Thursday, July 14, 2011

ತುಳುನಾಡಿನಲ್ಲಿದೆ, ಅನಂತಪದ್ಮನಾಭನ ಮೂಲ ನೆಲೆ

ಗರ್ಭ ಗುಡಿಯಲ್ಲಿರುವ ಸಸ್ಯಜನ್ಯ ಬಣ್ಣಗಳಿಂದ ಬಿಡಿಸಿದ ವರ್ಣಚಿತ್ರ
ಅನಂತಪುರದ ಅನಂತಪದ್ಮನಾಭ ಕ್ಷೇತ್ರ
ಸರ್ಪ ಕೋಟೆ
ವಿಗ್ರಹದ ಅನಾಟಮಿ-ಪೀಠ ಪ್ರತಿಷ್ಟಾಪನೆ
ಶ್ರೀದೇವಿ ಭೂದೇವಿಯರೊಡನೆ ಕಡುಶರ್ಕರ ಪಾಕದಲ್ಲಿ ರಚನೆಯಾಗುತ್ತಿರುವ ಅನಂತಪದ್ಮನಾಭ




ತಿರುವನಂತಪುರದ ಅನಂತ ಪದ್ಮನಾಭ ಈಗ ಕುಬೇರನಾಗಿದ್ದಾನೆ. ಅವನ ಭಂಡಾರದಲ್ಲಿ ಮೊಗೆದಷ್ಟು ಚಿನ್ನ ಸಿಗುತ್ತಿದೆ. ಅವನ ಪಾದಮೂಲದಲ್ಲಿ ಸಿಕ್ಕಿದ ಚಿನ್ನ ಕರ್ನಾಟಕದ ವಾರ್ಷಿಕ ಬಜೆಟ್ ಅನ್ನು ಮೀರಿ ಮುಂದೆ ಸಾಗುತ್ತಿದೆ. ತಿರುಪತಿ ತಿಮ್ಮಪ್ಪನಿಗಿಂತ ಮೂರುಪಟ್ಟು ಶ್ರೀಮಂತನೀಗ ಅನಂತಪದ್ಮನಾಭ. ಆತನೀಗ ಲಕ್ಷ ಕೋಟಿ ರೂಪಾಯಿಗಳ ಸಂಪತ್ತಿಗೆ ಒಡೆಯ.


ಆದರೆ ಆತನ ಮೂಲಸ್ಥಾನವಾದ ಅನಂತಪುರದಲ್ಲಿ ಆತ ಹೇಗಿದ್ದಾನೆ ಗೊತ್ತೇ?


ಐದು ವರ್ಷಗಳ ಹಿಂದೆ ಟೀವಿ ಕಾರ್ಯಕ್ರಮವೊಂದರ ಶೂಟಿಂಗ್ ಗಾಗಿ ನಾನು ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಅನಂತಪುರಕ್ಕೆ ಹೋಗಿದ್ದೆ. ನನ್ನನ್ನು ಅಲ್ಲಿಗೆ ಸೆಳೆದದ್ದು ಅನಂತಪದ್ಮನಾಭ ದೇವನಲ್ಲ. ದೇವಸ್ಥಾನದ ಕೊಳದಲ್ಲಿರುವ ಒಂದು ಅಪೂರ್ವವಾದ ಮೊಸಳೆ. ಬಬಿಯ ಎಂಬ ಹೆಸರಿನ ಮೊಸಳೆಗೆ ಅರುವತ್ತು ವರ್ಷವಾಗಿತ್ತು. ತನ್ನ ಸಾಧು ಸ್ವಭಾವದಿಂದಾಗಿ ಅಲ್ಲಿಗೆ ಬರುವ ಭಕ್ತರನ್ನು ಅದು ಆಕರ್ಷಿಸುತ್ತಿತ್ತು. ಜನ್ಮಜಾತವಾಗಿ ಕ್ರೂರವಾಗಿದ್ದ ಪ್ರಾಣಿಯೊಂದು ಅನಂತಪದ್ಮನಾಭನ ಸನ್ನಿಧಿಯಲ್ಲಿ ಸಾಧು ಪ್ರಾಣಿಯಾಗಿ ಆರ್ಚಕರ ಕೈಯಿಂದ ನೈವೇದ್ಯವನ್ನು ಸ್ವೀಕರಿಸುತ್ತದೆಯೆಂಬ ವದಂತಿಯೇ ನನ್ನನ್ನು ಅಲ್ಲಿಗೆ ಎಳೆದು ತಂದಿತು.


ಆದರೆ ಅನಂತಪದ್ಮನಾಭನ ಸನ್ನಿದಿಗೆ ಬಂದ ಮೇಲೆ ನನ್ನ ಇರಾದೆಯೇ ಬದಲಾಯಿತು. ಅನಂತಪದ್ಮನಾಭನ ಕಡುಶರ್ಕರ ಪಾಕದ ಮೂಲವಿಗ್ರಹ, ಆತನ ಗರ್ಭ ಗುಡಿಯಲ್ಲಿರುವ ಸಾವಿರಾರು ವರ್ಷಗಳ ಹಿಂದಿನ ಬಣ್ಣದ ಚಿತ್ರ ಚಿತ್ತಾರಗಳು, ದೇವಸ್ಥಾನದ ಸುತ್ತ ಇರುವ ಸರ್ಪಕೋಟೆ, ಗುಂಡಿ ಬಟ್ಟಲಿನಾಕಾರದ ಅಲ್ಲಿನ ಪರಿಸರ ಎಲ್ಲವೂ ನನ್ನನ್ನು ಸಂಪೂರ್ಣ ಆವರಿಸಿಕೊಂಡುಬಿಟ್ಟಿತು.


ಜನವಸತಿಯಿಂದ ಬಹು ದೂರದಲ್ಲಿರುವ, ವಾಹನ ಸೌಕರ್ಯವಿಲ್ಲದ, ಒಂದು ಪುಟ್ಟ ಅಂಗಡಿಯನ್ನು ಹೊರತುಪಡಿಸಿದರೆ ಇನ್ನೇನೂ ಅನುಕೂಲತೆಗಳಿಲ್ಲದ ಪ್ರಶಾಂತ ದೇಗುಲಕ್ಕೆ ನಾನು ಭೇಟಿ ಕೊಟ್ಟದ್ದು ನಟ್ಟ ಮಳೆಗಾಲದಲ್ಲಿ, ಅಂದರೆ ಜಡಿಮಳೆಯ ಜುಲೈ ತಿಂಗಳಲ್ಲಿ.ಮೊದಲ ನೋಟಕ್ಕೇ ಅದು ಪುರಾತನ ದೇವಾಲಯ ಅನ್ನಿಸಿತು. ಹಾಗಾಗಿ ಅದರ ಪುರಾಣ ಮತ್ತು ಇತಿಹಾಸದ ಬಗ್ಗೆ ವಿಚಾರಿಸಿಕೊಂಡೆ.


