Friday, January 14, 2011

ಯಾರಿಲ್ಲಿ ಅಂತಕನ ದೂತರು...?!






ಕಳೆದ ವಾರ ಹಾಸನ ಸಮೀಪ ಬೋಸ್ಮನ ಹಳ್ಳಿ ಮತ್ತು ನವಿಲಹಳ್ಳಿಗಳಲ್ಲಿ ಎರಡು ಪುಟ್ಟ ಆನೆ ಮರಿಗಳು ಸತ್ತು ಬಿದ್ದವು.ಅದನ್ನು ಕಂಡ ತಾಯಿ ಆನೆ ಸಂಕಟದಿಂದ ಘೀಳಿಟ್ಟು ರೋಧಿಸುತ್ತಿದ್ದ ಪರಿ ಎಂತಹ ಕಲ್ಲೆದೆಯವರನ್ನೂ ಕರಗಿಸುವಂತಿತ್ತು. ವಿಕ್ಷಕರೆದೆಯಲ್ಲಿ ಕರುಣ ರಸ ಉಕ್ಕುವಂತೆ ದೃಶ್ಯ ಮಾದ್ಯಮ ಅವುಗಳನ್ನು ಬಿತ್ತರಿಸಿತ್ತು. ಮರುದಿನ ಕನ್ನಡದ ಪ್ರಮುಖ ಪತ್ರಿಕೆಯಾದ ’ವಿಜಯ ಕರ್ನಾಟಕ’ ಈ ಸಾವಿಗೆ ಹೀಗೆ ಪ್ರತಿಕ್ರಿಯೆ ನೀಡಿತ್ತು ’ಅಂತಕನ ದೂತರಿಗೆ ಕಿಂಚಿತ್ತೂ ಕರುಣವಿಲ್ಲ’. ಅತ್ಯಂತ ಸೂಕ್ತವಾದ ಶೀರ್ಷಿಕೆ.

ಹಿಂದೆ ದಾಸರು ಆಡಿದ ಮಾತಿದು; ಆಗ ಅಂತಕನ ದೂತರು ಯಾರು ಎಂಬುದರ ಬಗ್ಗೆ ಸ್ಪಸ್ಟ ಕಲ್ಪನೆಯಿತ್ತು. ಇಂದಿನ ಸಂದರ್ಭದಲ್ಲಿ ಯಾರು ಈ ಅಂತಕನ ದೂತರು?

ನಮಗೊಂದು ಚುನಾಯಿತ ಸರಕಾರವಿದೆ. ಅದರಲ್ಲೊಂದು ಅರಣ್ಯ ಖಾತೆಯಿದೆ. ಅದಕೊಬ್ಬ ಸಚಿವರಿದ್ದಾರೆ. ಅವರು ಸ್ಥಳಕ್ಕೆ ಬರುವುದಿರಲಿ ಕನಿಷ್ಟ ಒಂದು ಹೇಳಿಕೆಯನ್ನೂ ನೀಡಿಲ್ಲ. ಉಂಡಬತ್ತಿ ಕೆರೆಯಿಂದ ಸಾಲು ಸಾಲು ಹೆಣಗಳನ್ನು ಮೇಲಕ್ಕೆತ್ತುತ್ತಿದ್ದಾಗಲೇ ಹಣಿಕಿ ನೋಡದ ಸರಕಾರಕ್ಕೆ ಯಕಶ್ಚಿತ್ ಆನೆಮರಿಗಳು ಸತ್ತದ್ದು ಗಮನಕ್ಕೆ ಬಂದೀತಾದರು ಹೇಗೆ?!

ಮನುಷ್ಯ, ಜೀವ ಸರಪಳಿಯಲ್ಲಿನ ಒಂದು ಕೊಂಡಿ. ಪ್ರಾಣಿ, ಪಕ್ಷಿಗಳೂ ಸೇರಿದಂತೆ ಉಳಿದ ಜೀವಸಂಕುಲಗಳೂ ಆ ಸರಪಳಿಯಲ್ಲಿನ ಇತರ ಕೊಂಡಿಗಳು. ಈ ನಿಸರ್ಗದ ಮೇಲೆ ನಮಗೆಷ್ಟು ಹಕ್ಕಿದೆಯೋ ಅಷ್ಟೇ ಹಕ್ಕು ಅವುಗಳಿಗೂ ಇದೆ. ಅದರೆ ಮನುಷ್ಯ ತನ್ನ ಬುದ್ಧಿವಂತಿಕೆಯಿಂದ ಅವುಗಳ ಮೇಲೆ ನಿಯಂತ್ರಣ ಸಾಧಿಸಿ ತನ್ನ ಅನುಕೂಲತೆಗೆ ತಕ್ಕಂತೆ ಬಳಸಿಕೊಂಡಿದ್ದಾನೆ. ಇಂಥ ಬಳಸುವಿಕೆಯಿಂದ ಜೀವ ಜಾಲದ ಕೊಂಡಿಗಳು ಒಂದೊಂದಾಗಿ ಕಳಚಿ ಬೀಳುತ್ತಾ ಪ್ರಾಕೃತಿಕ ಅಸಮತೋಲಕ್ಕೆ ಕಾರಣವಾಗುತ್ತಿದೆ.

ಇದನ್ನು ಬರೆಯುತ್ತಿರುವಾಗಲೇ ಬೆಂಗಳೂರಿನ ಬಾಗಲೂರಿನ ಗುಡಿಸಲೊಂದರಲ್ಲಿ ಮಲಗಿಸಿದ್ದ ಒಂದೂವರೆ ವರ್ಷದ ಮಗುವನ್ನು ಬೀದಿನಾಯಿಗಳು ಹರಿದು ಕಿತ್ತು ತಿಂದಿವೆ. ಇದಕ್ಕೆ ಯಾರು ಹೊಣೆ?
ಯಾರಿಲ್ಲಿ ಅಂತಕನ ದೂತರು?
ಆನೆ ಹತ್ಯೆಗೆ ಮನುಷ್ಯನ ಆಸೆಬುರುಕತನ ನೇರ ಕಾರಣವಾದರೆ ಇಲ್ಲಿಯೂ ಅದೇ ಮನಸ್ಥಿತಿ ಕೆಲಸ ಮಾಡಿದೆ. ಸಮಸ್ಯೆಯ ಆಳಕ್ಕೆ ಇಳಿದು ಪರಿಹಾರವನ್ನು ಹುಡುಕುವುದರ ಬದಲು ’ಪ್ರಭುತ್ವ’ವು ನಾಯಿಯನ್ನು ಅರೆಸ್ಟ್ ಮಾಡಿದೆ. ನಾಡಿನ ಪುಣ್ಯ; ಮರಿಗಳನ್ನು ರೈತರ ಜಮೀನಿಗೆ ನುಗ್ಗಿಸಿದ ಆರೋಪದ ಮೇಲೆ ತಾಯಿ ಆನೆಯ ಅರೆಸ್ಟ್ ಮಾಡಲು ಕೈಯ್ಯಲ್ಲಿ ಲಾಠಿ ಹಿಡಿದು ನಮ್ಮ ಪೋಲಿಸರು ಹೋಗಿಲ್ಲ!

ಮನುಷ್ಯ ಕಾಡನ್ನು ಒತ್ತುವರಿ ಮಾಡಿಕೊಂಡಿದ್ದಾನೆ. ಪ್ರಾಣಿಗಳು ಆಹಾರ ಹುಡುಕಿಕೊಂಡು ಊರಿಗೆ ಬಂದಿವೆ. ಹಾಗೆಯೇ ಹಳ್ಳಿಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ; ರೈತರಿಗೆ, ಆತ ಬೆಳೆದ ಬೆಳೆಗೆ ಬೆಲೆಯಿಲ್ಲದಂತಾಗಿದೆ. ಜೊತೆಗೆ ವಿಶೇಷ ಅರ್ಥಿಕ ವಲಯ ಮತ್ತು ಕೈಗಾರಿಕೆ ಸ್ಥಾಪನೆಯ ನೆಪದಲ್ಲಿ ರೈತರ ಫಲವತ್ತಾದ ಜಮೀನುಗಳನ್ನು ಸರಕಾರವೇ ವಶಪಡಿಸಿಕೊಳ್ಳುತ್ತಿದೆ. ಹಾಗಾಗಿ ಸ್ವಾವಲಂಬಿಯಾಗಿದ್ದ ರೈತ ದಿಕ್ಕುಗೆಟ್ಟು ಪಟ್ಟಣ ಸೇರಿ ಕೂಲಿಯಾಳಾಗಿದ್ದಾನೆ. ಹಳ್ಳಿ ಮತ್ತು ಪಟ್ಟಣದ ಮಧ್ಯೆ ದೊಡ್ಡ ಕಂದಕ ಏರ್ಪಟ್ಟಿದೆ.

ಹಳ್ಳಿ-ಪಟ್ಟಣದ ಎಲ್ಲಾ ಜನರು ದುಡ್ಡಿನ ಹಿಂದೆ ಓಡುತ್ತಿದ್ದಾರೆ; ಅದು ಕೊಡಬಹುದಾದ ಸುಖದ ಕಲ್ಪನೆಯಲ್ಲಿ ಮಾನವೀಯತೆಯನ್ನೇ ಮರೆಯುತ್ತಿದ್ದಾರೆ.

ನಿಸರ್ಗದಲ್ಲಿರುವ ಪ್ರತಿ ಪ್ರಾಣಿಯೂ ತನಗೊಂದು ಸುರಕ್ಷಿತ ವಲಯವನ್ನು ತಾನೇ ನಿರ್ಮಿಸಿಕೊಳ್ಳುತ್ತದೆ. ಹಾಗೆ ನಿರ್ಮಿಸಿಕೊಳ್ಳುವಾಗ ತನ್ನ ಸಹಜೀವಿಗಳಿಗೆ ತೊಂದರೆಯಾಗದಂತೆಯೂ ನೋಡಿಕೊಳ್ಳುತ್ತದೆ. ತನ್ನ ರಹದಾರಿಯನ್ನು ಬಿಟ್ಟು ಆಚೀಚೆ ಹೋಗುವುದಿಲ್ಲ. ಅತಿಕ್ರಮಣ ಮಾಡುವುದಿಲ್ಲ.
ಉದಾಹರಣೆಗೆ ದೂರದ ಸೈಭಿರಿಯಾದಿಂದ ಸಾವಿರಾರು ಮೈಲಿಗಳನ್ನು ಕ್ರಮಿಸಿ ಮಂಡ್ಯದ ಬೆಳ್ಳೂರಿಗೆ ಕೊಕ್ಕರೆಗಳು ವಲಸೆ ಬರುತ್ತವೆ. ಇಲ್ಲಿ ಮೊಟ್ಟೆಯಿಟ್ಟು, ಮರಿ ಮಾಡಿ ಮತ್ತೆ ಅಲ್ಲಿಗೇ ಮರಳುತ್ತವೆ. ಅದವುಗಳ ಹೆದ್ದಾರಿ.ಅಂಥವೇ ಹೆದ್ದಾರಿ ಇರುವೆಗಳಿಗೂ ಇದೆ. ಗುಂಪು ಗುಂಪಾಗಿ ವಾಸಿಸುವ ಪಶು-ಪಕ್ಷಿಗಳಿಗೂ ಇದೆ. ಪ್ರಾಣಿಗಳಿಗೂ ಇದೆ. ಅವುಗಳ ಹೆದ್ದಾರಿಗಳನ್ನು ಮಾನವ ಆಕ್ರಮಿಸಿಕೊಳ್ಳುತ್ತಿದ್ದಾನೆ. ಆಗ ಅವುಗಳೇನು ಮಾಡಬೇಕು?
ಗಂಡು ನಾಯಿಗಳು ಗಿಡ-ಮರ, ಕಲ್ಲು, ಮೋಟು ಗೋಡೆ ಕಂಡಲ್ಲಿ ಕಾಲೆತ್ತಿ ಮೂತ್ರ ಮಾಡುವುದನ್ನು ಎಲ್ಲರೂ ನೋಡಿರುತ್ತೇವೆ. ಹಾಗೆ ಮಾಡುವುದರ ಮುಖಾಂತರ ಅದು ತನಗೆ ಬೌಂಡರಿಯನ್ನು ಹಾಕಿಕೊಳ್ಳುತ್ತದೆ. ಅಲ್ಲದೆ ಅನ್ಯ ನಾಯಿಗಳಿಗೆ ಇದು ತನ್ನ ಏರಿಯಾ ಎಂಬ ಸಂದೇಶವನ್ನು ರವಾನಿಸುತ್ತದೆ. ಬೇಕಾದರೆ ಗಮನಿಸಿ; ತನ್ನ ಏರಿಯಾದಲ್ಲಿ ಆ ನಾಯಿಯ ಬಾಲ ನೆಟ್ಟಗೆ ಇದ್ದರೆ ಇನ್ನೊಂದು ನಾಯಿಯ ಏರಿಯಾಕ್ಕೆ ಹೋದಾಗ ಅದರ ಬಾಲ ಬಾಗಿ ಕಾಲುಗಳ ಮಧ್ಯದಲ್ಲಿ ಅಡಗಿರುತ್ತದೆ.

