬಂಧನಕ್ಕೆ ಒಳಗಾಗುತ್ತಿದ್ದ. ಇಲ್ಲಿ ಈ ಹುಡುಗಿ ಭಾವನಾತ್ಮಕವಾಗಿ ಕುಸಿದು ಹೋಗುತ್ತಿದ್ದಳು.
ಇಂತಹ ಸಂದರ್ಭಗಳಲ್ಲಿ ಕೆಲವು ಮಹಿಳೆಯರು ತಮಗಾಗಿರುವ ಅನ್ಯಾಯಕ್ಕಾಗಿ ನ್ಯಾಯಾಲಯದ ಮೆಟ್ಟಲೇರಿದ್ದರು. ಆದರೆ ಹಿಂದು ವಿವಾಹ ಕಾಯ್ದೆಯ ಪ್ರಕಾರ ಒಟ್ಟಿಗೆ ಬದುಕುವುದು ಮದುವೆ ಅನ್ನಿಸಿಕೊಳ್ಳುವುದಿಲ್ಲ. ಹಾಗಾಗಿ ಪುರುಷರು ’ಮದುವೆ’ ಯ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದರು. ಆಕೆಗೆ ಯಾವುದೇ ಪರಿಹಾರವನ್ನು ಕೊಡುತ್ತಿರಲಿಲ್ಲ.
ಒಬ್ಬ ಮಹಿಳೆಯ ಗುಣಮಟ್ಟದ ಕ್ರಿಯಾಶೀಲ ಬದುಕು ನಲ್ವತ್ತನೇ ವಯಸ್ಸಿಗೆ ಮುಗಿದು ಹೊಗುತ್ತದೆ. ಅಥವಾ ಮಸುಕಾಗುತ್ತಾ ಬರುತ್ತದೆ. ಅದರಲ್ಲೂ ಭಾರತಿಯ ಸಮಾಜದಲ್ಲಿ ಮತ್ತೊಮ್ಮೆ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಪೂರಕ ವಾತಾವರಣವಿಲ್ಲ. ಪರಂಪರೆಯ, ಸಂಪ್ರದಾಯದ ಚೌಕಟ್ಟುಗಳನ್ನು ಮೀರಿದವರನ್ನು ಬಂಧುಬಾಂಧವರು ಅಷ್ಟು ಸುಲಭವಾಗಿ ತಮ್ಮೊಡನೆ ಸೇರಿಸಿಕೊಳ್ಳುವುದಿಲ್ಲ. ಹಾಗಾಗಿ ಅವರು ಒಂಟಿಯಾಗಿಬಿಡುತ್ತಾರೆ. ಇಳಿ ವಯಸ್ಸಿನಲ್ಲಿ ಒಂಟಿತನ ಸಹಿಸುವುದು ಕಷ್ಟ.
ಇದನ್ನೆಲ್ಲಾ ಮನಗಂಡ ಸರಕಾರ ’ಲೀವಿಂಗ್ ಟುಗೆದರ್’ಗೆ ಕಾನೂನಿನ ಮಾನ್ಯತೆ ನೀಡಲು ನಿರ್ಧರಿಸಿದೆ.
ಇಲ್ಲಿ ಉದ್ಭವಿಸುವ ಪ್ರಶ್ನೆ ಏನೇಂದರೆ, ಎಷ್ಟು ಪರ್ಸೆಂಟ್ ಜನ ಲಿವಿಂಗ್ ಟುಗೆದರ್ ಬದುಕನ್ನು ಆಯ್ಕೆ ಮಾಡಿಕೊಳ್ಳುತ್ತಾರೆ? ಎಂತಹ ಮನಸ್ಥಿತಿಯ ಜನ ಆಯ್ಕೆ ಮಾಡಿಕೊಳ್ಳುತ್ತಾರೆ?