ಬಲ್ಲವರ ಪ್ರಕಾರ ಇಲ್ಲಿ ಬಹಳ ಹಿಂದೆ ಬಿಲ್ವಮಂಗಲ ಸ್ವಾಮಿಗಳೆಂಬ ಮಹಾತ್ಮರು ತಪಸ್ಸು ಮಾಡುತ್ತಿದ್ದರಂತೆ. ಮಹಾವಿಷ್ಣುವಿನ ಭಕ್ತರಾಗಿದ್ದ ಇವರು ಒಮ್ಮೆ ಪೂಜಾ ಕೈಂಕರ್ಯದಲ್ಲಿ ನಿರತರಾಗಿದ್ದ ಸಮಯದಲ್ಲಿ ಬಾಲಕನೊಬ್ಬ ಅವರ ಏಕಾಗ್ರತೆಗೆ ಅಡ್ಡಿ ತಂದನಂತೆ. ಆಗ ಮುನಿಗಳು ಅವನನ್ನು ಎಡದ ಕೈನಿಂದ ದೂಡಿಬಿಟ್ಟರಂತೆ. ಆಗ ಬಾಲಕ ಈಗ ದೇವಸ್ಥಾನದ ಈಶಾನ್ಯ ಭಾಗದಲ್ಲಿರುವ ಗುಹೆಯ ಹತ್ತಿರ ಬಿದ್ದ. ಹಾಗೆ ಬಿದ್ದ ಬಾಲಕ ಒಂದು ಪ್ರಕಾಶಮಾನವಾದ ಗೋಳವಾಗಿ ಗುಹೆಯನ್ನು ಪ್ರವೇಶಿಸಿದ. ಆಗ ಬಿಲ್ವಮಂಗಲ ಮಹರ್ಷಿಗಳಿಗೆ ಈತ ಸಾಮಾನ್ಯನಾದ ಬಾಲಕನಲ್ಲ, ತಾನು ಅರ್ಚಿಸುತ್ತದ್ದ ಮಹಾವಿಷ್ಣುವೇ ಇರಬೇಕೆಂದು ತಿಳಿದು ಅತನನ್ನು ಹಿಂಬಾಲಿಸುತ್ತಾ ಹೋದರರು. ಹಾಗೆ ಹೋಗುತ್ತಾ ಅನಂತನ ಕಾಡು ಎಂಬ ಪ್ರದೇಶವನ್ನು ತಲುಪುತ್ತಾರೆ. ಅದೇ ಇಂದಿನ ತಿರುವನಂತಪುರ. ಅಲ್ಲಿ ಪ್ರಕಾಶಗೋಳವು ಪದ್ಮನಾಭನಾಗಿ ಪ್ರತ್ಯಕ್ಷವಾಗುತ್ತದೆ. ಇದನ್ನು ಕಂಡು ಪಶ್ಚತ್ತಾಪದಿಂದ ಕ್ಷಮೆ ಯಾಚಿಸಿದ ಮುನಿಗಳಿಗೆ, ಇದರಲ್ಲಿ ನಿನ್ನದೇನೂ ತಪ್ಪಿಲ್ಲ ಎಂದು ಸಂತೈಸಿ ತನಗೆ ಆಯಾಸವಾಗಿದೆ ಹಾಗು ಹಸಿವಾಗಿದೆ ಎನ್ನಲು ಮುನಿಗಳು ಸಮೀಪದಲ್ಲೇ ಇದ್ದ ಮಾವಿನ ಮರದಿಂದ ಹಣ್ಣೊಂದನ್ನು ಕಿತ್ತು ತೆಂಗಿನ ಚಿಪ್ಪಿನಲ್ಲಿಟ್ಟು ಕೊಟ್ಟರಂತೆ. [ಇಂದಿಗೂ ತಿರುವನಂತಪುರದ ಅನಂತಪದ್ಮನಾಭನಿಗೆ ಚಿನ್ನದ ಗೆರಟೆಯಲ್ಲಿ ಮಾವಿನ ಹಣ್ಣನ್ನಿಟ್ಟು ನೈವೇದ್ಯ ಮಾಡುವ ಸಂಪ್ರದಾಯವಿದೆ] ಹಣ್ಣನ್ನು ತಿಂದ ಪದ್ಮನಾಭ, ತಾನು ಸ್ವಲ್ಪ ಶಯನ ಮಾಡುತ್ತೇನೆ ಎಂದು ಮಲಗಲು ಅಣಿಯಾದ. ಆಗ ಅಲ್ಲಿಗೆ ಬಂದ ಆದಿಶೇಷ ಆತನಿಗೆ ಹಾಸುಗೆಯಾದ. ಆದಿಶೇಷನ ಇನ್ನೊಂದು ಹೆಸರು ಅನಂತ. ಹಾಗಾಗಿ ಹಿಂದೆ ತುಳುನಾಡಾಗಿದ್ದ, ಇಂದಿನ ಕೇರಳ ರಾಜ್ಯದ ಉತ್ತರ ತುದಿಯಲ್ಲಿರುವ ಅನಂತಪುರದ ಅನಂತ ಪದ್ಮನಾಭ ಕೇರಳದ ದಕ್ಷಿಣತುದಿಯಲ್ಲಿರುವ ತಿರುವನಂತಪುರದಲ್ಲಿ ಅನಂತಶಯನ ಪದ್ಮನಾಭನಾದ. ಇದುವೇ ಮಹಾವಿಷ್ಣುವಿನ ಸುಪ್ರಸಿದ್ಧವಾದ ಯೋಗನಿದ್ರಾಭಂಗಿ. ಕಾಲಕ್ರಮೇಣಶಯನಲೋಪವಾಗಿ ಅನಂತಪದ್ಮನಾಭನಾದ. ಬಿಲ್ವಮಂಗಲ ಮುನಿಗಳು ಇಲ್ಲಿ ದಿವಾಕರ ಮುನಿಗಳಾದರು. ಅವರ ಮೂರ್ತಿಯೂ ದೇವಸ್ಥಾನದ ಅವರಣದಲ್ಲಿದೆ.


ಮಂಗಳೂರಿನಿಂದ ಅನಂತಪುರಕ್ಕೆ ಸುಮಾರು ನಲ್ವತ್ತು ಕಿ.ಮೀ ಅಂತರವಿದೆ. ಕರ್ನಾಟಕ-ಕೇರಳ ಗಡಿಯಿಂದ ಸುಮಾರು ಇಪ್ಪತ್ತು ಕಿ.ಮೀ. ಒಳಗಡೆ ಹೋಗಬೇಕು. ಆದರೆ ಅನಂತಪುರ ಮತ್ತು ತಿರುವನಂತಪುರಗಳ ನಡುವೆ ಏಳುನೂರು ಕಿ.ಮೀ.ಗಳ ಅಂತರವಿದೆ.ಬಿಲ್ವ ಮಂಗಲ ಮುನಿಗಳು ಅನಂತಪದ್ಮನಾಭನನ್ನು ಹಿಂಬಾಲಿಸಿದ ಗುಹೆಯನ್ನು ಈಗ ಕಬ್ಬಿಣದ ಸರಳುಗಳಿಂದ ಮುಚ್ಚಲಾಗಿದೆ. ಈಗಲೂ ಸ್ವಲ್ಪ ದೂರದವರೆಗೆ ಗುಹೆಯಲ್ಲಿ ಸಾಗಬಹುದಾಗಿದೆ. ಮುಂದೆ ಹೋದಂತೆಲ್ಲಾ ದಾರಿ ಕಿರಿದಾಗುತ್ತಾ ಹೋಗಿ ತೆವಳಿಕೊಂಡು ಹೋಗಬೇಕಾಗುತ್ತಂತೆ. ಅನಂತಪುರದಿಂದ ತಿರುವನಂತಪುರಕ್ಕೆ ಪದ್ಮನಾಭ ಹೋದನೆನ್ನಲಾದ ಗುಹೆಯನ್ನು ನಾವು ನೋಡಬಹುದಾಗಿದೆ. ಆದರೆ ಅನಂತಪುರದಿಂದ ಬಂದನೆನ್ನಲಾದ ಗುಹೆಯನ್ನುತಿರುವನಂತಪುರದಲ್ಲಿ ಕಂಡವರಿಲ್ಲ. ಅಂದರೆ ಈಗ ತೆರೆಯದೆ ಉಳಿದಿರುವ ಬಿ ನೆಲಮಾಳಿಗೆಯಲ್ಲಿ ಸುರಂಗಮಾರ್ಗವಿರಬಹುದೇ? ಅನುಮಾನಕ್ಕೆ ಆಸ್ಪದವಿದೆ.


ತಿರುವನಂತಪುರದಲ್ಲಿ ಅದಿಶೇಷನ ಮೇಲೆ ಮಲಗಿ ಅನಂತಶಯನನಾದ ಮಹಾವಿಷ್ಣು ಅನಂತಪುರದಲ್ಲಿ ಅದಿಶೇಷನ ಮೇಲೆ ಕುಳಿತ ಭಂಗಿಯಲ್ಲಿರುತ್ತಾನೆ. ಆದರೆ ಎರಡೂ ದೇವಸ್ಥಾನದ ಗರ್ಭಗುಡಿಯಲ್ಲಿರುವ ಮೂರ್ತಿಗಳು ಸಾಮಾನ್ಯವಾದುದಲ್ಲ. ಅವು ಕಡುಶರ್ಕರ ಪಾಕದಿಂದಾದ ರಚನೆಗಳು.


ಏನಿದು ಕಡುಶರ್ಕರ ಪಾಕ?


ವಿಗ್ರಹ ರಚನೆಯಲ್ಲಿ ಒಂಬತ್ತು ವಿಧಾನಗಳಿವೆ. ಅದರಲ್ಲಿ ಬಹು ಕ್ಲಿಷ್ಟಕರವಾದ ವಿಧಾನವೇ ಕಡುಶರ್ಕರ ಪಾಕ ವಿಧಾನ. ಇದು ಅತೀ ಪಾಚೀನವಾದ ಗ್ರಂಥಗಳಲ್ಲಿ ಉಲ್ಲೇಖವಾದ ವಿಗ್ರಹ ನಿರ್ಮಾಣ ವಿಧಾನ. ಪ್ರಸ್ತುತ ನಮ್ಮ ದೇಶದಲ್ಲಿ, ಬಹುಶಃ ವಿಶ್ವದಲ್ಲೇ ಕೇವಲ ಮೂರು ಕಡೆ ಮಾತ್ರ ರೀತಿಯ ವಿಗ್ರಹಗಳಿವೆ. ಒಂದು ಅನಂತಪುರದಲ್ಲಿರುವ ಅನಂತಪದ್ಮನಾಭ. ಇನ್ನೊಂದು ತಿರುವನಂತಪುರದಲ್ಲಿರುವ ಅನಂತಪದ್ಮನಾಭ. ಮತ್ತೊಂದು ಇದೇ ರಾಜ್ಯದ ಕಣ್ಣೂರು ಸಮೀಪದಲ್ಲಿರುವ ಮಾಡಾಯಿಕಾವು ಮಹಾಕಾಳಿಯ ವಿಗ್ರಹ. ಇದೇ ಭಗವತಿ ಕ್ಷೇತ್ರದಲ್ಲಿ ನಮ್ಮ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪನವರು ಶತ್ರು ಸಂಹಾರ ಯಾಗ ಮಾಡಿದ್ದು. ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾದಾಗಲೆಲ್ಲ ಅವರು ಅಮ್ಮನ ಮೊರೆ ಹೋಗುತ್ತಾರೆ.