ಕಾಡು ಪ್ರಾಣಿಗಳಿಗೆ ಕಾಡಿನಲ್ಲಿಯೇ ಆಹಾರವಿದೆ. ಬಿದಿರು ಮೆಳೆಗಳೇ ಆನೆಗಳ ಮುಖ್ಯ ಆಹಾರ. ಅದರ ಜೊತೆ ಹೆಬ್ಬಲಸು, ನೆಲ್ಲಿಕಾಯಿ, ಚೂರಿಕಾಯಿ, ಮೊಗ್ಗರೆಕಾಯಿ, ಕೋಳಿಕುಡ್ತಹಣ್ಣು, ಗೊಟ್ಟೆಹಣ್ಣು[ಮುಳ್ಳುಹಣ್ಣು], ಬೈನೆಮರ, ರಾಂಪತ್ರೆ...ಸಮೃದ್ಧ ಆಹಾರ.ಜೊತೆಗೆ ಯಥೇಚ್ಚ ನೀರು. ಸ್ವಛ್ಚಂದ ಬದುಕು. ಇಂದು ಅದಿಲ್ಲ. ಕಾಡು ಉತ್ಪನ್ನಗಳನ್ನು ಸಂಗ್ರಹಿಸುವ ಗುತ್ತಿಗೆಯನ್ನು ಸರಕಾರವೇ ಹರಾಜು ಹಾಕುತ್ತದೆ. ಗುತ್ತಿಗೆದಾರನ ಕೆಲಸಗಾರರು ಕಾಡಿಗೆ ದಾಳಿಯಿಟ್ಟು ಕಾಡು ಉತ್ಪನ್ನಗಳನ್ನು ಸಂಗ್ರಹಿಸುತ್ತಾರೆ. ಪ್ರಾಣಿಗಳ ಸ್ವಚ್ಚಂದ ಬದುಕು ಅಲ್ಲೋಲ ಕಲ್ಲೋಲವಾಗುತ್ತದೆ. ಪ್ರಾಣಿ ಸಂಕುಲ ಉಪವಾಸ ಬೀಳುತ್ತವೆ. ಆಹಾರಕ್ಕಾಗಿ ಅವು ಊರಿಗೆ ಧಾಳಿಯಿಡುತ್ತವೆ.
ತಮಿಳುನಾಡು, ಕರ್ನಾಟಕ ಮತ್ತು ಕೇರಳದಲ್ಲಿ ಹರಡಿಕೊಂಡಿರುವ ಪಶ್ಚಿಮಘಟ್ಟ ಶ್ರೇಣಿಯ ಆನೆ ಹೆದ್ದಾರಿ [ಕಾರಿಡಾರ್]ಯಲ್ಲೊಮ್ಮೆ ಹೊಕ್ಕು ಬಂದರೆ ತಿಳಿಯುತ್ತದೆ. ಅಭಿವೃದ್ದಿ ಮತ್ತು ಪ್ರವಾಸೋಧ್ಯಮದ ನೆಪದಲ್ಲಿ ನಿತ್ಯ ಹರಿದ್ವರ್ಣದ ಕಾಡು ಮಾನವನ ಆಕ್ರಮಣಕ್ಕೆ ನಲುಗಿ ಹೋಗಿದೆ. ನದಿಮೂಲಗಳು ಬತ್ತುತ್ತಿವೆ, ಜೊತೆಗೆ ಕಲುಷಿತಗೊಳ್ಳುತ್ತಿವೆ. ಇದರಿಂದಾಗಿ ಮತ್ಸ್ಯ ಸಂತತಿ ನಾಶವಾಗುತ್ತಿದೆ.

ಸುತ್ತಲಿನ ಚಾರಚರ ವಸ್ತುಗಳು ತನ್ನ ಉಪಭೋಗಕ್ಕಾಗಿಯೇ ಅಸ್ತಿತ್ವದಲ್ಲಿವೆಯೆಂದು ಮಾನವ ಭಾವಿಸಿದ್ದಾನೆಯೇ? ಈ ಧರೆಯಲ್ಲಿ ತಾನು ಏಕಮೇವಾದ್ವಿತೀಯನಾಗಿ ಮೆರೆಯಬೇಕೆಂದು ಆತ ಬಯಸುತ್ತಿದ್ದಾನೆಯೇ? ಆ ಕಾರಣಕ್ಕಾಗಿಯೇ ಆತ ತನ್ನ ಸಹ ಜೀವಿಗಳನ್ನು ಅತ್ಯಂತ ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದಾನೆಯೇ?

ನಾನೊಂದು ನಾಯಿ ಸಾಕಿದ್ದೇನೆ. ಅದನ್ನು ಆಗಾಗ ಪಶುವೈದ್ಯರ ಬಳಿ ಕರೆದೊಯ್ಯುತ್ತೇನೆ. ಅಲ್ಲಿ ವಿವಿಧ ತಳಿಯ ನಾಯಿಗಳನ್ನು ನೋಡುವ ಅವಕಾಶ ನನಗೆ ಸಿಗುತ್ತದೆ. ಅವುಗಳು ಮನುಷ್ಯನ ಪ್ರೀತಿಗೆ ಪಾತ್ರವಾದ ಪರಿಯನ್ನು ನೋಡಿದರೆ ಒಂದು ಘಳಿಗೆ ಅವುಗಳ ಬಗ್ಗೆ ಅಸೂಯೆ ಮೂಡುತ್ತೆ. ಅದರೆ ಕೆಲವು ನಾಯಿಗಳ ರೂಪವನ್ನು ಅದರ ಮಾಲೀಕರು ತಮಗೆ ಬೇಕಾದಂತೆ ಬದಲಾಯಿಸುತ್ತಿರುವುದನ್ನು ಕಂಡಾಗ ಹಿಂಸೆಯೆನಿಸುತ್ತದೆ. ಜೋಲು ಕಿವಿ, ಸುರುಳಿಬಾಲ ನಾಯಿಗಳ ಸಹಜ ಸೌಂದರ್ಯ. ಆದರೆ ಅಪರೇಷನ್ ಮಾಡಿ ಅದರ ಕಿವಿಯನ್ನು ನೆಟ್ಟಗೆ ನಿಲ್ಲಿಸುತ್ತಾರೆ. ಬಾಲವನ್ನು ಮೊಂಡು ಮಾಡಿಸುತ್ತಾರೆ. ಅದನ್ನು ಸದಾ ಕಾಲ ಕಟ್ಟಿ ಹಾಕಿ ಒಂಟಿಯಾಗಿ ನರಳಿಸುತ್ತಾರೆ. ಅದಕ್ಕೂ ಒಂದು ಲೈಂಗಿಕ ಸಂಗಾತಿ ಬೇಕೆಂಬುದರ ಬಗ್ಗೆ ಯೋಚನೆಯನ್ನೂ ಮಾಡುವುದಿಲ್ಲ. ಹಸುಗಳಿಗೂ ಅಷ್ಟೆ. ಕೃತಕ ಗರ್ಭದಾರಣೆಯನ್ನು ಮಾಡಿಸುತ್ತಾರೆ.

ಮೊನ್ನೆ ದೀಪಾವಳಿಗೆ ಊರಿಗೆ ಹೋಗಿದ್ದಾಗ ನನ್ನ ಮಕ್ಕಳು ಕೆಂಪಿಯ ಕರು ಮಂಗಳೆಯನ್ನು ಮುದ್ದಿಸಿ ಆನಂದ ಪಟ್ಟಿದ್ದರು. ಅದರ ನೆಗೆದಾಟವನ್ನು ಅಚ್ಚರಿಯ ಕಣ್ಣುಗಳಿಂದ ಹಿಂಬಾಲಿಸುತ್ತಾ ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದರು. ಆದರೆ ಕಳೆದ ವಾರ ಅಲ್ಲಿಂದ ಸುದ್ದಿ ಬಂತು; ಮಂಗಳೆ ಸತ್ತು ಹೋಯ್ತು.

ನನಗೆ ಗೊತ್ತಿತ್ತು, ಮಂಗಳೆ ಬದುಕುವುದಿಲ್ಲವೆಂದು, ಹಾಗೆ ಅನ್ನಿಸಲಿಕ್ಕೆ ಕಾರಣವಿತ್ತು. ಅಮ್ಮನ ಮೊಲೆ ಹಾಲು ಕುಡಿಯುವುದು ಮಗುವಿನ ಹಕ್ಕು. ಹಸುವಿನ ಕೆಚ್ಚಲಲ್ಲಿ ಹಾಲು ಉತ್ಪಾದನೆಯಾಗುವುದು ಕರು ಕುಡಿಯಲೆಂದು. ಆದರೆ ಅದರಲ್ಲಿ ನಾವು ಪಾಲು ಪಡೆಯುತ್ತೇವೆ. ಅದನ್ನು ನಾವು ಸಹಜವೆಂದು ಒಪ್ಪಿಕೊಂಡಿದ್ದೇವೆ. ಆದರೆ ಕರುವಿಗೆ ಕೆಚ್ಚಲನ್ನು ಚೀಪಲು ಅವಕಾಶವನ್ನೇ ನೀಡದಿದ್ದರೆ....ಅದು ಸತ್ತು ಹೋಗುತ್ತದೆ.
ಹಸುವನ್ನು ಹಾಲು ಉತ್ಪಾದನೆಯ ಪ್ಯಾಕ್ಟರಿಯೆಂದು ಪರಿಗಣಿಸಿದ ಅಮೇರಿಕ ಅದಕ್ಕೆ ಸಹಜವಲ್ಲದ ಮಾಂಸಹಾರವನ್ನು ನೀಡಲಾರಂಬಿಸಿತು. ಪರಿಣಾಮವಾಗಿ ಹಸುಗಳಿಗೆ ಹುಚ್ಚು ಹಿಡಿಯಿತು. ಮನುಷ್ಯರ ಅರೋಗ್ಯದ ದೃಷ್ಟಿಯಿಂದ ಹಸುಗಳ ಮಾರಣ ಹೋಮ ನಡೆಯಿತು.
ಮಹತ್ವಕಾಂಕ್ಷಿಯಾದ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಕುರಿ, ಕೋಳಿ, ಮೀನು, ಹಂದಿ, ದನ- ಎಲ್ಲವನ್ನೂ ಅಸಹಜ ರೀತಿಯಲ್ಲಿ ಬೆಳೆಸಿ ಅದನ್ನು ತನ್ನ ಆಹಾರವನ್ನಾಗಿಸಿಕೊಂಡಿದ್ದಾನೆ. ಆತನ ಭಕ್ಷಣೆಗೆ ನಿಲುಕದ್ದು ಬಹುಶಃ ಈ ಸೃಷ್ಟಿಯಲ್ಲಿ ಯಾವುದೂ ಇದ್ದಂತಿಲ್ಲ.

ಕಾಡುನಾಶ, ಅದರಿಂದಾಗಿ ಅವಸಾನದ ಅಂಚಿನತ್ತ ಸಾಗುತ್ತಿರುವ ಸಸ್ಯ, ಪ್ರಾಣಿ ಮತ್ತು ಪಕ್ಷಿ ಪ್ರಭೇದಗಳು; ಇದನ್ನೆಲ್ಲಾ ಮನಗಂಡ ವಿಶ್ವ ಸಂಸ್ಥೆಯು ೨೦೧೧ರನ್ನು ’ಅಂತರಾಷ್ಟೀಯ ಅರಣ್ಯ ವರ್ಷ’ವೆಂದು ಘೋಷಣೆ ಮಾಡಿದೆ. ಅದರೆ ಕೇವಲ ಘೋಷಣೆಯಿಂದ ನಮ್ಮ ಪರಿಸರವನ್ನು, ಅರಣ್ಯ ಜೀವಿಗಳನ್ನು, ಒಟ್ಟು ಜೀವಸಂಕುಲವನ್ನು ರಕ್ಷಿಸಲು ಸಾಧ್ಯವೇ?

[ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ ]

Wednesday, January 5, 2011

ಬ್ಲಾಗರ್‌ಗಳೆಂಬ ಜರ್ನಲಿಸ್ಟುಗಳಿಗೆ ಜಯವಾಗಲಿ

ಇವರು ಪತ್ರಕರ್ತರಲ್ಲ, ಆದರೂ ಪತ್ರಕರ್ತರು. ಇವರು ಪತ್ರಿಕೋದ್ಯಮಿಗಳಲ್ಲ, ಆದರೂ ಪತ್ರಿಕೋದ್ಯಮಿಗಳು. ಇವರು ಬ್ಲಾಗರ್‌ಗಳು. ಪರ್ಯಾಯ ಮಾಧ್ಯಮವನ್ನು ಕಟ್ಟಿಕೊಂಡವರು.

ಇವರು ತಮ್ಮ ಪಾಡಿಗೆ ತಾವು ಬರೆಯುತ್ತಾರೆ. ಪಿಕ್ನಿಕ್ಕಿಗೆ ಹೋಗಿ ಬಂದ ಖುಷಿ, ಮನೆಯಲ್ಲಿ ಮಗು ಹುಟ್ಟಿದ ಸಡಗರ, ಕಸದ ತೊಟ್ಟಿಯಲ್ಲಿ ಎಸೆಯಲ್ಪಟ್ಟು ಸತ್ತ ಮಗುವಿನ ಕುರಿತ ಮರುಕ, ಹೊಸದಾಗಿ ಓದಿದ ಕವಿತೆಯ ಕನವರಿಕೆ, ಮನೆಯಲ್ಲಿ ಘಟಿಸಿದ ಸಾವಿನ ವಿಷಾದ, ರಸ್ತೆ ಅಪಘಾತದಲ್ಲಿ ಸತ್ತೋದವರ ಕುರಿತು ನೋವು, ಹಬ್ಬಗಳ-ವಿವಿಧ ಡೇ ಗಳ ಸಂಭ್ರಮ, ಹೊಸದಾಗಿ ಶಾಪಿಂಗ್ ಮಾಡಿದ ವಸ್ತುಗಳ ವಿವರ, ರಾತ್ರಿಯಷ್ಟೇ ಕಂಡ ದುಸ್ವಪ್ನದ ಕಿರಿಕಿರಿ... ಹೀಗೆ ಎಲ್ಲವನ್ನೂ ಹಂಚಿಕೊಳ್ಳುತ್ತಾರೆ.

ಇವರ ಬ್ಲಾಗುಗಳಿಗೆ ಇವರೇ ಮಾಲೀಕರು, ಇವರೇ ಸಂಪಾದಕರು, ಇವರೇ ಉಪಸಂಪಾದಕರು, ಇವರೇ ವರದಿಗಾರರು, ಇವರೇ ಡಿಟಿಪಿ ಆಪರೇಟರ್‌ಗಳು. ಯಾರ ಅಂಕೆಯಲ್ಲಿ ಇವರಿಲ್ಲವಾದರೂ ತಮ್ಮ ತಮ್ಮ ಅಂಕೆಯಲ್ಲಿ ಇದ್ದು ಬರೆಯುವವರು.
ಇಲ್ಲಿನ ಬರವಣಿಗೆಯೂ ಅಷ್ಟೆ. ಅದಕ್ಕೆ ಯಾವುದರ ಹಂಗೂ ಇಲ್ಲ. ಎದೆ ಬಿಚ್ಚಿ ಹೇಳಲು ಕವಿತೆ, ದೊಡ್ಡದೇನನ್ನೋ ಹೇಳಲು ಸಣ್ಣ ಕತೆ, ಆತ್ಮಕಥನದ ಧಾಟಿಯ ಹರಟೆಗಳು, ಸೀರಿಯಸ್ಸಾದ ಪ್ರಬಂಧಗಳು... ಹೇಳುವುದಕ್ಕೆ ಸಾವಿರ ವಿಧಾನ, ಓದುವವರಿಗೆ ವ್ಯವಧಾನವಿರಬೇಕು ಅಷ್ಟೆ.

ಈ ಬ್ಲಾಗರ್‌ಗಳು ಸದಾ ಕ್ರಿಯಾಶೀಲರು. ಒಂದು ಪೋಸ್ಟಿನ ಹಿಂದೆ ಮತ್ತೊಂದು ಪೋಸ್ಟು ಒದ್ದುಕೊಂಡು ಬರುತ್ತಿದ್ದಂತೆ ಪುಳಕ. ಒಂದೊಂದು ಕಮೆಂಟಿಗೂ ಸಣ್ಣ ಖುಷಿ. ಗಿರ್ರನೆ ತಿರುಗುವ ಹಿಟ್ ಕೌಂಟರುಗಳನ್ನು ನೋಡಿದರೆ ಹೆಮ್ಮೆ. ಕ್ಲಸ್ಟರ್‌ಮ್ಯಾಪುಗಳಲ್ಲಿ ಇವತ್ತು ಅದ್ಯಾವುದೋ ಅನಾಮಿಕ ದೇಶವೊಂದರಲ್ಲಿ ಅಪರಿಚಿತ ಗೆಳೆಯ ತನ್ನ ಸೈಟನ್ನು ನೋಡಿದ್ದನ್ನು ಗಮನಿಸಿ ಸಂಭ್ರಮ.