ಇದು ನಗರ ಸಂಸ್ಕ್ರ್‍ಅತಿಯ ಬಳುವಳಿ. ಇದಕ್ಕೆ ಬದಲಾದ ಕೌಟುಂಬಿಕ ಮೌಲ್ಯಗಳೇ ಕಾರಣ. ಮೌಲ್ಯ ಬದಲಾವಣೆಗೆ ಜಾಗತೀಕರಣವೂ ಒಂದು ಕಾರಣ. ಹಾಗಾಗಿ ಸಮಾಜಮುಖಿಯಾದ ಸಮೂಹ ಕೇಂದ್ರಿತ ಬದುಕು ಈಗಿಲ್ಲ. ಈಗ ಏನಿದ್ದರೂ ವ್ಯಕ್ತಿ ಕೇಂದ್ರಿತ ಬದುಕು. ’ನಾವು, ನಮ್ಮದು’ ಇಲ್ಲ; ’ನಾನು, ನನ್ನದು’ ಎಲ್ಲಾ. ಹಾಗಾಗಿ ಜನರು, ಮುಖ್ಯವಾಗಿ ಯುವ ಜನಾಂಗ ಸ್ವಾರ್ಥಿಗಳೂ, ಅಂತರ್ಮುಖಿಗಳೂ, ಭಾವರಹಿತರೂ ಆಗುತ್ತಿದ್ದಾರೆ. ಅವರ ಕೈಯಲ್ಲೊಂದು ಮೊಬೈಲ್, ಎದುರುಗಡೆ ಕಂಪ್ಯೂಟರ್, ಓಡಾಡಲೊಂದು ವೆಹಿಕಲ್ ಇದ್ದುಬಿಟ್ಟರೆ ಪ್ರಪಂಚ ತಮ್ಮ ಮುಷ್ಟಿಯಲ್ಲಿರುತ್ತೆ ಎಂಬ ನಂಬಿಕೆ ಅವರಲ್ಲಿರುತ್ತೆ.
ಇಂತಹ ಯುವ ಮನಸ್ಸುಗಳೇ ’ಲೀವಿಂಗ್ ಟುಗೆದರ್’ನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇವರು ನೈತಿಕ ಕಟ್ಟುಪಾಡು ಇಲ್ಲದವರು, ಮುಕ್ತ ಲೈಂಗಿಕತೆಯ ಪ್ರತಿಪಾದಕರು.. ಎಂಬೆಲ್ಲಾ ಅಭಿಪ್ರಾಯಗಳಿವೆ. ಆದರೆ ಅದು ಸರಿಯಲ್ಲ. ಇವರಲ್ಲಿ ಹೆಚ್ಚಿನವರು ಭಾವನಾತ್ಮಕ ಆಸರೆಗಾಗಿ ಹಾತೊರೆಯುತ್ತಾ ಇಂಥಹ ಬಂಧದಲ್ಲಿ ಒಂದಾಗುತ್ತಾರೆ. ಇನ್ನು ಕೆಲವರು ಮದುವೆಯ ಬಂಧ ಹೊರಿಸುವ ಹೊಣೆಗಾರಿಕೆಯನ್ನು ನಿಭಾಯಿಸಲಾರೆವೆನ್ನುವ ಭಯದಿಂದ ಇಂಥ ಸಂಬಂಧದಲ್ಲಿ ಸಿಲುಕಿಕೊಳ್ಳುತ್ತಾರೆ. ಕೆಲವರು ಭಾವಿಸುವಂತೆ ಸೆಕ್ಸೇ ಮುಖ್ಯವಾಗುವುದಾದರೆ ಈಗೆಲ್ಲಾ ’ಟೈಂಪಾಸ್ ಸೆಕ್ಸ್’ ಎನ್ನುವುದು ಅತಿ ಸುಲಭವಾಗಿ ಸಿಗುವ ಮನೋರಂಜನೆ.