ಕಡುಶರ್ಕರಾ ಪಾಕವಿಧಾನದ ಮೊದಲ ಹಂತ ಎಂದರೆ ಪೀಠ ಪ್ರತಿಷ್ಟಾಪನೆ. ಎರಡನೆಯದು ನರ ಸಂಕಲ್ಪ. ಮೂರನೆಯದು ಮಜ್ಜೆಸಂಕಲ್ಪ. ನಾಲ್ಕನೆಯದು ಮಾಂಸ ಸಂಕಲ್ಪ. ಇದೆಲ್ಲಾ ಆದ ಮೇಲೆ ಅದಕ್ಕೆ ೨೩ ರೀತಿಯ ಲೇಪನಗಳನ್ನು ಒಂದು ತಿಂಗಳ ಅಂತರದಲ್ಲಿ ಲೇಪಿಸುತ್ತಾ ಹೋಗುತ್ತಾರೆ. ಕೊನೆಯಲ್ಲಿ ೨೪ನೇ ಲೇಪನವಾಗಿ ಬೆಳ್ಳಿ ಮತ್ತು ಚಿನ್ನದ ಲೇಪನ ಮಾಡಿ ಅನಂತರದಲ್ಲಿ ಪ್ರಾಣ ಪ್ರತಿಷ್ಟೆ ಮಾಡುತ್ತಾರೆ.


ಮನುಷ್ಯನ ದೇಹ ರಚನೆ ಯಾವ ರೀತಿಯಲ್ಲಿದೆಯೋ ಅದೇ ರೀತಿಯಾಗಿ ವಿಗ್ರಹವೂ ರಚನೆಯಾಗುತ್ತದೆ. ಮೊಟ್ಟಮೊದಲನೆಯದಾಗಿ ಪೀಠ ಪ್ರತಿಷ್ಠಾಪನೆಗಾಗಿ ಕಾಚಿಮರದ [ಕದಿರಮರ] ತಿರುಳನ್ನು ತೆಗೆದು ಅಸ್ಥಿಪಂಜರ ತಯಾರಿಸುತ್ತಾರೆ. ಅದಕ್ಕೆ ಮನುಷ್ಯ ಶರೀರದಲ್ಲಿರುವಂತೆ ೨೦೬ ಎಲುಬುಗಳ ಜೋಡಣೆ ಮಾಡಿ ಪೀಠದಲ್ಲಿ ಕುಳ್ಳಿರಿಸುವುದೇ ಪೀಠ ಪ್ರತಿಷ್ಟಾಪನೆ.


ಅನಂತರ ಹಣ್ಣು ತೆಂಗಿನಕಾಯಿಯ ಒಂದೊಂದು ನಾರನ್ನೂ ಶುದ್ದೀಕರಿಸಿ ನಾಜೂಕಾಗಿ ಹಣೆದು ಸುಮಾರು ಮುನ್ನೂರು ಮೀಟರ್ ಉದ್ದದ ಹುರಿಹಗ್ಗವನ್ನು ತಯಾರಿಸಿ ಸುಷುಮ್ನನಾಡಿಯಿಂದ ಮಣಿಶಿರದತನಕ ಅಸ್ಥಿಪಂಜರದ ಮೇಲೆ ಸುತ್ತುತ್ತಾರೆ. ಇದು ನರ ಸಂಕಲ್ಪ.


ಇದಾದ ನಂತರದ್ದು ಮಜ್ಜೆ ಸಂಕಲ್ಪ. ಇದಕ್ಕಾಗಿ ತ್ರಿವೇಣಿ ಸಂಗಮದಿಂದ ತಂದಂಥ ಬಿಳಿಕಲ್ಲು, ಕೆಂಪುಕಲ್ಲು, ಕಪ್ಪುಕಲ್ಲುಗಳನ್ನು ಪುಡಿಮಾಡಿ ,ಅರೆದು, ಪ್ರಕೃತಿಯಲ್ಲಿ ಸಿಗುವ ಮೇಣದೊಡನೆ ಕಾಯಿಸಿ ಸುಗಂಧಬರಿತವಾದ ಕೆಂಪಾದ ಪಾಕವೊಂದನ್ನು ಸಿದ್ದ ಪಡಿಸುತ್ತಾರೆ. ಅದು ಬಿಸಿಬಿಸಿಯಾಗಿರುವಾಗಲೇ ನರಸಂಕಲ್ಪವಾದ ಅಸ್ಥಿಪಂಜರದ ಮೇಲೆ ಲೇಪಿಸಿದಾಗ ಅದು ತಕ್ಷಣವೇ ಗಟ್ಟಿಯಾಗಿ ಅಂಟಿಕೊಳ್ಳುತ್ತದೆ. ಇದು ಪ್ರಾರಂಭದ ಕೋಟಿಂಗ್.


ಅನಂತರದ್ದು ಮಾಂಸ ಸಂಕಲ್ಪ. ನಮ್ಮ ಪರಿಸರದಲ್ಲಿ ಸಿಗುವ ಅರುವತ್ತನಾಲ್ಕು ಆಯುರ್ವೇದದ ಗುಣಗಳಿರುವ ಸಸ್ಯಜನ್ಯ, ಪ್ರಾಣಿಜನ್ಯ ವಸ್ತುಗಳನ್ನು ನಿಶ್ಚಿತ ಪ್ರಮಾಣದಲ್ಲಿ ಅರೆದು,ಪುಡಿಮಾಡಿ, ಪಾಕಬರಿಸಿ ಒಂದೊಂದೇ ಕೋಟಿಂಗ್ ಕೊಡುತ್ತಾ ಹೋಗುತ್ತಾರೆ. ಒಂದೊಂದು ತಿಂಗಳ ಅಂತರದಲ್ಲಿ ಇಂತಹ ಇಪ್ಪತ್ತಮೂರು ಲೇಪನಗಳನ್ನು ಬಳಿಯಲಾಗುತ್ತದೆ. ಪ್ರತಿ ಲೇಪನಕ್ಕೂ ಅದರದೇ ಆದ ಬಣ್ಣ, ಪರಿಮಳಗಳಿರುತ್ತದೆ.


ಕೊನೆಯ ಹಾಗೂ ಇಪ್ಪತ್ತನಾಲ್ಕನೆಯ ಲೇಪನವೇ ಚಿನ್ನ ಮತ್ತು ಬೆಳ್ಳಿಯ ಲೇಪನ.


ದೇವಸ್ಥಾನಕ್ಕೆ ಬರುವ ಭಕ್ತರು ಸಾಮಾನ್ಯವಾಗಿ ದೇವರಲ್ಲಿ ಕೇಳಿಕೊಳ್ಳ್ವುದು ಆರೋಗ್ಯ ಮತ್ತುಐಶ್ವರ್ಯ. ಅವೆರಡೂ ಅನಂತಪದ್ಮನಾಭನ ದೇಹರಚನೆಯಲ್ಲೇ ಇದೆ. ಅದನ್ನು ಆತ ತನ್ನ ಭಕ್ತರಿಗೆ ಧಾರಾಳವಾಗಿ ಹಂಚುತ್ತಾನೆ ಎಂದುಇಲ್ಲಿಗೆಬರುತ್ತಿರುವ ಭಕ್ತರು ನಂಬಿಕೊಂಡಿದ್ದಾರೆ

ವಿಗ್ರಹವಲ್ಲದೆ ಇನ್ನೂ ಹಲವಾರು ವಿಷಯಗಳಲ್ಲೂ ಸಾಮ್ಯತೆಯಿದೆ.ಎರಡೂ ಕಡೆಯಲ್ಲಿಯೂ ಅನಂತಪದ್ಮನಾಭನ ಅರ್ಚಕರು ತುಳುನಾಡು ಮೂಲದ ಶಿವಳ್ಳಿ ಬ್ರಾಹ್ಮಣರು. ಎರಡೂ ಕಡೆಯಲ್ಲಿಯೂ ಮೂಲ ವಿಗ್ರಹಕ್ಕೆ ಅಭಿಷೇಕವಿಲ್ಲ. ಬದಲಾಗಿ ಪುರಾತನವಾದ ಪಂಚಲೋಹದ ಅರ್ಚನ ಬಿಂಬ, ಅಭಿಷೇಕ ಬಿಂಬ, ಉತ್ಸವ ಬಿಂಬಗಳಿವೆ. ಮೂರು ಬಿಂಬಗಳನ್ನು ಮುಖಮಂಟಪದಲ್ಲಿಟ್ಟು ಅಭಿಷೇಕ ಮಾಡಿ ಮತ್ತೆ ಗರ್ಭಗುಡಿಯಲ್ಲಿಡುತ್ತಾರೆ.


ಗರ್ಭಗುಡಿಯಲ್ಲಿ ಪದ್ಮನಾಭನ ಜೊತೆ ಶ್ರೀದೇವಿ, ಭೂದೇವಿ, ಗರುಡ, ಹನುಮಂತ ಮತ್ತು ಎರಡು ನಾಗಕನ್ನಿಕೆಗಳ ವಿಗ್ರಹಗಳಿವೆ.


ಈ ದೇವಾಲಯ ೯ನೇ ಶತಮಾನದಲ್ಲಿ ನಿರ್ಮಾಣವಾಗಿರಬೇಕೆಂದು ಅಂದಾಜಿಸಲಾಗಿದೆ.ಅನಂತ ಪದ್ಮನಾಭನ ಗರ್ಭಗುಡಿ ತುಂಬಾ ವಿಶಿಷ್ಟವಾದುದು. ಅಲ್ಲಿಯ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾಗಿರುವ ಕರುಣಾಕರ ಅನಂತಪುರ ಹೇಳುವ ಪ್ರಕಾರ ಗರ್ಭಗುಡಿ ಸಾವಿರದ ಇನ್ನೂರು ವರ್ಷಗಳ ಹಳೆಯದು. ದೇವಸ್ಥಾನವನ್ನು ಹಲವು ಬಾರಿ ಜೀರ್ಣೋದ್ಧಾರ ಮಾಡಿದ್ದರೂ ಗರ್ಭಗುಡಿಯನ್ನು ಇದುವರೆಗೂ ಬದಲಾಯಿಸಿಲ್ಲ. ಅದಕ್ಕವರು ಗರ್ಭಗುಡಿಯ ಮೇಲ್ಛಾವಣಿಗೆ ಹಾಕಿದ ತ್ರಿಕೋನಾಕೃತಿಯ ಕಲ್ಲುಗಳನ್ನು ತೋರಿಸುತ್ತಾರೆ.


