Monday, January 4, 2010

ಬಾಲ್ಯಕ್ಕೆ ಲಗ್ಗೆ ಇಟ್ಟ ’ರಾಮಾಚಾರಿ’





’ಈ ಎಲ್ಲ ಹಿಂಸೆಯಲು ಜೀವ ಕೇಳುವುದೊಂದೆ
ತಿರುತಿರುಗಿ ಜೀವ ಕೇಳುವದೊಂದೇ-ಒಂದೇ ಒಂದು;
ಎಲ್ಲಿಂದ ಬಂದು ಕಾಡಿತು ಈ ಅಗಮ್ಯ,
ವಾಚ್ಯಾತೀತ, ವಿಫಲ, ವಿಪರೀತ ವ್ಯಥೆ?’

ಗಂಗಾಧರ ಚಿತ್ತಾಲರ ‘ದುಃಖಗೀತ’ ಕವನದ ಸಾಲುಗಳಿವು. ಗಂಗಾಧರ ಚಿತ್ತಾಲ, ಕನ್ನಡದ ಶ್ರೇಷ್ಠ ಕಾದಂಬರಿಕಾರರಾದ ಯಶವಂತ ಚಿತ್ತಾಲರ ಅಣ್ಣ. ಇವರ ತಂದೆಯವರು ೧೯೫೫ರಲ್ಲಿ ಮನೆಯ ಹಿತ್ತಲಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರು. ಆ ಸಂದರ್ಭದಲ್ಲಿ ಬರೆದ ಕವನವಿದು.

ಸಾವೊಂದು ಗಾಢವಾಗಿ ತಟ್ಟಿದ ಸಂದರ್ಭದಲೆಲ್ಲಾ ಕಾಡುವ ಕವನವಿದು.
ಹೊಸ ವರ್ಷವನ್ನು ಸಡಗರ, ಸಂಭ್ರಮದಿಂದ ಬರಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗಲೇ ನಾವೆಲ್ಲಾ ಪ್ರೀತಿ, ಅಭಿಮಾನಗಳಿಂದ ‘ಶರೀಫಜ್ಜ’ನೆಂದೇ ಕರೆಯುತ್ತಿದ್ದ ಅಶ್ವಥ್ ಅನಂತದಲ್ಲಿ ಲೀನವಾದರು. ಮರುದಿನವೇ ವಿಷ್ಣುವರ್ಧನ್ ಅವರನ್ನು ಹಿಂಬಾಲಿಸಿದರು. ಕನ್ನಡಿಗರ ಭಾವಪ್ರಪಂಚವನ್ನು ಶ್ರೀಮಂತಗೊಳಿಸಿದ ಎರಡು ಸಾಂಸ್ಕೃತಿಕ ಮನಸ್ಸುಗಳು ಒಟ್ಟೊಟ್ಟಿಗೆ ವರ್ಷದ ಕೊನೆಯಲ್ಲಿ ಕಣ್ಮರೆಯಾದವು. ಸಡಗರದ ಜಾಗದಲ್ಲಿ ವಿಷಾದ ಆವರಿಸಿಕೊಂಡಿತು.

೫೯ ಸಾಯುವ ವಯಸ್ಸು ಖಂಡಿತಾ ಅಲ್ಲ. ಆದರೂ ವಿಷ್ಣು ಇನ್ನಿಲ್ಲ.

ನಾನೇನು ವಿಷ್ಣುವರ್ಧನನ ಅಭಿಮಾನಿಯಲ್ಲ. ಆದರೆ ಸಾಹಿತ್ಯ, ಸಂಗೀತ. ನಾಟಕ, ನೃತ್ಯ, ಸಿನಿಮಾದಂತ ಕಲಾ ಮಾಧ್ಯಮಗಳಿಗೆ ಮನಸ್ಸನ್ನು ರೂಪಿಸುವ ಶಕ್ತಿ ಇದೆಯೆಂಬುದನ್ನು ಬಲ್ಲೆ. ಕನ್ನಡದ ಸಿನಿಮಾ ಜಗತ್ತಿನಲ್ಲಿ ಅನೇಕ ನಟರಿದ್ದಾರೆ; ಇದ್ದರು. ಅವರಲ್ಲಿ ಸ್ಟಾರ್ ಗಳಾಗಿ ಮೆರೆದವರು ಇಬ್ಬರೇ; ಅವರೇ ಡಾ. ರಾಜಕುಮಾರ್ ಮತ್ತು ಡಾ. ವಿಷ್ಣುವರ್ಧನ್.

ರಾಜಕುಮಾರ್ ಗಿಂತ ವಿಷ್ಣುವರ್ಧನ್ ನನ್ನ ಮನಸ್ಸಿಗೆ ಹೆಚ್ಚು ಹತ್ತಿರದವರು. ಅದಕ್ಕೆ ಕಾರಣವಿದೆ.ನಾನು ಬಾಲ್ಯವನ್ನು ಕಳೆದು ಕೌಮಾರ್ಯಕ್ಕೆ ಕಾಲಿಡುವ ಹೊತ್ತಿಗೆ ರಾಜಕುಮಾರ್ ತುಂಬಾ ಎತ್ತರದಲ್ಲಿದ್ದರು. ಎತ್ತರದಲ್ಲಿರುವವರನ್ನು ಆರಾಧಿಸಬಹುದು. ಆದರೆ ಸಮಾನ ನೆಲೆಯಲ್ಲಿ ಕಾಣಲಾಗದು. ರಾಜಕುಮಾರ್ ಹಿರಿಯಣ್ಣನಂತಿದ್ದರು, ಅಪ್ಪನಂತಿದ್ದರು, ಮಾರ್ಗದರ್ಶಕನಂತಿದ್ದರು. ಆದರೆ ಗೆಳೆಯನಲ್ಲ; ಪ್ರೇಮಿಯಲ್ಲ; ಆತ್ಮಬಂಧುವಲ್ಲ. ಆದರೆ ವಿಷ್ಣುವರ್ಧನ್ ಇದೆಲ್ಲವೂ ಆಗಬಲ್ಲವನಾಗಿದ್ದ.

‘ನಾಗರಹಾವು’ ತೆರೆಕಂಡದ್ದು ೧೯೭೨ರಲ್ಲಿ. ನವ್ಯ ಸಾಹಿತ್ಯ ಉತ್ತುಂಗದಲ್ಲಿದ್ದ ಕಾಲಘಟ್ಟ. ಯುವಕರಲ್ಲಿ ಒಂದು ರೀತಿಯ ವಿಕ್ಷಿಪ್ತತೆ ಆವರಿಸಿಕೊಂಡ ಕಾಲ. ಸಾಹಿತ್ಯ ಜಗತ್ತು ಅದನ್ನು ಗುರುತಿಸಿತ್ತು. ಶಾಂತಿನಾಥ ದೇಸಾಯಿಯವರ ‘ಮುಕ್ತಿ’ ಲಂಕೇಶರ ‘ಬಿರುಕು’[೧೯೬೭], ಗೋಪಾಲಕೃಷ್ಣ ಅಡಿಗರ ‘ವರ್ಧಮಾನ’ [೧೯೭೦] ಗಿರಿಯವರ ‘ಗತಿ-ಸ್ಥಿತಿ’[೧೯೭೧]- ಇಲ್ಲೆಲ್ಲಾ ಯುವಜನಾಂಗದ ಅಸಹನೆ, ಚಡಪಡಿಕೆ, ರೋಷ, ಪ್ರತಿಭಟನೆಯಿತ್ತು. ಯುವಕರ ನಾಡಿಮಿಡಿತವನ್ನು ಪುಟ್ಟಣ್ಣ ಕಣಗಾಲ್ ಸಿನಿಮಾದಲ್ಲಿ ಸೆರೆಹಿಡಿದರು. ‘ರಾಮಾಚಾರಿ’ ಯುವ ಮನಸ್ಸಿನ ಪ್ರತಿನಿಧಿಯಾದರು. ನವೋದಯ ಮನಸ್ಸಿನ ಕಾದಂಬರಿಕಾರ ತ.ರಾ.ಸುಗೆ ಇದು ‘ಕೇರೆಹಾವು’ ಆಗಿ ಕಂಡರೂ ರಾತ್ರಿ ಬೆಳಗಾಗುವುದರೊಳಗಾಗಿ ವಿಷ್ಣುವರ್ಧನ ಎಂಬ ‘ಆಂಗ್ರಿ ಯಂಗ್ ಮ್ಯಾನ್’ ಉದಯವಾಗಿದ್ದ.

‘ನಾಗರಹಾವು’ ನಾನು ನೋಡಿದ ನಾಲ್ಕನೆಯ ಸಿನಿಮಾ. ಅದು ಬಿಡುಗಡೆಯಾದ ನಾಲ್ಕೈದು ವರ್ಷಗಳ ನಂತರ ನಾನದನ್ನು ನೋಡಿದೆ. ಅದಕ್ಕೆ ಕಾರಣವಿದೆ. ನನ್ನೂರು ಕುಕ್ಕೆಸುಬ್ರಹ್ಮಣ್ಯ ಹತ್ತಿರದ ಒಂದು ಹಳ್ಳಿ. ಕುಕ್ಕೆಯಲ್ಲಿ ಇಂದಿಗೂ ಥಿಯೇಟರ್ ಇಲ್ಲ. ಸಿನಿಮಾ ನೋಡಬೇಕಾದರೆ ದೂರದ ಪುತ್ತೂರಿಗೆ ಹೋಗಬೇಕು. ಅದು ಆಗದ ವಿಚಾರ. ಯಾಕೆಂದರೆ ಸಿನಿಮಾ ನೋಡಬೇಕಾದರೆ ಆ ರಾತ್ರಿ ಅಲ್ಲಿ ಉಳಿಯಲೇ ಬೇಕಾಗಿತ್ತು. ಹಾಗಾಗಿ ನಾನು ಹತ್ತನೆಯ ತರಗತಿ ಕೊನೆಯವರೆಗೆ ಸಿನಿಮಾ ನೋಡಲೇ ಇಲ್ಲ.

ನಮಗೆ ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಗೆ ಪುತ್ತೂರು ಸೆಂಟರ್ ಆಗಿತ್ತು. ಒಟ್ಟು ಹತ್ತು ದಿನ ಅಲ್ಲಿರಬೇಕಿತ್ತು. ಬೆಳಿಗ್ಗೆ ಪರೀಕ್ಷೆ ಬರೆದು ಸಂಜೆ ಫಸ್ಟ್ ಶೋ ಸಿನಿಮಾಕ್ಕೆ ಹೋಗುತ್ತಿದ್ದೆ .ಹತ್ತು ದಿನದಲ್ಲಿ ನಾಲ್ಕು ಸಿನೆಮಾ ನೋಡಿದ್ದೆ. ಬಂಗಾರದ ಮನುಷ್ಯ, ಮಯೂರ, ನಾಗರ ಹಾವು, ಕಿಟ್ಟುಪುಟ್ಟು. ಪುತ್ತೂರಲ್ಲಿ ಆಗ ಒಂದು ಥಿಯೇಟರ್ ಮತ್ತು ಎರಡು ಟೆಂಟ್ ಮಂದಿರಗಳಿದ್ದವು.
ನಾಗರಹಾವು ಸಿನೇಮಾ ನೋಡುವುದಕ್ಕೆ ಮೊದಲೇ ನನಗೆ ಅದರ ಹಾಡುಗಳ ಪರಿಚಯ ಆಗಿತ್ತು. ಯಾಕೆಂದರೆ ನನ್ನತ್ರ ರೇಡಿಯೋ ಇತ್ತು. ಹಾಗಾಗಿ ‘ಹಾವಿನ ದ್ವೇಷ ಹನ್ನೆರಡು ವರ್ಷ...’ ನನಗೆ ತುಂಬಾ ಇಷ್ಟದ ಹಾಡಾಗಿತ್ತು. ಅದಕ್ಕೂ ಒಂದು ಹಿನ್ನೆಲೆಯಿದೆ; ನಮ್ಮಜ್ಜನಿಗೆ ಇಬ್ಬರು ಹೆಣ್ಣುಮಕ್ಕಳು.ಅಜ್ಜ ತೀರಿಕೊಂಡ ಮೇಲೆ ಅಜ್ಜಿ ಆಸ್ತಿಯನ್ನು ಹೆಣ್ಣುಮಕ್ಕಳಿಗೆ ಪಾಲು ಮಾಡಿ ಕೊಟ್ಟರು. ಅಜ್ಜಿಯನ್ನು ನೋಡಿಕೊಳ್ಳುವ ಜವಾಬ್ದಾರಿ ನಮ್ಮಮ್ಮನಿಗೆ ಬಂತು. ‘ನೀನು ಅಜ್ಜಿಯನ್ನು ನೋಡಿಕೊಂಡು ಅಲ್ಲಿಯೇ ಶಾಲೆಗೆ ಹೋಗು’ ಎಂದು ನಮ್ಮ ಅಪ್ಪ-ಅಮ್ಮ ನನ್ನನ್ನು ಅಜ್ಜಿ ಮನೆಗೆ ಕಳುಹಿಸಿದರು. ಒಬ್ಬ ಅಡುಗೆಯವರನ್ನೂ ಗೊತ್ತು ಮಾಡಿದರು. ನಾನಾಗ ಏಳನೇ ತರಗತಿಯಲ್ಲಿದ್ದೆ.

ನಮ್ಮ ದೊಡ್ಡಮ್ಮನ ಆಸ್ತಿಯನ್ನು ಅವರ ಮಗ ನೋಡಿಕೊಳ್ಳುತ್ತಿದ್ದ. ಆಗ ಒಂದು ಘಟನೆ ನಡೆಯಿತು. ಅವರ ಇನ್ನೊಬ್ಬ ಮಗ ಪುರುಷೋತ್ತಮ ಬಿಳಿಮಲೆ, ತನಗೆ ಸೈನ್ಸ್ ನಲ್ಲಿ ಆಸಕ್ತಿಯಿಲ್ಲ, ಆರ್ಟ್ಸ್ ಓದುತ್ತೇನೆ ಎಂದು ಅಜ್ಜಿ ಊರಿಗೆ ಅಣ್ಣನ್ನಲ್ಲಿಗೆ ಬಂದ. ಅವರಿಬ್ಬರೂ ಅಜ್ಜಿ ಮನೆಯಲ್ಲಿರುವುದನ್ನು ಕೇಳಿ ನಮ್ಮೂರಿನಿಂದ ನನ್ನಣ್ಣನೂ ಬಂದ. ಮೂರು ಜನ ಅಣ್ಣ ತಮ್ಮಂದಿರೂ ಜೋತೆಯಾದರೆಂದರೆ ಕೇಳಬೇಕೆ? ನಮ್ಮ ಜಮೀನಿನ ಮೇಲೆ ಮೇಸ್ಟ್ರು ಒಬ್ಬರಿದ್ರು. ನಮ್ಮ ಗದ್ದೆಗೆ ನೀರು ಬಿಡಲು ಅವರದು ಯಾವಾಗಲೂ ತಕರಾರು. ಅವರ ಮನೆ ಸ್ವಲ್ಪ ತಗ್ಗಿನಲ್ಲಿತ್ತು. ಅವರಿಗೆ ನಾಲ್ಕು ಮಂದಿ ಹೆಣ್ಣು ಮಕ್ಕಳು. ಎಲ್ಲರೂ ನನ್ನ ಓರಗೆಯವರೇ. ನನ್ನ ಈ ಮೂವರೂ ಅಣ್ಣಂದಿರು ನಮ್ಮ ಮನೆಯ ಪಕ್ಕದಲ್ಲಿರುವ ಪೇರಲೆ ಮರವನ್ನೇರಿ ಕೋರಸ್ಸಿನಲ್ಲಿ ’ಹಾವಿನ ದ್ವೇಷ ಹನ್ನೆರಡು ವರುಷ... ನಮ್ಮ ದ್ವೇಷ ನೂರು ವರುಷ..ಮೇಸ್ಟ್ರೆ..’ ಎನ್ನುತ್ತಾ ಹಾಡಿದ್ದೇ ಹಾಡಿದ್ದು. ಆ ಹಾಡಿಗೆ ನಾನು ಜೊತೆಗೂಡಿಸಿ ’ಗಂಡು ಬೀರಿ’ ಎಂಬ ಹೆಸರು ಪಡೆದುಕೊಂಡಿದ್ದೆ. ಅದೇ ಪೇರಲೆ ಮರದಲ್ಲಿ ಮರಕೋತಿಯಾಡುತ್ತಿದ್ದೆವು. ನಾನು ಹತ್ತಾರು ಬಗೆಯಲ್ಲಿ ಸಿಳ್ಳೆ ಹೊಡೆಯಲು ಕಲಿತ್ತದ್ದೆ ಈ ಮರದಡಿಯಲ್ಲಿ.

ಈ ಮೂವರೂ ಆ ಕಾಲದಲ್ಲಿ ವಿಷ್ಣುವರ್ಧನನ ಅಭಿಮಾನಿಯಾಗಿದ್ದರು ಅಂತ ಕಾಣುತ್ತೆ. ವಿಷ್ಣು ತರಹ ಜೊಂಪೆ ಕೂದಲು ತಮ್ಮದಾಗಬೇಕೆಂದು ಆಗಾಗ ನೀರು ಹಾಕಿ ತಿದ್ದಿ ತೀಡಿ ಬಾಚಿಕೊಳ್ಳುತ್ತಿದ್ದರು. ವಿಷ್ಣುವರ್ಧನ್ ತುಂಬಾ ಬಟನ್ ಗಳಿಂದ ಕೂಡಿದ ಚಿತ್ರವಿಚಿತ್ರ ಶರ್ಟ್ ಗಳನ್ನು ಹಾಕುತ್ತಿದ್ದರು. ಗುತ್ತಿಗಾರಿನಲ್ಲಿ ಒಬ್ಬ ಒಳ್ಳೆಯ ಟೈಲರು ಇದ್ದರು. ಅವರಿಗೆ ನಾವೆಲ್ಲಾ ’ಟಿಪ್ ಟಾಪ್ ಟೈಲರ್’ ಎಂದೇ ಹೆಸರಿಟ್ಟಿದ್ದೆವು. ಇವರು ಒಂದು ಸೀರೆಯನ್ನು ಪರ್ಚೇಸ್ ಮಾಡಿ ಅದನ್ನು ಹರಿದು ಮೂರು ಲುಂಗಿಗಳನ್ನಾಗಿ ಆ ಟೈಲರ್ ನಿಂದ ಮಾಡಿಸಿಕೊಳ್ಳುತ್ತಿದ್ದರು. ಹುಡುಗಿಯರ ಸ್ಕರ್ಟ್ ಬಟ್ಟೆಯಿಂದ ಶರ್ಟ್ ಹೊಲಿಸಿಕೊಳ್ಳುತ್ತಿದ್ದರು. ಅದರ ಮೇಲೆಲ್ಲಾ ಚಿತ್ರ ವಿಚಿತ್ರ ಆಕಾರಗಳಲ್ಲಿ ಬಟನ್ ಗಳನ್ನು ಹೊಲಿಸಿಕೊಳ್ಳುತ್ತಿದ್ದರು. ಆ ಶರ್ಟ್- ಲುಂಗಿಗಳನ್ನು ಹಾಕಿಕೊಂಡು ಗುತ್ತಿಗಾರು ಪೇಟೆಗೆ ಹೊರಡುತ್ತಿದ್ದರು. ಅವರಿಗೆ ಪೇಟೆಯ ಜನ ’ತೀನ್ ಬ್ರದರ್ಸ್’ ಎಂದು ಹೆಸರಿಟ್ಟಿದ್ದರು. ನನ್ನ ಸ್ವಂತ ಅಣ್ಣನಂತೂ ನಮ್ಮ ಕಬ್ಬಿಣದ ಆಚಾರಿ ಚಂದ್ರಣ್ಣನತ್ರ ಹೇಳಿ ಎರಡು ಅಲಗಿನ ಚಾಕು ಮಾಡಿಸಿಕೊಂಡು ಅದನ್ನು ಸದಾ ತನ್ನ ಬಳಿಯೇ ಇಟ್ಟುಕೊಂಡಿರುತ್ತಿದ್ದ. ಇದು ಯುವಮನಸ್ಸಿನ ಮೇಲೆ ’ರಾಮಾಚಾರಿ’ ಮಾಡಿದ ಮೋಡಿ.

ಪುತ್ತೂರಿನಲ್ಲಿ ನಾನು ಪದವಿ ಓದುತ್ತಿದ್ದೆ. ಪ್ರೇಮದ ಬಗ್ಗೆ ಕನಸು ಕಾಣುವ ಕಾಲ.ಸುಂದರ, ವಿದ್ಯಾವಂತ, ಸುಸಂಸ್ಕೃತನಾದ ಹೀರೋ ವಿಷ್ಣುವರ್ಧನ್ ನಮ್ಮ ಕನಸುಗಳಿಗೆ ಮಾದರಿಯಾಗಿದ್ದ. ಹೊಂಬಿಸಿಲಿನ ಕನ್ನಡಕಧಾರಿ ಯುವ ವೈದ್ಯ ನಮ್ಮ ಮನಸ್ಸಿನಲ್ಲಿ ಸುಳಿದಾಡುತ್ತಿದ್ದ. ನನ್ನ ಗೆಳತಿಯೊಬ್ಬಳು ಈ ಚಿತ್ರದ ವಿಷ್ಣುವರ್ಧನನ ಪೋಸ್ಟ್ ಕಾರ್ಡ್ ಸೈಜಿನ ಸುಂದರ ಭಾವಚಿತ್ರವೊಂದನ್ನು ಕಳುಹಿಸಿಕೊಟ್ಟಿದ್ದಳು. ನಾನದನ್ನು ಬಹಳ ಕಾಲದವರೆಗೂ ಜೋಪಾನವಾಗಿ ಇಟ್ಟುಕೊಂಡಿದ್ದೆ. ಆತ ಭಾರತಿಯನ್ನು ಮದುವೆಯಾದಾಗ ನನಗೇನೂ ಅನ್ನಿಸಲಿಲ್ಲ. ಯಾಕೆಂದರೆ ಅದಾಗಲೇ ಅನಂತನಾಗ್ ನನ್ನ ಮನಸ್ಸಿನಲ್ಲಿ ಸದ್ದಿಲ್ಲದೆ ಬಂದು ಕೂತಿದ್ದ. ಆತ ಬಾಳ ಸಂಗಾತಿಯ ಕನಸಿಗೆ ಮಾದರಿಯಾಗಿದ್ದ. ಅಲ್ಲದೆ ಸಿನಿಮಾದ ಭ್ರಾಮಕ ಜಗತ್ತಿಗೂ ವಾಸ್ತವ ಬದುಕಿಗೂ ಇರುವ ಅಂತರದ ಸ್ಪಷ್ಟ ಅರಿವು ನನಗಿತ್ತು.