ಇವರು ಸ್ನೇಹಜೀವಿಗಳು. ಒಬ್ಬರನ್ನು ಮತ್ತೊಬ್ಬರು ಕೈ ಹಿಡಿದು ಮೇಲಕ್ಕೆ ಎತ್ತುತ್ತಾರೆ. ಒಬ್ಬರ ಬ್ಲಾಗಿನಲ್ಲಿ ಮತ್ತೊಬ್ಬರ ಲಿಂಕು. ಅವಳಿಗೆ ಇವನು ಫಾಲೋಯರ್, ಇವನಿಗೆ ಅವಳು ಫಾಲೋಯರ್. ಒಬ್ಬರನ್ನು ಒಬ್ಬರು ಹಿಂಬಾಲಿಸುತ್ತ, ಪರಸ್ಪರ ಮೈದಡವುತ್ತ ಸಾಗುತ್ತಾರೆ. ಸಣ್ಣ ಗೇಲಿ, ಕಚಗುಳಿಯಿಡುವ ಕೀಟಲೆ, ಕಾಲೆಳೆಯುವ ತುಂಟಾಟ ಎಲ್ಲಕ್ಕೂ ಇಲ್ಲಿ ತೆರೆದ ಮನಸ್ಸು.

ಇಲ್ಲೂ ಧರ್ಮರಕ್ಷಣೆಯ ಮಣಭಾರ ಹೊತ್ತವರಿದ್ದಾರೆ, ಜಾತಿ ಕೂಟ ಕಟ್ಟಿಕೊಂಡವರಿದ್ದಾರೆ. ಆದರೆ ಮನುಷ್ಯತ್ವದ ವಿಷಯಕ್ಕೆ ಬಂದರೆ ಎಲ್ಲರೂ ಬಾಗುತ್ತಾರೆ. ಸಮೂಹಕ್ಕೆ ಇರುವಷ್ಟು ಕೆಡುವ, ಕೆಡಿಸುವ ಆಕ್ರಮಣಕಾರಿ ಗುಣ ವ್ಯಕ್ತಿಗಿರುವುದಿಲ್ಲವಲ್ಲ.

ಇಲ್ಲಿ ಎಲ್ಲವೂ ಖುಲ್ಲಂಖುಲ್ಲಾ. ಸರಿಯೆಂದು ತೋರಿದ್ದನ್ನು ಮೆಚ್ಚುಗೆಯಿರುತ್ತದೆ, ತಪ್ಪು ಕಂಡರೆ ಎಗ್ಗಿಲ್ಲದ ಟೀಕೆಯಿರುತ್ತದೆ. ಒಮ್ಮೆಮ್ಮೆ ತೀರಾ ಆಕ್ರೋಶ ಬಂದಾಗ ಇವರು ಅಮೀರ್‌ಖಾನನ ಚಿತ್ರದಲ್ಲಿ ಮೊಂಬತ್ತಿ ಹಿಡಿದು ಹೊರಟವರಂತೆ ಪ್ರತಿಭಟಿಸುತ್ತಾರೆ.

ಇವರು ಬ್ಲಾಗರ್‌ಗಳು. ಜರ್ನಲಿಸ್ಟುಗಳಲ್ಲದ ಜರ್ನಲಿಸ್ಟುಗಳು. ಇವರಿಗೆ ಖಾದ್ರಿ ಶಾಮಣ್ಣನವರ ಹೆಸರಿನಲ್ಲಿ, ಟಿಎಸ್‌ಆರ್ ಹೆಸರಿನಲ್ಲಿ, ನೆಟ್ಟಕಲ್ಲಪ್ಪನವರ ಹೆಸರಲ್ಲಿ ಯಾರೂ ಅವಾರ್ಡು ಕೊಡುವುದಿಲ್ಲ. ರಿಪೋರ್ಟರ‍್ಸ್ ಗಿಲ್ಡಿನಲ್ಲಿ, ಕೆಯುಡಬ್ಲ್ಯುಜೆಯಲ್ಲಿ, ಪ್ರೆಸ್ ಕ್ಲಬ್‌ನಲ್ಲಿ ಮೆಂಬರ್‌ಶಿಪ್ ಕೊಡುವುದಿಲ್ಲ. ಇವರಿಗೆ ಸಂಬಳವಿಲ್ಲ, ಸಾರಿಗೆ ವೆಚ್ಚ ಯಾರೂ ಕೊಡುವುದಿಲ್ಲ, ತಾವು ಬರೆದದ್ದನ್ನು ಓದಿದ್ದಕ್ಕೆ ಯಾರಿಂದಲೂ ಚಂದಾ ಪಡೆಯುವುದಿಲ್ಲ, ಇನ್ನು ಪಿಎಫ್ಫು, ಪಿಂಚಣಿ ಇಲ್ಲವೇ ಇಲ್ಲ.

ಕೆಲವರು ಬ್ಲಾಗರ್‌ಗಳನ್ನು ಸುಖಾಸುಮ್ಮನೆ ಬೈಯುತ್ತಾರೆ. ಕೋಣೆಯೊಳಗೆ ಬಾಗಿಲು ಮುಚ್ಚಿಕೊಂಡು ದುರ್ವಾಸನೆ ಬಿಟ್ಟು ಅದನ್ನು ಆಘ್ರಾಣಿಸುವವರು ಎಂದು ಇವರನ್ನು ಜರಿದವರೂ ಉಂಟು. ಆದರೆ ಪತ್ರಿಕೋದ್ಯಮದ ಹುಲಿ ಸವಾರಿಯನ್ನು ಬಿಟ್ಟ ನಂತರ ದೊಡ್ಡದೊಡ್ಡ ಪತ್ರಕರ್ತರಿಗೆ ಆಶ್ರಯ ಕೊಟ್ಟಿದ್ದು ಇದೇ ಅಂತರ್ಜಾಲ ತಾಣ. ಹುಲಿ ಸವಾರಿ ಮಾಡಿದವರಿಗೆ ಕುರಿಯನ್ನಾದರೂ ಕೊಡುವ ಶಕ್ತಿ ಈ ಜಾಲಕ್ಕಿದೆ.

ಪತ್ರಕರ್ತರಲ್ಲದಿದ್ದರೂ ಇವರು ಸೊ ಕಾಲ್ಡ್ ಮೇನ್‌ಸ್ಟ್ರೀಮಿನ ಪತ್ರಕರ್ತರಿಗೇ ಹೆಚ್ಚು ಅಚ್ಚುಮೆಚ್ಚು. ಸಂಪಾದಕೀಯದಂಥ ಬ್ಲಾಗುಗಳನ್ನು ಪತ್ರಕರ್ತರು ತಮ್ಮ ತಮ್ಮ ಕಚೇರಿಗಳಲ್ಲಿ ಕದ್ದುಮುಚ್ಚಿ ಬ್ಲೂಫಿಲಂ ನೋಡಿದಂತೆ ನೋಡುವುದುಂಟು.

ನಿಜ, ಇವರು ಕ್ರಾಂತಿಯನ್ನೇನು ಮಾಡಲಾರರು. ತಮ್ಮ ಇತಿಮಿತಿಯಲ್ಲಿ ಜನಾಭಿಪ್ರಾಯ ರೂಪಿಸಬಲ್ಲರು. ತಪ್ಪುಗಳನ್ನು ಎತ್ತಿತೋರಿಸಬಲ್ಲರು. ಹೊಸ ಕನಸುಗಳನ್ನು ಸೃಷ್ಟಿಸಬಲ್ಲರು.

ಬ್ಲಾಗರ್‌ಗಳೆಂಬ ಈ ಪತ್ರಕರ್ತರಿಗೆ ಜಯವಾಗಲಿ. ಬ್ಲಾಗ್ ಲೋಕ ಚಿರಾಯುವಾಗಲಿ.

(ಇಷ್ಟವಾದರೆ ಈ ಪೋಸ್ಟನ್ನು ಬ್ಲಾಗರ್‌ಗಳು ತಮ್ಮ ತಮ್ಮ ಬ್ಲಾಗ್‌ಗಳಲ್ಲಿ ಬಳಸಿಕೊಳ್ಳಲು ಅನುಮತಿಯುಂಟು!)

Saturday, December 18, 2010

’ಮಂಗ’ನ ಕೈನಲ್ಲಿ ಮಾಣಿಕ್ಯ





ಆದ್ಯಾತ್ಮದ ಸಾಧನೆಗೆ ದೇಹ ದಂಡನೆಯೂ ಒಂದು ಮಾರ್ಗ. ಅದರ ಒಂದು ಛಾಯೆಯನ್ನು ಇತ್ತೀಚೆಗೆ ಕುಕ್ಕೆಸುಬ್ರಹ್ಮಣ್ಯದಲ್ಲಿ ನಡೆದ ’ಮಡೆಸ್ನಾನ’ಗಳಲ್ಲಿ ಕಾಣಬಹುದು. ಅದರ ಬಗ್ಗೆ ಮಾದ್ಯಮಗಳಲ್ಲಿ ಸಾಕಷ್ಟು ಚರ್ಚೆ ನಡೆಯಿತು.
ಲೌಕಿಕ ಸುಖವೆಲ್ಲವೂ ’ನಾನು ’ನನ್ನದು’ ಎಂಬ ಪರಿಧಿಯೊಳಗೇ ಸುತ್ತುತ್ತಿರುತ್ತದೆ. ಅಲೌಕಿಕದ ಮೆಟ್ಟಲು ಹತ್ತಬೇಕಾದರೆ ’ನಾನು’ ಎಂಬ ಭಾವವನ್ನು ಕಳೆದುಕೊಳ್ಳಬೇಕು. ಅಹಂಕಾರವನ್ನು ಕಳೆದುಕೊಳ್ಳುವ ಈ ಹಾದಿಯಲ್ಲಿ ’ಬಿಕ್ಷೆ ಬೇಡುವುದು’ ಒಂದು ಮೆಟ್ಟಲು.
ಋಷ್ಯಾಶ್ರಮಗಳಲ್ಲಿ ವಿದ್ಯಾರ್ಜನೆ ಮಾಡುವ ವಿದ್ಯಾರ್ಥಿಗಳಿಗೆ ಭಿಕ್ಷಾವೃತ್ತಿ ಕಡ್ಡಾಯವಾಗಿತ್ತು. ಅವರು ಸುತ್ತಲ ಹಳ್ಳಿಗಳಲ್ಲಿ ಬೇಡಿ ತಂದ ಭಿಕ್ಷೆಯನ್ನು ಗುರುಗಳಿಗೂ ಕೊಟ್ಟು ತಾವುಣ್ಣಬೇಕಾಗಿತ್ತು ಇದು ಆಶ್ರಮದ ನಿಯಮಗಳಲ್ಲೊಂದು. ಉಪನಯನದಲ್ಲಿ ವಟು ತಾಯಿಯ ಬಳಿ ಹೋಗಿ ’ಭವತಿ ಭಿಕ್ಷಾಂ ದೇಹಿ’ ಎಂದು ಬೇಡುವುದು ಇಂದಿಗೂ ರೂಢಿಯಲ್ಲಿದೆ.
ಶಿವನೂ ಭಿಕ್ಷೆ ಬೇಡಿದ್ದಾನೆ. ಬುದ್ಧನೂ ಭಿಕ್ಷೆ ಬೇಡಿದ್ದಾನೆ. ಹಿಂದೆ ನವಕೋಟಿ ನಾರಾಯಣರೆನಿಸಿದ ಪುರಂಧರ ದಾಸರೇ ಅನಂತರದಲ್ಲಿ ಭಿಕ್ಷಾಟನೆಯನ್ನು ’ಮಧುಕರ ವೃತ್ತಿ ನಮ್ಮದು’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಬೌದ್ದ ಮತ್ತು ಜೈನ ಧರ್ಮದಲ್ಲಿ ಭಿಕ್ಷುಗಳಿಗೆ ವಿಶೇಷ ಗೌರವವಿದೆ.

ಅನ್ಯರ ಮುಂದೆ ಬೊಗಸೆಯೊಡ್ಡಿ ’ದೇಹಿ’ ಎಂದು ಬೇಡುವುದು ಸಾಮಾನ್ಯರಿಂದ ಆಗದ ಕೆಲಸ. ತನ್ನ ಸ್ಥಾನ-ಮಾನ, ಘನತೆ-ಗೌರವಗಳನ್ನೆಲ್ಲಾ ಆ ಕ್ಷಣಕ್ಕೆ ಮರೆತು ’ಏನೂ ಅಲ್ಲ’ವಾಗುವ ಆ ಸ್ಥಿತಿಯೇ ಬಿಕ್ಷುಕ ಸ್ಥಿತಿ. ಕೊಡುವ ಕೈ ಯಾವಾಗಲೂ ಮೇಲಿರುತ್ತದೆ.ಬೇಡುವ ಕೈ ಕೆಳಗಿರುತ್ತದೆ.

ಇಂಥ ಉದಾತ್ತ ಮೌಲ್ಯ ಕನ್ನಡದ ಸುದ್ದಿವಾಹಿನಿಯೊಂದರಲ್ಲಿ ಕ್ರೈಮ್ ಎಪಿಸೋಡುಗೆ ಆಹಾರವಾದ ಪರಿಯನ್ನು ನೋಡಿ ಬೆಚ್ಚಿಬಿದ್ದೆ.