ಇದರ ಹೊರತಾಗಿಯೂ ದೇವಾಲಯದ ಪ್ರಾಚೀನತೆಯನ್ನು ಸಾರುವ ಇನ್ನೊಂದು ಕುರುಹು ಅನ್ನು ಗರ್ಭಗುಡಿಯ ಗೋಡೆಗಳಲ್ಲೇ ಕಾಣಬಹುದು. ಸಿಂಧು ನಾಗರೀಕತೆಯಲ್ಲಿ ಸಸ್ಯ ಜನ್ಯ ಬಣ್ಣಗಳನ್ನು ಉಪಯೋಗಿಸಿ ವರ್ಣಚಿತ್ರಗಳನ್ನು ರಚಿಸುತ್ತಿದ್ದರೆಂದು ನಾವು ಕೇಳಿದ್ದೇವೆ. ಅಜಂತ ಗುಹೆಗಳಲ್ಲಿಯೂ ವರ್ಣಚಿತ್ರಗಳಿವೆ. ಅಂಥ ಸುಂದರವಾದ ರಚನೆಗಳನ್ನು ನಾವಿಲ್ಲಿ ಕಾಣಬಹುದು. ಗರ್ಭಗುಡಿಯಲ್ಲಿರುವ ದೇವರು ಸಸ್ಯಜನ್ಯ ವಸ್ತುಗಳಿಂದ ಮಾಡಿರುವ ಕಡುಶರ್ಕರ ಪಾಕದ ವಿಗ್ರಹ. ತನ್ನ ಶರೀರದಲ್ಲೇ ಔಷಧ ಮತ್ತು ಚಿನ್ನ ಬೆಳ್ಳಿ ಹೊಂದಿದ್ದು ತನ್ನಲ್ಲಿಗೆ ಬರುವ ಭಕ್ತರಿಗೆ ಆಯುಸ್ಸು ಮತ್ತು ಐಶ್ವರ್ಯವನ್ನು ದಯ ಪಾಲಿಸುವ ದೇವನಾಗಿದ್ದಾನೆ ಅನಂತ ಪದ್ಮನಾಭ. ಇಂತವನ ಸನ್ನಿದಾನದಲ್ಲಿ ಸಸ್ಯಜನ್ಯವಾದ ಬಣ್ಣಗಳಿಂದಲೇ ಚಿತ್ರ ರಚನೆಯಾಗಿರಬಹುದೆಂದು ನಾವು ತಾರ್ಕಿಕವಾಗಿಯೂ ಚಿಂತಿಸಬಹುದು. ಇದು ನಿಜವೇ ಆಗಿದ್ದಲ್ಲಿ ಇದರ ಪ್ರಾಚೀನತೆಯನ್ನು ಕ್ರಿಸ್ತಪೂರ್ವದಂಚಿಗೆ ತಂದು ನಿಲ್ಲಿಸಬಹುದು

.

ವಿಗ್ರಹದ ಪಾವಿತ್ರ್ಯತೆಗೆ ಸೂಕ್ಮತೆಗೆ ಧಕ್ಕೆಯಾದರೆ ಅವಘಡಗಳು ಸಂಭವಿಸುತ್ತವೆ ಎಂಬುದನ್ನು ಅಲ್ಲಿನ ಭಕ್ತರು ನಂಬುತ್ತಾರೆ. ಹಾಗೆಯೇ ಅನಂತಪದ್ಮನಾಭ ಕಡುಶರ್ಕರ ಪಾಕದ ವಿಗ್ರಹದಲ್ಲದೆ ಬೇರೆ ವಿಗ್ರಹದಲ್ಲಿ ನೆಲೆಗೊಳ್ಳುವುದಿಲ್ಲ. ಅದಕ್ಕವರು ಉದಾಹರಣೆಯನ್ನು ಕೊಡುತ್ತಾರೆ; ಸಾವಿರದ ಇನ್ನೂರು ವರ್ಷಗಳ ಹಳೆಯದಾದ ಕಡುಶರ್ಕರ ಪಾಕದ ವಿಗ್ರಹ ಅಲ್ಲಲ್ಲಿ ಭಿನ್ನವಾದ ಕಾರಣ ಅದನ್ನು ಪುನಃ ತಯಾರಿಸಲು ತೀರ್ಮಾನಿಸಿ ಬದಲಿಗೆ ಪಂಚಲೋಹದ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು. ಆದರೆ ಅದರಿಂದ ಹಲವಾರು ದೋಷಗಳು ಕಂಡುಬಂದವು. ಅಷ್ಟ ಮಂಗಲ ಜ್ಯೋತಿಷ್ಯ ಪ್ರಶ್ನೆಯ ವಿಧಿ ವಿಧಾನದಲ್ಲಿ ದೇವ ಪ್ರಶ್ನೆಯನ್ನಿಟ್ಟಾಗ, ದೇವರು, ತನ್ನ ಹಳೆಯ ರೂಪವನ್ನು ಪ್ರತಿಷ್ಟಾಪನೆ ಮಾಡಿದರೆ ಮಾತ್ರ ತಾನಿಲ್ಲಿ ನೆಲೆಗೊಂಡು ಭಕ್ತರಿಗೆ ಅಭಯ ನೋಡುತ್ತೇನೆ ಎಂಬುದಾಗಿ ಗೋಚರಿಸಿದ ಕಾರಣ ಮತ್ತೆ ಹೊಸವಿಗ್ರಹದ ರಚನೆಯ ಪ್ರಕ್ರಿಯೆಗಳು ಆರಂಭಗೊಂಡವು. ಕೊಟ್ಟಾಯಂ ಜಿಲ್ಲೆಯ ವಿಶ್ವಕರ್ಮ ಶಿಲ್ಪಿಗಳ ಬಳಗ ಏಳು ವರ್ಷಗಳ ಕಾಲ ಶ್ರಮ ವಹಿಸಿ ವಿಗ್ರಹಗಳನ್ನು ರಚಿಸಿದೆ,


೧೯೭೬ರಿಂದಲೇ ಆರಂಭಗೊಂಡ ಗೋಪುರದ ನಿರ್ಮಾಣ ಕಾರ್ಯ ಎರಡು ವರ್ಶಗಳ ಹಿಂದಷ್ಟೇ ಮುಗಿದು ಕಡುಶರ್ಕರಪಾಕದ ಹೊಸ ಮೂರ್ತಿಗಳ ಪ್ರತಿಶ್ಟಾಪನೆ ಆಗಿದೆ. ಸ್ವತಃ ತಿರುವಾಂಕೂರಿನ ರಾಜಮನೆತನದ ಹಿರಿಯ ಉತ್ತರಾಧಿಕಾರಿ ಉತ್ತರಾಡಂ ತಿರುನಾಳ್ ಮಾರ್ತಾಂಡವರ್ಮ ಅವರು ಗೋಪುರ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದ್ದರು. ಇವರೀಗೀಗ ತೊಂಬತ್ತರ ಹರೆಯ. ಟಿ.ಪಿ ಸುಂದರರಾಜನ್ ಎಂಬವರು ತಿರುವನಂತಪುರದ ದೇವಸ್ಥಾನದ ಆಡಳಿತ ಪಾರದರ್ಶಕವಾಗಿರಬೇಕೆಂದು ಹೈಕೋರ್ಟ್ ಮೊರೆ ಹೋದಾಗ ಕೋರ್ಟ್ ದೇವಸ್ಥಾನದ ನಿರ್ವಹಣೆಯನ್ನು ಸರಕಾರ ತೆಗೆದುಕೊಳ್ಳಬೇಕೆಂದು ಆದೇಶ ನೀಡಿತ್ತು. ಅದನ್ನೇ ಈ ವಯೋವೃದ್ಧ ಮಾರ್ತಾಂಡವರ್ಮರು ಸುಪ್ರಿಂಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಅದರ ಪರಿಣಾಮವಾಗಿ ಸುಪ್ರಿಂ ಕೋರ್ಟ್ ತಜ್ನರ ಸಮಿತಿಯೊಂದನ್ನು ನೇಮಿಸಿ ನೆಲಮಾಳಿಗೆಯನ್ನು ತೆರೆದು ಅಪಾರ ಸಂಪತ್ತನ್ನು ಹೊರಜಗತ್ತಿನ ಮುಂದಿಡುತ್ತಿರುವುದು ಈಗ ಜಗತ್ತಿನಾದ್ಯಂತ ಸುದ್ದಿ ಮಾಡುತ್ತಿದೆ.


