Friday, February 20, 2009

ಕಲಾವಿದರತ್ತ ತಿರುಗಿದ ಬಿಜೆಪಿ ವಕ್ರ ದೃಷ್ಟಿ





ರೈತರ ಮೇಲೆ ಗೋಲಿಬಾರ್ ನಡೆಸಿದ್ದಾಯ್ತು.
ಮಹಿಳೆಯರನ್ನು ಅನುಮಾನಿಸಿ, ಅವಮಾನಿಸಿದ್ದಾಯ್ತು.
ಇದೀಗ ಬಿ.ಜೆ.ಪಿಯ ಕಣ್ಣು ಕಲಾವಿದರ ಮೇಲೆ ಬಿದ್ದಿದೆ.

ನಿನ್ನೆ ಅಂದರೆ ಫೆ.೧೬ರಂದು ಬೆಂಗಳೂರಿನಲ್ಲಿ’ ಆಧುನಿಕ ಕಲೆಗಳ ರಾಷ್ಟ್ರೀಯ ಗ್ಯಾಲರಿ’[ಎನ್ ಜಿ ಎಂ ಎ] ಉದ್ಘಾಟನೆಯಾಯಿತು.
ಮೂರು ದಶಕಗಳ ಹೋರಾಟದ ಫಲವಾಗಿ ರಾಜ್ಯಕ್ಕೆ ಈ ಶಾಖೆ ದೊರಕಿತ್ತು. ಸಹಜವಾಗಿ ಕಲಾವಿದರಿಗೆ ಇದರಿಂದ ಸಂತೋಷವಾಗಿತ್ತು. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅಹ್ವಾನಿತ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕಾರ್ಯಕಮವನ್ನು ಕೇಂದ್ರ ಸಂಸ್ಕೃತಿ ಸಚಿವೆ ಅಂಬಿಕಾ ಸೋನಿ ಉದ್ಘಾಟಿದರು. ರಾಜ್ಯ ಸರಕಾರದ ಪ್ರತಿನಿಧಿಯಾಗಿ ವೈದ್ಯ ಶಿಕ್ಷಣ ಸಚಿವ ರಾಮಚಂದ್ರ ಭಾಗವಹಿಸಿದ್ದರು.

ಬಹಳಷ್ಟು ಸರಕಾರಿ ಕಾರ್ಯಕ್ರಮಗಳಂತೆ ಇದೂ ಕೂಡ ಕೆಲವು ಅವ್ಯವಸ್ಥೆಗಳ ನಡುವೆ ಸಾಂಗವಾಗಿ ಮುಗಿದು ಹೋಗುತ್ತಿತ್ತು. ಆದರೆ ಹಾಗಾಗಲಿಲ್ಲ. ಅದಕ್ಕೆ ಕಾರಣವಾದದ್ದು ರಾಮಚಂದ್ರ ಗೌಡರ ಭಾಷಣ.
ಪೇಪರುಗಳಲ್ಲಿ ವರದಿಯಾದಂತೆ ಅವರ ಭಾಷಣದ ವೈಖರಿ ಇದು;

”ಮಾಡರ್ನ್ ಆರ್ಟ್ ಹೆಸರಿನಲ್ಲಿ ಸ್ವಯಂ ಘೋಶಿತ ಹುಸಿ ಕಲಾವಿದರು ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯನ್ನು ವಿರೂಪಗೊಳಿಸುತ್ತಿದ್ದಾರೆ. ಚಿತ್ರಕಲೆ ಹೆಸರಿನಲ್ಲಿ ಸಂಸ್ಕೃತಿ ಮೇಲೆ ನಡೆಯುತ್ತಿರುವ ಈ ರೀತಿಯ ಹಲ್ಲೆಯನ್ನು ಸಹಿಸಲು ಸಾಧ್ಯವಿಲ್ಲ”.
ಪ್ರೇಕ್ಷಕರಿಂದ ಇದಕ್ಕೆ ಪ್ರತಿಕ್ರಿಯೆ ಬರಲಿಲ್ಲ. ಪ್ರತಿಭಟನೆ ವ್ಯಕ್ತವಾದದ್ದು, ಈ ಕಾರ್ಯಕ್ರಮವನ್ನು ಮೌನಪ್ರತಿಭಟನೆಯ ಮೂಲಕವೇ ವಿರೋಧಿಸಲೆಂದೇ ಬಂದು ಸಭಾಂಗಣದ ಒಂದು ಬದಿಯಲ್ಲಿ ನಿಂತ ಕಲಾವಿದರಿಂದ.
ನಮ್ಮ ನಾಡಿನ ಪ್ರಮುಖ ಮಾಡರ್ನ್ ಆರ್ಟಿಸ್ಟ್ ಗಳಲ್ಲಿ ಒಬ್ಬರಾದ ಎಂಎಸ್ ಮೂರ್ತಿ ಇವರೆಲ್ಲರಿಗೆ ಧ್ವನಿಯಾದರು. ಅವರು ಗೌಡರಿಗೆ ಹೇಳಿದರು” ಆಧುನಿಕ ಕಲೆಯ ಬಗ್ಗೆ ನಿಮಗೆ ಏನೂ ಗೊತ್ತಿಲ್ಲ. ಬಾಯಿಗೆ ಬಂದಂತೆ ಮಾತಾಡಬೇಡಿ”
”ಅನ್ನಿಸಿದ್ದನ್ನು ಹೇಳುವ ಆಧಿಕಾರ ನನಗಿದೆ. ನೀವ್ಯಾರು ಕೇಳಕ್ಕೆ? ಥ್ರೋ ಹಿಮ್ ಔಟ್” ಸಚಿವರು ಆಜ್ನೆ ಕೊಟ್ಟೇಬಿಟ್ಟರು. ಪೋಲಿಸರು ಅದನ್ನು ಪರಿಪಾಲಿಸಿದರು. ಮೂರ್ತಿಯವರನ್ನು ಪೋಲಿಸರು ಹೊರಗೆ ಕರೆದುಕೊಂಡು ಹೋಗುತ್ತಿರುವುದು ದೃಶ್ಯಮಾದ್ಯಮದಾಲ್ಲೂ ಪ್ರಸಾರವಾಯ್ತು.

ವೇದಿಕೆಯಲ್ಲಿದ್ದ ಅಂಬಿಕಾಸೋನಿ, ಕಲಾವಿದರಿಗೆ ಅವಮಾನ ಮಾಡಬೇಡಿ ಅವರನ್ನು ಹೊರಹಾಕಬೇಡಿ. ಇದು ಕೇಂದ್ರ ಸರಕಾರದ ಕಾರ್ಯಕ್ರಮ. ತಾನು ಕೇಂದ್ರ ಸರಕಾರವನ್ನು ಪ್ರತಿನಿಧಿಸುತ್ತಿದ್ದೇನೆ. ವೈದ್ಯ ಶಿಕ್ಷಣ ಸಚಿವರು ರಾಜ್ಯ ಸರಕಾರವನ್ನು ಪ್ರತಿನಿಧಿಸುತ್ತಿದ್ದಾರೆ, ಎಂದುಬಿಟ್ಟರು. ಅವರ ಮಾತುಗಳು ಗಾಳಿಯಲ್ಲಿ ತೂರಿಹೋದುವು.

ಪೋಲಿಸರು ಸಚಿವರ ಆಜ್ನೆ ಪಾಲಿಸುವುದರಲ್ಲಿ ನಿರತರಾದರು. ಕಲಾವಿದರಿಗೆ ಅವಮಾನ ಆಗೇ ಹೋಯ್ತು.

ಕಲಾವಿದರ ಪ್ರತಿಭಟನೆಗೆ ಕಾರಣವೇನಿತ್ತು?

ತಮಿಳುನಾಡಿನ ಪಾಲಾಗುತ್ತಿದ್ದ ’ಮಾಡರ್ನ್ ಆರ್ಟ್ ಗ್ಯಾಲರಿ’ಯನ್ನು ಬಹು ಪ್ರಯಾಸದಿಂದ ಕರ್ನಾಟಕ್ಕಕ್ಕೆ ತರಲಾಗಿತ್ತು. ಕಲಾವಿದರಿಗದು ಹೆಮ್ಮೆಯ ವಿಷಯ. ನಮ್ಮ ರಾಜ್ಯ ಸರಕಾರ ಗ್ಯಾಲರಿಗಾಗಿ ಪ್ರತಿ ವರ್ಷ ಸುಮಾರು ೩೦ ಲಕ್ಷ ರೂಪಾಯಿಗಳನ್ನು ಖರ್ಚು ಮಾಡುತ್ತದೆ.
ನಮ್ಮ ದುಡ್ಡು, ನಮ್ಮ ನೆಲ ಅಂದ ಮೇಲೆ ಕನ್ನಡಿಗರಿಗೂ ಅದರಲ್ಲಿ ಸೂಕ್ತ ಪ್ರಾತಿನಿದ್ಯ ಸಿಗಬೇಕೆಂದು ಬಯಸುವುದು ನ್ಯಾಯ ತಾನೆ? ಅದು ಸಿಕ್ಕಿಲ್ಲವೆಂದು ಎಮ್ ಎಸ್ ಮೂರ್ತಿ ಪ್ರತಿಭಟನೆ ಮಾಡಿದ್ದಾರೆ.
ಗ್ಯಾಲರಿಯಲ್ಲಿ ಸುಮಾರು ೫೦೦ ಕಲಾವಿದರ ಚಿತ್ರಗಳಿವೆ.ಅದರಲ್ಲಿ ಕರ್ನಾಟಕದ ಕಲಾವಿದರು ಬೆರಳೆಣಿಕೆಯಷ್ಟು ಮಾತ್ರ. ಅದಲ್ಲದೆ ಮುರ್ತಿಯವರೂ ಸೇರಿದಂತೆ ಕರ್ನಾಟಕದ ಅನೇಕ ಕಲಾವಿದರಿಗೆ ಸಮಾರಂಭಕ್ಕೆ ಅಹ್ವಾನ ನೀಡಲಿಲ್ಲವೆಂಬ ಸಕಾರಣವಾದ ಸಿಟ್ಟು.

ರಾಜಕೀಯ ವೇದಿಕೆಗಳಲ್ಲಿ ಹೇಗೆ ಮಾತಾಡಿದರೂ ನಡೆಯುತ್ತದೆ. ಆದರೆ ಸಾಹಿತ್ಯ, ಸಂಗೀತ, ಚಿತ್ರಕಲೆ ಮುಂತಾದ ಲಲಿತ ಕಲೆಗಳ ಬಗ್ಗೆ ಮಾತಾಡುವಾಗ ಎಚ್ಚರವಾಗಿರಬೇಕಾಗುತ್ತದೆ. ಪ್ರೇಕ್ಷಕರಲ್ಲಿ ಪ್ರಾಜ್ನರೂ, ಸೂಕ್ಷಮತಿಗಳೂ ಇರುತ್ತಾರೆ. ಒಂದೋ ಇಂಥ ಸಮಾರಂಭಗಳಿಗೆ ಪೂರ್ವ ಸಿದ್ದತೆಯೊಂದಿಗೆ ಬರಬೇಕು. ಇಲ್ಲವಾದರೆ ತನ್ನ ಮಿತಿಯನ್ನು ಅರಿತುಕೊಂಡು ಶುಭ ಹಾರೈಸಿ, ಸರಕಾರದ ಸಹಕಾರವನ್ನು ಪ್ರಕಟಿಸಿ ,ಬಾಯಿ ಮುಚ್ಚಿ ಕಿವಿ ತೆರೆದು ಕುಳಿತುಕೊಳ್ಳಬೇಕು.

Friday, February 13, 2009

ರೇಣುಕಾ ಚೌದರಿ ಎಂಬ ಅಗ್ನಿಪುತ್ರಿ




ಮಂಗಳೂರಿನ ಅಮ್ನೇಶಿಯ ಪಬ್ ದಾಳಿಯ ಪ್ರಕರಣದ ನಂತರ ನಡೆಯುತ್ತಿರವ ತೆರೆಮರೆಯ ರಾಜಕೀಯ ದೊಂಬಾರಟಗಳು, ಮಂಜೇಶ್ವರ ಶಾಸಕರ ಪುತ್ರಿಯ ಅಪಹರಣ, ಪ್ರೇಮಿಗಳ ವಿರುದ್ಧ ಮುತಾಲಿಕನ ಹಾರಾಟ, ಚೆಡ್ಡಿ ಸೀರೆಗಳ ಪೈಪೋಟಿ ಇವುಗಳ ಮಧ್ಯೆ ಟೀವಿ ನೋಡುವುದಕ್ಕಾಗಲಿ, ಪೇಪರ್ ಓದುವುದಕ್ಕಾಗಲಿ ಮನಸ್ಸಾಗುವುದಿಲ್ಲ. ಪುಕ್ಕಟೆ ಮನರಂಜನೆ ಎಲ್ಲಾ ಕಾಲದಲ್ಲಿಯೂ ರಂಜಿಸುವುದಿಲ್ಲ.

ಆದರೆ ’ಕರಾವಳಿ ಆಲೆ’ಯ ಸಂಪಾದಕ ಬಿ.ವಿ.ಸೀತಾರಂ ಅವರನ್ನು ಬಂದಿಸಿದ ಪರಿ ಮತ್ತು ನಡೆಸಿಕೊಂಡ ರೀತಿಯ ಬಗ್ಗೆ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿ ಸರಕಾರಕ್ಕೆ ಹತ್ತುಸಾವಿರ ರೂಪಾಯಿಗಳ ದಂಡ ವಿಧಿಸಿದ್ದನ್ನು ಗಮನಿಸಿದರೆ ನಮ್ಮ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಗೌರವ ಮೂಡುತ್ತೆ. ಮತ್ತೆಆಶಾವಾದ ಮೊಳಕೆಯೊಡೆಯುತ್ತದೆ.

ಆದರೆ ನಿನ್ನೆ ಮಂಗಳೂರು ಮಹಾನಗರಪಾಲಿಕೆ ರೇಣುಕಾ ಚೌದರಿಗೆ ನೋಟಿಸ್ ಜಾರಿ ಮಾಡಿದೆ. ’ಮಂಗಳೂರು ತಾಲೀಬರಣಗೊಳ್ಳುತ್ತಿದೆ’ ಎಂದು ಹೇಳಿದ ರೇಣುಕಳದು ಬೇಜವಾಬ್ದಾರಿ ಹೇಳಿಕೆ, ಅದಕ್ಕಾಗಿ ಅವರು ಮಂಗಳೂರಿನ ಜನತೆಯ ಕ್ಷಮೆ ಯಾಚಿಸಬೇಕು. ಇದು ಪಾಲಿಕೆಯ ಒತ್ತಾಯ. ಒಂದು ವೇಳೆ ಸಚಿವೆ ಕ್ಷಮೆ ಯಾಚಿಸದಿದ್ದರೆ ಅವರ ಮೇಲೆ ಕ್ರಿಮಿನಲ್ ಮೊಕ್ಕದ್ದಮೆ ಹೂಡುವುದಾಗಿ ಮೇಯರ್ ಗಣೇಶ್ ಸಚಿವರಿಗೆ ಎಚ್ಚರಿಕೆ ನೀಡಿದ್ದಾರೆ. ಸಚಿವೆಗೆ ಉತ್ತರಿಸಲು ಮೂರುದಿನಗಳ ಗಡುವನ್ನವರು ನೀಡಿದ್ದಾರೆ.


ಸಚಿವರಿಗೇ ನೋಟಿಸ್ ನೀಡಲು ಮೆಯರೊಬ್ಬರಿಗೆ ಕಾನೂನಿನಲ್ಲಿ ಅವಕಾಶವಿದೆಯೋ ಇಲ್ಲವೋ ಎಂಬುದು ಕಾನೂನು ತಜ್ನರು ಚರ್ಚಿಸಬೇಕಾದ ವಿಷಯ. ಇಲ್ಲಿ ಗಮನಿಸಬೇಕಾದ ವಿಚಾರ ಅಂದರೆ ಮಂಗಳೂರು ಮಹಾನಗರಪಾಲಿಕೆ ಬಿ.ಜೆ.ಪಿ ಆಡಳಿತದಲ್ಲಿದೆ. ಹಾಗಾಗಿ ಮೇಯರ್ ಗಣೇಶ ಹೊಸಬೆಟ್ಟು ಈ ಧಾರ್ಷ್ಟ್ಯ ತೋರಿಸಿದ್ದಾರೆ. ರಾಜ್ಯದಲ್ಲೂ, ಪಾಲಿಕೆಯಲ್ಲೂ ಮೊದಲಬಾರಿ ಅಧಿಕಾರ ಗದ್ದುಗೆ ಏರಿದ ಅನನುಭವಿಗಳ ಪಡೆ!

ತಪ್ಪು ಮಾಡಿದವರು ಯಾರಿಗೇ ಸಂಬಂಧಪಟ್ಟಿರಲಿ, ಅವರ ಹಿನ್ನೆಲೆ ಏನೇ ಇರಲಿ ಅವರು ’ಹಾಗೆ’ ಮಾಡುವುದಕ್ಕೆ ಕಾರಣವಾದ ಪರಿಸರ,ಅದು ನಿರ್ಮಾಣವಾದ ಬಗೆ , ಅದನ್ನು ಪೋಷಿಸುವವರ ಪಡೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಅದು ಸಂಘ ಪರಿವಾರದವರ ಬುಡಕ್ಕೇ ಬರುತ್ತದೆ. ತನ್ನ ಘೋರಿಯನ್ನು ತಾನೇ ತೋಡಿಕೊಳ್ಳಲು ಹೊರಟಿದೆ ಬಿ.ಜೆ. ಪಿ ಸರಕಾರ.