ನಾವು ಬೆಳೆಯುತ್ತಾ ಹೋದಂತೆ ನಮ್ಮ ಅಭಿರುಚಿಗಳೂ ಬದಲಾಗುತ್ತಾ ಹೋಗುತ್ತವೆ. ನಾಗರಹಾವನ್ನು ಮೆಚ್ಚಿದ್ದ ನಾನು, ಹೊಂಬಿಸಿಲಿಗೆ ಮನಸೋತಿದ್ದೆ. ಸುಪ್ರಭಾತವನ್ನು ಇಷ್ಟಪಟ್ಟಿದ್ದೆ. ಮಲಯ ಮಾರುತ, ಬಂಧನ, ನಿಶ್ಯಬ್ದ, ಲಾಲಿ, ಮುತ್ತಿನಹಾರಗಳು ನನ್ನಂಥ ಮಧ್ಯಮ ವರ್ಗದ ಮಹಿಳೆಯರ ಮನ ಗೆದ್ದಿದ್ದವು. ನಮ್ಮ ನೋವು ನಲಿವುಗಳಲ್ಲಿ, ಹತಾಶೆ-ಪ್ರತಿಭಟನೆಗಳಲ್ಲಿ ಆತನನ್ನು ಪಾಲುದಾರನನ್ನಾಗಿ ಕಾಣುತ್ತಿದ್ದೆವು. ಅತೀತದ ಆಕರ್ಷಣೆಯಿಂದ ’ಆಪ್ತ ಮಿತ್ರ’ವನ್ನೂ ನೋಡಿದ್ದೆ.
ಜನತೆ ರೂಪಿಸಿದ ಕಲಾವಿದನೊಬ್ಬ ಜನತೆಯ ಪ್ರತಿನಿಧಿಯಾಗಿ, ಅವರ ಸಮಸ್ಯೆಗಳಿಗೆ ಪ್ರತಿಸ್ಪಂದಿಸುವ ನಾಯಕನಾಗಿ ಕಾಣಿಸಿಕೊಂಡದ್ದು ’ಮಾತಾಡ್ ಮಾತಾಡ್ ಮಲ್ಲಿಗೆ’ ಯಲ್ಲಿ. ಅವರ ಹೆಗಲ ಮೇಲೆ ಹಸಿರು ಶಾಲು ಕಂಡು ನನಗಂತೂ ಸಂತಸವಾಗಿತ್ತು. ರಾಮಾಚಾರಿ ಯುವ ಮನಸ್ಸಿನ ಪ್ರತಿನಿಧಿಯಾಗಿದ್ದ. ಮಲ್ಲಿಗೆಯ ಹೂವಯ್ಯ ಸ್ವಾಭಿಮಾನಿ ರೈತರ ಸಂಕೇತವಾಗಿದ್ದ.ಇದು ಕಲಾವಿದನೊಬ್ಬ ಸ್ವಕೇಂದ್ರಿತ ಇಮೇಜಿನಿಂದ ಸಮೂಹದೆಡೆಗೆ ಪಯಣಿಸಿದ ಯಶೋಗಾಥೆ.

ಇಂದಿನ ಯುವಜನಾಂಗಕ್ಕೆ ಯಾರು ಮಾದರಿ ನಟರೋ ನನಗೆ ಗೊತ್ತಿಲ್ಲ. ಸಮಾಜದ ಯಾವ ಸಮಸ್ಯೆಗಳಿಗೆ ಸಿನಿಮಾ ಕನ್ನಡಿಯಾಗುತ್ತಿದೆಯೋ, ಅದು ಕೂಡ ಗೊತ್ತಾಗುತ್ತಿಲ್ಲ. ಅಡಿಗರ ’ಭೂಮಿಗೀತ’ದ ಕೊನೆಯ ಸಾಲುಗಳು ನೆನಪಾಗುತ್ತಿವೆ;

’ಹೆಳವನ ಹೆಗಲ ಮೇಲೆ ಕುರುಡ ಕೂತಿದ್ದಾನೆ;
ದಾರಿ ಸಾಗುವುದೆಂತೊ ನೋಡಬೇಕು’


[ಜನವರಿ ೩ರಂದು ವಿಜಯಕರ್ನಾಟಕದ ಸಾಪ್ತಾಹಿಕದಲ್ಲಿ ಪ್ರಕಟವಾದ ಲೇಖನ]

Thursday, December 24, 2009

ರೇಣುಕಾಚಾರ್ಯನಿಗೆ ಪಟ್ಟಾಭೀಷೇಕ- ಮಾನವಂತರಿಗಿದು ಕಾಲವಲ್ಲ.




ಅಂತೂ ಇಂತೂ ಹೊನ್ನಾಳಿಯ ರಸಿಕ ಚಕ್ರವರ್ತಿಗೆ ಕಿರೀಟಧಾರಣೆಯಾಯಿತು.
ಬ್ಲಾಕ್ ಮೈಲ್ ರಾಜಕೀಯ ಮೆಲುಗೈ ಪಡೆಯಿತು. ನನಗೆ ತಕ್ಷಣ ನೆನಪಿಗೆ ಬಂದದ್ದು ಕುಮಾರವ್ಯಾಸನ ಸಾಲುಗಳು;
”ಅರಸು ರಾಕ್ಷಸ, ಮಂತ್ರಿಯೆಂಬುವ ಮೊರೆವ ಹುಲಿ,
ಪರಿವಾರ ಹದ್ದಿನ ನೆರವಿ, ಉರಿ ಉರಿಯುತಿದೆ ದೇಶ,
ಬಡವರ ಬಿನ್ನಪವಿನ್ನಾರು ಕೇಳುವರು......’

ಉತ್ತರ ಕರ್ನಾಟಕದ ಜನ ಕಂಡು ಕೇಳರಿಯದ ನೆರೆ ಹಾವಳಿಯಿಂದ ತತ್ತರಿಸಿ, ಮತ್ತೆ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದಾರೆ. ಅವರಿಗೆ ಸರಕಾರದ, ಜನಪ್ರತಿನಿಧಿಗಳ ನೆರವಿನ ಹಸ್ತವಿಲ್ಲ. ಸಂತೈಸಬೇಕಾದವರೇ, ಭರವಸೆಯ ಹಸ್ತ ಚಾಚಬೇಕಾದವರೇ ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ತಮ್ಮ ಘನತೆಗೆ ತಕ್ಕುದಲ್ಲದ ರೀತಿಯಲ್ಲಿ ವರ್ತಿಸಿ ನಗೆ ಪಾಟಲಿಗೆ ಗುರಿಯಾಗುತ್ತಿದ್ದಾರೆ. ಯಡಿಯೂರಪ್ಪ ಮತ್ತವರ ಪರಿವಾರ ಕರ್ನಾಟಕದ ಪ್ರಾಕೃತಿಕ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ. ವೈಯಕ್ತಿಕ ನೆಲೆಯಲ್ಲಿ ಚಾರಿತ್ರ್ಯ ಹೀನರಾಗುತ್ತಿದ್ದಾರೆ. ಕುದುರೆಗೆ ಕಣ್ಣ ಪಟ್ಟಿ ಕಟ್ಟಿದಂತೆ ದುಡ್ಡು ಬಾಚಿಕೊಳ್ಳುವುದೇ ಎಲ್ಲರ ಗುರಿಯಾಗಿದೆ. ಇದೆಲ್ಲದರ ಪರಿಣಾಮವಾಗಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಮಾನ ಹರಾಜಾಗುತ್ತಿದೆ.
’ಬಡವರ ಬಿನ್ನಪವ ಕೇಳುವವರಿಲ್ಲ’

ಇಂದು ಸಚಿವನಾಗಿ ಪ್ರಮಾಣವಚನ ಸ್ವೀಕರಿಸಿದ ರೇಣುಕಾಚಾರ್ಯ ತಮ್ಮ ಬಳಗವನ್ನುದ್ದೇಶಿಸಿ ಮಾತನಾಡುತ್ತಾ, ತಾನು ಹನುಮಂತ ಮುಖ್ಯಮಂತ್ರಿಗಳ ನಮ್ರ ಸೇವಕ ಎಂದು ಹೇಳಿಕೊಂಡರು. ಹೆಂಡ ಕುಡಿದ ಮಂಗ ಎಂದಿದ್ದರೆ ಅವರ ವ್ಯಕ್ತಿತ್ವಕ್ಕೆ ಸರಿಯಾದ ಹೋಲಿಕೆಯಾಗುತ್ತಿತ್ತು.

ಅವರ ಮಾತುಗಳನ್ನು ದೃಶ್ಯ ಮಾಧ್ಯಮದಲ್ಲಿ ನೋಡಿದಾಗ ರಾಮಾಯಣದ ಘಟನೆಯೊಂದು ನೆನಪಿಗೆ ಬಂತು; ರಾವಣನನ್ನು ಕೊಂದು ಸೀತೆಯನ್ನು ಅಯೋಧ್ಯೆಗೆ ಕರೆ ತಂದ ಮೇಲೆ ಕೃತಜ್ನಾಪೂರ್ವಕವಾಗಿ ರಾಮನ ಅರಮನೆಯಲ್ಲಿ ಕಪಿಸೈನಕ್ಕೆ ಭೋಜನಕೂಟವನ್ನು ಏರ್ಪಡಿಸಲಾಗಿತ್ತು. ಭೂರಿಬೋಜನದಲ್ಲಿ ಉಪ್ಪಿನಕಾಯಿಯೂ ಇತ್ತು. ಒಂದು ಮರಿ ಮಂಗ ಅದನ್ನು ಅಂಗೈನಲ್ಲಿ ತೆಗೆದುಕೊಂಡು ಬೆರಳುಗಳಿಂದ ಮಡಚಿ ಒತ್ತಿ ಹಿಡಿದು ಚೀಪಲು ನೋಡಿದಾಗ ಅದರ ಗೊರಟು ಮೇಲಕ್ಕೆ ಹಾರಿತಂತೆ. ತಕ್ಷಣ ಮರಿಮಂಗ ’ನನಗಿಂತ ಎತ್ತರ ಜಿಗಿತಿಯಾ’ ಎಂದು ಊಟ ಬಿಟ್ಟು ಗೊರಟಿಗಿಂತ ಮೇಲಕ್ಕೆ ಜಿಗಿತಂತೆ. ಪಕ್ಕದಲ್ಲಿ ಕೂತ ಇನ್ನೊಂದು ಮಂಗ ಮರಿಮಂಗನ ಜಿಗಿತ ಕಂಡು, ’ನಿನಗಿಂತ ಎತ್ತರಕ್ಕೆ ನಾ ಜಿಗಿಯಬಲ್ಲೆ’ ಎನ್ನುತ್ತಾ ಮೇಲಕ್ಕೆ ಜಿಗಿಯಿತಂತೆ. ಅದನ್ನು ಕಂಡು ಇನ್ನೊಂದು, ಮಗದೊಂದು ಎನ್ನುತ್ತಾ ಊಟದ ಪಂಕ್ತಿಯಲ್ಲಿದ್ದ ಎಲ್ಲಾ ಮಂಗಗಳೂ ಲಾಗ ಹೊಡೆಯತೊಡಗಿದವಂತೆ. ಕೊನೆಗೆ ಹನುಮಂತನೂ ಇವರಲ್ಲಿ ಸೇರಿಕೊಂಡನಂತೆ.

’ಹುಟ್ಟು ಗುಣ ಘಟ್ಟ ಹತ್ತಿದರೂ ಹೋಗದು.’ ಪಾಳೆಗಾರಿಕೆ ಗುಣಗಳನ್ನು ರಕ್ತಗತವಾಗಿಸಿಕೊಂಡಿರುವ ರೆಡ್ಡಿ ಬಳಗ, ಪುರುಷ ಪ್ರಾಧಾನ್ಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಬಿಜೆಪಿ ಸರಕಾರ, ಸಿಕ್ಕಷ್ಟು ಬಾಚಿಕೊಳ್ಳೋಣ ಎನ್ನುವ ಆಸೆಬುರುಕ ಜನಪ್ರತಿನಿಧಿಗಳು- ಮಾನವಂತರಿಗಿದು ಕಾಲವಲ್ಲ.

Sunday, December 13, 2009

ರೈತರಿಗಿನ್ನು ದೇವರೇ ಗತಿ!





ಬಳ್ಳಾರಿಯ ವಿವಾದಿತ, ಉದ್ದೇಶಿತ ವಿಮಾನ ನಿಲ್ದಾಣದ ಸರ್ವೆ ಕಾರ್ಯಕ್ಕೆ ಬಂದಿದ್ದ ಸಿಬ್ಬಂದಿಯಲ್ಲಿ ಒಬ್ಬನನ್ನು ರೈತರು ತಮ್ಮ ವಶಕ್ಕೆ ತೆಗೆದುಕೊಂಡು ಒತ್ತೆಯಾಳಾಗಿ ಇಟ್ಟುಕೊಂಡಾಗ, ಕೊನೆಗೂ ರೈತರ ತಾಳ್ಮೆಯ ಕಟ್ಟೆಯೊಡೆಯಿತು; ಅವರ ಹೋರಾಟಕ್ಕೆ ಸೈದ್ಧಾಂತಿಕ ತಳಹದಿಯೊಂದು ಒದಗಿಬಿಟ್ಟಿತು, ಇನ್ನು ಪ್ರತಿಭಟನೆ ತೀವ್ರಗೊಳ್ಳುತ್ತದೆಯೆಂದು ಅಂದುಕೊಳ್ಳುತ್ತಿರುವಾಗಲೇ ಎಲ್ಲವೂ ಠುಸ್ಸಾಯಿತು.ರೈತರು ಆತನನ್ನು ಮುಕ್ತಗೊಳಿಸಿದರು.

’ನಾನು ದಾರಿ ತಪ್ಪಿದ್ದೆ. ರೈತರು ನನಗೆ ದಾರಿ ತೋರಿಸಿದರು.ಅವರೇನು ತನ್ನನ್ನು ಒತ್ತೆಯಾಳಾಗಿ ಇಟ್ಟುಕೊಂಡಿಲ್ಲ’ ಎಂದು ರೈತರೊಡನಿದ್ದಾಗ ಮಾಧ್ಯಮಕ್ಕೆ ಹೇಳಿದ್ದ ಆತ ತಿರುಗಿಬಿದ್ದು ಪೋಲಿಸ್ ಸ್ಟೇಷನ್ ನಲ್ಲಿ ರೈತ ಮುಖಂಡ ಮಲ್ಲಿಕಾರ್ಜುನ ರೆಡ್ಡಿ ವಿರುದ್ಧವೇ ಅಪಹರಣದ ಕೇಸು ದಾಖಲಿಸಿದ. ಪೋಲಿಸರು ೫೦ ಮಂದಿಯನ್ನು ಬಂದಿಸಿದರು.

ಬಳ್ಳಾರಿಯಲ್ಲಿ ಏನು ಬೇಕಾದರೂ ಆಗಬಹುದು!

ತುಂಗಭದ್ರೆಯ ನೀರುಂಡು ಹಸಿರಿನಿಂದ ಕಂಗೊಳಿಸುತ್ತಿರುವ ಚಾಗನೂರು,ಸಿರಿವಾರ ಗ್ರಾಮಗಳು ಸರಕಾರಿ ಕಡತಗಳಲ್ಲಿ ಖುಷ್ಕಿ ಜಮೀನಾಗಿ ಪರಿವರ್ತನೆಗೊಳ್ಳಬಹುದು. ಸ್ಥಳೀಯ ಜನಪ್ರತಿನಿಧಿಗಳನ್ನು ಸಾರಾಸಗಟಾಗಿ ಖರೀದಿ ಮಾಡಿ ’ರೆಸಾರ್ಟ್ ಅರೆಸ್ಟ್’ ಮಾಡಿ ಇಡಬಹುದು.

’ನಮ್ಮದು ಖುಷ್ಕಿ ಜಮೀನಲ್ಲ; ಅದು ನೀರಾವರಿ ಜಮೀನು; ಫಲವತ್ತಾದ ಕಪ್ಪು ಮಣ್ಣು; ಇಲ್ಲಿ ನಾವು ಹತ್ತಿ. ತೊಗರಿ, ಜೋಳ, ಮೆಕ್ಕೆಜೋಳ, ಮೆಣಸಿನಕಾಯಿ, ಕಡಲೆ,ತರಕಾರಿಗಳನ್ನು ಬೆಳೆದು ಸ್ವಾವಲಂಬಿಯಾಗಿ ಬದುಕುತ್ತಿದ್ದೇವೆ. ನಮ್ಮ ಅನ್ನವನ್ನು ಕಿತ್ತುಕೊಳ್ಳಬೇಡಿ. ನಮ್ಮ ಪ್ರಾಣ ಹೋದರೂ ಜಮೀನು ಬಿಟ್ಟುಕೊಡುವುದಿಲ್ಲ’ ಎಂದು ರೈತರು ಒಂದು ವರ್ಷದಿಂದ ಪ್ರತಿಭಟಿಸುತ್ತಿದ್ದಾರೆ.

ಬಳ್ಳಾರಿಜಿಲ್ಲೆಯ ಉಸ್ತುವಾರಿ ಸಚಿವರೂ, ಗಣಿದೊರೆಗಳೂ ಆದ ಜನಾರ್ಧನ ರೆಡ್ಡಿ ಮತ್ತವರ ಬಳಗ ಇದನ್ನೊಂದು ಪ್ರತಿಷ್ಟೆಯ ವಿಷಯವಾಗಿ ಪರಿಗಣಿಸಿದ್ದಾರೆ. ಅವರ ದಾಕ್ಷಿಣ್ಯದಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ’ ಬಳ್ಳಾರಿ ವಿಮಾನ ನಿಲ್ದಾಣ ಮಾಡಿಯೇ ಸಿದ್ದ’ ಎನ್ನುತ್ತಿದ್ದಾರೆ.

ದೀನ-ದಲಿತರು, ನೊಂದವರು, ಅಸಹಾಯಕರೆಡೆಗೆ ಪ್ರಭುತ್ವವೇ ನಡೆದು ಬರಬೇಕು. ಆದರೆ ಆಡಳಿತ ಪಕ್ಷ ಯಾವುದು? ವಿರೋಧಪಕ್ಷ ಯಾವುದು? ಎಂಬ ಗೊಂದಲದಲ್ಲಿ ನಾವಿದ್ದೇವೆ. ನಮ್ಮ ಅನುಕಂಪ ಈಗ ಅವರಿಗೇ ಬೇಕಾಗಿದೆ!

ಇನ್ನು ಸದಾ ವಿರೋಧ ಪಕ್ಷದಂತೆ ಕೆಲಸ ಮಾಡಬೇಕಾದ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾದ ಪತ್ರಿಕಾರಂಗ ರಾಜಕಾರಣಿಗಳ, ಉದ್ದಿಮೆದಾರರ ಕೃಪಾಕಟಾಕ್ಷದಲ್ಲಿ ಸಮೃದ್ಧವಾಗಿ ಬೆಳೆಯುತ್ತಲಿದೆ! ರಾಜಧಾನಿಯನ್ನು ಬಿಟ್ಟರೆ ಬೇರೆಡೆ ಅವರ ಅರಿವು ವಿಸ್ತರಿಸುವುದಿಲ್ಲ. ಪತ್ರಕರ್ತರ ಆದ್ಯತೆಗಳೇ ಈಗ ಬೇರೆ. ಸಮಾಜದ ಧ್ವನಿಯಾಗಬೇಕಾಗಿದ್ದ ಸಾಹಿತಿ-ಕಲಾವಿದರು ಸ್ವಕೇಂದ್ರಿತ ಗುಂಪುಗಳನ್ನು ಕಟ್ಟಿಕೊಂಡು ಪರಸ್ಪರ ಹೊಗಳಿಕೊಳ್ಳುತ್ತಾ ಭ್ರಮಾಲೋಕದಲ್ಲಿ ಮುಳುಗಿದ್ದಾರೆ.
ಮಂಗಳವಾರ ಸಿರಿವಾರ, ಚಾಮಲಾಪುರಗಳಲ್ಲಿ ರೈತರ ಪ್ರತಿಭಟನೆ ಮುಂದುವರಿಯಿತು. ಬುಧವಾರ ಹಾಸನ, ಚಾಮರಾಜನಗರದಲ್ಲಿ ಭೂಸ್ವಾದೀನ ವಿರೋಧಿಸಿ ರೈತರು ಪ್ರತಿಭಟನೆ ನಡೆಸಿದರು. ಗುರುವಾರ ದಾವಣಗೆರೆ, ಚಾಮರಾಜ ನಗರಗಳಲ್ಲಿ ಪೋಲಿಸರು ಲಾಠಿ ಬೀಸಿದರು. ಅಕ್ಷರಶಃ ಅಟ್ಟಾಡಿಸಿಕೊಂಡು ರಕ್ತ ಬರುವಂತೆ ಹೊಡೆದರು. ಮಹಿಳೆಯರನ್ನೂ ಬಿಡಲಿಲ್ಲ. ಜಿಲ್ಲಾ ದಂಡಾಧಿಕಾರಿಯೆಂದು ಕರೆಯಲಾಗುವ ಜಿಲ್ಲಾಧಿಕಾರಿಯವರೇ ಸ್ವತಃ ಕೈಯಲ್ಲಿ ಲಾಠಿ ಹಿಡಿದು ರೈತರನ್ನು ನಿಯಂತ್ರಿಸುತ್ತಿದ್ದರು. ಪುಣ್ಯಕ್ಕೆ ’ಚಡ್ಡಿ’ ಹಾಕಿರಲಿಲ್ಲ ಅಷ್ಟೇ!. ಇವರು ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಟಿ.ಡಿ.ಪವಾರ್ ಸೇರಿ ೪೦ ಮಂದಿ ರೈತರನ್ನು ನ್ಯಾಯಾಂಗ ಬಂದನಕ್ಕೆ ತಳ್ಳಿದರು.