ಈ ಸುದ್ದಿಯ ಹಿನ್ನೆಲೆಯಲ್ಲಿ ಮತ್ತೆ ಅನಂತಪುರದೆಡೆ ನೋಡಿದರೆ ಅನಂತಪದ್ಮನಾಭನ ತವರು ನೆಲೆ ನಿಜವಾಗಿಯೂ ಬಡವಾಗಿದೆ. ಅದರೆ ಅದು ಒಂದು ಕಾಲದಲ್ಲಿ ಮಹಾಕ್ಷೇತ್ರವಾಗಿತ್ತೆಂದು ಅದರ ಕುರುಹುಗಳನ್ನು ನೋಡಿದರೆ ಗೊತ್ತಾಗುತ್ತದೆ. ಹಿಂದೆಯೇ ಹೇಳಿದಂತೆ ದೇವಸ್ಥ್ಹಾನದ ಪರಿಸರ ಅಗಲವಾದ ಗುಂಡಿ ಪಾತ್ರೆಯ ಆಕಾರದಲ್ಲಿದೆ.ತಳ ಭಾಗದಲ್ಲಿ ಕ್ಷೀರ ಸಮುದ್ರದ ಮಾದರಿಯ ವಿಶಾಲವಾದ ಕೊಳವಿದೆ. ಅದರ ಮಧ್ಯದಲ್ಲಿ ಅನಂತಪದ್ಮನಾಭ ಕುಳಿತಿದ್ದಾನೆ. ಸುತ್ತಲೂ ಗಟ್ಟಿಯಾದ ಕಪ್ಪಗಿನ ಸ್ಥಳಿಯವಾಗಿ ಮುರಕಲ್ಲು ಎಂದು ಕರೆಯಲ್ಪಡುವ ಗುಡ್ಡವಿದೆ. ಆ ಗುಡ್ಡದ ಮೇಲೆಯೇ ವಿಶಿಷ್ಟ ವಿನ್ಯಾಸದ ’ಸರ್ಪಕೋಟೆ’ಯೆಂಬ ಕೋಟೆಯಿದೆ. ಇಂತಹ ಕೋಟೆಗಳನ್ನು ಕೇರಳದ ಪ್ರಾಚೀನ ಮಹಾಕ್ಷೇತ್ರಗಳಲ್ಲಿ ಮಾತ್ರ ಕಾಣಬಹುದು. ಕ್ರೂರ ಸರ್ಪಗಳು ಇದನ್ನು ಹತ್ತಿ ಒಳಬಾರದಂತೆ ಅದನ್ನು ವಿನ್ಯಾಸ ಮಾಡಲಾಗಿದೆ. ಕೇರಳಮತ್ತು ದಕ್ಷಿಣಕನ್ನಡದ ಬಹುತೇಕ ಭಾಗಗಳು ದಟ್ಟ ಅರಣ್ಯದಿಂದ ಕೂಡಿದ್ದು ಹಾವು ಮತ್ತು ಇತರ ಕ್ರೂರ ಜಂತುಗಳು ಹಿಂದೆ ಇಲ್ಲಿ ಸಾಮಾನ್ಯವಾಗಿತ್ತು ಎಂಬುದನ್ನು ನಾವಿಲ್ಲಿ ಜ್ನಾಪಿಸಿಕೊಳ್ಳಬಹುದು

.

ಇದರ ಪ್ರಾಚೀನತೆಯನ್ನು ದೃಢಪಡಿಸುವ ಇನ್ನೊಂದು ಕುರುಹು ಕೂಡಾ ಇಲ್ಲಿದೆ. ದೇವಸ್ಥಾನವನ್ನು ಇಳಿದು ಪ್ರವೇಶಿಸುವ ದಾರಿಯಲ್ಲಿ ಬಲ ಭಾಗದಲ್ಲಿ ಒಂದು ಶಿಲಾಶಾಸನವಿದೆ. ಅದನ್ನು ಪೂರ್ತಿಯಾಗಿ ಇದುವರೆಗೂ ಯಾರಿಂದಲೂ ಓದಲಾಗಿಲ್ಲ. ಉಡುಪಿಯ ಇತಿಹಾಸತಜ್ನರಾದ ಗುರುರಾಜ ಭಟ್ಟರು ಇದನ್ನು ಓದಲು ಪ್ರಯತ್ನಿಸಿದ್ದಾರೆ. ಅವರ ಪ್ರಕಾರ ಇದು ಹಲವಾರು ಭಾಷೆಗಳ ಮತ್ತು ಲಿಪಿಗಳ ಮಿಶ್ರಣ. ತುಳುಲಿಪಿಯ ಕೆಲವು ಶಬ್ದಗಳನ್ನು ಅವರು ಗುರುತಿಸಿದ್ದರಂತೆ. ತುಳು ಭಾಷೆಗೆ ತಿಗಾಳಾರಿ ಎಂಬ ಲಿಪಿಯಿತ್ತೆಂದು ನಾವು ಭಾಷಾ ಚರಿತ್ರೆಯಲ್ಲಿ ಓದಿದ್ದೇವೆ.ಅದೊಂದು ರಹಸ್ಯ ಲಿಪಿಯೆಂಬ ವಾದವೂ ಇದೆ. ಬಹುಶಃ ಇದನ್ನು ಓದಲು ಸಾಧ್ಯವಾಗುತ್ತಿದ್ದರೆ ಅನಂತಪದ್ಮನಾಭನ ಇತಿಹಾಸದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಸಾಧ್ಯವಾಗುತ್ತಿತ್ತೇನೋ.


ದೇವಸ್ಥಾನದ ನೈಋತ್ಯ ದಿಕ್ಕಿನಲ್ಲಿ ಬಿಲ್ವ ಮಂಗಳ ಸ್ವಾಮಿಗಳು ಪ್ರಾರಂಭದಲ್ಲಿ ಪೂಜಿಸುತ್ತಿದ್ದ ಪಾರ್ಥಸಾರಥಿಯ ಮಂದಿರವಿದೆ. ಅಲ್ಲಿ ಪುರಾತನವಾದ ಪಾರ್ಥ ಸಾರಥಿಯ ವಿಗ್ರಹವಿದೆ. ಇನ್ನೊಂದು ಕುತೂಹಲದ ವಿಷಯವೆಂದರೆ ಇಲ್ಲಿಗೆ ಸುಮಾರು ಹದಿನೈದು ಕಿ.ಮೀ ದುರದಲ್ಲಿ ಮುಜುಂಗಾವು ಎಂಬ ಪುರಾಣಪ್ರಸಿದ್ದವಾದ ಕ್ಷೇತ್ರವಿದೆ. ಅಲ್ಲಿಯ ಒಡೆಯ ಪಾರ್ಥ ಸಾರಥಿ.


ತಿರುವನಂತಪುರದ ಅನಂತಪದ್ಮನಾಭನಿಗೆ ಇದು ಆದಿ ಎಂಬುದಕ್ಕೆ ಇನ್ನೂ ಒಂದು ಪುಷ್ಟಿಯಿದೆ.ಮಲೆಯಾಳದಲ್ಲಿ ತಿರು ಎನ್ನುವುದಕ್ಕೆ ಚಿಕ್ಕ, ಸಣ್ಣದು ಎಂಬ ಅರ್ಥವಿದೆ. ಓಣಂ ಅಲ್ಲಿನ ಬಹುದೊಡ್ಡ ಹಬ್ಬ. ಒಂದು ವೇಳೆ ಹಬ್ಬ ಆಚರಿಸುವುದಕ್ಕೆ ಸೂತಕ ಬಂದರೆ ಆಗ ಅಂತವರು ತಿರು ಓಣಂನಲ್ಲಿ ಹಬ್ಬ ಮಾಡುತ್ತಾರೆ. ಹಾಗೆಯೇ ’ತಿರು ಮಂತ್ರ’ ಎಂಬ ಪದ ಜನ ಮಾನಸದಲ್ಲಿ ಹಾಸುಹೊಕ್ಕಾಗಿದೆ. ಉದಾಹರಣೆಗೆ ’ಗುರುವಿಗೇ ತಿರುಮಂತ್ರ ಹಾಕುವವನು’ ಇಲ್ಲಿ ಮಂತ್ರ ಮೊದಲು ತಿರು ಮಂತ್ರ ಅದಕ್ಕೆ ಪ್ರತಿಯಾಗಿ ಬರುವಂಥದು, ಅನಂತರದ್ದು.


ತಿರುವನಂತಪುರದಲ್ಲಿ ಪದ್ಮನಾಭನಿಗೆ ರಾಜಾಶ್ರಯ ದೊರಕಿ ಆತನಿಗೆ ಉತ್ತರೋತ್ತರ ಶ್ರೇಯಸ್ಸಾಗಿರಬಹುದು.ಅದು ಪುಣ್ಯನದಿಗಳ ಉಗಮ ಸ್ಥಾನದಂತೆ. ವೈಭವ, ಆಡಂಬರ, ಆರಾಧನೆಗಳೆಲ್ಲಾ ಅನಂತರದಲ್ಲಿ ಲಬಿಸುವಂತಹದು.