ಆರ್ಥಿಕವಾಗಿ ಸ್ವತಂತ್ರಳಿದ್ದು ಎಂತಹ ಪರಿಸ್ಥಿತಿಯನ್ನು ಕೂಡ ಸಮರ್ಥವಾಗಿ, ಒಂಟಿಯಾಗಿ ಎದುರಿಸಬಲ್ಲೆ ಎನ್ನುವ ಆತ್ಮವಿಶ್ವಾಸದ, ಭಾವುಕವಾಗಿದ್ದರೂ- ನಿರ್ಣಾಯಕ ಘಟ್ಟಗಳಲ್ಲಿ ನಿರ್ಧಾಕ್ಷಣ್ಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ ಹುಡುಗಿಯೊಬ್ಬಳು ’ಲಿವಿಂಗ್ ಟುಗೆದರ್’ನತ್ತ ವಾಲಿದರೆ ಅದವಳ ಅತ್ಯುತ್ತಮ ಆಯ್ಕೆಯಾಗಬಲ್ಲುದು.
ಯಾಕೆಂದರೆ ಒಬ್ಬ ಗೆಳೆಯ ಕೊಡುವ ಸಾಂಗತ್ಯವನ್ನು ಒಬ್ಬ ’ಗಂಡ’ ಕೊಡಲಾರ. ಹಿಂದೆ ಬದ್ರತೆಯನ್ನು ನೀಡುತ್ತಿದ್ದ ಕುಟುಂಭ ಈಗ ಹೊಣೆಗಾರಿಕೆಯನ್ನು ಮಾತ್ರ ನೀಡುತ್ತಿದೆ. ಆಕೆ ಗೃಹಿಣಿಯಾಗಿದ್ದಾಗ ಗೃಹಸ್ಥನಾಗಿ ಆತ ಹೊಣೆಗಾರಿಕೆಯಲ್ಲಿ ಪಾಲುದಾರನಾಗುತ್ತಿದ್ದ. ಆದರೆ ಈಗ ಆಕೆ ಉದ್ಯೋಗಸ್ಥ ಮಹಿಳೆ. ಆತನ ಪಾಲುದಾರಿಕೆ ಶೂನ್ಯ. ’ಅಲೆಮಾರಿತನ’ ಎಂಬುದು ಗಂಡಸಿನ ಸ್ಥಾಯಿ ಭಾವ. ಬೇಜವಾಬ್ದಾರಿತನ, ಉಡಾಫೆ, ಸೋಮಾರಿತನ...ಇತ್ಯಾದಿ ಸಂಚಾರಿ ಭಾವಗಳು.
ಇಷ್ಟೆಲ್ಲ ಹೇಳಿದರೂ ’ಲೀವಿಂಗ್ ಟುಗೆದರ್’ನ್ನು ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆ ಶೇ.೧ನ್ನೂ ದಾಟಿಲ್ಲ. ಹಾಗಾಗಿ ಇಷ್ಟು ಬೇಗನೇ ಸರಕಾರ ಇದನ್ನು ಕಾನೂನಿನ ವ್ಯಾಪ್ತಿಗೆ ತರಬೇಕಾದ ಅವಶ್ಯಕತೆ ಇದ್ದಂತಿಲ್ಲ. ಈಗ ಬದಲಾಗಬೇಕಾದ್ದು ಪುರುಷ ಮನಸ್ಥಿತಿ. ಗಂಡ ಹೆಂಡತಿಯಲ್ಲಿ ಭರವಸೆಯನ್ನು ತುಂಬಬೇಕು. ಬದುಕಿನ ಬದ್ರತೆಯನ್ನು ಮೂಡಿಸಬೇಕು. ಇಲ್ಲವಾದರೆ..... ಇಂದು ’ಲೀವಿಂಗ್ ಟುಗೆದರ್’ -ನಾಳೆ ಮದುವೆಯ ನಿರಾಕರಣೆ.

Thursday, October 2, 2008

ನಿಮ್ಮ ಇಷ್ಟ ದೈವ ಯಾವುದು?