ರೇಣುಕಾ ಚೌದರಿ. ಈ ಮಹಿಳೆಯ ಹೆಸರು ನನ್ನ ನೆನಪಿನ ಕೋಶದಲ್ಲಿ ದಾಖಲಾದದ್ದು ಹಲವಾರು ವರ್ಷಗಳ ಹಿಂದೆ. ಬಹುಶಃ ಅದು ನನ್ನ ಕಾಲೇಜು ದಿನಗಳು. ಪರಿಸರ ಮತ್ತು ಕಥೆ ಕಾದಂಬರಿಗಳ ಮೂಲಕ ಪುರುಷ ಪ್ರಪಂಚವನ್ನು ಅರ್ಥ ಮಾಡಿಕೊಳ್ಳುತ್ತಿದ್ದ ಕಾಲ. ಆಗ ಆಂದ್ರಪ್ರದೇಶದ ರೇಣುಕಾ ಚೌದರಿಯೆಂಬ ಮಹಿಳೆ”ನಮಗೆ ಗಂಡಸರ ಅಗತ್ಯ ಇಲ್ಲ..... ದೇಶದಾದ್ಯಂತ ವೀರ್ಯ ಬ್ಯಾಂಕ್ ಗಳನ್ನು ಸ್ಥಾಪಿಸಬೇಕು”. ಎಂಬ ಹೇಳಿಕೆ ನೀಡಿಬಿಟ್ಟರು. ಆ ಸಂದರ್ಭ ನೆನಪಿಲ್ಲ. ಆದರೆ ಈ ಹೇಳಿಕೆ ಅಂದು ನೀಡಿದವರು ಈಗಿನ ಕೇಂದ್ರ ಸರಕಾರದ ಮಹಿಳಾ ಮತ್ತು ಮಕ್ಕಳಕಲ್ಯಾಣ ಖಾತೆಯ ರಾಜ್ಯ ಸಚಿವರಾದ ರೇಣುಕಾಚೌದರಿ.

ಎರಡು ದಶಕಗಳ ಹಿಂದಿನ ಆ ಮಾತಿನ ಪ್ರಖರತೆ ಇಂದಿಗೂ ಮಸುಕಾಗಲಿಲ್ಲ .ಮೊನ್ನೆ ಮೊನ್ನೆ ಮಂಗಳೂರಿನ ಪಬ್ ದಾಳಿಗೆ ಸಂಬಂಧಪಟ್ಟಂತೆ ಅವರು ತೆಗೆದುಕೊಂಡ ತೀರ್ಮಾನಗಳು ಮತ್ತೊಮ್ಮೆ ಅದನ್ನು ದೃಢಪಡಿಸಿದವು. ’ನನ್ನ ವರಧಿಯ ಬಗ್ಗೆ ಅಸಮಧಾನ ತೋರಲು ಈಕೆ ಯಾರು?’ ಎಂದು ಪ್ರಶ್ನಿಸಿದ ರಾಷ್ಟ್ರೀಯ ಆಯೋಗದ ಸದಸ್ಯೆ ನಿರ್ಮಲಾ ವೆಂಕಟೇಶರಿಗೆ ಶೋಕಾಶ್ ನೋಟಿಸ್ ಜಾರಿ ಮಾಡಿದರು. ಮಾತ್ರವಲ್ಲ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಕಿರಣ್ ಚಡ್ಡಾರನ್ನು ಮಂಗಳೂರಿಗೆ ಕಳುಹಿಸಿ ಪ್ರತ್ಯೇಕ ವರಧಿ ತರಿಸಿಕೊಂಡರು. ’ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಪಬ್ ಪರ ಚಳುವಳಿ ನಡೆಸಬೇಕಾದೀತು’ ಎಂದು ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಮೊನ್ನೆ ಕನ್ನಡದ ಹಿರಿಯ ಪತ್ರಕರ್ತರೊಬ್ಬರೊಡನೆ ಮಾತಾಡುತ್ತಿದ್ದೆ. ಅವರು ಹೇಳಿದರು; ರೇಣುಕಾ ಸಕ್ರೀಯ ರಾಜಕಾರಣಕ್ಕೆ ಬರುವ ಮೊದಲು ಆತ್ಮರಕ್ಷಣೆಗಾಗಿ ತಮ್ಮ ಬಳಿ ಸದಾ ಪಿಸ್ತೂಲ್ ಇಟ್ಟುಕೊಂಡಿರುತ್ತಿದ್ದರಂತೆ. ಅವರ ಈ ದಾಢಸಿತನವನ್ನು ಮೆಚ್ಚಿಯೇ ತೆಲುಗು ದೇಶಂನ ಸಂಸ್ಥಾಪಕ ಎನ್ ಟಿ ರಾಮರಾವ್ ತಮ್ಮ ಪಕ್ಷಕ್ಕೆ ಅವರನ್ನು ಬರಮಾಡಿಕೊಂಡರಂತೆ
ರೇಣುಕಾ ೧೯೫೪ರ ಅಗಸ್ಟ್೧೩ರಂದು ಅಂದ್ರಪ್ರದೇಶದ ವಿಶಾಖಪಟ್ಟಣದಲ್ಲಿ ಹುಟ್ಟಿದರು. ತಮ್ಮ ೩೦ನೇ ವಯಸ್ಸಿನಲ್ಲಿ ರಾಜಕೀಯ ಪ್ರವೇಶ ಮಾಡಿದರು. ಈಗ ಅವರಿಗೆ ೫೪ ವರ್ಷ. ಅಂದರೆ ಅವರಿಗೆ ೨೪ ವರ್ಷಗಳ ಸಕ್ರಿಯ ರಾಜಕೀಯ ಅನುಭವವಿದೆ. ಅನುಭವ ಎಂತವರನ್ನೂ ಮೆತ್ತಗಾಗಿಸುತ್ತದೆ. ಆದರೆ ರೇಣುಕಾಳ ವಿಚಾರದಲ್ಲಿ ಅದು ಇನ್ನಷ್ಟು ಪ್ರಖರಗೊಂಡಿದೆ.

ಒಂದೆರಡು ವರ್ಷಗಳ ಹಿಂದೆ ಆಕೆ ಕೊಟ್ಟ ಹೇಳಿಕೆಯನ್ನೇ ನೋಡಿ, ’ಮಹಿಳೆಯರೇ ನಿಮ್ಮ ಗಂಡಂದಿರನ್ನು ನಂಬಬೇಡಿ, ಸದಾ ನಿಮ್ಮ ಬಳಿ ಕಾಂಡಮ್ ಗಳನ್ನು ಇಟ್ಟುಕೊಂಡಿರಿ’ ಈಕೆಯನ್ನು ವಿರೋಧಿಸಲು ಪುರುಷ ಪ್ರಧಾನ ಸಮಾಜಕ್ಕೆ ಇಷ್ಟು ಸಾಕಲ್ಲವೇ?

ಆಕೆ ಕರ್ನಾಟಕಕ್ಕೆ ಇನ್ನೂ ಹತ್ತಿರದವರು. ಅವರು ಸ್ನಾತಕೋತ್ತರ ಪದವಿಯನ್ನು ಪಡೆದದ್ದು ಬೆಂಗಳೂರು ವಿಶ್ವವಿದ್ಯಾಲಯದಿಂದ. ೧೯೮೪ರಲ್ಲಿ ತೆಲುಗುದೇಶಂ ಮೂಲಕ ರಾಜಕೀಯಕ್ಕೆ ಪದಾರ್ಪಣೆ ಮಾಡಿದರೂ ೧೯೯೮ರಲ್ಲಿ ಪಕ್ಷ ತೊರೆದು ಕಾಂಗ್ರೇಸ್ ಸೇರಿದರು. ಎರಡು ಸಲ ರಾಜ್ಯಸಭಾ ಸದಸ್ಯರಾಗಿದ್ದರು. ಕುಪ್ಪಂ ಲೋಕಸಭಾ ಕ್ಷೇತ್ರದಿಂದ ಸತತ ಎರಡನೇ ಬಾರಿಗೆ ಆಯ್ಕೆಯಾಗುತ್ತಿದ್ದಾರೆ. ದೇವೇಗೌಡರ ಕ್ಯಾಬಿನೇಟ್ ನಲ್ಲಿ[೧೯೯೭-೯೮] ಸಚಿವೆಯೂ ಆಗಿದ್ದರು.

ಹೌದು ಆಕೆ ಪ್ರಖರ ಸ್ತ್ರೀವಾದಿ. ಮಹಿಳಾಪರವಾದ ನಿಲುವುಗಳನ್ನು ತೆಗೆದುಕೊಳ್ಳುವಾಗ ಆಕೆ ಕೇವಲ ಕಾಂಗ್ರ್‍ಏಸ್ ಪಕ್ಷದ ವಕ್ತಾರಳಾಗುವುದಿಲ್ಲ ಸಮಸ್ತ ಮಹಿಳಾ ಧ್ವನಿಯಾಗುತ್ತಾಳೆ. ’ನಮ್ಮವಳು’ ಅನ್ನಿಸಿಕೊಂಡುಬಿಡುತ್ತಾಳೆ. ಅದು ಅವಳ ಹೆಚ್ಚುಗಾರಿಕೆ. ಮಹಿಳೆಯರ ಹಕ್ಕುಗಳಿಗೆ ಚ್ಯುತಿ ಬಂದಾಗಲೆಲ್ಲ ಅವಳು ಸಿಡಿದೇಳುತ್ತಾಳೆ. ಹಾಗಾಗಿ ಆಕೆ ಉಳಿದ ರಾಜಕಾರಣಿಗಳಿಗಿಂತ ಭಿನ್ನವಾಗಿ ಕಾಣಿಸಿಕೊಳ್ಳುತ್ತಾಳೆ. ಜಯಲಲಿತ, ಉಮಾಭಾರತಿ, ಮಾಯಾವತಿ ರೂಪಿಸುವ ರಾಜಕೀಯ ತಂತ್ರಗಾರಿಕೆಗಳು ಈಕೆಯಲ್ಲಿಲ್ಲ. ರೇಣುಕಾಳದ್ದು ಏನಿದ್ದರೂ ನೇರಾನೇರ. ಇಲ್ಲವಾದರೆ ಮುತಾಲಿಕನಂತ ಧರ್ಮಾಂಧ ಬ್ರಹ್ಮಚಾರಿಗೆ ಪ್ರೇಮಿಗಳ ದಿನಾಚರಣೆಯಂದು ಗಿಪ್ಟ್ ಕಳುಹಿಸುತ್ತೇನೆಂದು ಹೇಳಲು ಸಾಧ್ಯವಾಗುತ್ತಿತ್ತೆ? ಅದು ರೇಣುಕಾಗೆ ಮಾತ್ರ ಸಾಧ್ಯ.

ನಾಳೆ ಪ್ರೇಮಿಗಳ ದಿನಾಚರಣೆ.

ಈ ಕ್ಷಣಕ್ಕೆ ನನಗೆ ರೇಣುಕಾಚೌಧರಿ ಇಷ್ಟವಾಗುತ್ತಾಳೆ. ಮೊದಲಬಾರಿಗೆ ವಿಶ್ವಸಮುದಾಯಕ್ಕೆ ಭರವಸೆಯ ಭಾವನೆಯನ್ನು ಮೂಡಿಸುತ್ತಿರುವ ಅಮೇರಿಕದ ದೊಡ್ಡಣ್ಣ ಬರಕಾ ಒಬಮಾ ಇಷ್ಟವಾಗುತ್ತಾನೆ. ಹಾಗಾಗಿ ಅವರಿಬ್ಬರನ್ನೂ ನಾನು ಪ್ರೀತಿಸುತ್ತೇನೆ.

ನನ್ನ ಗೆಳೆಯ ಪೋನ್ ಮಾಡಿ ’ನಾಳೆ ಲಾಂಗ್ ಡ್ರೈವ್ ಹೋಗೋಣ್ವಾ’ ಎಂದು ಕೇಳಿದ್ದ. ಮುನಿಯಂತಿದ್ದ ಆತ ಇಷ್ಟು ಕೇಳಿದ್ದೇ ಹೆಚ್ಚೆಂದು ಒಪ್ಪಿಕೊಂಡಿದ್ದೆ. ಆದರೆ ಈಗ ಭಯವಾಗುತ್ತಿದೆ, ಎಲ್ಲಿಯಾದರೂ ನಮ್ಮನ್ನು ಹಿಡಿದು ಶ್ರೀರಾಮ ಸೇನೆಯವರು ಮದುವೆ ಮಾಡಿಬಿಟ್ಟರೆ...?’ಇಂತಹದೊಂದು ಸಂಬಂಧ ನಿಮ್ಮ ನಡುವಿನಲ್ಲಿದೆಯಾ?’ ಎಂದು ನನ್ನ ಗಂಡ, ಆತನ ಪತ್ನಿ ಪ್ರಶ್ನಿಸಿದರೆ....? ನಮ್ಮ ನಡುವಿನ ಅನುಬಂಧ ಏನೆಂದು ನಮಗೇ ತಿಳಿಯದಿರುವಾಗ ಅನ್ಯರಿಗೆ ಏನೆಂದು ವಿವರಿಸುವುದು?
ಹಾಗಾಗಿ ಇದ್ಯಾವ ರಗಳೆಯೂ ಬೇಡ ಎಂದುಕೊಂಡು ಕಾಳಿದಾಸನ ಮೇಘದೂತದ ಬೇಂದ್ರೆ ಅನುವಾದವನ್ನು ಓದಲೆಂದು ಕೈಗೆತ್ತಿಕೊಂಡಿದ್ದೇನೆ.
ಪ್ರೀತಿ, ಪ್ರೇಮದ ವಿಷಯಕ್ಕೆ ಬಂದಾಗ ಎಲ್ಲರೂ ಭಾವುಕರೇ; ಎಳೆಯರೇ. ಅದೊಂದು ಪ್ರಯೋಗಶಾಲೆ.

Monday, February 2, 2009

ಮಾಧ್ಯಮಗಳಿಗೆ ಧನ್ಯವಾದಗಳು...!




ಶ್ರೀರಾಮ ಸೇನೆ ರಾಜ್ಯ ಸಹ ಸಹಸಂಚಾಲಕ ಪ್ರಸಾದ್ ಅತ್ತಾವರ ಎರಡೂ ಕೈ ಜೋಡಿಸಿ ಮಾದ್ಯಮದವರಿಗೆ ಕೃತಜ್ನತೆ ಅರ್ಪಿಸಿದ್ದಾನೆ.
ಮಾದ್ಯಮಗಳ ಮುಂದೆ ಆತ ಹೇಳಿದ್ದು ಹೀಗೆ ”ಶ್ರೀರಾಮ ಸೇನೆ ಬರಿ ಕರ್ನಾಟಕದಲ್ಲಿತ್ತು. ಈಗ ಅದು ರಾಷ್ಟ್ರಮಟ್ಟಕ್ಕೆ ಬೆಳೆಯಿತು. ಪ್ರಚಾರ ಕೊಟ್ಟ ನಿಮಗೆಲ್ಲಾ ದನ್ಯವಾದಗಳು”

ಸಂಜೆ ಶ್ರೀರಾಮ ಸೈನದ ಸ್ಥಾಪಕ ಪ್ರಮೋದ್ ಮುತಾಲಿಕ ಕೂಡ ಇದನ್ನೇ ಪುನರುಚ್ಚರಿಸಿದರು. ಜಾಮೀನಿನ ಮೇಲೆ ಬಿಡುಗಡೆಗೊಂಡ ಅವರ ಮುಖದಲ್ಲಿ ವಿಜಯದ ನಗೆಯಿತ್ತು.

ಅವರ ಉದ್ದೇಶ ನೆರವೇರಿತ್ತು. ಅದರಲ್ಲಿ ಪಾಲುದಾರರಾದವರನ್ನು ಅವರು ಮರೆಯಲಿಲ್ಲ...!

ಪಬ್ ದಾಳಿಗೆ ಸಂಬಂಧಿಸಿದಂತೆ ಬಂದಿಸಲಾದ ೨೮ ಮಂದಿಗೆ ಶನಿವಾರ ಜಾಮೀನು ಸಿಕ್ಕಿದೆ. ಜೈಲ್ ನಿಂದ ವೀರ ಯೋದರ ತೆರದಲ್ಲಿ ಪೋಸ್ ಕೊಡುತ್ತಲೇ ಹೊರಬಂದ ಅವರು ಮರುದಿನ ಅಂದರೆ ಭಾನುವಾರ ಮಾದ್ಯಮದವರಿಗೆ ಕೃತಜ್ನತೆ ಸಲ್ಲಿಸಿದರು. ಆದರೆ ಮಾದ್ಯಮದವರು ಕನಿಷ್ಠ ಒಂದು ಸಾಲು ಕೂಡ ಛಾಪಿಸದೆ ಕೃತಘ್ನರಾದ್ರು.

ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಕೂಡ ಮಾರಾಟದ ಸರಕಾಗಿ ಕಾಣುತ್ತಿರುವ ಮಾದ್ಯಮದವರಿಗೆ ಅಬಿನಂಧನೆಗಳು. ನಿಮ್ಮ ಟಿಆರ್ ಪಿ ಹೆಚ್ಚಲಿ. ಪ್ರಸಾರ ಸಂಖ್ಯೆ ಮುಮ್ಮಡಿಗೊಳ್ಳಲಿ. ಪದ್ಮಪ್ರಿಯ ಮೇಲಿನಿಂದಲೇ ನಿಮ್ಮನ್ನೆಲ್ಲಾ ಹರಸಬಹುದು. ಅರುಷಿ ಪುಟ್ಟಿ ಟಾಟಾ ಮಾಡಬಹುದು.

ಶ್ರೀರಾಮ ಸೇನೆಯವರು ಪೆಬ್ರವರಿ ೧೪ರ ಪೇಮಿಗಳ ದಿನಾಚರಣೆಯನ್ನು ವಿರೋದಿಸುತ್ತಾರಂತೆ. ಅಂದು ಕೂಡ ಮಾದ್ಯಮದವರಿಗೆ ಫುಲ್ ಮೀಲ್ ಸಿಗಬಹುದು. ಸಂಸ್ಕೃತಿ ಉಳಿಸುವ ಈ ಕೈಂಕರ್ಯದಲ್ಲಿ ಜೊತೆಯಾಗುವ ಭಾಗ್ಯವೂ ದೊರಕೀತು..!

ಜೈ ಕನ್ನಡಾಂಬೆ

ಜೈ ಭಾರತ ಮಾತೆ.

Wednesday, January 28, 2009

ಪಬ್ ದಾಳಿ; ನಮ್ಮನ್ನು ದೇವರೇ ಕಾಪಾಡಬೇಕು!




ಮಂಗಳೂರಿನಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ಪಬ್ ಮೇಲೆ ದಾಳಿ ನಡೆಸಿ ಮಹಿಳೆಯರನ್ನು ಅಟ್ಟಾಡಿಸಿಕೊಂಡು ಹೊಡೆದ ಸುದ್ದಿ ರಾಷ್ಟ್ರ್‍ಆದ್ಯಂತ ಪ್ರಚಾರ ಪಡೆಯಲು ಕಾರಣವಾದ ಅಂಶಗಳೇನು?