ಅನಂತಪುರದ ಅನಂತಪದ್ಮನಾಭನ ಉಸ್ತುವಾರಿ ನೋಡಿಕೊಳ್ಳುತ್ತಿರುವುದು ಮಾಯಿಪ್ಪಾಡಿ ಅರಸು ಮನೆತನ. ಕುಂಬಳೆ ಸೀಮೆಯನ್ನು ಆಳಿದ ಅರಸು ಮನೆತನ ಅದು. ಉತ್ತರದಲ್ಲಿ ಮಂಜೇಶ್ವರದಿಂದ ದಕ್ಷಿಣದಲ್ಲಿ ಚಂದ್ರಗಿರಿಯ ತನಕ ಪಶ್ಚಿಮ ಕರಾವಳಿಯ ಮೊಗ್ರಾಲ್ ನಿಂದ ಪೂರ್ವದಲ್ಲಿ ಅಡೂರು ತನಕ ಅವರ ಸೀಮೆಯು ಹರಡಿತ್ತು. ಆ ಸೀಮೆಯ ವ್ಯಾಪ್ತಿಗೆ ಬರುವ ಮದೂರಿನ ಗಣಪತಿ, ಮುಜುಂಗಾವಿನ ಪಾರ್ಥಸಾರಥಿ, ಅನಂತಪುರದ ಅನಂತಪದ್ಮನಾಭ, ಮತ್ತು ಅಡೂರಿನ ಕೃಷ್ಣ ದೇಗುಲಗಳಿಗೆ ಕುಂಬಳೆ ಅರಸರು ಪಾರಂಪರಿಕ ಟ್ರಷ್ಟಿಗಳಾಗಿದ್ದಾರೆ. ಅವರು ತಿರುವಾಂಕೂರು ರಾಜ ಮನೆತನದವರಷ್ಟು ಪ್ರಸಿದ್ದರಲ್ಲ. ಹಾಗಾಗಿ ಅನಂತ ಪದ್ಮನಾಭನೂ ಪ್ರಸಿದ್ದಿಗೆ ಬರಲಿಲ್ಲವೇನೋ!


ತಿರುವನಂತಪುರದ ಅನಂತಶಯನಪದ್ಮನಾಭ ಅಧ್ವೈತ ಕಲ್ಪನೆಯ ಮೂರ್ತರೂಪ ಎಂಬ ವಾದವೂ ಇದೆ. ಬ್ರಹ್ಮ, ವಿಷ್ಣು,ಮಹೇಶ್ವರನಲ್ಲಿ ಬೇಧವಿಲ್ಲ ಎಂಬ ಎಕ ಭಾವಕ್ಕೆ ಭಕ್ತರು ಹೇಳುವ ಕಥೆಯೆಂದರೆ ಅನಂತಶಯನನಾದ ಪದ್ಮನಾಭನನ್ನು ನೋಡಲೆಂದು ಕೈಲಾಸದಿಂದ ಶಿವನು ಬರುತ್ತಾನೆ. ಆಗ ಪದ್ಮನಾಭ ಆತನನ್ನು ಎದುರ್ಗೊಳ್ಳಲೆಂದು ಯೋಗನಿದ್ರೆಯಿಂದ ಎದ್ದು ಬರುತ್ತಾನೆ. ಆ ದಿನವೇ ಉತ್ಥಾನ ದ್ವಾದಶಿ. ಬ್ರಹ್ಮ ಹೇಗಿದ್ದರೂ ಪದ್ಮನಾಭನ [ಹೊಕ್ಕಳು] ನಾಭಿಯಲ್ಲೇ ಇದ್ದಾನೆ. ಹಾಗಾಗಿ ಉತ್ಥಾನ ದ್ವಾದಶಿಯಂದು ಬ್ರಹ್ಮ, ವಿಷ್ಣು, ಶಿವನ ಸಂಗಮವಾಗುತ್ತದೆ. ’ಅಹಂ ಬ್ರಹ್ಮಾಸ್ಮಿ’ ಎಂದು ಅದ್ವೈತ ಸಿದ್ದಾಂತವನ್ನು ಪ್ರತಿಪಾದಿಸಿದ ಶಂಕರಾಚಾರ್ಯರು ಕೇರಳದವರು ಎಂಬುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.


ಸುತ್ತಲೂ ಬೆಟ್ಟಗುಡ್ಡಗಳಿಂದ ಅವೃತವಾಗಿ, ಅನೇಕ ಔಷದಿಯ ಸಸ್ಯಗಳ ಮೇಲೆ ಬಿದ್ದ ನೀರನ್ನು ತನ್ನೊಡಲಲ್ಲಿ ಗರ್ಭೀಕರಿಸಿಕೊಂಡು ಮತ್ತೆ ಇಲ್ಲಿಯ ಕಲ್ಲುಗಳೆಡೆಯಿಂದ ಹರಿದು ಬಂದು ಕೊಳವನ್ನು ಸೇರುವ ಈ ನೀರು ಸರ್ವರೋಗ ಪರಿಹಾರಕ ಎಂಬ ಭಾವನೆ ಭಕ್ತರಲ್ಲಿದೆ ಇಲ್ಲಿಯ ನೀರಲ್ಲಿ ಸಲ್ಫರ್ ಅಂಶ ಜಾಸ್ತಿಯಿರುವ ಕಾರಣದಿಂದಾಗಿ ಅದು ನಿಜವಿದ್ದರೂ ಇರಬಹುದು..

ಇಲ್ಲಿಗೆ ಬರುವ ಆಸ್ತಿಕರ ಮನಸ್ಸನ್ನು ತನ್ನ ಚಿನ್ನಾಟಗಳಿಂದ ಸೆಳೆಯುವ ಬಬಿಯಾ ಎಂಬ ಮೊಸಳೆಯ ಬಗ್ಗೆ ಹೇಳದೆ ಈ ಲೇಖನವನ್ನು ಮುಗಿಸುವಂತಿಲ್ಲ. ಬಬಿಯಾ ಈ ಕೊಳಕ್ಕೆ ಬಂದ ಬಗ್ಗೆಯೂ ಒಂದು ಕತೆಯಿದೆ. ೧೯೪೫ರಲ್ಲಿ ದೇವಸ್ಥಾನದ ಪಕ್ಕ ಬ್ರಿಟೀಶ್ ಸೈನಿಕರು ಕ್ಯಾಂಪ್ ಹಾಕಿದ್ದರು. ಕೆಲವು ಸೈನಿಕರು ಕೊಳದಲ್ಲಿರುವ ಅಪೂರ್ವ ಮೊಸಳೆಯನ್ನು ನೋಡಲೆಂದು ಬಂದಿದ್ದರು. ಸಾಧು ಸ್ವಭಾವದ ಆ ಮೊಸಳೆ ತನ್ನ ಹೆಸರನ್ನು ಯಾರೇ ಕೂಗಲಿ ಅವರ ಬಳಿ ಬರುತ್ತಿತ್ತು. ಹಾಗೆಯೇ ಸೈನಿಕರು ಕೊಳದ ಬಳಿ ನಿಂತು ’ಬಬಿಯಾ’ ಎಂದು ಕೂಗಿದರು. ಅದು ಚಿನ್ನಾಟವಾಡುತ್ತಾ ಪಲ್ಟಿ ಹೊಡೆಯುತ್ತಾ ಅವರೆಡೆಗೆ ಬರತೊಡಗಿತು. ಆಗ ಅವರಲ್ಲೊಬ್ಬ ಅದರೆಡೆಗೆ ಗುಂಡು ಹಾರಿಸಿದ. ಮೊಸಳೆ ಸತ್ತು ಹೋಯಿತು.ಆದರೆ ಅನಂತರದಲ್ಲಿ ಸರ್ಪವೊಂದು ಕಡಿದು ಆ ಸೈನಿಕನನ್ನು ಬಲಿ ತೆಗೆದುಕೊಂಡಿತೆಂಬ ಪ್ರತಿತಿಯಿದೆ.


ಈ ಘಟನೆ ನಡೆದ ಮರುದಿನ ದೇವರ ನೈವೇದ್ಯವನ್ನು ಯಾರಿಗೆ ನೀಡುವುದೆಂದು ಅರ್ಚಕರು ಚಿಂತಿತರಾಗಿ ನಿಂತಿದ್ದಾಗ ಇದ್ದಕ್ಕಿದ್ದಂತೆ ಕೊಳದಲ್ಲಿ ಮೊಸಳೆಯೊಂದು ಕಂಡಿತಂತೆ. ಆ ಮೊಸಳೆಯೇ ಇಂದಿಗೂ ಕೊಳದಲ್ಲಿದೆ.ಅದಕ್ಕೂ ’ಬಬಿಯಾ’ ಎಂದೇ ಹೆಸರಿಡಲಾಗಿದೆ. ಅದಕ್ಕೀಗ ಅರುವತ್ತು ವಯಸ್ಸು ದಾಟಿದೆ. ಹೆಸರಿಡಿದು ಕರೆದರೆ ಈಗಲೂ ಅದು ಮೆಲ್ಲನೆ ದಡಕ್ಕೆ ಬರುತ್ತದೆ ಪ್ರತಿನಿತ್ಯವೂ ಅರ್ಚಕರ ಕೈಯಿಂದ ನೈವೇದ್ಯ ಸ್ವೀಕರಿಸುತ್ತದೆ. ಹಾಗೆಯೇ ಭಕ್ತರು ಕೂಡಾ ತಮ್ಮ ಇಷ್ಟಾರ್ಥದ ನೆರವಿಗಾಗಿ ಮೊಸಳೆಗೆ ನೈವೇದ್ಯದ ಹರಕೆ ಹೇಳಿಕೊಳ್ಳುತ್ತಾರೆ. ಅದನ್ನು ಸಾಕ್ಷಾತ್ ವರುಣದೇವನೆಂದು ಭಾವಿಸುತ್ತಾರೆ.