ಪೋಲಿಸರು ಲಾಠಿ ಚಾರ್ಜ್ ಮಾಡಿದ್ದನ್ನು ಶನಿವಾರ ದಾವಣಗೆರೆಯಲ್ಲಿ ಕೃಷಿ ಸಚಿವ ರವೀಂದ್ರನಾಥ್ ಸಮರ್ಥಿಸಿಕೊಂಡರು. ರೈತರು ಸಂಯಮದಿಂದ ವರ್ತಿಸಬೇಕೆತ್ತಿಂದು ಹೇಳಿದರು. ಕಳೆದ ವರ್ಷ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಹೊಸದರಲ್ಲೇ ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್ ನಡೆಸಿ ಇಬ್ಬರನ್ನು ಬಲಿ ತೆಗೆದುಕೊಂಡಿತ್ತು.ಅದಾದ ಒಂದು ವಾರಕ್ಕೆ ಇದೇ ಸಚಿವರ ಪಕ್ಕದ ಕ್ಶೇತ್ರದ ಇಬ್ಬರು ಸಚಿವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ಇದೇ ಕೃಷಿ ಸಚಿವರು ಹೇಳಿದ್ದೇನು ಗೊತ್ತೇ? ನಿನ್ನೆ ಸತ್ತವ ರೈತನಲ್ಲ. ಇವತ್ತು ರೈತ ಸತ್ತಿರುವ ಬಗ್ಗೆ ನನಗೇನೂ ಗೊತ್ತಿಲ್ಲ’. ಇವರು ನಮ್ಮ ಕೃಷಿ ಸಚಿವರು!
ನಾಡಿಗೇ ಅನ್ನ ನೀಡುವ ರೈತ ಅಷ್ಟು ನಿಕೃಷ್ಟನೇ? ಅವರೇನು ಸಮಾಜಘಾತುಕ ಶಕ್ತಿಗಳೇ? ಪೋಲಿಸರ ದೃಷ್ಟಿಯಲ್ಲಿ ಕ್ರಿಮಿನಲ್ಸ್ ಗೂ ರೈತರಿಗೂ ವ್ಯತ್ಯಾಸವೇ ಇಲ್ಲವೇ? ಗೃಹಮಂತ್ರಿಗಳೇ ಉತ್ತರಿಸಬೇಕು. ”ಮುಖ್ಯಮಂತ್ರಿಗಳು ವಿಧಾನಸೌಧದಲ್ಲಿ ಔದಾರ್ಯವಾಗಿ ಮಾತನಾಡಿ ಬೀದಿಯಲ್ಲಿ ಹೊಡೆಸ್ತಾರೆ”ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳುತ್ತಾರೆ.

ಹಸಿರು ಶಾಲು ಹೊದ್ದು ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿಗಳು ತಮ್ಮ ಅಧಿಕಾರದ ಹೊಸ್ತಿಲಲ್ಲಿರುವಾಗಲೇ ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರು ನಡೆಸಿದರು. ಆ ಪರಿಸ್ಥಿತಿ ಇಂದಿಗೂ ಮುಂದುವರಿಯುತ್ತಲಿದೆ.

ರೈತರು ತಮಗಾಗುತ್ತಿರುವ ಅನ್ಯಾಯ, ದಬ್ಬಾಳಿಕೆ, ಶೋಷಣೆ, ಮಾರುಕಟ್ಟೆ ತಾರತಮ್ಯ...ಇತ್ಯಾದಿಗಳ ಬಗ್ಗೆ ಆಳುವವರ ಮುಂದೆ, ಆಧಿಕಾರಿಗಳ ಮುಂದೆ ಹೇಳಿಕೊಳ್ಳಲು ಕಾತರಿಸುತ್ತಿದ್ದಾರೆ. ಆದರೆ ಅವರಿಗೆ ಪುರುಸೊತ್ತಿಲ್ಲ. ಯಾರನ್ನಾದರೂ ಮಾತುಕತೆಗೆ ಕಳುಹಿಸುವ ವ್ಯವಧಾನವಿಲ್ಲ. ರೈತರ ಮೊರೆ ಅರಣ್ಯ ರೋಧನವಾಗುತ್ತಿದೆ.

ಉಳ್ಳವರಿಗೆ ತಮ್ಮ ಅತ್ಯುನ್ನತಿಗಾಗಿ ರೈತರ ಫಲವತ್ತಾದ ಭೂಮಿಯೇ ಬೇಕಾಗಿದೆ. ವಿಶೇಷ ಅರ್ಥಿಕ ವಲಯವನ್ನೇ ತೆಗೆದುಕೊಳ್ಳಿ; ಅಲ್ಲೆಲ್ಲಾ ವಶಪಡಿಸಿಕೊಂಡ, ವಶಪಡಿಸಿಕೊಳ್ಳುತ್ತಿರುವ ಭೂಮಿಯೆಲ್ಲವೂ ಫಲವತ್ತಾದ ಭೂಮಿಯೇ. ಯಾಕೆ ಇವರಿಗೆ ಒಣಭೂಮಿಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಆಗುವುದಿಲ್ಲವೇ? ಹೀಗೆ ಕೃಷಿ ಭೂಮಿಯೆಲ್ಲಾ ಕೈಗಾರಿಕ ವಲಯಗಳಾಗಿ, ವಸತಿನಿಲಯಗಳಾಗಿ ಬದಲಾದರೆ ಭವಿಷ್ಯದಲ್ಲಿ ಆಹಾರ ಭದ್ರತೆಯೆಂಬುದು ಬಹುದೊಡ್ಡ ಸಮಸ್ಯೆಯಾಗಿ ಕಾಡಲಿದೆ. ಇದರ ಜೊತೆಗೆ ಮೂಡುವ ಬಹು ಮುಖ್ಯ ಪ್ರಶ್ನೆ ಎಂದರೆ ನಮಗೆ ಯಾವ ರೀತಿಯ ಅಬಿವೃದ್ಧಿ ಬೇಕು? ಅಬಿವೃದ್ಧಿ ತಂದಿತ್ತ ಸಮಸ್ಯೆಗಳು ಈಗ ಕೊಪೆನ್ ಹೆಗನ್ ನಲ್ಲಿ ನಡೆಯುತ್ತಿರುವ ’ಹವಾಮಾನ ವೈಪರಿತ್ಯ ಶ್ರ‍ಂಗ ಸಭೆ’ಯಲ್ಲಿ ಚರ್ಚಿತವಾಗುತ್ತಲಿದೆ.

ಬಳ್ಳಾರಿಗೆ ಬನ್ನಿ; ಇಲ್ಲಿ ಈಗಾಗಲೇ ಎರಡು ವಿಮಾನ ನಿಲ್ದಾಣಗಳಿವೆ. ನಗರದ ಕಂಟೋನ್ಮೆಂಟ್ ಬಳಿ ಇರುವ ಐತಿಹಾಸಿಕ ವಿಮಾನ ನಿಲ್ದಾಣ. ಇದು ಎರಡನೇ ಮಹಾಯುದ್ದ ಕಾಲದಲ್ಲಿ ವಾಯುನೆಲೆಯಾಗಿ ಬಳಕೆಯಾಗಿದ್ದ ವಿಮಾನ ನಿಲ್ದಾಣ. ಇನ್ನೊಂದು ನಗರದಿಂದ ೪೦ ಕಿ.ಮೀ ದೂರದಲ್ಲಿರುವ ತೋರಣಗಲ್ಲಿರುವ ಜಿಂದಾಲ್ ಏರ್ ಪೋರ್ಟ್. ವಿಶ್ವ ಪರಂಪರೆ ಪಟ್ಟಿಯಲ್ಲಿರುವ ಹಂಪೆ ಹಾಗು ಬೆಳೆಯುತ್ತಿರುವ ಕೈಗಾರಿಕೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮೂರನೆಯ ವಿಮಾನ ನಿಲ್ದಾಣಕ್ಕಾಗಿ ಸರ್ವೆ ಕಾರ್ಯ ನಡೆಸಿ ನಗರದಿಂದ ೧೨ ಕಿ.ಮೀ ದೂರದಲ್ಲಿರುವ ಪಾಪಿನಾಯಕನಹಳ್ಳಿಯನ್ನು ಸೂಕ್ತ ಪ್ರದೇಶವೆಂದು ೧೯೯೬ರಲ್ಲಿ ಎಂ.ಪಿ.ಪ್ರಕಾಶ್ ಅಧಿಕಾರವಧಿಯಲ್ಲಿ ಗುರುತಿಸಲಾಗಿತ್ತು. ಆದರೆ ಅದಕ್ಕೆ ಚಾಲನೆ ದೊರೆತಿರಲಿಲ್ಲ.

ವಿಮಾನ ನಿಲ್ದಾಣಕ್ಕೆ ಸೂಕ್ತ ಸ್ಥಳವೆಂದು ಗುರುತಿಸಲ್ಪಟ್ಟ ಪಾಪಿನಾಯಕಹಳ್ಳಿಯ ಒಣಭೂಮಿಯನ್ನು ಬಿಟ್ಟು ಚಾಗನೂರು, ಸಿರಿವಾರದ ನೀರಾವರಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಜನಾರ್ಧನ ರೆಡ್ಡಿ ಆದೇಶ ನೀಡಿದರು. ’ವಿಜಯನಗರ ಅರ್ಬನ್ ಡೆವಲಪ್ ಮೆಂಟ್ ಏರಿಯಾ’ ದೊಳಗೆ ಈ ಜಮೀನು ಬರುತ್ತದೆಯೆಂಬುದು ರೆಡ್ಡಿಗಳ ವಾದ. ಇದನ್ನು ವಿರೋಧಿಸಿ ರೈತರು ಕಳೆದ ಪೆ.೨೪ರಂದು ಶಾಂತಿಯುತ ಬೃಹತ್ ಮೆರವಣಿಗೆ ನಡೆಸಿದರು. ಆಗ ಪೋಲಿಸರು ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಸಿಡಿಸುವ ಮೂಲಕ ರೈತರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆಸಿತು. ಅದರೂ ರೈತರು ಧೃತಿಗೆಡದೆ ಪ್ರಭುತ್ವದ ವಿರುದ್ಧ ಹೊರಾಡುತ್ತಲೇ ಬರುತ್ತಿದ್ದಾರೆ. ಅವರ ಹೋರಾಟಕ್ಕೆ ನೈತಿಕ ಬೆಂಬಲ ನೀಡಲು ’ನರ್ಮದಾ ಬಚಾವೋ’ ಆಂದೋಲನದ ರೂವಾರಿ, ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್ ನ.೧೦ರಂದು ಚಾಗನೂರು, ಸಿರಿವಾರ ಗ್ರಾಮಕ್ಕೆ ಭೇಟಿ ನೀಡಿದ್ದರು. ರೈತರೊಡನೆ ಆಪ್ತ ಚರ್ಚೆ ನಡೆಸಿದ್ದರು.

ಈಗ ಮತ್ತೆ ರೈತರ ವಿರೋಧದ ನಡುವೆ, ಅವರನ್ನೆಲ್ಲಾ ಊರ ಹೊರಗಿಟ್ಟು, ಪೋಲಿಸ್ ಸರ್ಪಗಾವಲಿನಲ್ಲಿ ಸರಕಾರ ಸರ್ವೆ ಕಾರ್ಯ ಮುಗಿಸಿದೆ. ಚಾಮರಾಜನಗರದಲ್ಲಿ ಸ್ವತಃ ಜಿಲ್ಲಾಧಿಕಾರಿಯವರೇ ಲಾಠಿ ಹಿಡಿದು ಹಸಿರು ಶಾಲು ಹಾಕಿದ ರೈತರನ್ನು ಬೆದರಿಸುತ್ತಿದ್ದಾರೆ. ಅಧಿಕಾರ ವರ್ಗ ಎಂದೂ ರೈತ ಪರವಾಗಿರಲು ಸಾಧ್ಯವಿಲ್ಲ. ಆದರೆ ಜನಪ್ರತಿನಿಧಿಗಳು ಓಟು ಹಾಕಿದವರ ಋಣದಲ್ಲಿರಬೇಕಲ್ಲವೇ? ಪಾಪ ಅವರಿಗೆ ಮರೆವಿನ ರೋಗ!

ಮುಂದೇನು? ಈಗ ಅವರ ಬೆಂಬಲಕ್ಕೆ ಜನಪರ ಸಂಘಟನೆಗಳು ಮುಂದಾಗಬೇಕು. ನಾಡು-ನುಡಿ, ನೆಲ-ಜಲ ಸಂರಕ್ಷಣೆಗಾಗಿ ಪಣತೊಟ್ಟಿರುವ ಹಲವು ಸಂಘಟನೆಗಳು ನಮ್ಮಲ್ಲಿವೆ.ಅವು ರೈತರ ಬೆಂಬಲಕ್ಕೆ ನಿಲ್ಲಬೇಕು. ಆದರೆ ಅವೆಲ್ಲಾ ರಾಜಕೀಯ ಹಿತಾಸಕ್ತಿಗಳನ್ನು ಬಿಟ್ಟು ಬರಲು ಸಾಧ್ಯವೇ?. ’ರೈತ ಸಂಘ’ ಮತ್ತೆ ಮೈಕೊಡವಿ ನಿಲ್ಲಬೇಕು. ಒಟ್ಟಾಗಬೇಕು.

ಅಷ್ಟಕ್ಕೂ ರೆಡ್ಡಿಗಳಿಗೆ ಈ ಭೂಮಿಯೇ ಯಾಕೆ ಬೇಕು? ಸ್ಥಳಿಯರು ಹೇಳುವ ಪ್ರಕಾರ ಚಾಗುವಾರ ಮತ್ತುಸಿರಿವಾರದ ಸುತ್ತಮುತ್ತಲಿನ ಸುಮಾರು ೨೮೦ ಎಕ್ರೆ ಜಮೀನನ್ನು ರೆಡ್ಡಿಗಳು ಬೇನಾಮಿ ಹೆಸರಿನಲ್ಲಿ ಖರೀದಿ ಮಾಡಿದ್ದಾರಂತೆ. ಇಲ್ಲಿ ವಿಮಾನ ನಿಲ್ದಾಣ ಬಂದರೆ ಈ ಜಮೀನಿಗೆ ಚಿನ್ನದ ಬೆಲೆ ಬಂದು ರಿಯಲ್ ಎಸ್ಟೇಟ್ ಉದ್ಯಮ ಗರಿಗೆದರಬಹುದೆಂಬುದು ಅವರ ದೂರಾಲೋಚನೆ. ಅವರ ದೂರಾಲೋಚನೆ ರೈತರ ಪಾಲಿಗೆ ದುರಾಲೋಚನೆಯಾಗಿದೆ.

ಭೂಮಿ ಕಳೆದುಕೊಳ್ಳುತ್ತಿರುವ ರೈತರಿಗೆ ಎಕ್ರೆಗೆ ೧೨ ಲಕ್ಷ ರೂಪಾಯಿ ಪರಿಹಾರ ಕೊಡುತ್ತೇವೆ ಎಂಬುದು ಸರಕಾರದ ಸಮರ್ಥನೆ. ಆದರೆ ದುಡ್ಡುತಗೊಂಡು ರೈತರೇನು ಮಾಡಬಲ್ಲರು? ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಭೂಮಿ ಕೊಟ್ಟ ರೈತರೆಲ್ಲಾ ಎಕ್ರೆಗೆ ಕನಿಷ್ಟ ೫೦ ಲಕ್ಷದಿಂದ ಎರಡು ಕೋಟಿ ತನಕ ಪಡೆದುಕೊಂಡಿದ್ದರು. ಅದರಲ್ಲಿ ಬಹಳಷ್ಟು ಮಂದಿ ದುಂದುವೆಚ್ಚ ಮಾಡಿ ಇರುವ ದುಡ್ಡನ್ನೆಲ್ಲಾ ಕಳೆದುಕೊಂಡು ಜೀವನೋಪಾಯಕ್ಕಾಗಿ ಸಣ್ಣಪುಟ್ಟ ಉದ್ಯೋಗ ಮಾಡಿಕೊಂಡಿದ್ದಾರೆ.

ದುಡ್ಡು ಕರಗುತ್ತದೆ. ಅದರೆ ಭೂಮಿ ಹಾಗಲ್ಲ; ಅದು ಮೂಲಧನ. ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರಗೊಳ್ಳುತ್ತಲೇ ಹೋಗುತ್ತದೆ. ಅದರ ಬಡ್ಡಿಯಿಂದಲೇ ರೈತ ಜೀವನ ನಿರ್ವಹಣೆ ಮಾಡುತ್ತಾನೆ. ತನಗೆ ಅನ್ನ ನೀಡುವ ಭೂಮಾತೆಯನ್ನು ಆತ ದೇವರೆಂದು ಪೂಜಿಸುತ್ತಾನೆ; ಅದರೊಡನೆ ಭಾವನಾತ್ಮಕ ಸಂಬಂಧ ಬೆಳೆಸಿಕೊಳ್ಳುತ್ತಾನೆ. ಮಣ್ಣು ಮಾರಿ ದುಡ್ಡು ಬಾಚಿಕೊಳ್ಳುವವರಿಗಿದು ಅರ್ಥವಾಗದ ವಿಚಾರ.

Thursday, November 19, 2009

ಶೋಭಾ ಮಾಡಿದ ತಪ್ಪಾದರೂ ಏನು?





ಗ್ರಾಮೀಣಾಬಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಾಜಿ ಸಚಿವೆ ಶೋಭಾ ಕರಂದ್ಲಾಜೆಯವರ ರಾಜಿನಾಮೆಯನ್ನು ಕೇಂದ್ರ ವಸ್ತುವಾಗಿರುವ ’ಯಡಿಯೂರಪ್ಪ ಪ್ರಹಸನ’ದ ಹದಿನಾಲ್ಕು ದಿನಗಳ ಧಾರಾವಾಹಿಯನ್ನು ನೋಡುತ್ತಿರುವಾಗ ನನಗೆ ನೆನಪಿಗೆ ಬಂದದ್ದು,ನನ್ನ ಅಜ್ಜಿ ಬಾಲ್ಯದಲ್ಲಿ ಹೇಳುತ್ತಿದ್ದ ಬ್ರಹ್ಮ ರಾಕ್ಷಸನ ಕಥೆ. ಬಹಳ ರಂಜನಿಯವಾದ ಈ ಕಥೆಯಲ್ಲಿ ಬ್ರಹ್ಮರಾಕ್ಷಸನ ಪ್ರಾಣ ಏಳು ಸಮುದ್ರದಾಚೆಗಿರುವ ದ್ವೀಪದ ಯಾವುದೋ ಪೊಟರೆಯಲ್ಲಿರುವ ಪಕ್ಷಿಯಲ್ಲಿರುತ್ತದೆ. ಆ ಪಕ್ಷಿಯನ್ನು ಹುಡುಕಿ ಅದಕ್ಕೆ ಚಿತ್ರಹಿಂಸೆ ನೀಡಿದರೆ ಇಲ್ಲಿ ರಾಕ್ಷಸ ವಿಲಿವಿಲಿ ಒದ್ದಾಡುತ್ತಾನೆ. ಅಲ್ಲಿ ಅದರ ಕಾಲು ಮುರಿದರೆ ಇಲ್ಲಿ ರಾಕ್ಷಸನ ಕಾಲು ಮುರಿಯುತ್ತದೆ. ಅಲ್ಲಿ ಗೋಣು ಮುರಿದರೆ ಇಲ್ಲಿ ರಾಕ್ಷಸ ಸಾಯುತ್ತಾನೆ.
’ಯಡಿಯೂರಪ್ಪ ಪ್ರಹಸನ’ದಲ್ಲಿ ಪ್ರಾಣ ಪಕ್ಷಿಯನ್ನು ಹಿಂಸಿಸಲಾಗಿದೆ. ನಾಯಕ ವಿಲಿವಿಲಿ ಒದ್ದಾಡುತ್ತಿದ್ದಾನೆ.

ಶೋಭಾ ಸಿಕ್ಕ ಸಿಕ್ಕ ಮಾಧ್ಯಮಗಳಲೆಲ್ಲಾ ಪ್ರಶ್ನಿಸುತ್ತಿದ್ದಾರೆ ’ನಾನು ಮಾಡಿದ ತಪ್ಪೇನು?’

ನಾವು ಕೂಡಾ ನಮ್ಮಲ್ಲೇ ಪ್ರಶ್ನಿಸಿಕೊಳ್ಳುತ್ತೆದ್ದೇವೆ ’ಶೋಭಾ ಮಾಡಿದ ತಪ್ಪಾದರೂ ಏನು?’
ನಮ್ಮ ರಾಜ್ಯ ಸಚಿವ ಸಂಪುಟದಲ್ಲಿ ಮುವತ್ತಮೂರು ಜನ ಸಚಿವರಿದ್ದಾರೆ. ಅದರಲ್ಲಿರುವ ಏಕೈಕ ಮಹಿಳಾ ಸಚಿವೆ ಶೋಭಾ ಕರಂದ್ಲಾಜೆ. ರಾಜ್ಯದ ಮೂರು ಕೋಟಿ ಮಹಿಳೆಯರ ಪ್ರತಿನಿಧಿ. ಆದರೂ ಆಕೆಯ ರಾಜಿನಾಮೆಯ ಬಗ್ಗೆ ಒಂದೇ ಒಂದು ಮಹಿಳಾ ಧ್ವನಿಯಿಲ್ಲ ಯಾಕೆ? ಆಕೆಯ ರಾಜಿನಾಮೆ ಪಡೆಯಬಾರದು ಎಂದು ಆಕೆ ಪ್ರತಿನಿಧಿಸುತ್ತಿರುವ ಯಶವಂತಪುರದ ಒಂದಷ್ಟು ಜನ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿದರು. ಅಲ್ಲಿಯೂ ಮಹಿಳೆಯರ್ಯಾರೂ ಕಾಣಿಸಲಿಲ್ಲ. ಹೋಗಲಿ ಅವರ ಊರಿನ ಜನರಾದರೂ ಪ್ರತಿಕ್ರಿಯಿಸಿದರಾ ಅದೂ ಇಲ್ಲ. ಬೆಂಗಳೂರಿನಲ್ಲಿ ’ದಕ್ಷಿಣ ಕನ್ನಡ ಗೌಡರ ಸಂಘ’ ಒಂದಿದೆ. ಅದರಲ್ಲಿರುವವರೆಲ್ಲಾ ಆಕೆಯ ಬಂಧು-ಬಾಂಧವರೇ. ಕಳೆದ ಚುನಾವಣೆಯಲ್ಲಿ ಇವರೆಲ್ಲಾ ಯಶವಂತಪುರ ತುಂಬೆಲ್ಲಾ ಓಡಾಡಿ ಆಕೆಯ ಪರವಾಗಿ ಮತ ಯಾಚಿಸಿದ್ದರು. ಕೈಲಾದ ಆರ್ಥಿಕ ಸಹಾಯವನ್ನು ನೀಡಿದ್ದರು. ಈಗ ಅವರೆಲ್ಲಾ ಆಕೆಯ ಹೆಸರೆತ್ತಲೂ ಇಷ್ಟ ಪಡುವುದಿಲ್ಲ. ಯಾಕೆ?