’ಆರ್ಟ್ ಅಫ್ ಬೆಗ್ಗಿಂಗ್’ ಎಂಬ ಹೆಸರಿನಲ್ಲಿ ಪ್ರಸಾರವಾದ ಈ ಕಾರ್ಯಕ್ರಮ ಆಡಳಿತ ಪಕ್ಷಕ್ಕೆ ಹತ್ತಿರವಾದ ಆಶ್ರಮವೊಂದನ್ನು ಗುರಿಯಾಗಿರಿಸಿಕೊಂಡಂತಿತ್ತು. ಆ ಆಶ್ರಮದವರು ’ದಿವ್ಯ ಸಮಾಜ’ವನ್ನು ಕಟ್ಟುವ ಕನಸು ಕಂಡವರಂತೆ. ಅದಕ್ಕಾಗಿ ದೇಶ-ವಿದೇಶಗಳ ಒಂದಷ್ಟು ಭಕ್ತರಿಗೆ ಆಗಾಗ ಟ್ರೈನಿಂಗ್ ಕಾರ್ಯಕ್ರಮ ಇಟ್ಟುಕೊಳ್ಳುತ್ತಾರೆ.೨೧ ದಿನಗಳ ಈ ಟ್ರೈನಿಂಗ್ ನಲ್ಲಿ ಒಂದು ದಿನ ಬಿಕ್ಷೆ ಬೇಡುವುದು ಕಡ್ಡಾಯ. ಹಾಗೆ ಬಿಕ್ಷೆ ಬೇಡಲು ಬೆಂಗಳೂರಿನ ವಿಜಯನಗರಕ್ಕೆ ಬಂದ ಅನನುಭವಿ ಬಿಕ್ಷುಕರು ಸಾರ್ವಜನಿಕರ ಅನುಮಾನಕ್ಕೆ ಗುರಿಯಾಗಿದ್ದಾರೆ. ಪೋಲಿಸರೂ ಬಂದಿದ್ದಾರೆ.ಮಾದ್ಯಮದವರೂ ಧಾವಿಸಿದ್ದಾರೆ. ಕೊನೆಗೆ ಆಶ್ರಮದ ಪ್ರತಿನಿಧಿಯೂ ಓಡೋಡಿ ಬಂದಿದ್ದಾರೆ. ತಾವು ಯಾಕೆ ಇಂತಹ ಕಾರ್ಯಕ್ರಮ ಯೋಜಿಸಿದ್ದೇವೆ ಮತ್ತು ಅದಕ್ಕೆ ಪೋಲಿಸ್ ಕಮಿಷನರಿಂದ ಅನುಮತಿಯನ್ನು ಪಡೆದುಕೊಂಡಿದ್ದೇವೆ ಎಂಬುದನ್ನು ಸಾರ್ವಜನಿಕರಿಗೆ ವಿವರಿಸಿದ್ದಾರೆ. ಅಲ್ಲಿಗೆ ಸಾರ್ವಜನಿಕರ ತಪ್ಪುಗ್ರಹಿಕೆ ನಿವಾರಣೆಯಾಗಿದೆ.

ಆದರೆ ಈ ಪ್ರಹಸನ ವಿಕೃತ ವ್ಯಖ್ಯಾನದೊಡನೆ ಅರ್ಧ ಘಂಟೆಯ ಕ್ರೈಮ್ ವರದಿಯಾಗಿ ಸುದ್ದಿ ವಾಹಿನಿಯೊಂದರಲ್ಲಿ ಪ್ರಸಾರವಾಗಿದೆ. ಅದರಲ್ಲಿ ಆ ಆಶ್ರಮವನ್ನು ’ಬಿಕ್ಷುಕರ ಟ್ರೈನಿಂಗ್ ಸೆಂಟರ್’ ಎಂದು ಬಿಂಬಿಸಲಾಗಿದೆ. ಅದರ ಸ್ಕ್ರಿಪ್ಟ್ ಬರೆದವರಿಗೆ ಆಧ್ಯಾತ್ಮದ ಗಂಧ ಗಾಳಿಯೂ ಇದ್ದಂತಿರಲಿಲ್ಲ.
ಬಿಕ್ಷುಕರಂತೆ ಕಾಣದ ಭಿಕ್ಷುಕರು ತಮ್ಮ ಪರಿಸರದಲ್ಲಿ ಕಂಡಾಗ ಅಲ್ಲಿನ ನಾಗರಿಕರು ಅನುಮಾನಗೊಳ್ಳುವುದು ಸಹಜ. ಅನುಮಾನ ಪಡಲೇ ಬೇಕು ಕೂಡಾ. ಆದರೆ ಪೂರ್ವಾಪರ ಯೋಚಿಸಬೇಕಾದ ಮಾಧ್ಯಮವೇ ಪಕ್ಷಪಾತಿಯಾಗಿ ವರ್ತಿಸಿದರೆ....? ಆಗ ಹೊಳೆದದ್ದೇ ’ಮಂಗ’ನ ಕೈಯ್ಯಲ್ಲಿ ಮಾಣಿಕ್ಯ’

Friday, December 10, 2010

ನನ್ನಪ್ಪ ಇನ್ನಿಲ್ಲ.


ಚಿತ್ರದಲ್ಲಿರುವವರು ನಮ್ಮ ಅಪ್ಪ ಕಟ್ಟೆಮನೆ ನೇಮಣ್ಣಗೌಡರು. ಇವರು ದಶಂಬರ ೨ರಂದು ದೈವಾಧೀನರಾದರು. ಅವರಿಗೆ ೮೫ ವರ್ಷವಾಗಿತ್ತು.

ನಮ್ಮ ಅಪ್ಪ ಎಂದೊಡನೆ ನನ್ನ ಕಣ್ಮುಂದೆ ಬರುವುದು ಸಣಕಲು ದೇಹದ, ಸ್ವಲ್ಪ ಬಾಗಿದ ಬೆನ್ನಿನ ಎತ್ತರದ ವ್ಯಕ್ತಿ. ಅವರನ್ನು ಮೊದಲು ನೋಡಿದಾಗ ನನ್ನ ಮಗ ಪ್ರಶ್ನಿಸಿದ್ದು ಹೀಗೆ ”ನನ್ನ ಅಜ್ಜನ ಮನೆಯಲ್ಲಿ ಗಾಂದೀಜಿ ಯಾಕಿದ್ದಾರೆ?” ಇದವರ ಹೊರನೋಟದ ವ್ಯಕ್ತಿತ್ವ. ನನ್ನ ದೊಡ್ಡಮ್ಮನ ಮಗ, ಪುರುಷೋತ್ತಮ ಬಿಳಿಮಲೆ ಹೇಳಿದ್ದು, ” ನಾನು ಕಂಡ ಅತ್ಯಂತ ಮುಗ್ಧ, ಪ್ರಾಮಾಣಿಕ ವ್ಯಕ್ತಿ ನನ್ನ ಚಿಕ್ಕಪ್ಪ”. ನನ್ನ ಪತಿ ಶಶಿಧರ್ ಭಟ್ ಕೂಡಾ ನನ್ನಪ್ಪನಲ್ಲಿ ಅದೇ ಮುಗ್ದತೆಯನ್ನು ಕಂಡಿದ್ದರು. ವ್ಯಕ್ತಿಗತವಾಗಿ ಕೂಡಾ ಅವರು ಗಾಂದೀಜಿಯ ಅನುಯಾಯಿಯಂತೆಯೇ ಸ್ವಾವಲಂಬಿಯಾಗಿ ಬದುಕಿದ್ದರು.

೧೯೨೫ನೇ ಇಸವಿ ಮೇ ೧೦ರಂದು ಜನಿಸಿದ ಅಪ್ಪ, ಈ ಲೋಕಕ್ಕೆ ಬಂದೊಡನೆಯೇ ತಾಯಿಯನ್ನು ಕಳೆದುಕೊಂಡರು. ನನ್ನಜ್ಜ ನಾಗಪ್ಪ ಗೌಡರು ಇನ್ನೊಂದು ಮದುವೆಯಾದರು. ಆ ನನ್ನಜ್ಜಿ ನಿಜವಾದ ಅರ್ಥದಲ್ಲಿ ಮಲತಾಯಿಯೇ ಆಗಿದ್ದರು ಎಂದು ಆಕೆಯನ್ನು ಕಣ್ಣಾರೆ ಕಂಡವರ ಬಾಯಿಯಿಂದ ನಾನು ಕೇಳಿದ್ದೇನೆ.

ಅಪ್ಪನಿಗೆ ಒಬ್ಬ ಅಣ್ಣ ಮತ್ತು ಒಬ್ಬ ಅಕ್ಕ ಇದ್ದರು. ಹಾಗೆಯೇ ಚಿಕ್ಕ ಅಜ್ಜಿಯಿಂದ ಹುಟ್ಟಿದ ಇಬ್ಬರು ತಮ್ಮಂದಿರು ಮತ್ತು ಒಬ್ಬ ತಂಗಿ ಇದ್ದರು. ಈ ಆರು ಮಂದಿ ಮಕ್ಕಳಲ್ಲಿ ಎಲ್ಲರ ಅನಾಧರಣೆಗೆ ತುತ್ತಾಗಿ ಬೆಳೆದವರು ನಮ್ಮಪ್ಪನಂತೆ. ಇದೆಲ್ಲಾ ಅಂತೆ-ಕಂತೆಗಳ ಸಂತೆಯಾದರೂ ಆಸ್ತಿ ಹಂಚಿಕೆಯ ವಿಷಯದಲ್ಲಿ ಅಪ್ಪನಿಗೆ ಕೊನೆಯ ಆಯ್ಕೆ ಸಿಕ್ಕಿದ್ದು ಮಾತ್ರ ನಮ್ಮ ಗಮನಕ್ಕೂ ಬಂದಿತ್ತು.

ಅಣ್ಣ-ತಮ್ಮಂದಿರ ಮಧ್ಯೆ ಆಸ್ತಿ ಪಾಲು ಮಾಡುವ ಊರ ಪ್ರಮುಖರು ಯಾರಿಗೂ ಅನ್ಯಾಯವಾಗದಂತೆ ಸಮ ಪಾಲು ಮಾಡುತ್ತಾರೆ. ಪಾಲನ್ನು ಆಯ್ದುಕೊಳ್ಳುವ ಮೊದಲ ಅವಕಾಶ ಅತೀ ಕಿರಿಯರಿಗೆ ಹೋಗುತ್ತದೆ. ಹಾಗೆ ಎಲ್ಲರೂ ಬಿಟ್ಟು ಉಳಿದ ಕಲ್ಲು ಮುಳ್ಳುಗಳಿಂದ ಕೂಡಿದ ಜಾಗ ಮತ್ತು ಕೊಳೆ ರೋಗದ ಹಾಳು ತೋಟ ನಮ್ಮಪ್ಪನ ಪಾಲಿಗೆ ಬಂದಿತ್ತು. ಆ ವರ್ಷ ನಮಗೆ ಸಿಕ್ಕಿದ ಅಡಿಕೆ ಒಂದು ಕ್ವಿಂಟಾಲ್ ಮಾತ್ರ. ಆದರೆ ಫಲವತ್ತಾದ ಕಂಬಳದ ಗದ್ದೆ ಆ ಪಾಲಿನಲ್ಲಿತ್ತು.

ನಾನು ಮತ್ತು ನನ್ನಣ್ಣ ದಯಾನಂದ ನಮ್ಮ ಆದಿ ಮನೆ ಕಟ್ಟೆಮನೆಯಲ್ಲೇ ಜನಿಸಿದ್ದೆವು. ಅದು ತುಂಬಾ ವಿಸ್ತಾರವಾದ ಮನೆ. ಹತ್ತಾರು ಕೊಟಡಿಗಳಿದ್ದವು. ಒಟ್ಟು ಕುಟುಂಬವಾದ ಕಾರಣ ಪ್ರತಿ ದಂಪತಿಗೂ ಪ್ರತ್ಯೇಕವಾದ ಕೊಟಡಿಗಳು. ಆಸ್ತಿ ಹಂಚಿಕೆಯಾದ ಮೇಲೆ ಒಬ್ಬೊಬ್ಬರಾಗಿ ಆ ಮನೆಯಿಂದ ಹೊರನಡೆದರು. ಆದರೆ ನಮಗೆ ಬೇರೆ ಮನೆಯಿರಲಿಲ್ಲ.

ಆದಿಮನೆಯನ್ನು ನಾವೆಲ್ಲಾ ಇಂದಿಗೂ ದೊಡ್ಡಮನೆ ಎಂದೇ ಕರೆಯುತ್ತೇವೆ. ಚಿತ್ರ ಚಿತ್ತಾರದ ಗೋದಿ ಕಂಬಗಳಿರುವ ಪಡಸಾಲೆ ಆ ಮನೆಯ ವಿಶೇಷ ಆಕರ್ಷಣೆ. ಇಂತಹದೇ ಇನ್ನೊಂದು ಮನೆ ಆ ಊರಲ್ಲಿದೆ. ಅದು ಕೂಜುಗೋಡು ಮನೆ. ಒಂದು ತಿಂಗಳ ಹಿಂದೆ ನಿರ್ದೇಶಕ ಪಿ. ಶೇಷಾದ್ರಿಯವರು ಇದೇ ಮನೆಗಳಲ್ಲಿ ತಮ್ಮ ಹೊಸ ಚಿತ್ರ ’ಬೆಟ್ಟದ ಜೀವ’ ದ ಚಿತ್ರೀಕರಣ ಮಾಡಿದ್ದರು.

ಒಂದೇ ತರಹದ ಆ ಮನೆಗಳ ಬಗ್ಗೆ ಹೇಳುವ ಮೊದಲು ಕಟ್ಟೆಮನೆ ಮನೆತನದ ಬಗ್ಗೆ ಹೇಳಬೇಕು. ನಾವು ವಲಸಿಗರು. ಘಟ್ಟದ ಮೇಲಿನಿಂದ ಇಳಿದು ಬಂದವರು. ಸುಮಾರು ಕ್ರಿಸ್ತ ಶಕ ೧೫೦೦ರಲ್ಲಿ ಹೇಮಾವತಿ ನದಿ ತೀರದಿಂದ ಬಿಸಿಲೆ ಘಾಟ್ ಮಾರ್ಗವಾಗಿ ದನ ಹೊಡೆದುಕೊಂಡು ತುಳುನಾಡಿಗೆ ಬಂದವರು ನಾವು. ಜಾನಪದ ವಿದ್ವಾಂಸರಾದ ಪುರುಷೋತ್ತಮ ಬಿಳಿಮಲೆಯವರು ಮೌಕಿಕ ಪರಂಪರೆಯಿಂದ ತಿಳಿದುಕೊಂಡಂತೆ ಎರಡು ಕಾರಣಗಳಿಂದ ನಮ್ಮ ಹಿರಿಯರು ಆ ಊರನ್ನು ಬಿಟ್ಟಿರಬಹುದು ಎಂದು ಅಭಿಪ್ರಾಯಪಡುತ್ತಾರೆ. ಒಂದು ಆಗ ಆ ಬಾಗವನ್ನು ಆಳುತ್ತಿದ್ದ ಲಿಂಗಾಯಿತ ಧರ್ಮದವರಾದ ಇಕ್ಕೇರಿ ವಂಶಸ್ಥರ ಕಿರುಕುಳಕ್ಕೆ ಬೆದರಿ ಓಡಿ ಹೋಗಿರಬಹುದು. ಇನ್ನೊಂದು ಆ ಕಾಲಘಟ್ಟದಲ್ಲಿ ಹೇಮಾವತಿ ನದಿ ಪ್ರದೇಶದಲ್ಲಿ ಕೆಂಡದ ಮಳೆ ಸುರಿದಿತ್ತೆಂಬ ಐತಿಹ್ಯವಿದೆ. ಅಂದರೆ ಭೀಕರ ಬರಗಾಲ ಬಂದಿರಬೇಕು. ಒಟ್ಟಿನಲ್ಲಿ ನಮ್ಮ ಹಿರಿಯರಲ್ಲಿ ಒಂದು ಗುಂಪು ಮಡಿಕೇರಿ ಮಾರ್ಗವಾಗಿ ಬಾಗಮಂಡಲಕ್ಕೆ ಬಂದು ನೆಲೆ ನಿಂತು ಕುಂಭಗೌಡನ ಮನೆ ಎಂಬ ಪ್ರತ್ಯೇಕ ಮನೆತನವಾಯ್ತು.