ಭಾರತೀಯರ ದೈವ ಕಲ್ಪನೆಯೇ ಅದ್ಭುತವಾದುದು. ಅದು ಪ್ರಕೃತಿಯೊಡನೆ ಜೋಡಣೆ ಹೊಂದಿದೆ. ಪ್ರಕೃತಿ ನಿಗೂಢವಾದುದು. ಅನಂತಪದ್ಮನಾಭ ಯಾವಾಗಲೂ ನೀರಿನ ನಡುವೆಯೇ ಇರುತ್ತಾನೆ. ಮತ್ತು ದಟ್ಟ ಕಾಡಿನ ನಡುವೆ ಆದಿಶೇಷನ ಮೇಲೆ ಮಲಗಿರುವ ಯೋಗನಿದ್ರಾ ಭಂಗಿಯಲ್ಲಿರುತ್ತಾನೆ ಕಾವೇರಿ ನದಿ ಕ್ಷೇತ್ರಗಳಾದ ಆದಿರಂಗ, ಮಧ್ಯರಂಗ,ಮತ್ತು ಅಂತ್ಯರಂಗಳಲ್ಲಿಯೂ ಮಹಾವಿಷ್ಣು ಯೋಗ ನಿದ್ರಾ ಭಂಗಿಯಲ್ಲಿರುತ್ತಾನೆ.


ದೇವರ ಸ್ವಂತ ನಾಡು’ ಎಂದು ಕರೆಯಿಸಿಕೊಳ್ಳುವ ಕೇರಳ ರಾಜ್ಯದಲ್ಲಿರುವ ಸರೋವರ ನಡುವಿನ ಏಕೈಕ ದೇವಸ್ಥಾನವೆಂದರೆ ಅದು ಅನಂತಪುರದ ಅನಂತಪದ್ಮನಾಭ.ತಿರುವನಂತಪುರದ ಅನಂತಶಯನ ಪದ್ಮನಾಭನಿಗಿರುವ ಶ್ರೀಮಂತಿಕೆ ಅನಂತಪುರದ ಪದ್ಮನಾಭನಿಗಿಲ್ಲದಿರಬಹುದು ಆದರೆ ಶಾಂತಿಯನ್ನು ಅರಸಿ ಬರುವ ಆಸ್ತಿಕರಿಗೆ ಇದು ಶಾಂತಿ, ನೆಮ್ಮದಿಗಳನ್ನು ನೀಡುವ ಸಂಜೀವಿನಿ ತಾಣ ಎಂಬುದರಲ್ಲಿ ಸಂಶಯವಿಲ್ಲ.

.

[ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ. ಅನಂತಪದ್ಮನಾಭನ ಸನ್ನಿಧಿಯಲ್ಲಿ ಅಷ್ಟೊಂದು ಸಂಪತ್ತು ಹೇಗೆ ಶೇಖರಣೆಗೊಂಡಿರಬಹುದು ಎಂಬುದನ್ನು ಮುಂದಿನ ಪೋಸ್ಟಿನಲ್ಲಿ ಬರೆಯಲು ಪ್ರಯತ್ನಿಸುತ್ತೇನೆ]

Tuesday, July 5, 2011

ದುಃಖವಾಗುತ್ತಿದೆ...!


ಸ್ವಜನಪಕ್ಷಪಾತ ಮತ್ತು ಜಾತಿ ರಾಜಕಾರಣ ಇಡೀ ಕರ್ನಾಟಕವನ್ನು ಆವರಿಸಿಕೊಂಡಿದೆ. ಮುಖ್ಯಮಂತ್ರಿಗಳ ಇಂದಿನ ಹೇಳಿಕೆಯನ್ನೇ ನೋಡಿ, ’ನನ್ನ ಬಂಧುಗಳಿಗೆ ಬೇರೆ ಕಡೆ ನಿವೇಶನ ಇರಲಿಲ್ಲ. ಅದ್ದರಿಂದ ಅನುಕಂಪದ ಆಧಾರದ ಮೇಲೆ ನಿವೇಶನ ವಿತರಿಸಲಾಗಿದೆ.’

ಅನುಕಂಪ ಯಾಕೆ? ಅವರೇ ಹೇಳುವಂತೆ ಅವರ ಸಹೋದರಿ ಗಂಡನನ್ನು ಕಳೆದುಕೊಂಡಿದ್ದಾರಂತೆ. ಅನುಕಂಪದಲ್ಲೆ ಅವರಿಗೂ ಅವರ ಮಗನಿಗೂ ಮುಖ್ಯಮಂತ್ರಿಗಳ ವಿವೇಚನಾ ಕೋಟದಡಿ ಮೂಡಾ[ಮೈಸೂರು ಅಭಿವೃದ್ಧಿ ಪ್ರಾಧಿಕಾರ] ನಿವೇಶನಗಳನ್ನು ವಿತರಿಸಿದ್ದಾರಂತೆ. ಸರಕಾರಿ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿಯೆಂದು ಯಡಿಯೂರಪ್ಪನವರು ಅಂದುಕೊಂಡಿರಬೇಕು! ಲಜ್ಜೆ ಭಂಡತನಕ್ಕೊಂದು ಮಿತಿ ಬೇಡವೇ?ಇಲ್ಲವಾದರೆ ನಾಡಿನ ಎಲ್ಲಾ ವಿಧವೆಯರಿಗೂ ನಿಯಮ ಅನ್ವಯಿಸುತ್ತದೆಯೇ?

ವಿಧವೆ ಅನ್ನುವಾಗ ನೆನಪಾಯಿತು. ಮೊನ್ನೆ ಗುಲ್ಬರ್ಗದಲ್ಲಿ ಕಾಂಗ್ರೇಸ್ ಪಕ್ಷದ ಸಿದ್ದರಾಮಯ್ಯ ಬಹಿರಂಗ ಸಭೆಯಲ್ಲಿ ಹೇಳಿದ ಮಾತುಗಳನ್ನೊಮ್ಮೆ ಕೇಳಿ,” ಏನಮ್ಮಾ..ನಿಮ್ಮಲ್ಲಿ ಯಾರ್ಯಾರು ರಂಡೆ-ಮುಂಡೆಯರಿದ್ದೀರಿ..? ಕೈ ಎತ್ತಿರಿ..ವಯಸ್ಸಾದವರೂ ಪರವಾಗಿಲ್ಲ..” ಮಾನವಂತರು ಆಡುವ ಮಾತೇ ಇದು?

ಅಬ್ಬಾ! ನಿಜಕ್ಕೂ ರಾಜಕಾರಣ ಹೊಲಸೆದ್ದು ಹೋಗಿದೆ.

ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮ ಹೇಗಿದೆ?

ಮುಖ್ಯಮಂತ್ರಿಗಳು ಮಾಧ್ಯಮದ ವ್ಯಕ್ತಿಗಳಿಗೆಲಕೋಟೆವಿತರಿಸಲೆಂದೇ ವ್ಯಕ್ತಿಯೊಬ್ಬನನ್ನು ನೇಮಕ ಮಾಡಿಕೊಂಡಿದ್ದಾರೆಂದರೆ ಖರೀದಿ ವ್ಯವಹಾರ ಎಷ್ಟು ಬಿಜಿಯಾಗಿರಬಹುದೆಂದು ಊಹಿಸಿಕೊಳ್ಳಬಹುದು. ಮಾದ್ಯಮದ ಸಹಕಾರ ಹೀಗೆ ದೊರೆಯುತ್ತಿದ್ದರೆ ಸರಕಾರ ತನ್ನ ಅವಧಿ ಪೂರೈಸುವುದರೊಳಗಾಗಿ ಎಡೆಯೂರಪ್ಪ ಮತ್ತವರ ವಂಧಿ ಮಾಗಧರು ಕರ್ನಾಟಕದ ಆಯಕಟ್ಟಿನ ಜಾಗವನ್ನೆಲ್ಲಾ ಹರಿದು ಹಂಚಿಕೊಂಡು ತಿನ್ನುತ್ತಾರೆ. ಲಿಂಗಾಯತ ಮಠಾದೀಶರು, ಸ್ವಜಾತಿ ಭಾಂದವರು ಅವರನ್ನು ಕೈಯೆತ್ತಿ ಆಶೀರ್ವದಿಸುತ್ತಾರೆ.

ಆಳುವವರ ಆಟಾಟೋಪಗಳಿಗೆ ಯಾರ ಅಂಕೆಯೂ ಇಲ್ಲ.

ನನಗೊಂದು ಕುತೂಹಲ; ಬಲಿ ಚಕ್ರವರ್ತಿ ತನ್ನ ಪ್ರಜೆಗಳನ್ನು ನೋಡಿಕೊಂಡು ಬರಲು ವರ್ಷಕ್ಕೊಮ್ಮೆ ಮೂರು ದಿನಗಳ ಮಟ್ಟಿಗೆ ಭೂಲೋಕಕ್ಕೆ ಬರುತ್ತಾನೆ. ಹಾಗೆಯೇ ಬಸವಣ್ಣನೇನಾದರೂ ಭೂಮಿಗೆ ಬಂದರೆ ಏನಾಗಬಹುದು? ಜಾತೀಯತೆಯ ವಿರುದ್ಧ ಹೋರಾಡಿದ ಮಹಾನುಭಾವ ಲಿಂಗಾಯಿತರ ಜಾತಿ ವ್ಯಾಮೋಹವನ್ನು ಕಂಡು ಮೂರ್ಛೆ ಹೋದವನು ಖಂಡಿತವಾಗಿಯೂ ಮೇಲೇಳಲಾರ.