ಯಾಕೆಂದರೆ ಆಕೆ ಹಿಂದಿನಂತಿಲ್ಲ; ಆಕೆಗೆ ಅಹಂಕಾರ ಬಂದಿದೆ ಎಂಬುದು ಅವರೆಲ್ಲರ ಆಪಾದನೆ. ಅದನ್ನು ರೆಡ್ಡಿ ಬಣದ ಶಾಸಕರು ಇನ್ನೊಂದು ರೀತಿಯಲ್ಲಿ ವ್ಯಾಖ್ಯಾನಿಸುತ್ತಾರೆ; ’ಶೋಭಾ ಸೂಪರ್ ಸಿಎಂ ತರಹ ವರ್ತಿಸುತ್ತಾರೆ’.
ಅಹಂಕಾರ ಮತ್ತು ಸ್ವಾಭಿಮಾನದ ಮಧ್ಯೆ ಬಹಳ ತೆಳುವಾದ ಗೆರೆಯಿರುತ್ತದೆ. ಮಹಿಳೆಯ ಸ್ವಾಬಿಮಾನ ಪುರುಷನ ಕಣ್ಣಿಗೆ ಅಹಂಕಾರವಾಗಿ ಕಾಣಿಸಬಹುದು. ಶೋಭಾ ಸ್ವಾಬಿಮಾನಿ. ಅದವಳ ಹುಟ್ಟುಗುಣ.
ಶೋಭಾ ರೈತಾಪಿ ಮನೆತನದಲ್ಲಿ ಹುಟ್ಟಿದ ಒಬ್ಬ ಸಾಮಾನ್ಯ ಹೆಣ್ಣುಮಗಳು. ಅವಿಭಜಿತ ದ.ಕ.ಜಿಲ್ಲೆಯ ಪುತ್ತೂರು ತಾಲೂಕಿನ ಚಾರ್ವಾಕ ಗ್ರಾಮ ಒಂದು ಸಾಧಾರಣ ಹಳ್ಳಿ. ಆದರೆ ಆಕೆ ಬೆಳೆದ ಪರಿಸರ ಸಾಮಾನ್ಯದಲ್ಲ. ಸದಾ ನಿಗೂಢತೆಯನ್ನು ಉಳಿಸಿಕೊಂಡು,ಸವಾಲುಗಳನ್ನು ಎಸೆಯುತ್ತಲಿರುವ ಮಲೆನಾಡಿನ ಬೆಟ್ಟ,ಗುಡ್ಡ, ಕಾನನ, ನೀಲ ಸಮುದ್ರ. ಇದು ಆಕೆಯಲ್ಲಿ ಹೋರಾಟದ ಮನೋಭೂಮಿಕೆಯನ್ನು ರೂಪಿಸಿತ್ತು. ಜೊತೆಗೆ ಅಖಿಲ ಭಾರತಿಯ ವಿದ್ಯಾರ್ಥಿ ಪರಿಷತ್ತಿನ ಒಡನಾಟ ಶಿಸ್ತನ್ನು ರೂಡಿಸಿತ್ತು. ಪುತ್ತೂರಿನ ಸೈಂಟ್ ಪಿಲೋಮಿನ ಕಾಲೇಜ್ ಓದಿನ ಹಸಿವನ್ನು ಹೆಚ್ಚಿಸಿತ್ತು. ಮಂಗಳೂರಿನ ಪ್ರತಿಷ್ಠಿತ ಕಾಲೇಜ್ ರೋಷನಿ ನಿಲಯದಲ್ಲಿ ಸಮಾಜ ಸೇವೆಯಲ್ಲಿ ಸ್ನಾತಕೋತರ ಪದವಿ ಪಡೆದ ಪ್ರತಿಭಾವಂತೆ ಈಕೆ. ಮುಂದೆ ಸಂಘ ಪರಿವಾರದ ಮೌಲ್ಯಗಳು ಆಕೆಯ ವ್ಯಕ್ತಿತ್ವದ ಭಾಗವಾಯ್ತು. ಸಮಾಜ ಸೇವೆ ಅವರ ಗುರಿಯಾಯ್ತು. ಆ ಸೇವಾ ಮನೋಭಾವವೇ ಸುನಾಮಿ ಸಂತ್ರಸ್ತರ ನೆರವಿಗೆ ಧಾವಿಸಿತು; ಹೆಣಗಳನ್ನು ಎತ್ತಿತು.ಸಂಘ ಪರಿವಾರ ಆಕೆಯ ನಿಷ್ಟೆಯನ್ನು ಗುರುತಿಸಿತು. ಹಾಗಾಗಿ ರಾಜಕೀಯದ ಹಿನ್ನೆಲೆಯಿಲ್ಲದಿದ್ದರೂ ಶಕ್ತ ರಾಜಕಾರಣದ ಪ್ರವೇಶ ಸುಲಲಿತವಾಯಿತು.

ತನ್ನ ಹುಟ್ಟೂರಿಗೆ ಹೊರತಾದ ಅಪರಿಚಿತ ಕ್ಷೇತ್ರ ಯಶವಂತಪುರದಿಂದ ಗೆದ್ದು ಬಂದು ಮಂತ್ರಿಯಾಗುವ ಅವಕಾಶ ಒದಗಿ ಬಂದಾಗಲೂ ಆಕೆ ಅದಕ್ಕಾಗಿ ಸಾಕಷ್ಟು ಪೂರ್ವಸಿದ್ಧತೆಯನ್ನು ಮಾಡಿಕೊಂಡಿದ್ದರು. ತನ್ನ ವಿದ್ಯಾ ಗುರುಗಳಾಗಿದ್ದ ಪ್ರಭಾಕರ ರಾವ್ ಅವರನ್ನು ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿಕೊಂಡರು. ಶೋಭಾ ಓದಿದ ಸಮಾಜ ಸೇವೆಗೆ ರಿಲೇಟ್ ಆಗುವ ’ಗ್ರಾಮೀಣಾಬಿವೃದ್ಧಿ ಮತ್ತು ವಿಲೇಜ್ ಪಂಚಾಯತ್’ ಪ್ರಭಾಕರ್ ಅವರ ಪಿ.ಎಚ್.ಡಿ ವಿಷಯವಾಗಿತ್ತು. ಸಮಾಜ ಸೇವೆಗೆ ಹೆಚ್ಚು ಅವಕಾಶಗಳಿರುವ, ನೀರ್ ಸಾಬ್ ಎಂದೇ ಪ್ರಖ್ಯಾತಿ ಗಳಿಸಿರುವ ನಜಿರ್ ಸಾಬಿ ನಿರ್ವಹಿಸಿದ ಗ್ರಾಮೀಣಬಿವೃದ್ದಿ ಮತ್ತು ಪಂಚಾಯತ್ ರಾಜ್ ಖಾತೆಯನ್ನೇ ಶೋಭಾ ಮೆಚ್ಚಿ ಆಯ್ಕೆ ಮಾಡಿಕೊಂಡಿದ್ದರು. ಎಂ.ವೈ.ಘೋರ್ಪಡೆ, ಎಂ.ಪಿ. ಪ್ರಕಾಶ್ ನಂತವರು ಕೆಲಸ ಮಾಡಿದ ಖಾತೆಯಿದು. ಕರ್ನಾಟಕಾದ್ಯಂತ ಹರಡಿಕೊಂಡಿರುವ, ಯಾರೇ ಮಂತ್ರಿಯಾದರೂ ಸದಾ ಸುದ್ದಿಯಲ್ಲಿರುವ ಖಾತೆಯಿದು. ಶೋಭಾ ಪಾದರಸದಂತೆ ಓಡಾಡುತ್ತಾ ಕೆಲಸವೂ ಮಾಡಿಕೊಂಡಿದ್ದರು. ಆದರೂ ಶೋಭಾ ಸಂಪುಟದಿಂದ ಕಿತ್ತೊಗೆಯಲ್ಪಟ್ಟರು. ಯಾಕೆ?

ಆಕೆಯ ಮೇಲೆ ಭ್ರಷ್ಟಾಚಾರದ ಆರೋಪಗಳಿಲ್ಲ, ಹಗರಣಗಳಿಲ್ಲ. ಇಲಾಖೆಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬ ದೂರುಗಳಿಲ್ಲ. ಹೈಕಮಾಂಡ್ ಆಕೆಯ ರಾಜಿನಾಮೆ ಕೇಳುವಾಗ ಅದಕ್ಕೆ ಕಾರಣಗಳನ್ನೇ ನೀಡಿಲ್ಲ.ಆದರೂ ಆಕೆಯ ರಾಜಿನಾಮೆಗಾಗಿ ಏಕಕಾಲದಲ್ಲಿ ಬೆಂಗಳೂರು, ಹೈದರಾಬಾದ್ ಮತ್ತು ದೆಹಲಿ ರಂಗಮಂದಿರಗಳಲ್ಲಿ ಹದಿನೈದು ದಿನಗಳ ಪ್ರಹಸನ ನಡೆಯಿತು. ನಾಟಕದ ಫಲಶ್ರುತಿಯೆಂದರೆ ಶೋಭಾ ದುರಂತನಾಯಕಿಯಾಗಿ ಹೊರ ಹೊಮ್ಮಿದಳು.
ದುರಂತ ನಾಯಕನ ಕಲ್ಪನೆ ಗ್ರೀಕ್ ನಾಟಕಗಳ ಕೊಡುಗೆ. ಧೀರೋದ್ದಾತ ನಾಯಕನ ಎಲ್ಲಾ ಗುಣಲಕ್ಷಣಗಳಿದ್ದಾಗ್ಯೂ ಆತನ ಮಾನವಸಹಜವಾದ ದೌರ್ಬಲ್ಯವೊಂದು ಆತನನ್ನು ಪತನದಂಚಿಗೆ ತಳ್ಳಿಬಿಡುತ್ತದೆ. ದೇವತೆಗಳು ಕೂಡ ಅವನನ್ನು ಅಲ್ಲಿಂದ ಮೇಲೆತ್ತಲಾರರು. ಅಂತಹ ದೌರ್ಬಲ್ಯವೊಂದು ಶೋಭನಲ್ಲಿತ್ತೆ?

ಯಡಿಯೂರಪ್ಪ ಪ್ರಹಸನದಲ್ಲಿ ಶೋಭಾ ಮಾಧ್ಯಮವನ್ನು ಎದುರಿಸಿದ ರೀತಿಯಲ್ಲೇ ಗೊತ್ತಾಗುತ್ತದೆ; ಆಕೆ ಸ್ವಾಬಿಮಾನದ ದಿಟ್ಟ ಹೆಣ್ಣು ಮಗಳು. ಆಕೆಯಲ್ಲಿ ಆತ್ಮ ವಿಶ್ವಾಸ ತುಂಬಿ ತುಳುಕುತ್ತಿತ್ತು. ಪತ್ರಕರ್ತರ ಪ್ರಶ್ನೆಗಳಿಗೆ ಅಳುಕಿಲ್ಲದೆ ಉತ್ತರಿಸುತ್ತಿದ್ದರು. ಕಾಂಟ್ರವರ್ಸಿ ಆಗಬಹುದಾಗಿದ್ದ ಪ್ರಶ್ನೆಗಳಿಗೆ ’ನನಗೆ ಗೊತ್ತಿಲ್ಲ, ನನ್ನಲ್ಲೂ ಆ ಪ್ರಶ್ನೆ ಇದೆ, ಯಾಕೆ ಅಂತಹ ಗೊತ್ತಾಗ್ಲಿಲ್ಲ, ’ಅದು ಹಿರಿಯರ ತೀರ್ಮಾನ...’ ಎಂಬ ಜಾಣತನದ ಉತ್ತರಗಳನ್ನು ನೀಡಿ ಜಾರಿಕೊಳ್ಳುತ್ತಿದ್ದರು. ’ನನಗನ್ನಿಸುತ್ತದೆ...’ ಎಂದು ತನ್ನೊಳಗೆ ಮಾತಾಡಿಕೊಂಡಂತೆ ಮಾತು ಆರಂಭಿಸಿದರೆಂದರೆ ತನ್ನ ನಿಲುವನ್ನು ಸ್ಪಷ್ಟಪಡಿಸುವುದರೊಂದಿಗೆ ಬೇರೆಯವರಿಗೆ ತಲುಪಿಸುವ ಸಂದೇಶವೂ ಅದರಲ್ಲಿ ಅಡಕವಾಗಿದೆ ಎಂದೇ ಅರ್ಥ. ಇಂಥ ಜಾಣೆಯೆದುರು ಬಳ್ಳಾರಿ ಗಣಿ ದೊರೆಗಳ ಪರಿಶ್ರಮದಿಂದ ಸಂಸತ್ ಸದಸ್ಯೆಯಾದ ಶಾಂತಳ ಸೌಂಡ್ ಬೈಟ್ ನ್ನು ಹೋಲಿಸಿ ನೋಡಿ; ’ನಾಲಗೆ ಕುಲವನರುಹಿತು’ ಎಂದು ಇಂತಹ ಸಂದರ್ಭವನ್ನು ನೋಡಿಯೇ ಪಂಪ ಬರೆದಿರಬೇಕೆನಿಸುತ್ತದೆ.

’ಯಡಿಯೂರಪ್ಪ ಪ್ರಹಸನ’ದಲ್ಲಿ ’ಮೇಲ್ ಇಗೋ’ ಒಟ್ಟಾಗಿ ಕೆಲಸ ಮಾಡಿತ್ತೆ? ಹೌದೆಂದು ಕಾಣುತ್ತದೆ. ಅದಕ್ಕೆ ಕಾರಣವಾದದ್ದು ಆಕೆಯ ಕೆಲಸದ ವೈಖರಿ; ತನ್ನ ಖಾತೆಯ ಸಮರ್ಥ ನಿರ್ವಹಣೆ. ಸಾಮಾನ್ಯವಾಗಿ ಯಾರನ್ನೂ ಹೊಗಳದ ವಿರೋಧ ಪಕ್ಷದ ನಾಯಕ ಉಗ್ರಪ್ಪನವರು ಅವರ ಕಾರ್ಯದಕ್ಷತೆಯನ್ನು ಮುಕ್ತಕಂಠದಿಂದ ಹೊಗಳಿ ಅಕೆಗೆ ಗೃಹ ಮಂತ್ರಿಯಾಗುವ ಯೋಗ್ಯತೆ ಇದೆಯೆಂದು ಹೇಳಿದ್ದಾರೆ.ಅವರು ಪ್ರತಿಪಕ್ಷದ ನಾಯಕನಿರಬಹುದು ಆದರೂ ಕಲ್ಲಿನಲ್ಲಿ ಮೊಸರು ಹುಡುಕುವ ಉಗ್ರಪ್ಪನಂಥ ಉಗ್ರ ಮಾತುಗಾರನ ಬಾಯಿಯಿಂದ ಹೊಗಳಿಸಿಕೊಳ್ಳುವುದೆಂದರೆ ಸಾಮಾನ್ಯ ಮಾತಲ್ಲ.
ಶೋಭಾ ಮುಖ್ಯಮಂತ್ರಿ ಜೊತೆ ಹೊಂದಿದ್ದ ಆತ್ಮೀಯ ಸಂಬಂಧ ’ಎಲ್ಲಾ ಗುಣಗಳನ್ನು ಮಸಿ ನುಂಗಿಬಿಡ್ತು’ ಎಂಬ ಗಾದೆಯಂತಾಯ್ತು. ಇಲ್ಲವಾದರೆ ರೇಣುಕಾಚಾರ್ಯಾನಂತಹ ಕಚ್ಚೆ ಹರುಕ, ಕ್ಷುದ್ರ ಜಂತು ಆಕೆಯ ಮೇಲೆರಗಲು ಸಾಧ್ಯವಿತ್ತೆ? ಅವರು ಆರೋಗ್ಯಕರ ಅಂತರವನ್ನು ಕಾಯ್ದುಕೊಂಡಿದ್ದರೆ ಇಷ್ಟು ದೊಡ್ಡ ಪ್ರಹಸನವಾಗುತ್ತಿರಲಿಲ್ಲವೇನೋ...ಅದನ್ನು ಕಣ್ಣು ಕುಕ್ಕುವಂತೆ ಸಾರ್ವಜನಿಕಗೊಳಿಸಿದ್ದು ಅವರು ಮಾಡಿದ ಬಹುದೊಡ್ಡ ತಪ್ಪು. ಅವರ ಸಂಬಂಧ ಸಚಿವೆಯ ಕಾರ್ಯವೈಖರಿಯಲ್ಲಿ ಪ್ರತಿಫಲನಗೊಳ್ಳುತ್ತಿತ್ತು.ಎಲ್ಲಾ ಸಚಿವರ ಖಾತೆಗಳಲ್ಲಿ ಮೂಗು ತೂರಿಸುತ್ತಾರೆ ಎಂದು ಶಾಸಕರೊಬ್ಬರು ಆರೋಪಿಸುತ್ತಾರೆ; ಸಚಿವರಲ್ಲ. ಮುಖ್ಯಮಂತ್ರಿಗಳ ಬಳಿಗೆ ಬರುವ ಫೈಲುಗಳನ್ನೆಲ್ಲಾ ಅವರು, ’ಶೋಭಾ ಒಮ್ಮೆ ನೋಡಿ ಬಿಡಲಿ’ ಅನ್ನುತ್ತಿದ್ದರಂತೆ. ಬಹುಶಃ ಮುಖ್ಯಮಂತ್ರಿಗಳ ಕಾರ್ಯ ಬಾಹುಳ್ಯ ಅವರು ಇನ್ನೊಬ್ಬ ಆಪ್ತ ಸಚಿವರನ್ನು ಅವಲಂಭಿಸುವಂತೆ ಮಾಡಿರಬಹುದು. ತಮಗೆ ವಹಿಸಿದ ಕೆಲಸವನ್ನು ಶೋಭಾ ತುಂಬಾ ಕಟ್ಟುನಿಟ್ಟಾಗಿ ಪಾಲಿಸಿರಬಹುದು. ಇದೇ ’ಸೂಪರ್ ಸಿ.ಎಂ’ ಎಂಬ ಆಪಾದನೆಗೆ ಕಾರಣವಾಗಿರಬಹುದು.

ಇದೆಲ್ಲಾ ’ಬಹುದು’ ಸಾಮ್ರಾಜ್ಯ. ಆದರೆ ಎದ್ದು ಕಾಣುವ, ಅತೃಪ್ತರನ್ನು ಮತ್ತಷ್ಟು ಕುದಿಸುವ ಕಾರಣವೊಂದಿದೆ.ಅದು, ಇದುವರೆಗೆ ನಡೆದುಕೊಂಡು ಬಂದ ಸಂಪ್ರದಾಯದಂತೆ ಕ್ಯಾಬಿನೆಟ್ ಬ್ರಿಫಿಂಗ್ ಅನ್ನು ವಾರ್ತಾ ಸಚಿವರು ಅಥವಾ ಸಂಪುಟದ ಹಿರಿಯ, ಅನುಭವಿ ಸಚಿವರು ನಡೆಸುತ್ತಿದ್ದರು. ಆದರೆ ಅದನ್ನು ಹೊಸಬಳಾದ ಶೋಭಾಗೆ ಮುಖ್ಯಮಂತ್ರಿಗಳು ಕೊಟ್ಟರು.ಇದು ಹಲವು ಸಚಿವರಿಗೆ ಇಷ್ಟವಾಗಲಿಲ್ಲ. ಅದನ್ನು ನಯವಾಗಿ ಆಕೆ ತಿರಸ್ಕರಿಸಬಹುದಿತ್ತು ಆದರೆ ಆಕೆ ಹಾಗೆ ಮಾಡಲಿಲ್ಲ. ಶೋಭಾ ಬ್ರಹ್ಮಚಾರಿಣಿಯಾಗಿರಬಹುದು ಆದರೆ ಸನ್ಯಾಸಿಯಲ್ಲ. ಬ್ರಹ್ಮಚರ್ಯಕ್ಕೂ ಸನ್ಯಾಸತ್ವಕ್ಕೂ ಅಪಾರ ವ್ಯತ್ಯಾಸವಿದೆ. ಬ್ರಹ್ಮಚರ್ಯ, ಸಮಾಜದಲ್ಲಿದ್ದುಕೊಂಡೇ ಯಾವುದೋ ಒಂದು ಸಾಧನೆಗಾಗಿ ಸಂಕಲ್ಪ ತೊಟ್ಟು ವೈವಾಹಿಕ ಬಂಧನಗಳಿಂದ ದೂರವಿರುವುದು. ಸನ್ಯಾಸತ್ವ ಎಂದರೆ ಸಮಾಜದಿಂದ ದೂರವಾಗಿ, ಏಕಾಂತದಲ್ಲಿದ್ದು ಆತ್ಮೋನ್ನತಿಗಾಗಿ, ಸಮಾಜದ ಒಳಿತಿಗಾಗಿ ಚಿಂತನೆ ನಡೆಸುವುದು. ಈ ಅರ್ಥದಲ್ಲಿ ಶೋಭಾ ರಾಗ ದ್ವೇಷಾದಿ ಭಾವನೆಗಳನ್ನು ಮೀರಿದವರೇನಲ್ಲ!
ಒಬ್ಬ ಗಂಡಸಿಗೆ ಅವಮಾನ ಮಾಡಬೇಕಾದರೆ ಅವನನ್ನು ಕೆರಳಿಸಬೇಕಾದರೆ ಏನು ಮಾಡಬೇಕು? ಅವನಿಗೆ ಸಂಬಂಧಪಟ್ಟ ಹೆಣ್ಣೊಬ್ಬಳನ್ನು ಕೆಣಕಬೇಕು; ಅವಮಾನಿಸಬೇಕು; ಚಾರಿತ್ರ್ಯವಧೆ ಮಾಡಬೇಕು.
ಸ್ವಸಾಮರ್ಥ್ಯದಿಂದ ತನ್ನ ಕೇತ್ರದಲ್ಲಿ ಹಂತ ಹಂತವಾಗಿ ಮೇಲೆರುತ್ತಿರುವ ಮಹಿಳೆಯನ್ನು ಪ್ರಪಾತಕ್ಕೆ ದೂಡಿಬಿಡಲು ಏನು ಮಾಡಬೇಕು? ಅವಳ ಚಾರಿತ್ಯವಧೆ ಮಾಡಿದರಾಯ್ತು.
ಇಲ್ಲಿ ಎರಡೂ ಆಗಿದೆ. ಶೋಭಾಳ ಚಾರಿತ್ರ್ಯ ವಧೆಯನ್ನು ಕೇವಲ ರೆಡ್ಡಿ ಬಣದವರು ಮಾತ್ರ ಮಾಡಲಿಲ್ಲ. ಮುಖ್ಯಮಂತ್ರಿಗಳು ಅದಕ್ಕೆ ತುಪ್ಪ ಎರೆದಿದ್ದಾರೆ. ಆಕೆಯ ರಾಜಿನಾಮೆಯನ್ನು ಪಡೆದುಕೊಳ್ಳುವ ಸಂದರ್ಭ ಬಂದಾಗ ಸಾರ್ವಜನಿಕವಾಗಿ ಕಣ್ಣೀರು ಹಾಕಿ ಮುಖ್ಯಮಂತ್ರಿ ಘನತೆಗೆ ಕುಂದು ತಂದಿದ್ದಾರೆ. ತನ್ನ ದೌರ್ಬಲ್ಯವನ್ನು ಜಗಜ್ಜಾಹಿರುಗೊಳ್ಸಿದ್ದಾರೆ. ಅಷ್ಟಿದ್ದರೆ ಅವರು ಆಕೆಯನ್ನು ಸಂಪುಟದಿಂದ ಕೈ ಬಿಡಲೇಬಾರದಿತ್ತು. ಅದದ್ದಾಗಲಿ ಎಂದು ತಮ್ಮ ನಿಲುವಿಗೇ ಬದ್ಧರಾಗಿರಬೇಕಿತ್ತು.ಆತ್ಮೀಯರ ಸಲಹೆಗಳನ್ನು ಪಡೆಯಬಹುದಿತ್ತು. ಯಡಿಯೂರಪ್ಪ ಹೋರಾಟಗಾರರು ನಿಜ. ಆದರೆ ಮುಂಗೋಪಿ, ಒರಟ, ಒಡ್ಡ.ಇಂತಹ ಯಡಿಯೂರಪ್ಪನವರಿಗೆ ಯಾರಾದರೂ ಆತ್ಮೀಯರಿರಲು ಸಾಧ್ಯವೇ? ನಮ್ಮ ಕನ್ನಡದ ಎಷ್ಟು ಜನ ಪತ್ರಕರ್ತರ ಹೆಸರು ಅವರ ನೆನಪಲ್ಲಿರಬಹುದು? ಬಹುಶಃ ಅದು ಐದಾರನ್ನು ದಾಟಲಾರದು.
ಅಧಿಕಾರದಾಸೆ ಎಲ್ಲಾ ಸಂಬಂಧಗಳನ್ನು ಗೌಣವಾಗಿಸುತ್ತದೆ. ರಾಜಿನಾಮೆ ಸಂದರ್ಭದಲ್ಲಿ ಶೋಭಾ ತೋರಿದ ಸಂಯಮದಲ್ಲಿ ಒಂಚೂರಾದರೂ ಮುಖ್ಯ ಮಂತ್ರಿಗಳು ತೋರಿದ್ದರೆ ನಗುವವರ ಮುಂದೆ ಎಡವಿ ಬಿದ್ದಂತಾಗುತ್ತಿರಲಿಲ್ಲ. ಶೋಭಾ ಪತನಕ್ಕೆ ಅವರು ಆಕೆಯಲ್ಲಿ ಹೊಂದಿದ್ದ ಮೋಹವೇ ಕಾರಣ. ಸ್ವತಃ ಆಕೆಯೇ ಅದಕ್ಕೆ ಅವಕಾಶ ಕೊಟ್ಟಿದ್ದಾಳೆ. ಅವರಿಬ್ಬರ ನಡುವೆ ಯಾವ ರೀತಿಯ ಸಂಬಂಧವಿದೆಯೋ ಅದು ನಮಗೆ ಗೊತ್ತಿಲ್ಲ. ಅದನ್ನು ತಿಳಿದುಕೊಳ್ಳುವ ಅಗತ್ಯವೂ ನಮಗಿಲ್ಲ. ಆದರೆ ಸಾರ್ವಜನಿಕ ಬದುಕಿನಲ್ಲಿರುವವರು ತಮ್ಮ ನಡವಳಿಕೆಯನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಕನಿಷ್ಟಪಕ್ಷ ಮುಚ್ಚಿಟ್ಟುಕೊಳ್ಳುವ ಕಲೆಯಾದರೂ ಗೊತ್ತಿರಬೇಕು. ಯಾಕೆಂದರೆ ಅವರು ಹಲವು ಜನರಿಗೆ ಮಾದರಿಗಳಾಗಿರುತ್ತಾರೆ.