ರಾಜಸ್ತಾನದ ಜೋದ್ ಪುರದ ಚಾಮುಂಡಾ ದೇವಿಯ ಸನಿಧಿಯಲ್ಲಿ ಸಂಭವಿಸಿದ ದುರಂತವನ್ನು ಟೀವಿಯಲ್ಲಿ ನೋಡುತ್ತಲಿದ್ದೆ. ಅದಕ್ಕೆ ಕಾರಣಗಳನ್ನು ಮತ್ತು ಭಕ್ತರ ನಂಬಿಕೆಯ ಜಗತ್ತನ್ನು ಭೂತಕನ್ನಡಿಯಲ್ಲಿಟ್ಟು ವಿಮರ್ಶಿಸುವುದು ನನಗಿಷ್ಟವಿಲ್ಲ. ನನಗೆ ಅನ್ನಿಸಿದ್ದೇ ಬೇರೆ...!
ನಮ್ಮಲ್ಲಿ ಅಂದ್ರೆ ಹಿಂದುಗಳಲ್ಲಿ [ಬೇರೆ ದರ್ಮದ ದೇವರ ವಿಚಾರ ಇಲ್ಲಿ ತರುವುದು ಬೇಡ ಅಲ್ವಾ.. ನಮ್ಮದು, ನಮ್ಮವರು ಅಂದ್ರೆ ಸಲಿಗೆ ಜಾಸ್ತಿ ಎನೆಂದ್ರೂ ಸಹಿಸ್ಕೋತಾರೆ!.] ಮೂವತ್ತಮೂರು ಕೋಟಿ ದೇವತೆಗಳಿದ್ದಾರೆ. ಸಾಯಿಬಾಬಾ, ಚಿಕೂನುಗುನ್ಯಾದ ಕೀಲಮ್ಮ, ಈಗ ನಡೆದಾಡುವ; ಮುಂದೆ ದೇವರಾಗಬಹುದಾದ ದೇವಮಾನವರುಗಳು, ಹೀಗೆ ಅಯಾಯ ಕಾಲಕ್ಕೆ ಈ ಪಟ್ಟಿ ಪರಿಷ್ಕರಣೆಯಗುತ್ತಲೇ ಇರುತ್ತದೆ. ವಿರೋಧವನ್ನು ಕೂಡ ತನ್ನಲ್ಲಿ ಐಕ್ಯವಾಗಿಸಿಕೊಳ್ಳುವ ಅಥವಾ ಅಫೋಶನ ತೆಗೆದುಕೊಳ್ಳುವ ಇಲ್ಲವೇ ತನಗೆ ಬೇಕಾದಂತೆ ಪರಿವರ್ತಿಸಿಕೊಳ್ಳುವ ಆಗಾಧ ಶಕ್ತಿ ಹಿಂದು ಧರ್ಮಕ್ಕಿದೆ. ಹಿಂದು ಧರ್ಮದ ಕಟ್ಟಾ ವಿರೋಧಿಗಳಾದ ಚರ್ವಾಕರು,ಬೌದ್ಧರು, ಲಿಂಗಾಯಿತರು ಮತ್ತು ತಾಂತ್ರಿಕರನ್ನು ಇಂದು ಹಿಂದು ದರ್ಮದ ಭಾಗವೆಂಬಂತೆ ಚಿತ್ರಿಸಲಾಗುತ್ತದೆ.ಹಿಂದು ಧರ್ಮಕ್ಕೆ ಸಮಾನಂತರವಾಗಿ ಅಷ್ಟೇ ಪ್ರಭಲವಾಗಿದ್ದ ಮೌಖಿಕ ಸಾಹಿತ್ಯ ಹಾಗು ಜಾನಪದ ಪರಂಪರೆಯನ್ನೊಳಗೊಂಡ ಭಾರತಿಯ ಸಂಸ್ಕ್ರ್‍ಅತಿ ಅಕ್ಷರ ಬಲ್ಲವರಿಂದ ಮೂಲೆಗುಂಪಾಯಿತು. ಒಹ್, ವಿಷಯಾಂತರವಾಯಿತು ಅಲ್ವಾ, ಕ್ಷಮಿಸಿ.