ಮೆಲ್ನೋಟಕ್ಕೆ ಇದು ಮಹಿಳಾಪರವಾದ ಮಾದ್ಯಮಗಳ ನಿಲುವು ಅನ್ನಿಸುತ್ತದೆ, ನಿಜ. ಆದರೆ ಇಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಂತೆ ಕೆಲಸ ಮಾಡಬೇಕಾದ, ಫೋರ್ತ್ ಎಸ್ಟೇಟ್ ಎಂದು ಕರೆಸಿಕೊಳ್ಳುವ ಪತ್ರಿಕಾ ಮಾದ್ಯಮವೂ ಖಾಕಿ, ಕಾವಿ ಮತ್ತು ಖಾದಿಗಳ ಜೋತೆ ಸೇರಿಕೊಂಡಿದೆಯೇ?

ಹೌದು ಎನ್ನಲು ಕಾರಣಗಳಿವೆ.

ಪಬ್ ಮೇಲೆ ದಾಳಿ ನಡೆದದ್ದು, ಜನವರಿ ೨೪ರ ಶನಿವಾರದ ಇಳಿ ಮದ್ಯಾಹ್ನದಲ್ಲಿ. ದಾಳಿಯ ವಿಚಾರವನ್ನು ಸೇನೆಯ ಕಾರ್ಯಕರ್ತರು ಒಂದು ಘಂಟೆಯ ಮುಂಚಿತವಾಗಿಯೇ ಮಾದ್ಯಮದವರಿಗೆ ತಿಳಿಸಿದ್ದರು. ಯಾಕೆಂದರೆ ಅವರಿಗೆ ಪ್ರಚಾರ ಬೇಕಾಗಿತ್ತು.

ಆರೇಳು ಕ್ಯಾಮರಮ್ಯಾನ್ ಗಳು, ಎರಡ್ಮೂರು ಪೊಟೋಗ್ರಾಫರುಗಳು, ಮೂರು ಜನ ಮುದ್ರಣ ಮಾದ್ಯಮದ ವರದಿಗಾರರು ದಾಳಿಯ ಸಮಯದಲ್ಲಿ ಅಲ್ಲಿ ಹಾಜರಿದ್ದರು. ದೃಶ್ಯ ಮಾದ್ಯಮದಲ್ಲಿ ಸುದ್ದಿ ಹೈಲೈಟ್ ಆಗುವುದು ಸೇನೆಗೆ ಬೇಕಾಗಿತ್ತು. ಆದರೆ ಅದು ಉಲ್ಟಾ ಹೊಡೆಯಿತು.ಸೇನೆಗೆ ಉರುಳಾಯಿತು.

ನೀವು ಗಮನಿಸಿರಬಹುದು; ಶನಿವಾರದಂದು ಪಬ್ ಮೇಲೆ ನಡೆದ ದಾಳಿ ಮರುದಿನ ’ಹಿಂದು’ವನ್ನು ಹೊರತುಪಡಿಸಿ ಇನ್ಯಾವ ಪ್ರಮುಖ ಪತ್ರಿಕೆಯಲ್ಲೂ ವರಧಿಯಾಗಲಿಲ್ಲ. ಸುದ್ದಿವಾಹಿನಿಗಳೂ ಅನಗತ್ಯ ಲಂಬಿಸಲಿಲ್ಲ. ಆದರೆ ಭಾನುವಾರ ಈ ಸುದ್ದಿ ವೇಗವನ್ನು ಪಡೆದುಕೊಂಡಿತು. ಅದಕ್ಕೆ ಕಾರಣವಾದದ್ದು ’ಟೈಮ್ಸ್ ನೌ’ ಎಂಬ ಸುದ್ದಿ ವಾಹಿನಿ. ಅದು ಹಾಗೆ ಮಾಡಲು ಕಾರಣವಿತ್ತು.

ಸುಮಾರು ಎರಡ್ಮೂರು ತಿಂಗಳುಗಳ ಹಿಂದೆ ಮಂಗಳೂರಿನಲ್ಲಿ ಟೈಮ್ಸ್ ಗ್ರೂಪಿನವರು ಪ್ಯಾಂಟಲೂಮ್ ನವರ ಸಹಭಾಗಿತ್ವದಲ್ಲಿ ಸೌಂದರ್ಯ ಸ್ಪರ್ಧೆಯೊಂದನ್ನು ಏರ್ಪಡಿಸಿದ್ದರು. ಅದು ’ಮಿಸ್ ಸೌತ್ ಇಂಡಿಯಾ’ ಸ್ಪರ್ಧೆಯ ಪೂರ್ವಭಾವಿ ಸ್ಪರ್ದೆಯಾಗಿತ್ತು. ಆಗ ಅದನ್ನು ಶ್ರೀರಾಮ ಸೇನೆ ವಿರೋಧಿಸಿ ದಾಂಧಲೆ ನಡೆಸಿತ್ತು. ಸ್ಪರ್ದೆ ನಡೆಯಲಿಲ್ಲ.

ಆ ಸೇಡನ್ನು ಟೈಮ್ಸ್ ಗ್ರೂಪ್ ನವರು ಈಗ ತೀರಿಸಿಕೊಂಡರು. ಸೇನೆಯ ಕಾರ್ಯಕರ್ತರು ಹುಡುಗಿಯರನ್ನು ಅಟ್ಟಾಡಿಸಿಕೊಂಡು ಹೊಡೆಯುವ ವಿಶುವಲ್ಸ್ ಗಳನ್ನು ಪದೇ ಪದೇ ಪ್ರಸಾರ ಮಾಡಿ ದೇಶದ ಗಮನ ಸೆಳೆದರು. ಇದರ ಜೋತೆ ಎನ್ ಡಿ ಟೀವಿ ಸೇರಿಕೊಂಡಿತು. ಸುದ್ದಿಯ ಹಸಿವಿನಿಂದ ಬಳಲುತ್ತಿರುವ ಇತರ ಸುದ್ದಿವಾಹಿನಿಗಳಿಗೂ ರುಚಿಕಟ್ಟಾದ ಊಟ ಸಿಕ್ಕಿತು.

ಇನ್ನು ಸುದ್ದಿಯ ಮೂಲಕ್ಕೆ ಬರುವುದಾದರೆ, ಪಬ್ ಮೇಲಿನ ಧಾಳಿ ಭಜರಂಗಿಗಳ ಅರ್ಥಾತ್ ಶ್ರೀರಾಮ ಸೇನೆಯ ಮಂಗಾಟಗಳಲ್ಲಿ ಇದೂ ಒಂದು. ಮಂಗಾಟ ಎಂದು ಯಾಕೆ ಕರೆದೆನೆಂದರೆ, ಭಜರಂಗಿ ಅಂದ್ರೆ ಅರ್ಥ ಏನು? ಹನುಮಂತ; ಕಪಿ. ಶ್ರೀರಾಮ ಸೇನೆ ಯಾವುದು? ಕಪಿ ಸೈನ್ಯ. ಅಂದ್ರೆ ಮಂಗಗಳು. ಕಪಿಗಳು ಮಾಡೋದು ಕಪಿಚೇಷ್ಟೆ ತಾನೆ?

ಆದರೇನು ಮಾಡೋದು, ಕಪಿಚೇಷ್ಟೆಯನ್ನು ನಾಗರಿಕ ಸಮಾಜ ಸಹಿಸಿಕೊಳ್ಳುವುದು ಸ್ವಲ್ಪ ಕಷ್ಟ. ಅವರ ಕಪಿಚೇಷ್ಟೆಯ ಬಗ್ಗೆ ಈ ಹಿಂದೆ ’ಬಳೆಗಾರ ಚೆನ್ನಯ್ಯನಂಥ ಬ್ಯಾರಿಗಳು’ ಲೇಖನದಲ್ಲಿ ಪ್ರಸ್ತಾಪಿಸಿದ್ದೆ. ಹಾಗಾಗಿ ಮತ್ತೆ ಬರೆಯಲು ಹೋಗುವುದಿಲ್ಲ.

ಶ್ರೀರಾಮಸೇನೆ ಪಬ್ ಮೇಲಿನ ದಾಳಿಗೆ ಕೊಟ್ಟುಕೊಳ್ಳುವ ಸಮರ್ಥನೆ ಏನೆಂದರೆ, ಪಬ್ ಸಂಸ್ಕೃತಿ ನಮ್ಮದಲ್ಲ; ಅಲ್ಲಿ ಅಶ್ಲೀಲ ನೃತ್ಯ ನಡೆಯುತ್ತಿತ್ತು; ಹುಡುಗಿಯರು ಮದ್ಯ ಸೇವಿಸುತ್ತಿದ್ದರು; ಅರೆಬೆತ್ತಲೆಯಾಗಿದ್ದರು.

ವರದಿಗಾರರು ಸುದ್ದಿಯನ್ನು ತಪ್ಪಾಗಿ ಅರ್ಥೈಸಿಕೊಳ್ಳಬಹುದು; ತಿರುಚಿ ಬರೆಯಬಹುದು; ಬೈಟ್ ಗಳನ್ನು ಕಾಂಟೆಕ್ಸ್ಟ್ ನಾಚೆ ತುರುಕಿ ತಮಗೆ ಬೇಕಾದಂತೆ ಅರ್ಥ ಹೊರಡಿಸಬಲ್ಲರು. ಆದರೆ ಕ್ಯಾಮರ ಎಂದೂ ಸುಳ್ಳು ಹೇಳಲಾರದು. ಆ ಹುಡುಗಿಯರೆಲ್ಲಾ ಮೈ ತುಂಬಾ ಬಟ್ಟೆ ಹಾಕಿಕೊಂಡಿದ್ದರು. ಅವರನ್ನು ಗಂಡಸರು ಅಟ್ಟಾಡಿಸಿಕೊಂಡು ಹೊಡೆಯುತ್ತಿದ್ದರು. ಇದು ಕಣ್ಣಿಗೆ ಕಂಡ ಸತ್ಯ.

ಈ ಕಪಿ ಸೈನಕ್ಕೆ ನನ್ನ ಕೆಲವು ಪ್ರಶ್ನೆಗಳಿವೆ. ಸಮಾಜಕ್ಕೆ ನೀತಿಪಾಠವನ್ನು ಬೋಧಿಸುವ ಕೆಲಸವನ್ನು ಇವರಿಗೆ ಯಾರು ವಹಿಸಿದ್ದಾರೆ? ಅದಕ್ಕೆ ಗೌರವಧನವನ್ನು ಯಾರು ಕೊಡುತ್ತಾರೆ?. ಭಾರತಿಯ ಸಂಸ್ಕೃತಿಯೆಂದರೆ ಹಿಂದು ಸಂಸ್ಕೃತಿ ಮಾತ್ರವೇ? ಅದನ್ನು ರಕ್ಷಿಸುವ ಹೊಣೆಗಾರಿಕೆ ಮಹಿಳೆಯದೇ?
ಇನ್ನೊಂದು ವಿಷಯವನ್ನು ಅವರ ಗಮನಕ್ಕೆ ತರಬೇಕಾಗಿದೆ; ಪಬ್ ಗಳಿಗೆ ಹೋಗುವ ಮಹಿಳೆಯರು ಅವಿದ್ಯಾವಂತರಲ್ಲ. ಅವರಿಗೆ ತಾವೇನು ಮಾಡುತ್ತಿದ್ದೇವೆ ಎಂಬ ಸ್ಪಷ್ಟ ಅರಿವಿದೆ. ವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶಗಳಿರುವ ಭಾರತ ದೇಶವೆಂಬ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ನಾವು ಬದುಕುತ್ತಿದ್ದೇವೆಂದು ನಾನು ಭಾವಿಸಿಕೊಂಡಿದ್ದೇನೆ.

ಕಪಿ ಸೈನದ ’ನೈತಿಕ ಪೋಲಿಸ್’ ಪಡೆಯ ಉಪಟಳಕ್ಕೆ ಕರಾವಳಿ ನಲುಗಿ ಹೋಗಿದೆ. ತುಳು ನಾಡಿಗೆ ಎಂತಹ ಭವ್ಯ ಪರಂಪರೆಯಿತ್ತು!. ಮುಸ್ಲಿಂ ಜನಾಂಗದಲ್ಲಿ ಹುಟ್ಟಿದ ಬೊಬ್ಬರ್ಯ, ಅಲಿ ಎಂಬವರು ದೈವವಾಗಿ ಇಂದಿಗೂ ಹಿಂದುಗಳಿಂದ ಆರಾಧನೆಗೊಳ್ಳುತ್ತಾರೆ. ಹಾಗೆಯೇ ಕೆಳವರ್ಗದಲ್ಲಿ ಹುಟ್ಟಿದ ಕಲ್ಕುಡ್ಕ-ಕಲ್ಲುರ್ಟಿ, ಕಾಂತಬಾರೆ-ಬೂದಬಾರೆ ಮುಂತಾದ ದೈವಗಳು ಮೆಲ್ವರ್ಗದಿಂದಲೂ ಆರಾಧನೆಗೊಳ್ಳುತ್ತಿದ್ದಾರೆ. ಪ್ರಾಣಿಗಳನ್ನೂ ದೈವವೆಂದು ಆರಾಧಿಸುವ ನಾಡಿದು.

ಶಿಷ್ಟ ಪರಂಪರೆಯಲ್ಲಿ ದ್ರೌಪದಿಯನ್ನು ಸ್ವಾಭಿಮಾನಿ ಹೆಣ್ಣಾಗಿ ಚಿತ್ರಿಸಲಾಗಿದೆ. ಆದರೆ ತುಳು ಜಾನಪದದಲ್ಲಿ ಅವಳನ್ನು ಮೀರಿಸುವ ಹೆಣ್ಣೊಬ್ಬಳಿದ್ದಾಳೆ. ಅವಳೇ ಸಿರಿ. ಬಹುಶಃ ಗಂಡನ ನೈತಿಕತೆಯನ್ನು ಪ್ರಶ್ನಿಸಿ, ತಾನಾಗಿಯೇ ವಿಛ್ಚೇಧನ ನೀಡಿದ ಮೊದಲ ಹೆಣ್ಣು ಈಕೆ. ಇಂಥ ಮಣ್ಣಿನಲ್ಲಿ ಹುಟ್ಟಿದ ಹೆಣ್ಣುಮಕ್ಕಳು ಮೊನ್ನೆ ಪುರುಷ ದೌರ್ಜನ್ಯಕ್ಕೆ ತುತ್ತಾಗಿ ಅಸಹಾಯಕರಾಗಿ ಕೆಳಗೆ ಬೀಳುತ್ತಿರುವುದನ್ನು ಕಂಡಾಗ ರೋಷ ಉಕ್ಕದಿರಲು ಸಾಧ್ಯವೇ?

ಒಂದು ದೇಶದ- ರಾಜ್ಯದ- ಆಂತರಿಕ ಸುಭದ್ರತೆ ಗೃಹ ಇಲಾಖೆಗೆ ಸಂಬಂದಿಸಿದ್ದು. ಗೃಹಸಚಿವರು ಸಮರ್ಥರಾಗಿದ್ದರೆ ಗೃಹ ಇಲಾಖೆಯೂ ಸದೃಢವಾಗಿರುತ್ತದೆ. ನಮ್ಮ ಗೃಹ ಸಚಿವರು ಎಂಥವರೆಂಬುದು ಅವರು ಅಧಿಕಾರ ವಹಿಸಿಕೊಂಡ ತಕ್ಷಣ ನಡೆದ ಹಾವೇರಿ ಗೋಲಿಬಾರ್‍ಇನಲ್ಲಿ ಗೊತ್ತಾಗಿದೆ. ಪದ್ಮಪ್ರಿಯ ಪ್ರಕರಣದಲ್ಲಿ ಅದು ದೃಢಪಟ್ಟಿದೆ. ಚರ್ಚ್ ಮೇಲಿನ ದಾಳಿಯಲ್ಲಿ ಜಗಜ್ಜಾಹೀರಾಗಿದೆ.

ಹೀಗಾದಾಗ ಪೋಲಿಸರು ವಿಜೃಂಬಿಸುತ್ತಾರೆ; ಮುಖ್ಯಮಂತ್ರಿಗಳ ಮಾತನ್ನೂ ಧಿಕ್ಕರಿಸುತ್ತಾರೆ. ಮಾದ್ಯಮದವರಿಗೂ ತಾಕೀತು ಮಾಡುತ್ತಾರೆ ರೈತರು, ಮಹಿಳೆಯರು, ಅಸಹಾಯಕರ ಮೇಲೆ ಲಾಠಿ ಬೀಸುತ್ತಾರೆ.

ಕನ್ನಡದಲ್ಲೊಂದು ಗಾದೆ ಮಾತಿದೆ, ’ಕಂತೆಗೆ ತಕ್ಕ ಬೊಂತೆ’-ಕರ್ನಾಟಕ ಸರಕಾರ ಸಂಪೂರ್ಣ ಕೇಸರೀಕರಣಗೊಂಡಿದೆ. ಸಿಡುಕ ಮುಖ್ಯಮಂತ್ರಿಗಳಿಗೆ ಗಂಜಿಯಲ್ಲಿ ಬಿದ್ದ ನೊಣದಂತಿರುವ ಗೃಹಮಂತ್ರಿ. ದಾಳಿಯನ್ನು ಸಮರ್ಥಿಸಿಕೊಳ್ಳುವ ಚೆಡ್ಡಿ ಉಸ್ತುವಾರಿ ಸಚಿವರು... ಇವರಿಗೆಲ್ಲಾ ಆಧಾರಸ್ತಂಭವಾಗಿ ತಳ ಮಟ್ಟದಿಂದ ಕೆಲಸ ಮಾಡುವ ಕಪಿಸೈನ್ಯ....ಪ್ರಭುಗಳು ಹೊಡೆದಂತೆ ಮಾಡುತ್ತಾರೆ. ಸೈನ್ಯ ಅತ್ತಂತೆ ನಟಿಸುತ್ತದೆ. ನಾವು ನಾಗರಿಕ ಸಮಾಜದಲ್ಲಿದ್ದೇವೆಯೇ?

ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟು ಮಹಿಳೆಯರು. ಆದರೂ ಅದು ಒಂದೇ ದಿಕ್ಕಿನತ್ತ ಹರಿಯುವುದಿಲ್ಲ. ಹಾಗಾಗುವುದು ಯಾವ ರಾಜಕೀಯ ಪಕ್ಷಗಳಿಗೂ ಬೇಕಾಗಿಲ್ಲ. ಅದು ಏಕಮುಖವಾಗಿ ಹರಿದಿದ್ದರೆ ಚುನಾವಣೆಯಲ್ಲಿ ಮನುವಾದಿಗಳನ್ನು ಮಣಿಸಬಹುದಾಗಿತ್ತು. ಅದಾಗುವುದಿಲ್ಲವಲ್ಲಾ....

ಹಾಗಾಗಿ ನಮ್ಮನ್ನು ದೇವರೇ ಕಾಪಾಡಬೇಕು!

Friday, January 16, 2009

ಗಂಡಸರು ಅವಲಂಬಿತರೇ?

ಗಂಡಸರು ಅವಲಂಬಿತರೇ?


ಈ ಪ್ರಶ್ನೆಯನ್ನು ಮಹಿಳೆಯೊಬ್ಬಳಲ್ಲಿ ಕೇಳಿ ನೋಡಿ. ಆಕೆ ತಕ್ಷಣ ಹೌದೆಂದು ಹೇಳುತ್ತಾಳೆ! ಅದಕ್ಕವಳು ಸಮರ್ಥನೆಯನ್ನೂ ನೀಡುತ್ತಾಳೆ; ಗಂಡಸು ಹೆಣ್ಣೊಬ್ಬಳಿಗೆ ಸಂಪೂರ್ಣ ಅವಲಂಬಿತ, ಯಾಕೆಂದರೆ ಆತ ಮಾನಸಿಕವಾಗಿ ದುರ್ಬಲ.

ಇದೇ ಪ್ರಶ್ನೆಯನ್ನು ಗಂಡಸಿನ ಬಳಿ ಕೇಳಿ ನೋಡಿ,”ಇಲ್ಲ ಎಂದಿಂದಿಗೂ ಇಲ್ಲ; ನಾನು ಯಾರಿಗೂ ಅದರಲ್ಲಿಯೂ ಮಹಿಳೆಯೊಬ್ಬಳಿಗೆ ಅವಲಂಬಿತನಾಗುವ ಪ್ರಶ್ನೆಯೇ ಇಲ್ಲ!” ಎಂದು ಆತ ಖಡಾಖಂಡಿತವಾಗಿ ಹೇಳಿಬಿಡುತ್ತಾನೆ.
ಯಾವುದು ಸರಿ?
ಮಹಿಳೆಯೊಬ್ಬಳು ತನ್ನ ಆಪ್ತ ವಲಯದ ಗಂಡಸಿನ ಬಳಿ ಇದೇ ಪ್ರಶ್ನೆಯನ್ನು ಕೇಳಿದರೆ ಆತ ಖಂಡಿತವಾಗಿಯೂ ಹೇಳುತ್ತಾನೆ;’ ಹೌದು ಗಂಡಸು ಹೆಣ್ಣೊಬ್ಬಳಿಗೆ ಸಂಪೂರ್ಣವಾಗಿ ಅವಲಂಬಿತ. ಹಾಗೆ ಅವನನ್ನು ಅವಲಂಬಿತನನ್ನಾಗಿ ಮಾಡುವವಳು ಆಕೆಯೇ. ಯಾಕೆಂದರೆ ಆಕೆಗೆ ಆತನ ರಕ್ಷಣೆ ಬೇಕಾಗಿದೆ.’ ಅಂದರೆ ಸ್ತ್ರೀ ಮತ್ತು ಪುರುಷ ಇಬ್ಬರೂ ಪರಸ್ಪರ ಅವಲಂಬಿತರೇ. ಆದರೆ ಯಾರು ಹೆಚ್ಚು ಅವಲಂಬಿತರು?
ಇದಕ್ಕೆ ಉತ್ತರವನ್ನು ನಿಸರ್ಗದ ವೈಚಿತ್ರ್ಯದಲ್ಲಿ ಹುಡುಕಬೇಕಾಗಿದೆ.
ಬುದ್ಧಿಸಂನಲ್ಲಿ ಬರುವ ಇನ್ ಮತ್ತು ಯಾಂಗ್ ಥಿಯರಿಯನ್ನೇ ನೋಡೋಣ. ಇಲ್ಲಿ ಇನ್ ಎಂದರೆ ಬೆಳಕು. ಯಾಂಗ್ ಎಂದರೆ ಕತ್ತಲು. ಇದು ಸ್ತ್ರಿ ಮತ್ತು ಪುರುಷ ಶಕ್ತಿಗಳ ಸಂಕೇತ. ಕತ್ತಲೆಯ ಅಸ್ತಿತ್ವ ಇದ್ದಾಗ ಮಾತ್ರ ಬೆಳಕಿಗೆ ಮಹತ್ವ ಬರುತ್ತದೆ. ಕತ್ತಲೆ ಇಲ್ಲದೆ ಬೆಳಕು ಇಲ್ಲ. ಬೆಳಕು ಇಲ್ಲದೆ ಕತ್ತಲೆ ಇಲ್ಲ.

ವೈಜ್ನಾನಿಕವಾಗಿ ಅನ್ವೇಷಿಸುತ್ತ ಹೋದರೂ, ಸೃಷ್ಟಿಯ ಮೂಲ ಅಗತ್ಯ, ದ್ರವ್ಯ[ಮ್ಯಾಟರ್] ಮತ್ತು ಚೇತನ[ಸ್ಪಿರಿಟ್]; ಅಂದರೆ ಸ್ತ್ರೀ ಮತ್ತು ಪುರುಷ ಶಕ್ತಿಗಳು. ಹೆಣ್ಣು ಮತ್ತು ಗಂಡು, ದ್ರವ್ಯ ಮತ್ತು ಚೇತನದ ಅತ್ಯಂತ ಕನಿಷ್ಠತಮ ಪ್ರಾತಿನಿಧಿಕ ರೂಪಗಳು. ಅಡಂ ಮತ್ತು ಈವ್ ಎಂದರೂ ಸರಿಯೇ. ಒಟ್ಟಿನಲ್ಲಿ ಭೂಮಿ ಮತ್ತು ಆಕಾಶದ ಸಂಗಮ. ಎಲ್ಲಾ ಮಾನವ ನಾಗರೀಕತೆಗಳಿಗೂ ಸಮಾನವಾಗಿರುವ ಆರ್ಕಿಟೈಪಲ್ ಪ್ರತೀಕ. ಮೂಲ ವಿರೋಧಗಳ ಸೃಜನಾತ್ಮಕ ಸಮನ್ವಯ.

ಆದರೆ ಭೂಮಿ ಮತ್ತು ಆಕಾಶ ಸಂಗಮಿಸುತ್ತದೆಯೇ? ಇಲ್ಲ. ಸಂಗಮದ ಭ್ರಮೆ ಇರುತ್ತದೆ. ಭೂಮಿ ಎಂಬ ವಾಸ್ತವ ಇಲ್ಲದಿದ್ದರೆ ಆಕಾಶವೆಂಬ ಅಮೂರ್ತ ಕಲ್ಪನೆಗೆ ಅಸ್ತಿತ್ವವೇ ಇಲ್ಲ. ಈ ಎರಡು ಅಪೂರ್ಣಗಳು ಪೂರ್ಣತೆಯೆಡೆಗೆ ಸಾಗುವ ಪ್ರಯತ್ನವೇ ಗಂಡು- ಹೆಣ್ಣುಗಳ ಸಮಾಗಮ.

ಮನುಷ್ಯ ಮೂಲತಃ ಒಂಟಿ. ಅದು ಅವನ ಸ್ಥಾಯಿ ಭಾವ. ಅವನ ಮನದಾಳದಲ್ಲಿ ಸದಾ ಖಾಲಿತನ, ಶೂನ್ಯ ಇದ್ದೇ ಇರುತ್ತದೆ. ಸ್ತೀ-ಪುರುಷರಿಬ್ಬರಲ್ಲೂ ಈ ಭಾವ ಇರುತ್ತದೆ. ಸ್ತೀಗೆ ಹೋಲಿಸಿದರೆ ಪುರುಷರಲ್ಲಿ ಈ ಭಾವ ಇನ್ನೂ ತೀವ್ರವಾಗಿರುತ್ತದೆ. ಅದಕ್ಕೆ ಕಾರಣಗಳೂ ಇವೆ. ಇಲ್ಲಿ ಅದು ಮುಖ್ಯವಲ್ಲ. ಆದರೂ ಸೃಷ್ಟಿಕ್ರೀಯೆಯಲ್ಲಿ ನೇರವಾಗಿ ಪಾಲ್ಗೊಳ್ಳುವ ಸ್ತ್ರೀ ಈ ಖಾಲಿತನವನ್ನು ಸೃಜನಾತ್ಮಕ ಕ್ರಿಯೆಯಲ್ಲಿ ತುಂಬಿಕೊಳ್ಳುತ್ತಾಳೆ ಎಂದಷ್ಟೇ ತಿಳಿದುಕೊಂಡರೆ ಸಾಕು.

ಹಿಂದೆಯೇ ಹೇಳಿದಂತೆ ಒಳಗಿನ ಒಂಟಿತನವನ್ನು ಮೀರುವ, ಖಾಲಿತನವನ್ನು ತುಂಬಿಸಿಕೊಳ್ಳುವ ಪ್ರಯತ್ನವೇ ಅವಲಂಬನೆ.

ಅವಲಂಬನೆ ವ್ಯಕ್ತಿಗಳ ನಡುವೆ ಸಂಬಂಧಗಳನ್ನು ಕುದುರಿಸುತ್ತದೆ. ರೇಡಿಯೋ. ಪುಸ್ತಕ, ಟೀವಿ, ಕಂಪ್ಯೂಟರ್, ಮಾತು-ಹರಟೆ, ಕಲೆ, ಸಂಸ್ಕ್ರತಿ, ಚರ್ಚೆ ಮುಂತಾದ ಆಯಾಮಗಳಲ್ಲಿ ಅಸ್ತಿತ್ವ ಪಡೆಯುತ್ತದೆ.
ವಿಸ್ತಾರವಾದ ಜಗತ್ತಿನಲ್ಲಿ ವ್ಯಕ್ತಿಯೊಬ್ಬನಿಗೆ ತನ್ನ ಐಡೆಂಟಿಟಿಯನ್ನು ಗುರುತಿಸಿಕೊಳ್ಳಲು ಅವಲಂಬನೆ ಸಹಾಯಕವಾಗುತ್ತದೆ. ಇಲ್ಲಿಗೆ ಅವಲಂಬನೆಯ ಉದ್ದೇಶ ಮುಗಿಯುತು. ಅಂದರೆ ಒಂಟಿತನವನ್ನು ಮೀರುವ ಪ್ರಯತ್ನ, ಅದರಿಂದ ಸಿಗುವ ರಕ್ಷಣೆಯ ಭಾವ[ಸೆಕ್ಯೂರ್ಡ್ ಫೀಲಿಂಗ್] ವ್ಯಕ್ತಿಗೆ ಉಂಟಾದರೆ ಸಾಕು.

ಇದೇನೋ ಸರಿ. ಆದರೆ ಇದರಿಂದ ಅನೇಕ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಯಾಕೆಂದರೆ ಇರುವ ಸ್ಥಿತಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ರೂಪಿಸಿಕೊಂಡಿರುವ ಅವಲಂಬನೆಗಳೇ ನಮ್ಮನ್ನು ಡಿಕ್ಟೇಟ್ ಮಾಡಲಾರಂಬಿಸುತ್ತವೆ.

ಗಂಡು-ಹೆಣ್ಣು ನಡುವಿನ ಸಂಬಂಧವನ್ನೇ ನೋಡಿ, ನೀವು ಗಮನಿಸಿದ್ದೀರೋ ಇಲ್ಲವೋ, ವೃದ್ಧ ದಂಪತಿಗಳಲ್ಲಿ ಯಾರದರೊಬ್ಬರು ಮೃತಪಟ್ಟರೆ ಉಳಿದವರೊಬ್ಬರು ಬಹು ಬೇಗನೆ ಅವರ ಹಾದಿ ಹಿಡಿಯುತ್ತಾರೆ. ಶಂಭಾಜೋಷಿ ದಂಪತಿಗಳು, ಕುರ್ತಕೋಟಿ ದಂಪತಿಗಳು... ಹೀಗೆ ಬೇಕಾದಷ್ಟು ಉದಾಹರಣೆಗಳು ಸಿಗುತ್ತವೆ. ಕನ್ನಡದ ಕವಿಯೊಬ್ಬರು ತನ್ನ ಕಂಪ್ಯಾನಿಯನ್ ಬಿಟ್ಟುಹೋದಾಗ ಸಂಪೂರ್ಣವಾಗಿ ಹತಾಶರಾಗಿಬಿಟ್ಟರು. ಈಗ ಅವರ ಸೃಜನಶೀಲ ಚಟುವಟಿಕೆ ಬಹುಮಟ್ಟಿಗೆ ನಿಂತೇಹೋಗಿದೆ.
ಹೀಗೆ ಸಂಗಾತಿಯ ಅಗಲಿಕೆಯಿಂದ ಸಾಯುವವರಲ್ಲಿ ಅಥವಾ ಡಿಸ್ಟರ್ಬ್ ಆಗುವವರಲ್ಲಿ ಪುರುಷರೇ ಹೆಚ್ಚು. ಈಗ ನೋಡಿ, ಪ್ರೇಯಸಿಯನ್ನು ಕಳೆದುಕೊಂಡು ದೇವದಾಸ್ ಆಗುವವರು ಹುಡುಗರೇ ಹೊರತು ಹುಡುಗಿಯರಲ್ಲ.! ಹುಡುಗಿಯರು ಯಾವುದೋ ಕಾರಣದಿಂದಾಗಿ ಪ್ರೀತಿಸಿದವನನ್ನು ಮದುವೆಯಾಗಲು ಸಾಧ್ಯವಾಗದಿದ್ದರೆ, ಮದುವೆಯಾದವನನ್ನು ಒಪ್ಪಿಕೊಂಡುಬಿಡುತ್ತಾರೆ. ಆದರೆ ಹುಡುಗರು ಮಾತ್ರ ಅಷ್ಟು ಬೇಗ ಹಳೆಯದನ್ನು ಮರೆಯುವುದಿಲ್ಲ. ಗಂಡಸರು ಬಲು ಬೇಗನೆ ವ್ಯಸನಗಳಿಗೆ, ದುಶ್ಚಟಗಳಿಗೆ ಬಲಿಯಾಗುತ್ತಾರೆ. ಇದೂ ಅವಲಂಬನೆಯ ಒಂದು ಮುಖ.

ಅಂದರೆ ಸ್ತೀಗಿರುವ ಧಾರಣಸಾಮರ್ಥ್ಯ ಪುರುಷನಲ್ಲಿ ಇಲ್ಲ. ಒಂದು ಕಠಿಣ ಪ್ರಸಂಗವನ್ನು ಎದುರಿಸುವ ಪರಿಸ್ಥಿತಿ ಸ್ತ್ರೀಪುರುಷರಿಬ್ಬರಿಗೂ ಏಕಕಾಲದಲ್ಲಿ ಒದಗಿದಾಗ ಪುರುಷ ಬಹುಬೇಗ ಕುಸಿದುಬೀಳುತ್ತಾನೆ. ಸ್ತ್ರೀ ದೃಢವಾಗಿ ನಿಂತು ಅದನ್ನು ಎದುರಿಸುತ್ತಾಳೆ, ಎನ್ನುತ್ತಾರೆ ಓಶೋ. ಅವಳಲ್ಲಿ ಪ್ರತಿರೋಧ ಶಕ್ತಿ ವಿಪುಲವಾಗಿರುತ್ತದೆ. ವಿಜ್ನಾನ ಕೂಡ ಇದನ್ನು ದೃಢೀಕರಿಸಿದೆ.

ಗಂಡು ಮಗುವಿನ ಹುಟ್ಟಿಗೆ ಕಾರಣವಾಗುವ ವೈ ಕ್ರೋಮೋಸೋಮುಗಳು, ಹೆಣ್ಣು ಮಗುವಿನ ಜನನಕ್ಕೆ ಕಾರಣವಾಗುವ ಎಕ್ಸ್ ಕ್ರೋಮೋಸೋಮುಗಳಿಗಿಂತ ಬಲಹೀನವಾಗಿರುತ್ತವೆ. ವೈ ಕ್ರೋಮೋಸೋಮುಗಳು ಗಂಡಸರ ವೀರ್ಯಾಣುವಿನಲ್ಲೇ ಇರುತ್ತವೆ ಎಂಬುದು ಇನ್ನೊಂದು ಐರನಿ. ಆ ಕಾರಣದಿಂದಲೇ ನಿಸರ್ಗದ ಜೊತೆ ಹೆಣ್ಣು ಸರಿಜೋಡಿಯಾಗಿ ಹೋರಾಡಬಲ್ಲಳು. ಬದುಕನ್ನು ಕಟ್ಟಿಕೊಳ್ಳಬಲ್ಲಳು. ಪ್ರಕೃತಿಯ ಎದುರು ಪುರುಷ ನಿಸ್ಸಾಯಕ. ಇದೇ ಅವನ ಅವಲಂಬನೆಗೆ ಕಾರಣವೇ? ಹೇಳಲಾಗದು.

ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಿದ ಅಥವಾ ವಿಶೇಷ ಸಾಧನೆ ಮಾಡಿದ ಪುರುಷರ ಬಗ್ಗೆ ಹೇಳುವಾಗ ಒಂದು ಮಾತನ್ನು ಬಳಸುತ್ತಾರೆ-’ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆಯಿದ್ದಾಳೆ’. ಗಾದೆ ಮಾತಿನಂತೆ ಚಾಲ್ತಿಯಲ್ಲಿರುವ ಈ ಮಾತುಗಳನ್ನು ಗಮನಿಸಿ. ಇಲ್ಲಿರುವವಳು ತಂಗಿ, ಗೆಳತಿ, ಪ್ರೇಯಸಿ, ಟೀಚರ್, ಆಂಟಿ.. ಯಾರೇ ಆಗಿರಬಹುದು ಆದರೆ ಪತ್ನಿಯಂತೂ ಆಗಿರಲಾರಳು.
ಯಾಕೆಂದರೆ ಪತ್ನಿ ಎಂಬವಳು ವಾಸ್ತವ. ವಾಸ್ತವ ಯಾವಾಗಲೂ ಸಂಕೀರ್ಣವಾಗಿರುತ್ತದೆ.
ನಮ್ಮ ಬುದ್ಧಿಜೀವಿಗಳ ಖಾಸಗಿ ಬದುಕನ್ನು ಒಳಹೊಕ್ಕು ನೋಡಿದರೆ ಇದು ಇನ್ನಷ್ಟು ಸ್ಪಷ್ಟವಾಗುತ್ತದೆ. ಅವರಿಗೆ ಸಂತಾನಾಭಿವೃದ್ಧಿಗೆ ಒಬ್ಬಳು ಹೆಂಡತಿ. ಬೌದ್ಧಿಕ ಸಾಂಗತ್ಯಕ್ಕೆ ಇನ್ನೊಬ್ಬಳು. ಸುಪ್ರಸಿದ್ದ ಬರಹಗಾರರಾದ ಜೀನ್ ಪಾಲ್ ಸಾರ್ತ್ರೆ ಮತ್ತು ಸೀಮನ್ ಡಿ ಬುವಾ ಇಂತಹ ಬೌದ್ಧಿಕ ಸಾಂಗತ್ಯಕ್ಕೆ ಉತ್ತಮ ಉದಾಹರಣೆ. ಅಷ್ಟು ದೂರ ಯಾಕೆ? ನಮ್ಮ ಕನ್ನಡದ ಹಲವು ಲೇಖಕರು, ಕವಿಗಳು ಇಬ್ಬರು ಹೆಂಡಿರ ಮುದ್ದಿನ ಗಂಡಂದಿರಾಗಿದ್ದಾರೆ.

ನಮ್ಮ ಕನ್ನಡದ ಕವನವೊಂದು ಹೀಗೆ ಹೇಳುತ್ತದೆ;
ಎದೆಯ ಮೇಲಿಹಳು ತೊಡೆಗೆ ಬಾರಹಳು, ತೊಡೆಯ ಮೇಲಿಹಳು ಎದೆಗೆ ಏರಳು’
ಇದು ಗಂಡಸಿನ ಸಮಸ್ಯೆಯ ಮೂಲ. ಎದೆ ಮತ್ತು ತೊಡೆಯ ಮೇಲೆ ಏಕಕಾಲದಲ್ಲಿ ಪ್ರತಿಷ್ಠಾಪನೆಗೊಳ್ಳುವ ಸಂಗಾತಿ ದೊರಕದಿದ್ದರೆ? ಆಗ ಅವನಿಗೆ ಅಲ್ಲೊಬ್ಬಳು ಬೇಕು; ಇಲ್ಲೊಬ್ಬಳು ಬೇಕು.
ನಮ್ಮ ಮಹಾರಾಜರುಗಳ ಅಂತಃಪುರದಲ್ಲಿ ಸಾವಿರಾರು ರಾಣಿಯರಿರುತ್ತಿದ್ದರು. ಆದರೂ ರಾಜನ ಹತ್ತಿರಕ್ಕೆ ಬರುತ್ತಿದ್ದವರು ಇಬ್ಬರೇ. ಒಬ್ಬಳು ಪಟ್ಟದರಸಿ, ಇನ್ನೊಬ್ಬಳು ಪ್ರೇಮದರಸಿ; ಕೃಷ್ಣನಿಗೆ ರಾಧಾ,ರುಕ್ಮಿಣಿಯರಿದ್ದಂತೆ. ಹೆಣ್ಣಿಗೆ ಇಂತಹ ಕಲ್ಪನೆಗಳಿಲ್ಲ. ಅವಳಿಗೆ ಅವಳು ಮಾತ್ರ ಅವಲಂಬಿತಳು.

ಹೆಣ್ಣಿನಲ್ಲಿರುವ ಶಕ್ತಿ ಎರಡು ಬಗೆಯದು. ಒಂದು, ಆಕೆಯಲ್ಲಿರುವ ಧೀಶಕ್ತಿ; ಎಲ್ಲವನ್ನೂ ಎದುರಿಸುವ , ಕಟ್ಟುವ, ನಿಸರ್ಗದ ಜೊತೆ ಸಮಬಲವಾಗಿ ಹೋರಾಡುವ ಅಂತಃಶಕ್ತಿ. ಇದನ್ನು ಪುರುಷ ಬೆರಗಿನಿಂದ ನೋಡುತ್ತಾನೆ. ಅದಕ್ಕೆ ಅವನು ತಲೆ ಬಾಗುತ್ತಾನೆ. ಆದರೆ ಪ್ರಕಟಪಡಿಸುವುದಿಲ್ಲ. ಇನ್ನೊಂದು ಆಕೆಯಲ್ಲಿರುವ ಪಾಲನೆಯ ಗುಣ. ಆಕೆ ಎಲ್ಲವನ್ನೂ ಪೊರೆಯುತ್ತಾಳೆ. ಎಲ್ಲವನ್ನೂ ರಕ್ಷಿಸುತ್ತಾಳೆ. ಈ ಎರಡೂ ಗುಣಗಳು ಒಬ್ಬ ತಾಯಿಯಲ್ಲಿರುತ್ತದೆ. ಎಲ್ಲಾ ಸಸ್ತನಿಗಳಲ್ಲಿರುತ್ತದೆ.

ಹೋರಾಟ ಮತ್ತು ಪಾಲನೆಯ ಗುಣಗಳು ಪ್ರಕೃತಿಯ ಗುಣಗಳೇ. ಹೆಣ್ಣು ಪ್ರಕೃತಿಯನ್ನು ಪ್ರತಿನಿಧಿಸುತ್ತಾಳೆ. ಭೂಮಿಯನ್ನು ಹೆಣ್ಣಿಗೆ ಹೋಲಿಸುವುದು ಇದೇ ಕಾರಣಕ್ಕೇ ಇರಬಹುದು. ಈ ಎಲ್ಲ ಗುಣಗಳೇ ಪುರುಷನನ್ನು ಸ್ತ್ರೀಯ ಅವಲಂಬಿಯನ್ನಾಗಿ ಮಾಡಿವೆ. ಮನಶಾಸ್ತ್ರ ಕೂಡ ಇದನ್ನು ಒಪ್ಪಿಕೊಂಡಿದೆ.

ಸಿಗ್ಮಂಡ್ ಪ್ರಾಯ್ಡ್ ನ ಪ್ರಕಾರ ಎಲ್ಲಾ ಗಂಡಂದಿರೂ ಹೆಂಡತಿಯಲ್ಲಿ ತಮ್ಮ ತಾಯಿಯನ್ನೇ ಹುಡುಕುತ್ತಾರೆ. ಗಂಡು ಮಗುವೊಂದು ತನ್ನ ತಾಯಿಗೆ ಹೆಚ್ಚಾಗಿ ಅಂಟಿಕೊಂಡಿದ್ದರೆ, ಹೆಣ್ಣು ಮಗು ತಂದೆಗೆ ಅಂಟಿಕೊಂಡಿರುತ್ತದೆ. ಇದು ವಿರುದ್ಧ ದ್ರುವದ ಆಕರ್ಷಣೆ.
ಗಂಡು ಬಯಸುವ ತಾಯ್ತನವನ್ನು, ಸಾಂತ್ವನವನ್ನು ನೀಡುವ ಹೆಣ್ಣು ಆತನ ಪಾಲಿಗೆ ಸದಾ ನಿಗೂಢ, ಜತೆಗೆ ಸ್ಪೂರ್ತಿಯ ಖನಿ. ಆಧುನಿಕ ಪರಿಭಾಷೆಯಲ್ಲಿ ಕಂಪ್ಯಾನಿಯನ್. ಇಂತಹ ಹೆಣ್ಣಿನ ಮುಂದೆ ಗಂಡು ಸಂಪೂರ್ಣ ಶರಣಾಗುತ್ತಾನೆ. ಶರಣಾಗತಿಯಲ್ಲಿ ಅಹಂ ನೆಲಕಚ್ಚುತ್ತದೆ. ಆದರೂ ಗಂಡಸು ಒಂದೇ ಹೆಣ್ಣಿಗೆ ನಿಷ್ಠನಾಗಿರುವುದಿಲ್ಲ. ಯಾಕೆಂದರೆ ಭೂಮಿ ಸ್ಥಾವರವಾಗಿದ್ದು ಎಲ್ಲವನ್ನೂ ಸ್ವೀಕರಿಸುತ್ತಾ ಪೊರೆಯುತ್ತಾಳೆ. ಪುರುಷ ಬೀಜಪ್ರಸಾರ ಮಾಡುತ್ತಾ ಅಲೆಮಾರಿಯಾಗುತ್ತಾನೆ. ಇದುವೇ ನಿಸರ್ಗದ ವೈಚಿತ್ರ್ಯ!
[ ಓ ಮನಸೇ ನಿಯತಕಾಲಿಕದಲ್ಲಿ ಪ್ರಕಟವಾದ ಬರಹ.]

Monday, December 29, 2008

ಮಲೀನಗೊಳ್ಳದಿರಲಿ ಭಾವಕೋಶ

ಯುಗಾದಿಯನ್ನು ವರ್ಷದ ಆರಂಭ ಎಂದು ನಮ್ಮ ಪರಂಪರೆಯಿಂದ ಒಪ್ಪಿಕೊಂಡು ಬಂದರೂ ಜನವರಿ ಒಂದನ್ನು ಹೊಸ ವರ್ಷದ ಸಂಭ್ರಮಾಚರಣೆಯಾಗಿಸುವುದು ಇತ್ತೀಚೆಗೆ ಜನಪ್ರಿಯವಾಗುತ್ತಲಿದೆ. ಮನುಷ್ಯ ಯಾವಾಗಲೂ ಭವಿಷ್ಯದಲ್ಲಿಯೇ ಬದುಕುತ್ತಿರುತ್ತಾನೆ. ಯಾವತ್ತೂ ಆತ ವರ್ತಮಾನದಲ್ಲಿ ಸುಖಿಯಲ್ಲ. ಮುಂದೆ ಇನ್ನೂ ಒಳ್ಳೆಯ ದಿನಗಳು ಬರಬಹುದು ಎಂಬ ನಿರೀಕ್ಷೆಯಲ್ಲಿ ಬದುಕಿನ ಸವಾಲುಗಳನ್ನು ಎದುರಿಸುತ್ತಾ ಹೋಗುತ್ತಾನೆ. ವರ್ಷದ ಕೊನೆಯಲ್ಲಿ ನಾವೀಗ ನಿಂತಿದ್ದೇವೆ. ಬರಲಿರುವ ವರ್ಷ ಹರ್ಷದಾಯಕವಾಗಿರಬಹುದೆಂಬ ನಿರೀಕ್ಷೆ ಎಲ್ಲರದ್ದು. ಅದಕ್ಕಾಗಿ ಅನೇಕರು ಹೊಸ ನಿರ್ಣಯಗಳನ್ನು ಕೈಗೊಳ್ಳುತ್ತಾರೆ. ಆದರೆ ಅವುಗಳಲ್ಲಿ ಬಹಳಷ್ಟು ಕಾರ್ಯರೂಪಕ್ಕೆ ಬರುವುದೇ ಇಲ್ಲ. ಅವು ಮುಂದಿನ ವರ್ಷಾಂತ್ಯಕ್ಕೆ ಮತ್ತೆ ಹೊಸ ನಿರ್ಣಯಗಳಾಗಿ ಆವರ್ತನಗೊಳ್ಳುತ್ತವೆ.

 ನನ್ನಲ್ಲೂ ಹೊಸ ನಿರ್ಣಯಗಳಿವೆ. ಅವುಗಳನ್ನಿಲ್ಲಿ ದಾಖಲಿಸುವುದರಲ್ಲಿ ಸ್ವಾರ್ಥವಿದೆ. ಮಾತುಗಳು ಗಾಳಿಯಲ್ಲಿ ಹಾರಿ ಹೋಗುತ್ತವೆ; ಯೋಚನೆಗಳು ಮನಸ್ಸಿನಯೇ ಇಂಗಿ ಹೋಗುತ್ತವೆ. ಅವುಗಳನ್ನು ಬರಹರೂಪಕ್ಕಿಳಿಸಿದರೆ ಅವು ದಾಖಲೆಗಳಾಗುತ್ತವೆ. ಅದಕ್ಕೆ ಬದ್ಧತೆ ಪ್ರಾಪ್ತವಾಗುತ್ತದೆ. ಅವುಗಳನ್ನು ಹೀಗೆ ಸಾರ್ವಜನಿಕಗೊಳಿಸಿದಾಗಲಂತೂ ಅದು ಸಾಮಾಜಿಕ ಜವಾಬ್ದಾರಿಯ ರೂಪ ಪಡೆದುಕೊಳ್ಳುತ್ತದೆ.

 ಬೆಂಗಳೂರಿನಲ್ಲಿ ನನ್ನಂತವಳಿಗೆ ಕನಸುಗಳು ಹುಟ್ಟಿಕೊಳ್ಳುವುದು ಕಷ್ಟ. ಏನು ಮಾಡಬೇಕಾದರೂ ಬೇರೆಯವರನ್ನು ಅವಲಂಬಿಸಬೇಕಾದುದು ಅನಿವಾರ್ಯ. ಹಾಗಾಗಿ ಓದದೆ ಉಳಿಸಿಕೊಂಡ ಪುಸ್ತಕಗಳನ್ನು ಓದಬೇಕೆಂದುಕೊಂಡಿದ್ದೇನೆ. ಅದರ ಪೂರ್ವಭಾವಿಯಾಗಿ ನಿನ್ನೆ ತಾನೆ ಮಾರ್ಕೆಟಿಗೆ ಹೋಗಿ ಆರಡಿ ಎತ್ತರ ಮೂರಡಿ ಅಗಲದ ನಾಲ್ಕು ಬುಕ್ ಶೆಲ್ಪ್ ಗಳನ್ನು ತಂದು ಪುಸ್ತಕಗಳನ್ನು ನೀಟಾಗಿ ಜೋಡಿಸಿ ಇಟ್ಟೆ. ಪುಸ್ತಕದ ರಾಶಿ ಎಷ್ಟಿದೆಯೆಂದರೆ ಇನ್ನೂ ಇಂತಹ ಮೂರು ಶೆಲ್ಪ್ ಗಳಾದರೂ ಬೇಕು.

 ಎಲ್ಲಿಯೋ ಹುಟ್ಟಿ ಇನ್ನೆಲ್ಲಿಯೋ ಬೆಳೆದು, ಮತ್ತೆಲ್ಲೋ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಿ, ಕೊನೆಗೆಲ್ಲೋ ನೆಲೆ ಕಂಡುಕೊಳ್ಳುವುದು ಬದುಕಿನ ಸೋಜಿಗಗಳಲ್ಲೊಂದು. ಇದು ನಿರಂತರವಾಗಿ ನಡೆಯುವ ಪ್ರಕ್ರಿಯೆ. ಹಲವು ಬಾರಿ ನಾವು ವ್ಯವಸ್ಥೆಯೊಡನೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಮಾಡಿಕೊಳ್ಳಬೇಕು. ಇಲ್ಲವೇ ವ್ಯವಸ್ಥೆಯೊಳಗಿದ್ದುಕೊಂಡೇ ಅದನ್ನು ಬದಲಾಯಿಸುವ ಪ್ರಯತ್ನ ಮಾಡಬೇಕು. ವ್ಯವಸ್ಥೆಯ ಲೋಪದೋಶಗಳನ್ನು ಸರಿಪಡಿಸುವ ಪ್ರಯತ್ನಕ್ಕೆ ಸಾಂಘಿಕ ಹೋರಾಟದ ಅಗತ್ಯ ಇದೆ. ಅದು ಒಂಟಿ ದನಿಯಾದರೆ ವ್ಯವಸ್ಥೆ ನಮ್ಮನ್ನು ರಿಜೆಕ್ಟ್ ಮಾಡುತ್ತಾ ಹೋಗುತ್ತದೆ. ಆಗ ನಾವು ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಲೇ ಬೇಕು. ಇಲ್ಲವಾದರೆ ನಮ್ಮ ಅಸ್ತಿತ್ವಕ್ಕೆ ಕಾರಣವೂ ಇರುವುದಿಲ್ಲ; ಬೆಲೆಯೂ ಬರುವುದಿಲ್ಲ. ಹಾಗೆ ನಾನು ಕಂಡು ಕೊಂಡ ಹಾದಿ ’ಬ್ಯಾಕ್ ಟು ನೇಚರ್’ ಅಂದರೆ ಕೃಷಿ.