ಮೈಸೂರು ದಸರ ಸಂದರ್ಭದಲ್ಲಿ ಸಾರ್ವಜನಿಕರ ಕಣ್ಣಿಗೆ ರಾಚುವಂತೆ ಕಟ್ಟೌಟ್ ಗಳಲಿ ಅವರಿಬ್ಬರೇ ಯಾಕೆ ಮಿಂಚಬೇಕಿತ್ತು? ಹೋಮ ಹವನ, ಬಾಗಿನ ಸಮರ್ಪಣೆಯಂತ ಧಾರ್ಮಿಕ ಸಮಾರಂಬಗಳಲ್ಲಿ ಯಾಕೆ ಜೊತೆ ಜೊತೆಯಾಗಿ ಕಾಣಿಸಿಕೊಳ್ಳಬೇಕಾಗಿತ್ತು? ಜೋತೆಯಾಗಿ ಯಾಕೆ ವಿದೇಶ ಪ್ರವಾಸಗಳನ್ನು ಕೈಗೊಳ್ಳಬೇಕಾಗಿತ್ತು? ಮಂತ್ರಾಲಯದ ಸ್ವಾಮಿಗಳನ್ನು ರಕ್ಷಿಸಿ ತರಲು ಶೋಭಾಳೇ ಯಾಕೆ ಹೋಗಬೇಕಾಗಿತ್ತು?. ಅದೇ ಪರಿಸರದವರೂ ಕಂದಾಯ ಸಚಿವರೂ ಆದ ಕರುಣಾಕರ ರೆಡ್ಡಿ ಇರಲಿಲ್ಲವೇ?. ಇದು ಪುರುಷ ಪ್ರಧಾನವಾದ ಸಮಾಜ. ಮಹಿಳೆಯರೂ ಕೂಡ ಪುರುಷರಂತೆಯೇ ಯೋಚಿಸುತ್ತಾರೆ. ಬಿಜೆಪಿ ಪಕ್ಷ ಈ ಯೋಚನೆಯ ಒಂದು ಭಾಗ. ಅದರ ಒಳಸುಳಿಗಳೇ ಬೇರೆ. ಪ್ರದರ್ಶಕ ಗುಣಗಳೇ ಬೇರೆ. ಸಮಾಜವನ್ನು ಅಧ್ಯಯನ ಮಾಡಿದ ಶೊಭಗೆ ಈ ಸೂಕ್ಷ್ಮ ಹೊಳೆಯಲಿಲ್ಲವೇ?

ಎಂತಹ ಗಟ್ಟಿ ಮನಸ್ಸಿಗೂ ಭಾವನಾತ್ಮಕವಾದ ಆಸರೆಯೊಂದು ಬೇಕಾಗುತ್ತದೆ. ಹಿಂದಿನ ಮುಖ್ಯಮಂತ್ರಿಗಳಾದ ಅರಸು, ಬೊಮ್ಮಾಯಿ, ಗುಂಡೂರಾವ್, ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್, ಕುಮಾರಸ್ವಾಮಿ ಇವರ ಬಗ್ಗೆ ಕೂಡಾ ಇಂತಹ ವದಂತಿಗಳಿದ್ದವು. ಆದರೆ ಅವೆಲ್ಲಾ ತೆರೆಯ ಮರೆಯ ಪ್ರಹಸನಗಳು, ಸಾರ್ವಜನಿಕರ ಕಣ್ಣಿಗೆ ರಾಚುತ್ತಿರಲಿಲ್ಲ. ಈಗ ರಾಚಿದೆ. ’ಮೆಲ್ ಇಗೋ’ ಕೆಲಸ ಮಾಡಿದೆ. ಸಮರ್ಥ ನಾಯಕಿಯಾಗುವ ಎಲ್ಲಾ ಅರ್ಹತೆಗಳಿರುವ ವಿದ್ಯಾವಂತ ಯುವ ರಾಜಕಾರಣಿ ಸಧ್ಯಕ್ಕೆ ಪುರುಷ ರಾಜಕಾರಣಕ್ಕೆ ಬಲಿಪಶುವಾಗಿದ್ದರೆ. ಕುರುಕ್ಷೇತ್ರ ಯುದ್ಧದಲ್ಲಿ ದುರ್ಯೋಧನ, ದುಶ್ಯಾಸನ, ಕರ್ಣ, ಜಯದೃಥ ಮುಂತಾದ ಅತಿರಥ-ಮಹಾರಥರೆಲ್ಲಾ ಸೇರಿ ಅಭಿಮನ್ಯುವನ್ನು ಚಕ್ರವ್ಯೂಹದಲ್ಲಿ ಕೆಡವಿಕೊಂಡು ಅಮಾನುಷವಾಗಿ ಕೊಂದಂತೆ ರೆಡ್ಡಿ ಬಳಗ ಚಕ್ರವ್ಯೂಹ ಹೆಣೆದಿದೆ. ಆದರೆ ಅದನ್ನೆಲ್ಲಾ ಕೊಡವಿಕೊಂಡು ಎದ್ದು ನಿಲ್ಲುವ ಶಕ್ತಿ ಆಕೆಯೊಳಗೇ ಇದೆ.ಅದನ್ನು ಆಕೆ ಗುರುತಿಸಿಕೊಳ್ಳಬೇಕು ಅಷ್ಟೆ.

Tuesday, November 3, 2009

ಕೆಂಪಿಯ ನೆನಪಲ್ಲಿ





ಅದೊಂದು ದಿನ ಯಾಕೋ ಭರಿಸಲಾಗದಷ್ಟು ಒಂಟಿತನ ನನ್ನನ್ನು ಆವರಿಸಿಕೊಂಡಿತ್ತು. ಇಲ್ಲಿ, ಈ ಬೆಂಗಳೂರೆಂಬ ಮಾಹಿತಿ ನಗರದಲ್ಲಿ ತೀರಾ ಆತ್ಮೀಯತೆಯಿಂದ ಮನಸ್ಸಿನ ಒಳಹೊಕ್ಕು ಮಾತಾಡುವವರು ಯಾರೂ ಇರಲಿಲ್ಲ.

‘ಬೇಸರಿನ ಸಂಜೆಯಿದು...ಬೇಕೆನೆಗೆ ನಿನ್ನ ಜೊತೆ’ ಎಂದು ಗುಣುಗುಣಿಸುತ್ತಾ ಅದನ್ನೇ ಮೊಬೈಲ್ ನಲ್ಲಿ ಕೀ ಮಾಡತೊಡಗಿದೆ. ಆದರೆ ಯಾರಿಗೆ ಕಳುಹಿಸಲಿ?

ಹೀಗೆ ವರ್ತಮಾನ ಅಸಹನೀಯ ಅನ್ನಿಸಿದಾಗಲೆಲ್ಲಾ ಮನುಷ್ಯ ಬಾಲ್ಯಕ್ಕೆ ಮರಳುತ್ತಾನೆ. ಹುಟ್ಟಿದೂರನ್ನು ನೆನೆದು ಅಲ್ಲಿ ನಾನಿರುತ್ತಿದ್ದರೆ...ಆ ಒಡನಾಡಿ ಪಕ್ಕದಲ್ಲಿರುತ್ತಿದ್ದರೆ....ಎಂದು ಮನಸ್ಸು ಹಂಬಲಿಸುತ್ತದೆ.

ನನಗಿನ್ನೂ ನೆನೆಪಿದೆ; ಬಾಲ್ಯದಲ್ಲಿ ನನಗೆ ಅತ್ಯಂತ ದುಃಖವಾದಾಗ ಕೈಯಲ್ಲೊಂದು ಕತ್ತಿ ಹಿಡಿದು ತೋಟಕ್ಕೆ ಹೋಗುತ್ತಿದ್ದೆ. ಎತ್ತರವಾಗಿ ಬೆಳೆದು ನಿಂತಿರುತ್ತಿದ್ದ ಅಡಿಕೆ ಮರಗಳನ್ನು ಸುಮ್ಮನೆ ನೋಡುತ್ತಿದ್ದೆ. ಫಲ ತುಂಬಿ ತುಳುಕುತ್ತಿದ್ದ ತೆಂಗಿನ ಮರದ ಗರಿಗಳ ಮಧ್ಯೆ ಪುರುಳಿ ಹಕ್ಕಿಯ ಗೂಡನ್ನು ಹುಡುಕುತ್ತಿದ್ದೆ. ಕೊಕ್ಕೋ ಗಿಡದಲ್ಲಿ ಮಾಲೆಯಂತೆ ತೂಗಾಡುತ್ತಿದ್ದ ಕಾಯಿಗಳನ್ನು ಲೆಖ್ಖ ಹಾಕುತ್ತಿದ್ದೆ; ಬಾಳೆಯಲ್ಲೇ ಹಣ್ಣಾದ ಬಾಳೆಹಣ್ಣನ್ನು ಹುಡುಕಿ ತಿನ್ನುತ್ತಿದ್ದೆ.

ತೋಟದ ಬದಿಯಲ್ಲಿ ಝುಳು ಝಳು ನದಿ ಹರಿಯುತ್ತಿತ್ತು. ದಡದ ಬಂಡೆಯ ಮೇಲೆ ಕುಳಿತುಕೊಳ್ಳುತ್ತಿದ್ದೆ. ಕಾಲುಗಳಿಗೆ ಮೀನುಗಳು ಕಚ್ಚಿ ಕಚಗುಳಿಯಿಡುತ್ತಿದ್ದವು.ಕಲ್ಲಿನ ಅಡಿಯಲ್ಲಿ ಮೀನೊಂದು ನುಸುಳಿ ಮರೆಯಾದರೆ ಇನ್ನೊಂದು ಕಲ್ಲನ್ನೆತ್ತಿ ಆ ಕಲ್ಲಿನ ಮೇಲೆ ಹೊಡೆಯುತ್ತಿದ್ದೆ. ಕಲ್ಲಿನ ಅಡಿಯಲ್ಲಿದ್ದ ಮೀನು ಸತ್ತು ಹೋಗುತ್ತಿತ್ತು. ಈಗ ನೆನೆಸಿದರೆ ಮನಸ್ಸಿಗೆ ಒಂಥರ ಕಸಿವಿಸಿ.

ನಮ್ಮ ಮನೆಯ ಆಳು ಕರಿಯ ವಾಟೆ ಜಾತಿಯ ಬಿದಿರುಮೆಳೆಯಿಂದ ಕೊಳಲು ಮಾಡಿಕೊಡುತ್ತಿದ್ದ. ಬಂಡೆಯ ಮೇಲೆ ಕುಳಿತು ಕಣ್ಮುಚ್ಚಿ ಕೊಳಲು ನುಡಿಸುತ್ತಿದ್ದೆ. ಆಗ ನನಗೆ ನೆನಪಾಗುತ್ತಿದ್ದವನು ಯಮುನೆಯ ದಡದಲ್ಲಿ ಗೋವುಗಳ ಮಧ್ಯೆ ಕೊಳಲು ನುಡಿಸುತ್ತಿದ್ದ ಕೃಷ್ಣ. ನಂಗೆ ಕೃಷ್ಣ ಇಷ್ಟ. ಅವನ ಕಪ್ಪು ಮೈ ಬಣ್ಣ ಇಷ್ಟ. ಅವನ ಕೊಳಲ ಗಾನ ಇಷ್ಟ. ಇಂದಿಗೂ ಈ ಮೂರೂ ನನಗಿಷ್ಟ.

ಎಷ್ಟೋ ಹೊತ್ತಿನ ನಂತರ ಹೊಳೆಯ ದಡದಿಂದೆದ್ದು ನಾಣಿಲು ಮರದ ಹತ್ತಿರ ಬಂದು ಹಣ್ಣು ಕೊಯ್ದು ತಿನ್ನುತ್ತಿದ್ದೆ. ಎಲೆಯಲ್ಲಿ ಒಂದಷ್ಟು ಹಣ್ಣುಗಳನ್ನು ತಂಗಿಯರಿಗಾಗಿ ಕಟ್ಟಿಕೊಳ್ಳುತ್ತಿದ್ದೆ. ಬೇಲಿ ದಾಟಿ ತೋಟ ಹತ್ತಿ ಬಂದ ಮೇಲೆ ತಪ್ಪದೆ ಹೊಂಬಾಳೆಯನ್ನು ಆಯ್ದುಕೊಳ್ಳುತ್ತಿದ್ದೆ. ಅದು ನನ್ನ ಪ್ರೀತಿಯ ಕೆಂಪಿ ಹಸುವಿಗೆ.

ಕೆಂಪಿ ನನ್ನ ಬಾಲ್ಯದ ಒಡನಾಡಿ. ಅದು ಎಂತಹ ಹರಾಮಿ ದನ ಆಗಿತ್ತೆಂದರೆ ಊರಿನಯಾವ ಬೇಲಿಯೂ ಅದಕ್ಕೆ ಅಡ್ಡಿ ಅಲ್ಲ. ಅದನ್ನು ಮುರಿದು ಒಳನುಗ್ಗಿ ಕದ್ದು ಹುಲ್ಲು ಮೇಯುತ್ತಿತ್ತು. ನಮ್ಮೂರಿನಲ್ಲಿ ದನ-ಕರುಗಳನ್ನು ಹಟ್ಟಿಯಲ್ಲೇ ಕೂಡಿ ಹಾಕಿ ಸಾಕುವ ಪದ್ದತಿ ಇಲ್ಲ. ಬೆಳಿಗ್ಗೆ ಎದ್ದೊಡನೆ ದನಗಳ ಮುಂದೆ ಒಂದಷ್ಟು ಒಣ ಹುಲ್ಲು ಹಾಕುತ್ತಿದ್ದರು. ಆಮೇಲೆ ಹಟ್ಟಿ ಬಾಗಿಲು ತೆಗೆದು ದನಗಳನ್ನು ಬಯಲಿಗೆ ಅಟ್ಟಿ ಬಿಡುತ್ತಿದ್ದರು. ಅವು ಕಾಡಿನಲ್ಲಿ ಅಥವಾ ಗೋಮಾಳದಲ್ಲಿ ಮೇವು ಹುಡುಕಿಕೊಳ್ಳುತ್ತಿದ್ದವು. ಕೆಂಪಿಯಂತಹ ಹರಾಮಿ ದನಗಳಾದರೆ ಯಾರ‍್ಯಾರದೋ ತೋಟ ಗದ್ದೆಗಳಿಗೆ ನುಗ್ಗಿ, ಹೊಟ್ಟೆ ಬಿರಿಯೆ ತಿಂದು ಸೂರ್ಯ ಮುಳುಗುವ ಸಮಯಕ್ಕೆ ಸರಿಯಾಗಿ ಮನೆಗೆ ಹಿಂದಿರುಗುತ್ತಿದ್ದವು.

ಕೆಂಪಿ ಹಸುವಿನ ಬಗ್ಗೆ ಹೇಳುತ್ತಿದ್ದೆ ಅಲ್ವಾ..ಅದೆಂದರೆ ನನಗೆ ಅಚ್ಚುಮೆಚ್ಚು. ಅದಕ್ಕೆ ಬಹಳ ವಿಶಿಷ್ಟ ರೀತಿಯ ಕೊಂಬಿತ್ತು. ಆ ಕೊಂಬುಗಳ ಮೂಖಾಂತರ ಎಂತಹ ದಣಪೆಯನ್ನಾದರು ಅಲ್ಲಾಡಿಸಿ ತೆಗೆದು ಹೊಲ, ತೋಟಗಳಿಗೆ ನುಗ್ಗಿ ಬಿಡುತಿತ್ತು. ಇದು ಊರಿಗೇ ತಿಳಿದ ವಿಷಯ. ಅದು ದಣಪೆಗೆ ಹಾಕಿದ ಉದ್ದವಾದ ಕೋಲನ್ನು ಕೊಂಬುಗಳ ಮೂಲಕ ಸ್ವಲ್ಪ ಸ್ವಲ್ಪವಾಗಿ ಅಲ್ಲಾಡಿಸು ತೆಗೆಯುವುದೇ ಕಲಾತ್ಮಕ.

ಕೆಂಪಿ ಹಸುವಿನ ಈ ಕಲಾತ್ಮಕತೆಯೇ ಊರವರ ಕಣ್ಣು ಕೆಂಪಗೆ ಮಾಡಿ, ಅದರ ಬೆನ್ನಿನ ಮೂಳೆ ಮೂಳೆಯೂ ಪುಡಿ ಪುಡಿಯಾಗುತಿತ್ತು. ಅದರ ತೊಡೆ ಕೂಡಾ ಕಲ್ಲಿನ ಹೊಡೆತದಿಂದಾಗಿ ಒಂದೆರಡು ಕಡೆ ಉಬ್ಬಿಕೊಂಡಿತ್ತು. ಹೊಟ್ಟೆ, ಭುಜಗಳಲ್ಲಿ ಬಲವಾದ ಕೋಲಿನಿಂದ ಹೊಡೆದ ಉದ್ದನೆಯ ಗುರುತುಗಳಿದ್ದವು. ಅಲ್ಲಿ ರೋಮವಿರಲಿಲ್ಲ.

ಈ ಕೆಂಪಿಗೊಂದು ರೋಗವೂ ಇತ್ತು. ಅದು ಒಮ್ಮೊಮ್ಮೆ ಕಣ್ಣು ಮೆಟ್ರೆ ಮಾಡಿಕೊಂಡು ನೆಲದ ಮೇಲೆ ಬಿದ್ದು ಹೊರಳಾಡುತಿತ್ತು. ಬೇರೆ ದನಗಳೂ ಅಪರೂಪಕ್ಕೆ ಹೀಗೆ ಮಾಡುವುದುಂಟು. ಆಗ ದೃಷ್ಟಿಯಾಗಿದೆ ಎಂದುಕೊಂಡು (ಈ ದೃಷ್ಟಿ ತಾಗುವುದು ಕಲ್ಲುರ್ಟಿ, ಪಂಜುರ್ಲಿ ಮುಂತಾದ ಭೂತಗಳ ದೆಸೆಯಿಂದ) ಕಿವಿ ಸ್ವಲ್ಪ ಕೊಯ್ಯುತಿದ್ದರು. ರಕ್ತ ಬಾರದಿದ್ದರೆ ಸ್ವಲ್ಪ ಜಾಸ್ತಿಯೇ ಕೊಯ್ಯುತಿದ್ದರು. ಒಟ್ಟಿನಲ್ಲಿ ಸ್ವಲ್ಪ ರಕ್ತ ಬರಬೇಕು ಅಷ್ಟೇ. ಹೀಗೆ ಕೊಯ್ದು ಕೊಯ್ದು ನಮ್ಮ ಕೆಂಪಿ ಹಸುವಿನ ಕಿವಿಗಳು ಜೋರು ಮಳೆ ಗಾಳಿಗೆ ಸಿಕ್ಕ ಬಾಳೆ ಎಲೆಯ ಹಾಗೆ ಛಿದ್ರ ಛಿದ್ರವಾಗಿದ್ದವು.