ತುಳುನಾಡಿಗೆ ಬಂದು ಕುಮಾರಧಾರ ನದಿ ಸುತ್ತಮುತ್ತಲಲ್ಲಿ ನೆಲೆ ನಿಂತ ನಮ್ಮ ಇನ್ನೊಂದು ಶಾಖೆ ಕಟ್ಟೆಮನೆ ಮೊತ್ತಮೊದಲ ಬಾರಿಗೆ ಆ ಪ್ರದೇಶಕ್ಕೆ ನೇಗಿಲನ್ನು ಪರಿಚಯಿಸಿತಂತೆ. ಅಂದರೆ ಆಧುನಿಕ ಕೃಷಿ ಪದ್ಧತಿಯನ್ನು ಜನಪ್ರಿಯಗೊಳಿಸಿತಂತೆ. ಅಲ್ಲಿಯವರೆಗೆ ಅಲ್ಲಿನ ಜನ ಕುಮೇರಿ ಬೆಳೆ ಮಾತ್ರ ಬಿತ್ತುತ್ತಿದ್ದರು. ನೇಗಿಲಿಗೆ ತುಳು ಭಾಷೆಯಲ್ಲಿ ’ನಾಯೆರ್’ ಎನ್ನುತ್ತಾರೆ. ನಮ್ಮ ’ಬಳಿ’ ಅಂದರೆ ಗೋತ್ರ ಕೂಡಾ ನಾಯೆರ್. ಇಲ್ಲಿಗೆ ಬಂದ ನಮ್ಮ ಕುಟುಂಬ ಮತ್ತೆ ಎರಡು ಹೋಳಾಗಿ ಒಂದು ’ಕೂಜುಗೋಡು’ ಮನೆತನವಾಯ್ತು. ಇನ್ನೊಂದು ’ಕಟ್ಟೆಮನೆ’ ಮನೆತನವಾಯ್ತು.
ಐನಿಕಿದು ಮತ್ತು ಬಾಳುಗೋಡು ಗ್ರಾಮಗಳಲ್ಲಿ ಹಂಚಿಕೊಂಡಿರುವ ಈ ಮನೆತನಗಳಲ್ಲಿ ನೂರಕ್ಕೂ ಹೆಚ್ಚು ಕುಟುಂಬಗಳಿವೆ. ಜನಸಂಖ್ಯೆ ಸಾವಿರದ ಹತ್ತಿರ ತಲುಪಬಹುದು. ಬಹುಶಃ ಕೂಜಗೌಡ, ಕಟ್ಟೆಗೌಡ ಮತ್ತು ಕುಂಭಗೌಡ ಎಂಬ ಅಣ್ಣ- ತಮ್ಮಂದಿರ ಹೆಸರಿನಲ್ಲಿ ಮೂರು ಮನೆತನಗಳು ಜನ್ಮ ತಾಳಿರಬಹುದು. ಯಾಕೆಂದರೆ ಈ ಮೂರೂ ಮನೆತನಗಳಿಗೆ ಘಟ್ಟದ ಮೇಲಿನ ಹಾಸನ ಜಿಲ್ಲೆಯ ಹೊಸಕೋಟೆ ಕೆಂಚಮ್ಮ ಮನೆದೇವರು. ಪರಸ್ಪರ ಈ ಕುಟುಂಬಗಳ ನಡುವೆ ವೈವಾಹಿಕ ಸಂಬಂಧಗಳಿಲ್ಲ.

ಕಟ್ಟೆಮನೆ ಮನೆತನದ ಬಗ್ಗೆ ಸುಳ್ಯ ಪರಿಸರದ ಒಕ್ಕಲಿಗ ಗೌಡರಲ್ಲಿ ವಿಶೇಷ ಗೌರವವಿದೆ. ದೈವ-ದೇವತಾ ಕಾರ್ಯಗಳಲ್ಲಿ ಮೊದಲ ಗೌರವವನ್ನು ಈ ಮನೆತನದವರಿಗೆ ನೀಡಲಾಗುತ್ತಿದೆ. ನನಗೆ ಈಗಲೂ ನೆನಪಿದೆ; ನಾನು ಚಿಕ್ಕಂದಿನಲ್ಲಿ ಒಂದು ಸತ್ಯನಾರಾಯಣ ಪೂಜೆಗೆ ಹೋಗಿದ್ದೆ. ಅಲ್ಲಿ ಪೂಜೆ ಮುಗಿದ ಮೇಲೆ ’ಯಾರದರೂ ಕಟ್ಟೆಮನೆಯವರು ಇದ್ದರೆ ಮುಂದೆ ಬನ್ನಿ’ ಎಂದು ಕರೆದು ಮೊದಲ ಪ್ರಸಾದವನ್ನು ನನಗೆ ಕೊಟ್ಟಿದ್ದರು. ನಾವಿಲ್ಲವಾದರೆ ನಮ್ಮ ಸಂಬಂಧಿಕರಿಗೆ ಆ ಗೌರವ ಸಲ್ಲುತ್ತಿತ್ತು. ಈಗ ಆ ಸಂಪ್ರದಾಯ ಇದ್ದಂತಿಲ್ಲ.

ಈ ಗೌರವಕ್ಕೆ ಕಟ್ಟೆಮನೆ ಪಾತ್ರವಾಗಲೂ ಇನ್ನೂ ಒಂದು ಕಾರಣವಿದೆ. ಅದು ಶೃಂಗೇರಿ ಪೀಠಕ್ಕೂ ಕಟ್ಟೆಮನೆಗೂ ಇರುವ ಸಂಬಂಧ. ಸುಳ್ಯ ಸೀಮೆಯ ಒಕ್ಕಲಿಗರಿಂದ ಕಾಣಿಕೆಯನ್ನು ಸಂಗ್ರಹಿಸುವ ಅಧಿಕಾರವನ್ನು ಶೃಂಗೇರಿ ಪೀಠ ಕಟ್ಟೆಮನೆಗೆ ನೀಡಿತ್ತು. ಪೀಠ ಕೊಟ್ಟ ತಾಮ್ರದ ತೋಳಬಂದಿಯನ್ನು ಧರಿಸಿ ಕಟ್ಟೆಯ ಮೇಲೆ ಕುಳಿತು ಆ ಮನೆತನದ ಹಿರಿಯ ಕರ ವಸೂಲು ಮಾಡುತ್ತಿದ್ದರಂತೆ. ಆ ತೋಳಬಂದಿ ಈಗಲೂ ನಮ್ಮ ಆದಿಮನೆಯಲ್ಲಿದೆ. ಅದಕ್ಕೆ ಶೃಂಗೇರಿ ಪೀಠದಲ್ಲಿ ದಾಖಲೆಗಳಿವೆ.

೧೮೩೭ರಲ್ಲಿ ಕೊಡಗು ಮತ್ತು ದಕ್ಷಿಣಕನ್ನಡ ಜಿಲ್ಲೆಯೊಳಗೊಂಡಂತೆ ಬ್ರಿಟಿಷರ ವಿರುದ್ಧ ದಂಗೆಯೆದ್ದ ’ಅಮರ ಸುಳ್ಯ ದಂಗೆ’ ಅಥವಾ ’ಕಲ್ಯಾಣಪ್ಪನ ಕಾಟಕಾಯಿ’ ಹೋರಾಟದ ಮುಂಚೂಣಿಯಲ್ಲಿ ಕಟ್ಟೆಮನೆಯವರಿದ್ದರು.
ಇಂಥ ಕಟ್ಟೆಮನೆಯಲ್ಲಿ ಜನಿಸಿದವರಿಗೆ ಕೆಲವು ಕಟ್ಟುಪಾಡುಗಳಿದ್ದವು. ಬಹುಶಃ ಎಲ್ಲಾ ಐತಿಹಾಸಿಕ ಹಿನ್ನೆಲೆಯುಳ್ಳ ಮನೆತನಗಳಲ್ಲಿ ಇದಿರುತ್ತದೆ. ಅದೆಂದರೆ ಸಾರಾಯಿ ಕುಡಿಯಬಾರದು, ಜೂಜಾಡಬಾರದು, ಕೋಳಿಅಂಕದಲ್ಲಿ ಭಾಗವಹಿಸಬಾರದು.... ಒಟ್ಟಿನಲ್ಲಿ ಮನೆತನದ ಗೌರವಕ್ಕೆ ಕುಂದುಂಟಾಗುವ ಯಾವ ಕೆಲಸವನ್ನೂ ಮಾಡಬಾರದು. ನಮ್ಮಪ್ಪ ಅದನ್ನು ಚಾಚೂ ತಪ್ಪದೆ ಪಾಲಿಸಿದ್ದರು.
ಇಂತಹ ಹಿನ್ನೆಲೆಯುಳ್ಳ ನಮ್ಮಪ್ಪ ಆದಿಮನೆಯನ್ನು ಬಿಟ್ಟು ತಮ್ಮ ಸ್ವಂತ ಗೂಡು ಕಟ್ಟಿಕೊಳ್ಳಲು ಹೊರಟರು.

ಕುಕ್ಕೆಸುಬ್ರಹ್ಮಣ್ಯ ಸಮೀಪದ ಐನಕಿದು ಗ್ರಾಮದ ಆದಿಮನೆಯಿಂದ ಸುಮಾರು ನಾಲ್ಕು ಮೈಲು ದೂರದಲ್ಲಿರುವ ಬಾಳುಗೋಡು ಗ್ರಾಮದ ಪನ್ನೆ ಎಂಬಲ್ಲಿ ನಮ್ಮ ಆಸ್ತಿ ಇತ್ತು. ಬೆಳಿಗ್ಗೆ ಬೇಗನೆ ಎದ್ದು ಬುತ್ತಿ ಕಟ್ಟಿಕೊಂಡು ಕೆಲಸದಾಳು ಗುಂಡ ಬೈರನನ್ನು ಕರೆದುಕೊಂಡು ನಮ್ಮಪ್ಪ ಪನ್ನೆಗೆ ಬರುತ್ತಿದ್ದರು. ಗುಂಡ ಮತ್ತು ನಮ್ಮಪ್ಪ ಇಬ್ಬರೇ ಸೇರಿ ಒಂದು ರೂಂ, ಅಡಿಗೆ ಮನೆ ಮತ್ತು ವಿಶಾಲವಾದ ವರಾಂಡದ ಗಟ್ಟಿಯಾದ ಸೋಗೆ ಮನೆಯೊಂದನ್ನು ಕಟ್ಟಿದ್ದರು. ಅವರು ತಂದ ಬುತ್ತಿಯನ್ನು ಪಕ್ಕದಲ್ಲಿಯೇ ಇದ್ದ ಅಂಟುವಾಳ ಕಾಯಿಯ ಪುಟ್ಟ ಗಿಡವೊಂದಕ್ಕೆ ನೇತು ಹಾಕುತ್ತಿದ್ದರು. ಅನಂತರ ದೊಡ್ಡ ಮರವಾಗಿ ಕ್ವಿಂಟಾಲ್ ಗಟ್ಟಲೆ ಕಾಯಿ ಬಿಡುತ್ತಿದ್ದ ಆ ಮರ ಭಾವನಾತ್ಮಕವಾಗಿ ನಮಗೆಲ್ಲಾ ತುಂಬಾ ಹತ್ತಿರವಾಗಿತ್ತು.

ಕಷ್ಟ ಕಾರ್ಪಣ್ಯಗಳ ಮಧ್ಯೆಯೂ ಸ್ವಸಾಮರ್ಥ್ಯದಿಂದ ಬದುಕನ್ನು ಕಟ್ಟಿಕೊಂಡ ನಮ್ಮಪ್ಪ ಕ್ರಮೇಣ ಅರ್ಥಿಕವಾಗಿ ಸಧೃಢವಾಗತೊಡಗಿದರು. ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಎಂಟನೇ ಕ್ಲಾಸ್ ತನಕ ಓದಿದ್ದ ನನ್ನಪ್ಪ ವಿಧ್ಯೆಯ ಮಹತ್ವವನ್ನು ಅರಿತಿದ್ದರು. ನಮ್ಮನ್ನೆಲ್ಲಾ ವಿದ್ಯಾವಂತರಾಗಿಸುವುದೇ ಅವರ ಗುರಿಯಾಗಿತ್ತು, ಹೈಸ್ಕೂಲ್, ಕಾಲೇಜುಗಳು ದೂರದೂರಿನಲ್ಲಿ ಇದ್ದ ಕಾರಣದಿಂದ ಅದು ಸುಲಭ ಸಾಧ್ಯವಾಗಿರಲಿಲ್ಲ.
ಒಂದು ದಿನ ಸೊಸೈಟಿಯ ಜಪ್ತಿ ವಾಹನ ನಮ್ಮ ಮನೆ ಮುಂದೆ ಬಂದು ನಿಂತಿತು. ನಾವೆಲ್ಲಾ ಕಂಗಾಲಾದೆವು. ಯಾಕೆಂದರೆ ನಾವು ಸಾಲ ಮಾಡಿರಲಿಲ್ಲ. ವಿಚಾರಿಸಿದಾಗ ತಿಳಿಯಿತು; ನಮ್ಮಪ್ಪನ ಹೆಸರಲ್ಲಿ ನಮ್ಮ ದೊಡ್ಡಪ್ಪ ಸಾಲಮಾಡಿದ್ದರು. ಅಪ್ಪನಿಂದ ಉಪಾಯವಾಗಿ ಸಹಿ ಹಾಕಿಸಿಕೊಂಡಿದ್ದರು. ಜಪ್ತಿಯನ್ನು ತಾತ್ಕಾಲಿಕವಾಗಿ ತಡೆಯಲಾದರೂ ಅವರಿಗೆ ಸ್ವಲ್ಪ ಹಣ ನೀಡಲೇಬೇಕಾಗಿತ್ತು. ಮನೆಯಲ್ಲಿ ಒಂದು ಪೈಸೆಯೂ ಇರಲಿಲ್ಲ. ಆದರೆ ಹಿಂದಿನ ದಿನ ತಾನೇ ನಮ್ಮ ಆಮ್ಮ ತವರು ಮನೆಗೆ ಹೋಗಿ ಬಂದಿದ್ದರು. ನಮ್ಮ ಅಜ್ಜ ಶ್ರೀಮಂತರು. ಅವರಿಗೆ ಇಬ್ಬರೇ ಹೆಣ್ಣುಮಕ್ಕಳು. ಬರುವಾಗ ನಮ್ಮ ತಾಯಿಗೆ ಅವರು ಸ್ವಲ್ಪ ದುಡ್ಡು ಕೊಟ್ಟಿದ್ದರು. ಅದನ್ನೇ ನನ್ನ ಅಮ್ಮ ತಂದು ಅಪ್ಪನ ಕೈಯ್ಯಲಿಟ್ಟರು.ಸೊಸೈಟಿಯವರು ಸಾಲ ಕಟ್ಟಲು ವಾಯಿದೆ ಕೊಟ್ಟು ಹೊರಟರು. ಆದರೆ ಇದರಿಂದಾಗಿ ನಾವು ಬಹು ದೊಡ್ಡ ಪಾಠ ಕಲಿತೆವು.