 ನೆಲದೊಡನೆ ಮಾತು. ಗಿಡ-ಮರಗಳ ಒಡನಾಟ, ಖಗ-ಮೃಗಗಳ ಮಿಂಚು, ನದಿಯ ಸಂಗೀತ. ಅಲ್ಲೀಗ ನನ್ನ ಕನಸುಗಳು ಮೊಳಕೆಯೊಡೆಯುತ್ತಿವೆ. ನಾನು ಮಲೆನಾಡಿನ ಸೆರಗಿನಲ್ಲಿ, ಕಪಿಲೆಯ ದಂಡೆಯಲ್ಲಿ ಜಮೀನು ಖರಿದಿಸಿ ಒಂದು ವರ್ಷವಾಯಿತು. ಮೂರು ಎಕ್ರೆ ಫಲ ಬರುವ ಅಡಿಕೆ ತೋಟವಿದೆ. ತೆಂಗು, ಮಾವು, ಹಲಸು, ಹುಣಸೆ, ಬಾಳೆ ಸೇರಿದಂತೆ ಎಲ್ಲಾ ರೀತಿಯ ಹಣ್ಣಿನ ಗಿಡಗಳಿವೆ. ಹದಗೆಟ್ಟ ಸ್ಥಿತಿಯಲ್ಲಿದ್ದ ಅದನ್ನು ಕಳೆ ಕಿತ್ತು ಗೊಬ್ಬರ ಹಾಕಿ ನಳನಳಿಸುವಂತೆ ಮಾಡಿದ್ದಾಯ್ತು. ಜೊತೆಗೆ ಇನ್ನೂರೈವತ್ತು ಕೊಕ್ಕೊ ಗಿಡ ನೆಡಿಸಿದೆ. ಮುಂದಿನ ವರ್ಷ ಇಡೀ ಜಮೀನಿಗೆ ಸೋಲಾರ್ ಬೇಲಿ ಹಾಕಿಸಬೇಕು.ಖಾಲಿ ಇರುವ ಒಂದೆಕ್ರೆ ಜಾಗದಲ್ಲಿ ಉಳ್ಳಾಲ-೩ ಗೇರು ಸಸಿ ಹಾಕಬೇಕೆಂದಿದ್ದೇನೆ. ಅಡಿಕೆ ಗಿಡಗಳು ತುಂಬಾ ಹಳೆಯದಾಗಿ ಮುಗಿಲು ಮುಟ್ಟುತ್ತಿವೆ. ಹಾಗಾಗಿ ಮದ್ದು ಬಿಡಲು, ಅಡಿಕೆ ಕೊಯ್ಯಲು ಕಷ್ಟವಾಗುತ್ತಿದೆ. ಅದಕ್ಕಾಗಿ ರೀಪ್ಲಾಂಟ್ ಮಾಡಲು ನಿರ್ಧರಿಸಿದ್ದೇನೆ. ಕಳೆದ ವರ್ಷವೇ ಎರಡು ಸಾವಿರ ಮಂಗಳ ಗಿಡಗಳ ಬೀಜ ಹಾಕಿಟ್ಟಿದ್ದೇನೆ. ಕಳೆದ ವಾರ ಹೊಂಡ ತೆಗೆಯಲು ಕಾಂಟ್ರಾಕ್ಟ್ ಕೊಟ್ಟು ಬಂದಿದ್ದೇನೆ. ಇಡೀ ತೋಟಕ್ಕೆ ಸ್ಪಿಂಕ್ಲರ್ ಹಾಕುವ ಯೋಚನೆಯೂ ಇದೆ. ಸ್ವಲ್ಪ ನೇಂದ್ರ ಬಾಳೆ ಗಡ್ಡೆ ಹಾಕಬೇಕು. ಇನ್ನೈದು ವರ್ಷಕ್ಕೆ ಅದನ್ನು ನಂದನ ವನವಾಗಿಸುವ ಕನಸು ನನ್ನದು. ಬಳಲಿದ ಮೈ ಮನಸ್ಸುಗಳು ಅಲ್ಲಿ ಬಂದು ಜೀವ ಚೈತನ್ಯ ತುಂಬಿಕೊಳ್ಳಬೇಕು.ಅಲ್ಲಿಗೆ ನನ್ನ ಆಪ್ತರೆಲ್ಲಾ-ನಿಮ್ಮನ್ನೂ ಸೇರಿಸಿ-ಆಗಾಗ ಬರುತ್ತಿರಬೇಕು. ಒಂದು ಧ್ಯಾನ ಮಂದಿರ...ಲೈಬ್ರರಿ...ಮ್ಯೂಸಿಕ್....ಇನ್ನೂ ಏನೇನೆನೋ ಕನಸು ಕನವರಿಕೆಗಳು. ಇದು ನಾನು ಕಂಡ; ಕಾಣುತ್ತಿರುವ ಕನಸು. 

ವೈಯಕ್ತಿಕ ಮಟ್ಟದಲ್ಲಿರುವ ಈ ಕನಸು ನನಸಾಗುವುದು ನನ್ನ ಶ್ರದ್ಧೆ ಮತ್ತು ಪರಿಶ್ರಮದ ಮೇಲೆ ನಿಂತಿದೆ. ಅಂದರೆ ಇಂತಹ ಕೆಲಸ ಕಾರ್ಯಗಳು ವ್ಯಕ್ತಿಯೊಬ್ಬನ ದೈಹಿಕ ಶ್ರಮ ಮತ್ತು ಕ್ರಿಯಾಶೀಲತೆಯನ್ನಷ್ಟೇ ಬೇಡುತ್ತವೆ. ಆದರೆ ಭಾವಕೋಶದ ವಿಚಾರ ಹಾಗಲ್ಲ. ಭಾವಕೋಶಕ್ಕೆ ಸಂಬಂಧಪಟ್ಟಂತೆ ಎರಡು ಸಂಗತಿಗಳನ್ನಿಲ್ಲಿ ಹೇಳುತ್ತಿದ್ದೇನೆ. ನನ್ನ ’ಡಾರ್ಕ್ ರೂಂನಲ್ಲಿ ಕುಳಿತ್ಯಾಕೆ ಬರೆಯಬೇಕು?’ ಎಂಬ ಬರಹಕ್ಕೆ ಕಮೆಂಟ್ ಬರೆಯುತ್ತಾ ಸುಧನ್ವಾ ಹೇಳುತ್ತಾರೆ, ’ನಮ್ಮ ಭಾವ ಪ್ರಪಂಚವನ್ನು ಉಳಿಸಿಕೊಳ್ಳುವುದೇ ಈಗಿನ ದೊಡ್ಡ ಕೆಲಸ’. ಜೋಗಿ ತಮ್ಮ ಇತ್ತಿಚೆಗಿನ ಕಾದಂಬರಿ ’ಯಾಮಿನಿ’ ಯಲ್ಲಿ ತಮ್ಮ ಬಗ್ಗೆ ಬರೆಯುತ್ತಾ,”ಹಳೆಯ ಗೆಳೆಯರು ಧ್ರುವತಾರೆ. ಹೊಸಬರು ನಾಳಿನಾಚೆಯ ಬಾಗಿಲು” ಎನ್ನುತ್ತಾರೆ. ಅಂದರೆ ಏನರ್ಥ? ನಮ್ಮ ಭಾವಕೋಶ ಮಲೀನಗೊಳ್ಳುತ್ತಿದೆ! ಅದನ್ನು ಕಾಯ್ದುಕೊಳ್ಳುವ ಭರದಲ್ಲಿ ನಾವೆಲ್ಲಾ ಒಬ್ಬಂಟಿಗರಾಗುತ್ತಿದ್ದೇವೆ; ದ್ವೀಪವಾಗುತ್ತಿದ್ದೇವೆ.

 ನಿಜ. ನಮಗೊಂದು ಖಾಸಗಿ ಬದುಕಿದೆ. ಅಲ್ಲಿ ಒಳ್ಳೆಯ ಮನಸ್ಸುಗಳು ಮಾತ್ರ ಹರಿದಾಡುತ್ತಿರಲಿ ಎಂದು ಆಶಿಸುವುದು ತಪ್ಪಲ್ಲ. ಆದರೆ ಅಂತವರನ್ನು ಎಲ್ಲಿಂದ ಹುಡುಕಿ ನಮ್ಮವರನ್ನಾಗಿಸಿಕೊಳ್ಳೋಣ? ಅದು ಒಳ್ಳೆಯ ಪುಸ್ತಕಗಳನ್ನು ಹುಡುಕಿ ತಂದು ಶೆಲ್ಪ್ ನಲ್ಲಿಟ್ಟುಕೊಂಡಷ್ಟು ಸುಲಭವಲ್ಲ. ಒಳ್ಳೆಯ ಗೆಳೆಯರನ್ನು ಪಡೆಯುವುದಕ್ಕೆ ಪುಣ್ಯ ಮಾಡಿರಬೇಕು. ಅಂತಹ ಪುಣ್ಯ ಹೊಸ ವರ್ಷದಲ್ಲಿ ಎಲ್ಲರಿಗೂ ಲಭಿಸಲಿ. ಯಾರ ಭಾವಕೋಶವೂ ಛಿದ್ರಗೊಳ್ಳದಿರಲಿ.

Monday, December 15, 2008

’ನನ್ನದಾಗಿದ್ದ ನನ್ನದಲ್ಲದ ಕ್ಷಣಗಳು’




ಕಳೆದ ರಾತ್ರಿ ರಾಧಿಕಾಳ ಫೋನ್ ಬಂದಾಗಿನಿಂದ ರಾಜೀವ, ರಾಜೀವನಾಗಿರಲಿಲ್ಲ. ಕುಳಿತಲ್ಲಿ, ನಿಂತಲ್ಲಿ ರಾಧೆಯ ಬಗ್ಗೆಯೇ ಯೋಚಿಸುತ್ತಿದ್ದ. ”ನನಗೆ ನಿನ್ನೊಡನೆ ತುಂಬಾ ಮಾತಾಡುವುದಿದೆ. ಮಂಗಳೂರಿಗೆ ಬರುತ್ತಿದ್ದೇನೆ. ಗುರುವಾರ ಬೆಳಿಗ್ಗೆ ಬಸ್ ಸ್ಟ್ಯಾಂಡಿನಲ್ಲಿ ನನಗಾಗಿ ಕಾದಿರುತ್ತಿಯಾ...?” ಎಂದು ಕೇಳಿದ್ದಳು.

ಇಪ್ಪತ್ತು ವರ್ಷಗಳ ನಂತರ ಅವಳ ಧ್ವನಿ ಕೇಳಿ ಪುಳಕಿತಗೊಂಡಿದ್ದ ರಾಜೀವ.

ಈಗ ರಾಧೆ ಹೇಗಿರಬಹುದು?. ತನ್ನ ನಂಬರು ಆಕೆಗೆ ಹೇಗೆ ಸಿಕ್ಕಿತು?.... ಎಂದೆಲ್ಲಾ ಪ್ರಶ್ನೆಗಳ ಮಳೆಗೆರೆದಾಗ ’ಅಲ್ಲಿಗೇ ಬರುತ್ತಿದ್ದೇನಲ್ಲಾ.. ಆಗ ಎಲ್ಲವನ್ನೂ ಹೇಳುತ್ತೇನೆ.’ ಎಂದು ಪೋನ್ ಕಟ್ ಮಾಡಿದ್ದಳು.

ಬದುಕು ಎಂದರೆ ಸಂಬಂಧಗಳ ಜೋಡಣೆ ಮತ್ತು ವಿಘಟನೆ. ಹಲವು ಬಾರಿ ಅದು ಬಿಡುಗಡೆಯ ಹಂಬಲವೂ ಆಗಿರುತ್ತದೆ.

ಒಂದು ಕಾಲದಲ್ಲಿ ರಾಧಿಕಾ ರಾಜೀವನ ಬದುಕಿನ ಒಂದು ಭಾಗವಾಗಿದ್ದಳು. ನಾಟಕ, ಯಕ್ಷಗಾನ, ಸೆಮಿನಾರು, ಕ್ಷೇತ್ರಕಾರ್ಯಗಳಲೆಲ್ಲಾ ಅವಳು ಅವನ ಸಂಗಾತಿ. ನಸುಗಪ್ಪು ಬಣ್ಣದ ಆ ಹುಡುಗಿ ರಾಜೀವನ ಜೀವದ ಗೆಳತಿಯಾಗಿದ್ದಳು. ಅವಳ ಗೈರು ಹಾಜರಿ ಅವನಲ್ಲಿ ಬ್ರಹ್ಮಾಂಡದಷ್ಟು ಶೂನ್ಯತೆಯನ್ನು ಉಂಟುಮಾಡುತ್ತಿತ್ತು. ರಜೆ ಬಂದಾಗಲೆಲ್ಲಾ ಕಂಬೈನ್ಡ್ ಸ್ಟಡಿಯ ನೆಪದಲ್ಲಿ ಅವಳನ್ನು ತನ್ನ ಮನೆಗೆ ಆಮಂತ್ರಿಸುತ್ತಿದ್ದ. ನಿಷ್ಕಪಟ ಮನಸ್ಸಿನ ರಾಧಿಕಳನ್ನು ಕಂಡರೆ ರಾಜೀವನ ತಾಯಿ ಅನುಸೂಯರಿಗೂ ವಿಶೇಷ ಮಮತೆ. ತಂಗಿ ಕುಸುಮ ತನಗೊಬ್ಬಳು ಜೊತೆಗಾತಿ ಸಿಕ್ಕಿದಳೆಂದು ಹಿರಿಹಿರಿ ಹಿಗ್ಗುತ್ತಿದ್ದಳು.

ರಾಜೀವನಿಗೆ ಯಕ್ಷಗಾನದ ಶೋಕಿ ಜಾಸ್ತಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ ವಾರ್ಷಿಕೋತ್ಸವದಂದು ಹಳೆ ವಿದ್ಯಾರ್ಥಿಗಳವತಿಯಿಂದ ಸಾಮಾನ್ಯವಾಗಿ ಯಕ್ಷಗಾನ ಇದ್ದೇ ಇರುತ್ತಿತ್ತು. ರಾಜೀವನಿಗೆ ಪುಂಡು ವೇಷ ಕಟ್ಟಿಟ್ಟ ಬುತ್ತಿ. ರಾಧಿಕಾಳಿಗೂ ಅಷ್ಟಿಷ್ಟು ಕುಣಿತ ಬರುತಿತ್ತು. ಭಾಗವತಿಕೆಯ ಮೇಲೆ ಆಕೆಗೆ ವಿಶೇಷ ಆಸಕ್ತಿ. ಶಾಸ್ತ್ರೀಯ ಸಂಗೀತದ ಗಂಧಗಾಳಿಯೂ ಇಲ್ಲದವರು ಅಷ್ಟೊಂದು ಭಾವಪೂರ್ಣವಾಗಿ ಹಾಡುವುದನ್ನು ಕೇಳಿ ಆಕೆ ಅಚ್ಚರಿ ಪಡುತ್ತಿದ್ದಳು; ಮೈಮರೆಯುತ್ತಿದ್ದಳು.

’ತನಗೆ ಎಂಥ ಸಖಿಯಾಗಿದ್ದಳು ರಾಧೆ...!’ ಎಂದು ನಿಟ್ಟುಸಿರು ಬಿಡುತ್ತಾ ಮಗ್ಗುಲು ಬದಲಾಯಿಸಿದ ರಾಜೀವ. ಆಕೆಯನ್ನು ಮದುವೆಯಾಗಬೇಕೆಂದು ಒಂದು ದಿನವೂ ಕನಸು ಕಾಣಲಿಲ್ಲ. ವರ್ತಮಾನವೇ ಅಷ್ಟೊಂದು ಸುಂದರವಾಗಿದ್ದವು. ಭವಿಷ್ಯದ ಬಗ್ಗೆ ಯೋಚಿಸುವ ಪ್ರಮೆಯವೇ ಬರಲಿಲ್ಲ. ಆದರೆ ಆಕೆ ಮುಂದಿನ ತಿಂಗಳು ತನ್ನ ಮದುವೆ ಎಂದಾಗ ತಾನು ಒಳಗೊಳಗೆ ಕುಸಿದು ಹೋಗಿದ್ದು ಸತ್ಯ. ಅಂದು ಜುಲೈ ೧೮. ಆ ದಿನ ಈಗಲೂ ತನ್ನ ನೆನಪಿನಲ್ಲಿ ಹಚ್ಚಹಸಿರಾಗಿ ಉಳಿದಿದೆ ಅಂದರೆ ಅದಕ್ಕೆ ಏನರ್ಥ?

’ನನ್ನನು ಮದುವೆಯಾಗುತ್ತಿಯಾ?’ ಎಂದು ಕೇಳಿಬಿಡೋಣವೆಂದುಕೊಳ್ಳುತ್ತಿದ್ದ. ಆದರೆ ಇನ್ನೊಂದು ಮನಸ್ಸು ಪ್ರತಿರೋಧ ಒಡ್ಡುತ್ತಿತ್ತು. ಅದಕ್ಕೆ ಕಾರಣವೂ ಇತ್ತು. ಅವಳನ್ನು ಮೃದುವಾಗಿ ಬಳಸಿ ಎದೆಗೊರಗಿಸಿಕೊಡು ನೆತ್ತಿಯ ಮೇಲೆ ಗಲ್ಲವೂರುವವರೆಗೆ ಅವನ ಕಲ್ಪನೆಗಳು ಗರಿಗೆದರುತ್ತಿದ್ದವು. ತುಟಿಗೆ ತುಟಿ ಬೆಸೆದು ಮೈಗೆ ಮೈ ಹೊಸೆದು ರತಿಕ್ರೀಡೆಯಾಡುವುದನ್ನು ಕಲ್ಪಿಸಿಕೊಳ್ಳುವುದಕ್ಕೂ ಅವನಿಂದಾಗುತ್ತಿರಲಿಲ್ಲ. ತನ್ನ ಪುರುಷತ್ವದಲ್ಲೇನಾದರೂ ಕೊರತೆಯಿರಬಹುದೇ, ಎಂದು ಆತ ಯೋಚಿಸಿದ್ದೂ ಇದೆ. ಅದನ್ನು ಪರೀಕ್ಷಿಸಿ ’ಹಾಗೇನೂ ಇಲ್ಲ’ ಎಂಬುದನ್ನು ದೃಢಪಡಿಸಿಕೊಂಡದ್ದೂ ಆಯಿತು.

ತನ್ನ ಬದುಕಿನಲ್ಲಿ ರಾಧೆಯ ಸ್ಥಾನ ಏನು? ಎಂದು ರಾಜೀವ ತೊಳಲಾಡುತ್ತಿರುವಾಗ ಇತ್ತ ರಾಧಿಕ ನಗುನಗುತ್ತಲೇ ಮದುವೆ ಮಾಡಿಕೊಂಡು ಬೆಂಗಳೂರು ಸೇರಿದಳು. ಇವನು ಮಂಗಳೂರಿನಲ್ಲೇ ಲೆಕ್ಚರರ್ ಆಗಿ ಕೆಲಸಕ್ಕೆ ಸೇರಿಕೊಂಡ. ಮದುವೆಯೂ ಆಯ್ತು. ಪತ್ನಿ ವಸುಂಧರ ಸುಸಂಸ್ಕೃತ ಮಹಿಳೆ. ಚುರುಕಾದ ಇಬ್ಬರು ಮಕ್ಕಳು. ಸ್ವರ್ಗಕ್ಕೆ ಕಿಚ್ಚು ಹಚ್ಚಲು ಇನ್ನೇನು ಬೇಕು?