ಹೀಗೆ ಮನೆಯವರಿಂದ, ಊರವರಿಂದ ಉಪೇಕ್ಷೆಗೊಳಗಾದ ಕೆಂಪಿ ಹಸು ಕರು ಬೇರ‍ೆ ಹಾಕಿರಲಿಲ್ಲ. ಇದರ ಹರಾಮಿ ಬುದ್ಧಿ ನೋಡಿ ಯಾವ ಎತ್ತು ಕೂಡ ಇದರ ಹತ್ತಿರ ಸುಳಿಯಲಿಲ್ಲವೇನೋ!. ಅಂತೂ ಈ ಬಂಜೆ ದನದ ಉಪಯೋಗ ಎಂದರೆ ಹಟ್ಟಿಗೆ ಗೊಬ್ಬರ ಅಷ್ಟೇ.

ಇಂತಹ ಕೆಂಪಿ ಹಸು ನನಗೆ ತೀರಾ ಅಚ್ಚುಮೆಚ್ಚಾದುದು ತೀರಾ ಸಹಜವಾಗಿತ್ತು. ಮನೆಯಲ್ಲಿ ಅಪ್ಪ ಸಿಕ್ಕಾಪಟ್ಟೆ ಹೊಡೆಯುತ್ತಿದ್ದರು. ನನ್ನ ಸೊಕ್ಕು, ಗರ್ವ, ಹಟಮಾರಿತನ ಎಲ್ಲರನ್ನು ಕೆರಳಿಸಿಬಿಡುತ್ತಿತ್ತು. ನಾನು ಎಷ್ಟು ಪೆಟ್ಟು ತಿನ್ನುತ್ತಿದ್ದೆನೆಂದರೆ ಅಪ್ಪನ ಬೆತ್ತದ ಛಡಿಯೇಟಿನಿಂದಾಗಿ ತೋಳು, ಬೆನ್ನು, ತೊಡೆಗಳಿಂದ ಕೆಲವೊಮ್ಮೆ ರಕ್ತ ಜಿನುಗುತಿತ್ತು. ಮಂಚದ ಕೆಳಗೆ ಅಡಗಿಕೊಂಡರೆ ಕಾಲಿನಿಂದಲೇ ಒದೆಯುತ್ತಿದ್ದರು.

ನಾನು ಅಪ್ಪ, ಅಣ್ಣ, ಅಮ್ಮ (ಅಮ್ಮ ಹೊಡೆಯುತ್ತಿದ್ದದ್ದು ತೀರ ಅಪರೂಪ. ಹೊಡೆದಾದ ಮೇಲೆ ಅವರು ಒಬ್ಬರೇ ಸೆರಗಿನಿಂದ ಕಣ್ಣೊರಿಸಿಕೊಳ್ಳುತ್ತಾ ಅಳುತ್ತಿದ್ದರು) ಪೆಟ್ಟು ತಿನ್ನುವಾಗಲೆಲ್ಲ ಹಲ್ಲು ಕಚ್ಚಿ ಅದನೆಲ್ಲ ಸಹಿಸಿಕೊಳ್ಳುತ್ತಿದ್ದೆ. ಕೊನೆಗೆ ಸೀದಾ ಹಟ್ಟಿಗೆ ಹೋಗುತ್ತಿದ್ದೆ. ಕೆಂಪಿ ಹಸುವಿನ ಕೊರಳನ್ನಪ್ಪಿ ಅಳುತ್ತಿದ್ದೆ. ಅದರ ಹತ್ತಿರ ಮಾತಾಡುತ್ತಿದ್ದೆ. ಅದರೊಡನೆ ದುಃಖ ತೋಡಿಕೊಳ್ಳುತ್ತಿದ್ದೆ.

‘ನಾನು ನೀನು ಇಬ್ಬರೂ ಒಂದೇ. ನಾವು ಯಾರಿಗೂ ಬೇಡವಾದವರು’ ಎಂದು ತುಂಬಾ ಹೊತ್ತು ಬಿಕ್ಕಳಿಸಿ ಅಳುತ್ತಿದ್ದೆ. ಅದಕ್ಕೆ ಇದೆಲ್ಲ ಅರ್ಥವಾಗುತ್ತಿತ್ತು. ಸುಮ್ಮನೆ ನನ್ನ ನೆತ್ತಿಯನ್ನು ಮೂಸಿ ನೋಡುತ್ತಾ ಮೈಕೈಗಳನ್ನು ನಾಲಗೆಯಿಂದ ಸವರುತಿತ್ತು.

ಇಂತಹ ಕೆಂಪಿ ಹಸು ಒಂದು ದಿನ ಮನೆಗೆ ಬರಲೇ ಇಲ್ಲ. ಯಾರೂ ಅದನ್ನು ಗಮನಿಸಲೇ ಇಲ್ಲ. ನಾನು ಹೇಳಿದರೂ ಯಾರೂ ಕ್ಯಾರೇ ಅನ್ನಲಿಲ್ಲ. ಮಾರನೆಯ ದಿನವು ಬರದಾಗ ಅಪ್ಪ, ಅಣ್ಣನಿಗೆ ಅದನ್ನು ಹುಡುಕಿಕೊಂಡು ಬರಲು ಅಮ್ಮ ಹೇಳಿದರು. ಅವರಿಗೋ ಗೊಬ್ಬರದ ಚಿಂತೆ. ಗದ್ದೆ ತೋಟಗಳಿಗೆ ಹಟ್ಟಿ ಗೊಬ್ಬರವನ್ನೇ ಉಪಯೋಗಿಸುತ್ತಿದ್ದರು. ರಾಸಯನಿಕ ಗೊಬ್ಬರಗಳಿಂದ ಮಣ್ಣಿನ ಫಲವತ್ತತೆ ಹಾಳಾಗುತ್ತದೆಯೆಂಬುದು ನನ್ನ ಅಪ್ಪನ ಬಲವಾದ ನಂಬಿಕೆ. ಅದವರ ಪ್ರತಿಪಾದನೆ.

ನಮ್ಮ ಮನೆಯಿಂದ ಒಂದರ್ಧ ಮೈಲಿ ದೂರದಲ್ಲಿ ನಮ್ಮ ದೊಡ್ಡಪ್ಪನ ಜಮೀನಿತ್ತು. ಅಲ್ಲಿ ಅವರು ತೆಂಗಿನ ಸಸಿ ನೆಡಬೇಕೆಂದು ದೊಡ್ಡ ದೊಡ್ಡ ಗುಂಡಿ ತೋಡಿಟ್ಟಿದ್ದರು. ಆ ಗುಂಡಿಗಳಲ್ಲಿ ಆಗಾಗ ನಮಗೆ ಆಮೆಗಳು ಸಿಗುತ್ತಿದ್ದವು. ಇಂತಹ ಒಂದು ಗುಂಡಿಗೆ ನಮ್ಮ ಕೆಂಪಿ ಹೂತು ಬಿದ್ದಿತ್ತು. ಅದರ ಕಾಲುಗಳು ಗುಂಡಿಯ ಒಳಗಿದ್ದವು. ಕೈಗಳು ಗುಂಡಿಯ ಮೇಲ್ಭಾಗದಲ್ಲಿ ಚಾಚಿಕೊಂಡಿದ್ದವು. ದೊಡ್ಡ ಹೊಟ್ಟೆಯನ್ನು ಗುಂಡಿಯೊಳಗೆ ತುರುಕಿಸಿ ಬಿಟ್ಟಂತಾಗಿತ್ತು. ಸುತ್ತಲೂ ನೊಣಗಳು ಮುತ್ತಿಕೊಂಡಿದ್ದವು. ಬಾಲ ಅಲ್ಲಾಡಿಸಿ ಅವುಗಳನ್ನು ಓಡಿಸಲು ಸಾಧ್ಯವಿರಲಿಲ್ಲ. ಏಕೆಂದರೆ ಬಾಲ ಗುಂಡಿಯೊಳಗೆ ಇತ್ತು.

ಎರಡು ದಿನ ಹುಲ್ಲು, ನೀರಿಲ್ಲದೆ ಅದು ಬಸವಳಿದು ಹೋಗಿತ್ತು. ಅಪ್ಪನನ್ನು ನೋಡಿದೊಡನೆ ಅದರ ಕಣ್ಣು ಮಿಂಚಿತ್ತು. ಹಾಗೆಂದು ಅಪ್ಪನೇ ಮನೆಗೆ ಬಂದು ಹೇಳಿ ದೊಡ್ಡ ಕೊಡಪಾನವೊಂದರಲ್ಲಿ ಕಲಗಚ್ಚು ನೀರು ತೆಗೆದುಕೊಂಡು ಕರಿಯನನ್ನು ಕರೆದು ಪಿಕಾಶಿ, ಹಾರೆ, ಗುದ್ದಲಿಗಳನ್ನು ಒಟ್ಟು ಮಾಡಿಕೊಂಡು ದೊಡ್ಡಪ್ಪನ ಮಜಲಿನೆಡೆಗೆ ಹೋದರು.

ಮೊದಲಿಗೆ ಕೆಂಪಿಯ ಮೈಮೇಲೆ ಒಂದು ಕೊಡಪಾನ ತಣ್ಣೀರು ಸುರಿದರು. ಬಾಯಿಬಿಡಿಸಿ ಗೊಟ್ಟದಿಂದ (ಬಿದಿರಿನ ಕೊಳವೆ) ಕಲಗಚ್ಚು ಕುಡುಸಿದರು. ಅದಕ್ಕೆ ಸ್ವಲ್ಪ ಚೈತನ್ಯ ಬಂತು. ಇನ್ನು ಇವರು ತನ್ನನ್ನಿಲ್ಲಿಂದ ಮೇಲೆತ್ತುತ್ತಾರೆ ಎಂಬ ಭರವಸೆ ಮೂಡಿತು ಎಂಬಂತೆ ಕಿವಿಗಳನ್ನು ಅಲ್ಲಾಡಿಸಿತು. ಕಣ್ಣು ಮಿಟುಕಿಸಿತು.

ಅಷ್ಟು ಹೊತ್ತಿಗೆ ವಿಷಯ ತಿಳಿದು ಅಣ್ಣನೂ ಅಲ್ಲಿಗೆ ಬಂದ. ಊರಿನ ಕೆಲವರು ಬಂದರು. ಎಲ್ಲರೂ ಕೆಂಪಿಯ ಹರಾಮಿತನವನ್ನು ಕೊಂಡಾಡುವವರೇ! ಹಾಗಿದ್ದರೂ ಇದನ್ನು ಇಲ್ಲಿಂದ ಎತ್ತುವ ಬಗ್ಗೆಯೂ ಗಂಭೀರವಾದ ಸಲಹೆಗಳನ್ನು ನೀಡತೊಡಗಿದರು. ಕೊನೆಗೆ ಎಲ್ಲರೂ ಸೇರಿ ಗುಂಡಿಯನ್ನು ಇನ್ನಷ್ಟು ಅಗಲ ಮಾಡುವುದೆಂದು ತೀರ್ಮಾನಿಸಿ, ಹಾರೆ-ಗುದ್ದಲಿಗಳನ್ನು ಕೈಗೆತ್ತಿಕೊಂಡರು.

ಗುಂಡಿಯನ್ನು ಅಗೆದು ಅಗಲ ಮಾಡಿದ ಮೇಲೆ ಕೆಂಪಿಯ ಸೊಂಟಕ್ಕೆ ಹಗ್ಗ ಬಿಗಿದು ಆಚೆ ಈಚೆ ಜನ ನಿಂತು ಅದನ್ನು ಬಹು ಪ್ರಯಾಸದಿಂದ ಮೇಲೆತ್ತಿದರು. ಆದರೆ ಕೆಂಪಿ ಏಳಲೊಲ್ಲದು. ಬಹುಶಃ ಎರಡು ದಿನ ಅದೇ ಕಾಂಗರೂ ಸ್ಥಿತಿಯಲ್ಲಿ ಇತ್ತಲ್ಲ, ಅದಕ್ಕೆ ಕೈಕಾಲು ಜೋಮು ಹಿಡಿದಿರಬಹುದೆಂದು ಎಂದುಕೊಂಡರು ಎಲ್ಲ. ಅಲ್ಲೇ ನೆರಳಲ್ಲಿ ಕೂತು ಕೆಂಪಿಯ ಗುಣಗಾನ ಮಾಡುತ್ತಾ ಎಲೆಯಡಿಕೆ ಮೆಲ್ಲತೊಡಗಿದರು.

ಮತ್ತೆ ಪ್ರಯತ್ನಿಸಿದರೂ ಕೆಂಪಿಗೆ ಏಳಲು ಆಗಲೇ ಇಲ್ಲ. ನಮ್ಮ ನಾಟಿ ವೈದ್ಯ ಮಂಜಪ್ಪನೂ ಅಲ್ಲೇ ಇದ್ದ. ಆತ ಕೆಂಪಿಯ ಕೈಕಾಲನ್ನು ಮುಟ್ಟಿ ನೋಡಿ ಬಲಗಾಲು ಮುರಿದಿದೆ ಎಂದ. ನೋಡಿದರೆ ನಿಜವಾಗಿಯು ಅದು ಬಾತುಕೊಂಡಿತ್ತು. ಬಿದ್ದ ರಭಸಕ್ಕೆ ಮೊದಲು ಗುಂಡಿಗೆ ಕಾಲಿಟ್ಟ ಕಾಲು ಮುರಿದಿದೆ.

ಕೆಂಪಿಗೆ ನಡೆಯಲು ಆಗಲಿಲ್ಲ. ಅಲ್ಲೇ ಬಿಟ್ಟು ಹೋಗಲು ಯಾರಿಗೂ ಮನಸ್ಸಾಗಲಿಲ್ಲ. ಕೊನೆಗೆ ಭತ್ತ ಹೊಡೆಯುವ ತಡಿಯನ್ನು ತರಿಸಿ ಅದರ ಮೇಲೆ ಕೆಂಪಿಯನ್ನು ಮಲಗಿಸಿದರು. ಅಣ್ಣ, ಮಂಜಪ್ಪ, ಕರಿಯ, ಶೇಖರ ನಾಲ್ಕು ಜನ ತಡಿಯ ನಾಲ್ಕು ಮೂಲೆಗೆ ಹೆಗಲು ಕೊಟ್ಟರು.

ಮನೆಗೆ ಕೆಂಪಿಯನ್ನು ಹೊತ್ತು ತರುವಾಗ ದಾರಿಯಲ್ಲಿ ನಾಲ್ಕು ಕಡೆ ಇಳಿಸಿ ದಣಿವಾರಿಸಿಕೊಳ್ಳಬೇಕಾಯಿತು. ದಾರಿಯಲ್ಲಿ ಜನ ಅಲ್ಲಲ್ಲಿ ಹುಲ್ಲು, ನೀರು ನೀಡಿ ಕೆಂಪಿಗೆ ಉಪಚಾರ ಮಾಡಿದ್ದೇ ಮಾಡಿದ್ದು. ಕೆಂಪಿಯ ಆಟಾಟೋಪ ನೋಡಿ ‘ಲಟಾಂ ಕುದುರೆ’ ಎಂದು ಅಡ್ಡ ಹೆಸರು ಇಟ್ಟಿದ್ದ ಜನರು ಇವರ‍ೇನಾ ಎಂದು ನನಗಂತೂ ಆಶ್ಚರ್ಯ ಆಗಿತ್ತು.

ಮನೆಗೆ ಬಂದೊಡನೆ ಅಮ್ಮ ಅದನ್ನು ಕರುಗಳನ್ನು ಕಟ್ಟುವ ಕಂಚಿಲುನಲ್ಲಿ ಪ್ರತ್ಯೇಕವಾಗಿ ಇರಿಸಿದರು. ಹಟ್ಟಿಯಲ್ಲಿ ದನಗಳೊಟ್ಟಿಗೆ ಇಟ್ಟರೆ ಅದನ್ನು ಅವೆಲ್ಲಾದರು ತುಳಿದರೆ ಎಂಬ ಭಯ ಅವರಿಗೆ. ಅದಕ್ಕೆ ಹುಲ್ಲು ನೀರಿಟ್ಟು ಉಪಚರಿಸಿದ್ದೇ ಉಪಚರಿಸಿದ್ದು. ಮಂಜಪ್ಪ ದಿನಾ ಬಂದು ನಾರು ಬೇರಿನ ಔಷಧವನ್ನು ಗೊಟ್ಟದಲ್ಲಿ ಕುಡಿಸುತ್ತಿದ್ದ. ಕಾಲಿಗೆ ಔಷಧಿಯನ್ನು ಕಟು ಹಾಕುತ್ತಿದ್ದ. ಅದನ್ನು ಹಿಡಿದುಕೊಳ್ಳಲು ಅಪ್ಪ, ಅಣ್ಣ, ಅಮ್ಮ ಕರಿಯ ಹೆಣಗಾಡುತ್ತಿದ್ದರು. ನಾನು, ತಂಗಿಯರೆಲ್ಲಾ ಮೂಕ ಪ್ರೇಕ್ಷಕರು. ಅದರ ನೆತ್ತಿ ಸವರಿ ಸಾಂತ್ವಾನ ಹೇಳುತ್ತಿದ್ದೆವು.

ದಿನಾ ಸಂಜೆ ಮತ್ತು ಬೆಳಿಗ್ಗೆ ಅದರ ಕಾಲಿನ ಹತ್ತಿರ ಹೊಟ್ಟೆಯ ಅಡಿಗೆ ಹಗ್ಗ ಹಾಕಿ ಆಚೀಚೆ ಹಿಡಿದುಕೊಂಡು ಎದ್ದು ನಿಲ್ಲಿಸುತ್ತಿದ್ದೆವು. ಅದು ಕಾಲೂರಲು ಪ್ರಯತ್ನಿಸುತಿತ್ತು.

ಹೀಗೆ ಸುಮಾರು ದಿನ ಕಳೆಯಿತು. ಕೆಂಪಿ ನಿತ್ರಾಣವಾಗುತ್ತ ಹೋಯಿತು. ಮುರಿದ ಕಾಲು ಸರಿ ಹೋಗಲೇ ಇಲ್ಲ. ಅದಕ್ಕೆ ಇವರಿಂದ ಉಪಚಾರ ಮಾಡಿಸಿಕೊಂಡು ಸಾಕು ಎನಿಸಿತೇನೋ!

ಒಂದು ದಿನ ಬೆಳಿಗ್ಗೆ ಎಂದಿನಂತೆ ನಾನು ಚಾಪೆಯಿಂದ ಎದ್ದವಳೇ ಕೆಂಪಿಯನ್ನು ನೋಡಲು ಹೋದೆ. ಅದು ನೀಳವಾಗಿ ಕತ್ತು ಚಾಚಿ ಮಲಗಿತ್ತು. ಬಾಯಿಂದ ನಾಲಗೆ ತುಸುವೇ ಹೊರಗೆ ಬಂದಿತ್ತು. ಕಣ್ಣು ತೆರೆದೇ ಇತ್ತು. ಆಶ್ಚರ್ಯ ಎಂದರೆ ಅದರ ಕಣ್ಣು ಮಿನುಗುತ್ತಿರುವಂತೆ ಭಾಸವಾಗುತಿತ್ತು. ಮುಟ್ಟಿ ನೋಡಿದೆ. ಮುಖದಲ್ಲಿ ಕೂತಿದ್ದ ನೊಣಗಳೆಲ್ಲಾ ಹಾರಿ ಹೊದವು. ನನಗೆ ಗಾಬರಿಯಾಯಿತು. ಮನೆಗೆ ಓಡಿದೆ. ’ಕೆಂಪಿ ನೀಟ ಮಲಗಿದೆ. ಮುಟ್ಟಿದರೆ ಏಳ್ಲೇ ಇಲ್ಲ.’ ಎಂದು ಅಮ್ಮನಿಗೆ ಹೇಳಿದೆ.

‘ಕೆಂಪಿ ಸತ್ತುಹೋಯಿತು’ ಎನ್ನುತ್ತಾ ಅಪ್ಪ, ಹಾರೆ-ಗುದ್ದಲಿ ತೆಗೆದುಕೊಂಡರು. ಸುಮಾರು ಹೊತ್ತಿನ ನಂತರ ಅಪ್ಪ, ಅಣ್ಣ, ಕರಿಯ, ಅದರ ಹೊಟ್ಟೆಗೆ ಹಗ್ಗ ಕಟ್ಟಿ ಎಳೆದುಕೊಂಡು ಹೋದರು. ಅದನ್ನು ಗುಂಡಿಯಲ್ಲಿಟ್ಟರು. ನನ್ಗೆ ಏನನ್ನಿಸಿತೋ ಏನೋ. ನಾನು ಯಾವಾಗಲೂ ಉಪಯೋಗಿಸುತ್ತಿದ್ದ ಬಿಳಿ ಟವಲ್ಲೊಂದನ್ನು ತಂದು ಅದರ ಮೇಲೆ ಹಾಕಿಬಿಟ್ಟೆ. "ಅಮ್ಮ ನಂಗೆ ಒಂದು ರೂಪಾಯಿ ಪಾವಲಿ ಕೊಡಿ" ಎಂದೆ. ಅಮ್ಮ ಯಾಕೆ ಎಂದರು. "ಕೆಂಪಿಯ ಹಣೆಗಿಡಲು" ಎಂದೆ. ನಮ್ಮ ಅಜ್ಜಿ ಸತ್ತಾಗ ಹೀಗೆ ಮಾಡಿದ್ದನ್ನು ನಾನು ನೋಡಿದ್ದೆ. ಅಮ್ಮ ನಂಗೆ ಒಂದು ರೂಪಾಯಿ ಕೊಟ್ಟರು.

ಇಂದು, ಇಂತಹ ಈ ಬೇಸರದ ಸಂಜೆಯಲಿ ನನಗೆ ನನ್ನ ಬಾಲ್ಯದ ಯಾವ ಒಡನಾಡಿಗಳ ನೆನಪೂ ಅಷ್ಟಾಗಿ ಕಾಡದೆ ಕೆಂಪಿಯೇ ಏಕೆ ಕಾಡುತ್ತದೆ? ಕೆಂಪಿಯ ಯಾವ ಗುಣಗಳು ನನ್ನಲ್ಲಿದ್ದವು? ಅದು ಸಾಂಪ್ರದಾಯಿಕ ಹಸುವಾಗಿರದೆ ಹರಾಮಿ ದನವಾಗಿದ್ದೇ ನನ್ನ ಮೆಚ್ಚುಗೆಗೆ ಕಾರಣವಾಗಿತ್ತೆ?