ನನ್ನ ಅಣ್ಣ ಆಗ ಪಿಯುಸಿ ಓದುತ್ತಿದ್ದ. ಆತ ಓದು ನಿಲ್ಲಿಸಿ ಮನೆಯ ಜವಾಬ್ದಾರಿ ವಹಿಸಿಕೊಂಡ. ಮಣ್ಣಿನೊಡನೆ ಗುದ್ದಾಟಕಿಳಿದ. ’ಭೂಮಿ ನನ್ನನ್ನು ನೋಡಿ ಹೆದರಬೇಕು’ ಅಂದುಕೊಳ್ಳುತ್ತಲೇ ಒಂದಿಂಚೂ ಭೂಮಿಯನ್ನೂ ಬಿಡದೆ ಕೃಷಿ ಮಾಡಿದ. ಅಡಿಕೆ, ತೆಂಗು, ಬಾಳೆ, ಕರಿಮೆಣಸು, ಕೊಕ್ಕೋ... ನಮ್ಮ ಜಮೀನು ಸಮೃದ್ಧಿಯಿಂದ ಬೀಗತೊಡಗಿತು. ತಾಯಿ ಕೆಂಚಮ್ಮನ ದಯೆಯಿಂದ ಮಿನಿ ಲಾರಿ, ಕಾರು ಕೊಂಡುಕೊಂಡ. ವಿಶಾಲವಾದ ಮನೆ ಕಟ್ಟಿಸಿದ. ಅಧುನಿಕ ದನದ ಕೊಟ್ಟಿಗೆ ಕಟ್ಟಿಸಿದ. ಪ್ರಗತಿಪರ ಕೃಷಿಕನಾಗಿ ಬೆಳೆದ. ಅವುಗಳ ನಡುವೆಯೇ ತಂಗಿಯರನ್ನೂ ಓದಿಸಿದ.

ಅಪ್ಪ, ಅಣ್ಣನಿಗೆ ಮಾರ್ಗದರ್ಶಕರಾದರು. ಅಮ್ಮ ಎಲ್ಲರಿಗೂ ಬೆನ್ನೆಲುಬಾಗಿ ನಿಂತರು. ಸರಿಕರ ಎದುರು ನಾವೆಲ್ಲಾ ತಲೆಯೆತ್ತಿ ನಡೆದೆವು. ಬದುಕಿನ ಇಳಿಸಂಜೆಯಲ್ಲಿ ಅಪ್ಪ ನೆಮ್ಮದಿಯ ಜೀವನವನ್ನು ಕಂಡರು. ಕೊನೆಯದಿನಗಳಲ್ಲಿ ನಾವೆಲ್ಲಾ ಮಕ್ಕಳು ಅವರ ಬಳಿಯಲ್ಲೇ ಇದ್ದೆವು. ಅದರಲ್ಲೂ ಅತ್ತಿಗೆ ಮತ್ತು ಅಮ್ಮ ಅವರನ್ನು ಮಗುವಿನಂತೆ ನೋಡಿಕೊಂಡರು. ಇಡೀ ಊರು ಅವರ ಅಂತಿಮ ಯಾತ್ರೆಯಲ್ಲಿ ಭಾಗಿಯಾಗಿ ಗೌರವ ಸಲ್ಲಿಸಿತು. ಈಗವರು ನಮ್ಮ ತೆಂಗಿನ ತೋಟದ ನಡುವೆ ನೆಮ್ಮದಿಯಿಂದ ಮಲಗಿದ್ದಾರೆ.

Tuesday, November 23, 2010

ರಾಜಕಾರಣಿಗಳೂ, ಪತ್ರಕರ್ತರೂ ಮತ್ತು ಮಠಾಧೀಶರು.

ಇವತ್ತು ಕೆಂಡಸಂಪಿಗೆ ವೆಬ್ ಸೈಟ್ ನೋಡುತ್ತಲಿದ್ದೆ. ಬಸವರಾಜು ಅವರು ’ರಾಜಕಾರಣಿಗಳೂ, ಪತ್ರಕರ್ತರೂ’ ಎಂಬ ಲೇಖನ ಬರೆದಿದ್ದರು. ಅದನ್ನು ಓದಿ ಮುಗಿಸುತ್ತಿರುವಾಗಲೇ ಸುದ್ದಿವಾಹಿನಿಗಳಲ್ಲಿ ತುಮಕೂರಿನ ಸಿದ್ದಗಂಗಾಸ್ವಾಮಿಗಳ ಬೈಟ್ ಪ್ರಸಾರವಾಗುತ್ತಿತ್ತು. ಅವರು ಹೇಳುತ್ತಿದ್ದರು; ಯಡಿಯೂರಪ್ಪ ಶ್ರಮಜೀವಿ. ಗಾಮೀಣ ಭಾಗದಲ್ಲಿ ಅವರು ಜನಪ್ರಿಯರಾಗಿದ್ದಾರೆ. ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ..... ಹೀಗೆ ಅವರ ಮಾತು ಮುಂದುವರಿದಿತ್ತು.

ಹಾಗೆ ನೋಡಿದರೆ ಇವತ್ತಿನ ದಿನವೇ ಲಿಂಗಾಯಿತ ಸ್ವಾಮಿಗಳ ಪ್ರತಿಭಟನಾ ದಿನ. ಎಲ್ಲಾ ಲಿಂಗಾಯಿತ ಸ್ವಾಮಿಗಳು, ಅರ್ಥಾತ್ ಜಗದ್ಗುರುಗಳು ಮುಖ್ಯಮಂತ್ರಿ ಯಡಿಯೂರಪ್ಪ ಪರವಾಗಿ ಬೀದಿಗಿಳಿದ ದಿನ. ಹಾಗೆ ಅವರು ಬೀದಿಗಿಳಿದದ್ದು ನ್ಯಾಯಯುತವಾದುದೇ!. ಮಠ ಮಾನ್ಯಗಳಿಗೆ ರಾಜ್ಯದ ಬೊಕ್ಕಸದಿಂದ ಕೋಟಿ ಕೋಟಿ ಹಣವನ್ನು ಬಾಚಿ ಕೊಟ್ಟ ಪ್ರಭುಗಳ ಋಣ ಸಂದಾಯ ಮಾಡಬೇಡವೇ?

ಸಿದ್ದಗಂಗಾ ಸ್ವಾಮಿಗಳನ್ನು ಇಡೀ ನಾಡು ಗೌರವಿಸುತ್ತದೆ. ಅವರು ಮಠವನ್ನು ಕಟ್ಟಿಕೊಂಡರೂ ಯಾವುದೇ ಒಂದು ಜಾತಿಗೆ ಸೀಮಿತವಾಗಿ ನಡೆದುಕೊಂಡವರಲ್ಲ. ಆದರೆ ಶತಾಯುಷಿ ಅನ್ನಿಸಿಕೊಂಡ ಮೇಲೆ ಅವರು ಬದಲಾದಂತೆ ಕಾಣುತ್ತಿದೆ. ಅವರು ಲಿಂಗಾಯಿತ ಸಮುದಾಯಕ್ಕೆ ಮಾತ್ರ ಸೇರಿದ ಸ್ವಾಮೀಜಿಯೇನೋ ಎಂದು ಭಾಸವಾಗುತ್ತಿದೆ.

ಎರಡು ವರ್ಷಗಳ ಹಿಂದಿನ ಘಟನೆ;
ನಾಡ ಹಬ್ಬವಾದ ಮೈಸೂರು ದಸರಾದ ಉದ್ಘಾಟನೆಗಾಗಿ ಆಗಿನ ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿಯವರು ಸಿದ್ದಗಂಗಾಸ್ವಾಮಿಗಳನ್ನು ಗೌರವದಿಂದ ಕರೆದಿದ್ದರು. ಅವರು ಕೂಡಾ ಸಂತೋಷದಿಂದ ಒಪ್ಪಿಕೊಂಡಿದ್ದರು.
ಆದರೆ ಅವರು ಉದ್ಘಾಟನೆ ಮಾಡಲಿಲ್ಲ. ಕಾರಣ ಕುಮಾರಸ್ವಾಮಿ ವಚನ ಭ್ರಷ್ಟರಾದದ್ದು ಸ್ವಾಮಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಬಿಜೆಪಿಗೆ ಕೊಟ್ಟ ಮಾತಿನಂತೆ ೨೦ ತಿಂಗಳ ಆಢಳಿತದ ನಂತರ ಮುಖ್ಯಮಂತ್ರಿ ಗಾದಿಯನ್ನು ಬಿಟ್ಟುಕೊಡಬೇಕಾಗಿತ್ತು. ಯಡಿಯೂರಪ್ಪ ಅದನ್ನು ಅಲಂಕರಿಸಬೇಕಾಗಿತ್ತು. ಆದರೆ ಹಾಗಾಗಲಿಲ್ಲ.
ಈಗ ಕರ್ನಾಟಕದ ಬಹುತೇಕ ಎಲ್ಲಾ ವೀರಶೈವ ಮಠಾದೀಶರು ಬಹಿರಂಗವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಪರವಾಗಿ ನಿಂತಿದ್ದಾರೆ. ಕೊಳದ ಮಠದ ಸ್ವಾಮೀಜಿಯಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿಧಾನ ಪರಿಷತ್ತಿನಲ್ಲಿ ಮಠಾದೀಶರಿಗೂ ಪ್ರಾತಿನಿಧ್ಯವಿರಬೇಕು ಎಂದು ಆಗ್ರಹಿಸಿದರು.

ಸ್ವಜನಪಕ್ಷಪಾತವೆಂಬುದು ಕೇವಲ ರಾಜಕಾರಣಿಗಳಿಗೆ ಸ್ವತ್ತಲ್ಲ!

ಮಠಾದೀಶರನ್ನು ಪಕ್ಕದಲ್ಲಿಟ್ಟುಕೊಂಡು, ಕಂಡ ಕಂಡ ದೇವಸ್ಥಾನಗಳಿಗೆ ಬೇಟಿಕೊಡುತ್ತಾ, ಹೋಮ ಹವನಗಳಲ್ಲಿ ಭಾಗವಹಿಸುತ್ತಾ ಕುರ್ಚಿಯನ್ನು ಉಳಿಸುಕೊಳ್ಳುವುದನ್ನೇ ಕಾಯಕವನ್ನಾಗಿಸಿಕೊಂಡ ಮುಖ್ಯಮಂತ್ರಿಗಳಿಗೆ ದೂರದರ್ಶಿತ್ವವಿಲ್ಲದ ಜನಪ್ರಿಯ ಕಾರ್ಯಕ್ರಮಗಳೇ ಅಭಿವೃದ್ಧಿ ಯೋಜನೆಗಳಾಗಿ ಭಾಸವಾಗುತ್ತಿದೆ. ಹಾಗಾಗಿಯೇ ಅವರಿಗೆ ಕಳೆದ ವರ್ಷ ನೆರೆಹಾವಳಿಯಿಂದ ತತ್ತರಿಸಿದ ಉತ್ತರ ಕರ್ನಾಟಕದ ಜನತೆಗೆ ಸೂರು ಕಟ್ಟಿಕೊಡುವುದಕ್ಕಿಂತ ಮುಖ್ಯವಾಗಿ ಭಾಗ್ಯಲಕ್ಷ್ಮಿ ಕಾರ್ಯಕ್ರಮದಲ್ಲಿ ಸೀರೆ ಹಂಚುವುದೇ ಮುಖ್ಯವಾಗುತ್ತದೆ.
ತಮ್ಮ ಜನಪ್ರಿಯ ಕಾರ್ಯಕ್ರಮಗಳ ಯಥೇಚ್ಛ ಜಾಹೀರಾತುಗಳನ್ನು ಮಾಧ್ಯಮಗಳಿಗೆ ನೀಡಿ ಅವರನ್ನು ಸಂತುಷ್ಟಗೊಳಿಸಿದರು. ಆದರೂ ಮಾಧ್ಯಮಗಳು ಅವರ ವಿರುದ್ಧ ತಿರುಗಿಬಿದ್ದವು. ಯಡಿಯೂರಪ್ಪ ಅವರಿಗೆ ಸಹಜವಾಗಿ ಸಿಟ್ಟು ಬಂದಿದೆ. ಪತ್ರಕರ್ತರಿಗೆ ಸ್ವಲ್ಪವಾದರೂ ಕೃತಜ್ನತೆ ಬೇಡವೇ?
ಯಡಿಯೂರಪ್ಪನವರಿಗೆ ತಾನು ಈ ಸ್ಥಿತಿಯಲ್ಲಿ, ಬೆತ್ತಲಾಗಿ ನಿಲ್ಲಲು ದೇವೆಗೌಡ ಮತ್ತು ಅವರ ಮಗ ಕುಮಾರಸ್ವಾಮಿಯೇ ಕಾರಣ ಎಂದು ನಂಬಿಕೊಂಡಿದ್ದಾರೆ. ಹಾಗಾಗಿ ಆ ’ಅಪ್ಪ ಮಕ್ಕಳನ್ನು ಬಿಡುವುದಿಲ್ಲ’ ಎಂದು ಹಲ್ಲು ಮಸೆಯುತ್ತಿದ್ದಾರೆ. ಚಿಕ್ಕ ಪುಟ್ಟ ವಿಷಯಗಳನ್ನೆಲ್ಲಾ ವಿಜೃಂಬಿಸಿ ತನ್ನನ್ನು ಖಳನಾಯಕನನ್ನಾಗಿ ಬಿಂಬಿಸಿದ ಮಾಧ್ಯಮಗಳ ಮೇಲೆ ಹರಿಹಾಯುತ್ತಿದ್ದಾರೆ. ಸಧ್ಯಕ್ಕೆ ಇವೆರಡೂ ಅವರ ವೈರಿ ಸ್ಥಾನದಲ್ಲಿದೆ.
ಅವರ ಸಿಟ್ಟು ಸಹಜವಾದುದೇ. ಕುಮಾರಸ್ವಾಮಿ ಮಾಡಲಾರದ್ದೇನನ್ನೂ ಇವರು ಮಾಡಿಲ್ಲ. ಇವರು ಅಧಿಕಾರಕ್ಕೆ ಹೊಸಬರು. ಎನೋ ಮಾಡಲು ಹೋಗಿ ಸಿಕ್ಕಿ ಬಿದ್ದಿದ್ದಾರೆ. ಆದರೆ ಕುಮಾರಸ್ವಾಮಿ ನಾಜೂಕಯ್ಯ. ಅವರ ಮೈಗೆ ಅವರಪ್ಪ ಚೆನ್ನಾಗಿ ಎಣ್ಣೆಹಚ್ಚಿದ್ದಾರೆ!
ಇನ್ನು ಮಾಧ್ಯಮದವರಿಗೆ ಎನು ಬೇಕೋ ಅದನ್ನು ಹೇಗೆ ಕೊಡಬೇಕೆಂಬುದು ಅಧಿಕಾರಸ್ಥ ರಾಜಕಾರಣಿಗಳಿಗೆ ಚೆನ್ನಾಗಿ ಗೊತ್ತಿದೆ. ಹಿಂದೆಲ್ಲಾ ದೀಪಾವಳಿ ಬೋನಸ್ಸು ಕೊಡುತ್ತಿದ್ದರು. ಅದು ತಿಂಗಳ ಪೇಮೆಂಟ್ ಗೆ ಇಳಿದು ಈಗ ದಿನಗೂಲಿಗೆ ಇಳಿದಿದೆಯಂತೆ. ಯವುದಕ್ಕೂ ಇರಲಿ ಎಂದುಕೊಂಡು ರಾಜಕಾರಣಿಗಳೇ ಈಗ ಸುದ್ದಿಚಾನಲ್ ಗಳ ಒಡೆಯರಾಗುತ್ತಿದ್ದಾರೆ. ಪತ್ರಕರ್ತರ ಹಿಂಡನ್ನೇ ಖರೀದಿ ಮಾಡುವುದು ಹೆಚ್ಚು ಲಾಭದಾಯಕ.