ಮುವತ್ತಮೂರು ಕೋಟಿ ದೇವತೆಗಳು ಅನ್ತಿದ್ದೆ ಅಲ್ವಾ, ಇವರಲ್ಲಿ ಹೆಣ್ಣೆಷ್ಟು? ಗಂಡೆಷ್ಟು? ನನಗೆ ಗೊತ್ತಿಲ್ಲ. ಯಾರಿಗೆ ಯಾವ ದೇವರು/ದೇವತೆ ಯಾಕೆ ಇಷ್ಟವಾಗುತ್ತಾನೆ/ಳೆ ಅದೂ ಕೂಡ ಗೊತ್ತಿಲ್ಲ. ನಾನೇನೂ ಆಸ್ತಿಕಳಲ್ಲ. ಹಾಗಂತ ನಾಸ್ತಿಕಳೂ ಅಲ್ಲ. ಒಂದು ಕಾಲದಲ್ಲಿ ನೀಲಮೇಘಶ್ಯಾಮನಾದ ಕೃಷ್ಣ ನನ್ನ ಇಷ್ಟದೈವವಾಗಿದ್ದ. ರಾಧ-ಮಾಧವರ ಪ್ರೇಮ ನನ್ನ ಆದರ್ಶವಾಗಿತ್ತು. ಮುಂದೆ ದ್ರೌಪಧಿಯ ಸಖ, ದ್ವಾರಕೆಯ ಕೃಷ್ಣ ನನ್ನ ಆತ್ಮಬಂಧುವಾದ. ಆತನ ಕಿರುಬೆರಳು ಹಿಡಿದು ಅನೇಕ ಸಂಕಷ್ಟಗಳನ್ನು ಎದುರಿಸಿದ್ದೇನೆ. ಆದರೆ ಈಗ ಆತನೂ ನನ್ನ ಜತೆಯಲಿಲ್ಲ. ಈಗ ನನ್ನನ್ನು ಸಂಪೂರ್ಣ ಆವರಿಸಿಕೊಂಡಿರುವವನು ಶಿವ.
ಅಬ್ಬಾ! ಎಂತಹ ಪರಿಪೂರ್ಣ ವ್ಯಕ್ತಿತ್ವ ಶಿವನದು!! ತನ್ನ ದೇಹದ ಅರ್ಧ ಭಾಗವನ್ನೇ ಮಡದಿಗೆ ನೀಡಿ ಅರ್ಧನಾರೀಶ್ವರನಾದ ಪ್ರೇಮಿ ಆತ. ಆತನ ಕೌಟುಂಬಿಕ ಬದುಕು ಎಷ್ಟೊಂದು ವೈರುಧ್ಯತೆಗಳಿಂದ ಕೂಡಿದೆ.. ಆದರೂ ಅಲ್ಲಿ ಸಾಮರಸ್ಯವಿದೆ. ಪಾರ್ವತಿಯ ವಾಹನಹುಲಿ. ಹುಲಿಯ ಆಹಾರ ಶಿವನ ವಾಹನವಾದ ನಂದಿ. ಶಿವನ ಕೊರಳನ್ನಲಂಕರಿಸಿರುವ ಹಾವಿನ ಕಣ್ಣು ಗಣಪನ ವಾಹನವಾದ ಇಲಿಯ ಮೇಲಿರುತ್ತದೆ. ಸುಬ್ರಹ್ಮಣ್ಯನ ವಾಹನ ನವಿಲಿನ ಆಹಾರ ಶಿವನ ಕೊರಳಲ್ಲಿರುವ ಹಾವು. ಶಿವನ ಹಣೆಯಲ್ಲಿ ಸದಾ ಪ್ರಜ್ವಲಿಸುವ ಬೆಂಕಿಕಣ್ಣಿದೆ. ಆದರೆ ತಲೆಯಲ್ಲಿ ಬೆಂಕಿ ನಂದಿಸುವ ಗಂಗೆಯಿದ್ದಾಳೆ. ಸ್ವತ ಶಿವ ಬೂದಿಬಡುಕನಾದ ಶ್ಮಶಾನವಾಸಿ ತಿರುಕ ಆದರೆ ಪಾರ್ವತಿ ಸುರಸುಂದರಿಯಾದ ರಾಜಕುಮಾರಿ.ಆದರೂ ಶಿವನನ್ನು ಮೆಚ್ಚಿ ಮದುವೆಯಾದವಳು. ಡೊಳ್ಳು ಹೊಟ್ಟೆಯ ಆನೆ ಮುಖದ ಗಣೇಶ ಇಲಿ ಮೇಲೆ ಕೂತು ಸವಾರಿ ಮಾಡುವುದು ನೆನೆಸಿದರೇ ನಗು ಬರುತ್ತದೆ. ಇನ್ನು ಅವರ ಪರಿವಾರವೋ ಭೂತ ಪ್ರೇತಾದಿ ಗಣಗಳು.
ಸಂಸಾರದಲ್ಲಿ ಸಾಮರಸ್ಯ ಸಾಧಿಸುವುದು ಹೇಗೆ ಎಂಬುದನ್ನು ಶಿವ-ಶಿವೆಯರನ್ನು ನೋಡಿಯೇ ಕಲಿತುಕೊಳ್ಳಬೇಕು. ಆತನ ಪರಿವಾರ ನೋಡಿದರೇ ಗೊತ್ತಾಗುತ್ತದೆ. ಅತನೊಬ್ಬ ಕೃಷಿಕ. ಪಶುಪತಿನಾಥ ಎಂಬ ಹೆಸರು ಆತನಿಗೆ ಅನ್ವರ್ಥನಾಮ. ಇಂತಪ್ಪ ಪಶುಪತಿನಾಥನನ್ನು ಹುಡುಕಿಕೊಂಡು ನಾನು ಯಾವುದೋ ಟ್ರಾವಲ್ಸ್ ಹತ್ತಿ ಒಂಟಿಯಾಗಿ ನೇಪಾಳಕ್ಕೆ ಹೋಗಿದ್ದೆ. ಆದರೆ ಅಲ್ಲಿ ಪಶುಪತಿನಾಥನ ಪಕ್ಕದ ಗುಡಿಯಲ್ಲಿದ್ದ ಉನ್ಮತ್ತ ಬೈರವನನ್ನು ನೋಡಿ ದಿಗ್ಮೂಢಳಾಗಿ ನಿಂತಿದ್ದೆ. ಈಗ ಎಷ್ಟು ನೆನಪಿಸಿಕೊಂಡರೂ ಪಂಚಮುಖಿ ಪಶುಪತಿನಾಥನ ಮುಖ ಸ್ಪಷ್ಟವಾಗಿ ಗೊಚರಿಸದು. ಉನ್ಮತ್ತ ಬೈರವ ಮಾತ್ರ ಚಿತ್ತಭಿತ್ತಿಯಲ್ಲಿ ಅಚ್ಚೊತ್ತಿದೆ. ಇನ್ನೊಮ್ಮೆ ನೇಪಾಳಕ್ಕೆ ಹೋಗಿ ಪಶುಪತಿನಾಥ ಮತ್ತು ಶಕ್ತಿಪೀಠವನ್ನು ಒಟ್ಟಾಗಿ ನೋಡಬೇಕೆಂಬ ಬಯಕೆಯಿದೆ.