ಕೈಯಲ್ಲಿದ್ದ ಮೊಬೈಲ್ ರಿಂಗುಣಿಸಿತು. ಅಮ್ಮ ಲೈನಿನಲ್ಲಿದ್ದರು. "ಈ ಸಲ ದಸರಾಕ್ಕೆ ಬರ್ತೀಯಲ್ಲಾ, ಮಕ್ಕಳನ್ನು ಕರೆದುಕೊಂಡು ಬಾ, ಕೆಂಪಿ (ಆ ಕೆಂಪಿಯಲ್ಲ) ಕರು ಹಾಕಿದೆ. ಹೆಣ್ಣು ಕರು. ಕಂದು ಬಿಳಿ ಬಣ್ಣ. ಮಂಗಳಾ ಎಂದು ಹೆಸರಿಟ್ಟಿದ್ದೇವೆ. ಮಕ್ಕಳಿಗೆ ಇಷ್ಟವಾಗುವುದು...." ಅಮ್ಮ ಹೇಳುತ್ತಲೇ ಇದ್ದರು. ನಾನು ಕೇಳಿಸಿಕೊಳ್ಳುತ್ತಲೇ ಇದ್ದೆ.


[ ’ಮಯೂರ’ದಲ್ಲಿ ಪ್ರಕಟವಾದ ಪ್ರಬಂಧ ]

Sunday, October 4, 2009

ನಿಸರ್ಗದ ವಿಸ್ಮಯ!



















ಕಳೆದ ತಿಂಗಳು ಹೆಚ್ಚು ಕಮ್ಮಿ ನಾನು ಧರ್ಮಸ್ಥಳ ಸಮೀಪದ ನನ್ನ ಜಮೀನಲ್ಲೇ ಇದ್ದೆ. ಅಡಿಕೆ, ಕೊಕ್ಕೋ, ಗೇರು, ಬಾಳೆ ಗಿಡಗಳನ್ನು ನೆಡಿಸ್ತಾ, ಗೊಬ್ಬರ ಹಾಕುವುದರಲ್ಲಿ ನಿರತಳಾಗಿದ್ದೆ.
ಮೊನ್ನೆ ಬೆಂಗಳೂರಿಗೆ ಹಿಂದಿರುಗಿದಾಗಲೂ ಮನಸ್ಸು ಜಮೀನು ಕಡೆಯೇ ಎಳೆಯುತ್ತಿತ್ತು. ಧಾರಾಕಾರ ಸುರಿಯುತ್ತಿರುವ ಜಡಿ ಮಳೆಯಿಂದಾಗಿ ಹೊಂಡದಲ್ಲಿ ನೀರು ನಿಂತು ಹಾಕಿದ ಗಿಡಗಳು ಕೊಳೆತು ಹೋದರೆ....? ಭಯ ಕಾಡುತ್ತಿತ್ತು. ಕಪಿಲೆ ಮುನಿದು ತನ್ನ ಬಲಿಷ್ಟ ತೋಳುಗಳನ್ನು ನನ್ನ ತೋಟಗಳೆಡೆ ಬೀಸಿದರೆ...?ತೋಟಕ್ಕೆ ಹೋಗಲು ಮನಸ್ಸು ನೆಪಗಳನ್ನು ಹುಡುಕುತ್ತಿತ್ತು.

ನೆಪ ಸಿಕ್ಕಿತ್ತು; ಅ.೨ ಗಾಂಧಿ ಜಯಂತಿ. ಗ್ರಾಮ ಸ್ವರಾಜ್ ಕನಸು ಕಂಡವರು. ಹಳ್ಳಿಗಳ ಉದ್ಧಾರದಲ್ಲೇ ದೇಶದ ಪ್ರಗತಿ ಎಂದವರು. ಅವರ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸೋಣ ಅಂದುಕೊಂಡೆ. ಅ.೨ರಂದು ಮುಂಜಾನೆ ಎದ್ದು ಮನೆಯವರನ್ನೆಲ್ಲಾ ಕೂಡಿಸಿಕೊಂಡು ದೇವನಹಳ್ಳಿಯಲ್ಲಿರುವ ’ತೇಜ ಅಗ್ರೋ ಫಾರ್ಮ್’ಗೆ ಬಂದುಬಿಟ್ಟೆ.

’ದೂರ ಬೆಟ್ಟದಲ್ಲಿ ಪುಟ್ಟ ಮನೆಯಿರಬೇಕು. ಮನೆಯ ಸುತ್ತ ಹೂವ ರಾಶಿ ಹಾಸಿರಬೇಕು...’ ಎಂಬ ಹಾಡಿನ ಸಾಲುಗಳನ್ನು ಎಲ್ಲರಂತೆ ನಾನು ಕೂಡ ಮೆಚ್ಚಿಕೊಂಡಿದ್ದೆ. ಜಮೀನು ಕೊಂಡುಕೊಂಡಿದ್ದೆ. ಹೂ- ಹಣ್ಣು ಬೆಳೆಯದಿದ್ದರೆ ಹೇಗೆ?.

ನನ್ನ ಉದ್ದೇಶ, ಕನಸುಗಳನ್ನು ತೇಜ ನರ್ಸರಿಯ ಮಾಲೀಕರಾದ ರಮೇಶ್ ಅವರಿಗೆ ವಿವರಿಸಿದೆ. ಎರಡು ದಶಕಗಳಿಗಿಂತಲೂ ಹಿಂದಿನಿಂದ ಸಾವಯವ ಪದ್ದತಿಯಲ್ಲಿ ಗಿಡಗಳನ್ನು ಬೆಳೆಸಿ, ನಾಡಿನಾದ್ಯಂತ ವಿತರಿಸುತ್ತಾ, ಆಸಕ್ತರಿಗೆ ತರಬೇತಿ ಶಿಭಿರಗಳನ್ನು ಏರ್ಪಡಿಸುತ್ತಾ ಇರುವ ಪ್ರಗತಿಪರ ರೈತ ಅವರು. ರಮೇಶ್ ನನಗೆ ಮಲೆನಾಡಿಗೆ ಹೊಂದಿಕೊಳ್ಳುವ ೨೦ ರೀತಿಯ ವಿವಿಧ ಹಣ್ಣಿನ ಗಿಡಗಳನ್ನು ನೀಡಿದರು. ಅದರಲ್ಲಿ ಹಲವು ಗಿಡಗಳ ಹೆಸರನ್ನು ನಾನು ಕೇಳಿಯೇ ಇರಲಿಲ್ಲ. ಕಲಾಫಡ್ ಮಾವು, ಕಾಲಪಟ್ಟಿ ಸಪೋಟ, ಕ್ರಿಕೇಟ್ ಬಾಲ್ ಸಪೋಟ, ವಾಟರ್ ಅಪಲ್, ಬಗ್ವಾ ದಾಳಿಂಬೆ, ರೆಡ್ ಸೀತಾಫಲ... ಹೀಗೆ, ನನಗೆ ಯಾವುದನ್ನು ಕೊಂಡುಕೊಳ್ಳಲಿ ಎಂದು ಗೊಂದಲ. ರಮೇಶ್ ಸರಿಯಾದ ಮಾರ್ಗದರ್ಶನವನ್ನು ನೀಡುವುದರಲ್ಲೂ ಸಿದ್ದಹಸ್ತರು. ಎಲ್ಲಾ ಗಿಡಗಳ ಗುಣವಿಶೇಷಗಳನ್ನು ವಿವರಿಸುತ್ತಾ ನಮ್ಮ ಆಯ್ಕೆಯನ್ನು ಸುಗಮಗೊಳಿಸಿದರು.

ನಮ್ಮ ಗಾಡಿಯಲ್ಲಿ ತುಂಬುವಷ್ಟು ಗಿಡಗಳನ್ನು ಹೇರಿಕೊಂಡು, ಮುಂದಿನ ಸರ್ತಿಗಾಗಿ ಇನ್ನಷ್ಟು ಗಿಡಗಳನ್ನು ಗುರುತಿಸಿಟ್ಟುಕೊಂಡೆವು.
ಬ್ಲಾಗ್ ಬರೆದದ್ದು ಇದನ್ನೆಲ್ಲಾ ಹೇಳಲಿಕ್ಕಲ್ಲ ಮಾರಾಯ್ರೆ! ಕೃಷಿ ಯಾರಿಗೆ ಬೇಕು ಅಲ್ವಾ?. ಊರಿಂದ ಬರುವಾಗ ಚಾರ್ಮಾಡಿ ಘಾಟ್ ನಲ್ಲಿ ಬಂದೆವು, ಅದು ನನ್ನ ಇಷ್ಟದ ಹಾದಿ. ಬೆಟ್ಟವನ್ನು ಬಳಸಿ, ಬಳಸಿ ಹತ್ತುತ್ತ ಬರುವಾಗ ನೇಪಾಳ ಹಾದಿಯ ಕಣಿವೆ, ಗಿರಿ ಶೃಂಗಗಳ ನೆನಪು ಬರುತ್ತದೆ. ಜೇನುಕಲ್ಲಿನ ಬಳಸು ದಾರಿಯಲ್ಲಿ ನಿಂತು ಪ್ರಪಾತದತ್ತ ಕಣ್ಣು ಹಾಯಿಸಿದರೆ ದೇವಲೋಕದಲ್ಲಿ ನಿಂತ ಅನುಭವ. ಆದರೆ ನಿನ್ನೆ ಎಲ್ಲವೂ ಹೊಸ ಅನುಭವ; ಮಂಜು ಮುಸುಕಿದ ಹಾದಿ. ಮಧ್ಯಾಹ್ನದಲ್ಲಿಯೇ ಹೆಡ್ ಲೈಟ್ಸ್ ಹಾಕಿಯೇ ಗಾಡಿ ಓಡಿಸಬೇಕಾಗಿತ್ತು. ಬಲಗಡೆ ಮಂಜು ಮುಸುಕಿದ ಪರ್ವತ. ಎಡಗಡೆ ನಯನ ಮನೋಹರವಾದ ಜಲಪಾತಗಳು. ಕ್ಯಾಮಾರವನ್ನು ಮನೆಯಲ್ಲೇ ಬಿಟ್ಟು ಬಂದ ಬಗ್ಗೆ ನನ್ನನ್ನು ನಾನೆಂದೂ ಕ್ಷಮಿಸಿಕೊಳ್ಳಲಾರೆ. ಆದರೂ ನನ್ನ ಕ್ಯಾಮಾರ ಪೋನಿನಿಂದ ತೆಗೆದ ಕೆಲವೊಂದು ಚಿತ್ರಗಳನ್ನು ಇಲ್ಲಿ ಹಾಕಿದ್ದೇನೆ. ಇನ್ನೂ ಒಂದು ವಾರ ಕಾಲ ಈ ವೈಭವ ನಿಮಗೆ ಕಾಣಸಿಗಬಹುದು. ನೀವು ಹೋಗುವಿರಾದರೆ ಕ್ಯಾಮಾರ ಕೊಂಡು ಹೋಗಲು ಮರೆಯದಿರಿ.

ಏಕ ಕಾಲದಲ್ಲಿ ಜೀವನದಿಗಳು ಉತ್ತರ ಕರ್ನಾಟಕದಲ್ಲಿ ಮೃತ್ಯು ಸ್ವರೂಪಿಯಾಗಿಯೂ, ಘಟ್ಟಪ್ರದೇಶದಲ್ಲಿ ಹೃನ್ಮನ ತಣಿಸುವ ಜಲಪಾತಗಳಾಗಿಯೂ ಅವತರಿಸುವ ವಿಸ್ಮಯವೇ ನಿಸರ್ಗದ ಸೋಜಿಗ!

Wednesday, September 9, 2009

ಸ್ಕೂಟರಿಗೊಂದು ಶ್ರದ್ಧಾಂಜಲಿ






ಒಂದು ದಿವಸ ಹೀಗೆ ವಿಜಯನಗರದಿಂದ ೧೭೦ನೇ ಬಸ್ಸು ಹತ್ತಿ ಮಿನರ್ವ ಸರ್ಕಲ್ ಕಡೆ ಹೊರಟಿದ್ದೆ. ಮಾಮೂಲಿನಂತೆ ಕಿಟಕಿ ಪಕ್ಕದ ಸೀಟೇ ಹಿಡಿದಿದ್ದೆ. ಘನ ಉದ್ದೇಶವೇನೂ ಇರದೆ ಸುಮ್ಮನೆ ಕಿಟಕಿಯಿಂದ ಹೊರನೋಡುತ್ತಾ ರಸ್ತೆಯಲ್ಲಿ ಓಡಾಡುತ್ತಿದ್ದ ವಾಹನಗಳನ್ನು ಗಮನಿಸುತ್ತಿದ್ದೆ.

ಕಾರಣವೇ ಇಲ್ಲದೆ ನನ್ನ ದೃಷ್ಟಿ ದಾರಿಯಲ್ಲಿ ಓಡಾಡುತ್ತಿದ್ದ ದ್ವಿಚಕ್ರ ವಾಹನಗಳ ಮೇಲೆ ಬೀಳುತ್ತಿತ್ತು. ಬೈಕ್ ಎಂದರೆ ನನಗೆ ಚಿಕ್ಕಂದಿನಿಂದಲೂ ಒಂಥರಾ ಮೋಹ. ಅದರ ಶಬ್ದ, ಅದರ ಠೀವಿ, ಆ ಗಾಂಬಿರ್ಯ, ಬಿರುಸು.. ಅದರಲ್ಲೂ ಬುಲೆಟ್ ಶಬ್ದ ಕೇಳಿದರೆ ಒಂಥರ ಉದ್ವೇಗ. ಈಗ ಬಿಡಿ, ಬುಲೆಟ್ ಬಂದರೆ ಯಾವನೋ ಪೋಲಿಸ್ ಬಂದಂತಾಗುತ್ತದೆ.

ಹೀಗೆ ನನ್ನ ಕಣ್ಣುಗಳು ವಾಹನಗಳ ತಪಾಸಣೆ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ನನಗೆ ಜ್ನಾನೋದಯವಾಯ್ತು; ಸ್ಕೂಟರ್ ಸವಾರರ ಹಿಂದಿನ ಸೀಟುಗಳೆಲ್ಲಾ ಖಾಲಿ ಖಾಲಿ. ಅಪರೂಪಕ್ಕೊಮ್ಮೆ ಭರ್ತಿಯಾದ ಸ್ಕೂಟರ್ ಕಂಡರೂ ಅದರಲ್ಲಿ ಸವಾರನಂತೆಯೇ ವಯಸ್ಸಾದ ಗಂಡಸೊಬ್ಬ ಕೂತಿರುತ್ತಿದ್ದ. ಆದರೆ ಬೈಕಿನ ಹಿಂದಿನ ಸೀಟು ಯಾವಾಗಲೂ ಭರ್ತಿ. ದೂರದಿಂದ ನೋಡಿದರೆ ಒಬ್ಬರೇ ಕೂತಿದ್ದಾರೆನೋ ಎಂಬಷ್ಟರ ಮಟ್ಟಿಗೆ ಅಂಟಿಕೊಂಡೇ ಕೂತಿರುವ ಯುವ ಜೋಡಿಗಳು. ಸ್ಕೂಟರೆಂಬ ಮಂದಗಮನೆಯೆದುರು ಬೈಕ್ ಚಿಮ್ಮುವ ಕುದುರೆ.

ಯಾವುದೋ ನಾಟಕ ನೋಡಲೆಂದು ಕಲಾಕ್ಷೇತ್ರಕ್ಕೆ ಹೊರಟಿದ್ದೆ. ಅದು ನನಗೆ ಮರೆತೇ ಹೋಯಿತು. ಸ್ಕೂಟರ್ ಅವಲೋಕನವೇ ನನಗೆ ಹೆಚ್ಚು ಇಂಟ್ರೆಸ್ಟಿಂಗ್ ಅನ್ನಿಸತೊಡಗಿತು. ಒಂದು ಘಂಟೆ ಅವಧಿಯ ನನ್ನ ಪಯಣದಲ್ಲಿ ಕನಿಷ್ಠ ಹತ್ತು ಸಿಗ್ನಲ್ ಗಳಾದರೂ ದೊರೆಯುತ್ತದೆ. ಇದು ನನ್ನ ಸ್ಕೂಟರ್ ಅವಲೋಕನಕ್ಕೆ ಹೆಚ್ಚು ಉತ್ತೇಜನ, ಪ್ರೋತ್ಸಾಹ ನೀಡಿತು.

ಹಳೆಯ ಕಾಲದ ಮುತ್ತೈದೆ ತರಹ ರಸ್ತೆಗಳಲ್ಲಿ ಸ್ಕೂಟರ್ ಓಡಾಡುತ್ತದೆ. ಇದನ್ನು ಯುವಕರು ಓಡಿಸಿದ್ದನ್ನು ನಾನು ನೋಡಿರುವುದು ಅಪರೂಪ. ಅಂಗಡಿಗಳನ್ನು ಇಟ್ಟುಕೊಂಡಿರುವ ಕೆಲವು ಮಾರ್ವಾಡಿ ಹುಡುಗರು ತಮ್ಮ ಅಪ್ಪಂದಿರ ಸ್ಕೂಟರ್ ಓಡಿಸುವುದನ್ನು ನೋಡಿದ್ದೇನೆ. ಅದು ಬಿಟ್ಟರೆ ರಿಯಲ್ ಎಸ್ಟೇಟ್ ನಡೆಸುವ ಕೆಲವು ತರುಣರು ಅಷ್ಟೇ.

ಸ್ಕೂಟರಿನಲ್ಲಿ ಕೂತು ಗೆಳೆಯನ ಸೊಂಟ ಬಳಸಿ ಪಿಸುಗುಡುತ್ತಾ ಸಾಗುವ ಸುಂದರಿಯನ್ನು ಇದುವರೆಗೂ ನಾನು ಕಂಡಿಲ್ಲ. ಸ್ಕೂಟರ್ ಏನಿದ್ದರೂ ದೇವಸ್ಥಾನಕ್ಕೆ ಹೊಗುವ ಮುತೈದೆಯರಿಗೆ, ಆಸ್ಪತ್ರೆಗೆ ಹೋಗುವ ಹೆಂಗಳೆಯರಿಗೆ, ಮಾರ್ಕೇಟಿಗೆ ಹೋಗುವ ವ್ಯಾಪಾರಿಗಳಿಗೇ ಸರಿ. ಸ್ಕೂಟರ್ ಸವಾರರ ಮೇಲೆ ನನಗೆ ಸಿಂಪತಿ ಇದೆ.

ಹೋದಲ್ಲಿ ಬಂದಲ್ಲಿ ಸ್ಕೂಟರ್ ನೋಡುವುದೇ ನನಗೊಂದು ಗೀಳಾಗಿ ಅಂಟಿಕೊಂಡಿತು. ಇದರಿಂದ ಅನೇಕ ರೀತಿಯಲ್ಲಿ ನನಗೆ ಉಪಕಾರವಾಯ್ತು. ಸ್ಕೂಟರ್ ಬಗ್ಗೆ ಅನೇಕ ಹೊಳಹುಗಳು ನನಗೆ ಸಿಕ್ಕವು. ನನ್ನ ವಿಮರ್ಶಾ ನೋಟ ತೀಕ್ಷ್ಣವಾಯಿತು. ಕೊಂಚಮಟ್ಟಿಗೆ ಗಂಡಸರ ಮನಸ್ಥಿತಿ ಅರ್ಥವಾಗತೊಡಗಿತು.

ಮನಸ್ಸು ಬಹಳ ಹಿಂದಕ್ಕೆ ಹೋಯಿತು. ನಾನು ಬೆಂಗಳೂರಿಗೆ ಬಂದ ಹೊಸತು. ಮುಗ್ಧತೆ ಇನ್ನೂ ಇತ್ತು. ಸಂಜೆ ಅಫೀಸ್ ಬಿಟ್ಟೊಡನೆ ನೇರ ಹಾಸ್ಟೇಲ್ ಗೆ ಹೋಗುತ್ತಿದ್ದೆ. ಹತ್ತಿರದ ದಾರಿ. ನಡೆದುಕೊಂಡೇ ಹೋಗುತ್ತಿದ್ದೆ. ನನಗೆ ಗೊತ್ತಿದ್ದುದು ಅದೊಂದೇ ದಾರಿ. ತಲೆ ತಗ್ಗಿಸಿ ನಡೆಯುತ್ತಿದ್ದವಳು ತಲೆ ಎತ್ತುತ್ತಿದ್ದುದು ಹಾಸ್ಟೇಲಿನಲ್ಲೇ. ಕೆಲಮಂದಿ ವಿಳಾಸ ಕೇಳುವವರು ಆಗೀಗ ಮಾತಾದಿಸುತ್ತಿದ್ದರು.

ವರ್ಕಿಂಗ್ ವಿಮೆನ್ಸ್ ಹಾಸ್ಟೇಲ್ ಇದೆಯಲ್ಲಾ, ಅದು ನಮಗೆ ಬಹಳಷ್ಟು ಪ್ರಪಂಚ ಜ್ನಾನವನ್ನು ಕಲಿಸಿಕೊಡುತ್ತದೆ. ಹೆಣ್ಣುಮಕ್ಕಳ ಮಾನಸಿಕ ಪ್ರಪಂಚವೊಂದು ಕಣ್ಣಿಗೆ ಕಂಡೂ ಕಾಣದಂತೆ ತೆರೆದುಕೊಳ್ಳುತ್ತದೆ. ವಿಷಯಾಂತರವಾಯ್ತು ಅಂದಿರಾ...? ಸಾರಿ. ಈಗ ರೋಡಿಗೆ ಬನ್ನಿ.

ನಾನು ನಡೆದುಕೊಂಡು ಹೋಗುತ್ತಿರುವಾಗ ಸ್ಕೂಟರ್ ಏನಾದರೂ ನನ್ನ ಹಿಂದಿನಿಂದ ಬಂದರೆ [ನಾನು ಫುಟ್ ಪಾತ್ ನಲ್ಲಿ ಇರುತ್ತೇನೆ. ಅದರಲ್ಲಿ ನಿಮಗೆ ಸಂಶಯ ಬೇಡ] ಅದು ನನ್ನ ಬಳಿ ಬಂದಾಗ ಸ್ಲೋ ಆಗುತ್ತಿತ್ತು. ಮುಂದೆ ಹಾದು ಹೋದ ಮೇಲೂ ಸವಾರ ಹಿಂದಿರುಗಿ ನೋಡ ನೋಡುತ್ತಲೇ ಹೋಗುತ್ತಿದ್ದ. ಆತ ನನಗೇನಾದರೂ ಪರಿಚಿತನಿರಬಹುದೇ ಎಂದು ನಾನೂ ಹಲವು ಬಾರಿ ಇಂಥವರ ಬಗ್ಗೆ ಯೋಚಿಸುತ್ತಿದ್ದುದುಂಟು.