ಎರಡು ದಿನಗಳ ಹಿಂದಿನ ಘಟನೆಯೊಂದರ ಉದಾಹರಣೆ ಕೊಡುವುದಾರೆ, ಮುಖ್ಯಮಂತ್ರಿಗಳ ಆಪ್ತವಲಯದಿಂದ ಸಿಡಿಯೊಂದನ್ನು ಕನ್ನಡದ ಮೂರು ಪ್ರಮುಖ ಸುದ್ದಿವಾಹಿನಿಗಳಿಗೆ ಕಳುಹಿಸಿಕೊಡಲಾಗಿತ್ತು. ಜನಾರ್ಧನ ರೆಡ್ಡಿ ಮುಖ್ಯಮಂತ್ರಿಗಳ ವಿರುದ್ಧ ಷಡ್ಯಂತರ ರೂಪಿಸುತ್ತಿರುವ ಚಿತ್ರಣ ಅದರಲ್ಲಿತ್ತು. ಒಂದು ಚಾನಲ್ ಅದನ್ನು ತಡವಾಗಿ ಪ್ರಸಾರ ಮಾಡಿತು. ಇನ್ನೆರಡು ಚಾನಲ್ ಅದನ್ನು ಏನು ಮಾಡಿತೋ ಗೊತ್ತಾಗಲೇ ಇಲ್ಲ!

ನೈತಿಕತೆಯ ವಿಚಾರಕ್ಕೆ ಬಂದರೆ ಈಗ ಮಠಾದೀಶರು, ರಾಜಕಾರಣಿಗಳು, ಪತ್ರಕರ್ತರು ಒಂದೇ ಸಾಲಿನಲ್ಲಿ ನಿಲ್ಲುತ್ತಾರೆ.
ಆದರೂ ಕಳವಳಪಡಬೇಕಾಗಿಲ್ಲ. ನಮ್ಮದು ವೈವಿಧ್ಯಮಯ ದೇಶ. ಪ್ರತಿವ್ಯವಸ್ಥೆಗೂ ಪರ್ಯಾಯ ವ್ಯವಸ್ಥೆಯೊಂದು ಇದ್ದೇ ಇರುತ್ತದೆ. ಶಿಷ್ಟ ಸಾಹಿತ್ಯದಷ್ಟೆ ಪ್ರಭಲವಾದ ಜನಪದ ಸಾಹಿತ್ಯ ಇಲ್ಲಿ ಅನಾಚೂನವಾಗಿ ಹರಿದು ಬಂದಿದೆ. ಪತ್ರಿಕೆ, ಟಿವಿಗಳು ಸತ್ಯವನ್ನು ಮರೆಮಾಚಲು ಪ್ರಯತ್ನಿಸಿದರೂ ಚೌಕಟ್ಟುಗಳಿಲ್ಲದ ಬ್ಲಾಗ್, ಪೇಸ್ ಬುಕ್, ಟ್ವೀಟ್ಟರ್ ನಂಥ ಸಾಮಾಜಿಕ ಜಾಲ ತಾಣಗಳಿವೆ. ಕೈಯಲ್ಲಿ ಜಂಗಮವಾಣಿಯಿದೆ. ಸುದ್ದಿಯಾಚೆಗಿನ ಸುದ್ದಿಯನ್ನು ತಿಳಿದುಕೊಳ್ಳುವ ಕುತೂಹಲ ನಮಗಿರಬೇಕು. ಸಮಾಜಮುಖಿ ಚಿಂತನೆ ಇರಬೇಕು ಅಷ್ಟೆ.

Sunday, November 14, 2010

’ಪುಟಾಣಿ ಪಾರ್ಟಿ’- ಕನ್ನಡ ವಾಹಿನಿಗಳ ನಿರ್ಲಕ್ಷ್ಯ






ಇಂದು ಮಕ್ಕಳ ದಿನಾಚರಣೆ. ನಾನೊಂದು ಮಕ್ಕಳ ಮಕ್ಕಳ ಸಿನಿಮಾ ನೋಡಿದೆ; ಅದು ಪಿ.ಎನ್.ರಾಮಚಂದ್ರ ಅವರ ’ಪುಟಾಣಿ ಪಾರ್ಟಿ’. ಮಕ್ಕಳ ಸಿನಿಮಾ ಅಂದರೆ ಹೀಗೆಯೇ ಇರಬೇಕು ಎಂಬ ಸಿದ್ಧ ಸಿದ್ಧಾಂತಗಳನ್ನೆಲ್ಲಾ ಪಕ್ಕಕ್ಕೆ ತಳ್ಳಿ ತನ್ನದೇ ದಾರಿಯನ್ನು ಕಂಡುಕೊಂಡ ಚಿತ್ರ ಇದು.

ಮಕ್ಕಳ ಚಿತ್ರ ಅಂದ ಕೂಡಲೇ ನಮ್ಮ ನೆನಪಿಗೆ ಬರುವುದು; ಪುಟಾಣಿ ಏಜಂಟ್ ೧.೨.೩, ಸಿಂಹದ ಮರಿ ಸೈನ್ಯ, ಸೂಪರ್ ನೋವಾ ಇದಕ್ಕಿಂತ ಸ್ವಲ್ಪ ಭಿನ್ನವಾಗಿ ಬಂದ ಬೆಟ್ಟದ ಹೂವು, ಚಿನ್ನಾರಿ ಮುತ್ತ ಇತ್ಯಾದಿ... ಆದರೆ ಇವೆಲ್ಲ ಸ್ವಲ್ಪ ಮಟ್ಟಿಗೆ ದೊಡ್ಡವರ ದೃಷ್ಟಿಕೋನದಿಂದ ನೋಡಿದ ಮಕ್ಕಳ ಚಿತ್ರಗಳು.ಆದರೆ ಪುಟಾಣಿ ಪಾರ್ಟಿ ಹಾಗಿಲ್ಲ.

ಗ್ರಾಮ ಸ್ವರಾಜ್ಯದ ಕನಸು ಕಂಡವರು ಗಾಂಧೀಜಿ. ಅದೇ ಕಲ್ಪನೆಯಲ್ಲಿ ಮೂಡಿದ್ದು ಪಂಚಾಯ್ತು ರಾಜ್ ಮಸೂದೆ. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಗಳಾಗಿದ್ದಾಗ ಅದನ್ನು ದೇಶದಲ್ಲೇ ಪ್ರಥಮ ಬಾರಿಗೆ ಕರ್ನಾಟದಲ್ಲಿ ಜಾರಿಗೆ ತಂದಿದ್ದರು. ಪುಟಾಣಿ ಪಾರ್ಟಿಯಲ್ಲಿ ಇದೇ ಅಧಿಕಾರ ವಿಕೇಂದ್ರಿಕರಣ ತತ್ವದ ಎಳೆಯಿದೆ.
ಗ್ರಾಮ ಪಂಚಾಯ್ತಿಯಂಥ ಸ್ಥಳಿಯ ಆಡಳಿತದಲ್ಲಿ ಮಕ್ಕಳ ಸಮಿತಿಯೊಂದು- ’ಪುಟಾಣಿ ಪಾರ್ಟಿ’-ಮಹತ್ವದ ಪಾತ್ರ ವಹಿಸುತ್ತದೆ. ಸಾಮಾಜಿಕ ಸಮಸ್ಯೆಗಳಿಗೆ ಧ್ವನಿಯಾಗುತ್ತದೆ. ಸಾಮಾಜಿಕ ಕಳಕಳಿಯುಳ್ಳ ಉಪಾಧ್ಯಾಯಿನಿಯೊಬ್ಬರು ಮಕ್ಕಳ ಚಟುವಟಿಕೆಗಳಿಗೆ ಪ್ರೇರಕ ಶಕ್ತಿಯಾಗಿ ನಿಲ್ಲುತ್ತಾರೆ.
ಸಿನಿಮಾದಲ್ಲಿ ನಾಟಕೀಯತೆ ಇಲ್ಲ. ಸೇಟ್ ಮೆಂಟ್ ಗಳಿಲ್ಲ. ಸಿನಿಮಾದ ಆಶಯ ಸಿನಿಮಾದ ಭಾಗವಾಗಿ ಬರುತ್ತದೆ. ಸಂಯಮದ ನಿರೂಪಣೆಯಿದೆ. ಧಾರವಾಡದ ಆಡುಮಾತಿನ ಸೊಗಡಿದೆ. ಅಲ್ಲಿನ ಸ್ಥಳೀಯ ಮಕ್ಕಳ ಸಹಜಾಭಿನಯವಿದೆ. ಎಲ್ಲಕ್ಕಿಂತಲೂ ಮುಖ್ಯವಾಗುವುದು ಇಡೀ ವ್ಯವಸ್ಥೆಯೇ ಭ್ರಷ್ಟಗೊಂಡಾಗ ಮಕ್ಕಳ ಮೂಲಕ ಆಶಾವಾದವನ್ನು ಬಿತ್ತುವುದಿದೆಯಲ್ಲಾ ಅದು ನಿಜಕ್ಕೂ ಗ್ರೇಟ್.

ಕನ್ನಡದ ಪ್ರತಿಭೆಯೊಂದು ಹೊಸ ಪ್ರಯತ್ನಗಳಿಗೆ ಮುಂದಾದಾಗ ಅದಕ್ಕೆ ನಾವು ಪ್ರೋತ್ಸಾಹ ನೀಡಬೇಕು. ಅದರಲ್ಲೂ ತಾಯ್ನಾಡಿನಿಂದ ದೂರವಾಗಿ ಬದುಕುತ್ತಾ ಕನ್ನಡದ ಕೈಂಕರ್ಯದಲ್ಲಿ ತೊಡಗಿಕೊಂಡಿರುವವರ ಬಗ್ಗೆ ನಮಗೆ ಪ್ರೀತಿ, ಗೌರವಗಳಿರಬೇಕು.

ಪುಟಾಣಿ ಪಾರ್ಟಿ ನಿರ್ದೇಶಕರಾದ ಪಿ.ಎನ್.ರಾಮಚಂದ್ರ ಅವರು ಉಡುಪಿಯವರಾದರೂ ಬದುಕು ಕಟ್ಟಿಕೊಂಡಿರುವುದು ದೂರದ ಮುಂಬಯಿಯಲ್ಲಿ. ಪುಣೆಯ ಪಿಲಂ ಇನ್ ಸ್ಟಿಟ್ಯೂಟ್ ಪದವಿಧರರು. ಇವರ ತುಳು ಚಲನಚಿತ್ರ ’ಸುದ್ದ’ ೨೦೦೭ರಲ್ಲಿ ನವದೆಹಲಿಯಲ್ಲಿ ನಡೆದ ಒಷಿಯನ್ ಚಿತ್ರೋತ್ಸವದಲ್ಲಿ ಅತ್ಯುತ್ತಮ ಭಾರತೀಯ ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿತ್ತು. ಸುದ್ದ ಎಂದರೆ ಶುದ್ಧಿಕಾರ್ಯ; ಪಾವಿತ್ರ್ಯತೆಯನ್ನು ಪುನರ್ ಸ್ಥಾಪಿಸುವುದು.ಇದು ತುಳುನಾಡಿನಲ್ಲಿ ಆಚರಿಸುವ ಒಂದು ಧಾರ್ಮಿಕ ವಿಧಿ.
ಪುಟಾಣಿ ಪಾರ್ಟಿ ರಾಮಚಂದ್ರರ ಎರಡನೆ ಚಿತ್ರ. ಕಡಿಮೆ ವೆಚ್ಚದಲ್ಲಿ ತಯಾರಾದ ಈಚಿತ್ರ ಉತ್ತಮ ಮಕ್ಕಳ ಚಿತ್ರವೆಂದು ರಾಷ್ಟ್ರ ಪ್ರಶಸ್ತಿ ಪಡೆಯಿತು. ಕೈರೋದಲ್ಲಿ ನಡೆದ ೨೦ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ. ಇಂಥ ಚಿತ್ರವನ್ನು ಮಕ್ಕಳದಿನಾಚರಣೆಯಂದು ತಮ್ಮ ತಾಯ್ನಾಡಿನ ಬಂಧುಗಳು ನೋಡಿ ಆನಂಧಿಸಲಿ; ಪ್ರೋತ್ಸಾಹಿಸಲಿ ಎಂಬ ಉದ್ದೇಶದಿಂದ ಅವರು ಕನ್ನಡದ ಟಿವಿ ಚಾನಲ್ ಗಳನ್ನು ಸಂಪರ್ಕಿಸಿದ್ದರು. ಮಾಧ್ಯಮದ ಗೆಳೆಯರ ನೆರವನ್ನು ಕೋರಿದ್ದರು ಯಾವುದೂ ಫಲ ನೀಡಲಿಲ್ಲ.