ಸಾಮಾನ್ಯರಿಗೆ ಇಷ್ಟೇ ಸಾಕಾಗಿತ್ತೇನೋ, ಆದರೆ ರಾಜೀವನಿಗೆ ಇನ್ನೇನೋ ಬೇಕಾಗಿತ್ತು. ಸಂಜೆಯಾಯಿತೆಂದರೆ ಆವರಿಸಿಕೊಳ್ಳುವ ಶೂನ್ಯ. ಖಾಲಿತನ, ಪರಿಪೂರ್ಣವಾದ ಸಂಬಂಧವೊಂದರ ಹುಡುಕಾಟ. ’ರಾಧೆ ಇದ್ದಿದ್ದರೆ...’ ನಿಟ್ಟುಸಿರು...
"ನಿದ್ದೆ ಬಂದಿಲ್ವಾ?" ಎನ್ನುತ್ತಾ ವಸುಂಧರ ಮಗ್ಗುಲು ಬದಲಾಯಿಸಿ ಗಂಡನನ್ನು ತಬ್ಬಿಕೊಂಡು ಅವನ ಭುಜ ತಟ್ಟುತ್ತಾ ನಿದ್ದೆ ಹೋದಳು.

ಅತ್ತ ಎಚ್ಚರವೂ ಅಲ್ಲದ ಇತ್ತ ನಿದ್ರೆಯೂ ಅಲ್ಲದ ಸ್ಥಿತಿಯಲ್ಲಿರುವಾಗಲೇ ಅಲಾರಂ ಸದ್ದಾಯಿತು. ಎದ್ದವನೇ ಟೀ ಮಾಡಿಕೊಂಡು ಕುಡಿದು ಕಾರು ತಗೊಂಡು ಬಸ್ ಸ್ಟ್ಯಾಂಡಿಗೆ ಬಂದು ಬೆಂಗಳೂರು ಬಸ್ಸಿಗಾಗಿ ಕಾಯತೊಡಗಿದ. ರಾಧೆ ಈಗ ಹೇಗಾಗಿರಬಹುದು? ತಾಯ್ತನ, ಗೃಹಕೃತ್ಯಗಳು ಹುಡುಗಿಯರಿಗೆ ಸ್ಥೂಲಕಾಯವನ್ನು ತರುತ್ತದೆ ಎಂದುಕೊಳ್ಳುತ್ತಿರುವಾಗಲೇ ಬಸ್ ಬಂತು. ಅರೇ.... ಅದು ರಾಧೆಯಲ್ಲವೇ?

ಜುಬ್ಬ ಪೈಜಾಮ ತೊಟ್ಟ, ಸ್ವಚ್ಚಂದವಾಗಿ ಹಾರುತ್ತಿರುವ ಕೂದಲನ್ನು ಎಡಗೈನಿಂದ ಹಿಂದಕ್ಕೆ ಸರಿಸುತ್ತಾ ತನ್ನೆಡೆಗೆ ಮುಗುಳ್ನಕ್ಕ ಬಳ್ಳಿ ದೇಹದ ಯುವತಿಯನ್ನು ರಾಧಿಕಳೆಂದು ಗುರುತು ಹಿಡಿಯಲು ರಾಜೀವನಿಗೆ ಒಂದು ಕ್ಷಣ ಗಲಿಬಿಲಿಯಾಯಿತು. ಅವಳೇ ಮುಂದೆ ಬಂದು "ಹಾಯ್ ರಾಜಿ" ಎಂದು ಕೈ ಹಿಡಿದುಕೊಂಡಳು. ಅವಳನ್ನೇ ದಿಟ್ಟಿಸಿ ನೋಡುತ್ತಾ, ’ಎಷ್ಟು ಸುಂದರಿಯಾಗಿದ್ದಿಯಾ ನೀನು’ ಎಂದು ಮೆಲ್ಲನೆ ಅವಳ ಭುಜ ತಟ್ಟಿದ ರಾಜೀವ. ’ನೀನೆನೂ ಕಮ್ಮಿ ಇಲ್ಲ.’ ಎಂದು ತೋಳು ಹಿಡಿದು ತನ್ನೆಡೆಗೆ ತಿರುಗಿಸಿಕೊಂಡು ಅವನನ್ನೇ ದಿಟ್ಟಿಸಿ ’ಹಿಂದೆ ನೀನು ಹೀಗಿರಲಿಲ್ಲ’ ಎನ್ನುತ್ತಾ ಅವನ ಅಂಗೈಗಳನ್ನು ಮೃದುವಾಗಿ ಹಿಸುಕಿದಳು.

ಇಬ್ಬರೂ ಸ್ವಲ್ಪ ಹೊತ್ತು ಮೌನವಾದರು. ’ನಿನ್ನ ಪ್ರೋಗ್ರಾಂ ಏನೂಂತ ಗೊತ್ತಾಗಿಲ್ಲಾ. ಯಾವುದಾದರೂ ಹೋಟೇಲ್...’ಎಂದು ಅನುಮಾನಿಸುತ್ತಲೇ ಕೇಳಿದ ರಾಜೀವ. ತಕ್ಷಣ ರಾಧಿಕಳ ಮುಖ ಬಾಡಿ ಹೋಯಿತು. ’ನಿನ್ನ ಮನೆಗೆ ನಾ ಬರಬಾರದೇ..ನಿನ್ನ ಹೆಂಡ್ತಿಯೇನಾದರೂ.....?’ ಎಂದು ಅವನ ಮುಖ ನೋಡಿದಳು. ರಾಜೀವ ಮರುಮಾತಾಡದೆ ಅವಳ ಕೈಯಿಂದ ಬ್ಯಾಗ್ ತೆಗೆದುಕೊಂಡು ಎಡಗೈಗೆ ಬದಲಾಯಿಸಿ ಬಲಗೈಯನ್ನು ಅವಳೆಡೆಗೆ ಚಾಚಿದ.

ಕಾರು ಮುಂದಕ್ಕೆ ಚಲಿಸುತ್ತಿತ್ತು. ಮೌನ ಮಾತಾಡುತ್ತಿತ್ತು. ರಾಧಿಕ ಮೆಲ್ಲನೆ ಬಲಕ್ಕೆ ವಾಲಿ ಆತನ ಭುಜದ ಮೇಲೆ ತಲೆಯಿಟ್ಟಳು. ಅವನು ಎಡಗೈನಿಂದ ಅವಳ ಭುಜ ಬಳಸಿದ. ಅವಳು ಹಾಗೆಯೇ ಕಣ್ಮುಚ್ಚಿದಳು.

ಕಾರು ಮನೆಯ ಮುಂದೆ ನಿಂತಾಗ ರಾಧಿಕ ಭಾವಲೋಕದಿಂದ ಹೊರಬಂದಳು. ವಸುಂಧರ ಮನೆಯಿಂದ ಹೊರಬಂದಳು. ಸೇಹಿತ ಬರುತ್ತಾನೆಂದಿದ್ದರು, ಈಗ ನೋಡಿದರೆ ಸೇಹಿತೆ ಬಂದಿದ್ದಾಳೆ. ಯಾರಿರಬಹುದು? ಎಂದುಕೊಳ್ಳುತ್ತಲೇ ಸ್ವಾಗತಿಸಲು ಕಾರಿನ ಹತ್ತಿರ ಬಂದಳು.
’ಇವಳು ನನ್ನ ಬಾಲ್ಯ ಸೇಹಿತೆ ರಾಧಿಕಾ’ ಎಂದು ಪತ್ನಿಗೆ ಪರಿಚಯಸಿದ ರಾಜೀವ ರಾಧಿಕಳತ್ತ ತಿರುಗಿ, ’ಇವಳು ನನ್ನ ಗೃಹಲಕ್ಷ್ಮಿ, ವಸುಂಧರ..’ ಎಂದು ನಾಟಕೀಯವಾಗಿ ಪರಚಯಿಸಿದ.
ವಸುಂಧರ ರಾಧಿಕಳ ಕೈ ಹಿಡಿದು ಬರಮಾಡಿಕೊಂಡಳು.

ರಾಜೀವನ ಮೊದಲ ಮಗಳು ರಂಜಿತಾ ಸುಳ್ಯಕ್ಕೆ ವಾಸ್ತವ್ಯದ ಸಮ್ಮರ್ ಕ್ಯಾಂಪಿಗೆ ಹೋಗಿದ್ದಳು. ಅವಳ ರೂಮಿನಲ್ಲಿ ರಾಧಿಕಳ ಲಗೇಜನಿಟ್ಟು ಅಣಿ ಮಾಡಿದಳು ವಸುಂಧರಾ. ಸ್ನಾನ ತಿಂಡಿಗಳಾದವು. ರಾದಿಕಳಂತೆ ವಸುಂಧರಾ ಕೂಡಾ ಒಳ್ಳೆಯ ಅಭಿರುಚಿಯುಳ್ಳ ಮಾತುಗಾತಿಯಾಗಿದ್ದಳು. ಇಬ್ಬರೂ ಬಹುಕಾಲದ ಗೆಳತಿಯರಂತೆ ಹೊಂದಿಕೊಂಡುಬಿಟ್ಟರು.

ಇಬ್ಬರೂ ಹಂಪನಕಟ್ಟೆಗೆ ಹೋಗಿ ತಾಜ ಮೀನು ತಂದು ರುಚಿಯಾದ ಅಡುಗೆ ಮಾಡಿದರು. ಊಟ ಮುಗಿದ ಒಡನೆಯೇ ರಾಧಿಕಳಿಗೆ ಗಡದ್ದಾದ ನಿದ್ರೆ ಬಂತು. ನಿದ್ದೆಯಿಂದ ಎಚ್ಚೆತ್ತಾಗ ಹಬೆಯಾಡುವ ಚಹ ಜೊತೆಗೆ ಬಾಳೆಕಾಯಿ ಬಜ್ಜಿಯೂ ಬಂತು. ಇನ್ನೊಬ್ಬರ ಕೈನಲ್ಲಿ ಉಪಚಾರ ಹೇಳಿಸಿಕೊಂಡು ತಿಂಡಿ ತಿನ್ನುವುದರಲ್ಲಿ ಎಷ್ಟು ಗಮ್ಮತ್ತಿದೆ ಎಂದುಕೊಳ್ಳುತ್ತಲೇ ರ್‍ಆಧಿಕಾ ತಿಂಡಿ ತಿಂದಳು.

ಸಂಬಂಧಗಳನ್ನು ಸಂಭಾಳಿಸುವುದರಲ್ಲಿ ರಾದಿಕ ಬಹು ಜಾಣೆ. ತನ್ನ ಆತ್ಮೀಯ ವರ್ತುಲದೊಳಗಿನ ಯಾರಾದರೊಬ್ಬ ಗಂಡಸಿನ ಬಗ್ಗೆ ತನಗೇನಾದರು ಅನೂಹ್ಯವಾದ ಸೆಳೆತವೇನಾದರು ಹುಟ್ಟಿಬಿಟ್ಟರೆ ಅದನ್ನು ಅಲ್ಲಿಯೇ ಚಿವುಟಲು ಪ್ರಯತ್ನಿಸುತ್ತಾಳೆ. ಅದು ನಿಸರ್ಗ ಸಹಜವಾದ ಆಕರ್ಷಣೆ ಎಂಬುದು ಆಕೆಗೆ ಗೊತ್ತಿದೆ. ಆದರೆ ಸೆಳೆತದ ಗುಂಗು ಆವರಿಸಿಕೊಂಡರೆ ಅವಳು ಅದೀರ್‍ಅಳಾಗುತ್ತಾಳೆ. ತಕ್ಷಣ ಆಕೆ ಅತನ ಪತ್ನಿಯ ಪರಿಚಯ ಮಾಡಿಕೊಳ್ಳಲು ಪ್ರಯತ್ನಿಸುತ್ತಾಳೆ. ಒಂದು ಹೆಣ್ಣು ಇನ್ನೊಂದು ಪರಿಚಿತ ಹೆಣ್ಣಿಗೆ ಮೋಸ ಮಾಡಲಾರಳು ಎಂಬುದು ಅವಳ ನಂಬಿಕೆ. ’ತಾಯ್ತನ’ ಹಾಗೆ ಮಾಡಲು ಬಿಡಲಾರದು.

ರಾಜೀವನೆಡೆಗಿನ ಆಕರ್ಷಣೆ ಆ ತೆರನಾದ್ದಲ್ಲ. ಅದು ವ್ಯಾಖ್ಯೆಗೆ ನಿಲುಕದ್ದು. ಬಹುಶಃ ಆತ್ಮವನ್ನು ಹುಡುಕಿ ಬಂದ ಜೀವದ ಆಕರ್ಷಣೆ.

ಪೈಂಟಿಂಗ್ ಕ್ಲಾಸಿಗೆ ಹೋಗಿದ್ದ ಕಾರ್ತಿಕ ಬಂದ ನಂತರ ಎಲ್ಲರೂ ಸೇರಿ ಬೀಚಿಗೆ ಹೋದರು. ಇಪ್ಪತ್ತು ವರ್ಷಗಳ ಹಿಂದೆ ಓಡಾಡಿದ ಜಾಗದಲ್ಲಿ ಈಗ ಮತ್ತೊಮ್ಮೆ ರಾದಿಕಾ, ರಾಜೀವ ಜತೆಯಾಗಿ ಹೆಜ್ಜೆ ಹಾಕುತ್ತಿದ್ದಾರೆ. ಆದರೆ ಅಂದಿಗೂ ಇಂದಿಗೂ ಅಪಾರ ಅಂತರವಿತ್ತು. ವಸುಂಧರೆಗೂ ಇದು ಗೊತ್ತಾಗುತ್ತಿತ್ತು.ಹಾಗಾಗಿ ಆಕೆ ಕುರುಕು ತಿಂಡಿ ತರುತ್ತೇನೆಂದು ಮಗನೊಡನೆ ಅಂಗಡಿಯತ್ತ ಹೋದಳು.

ರಾಜೀವನಿಗೆ ಆಕೆ ಇಲ್ಲಿಗೆ ಯಾಕೆ ಬಂದಿದ್ದಾಳೆ ಎಂಬ ಚಿಕ್ಕ ಕುತೂಹಲವಿತ್ತು. ಆದರೆ ಕೇಳಲು ಮುಜುಗರ. ಏನಾದರು ಮಾತಾಡಬೇಕಲ್ಲಾ ಎನಿಸಿ
’ಮಕ್ಕಳೇನು ಮಾಡುತ್ತಿದ್ದಾರೆ?’ ಎಂದ.
’ಮೊದಲನೆಯವಳು ಸೆಕೆಂಡ್ ಪಿಯುಸಿ, ಎರಡನೆಯವನು ಎಂಟನೇ ಕ್ಲಾಸ್. ಇಬ್ಬರೂ ತುಂಬಾ ಬುದ್ಧಿವಂತರು. ಆ ಮಟ್ಟಿಗೆ ನಾನು ಪರಮ ಸುಖಿ’.
’ಆ ಮಟ್ಟಿಗೆ’ ಶಬ್ದ ರಾಜೀವನಿಗೆ ಇನ್ನೇನೋ ರವಾನಿಸಿದಂತಾಯಿತು.
’ಯಶವಂತ ಹೇಗಿದ್ದಾರೆ?’
’ಚೆನ್ನಾಗಿದ್ದಾರೆ. ಪೀಲ್ಡ್ ನಲ್ಲಿ ಒಳ್ಳೆ ಹೆಸರಿದೆ. ಪ್ರಾಮಾಣಿಕ. ತನ್ನ ಕೆಲಸದ ಮೇಲಿರುವಷ್ಟು ನಿಷ್ಟೆ, ಶ್ರದ್ಧೆ, ಇನ್ಯಾವುದರ ಮೇಲೂ ಇಲ್ಲ. ಇದೇ ನಮ್ಮಿಬ್ಬರ ನಡುವೆ.....’ ಎಂದವಳೇ ಅರ್ಧಕ್ಕೆ ನಿಲ್ಲಿಸಿದಳು.
ರಾಜೀವನಿಗೆ ಮಾತು ಬದಲಾಯಿಸಬೇಕೆನಿಸಿತು.
’ನೀನು ಇಲ್ಲಿಗೆ ಬಂದ ಕಾರಣ....’ಮುಜುಗರದಿಂದಲೇ ತಡೆ ತಡೆದು ಕೇಳಿದ.
ನಡೆಯುತ್ತಿದ್ದವಳು ತಟ್ಟನೆ ನಿಂತು ಅವನನ್ನೇ ದಿಟ್ಟಿಸುತ್ತಾ,’ ಯಾಕೋ? ನಿನ್ನನ್ನು ಕಾಣಲು ನಾನು ಬರಬಾರದೇ?’
ರಾಜೀವ ಕಿರುನಗು ನಕ್ಕು ಅವಳ ತಲೆಗೊಂದು ಮೊಟಕಿದ. ಅವಳು ಅವನ ತೋಳು ಚಿವುಟಿದಳು. ಇಬ್ಬರೂ ಏನನ್ನೋ ನೆನಸಿಕೊಂಡು ಜೋರಾಗಿ ನಕ್ಕರು.
’ಏನದು ಅಷ್ಟೊಂದು ನಗು’ ಎನ್ನುತ್ತಾ ಕೈಯಲ್ಲಿ ಬೇಲ್ ಪುರಿ ಹಿಡಿದು ಬಂದ ವಸುಂಧರಾ ಅವರ ಜೊತೆ ಸೇರಿದಳು.
ಎಲ್ಲರೂ ರುದ್ರಪಾದೆ ಹತ್ತಿ ಕಡಲಿಗೆ ಮುಖಮಾಡಿ ಕುಳಿತು ಬೇಲ್ ಪುರಿ ತಿನ್ನುತ್ತಾ ಮುಳುಗುತ್ತಿರುವ ಸೂರ್ಯನ ಕೆಂಬಣ್ಣ ತೆರೆಗಳೊಡನೆ ಚೆಲ್ಲಾಟವಾಡುತ್ತಿರುವುದನ್ನು ನೋಡುವುದರಲ್ಲಿ ಮಗ್ನರಾದರು.
ರಾದಿಕಳಿಗೆ ಕಡಲೆಂದರೆ ಹುಚ್ಚು ಮೋಹ. ಅಬ್ಬರದ ತೆರೆಗಳನ್ನು ದಡಕ್ಕಪ್ಪಳಿಸುವ ಪರಿ ನೋಡಿದರೆ ’ನನ್ನ ಮುಂದೆ ನೀನು ಅಲ್ಪ. ತಾಕತ್ತಿದ್ದರೆ ನನ್ನನ್ನು ಗೆಲ್ಲು ಬಾ’ ಎಂದು ಸವಾಲು ಹಾಕುತ್ತಿರುವಂತೆ ಭಾಸವಾಗುತ್ತಿತ್ತು.