ಇನ್ನು ಕೆಲವರು ಹತ್ತಿರ ಬರುತ್ತಿದ್ದಂತೆಯೇ ಬಾಯಲ್ಲೇನೋ ಮಣ ಮಣಗುಡಿಸುತ್ತಿದ್ದರು. ಕೆಲವರಂತೂ ತುಟಿ ಚಲನೆಯಿಲ್ಲದೆಯೇ ಹಲ್ಲು ಕಚ್ಚಿ ಗಂಟಲಿನೊಳಗಿನಿಂದಲೇ ’ಬರ್ತೀರಾ?’ ’ರೇಟ್ ಎಷ್ಟು?’ ಎನ್ನುತ್ತಿದ್ದರು. ಇದು ನಿಮಗೆ ಹೇಗೆ ಗೊತ್ತಾಯ್ತು ಎಂದು ಅನುಮಾನಿಸಬೇಡಿ ಮಾರಾಯ್ರೆ. ನಾನು ಭಾಷಾಶಾಸ್ತ್ರದ ವಿದ್ಯಾರ್ಥಿಯಾಗಿದ್ದೆ. ನಾಭಿಮೂಲದಿಂದ ತುಟಿ ಮೂಗುಗಳ ತನಕ ಯಾವ್ಯಾವ ಸ್ವರಗಳು ಎಲ್ಲೆಲ್ಲಿ ಹುಟ್ಟುತ್ತವೆ ಎಂಬುದು ನನಗೆ ಗೊತ್ತು.

ಇಂದಿಗೂ ಸ್ಕೂಟರ್ ನವರನ್ನು ಕಂಡಾಗ ನಂಗೊಂಥರಾ ಅನುಮಾನ. ಇವರೂ ಕೂಡ ಮೆಜೆಸ್ಟಿಕ್ ಸುತ್ತ ಮುತ್ತ ಸಂಜೆ ಹೊತ್ತಲ್ಲಿ ನಿಧಾನವಾಗಿ ಪುಟ್ ಪಾತ್ ಬದಿಯಲ್ಲಿ ಸವಾರಿ ಮಾಡುತ್ತಿರುವವರಾಗಿರಬಹುದೇ? [ಸಂಭಾವಿತ ಸ್ಕೂಟರ್ ಸವಾರರ ಕ್ಷಮೆ ನನ್ನ ಮೇಲಿರಲಿ] ಮತ್ತೆ ವಿಷಯಾಂತರವಾಯಿತು ಅಂತಿರಾ...? ಟ್ರಾಕ್ ಗೆ ಬಂದೆ.

ಒಂದು ಕಾಲದಲ್ಲಿ ಸ್ಕೂಟರ್ ಗೆ ಎಂಥ ರಾಜ ಮರ್ಯಾದೆ ಇತ್ತು ಅಂತೀರ! ಅಳಿಯನಿಗೆ ಮದುವೆಯಲ್ಲಿ ಸ್ಕೂಟರ್ ಕೊಡಿಸುವುದೆಂದರೆ ಮಾವನಿಗೆ ಸಡಗರ. ಮಗಳಿಗೆ ಸಂಭ್ರಮ. ತನ್ನ ಮಾವ ತನ್ನನ್ನು ಗಂಭೀರವಾಗಿ ಪರಿಗಣಿಸಿದ್ದಾನೆ ಎಂದು ಅಳಿಯನಿಗೂ ಹೆಮ್ಮೆ. ಆ ಭಾಗ್ಯ ಈಗೆಲ್ಲಿದೆ ಬಿಡಿ. ಈಗ ಯಾವ ಮಾವನಾದರೂ ಅಳಿಯನಿಗೆ ಸ್ಕೂಟರ್ ಕೊಡಿಸುತ್ತಾನೆಯೇ? ಕೊಟ್ಟರೂ ಅಳಿಯ ತಗೊಂಡಾನೆಯೇ?

’ಎರಡು ಕನಸು’ ಸಿನೇಮಾ ಎಲ್ಲರೂ ನೋಡೇ ನೋಡಿರ್ತಾರೆ. ಅದರಲ್ಲಿ ರಾಜಕುಮಾರ್ ಸ್ಕೂಟರ್ ಓಡಿಸುತ್ತಾ ಹಾಡುವ ’ಎಂದು ನಿನ್ನ ನೋಡುವೆ, ಎಂದು ನಿನ್ನ ಸೇರುವೆ’ ಹಾಡನ್ನು ಯಾರದರೂ ಸ್ಕೂಟರನ್ನು ಮರೆತು ಜ್ನಾಪಿಸಿಕೊಳ್ಳಲು ಸಾಧ್ಯವೇ? ’ಬಯಲು ದಾರಿ’ಯಲ್ಲಿ ಅನಂತನಾಗ್ ಸ್ಕೂಟರ್ ಓಡಿಸಿದಂತೆ ನೆನಪು.

ಸ್ಕೂಟರ್ ಎಂದೊಡನೆ ನೆನಪಾಗುವುದು ಲ್ಯಾಂಬ್ರೆಟಾ ವೆಸ್ಪಾ.ಈ ಹೆಸರಿನೊಡನೆ ತಳುಕು ಹಾಕಿಕೊಂಡಂತೆ ನೆನಪಾಗುವುದು ನಳಿನಿ ದೇಶಪಾಂಡೆಯ ’ಲ್ಯಾಂಬ್ರಟಾ-ವೆಸ್ಪಾ’. ಕವನ
’ಗ್ರಹಗತಿಯೋದುವ ಬ್ರಾಹ್ಮಣರೆಲ್ಲಾ ಸತ್ತೇ ಹೋಗಲಿ ವಿಪ್ಲವದಲ್ಲಿ
ಬಂಧುಬಾಂಧವರಿಷ್ಟರ ಗೊಟ್ಟಿಯ ಚಂದನ ಕಾಷ್ಠಕ್ಕೊಟ್ಟಿರಿ ಬೆಂಕಿಯ.
ಸುಟ್ಟೇ ಹೋಗಲಿ ಹಿಂದೂ ಧರ್ಮ.
ಆದುದ್ದಾಯ್ತು. ಒಳಿತೋ ಕೆಡುಕೋ ಏನೇ ಇರಲಿ, ಅಟಂಬಾಂಬಿನ ಅಣುಸಮರಕ್ಕೆ ನಾಂದಿಯಾದರೂ ನನಗೇನಿಲ್ಲ!.

ತುಂಟ ಹುಡುಗನ ಸೊಂಟಾ ಸುತ್ತಿ ಲ್ಯಾಂಬ್ರಟಾ, ವೆಸ್ಪಾ ಬೆನ್ನನ್ನು ಹತ್ತಿ ಕೀಲು ಕುದುರಿ ರಾಜಕುಮಾರಿ ಒಮ್ಮೆಯಾದರೂ ಆದೇನು! ನರಕಕ್ಕೂ ಹೋದೇನು.”
ಈ ಹುಡುಗಿಯ ಗತ್ತಿಗೆ ಕಾರಣ, ಲ್ಯಾಂಬ್ರೆಟಾ ವೆಸ್ಪಾ ಹತ್ತಿ ತುಂಟಾ ಹುಡುಗನ ಸೊಂಟ ಬಳಸಿದ್ದು. ಆ ಕಾಲಕ್ಕೆ ಅದು ಬಹು ದೊಡ್ಡ ಕ್ರಾಂತಿ. [ಈ ನಳಿನಿ ದೇಶಪಾಂಡೆ ಎಂಬ ನವೋದಯದ ಕವಿ, ನಮ್ಮ ದಿ. ಪೂರ್ಣಚಂದ್ರ ತೇಜಸ್ವಿಯವರ ಮಾನಸ ಪುತ್ರಿ.] ದಕ್ಷಿಣ ಭಾರತದ ಪ್ರಸಿದ್ಧ ನಟ ಪ್ರಕಾಶ ರೈ ಮತ್ತು ಕನ್ನಡಪ್ರಭದ ಸಂಪಾದಕರಾದ ರಂಗನಾಥ್ ಬಳಿ ಕೂಡ ಬಹು ಹಿಂದೆ ಲ್ಯಾಂಬ್ರಟಾ ವೆಸ್ಪಾ ಇತ್ತು. ಅವುಗಳಲ್ಲಿ ನಾನು ಕೂಡ ನನ್ನ ಹುಡುಗನ ಜೊತೆ ಓಡಾಡಿದ್ದೇನೆ.

ಕೇಂದ್ರ ಮಂತ್ರಿಯಾಗಿದ್ದ ರಾಜೇಶ್ ಪೈಲೆಟ್ ಗೊತ್ತಲ್ಲ? ಅವರು ಮದುವೆಯಾದಾಗ ಅವರನ್ನು ಇಂದಿರಾಗಾಂದಿ ತಮ್ಮ ಮನೆಗೆ ಭೋಜನಕ್ಕೆ ಅಹ್ವಾನಿಸಿದ್ದರಂತೆ. ಆಗ ಅವರ ಮನೆಯಲ್ಲಿ ಅಷ್ಟೆಲ್ಲಾ ಕಾರುಗಳಿದ್ದರೂ, ಅವರು ತಮ್ಮ ಪ್ರೀತಿಯ ಸ್ಕೂಟರಿನಲ್ಲಿ ಪತ್ನಿಯನ್ನು ಕುಳ್ಳಿರಿಸಿಕೊಂಡು ಪ್ರಧಾನ ಮಂತ್ರಿಗಳ ಮನೆಗೆ ಹೋಗಿದ್ದರಂತೆ. ಇದನ್ನು ಎಲ್ಲಿಯೋ ಓದಿದ ನೆನಪು.

ಅಷ್ಟೆಲ್ಲಾ ಯಾಕೆ, ಸಹರಾ ಕಂಪೆನಿ ಮುಖ್ಯಸ್ಥ ಇದ್ದಾರಲ್ಲ, ಸುಬ್ರತೋ ಬ್ಯಾನರ್ಜಿ. ಅವರು ತಮ್ಮ ಉದ್ದಿಮೆಯತ್ತ ಮೊದಲ ಹೆಜ್ಜೆಯಿಟ್ಟಾಗ ಅವರಲ್ಲಿದ್ದುದು ಕೇವಲ ಒಂದು ಟೇಬಲ್ ಮತ್ತು ಕುರ್ಚಿ, ಹಾಗೂ ಒಂದು ಲ್ಯಾಂಬ್ರೆಟಾ ವೆಸ್ಪಾ ಸ್ಕೂಟರ್. ಇಂದಿಗೂ ಅವರ ಕಂಪೆನಿಯ ಎಲ್ಲಾ ಬ್ರೋಶರ್ ಗಳಲ್ಲಿ ಇದೇ ಅಧಿಕೃತ ಚಿಹ್ನೆಗಳಾಗಿವೆ. ಮನುಷ್ಯ ಇತಿಹಾಸವನ್ನು ಮರೆಯಬಾರದಲ್ಲವೇ?

ಸಾಲ ಮಾಡಿ ಸ್ಕೂಟರ್ ತೆಗೆದುಕೊಳ್ಳುವುದೆಂದರೆ ಒಂದು ಕಾಲದಲ್ಲಿ ಹರ ಸಾಹಸವಾಗಿತ್ತು. ಅದಕ್ಕಾಗಿ ಬ್ಯಾಂಕ್ ಗಳಿಗೆ ಅಲೆದಾಡಿ ಚಪ್ಪಲಿ ಸವೆದು ಹೋಗುತ್ತಿತ್ತು. ಆದರೆ ಈಗ ಪೇಪರಿನಲ್ಲಿ ಮೋಟಾರು ಕಂಪೆನಿಗಳೇ ಜಾಹೀರಾತು ನೀಡಿ ಕಾರು-ಬೈಕ್ ಗಳನ್ನು ಕೊಡುತ್ತಾರೆ.ಈಗ ಎಲ್ಲವೂ ಸಲೀಸು.

ಒಂದು ರೀತಿಯಲ್ಲಿ ನೋಡಿದರೆ ಸ್ಕೂಟರ್ ಸವಾರನ ಪಾಡು ಎಂದರೆ ಟೋಮೆಟೋ-ರಾಗಿ ಬೆಳೆದ ರೈತನ ಪಾಡು. ಬೈಕ್- ಕಾರು ಇಟ್ಟುಕೊಂಡವರೆಂದರೆ ಕಾಫಿ,ಟೀ ತೋಟದ ಮಾಲೀಕನ ವರಸೆ. ಹೋಲಿಕೆ ಸರಿ ಇಲ್ಲ ಅಂದಿರಾ....?

ಸ್ಕೂಟರ್ ಓನರ್ ನನ್ನು ಸ್ವಲ್ಪ ಹೊತ್ತು ಮಾತಾಡಿಸಿ ನೋಡಿ; ಆತ ಟಿಪಿಕಲ್ ಇಂಡಿಯನ್ ಮೆಂಟ್ಯಾಲಿಟಿಯ ಒಬ್ಬ ಗೃಹಸ್ಥ. ನನಗೊಬ್ಬ ಗೆಳೆಯನಿದ್ದಾನೆ. ಆತನ ಹತ್ತಿರ ಒಂದು ಸ್ಕೂಟರಿದೆ. ಯಾವುದೋ ಕೆಲಸಕ್ಕಾಗಿ ನನಗೆಲ್ಲಿಗೋ ಅರ್ಜೆಂಟ್ ಹೋಗಬೇಕಾಗಿತ್ತು. ’ಸ್ವಲ್ಪ ಅಲ್ಲಿ ತನಕ ಬಿಡೋ’ ಎಂದೆ. ಆತ ಅನುಮಾನಿಸಿದ. ಕೊನೆಗೆ ಒಲ್ಲದ ಮನಸ್ಸಿನಿಂದ ಹತ್ತಿಸಿಕೊಂಡ. ಅಪ್ಪಿತಪ್ಪಿಯೂ ಮೈ ಸೋಕದಂತೆ ಜಾಗೃತೆ ವಹಿಸಿಕೊಳ್ಳುತ್ತಿದ್ದ. ನನಗೆ ರೇಗಿ ಹೋಯಿತು. ಇಳಿಯುವಾಗ ಬೇಕೆಂತಲೇ ಅವನ ಭುಜದ ಮೇಲೆ ಕೈಯಿಟ್ಟು ಇಳಿದೆ. ಮುಂದೆಂದೂ ಆತನ ಸ್ಕೂಟರ್ ಏರುವ ಪ್ರಸಂಗ ಬರಲಿಲ್ಲ.

ಹೀಗೆ ಸ್ಕೂಟರ್ ಸವಾರರ ಜೊತೆ [ಪರಿಚಿತರು ಮಾತ್ರ!] ನನ್ನ ಕುಶಲ ಸಂಭಾಷಣೆಗಳು ನಡೆಯುತ್ತಲೇ ಇರುತ್ತವೆ. ಒಂದು ದಿನ ಪರಿಚಿತರ ಜೊತೆ ಕೇಳಿದೆ,’ನಿಮ್ಮ ಪತ್ನಿ ನಿಮ್ಮ ಜೊತೆ ಸ್ಕೂಟರಿನಲ್ಲಿ ಬರುತ್ತಾರೆಯೇ?” ’ಬರ್ತಾಳಲ್ಲಾ’ ಎಂದರವರು. ಆದರೂ ನನಗೆ ಸಂಶಯ. ಯಾಕೆಂದರೆ ನಾನೆಂದೂ ಅವರು ಸಪತ್ನಿಕರಾಗಿ ಸ್ಕೂಟರ್ ಸವಾರಿ ಮಾಡಿದ್ದನ್ನು ಕಂಡೇ ಇಲ್ಲ.

ಸ್ಕೂಟರ್ ಜೊತೆ ಬೈಕ್ ಬಗ್ಗೆ ಒಂದೆರಡು ಮಾತು ಹೇಳದೆ ಹೋದರೆ ಈ ಪ್ರಬಂಧಕ್ಕೆ ನ್ಯಾಯ ಸಲ್ಲಿಸಿದಂತಾಗುವುದೇ ಇಲ್ಲ. ಯಾಕೆಂದರೆ ಉಳಿವಿಗಾಗಿ ನಡೆಯುತ್ತಿರುವ ಸ್ಪರ್ಧೆಯಲ್ಲಿ ಬೈಕ್ ಯಾವಗಲೋ ಸ್ಕೂಟರನ್ನು ಹಿಂದಕ್ಕೆ ಹಾಕಿದೆ. ಇದಕ್ಕೆನು ಕಾರಣ?

ಕಾರಣ ; ಯುವ ಜನಾಂಗ ಬೈಕ್ ಗೆ ಒಲಿದಿದೆ. ಅದರ ನಿಲುವು, ವಿನ್ಯಾಸ, ಗಾಂಭೀರ್ಯ ಹಾಗಿದೆ. ಅದರಲ್ಲಿ ವೈಭವ ಇದೆ. ಹಿಂದೆಯೇ ಹೇಳಿದಂತೆ ಅದು ಚಿಮ್ಮುವ ಕುದುರೆ. ನಮ್ಮ ಗಮನಕ್ಕೆ ಬಂದಂತೆ ನಮ್ಮ ಯುವ ಜನಾಂಗದ ಭಾವನೆಗಳು ಈಗೀಗ ತೀವ್ರವಾಗುತ್ತಿದೆ. ಅವರ ಪ್ರೀತಿ, ದ್ವೇಷ, ಪ್ರಣಯ, ಅಭಿವ್ಯಕ್ತಿ ಎಲ್ಲದರಲ್ಲೂ ವೇಗ ಇದೆ; ತೀವ್ರತೆ ಇದೆ. ಅದು ಸ್ಕೂಟರಿನಂತೆ ಅಥವಾ ಭಾರತೀಯ ಸಂಗೀತದಂತೆ ಮನಸ್ಸಿಗೆ ಮುದ ನೀಡುವಂತಹದ್ದಲ್ಲ. ಬೈಕ್ ನಂತೆ ಕೆರಳಿಸುವಂತಹದು.

ಬೇಕಾದರೆ ನೋಡಿ; ಮಹಿಳಾ ಕಾಲೇಜುಗಳೆದುರು ಬೈಕ್ ಗಳ ಮೆರವಣಿಗೆ ಇರುತ್ತದೆ. ಸ್ಕೂಟರ್ ನಾಪತ್ತೆ. ಒಂದು ವೇಳೆ ಯಾವನಾದರೂ ಹುಡುಗ ಆಸೆಯಿಂದ ಅಲ್ಲಿ ಸುಳಿದಾಡಿದರೂ ಯಾವ ಹುಡುಗಿಯೂ ಲಿಪ್ಟ್ ಕೇಳಲಾರಳು. ಸೀಟಿನ ವಿನ್ಯಾಸವೂ ಇದಕ್ಕೆ ಕಾರಣವಿರಬಹುದು. ಬೈಕ್ ನಲ್ಲಿ ಕುಳಿತರೆ ಏಕತೆಯ ಭಾವನೆ ಮೂಡುತ್ತದೆ. ಗೇರ್ ಚೇಂಜ್ ಮಾಡಿದಾಗಲಂತೂ ಪರಸ್ಪರ ಅಂಟಿಕೊಳ್ಳಲೇಬೇಕಾಗುತ್ತದೆ. ಕೈಗಳು ತಾನಾಗಿಯೇ ಸವಾರನ ಬೆನ್ನನ್ನೋ ಸೊಂಟವನ್ನೋ ಹಿಡಿದುಕೊಳ್ಳಲೇ ಬೇಕಾಗುತ್ತದೆ. ಹಾಗಾಗಿ ಪ್ರೇಮಿಗಳಿಗೆ ಯುವ ಜೋಡಿಗಳಿಗೆ, ಮುನ್ನುಗ್ಗುವ ಮನೋಭಾವದವರಿಗೆ ಇದು ಇಷ್ಟವಾಗುತ್ತದೆ.

ಸ್ಕೂಟರ್ ತಯಾರು ಮಾಡಿದ್ದು ಮಹಿಳೆಯರನ್ನು ದೃಷ್ಟಿಯಲ್ಲಿಟ್ಟುಕೊಂಡಂತೆ. ಆದರೆ ಯಾಕೋ ಅದು ಮಹಿಳೆಯರಿಗೆ ಇಷ್ಟವಾಗಲೇ ಇಲ್ಲ. ಪುರುಷರಿಗೆ ಒಲಿಯಿತು. ಆದರೂ ಅದರ ಸೀಟಿನ ವಿನ್ಯಾಸದಿಂದಾಗಿ ಸವಾರರ ನಡುವೆ ಗೌರಯುತವಾದ ಅಂತರವಿರುತ್ತದೆ. ಅಂಟಿಕೊಳ್ಳಲು ಬಯಸುವವರಿಗೆ ಇದು ಎಂದೂ ಇಷ್ಟವಾಗುವುದಿಲ್ಲ!

ಸ್ಕೂಟರಿಗೊಂದು ಸ್ಥಿತಪ್ರಜ್ನತೆ ಇದೆ. ಹಳೆ ತಲೆಮಾರಿನ ಮನೆಯ ಯಜಮಾನನಂತೆ. ಒಂದು ಮಿತಿಯನ್ನು ಮೀರಿ ಅದು ಓಡುವುದಿಲ್ಲ. ಅಷ್ಟೇನೂ ಫೆಟ್ರ‍ೋಲ್ ಕುಡಿಯುವುದಿಲ್ಲ. ಆದರೂ ಅದು ಮ್ಯೂಸಿಯಂ ಸೇರುತ್ತಿದೆ ಅನ್ನಿಸುತ್ತಿದೆ. ಅಲ್ಲವೇ?

ಮನೆಯಲ್ಲಿ ಎರಡ್ಮೂರು ಕಾರು ಇಟ್ಟುಕೊಂಡಿದ್ದರೂ, ತಮ್ಮ ಸ್ಕೂಟರನ್ನು ಧೂಳು ಹೊಡೆದು, ಒರೆಸಿ,ಜೋಪಾನ ಮಾಡುವವರನ್ನು ನಾನು ನೋಡಿದ್ದೇನೆ. ’ಯಾಕೆ ಹೀಗೆ?’ ಅಂತ ಕೇಳಿದರೆ ’ಹೆಂಡತಿ ಹಳಬಳಾದ್ಲು ಅಂತ ದೂರ ತಳ್ಳೋಕಾಗುತ್ತಾ?’ ಅಂತಾರೆ!

ಈಗೀಗ ಅನ್ನಿಸುವುದುಂಟು, ಬೈಕಿನ ರಾಜ ಗಾಂಭೀರ್ಯಕ್ಕಿಂತ ಸ್ಕೂಟರ್ ನ ಸರಳತನವೇ ಸಾಕು ಅಂತ. ಹಾಗಾದರೆ ನಾನು ಕೂಡ ಮ್ಯೂಸಿಯಂ ಸೇರುತ್ತಿದ್ದೇನೆಯೇ? ಗೊತ್ತಿಲ್ಲ. ಇದ್ದರೂ ಇರಬಹುದು.

[ ’ಓ ಮನಸೇ’ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಪ್ರಬಂಧ]