ಸ್ಥೀಯ ಧೀಃಶಕ್ತಿಯ ಬಗ್ಗೆ ನನಗೆ ಅಪಾರ ಭರವಸೆಯಿದೆ. ಅವಳು ಆಧಿಶಕ್ತಿ. ಸೃಷ್ಟಿಸುವ, ಪಾಲಿಸುವ ಮತ್ತು ಪೊರೆಯುವ ಸಾಮರ್ಥ್ಯ ಅವಳಿಗೆ ಮಾತ್ರ ಇದೆ. ಪುರುಷನಲ್ಲಿ ಅದು ಇಲ್ಲ. ಸಮಸ್ತ ಹಿಂದುಗಳ ಶ್ರದ್ಧಾ ಕೇಂದ್ರವಾದ ಕಾಶಿ ವಿಶ್ವನಾಥ, ಅಷ್ಟೈಶ್ವರ್ಯವನ್ನು ಬಯಸುವವರಿಗಾಗಿ ತಿರುಪತಿ ತಿಮ್ಮಪ್ಪ, ಹಾಗು ಸ್ತ್ರೀದ್ವೇಷಿ ಅಯ್ಯಪ್ಪ ಬಿಟ್ಟರೆ ಬೇರೆ ಪುರುಷ ದೇವರುಗಳು ಅಷ್ಟು ಜನಪ್ರಿಯರಾಗಿದ್ದು ನನಗೆ ಗೊತ್ತಿಲ್ಲ.ಹಾಗೆಯೇ ಅಲ್ಲಿ ಭಕ್ತರ ನೂಕು ನುಗ್ಗಾಟದಲ್ಲಿ ಸಾವು ಸಂಭವಿಸಿದ್ದು ನನಗೆ ನೆನಪಿಲ್ಲ
ಕುಂಬಮೇಳಕ್ಕೆ ಲಕ್ಷಾಂತರ ಜನಸೇರುತ್ತಾರೆ. ಅದು ಕೂಡ ಶಕ್ತಿ ಸ್ಥಳವೇ. ಗಂಗಾ, ಯಮುನಾ, ಸರಸ್ವತಿಯರ ಸಂಗಮ ಸ್ಥಳ ಅದು. ಅಲ್ಲಿ ಪ್ರತಿ ಬಾರಿಯೂ ಸಾವು ನೋವುಗಳಾಗುವುದು ಸಾಮಾನ್ಯ. ಇತ್ತೀಚೆಗೆ ಹಿಮಾಚಲಪ್ರದೇಶದ ನೈನಾದೇವಿ ಮಂದಿರದಲ್ಲಿ, ಅದಕ್ಕೂ ಹಿಂದೆ ಮಹಾರಾಷ್ಟ್ರದ ಮಾಂದ್ರಾದೇವಿ ದೇಗುಲದಲ್ಲಿ ಭಕ್ತರ ನೂಕುನುಗ್ಗಾಟದಲ್ಲಿ ನೂರಾರು ಜನ ಪ್ರಾಣ ಕಳೆದುಕೊಂಡಿದ್ದರು.
ಈಗ ನನಗೊಂದು ಕುತೂಹಲವಿದೆ; ಮಾತೃ ದೇವತೆಗಳಿಗೆ ಹೆಚ್ಚು ಭಕ್ತರಿರುತ್ತಾರೋ ಅಥವಾ ಗಂಡು ದೇವರುಗಳಿಗೋ...! ನನಗೆ ಶಿವ ಇಷ್ಟ. ಅದಕ್ಕೆ ನಾನು ಸ್ತ್ರೀಯಾಗಿರುವುದು ಕಾರಣವಾಗಿರಬಹುದು; ನನಗೆ ಗೊತ್ತಿಲ್ಲ. ನಿಮಗೆ ಯಾರು ಇಷ್ಟ? ಲೇಖನದ ಬಲ ಬದಿಯಲ್ಲಿರುವ ಕಾಲಂನಲ್ಲಿ ಓಟು ಮಾಡ್ತೀರಲ್ಲಾ.....?