ಕಾಲೇಜು ದಿನಗಳಲ್ಲಿ ಕಡಲಿಗೆ ಬಂದಾಗಲೆಲ್ಲಾ ಮರಳ ಮೇಲೆ ’ ಸಮುದ್ರರಾಜ, ಐ ಲವ್ ಯೂ’ ಎಂದು ಬರೆಯುವುದು, ಅದನ್ನು ಅಲೆಗಳು ಅಳಿಸಿ ಹಾಕುತ್ತವೆಯೇನೋ ಎಂದು ಕಾತರದಿಂದ ನೋಡುವುದು, ಅಳಿಸಿದರೆ ಸಮುದ್ರರಾಜನಿಗೆ ತನ್ನಲ್ಲಿ ಪೇಮವಿದೆ ಎಂದು ಸಂಭ್ರಮವಿಸುವುದು, ಅಳಿಸದಿದ್ದರೆ ತನ್ನ ಬಗ್ಗೆ ಉಪೇಕ್ಷೆಯಿದೆ ಎಂದು ಮನಸ್ಸು ಬಾಡಿಸಿಕೊಳ್ಳುವುದು.
ಅದನ್ನೆಲ್ಲ ನೆನೆಸಿಕೊಂಡು ರಾಧಿಕಳ ಮುಖದಲ್ಲಿನಗು ಲಾಸ್ಯವಾಡಿತು.ಇನ್ನೊಮ್ಮೆ ಬಂದಾಗ ಅಂದಿನ ಎಲ್ಲಾ ಗೆಳೆಯ-ಗೆಳತಿಯರ ವಿಳಾಸ ಪತ್ತೆ ಮಾಡಿ ಸಂಬಂಧಗಳನ್ನು ಪುನರ್ ಜೋಡಿಸಬೇಕು ಎಂದುಕೊಂಡಳು.

ಯಶವಂತನ ಜೊತೆ ಬಂದು ಈ ರುದ್ರಪಾದೆಯ ಮೇಲೆ ಕುಳಿತು ಸಮುದ್ರದ ರುದ್ರ ರಮಣೀಯ ದೃಶ್ಯವನ್ನು ನೋಡಬೇಕೆಂದು ಎಷ್ಟೊಂದು ಹಂಬಲಿಸಿದ್ದಳು. ಮದುವೆಯಾದಂದಿನಿಂದ ತೀರಾ ಇತ್ತೀಚಿನವರೆಗೂ ಕಂಡಂತ ಕನಸದು. ಆದರೆ ಅದು ಕನಸಾಗಿಯೇ ಉಳಿಯಿತು. ಅವಳಿಂದ ನಿಟ್ಟುಸಿರು ಹೊಮ್ಮಿತು.
’ರಾತ್ರಿಯಿಡಿ ಪ್ರಯಾಣ ಮಾಡಿ ನಿನ್ಗೆ ಆಯಾಸ ಆಗಿರ್ಬೇಕು. ನಾಳೆ ಬೇಕಾದ್ರೆ ಬರೋಣ.’ ಎನ್ನುತ್ತಾ ಎದ್ದ ರಾಜೀವ.
’ನಾಳೆ ರಾತ್ರಿ ಬೆಂಗಳೂರಿಗೆ ವಾಪಾಸ್ಸಾಗ್ಬೇಕು’ ಎನ್ನುತ್ತಾ ಬಟ್ಟೆ ಕೊಡವಿಕೊಂಡಳು.
’ಒಂದೆರಡು ದಿನ ಇದ್ದು ಹೋಗಬಾರದೇ? ನಮ್ಮವರಿಗೆ ನೀವೊಬ್ಬರೇ ಆತ್ಮೀಯರೆಂದು ಅವರು ಆಗಾಗ ಹೇಳುತ್ತಿದ್ರು. ನಿಮ್ಮನ್ನು ನೋಡುವ ಕುತೂಹಲವೂ ನನಗಿತ್ತು. ಈಗ ನನಗೂ ನೀವು ಹತ್ತಿರದವರೆನಿಸುತ್ತಿದೆ’ ಎಂದು ವಸುಂಧರೆಯೂ ಒತ್ತಾಯಿಸಿದಳು.
’ಇನ್ನೊಮ್ಮೆ ಖಂಡಿತವಾಗಿಯೂ ಬರುತ್ತೇನೆ’ ಅವಳ ಧ್ವನಿ ಕಂಪಿಸಿದ್ದು ರಾಜೀವನ ಅನುಭವಕ್ಕೆ ಬಂತು.
ಯಾಕೆ, ನನ್ನ ರಾಧೆ ನೆಮ್ಮದಿಯಾಗಿಲ್ಲವೇ?
ಮರುದಿನ ಬೆಳಿಗ್ಗೆ ಎಷ್ಟೇ ಒತ್ತಾಯ ಮಾಡಿದರೂ ರಾಧಿಕ ನಿಲ್ಲಲಿಲ್ಲ. ಕಳುಹಿಸಿ ಕೊಡಲೆಂದು ಸಿದ್ದನಾದ ರಾಜೀವನನ್ನು ನೋಡಿ, ’ರಂಜಿತಾಳ ಮನೆಗೆ ಹೋಗುತ್ತಿದ್ದೇನೆ. ನೀನೂ ಬಂದರೆ ಚೆನ್ನಾಗಿರುತ್ತಿತ್ತು. ಎಂದಳು.
’ರಂಜಿತಾ ಇಲೆ ಇದ್ದಾಳಾ? ನನಗೆ ಗೊತ್ತೆ ಇರಲಿಲ್ಲಾ..’ಎಂದ ರಾಜೀವ.
’ಅವರೊಬ್ಬರೇ ಹುಡುಕಿಕೊಂಡು ಹೋಗ್ಬೆಕಲ್ಲಾ. ನೀವೂ ಜೋತೆಯಲ್ಲಿ ಹೋಗಿ’ ಎಂದಳು. ವಸುಂಧರಾ.
’ಹೆಂಗಸರ ಕಷ್ಟ ಹೆಂಗಸರಿಗೆ ಮಾತ್ರ ಅರ್ಥ ಆಗುತ್ತೆ, ಅಲ್ವಾ ವಸು.’ ಎಂದು ನಕ್ಕಳು ರಾಧಿಕಾ.
ರಾಧಿಕಾಳನ್ನು ಪ್ರೀತಿಯಿಂದ ವಸುಂಧರಾ ಬೀಳ್ಕೊಟ್ಟಳು.
ಕಾರು ಎಕ್ಕೂರನ್ನು ದಾಟಿ ಪಂಪ್ ವೆಲ್ ಹತ್ತಿರಕ್ಕೆ ಬಂದಾಗ ’ರಂಜಿತಳ ಮನೆ ಯಾವ ಕಡೆಗೆ’ ಎಂದ ರಾಜೀವ.
ರಾಧಿಕಾ ಅವನನ್ನೇ ಆಳವಾಗಿ ದಿಟ್ಟಿಸಿ ನೋಡಿ,’ಹೋಟೇಲ್ ನವರತ್ನಕ್ಕೆ ಹೋಗೋಣ’ ಎಂದಳು.
ಯಾಕೆ ಎಂದು ಪ್ರಶ್ನಿಸಬೇಕೆನಿಸಿದರೂ ಹಿಂದಿನ ದಿನಗಳ ಅವಳ ಹಟಮಾರಿತನ ನೆನಪಾಗಿ ಹೋಟೇಲಿನತ್ತ ಕಾರು ತಿರುಗಿಸಿದ. ಹೋಟೇಲ್ ಮುಂದೆ ಕಾರು ನಿಂತಿತು. ತಾನೇ ರಿಸೆಪ್ಷನ್ ಬಳಿ ಹೋಗಿ ರೂಂ ಪಡೆದು ಲಿಪ್ಟ್ ನತ್ತ ನಡೆದಳು. ರಾಜೀವ ಮೌನವಾಗಿ ಹಿಂಬಾಲಿಸಿದನು.

ರೂಮಿಗೆ ಬಂದವಳೇ ಹಾಸಿಗೆ ಮೇಲೆ ದೊಪ್ಪೆಂದು ಬಿದ್ದಳು. ರಾಜೀವನಿಗೆ ಏನೂ ತೋಚದೆ ಕಿಟಿಕಿಯನ್ನು ತೆರೆಯುತ್ತಾ ದೂರದಲ್ಲಿ ಕಾಣುತ್ತಿರುವ ಸಮುದ್ರವನ್ನೊಮ್ಮೆ ಆಕೆಯನ್ನೊಮ್ಮೆ ದಿಟ್ಟಿಸತೊಡಗಿದನು. ಸ್ವಲ್ಪ ಹೊತ್ತಿನ ನಂತರ ನಿಧಾನವಾಗಿ ರಾಜೀವನ ಹತ್ತಿರ ಬಂದ ರಾಧಿಕ ಅವನ ಕೈ ಹಿಡಿದುಕೊಂಡಳು. ಪವಿತ್ರ ಮುಂಜಾವಿನಲ್ಲಿ ಪಾರಿಜಾತ ಪುಷ್ಪ ಮೆಲ್ಲನೆ ಧರೆಯನ್ನು ಸ್ಪರ್ಶಿಸುವಂತೆ ಮೆಲ್ಲನೆ ಅವನ ಎದೆಗೊರಗಿದಳು. ಅರೆಗಣ್ಣು ಮುಚ್ಚಿದ ಆಕೆ ಈ ಲೋಕದಲ್ಲಿರುವಂತೆ ಕಾಣುತ್ತಿರಲಿಲ್ಲ. ರಾಜೀವ, ಅವಳನ್ನು ಮೃದುವಾಗಿ ತೋಳುಗಳಿಂದ ಬಳಸಿ ಮಂಚದ ಬಳಿ ತಂದು ಹಾಸಿಗೆಯ ಮೇಲೆ ಮಲಗಿಸಿ ಮೇಲೇಳಬೇಕೆನ್ನುವಷ್ಟರಲ್ಲಿ ಆಕೆ ಆತನ ಕೈ ಹಿಡಿದು ಕುಳ್ಳಿರಿಸಿದಳು. ಅವನು ಏನೋ ಹೇಳಲೆಂದು ಬಾಯ್ತೆರೆದಾಗ ಅವಳು ಮಾತಾಡದಂತೆ ತಡೆದಳು.

ಆ ದಿವ್ಯ ಘಳಿಗೆಯನ್ನು ಪೂರ್ತಿಯಾಗಿ ಅನುಭವಿಸುತ್ತಿರುವಂತೆ ಅವನತ್ತ ಸರಿದು ತೊಡೆಯ ಮೇಲೆ ತಲೆಯಿಟ್ಟಳು. ಹೊಟ್ಟೆಯಲ್ಲಿರುವ ಮಗುವಿನಂತೆ ಕಾಲುಗಳನ್ನು ಮಡಿಚಿ, ಗಲ್ಲದ ಮೇಲೆ ಕೈಗಳನ್ನಿಟ್ಟುಕೊಂಡು ಮಗ್ಗುಲಾಗಿ ಮಲಗಿದಳು. ರಾಜೀವನಿಗೆ ಏನೂ ತೋಚದೆ ಸುಮ್ಮನೆ ಅವಳ ಕೂದಲು ಸವರುತ್ತಾ ಕುಳಿತುಕೊಂಡ.

ಸ್ವಲ್ಪ ಹೊತ್ತಿನಲ್ಲಿ ತನ್ನ ಪ್ಯಾಂಟ್ ಒದ್ದೆಯಾದ ಅನುಭವವಯ್ತು. ಬಗ್ಗಿ ನೋಡಿದರೆ ಮುಚ್ಚಿದ ಕಣ್ಣುಗಳಿಂದ ನೀರು ಧಾರೆಯಾಗಿ ಹರಿಯುತ್ತಿದೆ. ಬಹುಕಾಲದಿಂದ ತಡೆಹಿಡಿದಿದ್ದ ಭಾವನೆಗಳ ಮಹಾಪೂರವಿರಬೇಕು. ಹರಿದುಬಿಡಲಿ. ಸ್ವಾಭಿಮಾನದ ಹೆಣ್ಣು. ಎಲ್ಲಿಯೂ, ಯಾರೆದುರೂ ಇದುವರೆಗೆ ತನ್ನ ಅಂತರಂಗವನ್ನು ಬಿಚ್ಚಿಟ್ಟಿರಲಾಳು ಎಂದುಕೊಳ್ಳುತ್ತಾ, ಬಲಗೈನಿಂದ ಅವಳನ್ನು ಬಾಚಿ ತನ್ನ ಹೊಟ್ಟೆಯೆಡೆಗೆ ಇನ್ನಷ್ಟು ಒತ್ತಿಕೊಂಡ.

ಎಷ್ಟೋ ಹೊತ್ತು ರಾಜೀವ ಹಾಗ್ಯೇ ಕುಳಿತಿದ್ದನು. ಕಾಲುಗಳು ಚೋಮುಗಟ್ಟಿ ನೋಯಲಾರಂಭಿಸಿದಾಗ ಮೆಲ್ಲಗೆ ಅವಳ ಮುಖದೆಡೆಗೆ ಬಾಗಿದ. ಶತಮಾನಗಳಿಂದ ನಿದ್ದೆಯೇ ಮಾಡಿಲ್ಲವೇನೋ ಎಂಬಂತೆ ಶಾಂತಳಾಗಿ ನಿದ್ರಿಸುತ್ತಿದ್ದಳು. ರಾಜೀವನಿಗೆ ಅಕ್ಕರೆ ಉಕ್ಕಿ ಬಂತು. ಮೆಲ್ಲನೆ ಬಾಗಿ ಅವಳ ಹಣೆಯ ಮೇಲೆ ಹೂ ಮುತ್ತನ್ನಿತ್ತ. ಆಕೆ ನಿದ್ದೆಯಲ್ಲಿಯೇ ಹೊರಳಿ ಇನ್ನಷ್ಟು ಹತ್ತಿರಕ್ಕೆ ಸರಿದಳು.

ಇವಳ ಸಂಸಾರದಲ್ಲೇನಾದರು ತೊಡಕಿರಬಹುದೇ? ಎಂದು ಚಿಂತಿಸುತ್ತಲೇ ತುಂಬಾ ಹೊತ್ತು ಸುಮ್ಮನೆ ಕುಳಿತ ರಾಜೀವ. ನೀರು ಕುಡಿಯಬೇಕೆನಿಸಿತು. ಮೆಲ್ಲನೆ ಅವಳನ್ನು ಹಾಸಿಗೆಯಲ್ಲಿ ಮಲಗಿಸಿ ಗಂಟಲಿಗೆ ನೀರು ಸುರಿದುಕೊಂಡ. ಪ್ಯಾನ್ ಹಾಕಿ ಕುರ್ಚಿಯಲ್ಲಿ ಒರಗಿಕೊಂಡ.

ಎಚ್ಚರ ಆದಾಗ ಮದ್ಯಾಹ್ನವಾಗಿತ್ತು. ’ಎನೋ ಕುಂಭಕರ್ಣ, ಬೇಗ ಎದ್ದು ರೆಡಿಯಾಗು. ಸಂಜೆ ಮರವಂತೆಗೆ ಹೋಗ್ಬೇಕು’ ಎಂದಳು ರಾಧಿಕ. ರಾಜೀವನಿಗೆ ಆಶ್ಚರ್ಯವಯ್ತು; ಸ್ವಲ್ಪ ಹೊತ್ತಿನ ಹಿಂದಿನ ರಾಧಿಕ ಇವಳೆನಾ...?

ಮರವಂತೆಗೆ ಮಂಗಳೂರಿನಿಂದ ಎರಡೂವರೆ ಘಂಟೆಗಳ ಪಯಣ. ದಾರಿಯುದ್ದಕ್ಕೂ ತಮ್ಮ ಕಾಲೇಜು ದಿನಗಳನ್ನು ಆ ಕಾಲದ ಸೇಹಿತರನ್ನು ನೆನಪು ಮಾಡಿಕೊಳ್ಳುತ್ತಿದ್ದರು. ಹಾದಿ ಸವೆದದ್ದೇ ಗೊತ್ತಾಗಲಿಲ್ಲ.

ಸೂರ್ಯ ಮುಳುಗುವ ವೇಳೆಗೆ ಅವರು ಮರವಂತೆ ಬೀಚಿನಲ್ಲಿದ್ದರು. ಕಡಲಂಚಿನಲ್ಲಿ ಮರೆಯಾಗುತ್ತಿದ್ದ ರಕ್ತವರ್ಣದ ದಿನಕರನನ್ನು ಕಣ್ತುಂಬಿಸಿಕೊಂಡರು. ಸೂರ್ಯೋದಯ ಮತ್ತು ಸೂರ್ಯಾಸ್ತಗಳನ್ನು ಏಕಕಾಲದಲ್ಲಿ ನೋಡಬಹುದಾದ ಅಪರೂಪದ ಸ್ಥಳ ಇದು. ತಾವು ಒಂದಷ್ಟು ಜನ ಪ್ರೆಂಡ್ಸ್ ಹುಣ್ಣಿಮೆಯ ರಾತ್ರಿಯಲ್ಲಿ ಇಡೀ ದಿನ ಇಲ್ಲಿ ಕಳೆದ ರಸಘಳಿಗೆಗಳನ್ನು ಅವರು ನೆನಪಿಸಿಕೊಂಡರು.

ಒಂದು ಬದಿಯಲ್ಲಿ ಶಾಂತವಾಗಿ ಹರಿಯುವ ಸೌಪರ್ಣೀಕಾ ನದಿ. ಇನ್ನೊಂದು ಬದಿಯಲ್ಲಿ ಬೊರ್ಗೆರೆಯುತ್ತಿರುವ ಕಡಲು. ಸುತ್ತೆಲ್ಲಾ ಹಾಲು ಚೆಲ್ಲಿದಂತ ಬೆಳದಿಂಗಳು. ಕಡಲ ಕೊರೆತ ತಡೆಯಲು ಹಾಕಿದ ಬಂಡೆಗಲ್ಲುಗಳ ಮೇಲೆ ಕುಳಿತ ಆ ಜೋಡಿ. ಬಹುಶಃ ಅವರು ಶಾಪಗ್ರಸ್ತ ಕಿನ್ನರ ದಂಪತಿಗಳೇ ಇರಬೇಕು!
[ಆರು ವರ್ಷಗಳ ಹಿಂದೆ ಕಥೆ ಬರೆಯುವ ಪ್ರಯತ್ನದಲ್ಲಿ ಮೂಡಿ ಬಂದ ಬರಹ ಇದು. ]