ರಾಮಚಂದ್ರರಿಗೆ ಗೊತ್ತಿಲ್ಲದಿರಬಹುದು ಸುದ್ದಿ ಚಾನಲ್ ಗಳು ರಾಜಕಾರಣಿಗಳ ಮಂಗಾಟವನ್ನು ಕವರ್ ಮಾಡುವುದರಲ್ಲಿ ಬಿಜಿ. ಮನೋರಂಜನಾ ಚಾನಲ್ ಗಳು ಟಿಅರ್ ಪಿ ಮೇಲಾಟದಲ್ಲಿ ರಿಯಾಲಿಟಿ ಶೋಗಳ ಹಿಂದೆ ಬಿದ್ದಿವೆ. ಸಂಬಂಧಪಟ್ಟವರು ಮನಸ್ಸು ಮಾಡಿದ್ದರೆ ಒಂದೂಕಾಲು ಘಂಟೆಯ ಈ ಚಿತ್ರವನ್ನು ಯಾರು ಬೇಕಾದರೂ ಪ್ರಸಾರ ಮಾಡಬಹುದಿತ್ತು. ಥಿಯೇಟರ್ ಗಳಂತೂ ಪ್ರಯೋಗಾತ್ಮ ಚಿತ್ರಗಳಿಂದ ಮಾರು ದೂರ.

ಇಂದು ಪುಟಾಣಿ ಪಾರ್ಟಿ ಲೋಕಸಭಾ ಚಾನಲ್ ನಲ್ಲಿ ಪ್ರಸಾರದ ಭಾಗ್ಯ ಕಂಡಿತು.ಈ ಹಿಂದೆ ಸಾಂಗತ್ಯದ ಗೆಳೆಯರ ಪ್ರಯತ್ನದಿಂದ ಕೆಲವು ಜನ ಪುಟಾಣಿ ಪಾರ್ಟಿಯನ್ನು ನೋಡಿದ್ದರು. ಎಲ್ಲಾ ಬಾಗಿಲುಗಳು ಮುಚ್ಚಿದಾಗಲೂ ಯಾವುದೋ ಒಂದು ಬಾಗಿಲು ನಮಗಾಗಿ ತೆರೆದಿರುತ್ತದೆ.ಅದು ಪುಟಾಣಿ ಪಾರ್ಟಿಯ ಆಶಯವೂ ಹೌದು.

Thursday, November 11, 2010

ಜಯಮಾಲಳಿಗೇಕೆ ಅಯ್ಯಪ್ಪನ ಮೋಹ?




ನಾಲ್ಕು ವರ್ಷಗಳ ಹಿಂದೆ ಅಂದರೆ ೨೦೦೬ರ ಆಗಸ್ಟ್೫ರಂದು ನಟಿ ಜಯಮಾಲಾ ಅವರು ತಾನು ತನ್ನ ೨೭ನೇ ವಯಸ್ಸಿನಲ್ಲಿ ಶಬರಿಮಲೆಯ ಅಯ್ಯಪ್ಪನ ದರ್ಶನ ಪಡೆದು ಆತನ ಪಾದಗಳನ್ನು ಸ್ಪರ್ಶಿಸಿದ್ದೇನೆ ಎಂದು ಮಾಧ್ಯಮಗಳೆದುರು ಹೇಳಿಕೊಂಡರು. ಅನಾರೋಗ್ಯಪೀಡಿತರಾದ ತಮ್ಮ ಪತಿಯ ಶ್ರೆಯೋಭಿಲಾಷೆಗಾಗಿ ಅವರು ಈ ಯಾತ್ರೆ ಕೈಗೊಂಡಿದ್ದರು.

ಅವರ ಹೇಳಿಕೆ ದೇಶಾದಾದ್ಯಂತ ಸಂಚಲನವನ್ನುಂಟು ಮಾಡಿತು. ಧಾರ್ಮಿಕ ಮನೋಭಾವದ ಜನರು ಛೇ ಆಕೆ ಹಾಗೆ ಮಾಡಬಾರದಿತ್ತು ಎಂದು ನೊಂದುಕೊಂಡರು.
ಜಯಮಾಲಾ ಹೇಳಿಕೆ ನೀಡಿದ ಬೆನ್ನಲ್ಲೆ ಇನ್ನೊಬ್ಬ ನಟಿ ಗಿರಿಜಾ ಲೋಕೆಶ್ ಕೂಡಾ ತಾವು ಅಯ್ಯಪ್ಪನ ದರ್ಶನ ಪಡೆದಿರುವುದಾಗಿ ಹೇಳಿಕೊಂಡರು.
ಕಾಕತಾಳಿಯವೆಂದರೆ ಇಬ್ಬರೂ ಒಂದೇ ವರ್ಷ ಅಯ್ಯಪ್ಪನ ದರ್ಶನ ಪಡೆದಿರುವುದಾಗಿ ಹೇಳಿಕೊಂಡಿದ್ದರು. ಅದು ೧೯೮೭ರಲ್ಲಿ.

ಅವತ್ತಿನ ಜಯಮಾಲರ ಹೇಳಿಕೆ ಈಗ ನಾಲ್ಕು ವರ್ಷಗಳ ನಂತರ ಮತ್ತೆ ಮರುಜೀವ ಪಡೆದುಕೊಂಡಿದೆ. ಆಕೆಯ ಮೇಲೆ ದೋಷಾರೋಪಣಾ ಪಟ್ಟಿ ಸಲ್ಲಿಸಲು ಕೇರಳ ಪೋಲಿಸರು ಮುಂದಾಗಿದ್ದಾರೆ. ಭಾರತೀಯ ದಂಡ ಸಂಹಿತೆಯ ೨೯೫ ಎ [ಇದು ಉದ್ದೇಶಪೂರ್ವಕವಾಗಿ ತಪ್ಪು ಮಾಡುವುದನ್ನು ವಿವರಿಸುತ್ತದೆ.] ಕಲಮಿನಡಿ ದೋಷರೋಪಣಾ ಪಟ್ಟಿ ಸಲ್ಲಿಸಲು ನಿರ್ಧರಿಸಲಾಗಿದೆ.

ಜಯಮಾಲಾಗೆ ಇದೆಲ್ಲಾ ಬೇಕಿತ್ತೇ?

ಜಯಮಾಲಾ ತುಳುನಾಡಿನ ಹೆಣ್ಣುಮಗಳು. ಅದು ಮಾತೃಪ್ರಧಾನ ಕುಟುಂಬ ವ್ಯವಸ್ಥೆ ಒಪ್ಪಿಕೊಂಡಿರುವ ನಾಡು. ಇಂದಿಗೂ ಅಲ್ಲಿನ ಮಹಿಳೆಯರು ಸ್ವಾಭಿಮಾನಿಗಳೂ, ಛಲವಂತರೂ, ಧೈರ್ಯಶಾಲಿಗಳೂ, ಆಧುನಿಕ ಮನೋಧರ್ಮದವರೂ ಆಗಿದ್ದಾರೆ. ನಿಜವಾದ ಅರ್ಥದಲ್ಲಿ ಅವರು ಸ್ತ್ರೀವಾದಿಗಳು. ಆದರೂ ಧಾರ್ಮಿಕ ವಿಧಿವಿಧಾನಗಳಲ್ಲಿ, ಆಚರಣೆಯಲ್ಲಿ ಅವರನ್ನು ಅಲ್ಲಿನ ಪುರುಷ ಸಮಾಜ ತಮ್ಮ ಸರಿಸಮಾನರಂತೆ ಕಾಣುವುದಿಲ್ಲ.

ಕೇರಳದ ಕಾಸರಗೋಡು ಸೇರಿದಂತೆ ಅವಿಭಜಿತ ದಕ್ಷಿಣಕನ್ನಡವನ್ನು ತುಳುನಾಡೆಂದು ಕರೆಯಲಾಗುತ್ತದೆ. ಇಲ್ಲಿ ದೇವರಿಗಿಂತಲೂ ದೈವಗಳು ಹೆಚ್ಚು ಪ್ರಭಾವಶಾಲಿ. ದೈವಗಳೆಂದರೆ ಭೂತಗಳು. ಹಿಂದೆ ಇದೇ ನೆಲದಲ್ಲಿ ಬದುಕಿ ಬಾಳಿದ್ದ ವ್ಯಕ್ತಿಗಳು ಸಹವ್ಯಕ್ತಿಗಳ ಕುತಂತ್ರದಿಂದಾಗಿ ದುರಂತಮರಣಕ್ಕಿಡಾಗಿ ಕಾಲಾಂತರದಲ್ಲಿ ದೈವಗಳಾಗಿ ಜನ- ಜಾನುವಾರುಗಳನ್ನು ರಕ್ಷಿಸುವ ರಕ್ಷಕ ದೈವಗಳಾಗಿ ಪೂಜನೀಯರಾಗುತ್ತಾರೆ.

ಇಂತಹ ದೈವಗಳಿರುವ ಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶವಿಲ್ಲ.ನಮಗೂ ಅಲ್ಲಿಗೆ ಪ್ರವೇಶ ಬೇಕು ಎಂದು ತುಳುನಾಡಿನ ಯಾವ ಮಹಿಳೆಯೂ ಧ್ವನಿಯೆತ್ತಿದ ಉದಾಹರಣೆ ನನಗೆ ಗೊತ್ತಿಲ್ಲ.


ಇಂದಿಗೂ ಧರ್ಮಸ್ಥಳದಲ್ಲಿರುವ ಅಣ್ಣಪ್ಪ ಪಂಜುರ್ಲಿಯ ಬೆಟ್ಟಕ್ಕೆ ಮಹಿಳೆಯರಿಗೆ ಪ್ರವೇಶವಿಲ್ಲ. ತೀರ ಇತ್ತೀಚಿನವರೆಗೂ ಕುಕ್ಕೆಸುಬ್ರಹ್ಮಣ್ಯದಲ್ಲಿರುವ ಕುಮಾರಪರ್ವತವನ್ನು ಮಹಿಳೆಯರು ಏರುವಂತಿರಲಿಲ್ಲ. ಈಗ ಮಹಿಳೆಯರು ಅಲ್ಲಿಗೆ ಟ್ರೆಕ್ಕಿಂಗ್ ಬರುತ್ತಾರೆ.

ಇಂತಹ ತುಳುನಾಡಿನ ಹೆಣ್ಣುಮಗಳು ಜಯಮಾಲಾ, ಹರಿಹರರ ಸಂಯೋಗದಿಂದ ಜನಿಸಿದ ಸ್ತೀ ದ್ವೇಷಿಯಾದ ಅಯ್ಯಪ್ಪನ ಪಾದವನ್ನು ಟಚ್ ಮಾಡಲು ಯಾಕಾದರೂ ಹೋದರೋ! ಹಾಗೊಂದು ವೇಳೆ ಪ್ರಾರ್ಥಿಸಲೇಬೇಕೆಂದಿದ್ದರೆ ಕರಾವಳಿಗೇ ವಿಶಿಷ್ಟ ದೇವರಾದ ಅವನಪ್ಪ ಮಹಾಲಿಂಗೇಶ್ವರನಿರಲಿಲ್ಲವೇ? ಸರ್ವಶಕ್ತೆಯಾದ ಭಗವತಿಯಿರಲಿಲ್ಲವೇ?

ದೈವ ನಂಬಿಕೆ ಎನ್ನುವುದು ತೀರಾ ವೈಯಕ್ತಿಕವಾದುದು. ಅನ್ಯಥಾ ಶರಣಂ ನಾಸ್ತಿ’ ಎಂದು ಮೊರೆಯಿಟ್ಟದ್ದನ್ನು ಜಗಜ್ಜಾಹೀರುಗೊಳಿಸಬಾರದು.

ಕಳೆದ ವಾರ ನಮ್ಮ ರಿಯಾಲಿಟಿ ಶೋ ಒಂದರ ಶೂಟಿಂಗ್ ಗಾಗಿ ಉಳ್ಳಾಲ್ತಿ ಭೂತದ ಸ್ಥಾನಕ್ಕೆ ನಾನು ಹೋಗಿದ್ದೆ. ನಮ್ಮ ಕ್ಯಾಮರಮ್ಯಾನ್ ಗೆ ನಮಗೆ ಎಂತಹ ಶಾಟ್ಸ್ ಬೇಕೆಂದು ಸೂಚನೆ ಕೊಟ್ಟು ನಾನು ದೂರದಲ್ಲಿ ನಿಂತಿದ್ದೆ. ಆದರೂ ಉತ್ಸಾಹ, ಕುತೂಹಲ. ’ನಾನಲ್ಲಿಗೆ ಬರಬಹುದೇ’ ಎಂದು ಕೇಳಿದೆ. ’ನಮ್ಮ ಪೂಜಾರಿಯವರು ಮಹಿಳೆಯರೂ ಇಲ್ಲಿಗೆ ಬರಬಹುದು ಎಂದಿದ್ದಾರೆ’ ಎಂದರು.ನಾನು ದೈರ್ಯದಿಂದ ಮುಂದಡಿಯಿಟ್ಟೆ. ಆದರೆ ಶೂಟಿಂಗ್ ಮುಗಿಸಿ ಬರುತ್ತಿರುವಾಗ ಮಧ್ಯರಾತ್ರಿ, ಕಾಡಿನ ಮದ್ಯೆ ನಮ್ಮ ಕಾರು ಕೆಟ್ಟು ನಿಂತಿತು. ಹೇಗೋ ವಿಷಯ ತಿಳಿದ ಉಳ್ಳಾಲ್ತಿಯ ಪೂಜಾರಿ ಪೋನ್ ಮಾಡಿ ’ನಮ್ಮ ದೈವಕ್ಕೆ ನಿಮ್ಮಿಂದ ಎನೋ ಸೇವೆ ಆಗಬೇಕಾಗಿದೆ.ಒಂದು ಹರಕೆ ಹೇಳಿಕೊಳ್ಳಿ’ಎಂದರು. ಆದರೂ ಎರಡು ದಿನ ನಾವು ಅಲ್ಲಿಯೇ ಇರಬೇಕಾಯಿತು. ಅದೊಂದು ರೋಚಕ ಅನುಭವ .ಅದರ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ.

ಅಹಂಕಾರಕ್ಕೆ ಉದಾಸೀನ ಮದ್ದಾಗಬೇಕು ಎಂಬುದು ಹಿಂದಿನಿಂದಲೂ ಬಂದ ನಾಣ್ಡುಡಿ. ನಾವು ಅವರಿಗೆ ಬೇಡವಾದರೆ ಅವರೂ ನಮಗೆ ಬೇಡ. ಅಷ್ಟೇ.ಅಯ್ಯಪ್ಪನ ವಿಷಯಕ್ಕೂ ಇದು ಅನ್ವಯಿಸುತ್ತದೆ.