ನಿಷ್ಪಕ್ಷವಾಗಿ ಕೆಲಸ ಮಾಡಬೇಕಾದ ಮಾಧ್ಯಮ ರಂಗದಲ್ಲಿಯೂ ಜಾತೀಯ ಸಂಘಟನೆಗಳಿವೆ. ಅದರ ಬೇಕು-ಬೇಡಗಳನ್ನು ಆಯಾಯ ಜಾತೀಯ ರಾಜಕೀಯ ಮುಖಂಡರು ನೋಡಿಕೊಳ್ಳುತ್ತಾರೆ. ಅದರ ವಿರಾಟ್ ಸ್ವರೂಪವನ್ನು ಸರ್ತಿ ನಡೆದ ಪ್ರೆಸ್ ಕ್ಲಬ್ ಚುನಾವಣೆಯಲ್ಲಿ ಕಾಣಬಹುದಿತ್ತು. ಒಂದು ಸಂಸ್ಥೆಯಿಂದ ಇನ್ನೊಂದು ಸಂಸ್ಥೆಗೆ ಪತ್ರಕರ್ತರ ಹಿಂಡು ವಲಸೆ ಹೋಗುವಲ್ಲಿಯೂ ಇದರ ಝಳಕ್ಕನ್ನು ಕಾಣಬಹುದು.

ಕೆಲವು ದಿನಗಳ ಹಿಂದೆ ಬ್ರಾಹ್ಮಣರ ಮೊಬೈಲ್ ಗಳಲ್ಲಿ, ಮುಖ್ಯವಾಗಿ ಬ್ರಾಹ್ಮಣ ಪ್ರತ್ರಕರ್ತರ ಮೊಬೈಲ್ ಗಳಲ್ಲಿ ಸಂದೇಶವೊಂದು ಹರಿದಾಡುತ್ತಿತ್ತು. ಅದುಬ್ರಾಹ್ಮಣ ಜಾಗೋಎಂಬ ಸಂದೇಶ.

ಅದಕ್ಕೊಂದು ಹಿನ್ನೆಲೆಯಿದೆ; ಜೂನ್ ೨೮ರಂದು ಬೆಂಗಳೂರಿನರಂಗಶಂಕರರಂಗಮಂದಿರದಲ್ಲಿ ಕನ್ನಡದ ಜನಪ್ರಿಯ ಕಾದಂಬರಿಕಾರ ಎಸ್.ಎಲ್.ಬೈರಪ್ಪನವರಮಂದ್ರಕಾದಂಬರಿಯ ರಂಗರೂಪದ ಪ್ರದರ್ಶನವಿತ್ತು.

ಮೊಬೈಲ್ ಸಂದೇಶದ ಸೃಷ್ಟಿಕರ್ತನಾರೋ ಗೊತ್ತಿಲ್ಲ. ಆದರೆ ಅದನ್ನು ಕಳುಹಿಸಿದಾತ ಆನಂದ ಟಿ.ಅರ್. ಎಂಬ ಮಹಾನುಭಾವ. ’ಬ್ರಾಹ್ಮಣ ಜಾಗೋಎಂಬ ತಲೆ ಬರಹದಡಿಯಲ್ಲಿ ಕಳುಹಿಸಲಾದ ಸಂದೇಶದ ಸಾರಂಶ ಇಷ್ಟು; ನಾಟಕಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಾಹಿತ್ಯ ಶನಿ ಅನಂತಮೂರ್ತಿಗಳಿಗೆ ತಕ್ಕ ಉತ್ತರ ನೀಡಿ.

ಅನಂತಮೂರ್ತಿಯವರನ್ನು ಸಾಹಿತ್ಯ ಶನಿ ಎಂದು ಕರೆಯಲು ಈತನ್ಯಾರು? ಮರೆಯಲ್ಲಿ ನಿಂತು ಬಾಣ ಬೀಡುವ ವಿಧ್ಯೆಯನ್ನು ಆತ ಶ್ರೀರಾಮನಿಂದ ಕಲಿತುಕೊಂಡನೆ?

ಅನಂತಮೂರ್ತಿ ಹಾಗು ಬೈರಪ್ಪನವರು ಕನ್ನಡದ ಪ್ರಮುಖ ಸಾಹಿತಿಗಳು. ಅವರ ಸಿದ್ದಾಂತಗಳು ಏನೇ ಇರಲಿ, ಬೈರಪ್ಪನವರು ನಮ್ಮಲ್ಲಿ ಓದಿನ ಅಭಿರುಚಿಯನ್ನು ಹುಟ್ಟಿಸಿದವರು. ಹಾಗೆಯೇ ಅನಂತಮೂರ್ತಿಯವರು ನಮ್ಮ ಪ್ರಜ್ನೆಯನ್ನು ವಿಸ್ತರಿಸಿದವರು. ಇವರಿಬ್ಬರ ಬಗ್ಗೆಯೂ ಸಾಹಿತ್ಯಾಭಿಮಾನಿಗಳಿಗೆ ಮೆಚ್ಚುಗೆಯಿದೆ; ಗೌರವವಿದೆ. ಇವರಿಬ್ಬರ ಮೇಲೂ ಈಗ ಕೆಸರೆರಚಾಟ ನಡೆಯುತ್ತಲಿದೆ. ದುರ್ಧೈವದ ಸಂಗತಿ ಎಂದರೆ ಕನ್ನಡದ ಪ್ರಮುಖ ಪತ್ರಿಕೆಯೊಂದು ಅದಕ್ಕೆ ವೇದಿಕೆಯಾಗಿರೋದು. ಅವಸರದ ಸಾಹಿತ್ಯ ಸೃಷ್ಟಿಸುತ್ತಿರುವ ಪತ್ರಕರ್ತ ಸಾಹಿತಿಗಳು ಅದರಲ್ಲೂ ತೀರಾ ಎಳಸು ಪತ್ರಕರ್ತರು ಅಂಥ ಹಿರಿಯರ ಮೇಲೆ ಎಗರಿ ಬೀಳುತ್ತಿದ್ದಾರೆ. ಸಂಪಾದಕರು ಅವರ ಬೆನ್ನು ತಟ್ಟುತ್ತಿದ್ದಾರೆ. ಇವರ ಬೌದ್ಧಿಕ ಅಹಂಕಾರ ಯಾವ ಕಡೆಗೆ ಇವರನ್ನು ಕರೆದೊಯ್ಯಬಹುದು?

ಇದನ್ನೆಲ್ಲಾ ನೋಡುತ್ತಿರುವಾಗ ಸೋಮೇಶ್ವರ ಶತಕದಹರ ಕೊಲ್ಲಲ್ ಪರ ಕಾಯ್ವನೇ?’ ಎಂಬ ಮಾತು ನೆನಪಾಗುತ್ತದೆ. ಯಾರು ರಕ್ಷಕರಾಗಬೇಕಿತ್ತೋ ಅವರೇ ಭಕ್ಷಕರಾಗಿಬಿಟ್ಟರೆ ನಾವು ಆಸರೆಗಾಗಿ ಯಾರತ್ತ ಕೈ ಚಾಚಬೇಕು?

Tuesday, June 14, 2011

ವರ್ಷ ಕಾಲದಲ್ಲಿ ಒದ್ದೆಯಾಗುವ ಮನಸು




ಮಳೆ ಮತ್ತು ಪ್ರೀತಿ!
ನನ್ನ ಮನಸ್ಸಿನಲ್ಲೊಂದು ಸ್ತಬ್ಧ ಚಿತ್ರವಿದೆ.
ರಾಜಕಪೂರ್ ಅವರ ’ಅವಾರ’ ಚಿತ್ರವದು.
ಸುತ್ತಲೂ ’ಧೋ’ ಎಂದು ಸುರಿಯುವ ಮಳೆ.
ನಾಯಕ ರಾಜ್ ಕಪೂರ್ ಮತ್ತು ನಾಯಕಿ ನರ್ಗೀಸ್ ಒಂದೇ ಕೊಡೆಯಡಿಯಲ್ಲಿ ನಿಂತಿದ್ದಾರೆ. ನಾಯಕಿಯ ಮುಖ ಸ್ವಲ್ಪವೇ ಮೇಲಕ್ಕೆತ್ತಿದೆ. ನಾಯಕ ಅವಳೆಡೆಗೆ ಬಾಗಿದ್ದಾನೆ.
ಈ ಚಿತ್ರವನ್ನು ನೋಡಿದಾಗ ನನಗೆ ಥಟ್ಟನೆ ನೆನಪಿಗೆ ಬರುವುದು ರಾಧಾಮಾಧವರ ಜೋಡಿ. ಪ್ರೇಮೋತ್ಕಂಠಿತರಾದ ರಾಧ-ಮಾಧವರ ಜನಪ್ರಿಯ ಭಂಗಿ ಇದು.
ಮಳೆಯ ಹಿನ್ನೆಲೆಯಲ್ಲಿ ಮುಂದೆ ಈ ಜೋಡಿ ಏನನ್ನೆಲ್ಲಾ ಸೂರೆಗೊಳ್ಳಬಹುದು ಎಂಬುದು ರಸಿಕರ ಊಹೆಗೆ ಬಿಟ್ಟದ್ದು.
ಈ ಮಳೆಯೇ ಹಾಗೆ; ಅದು ನಮ್ಮನ್ನು ಭಾವುಕರನ್ನಾಗಿಸುತ್ತದೆ. ಅಂತರ್ಮುಖಿಯನ್ನಾಗಿಸುತ್ತದೆ. ಒಳಜಗತ್ತಿಗೆ ಕೊಂಡೊಯ್ಯುತ್ತದೆ. ಏಕಾಂತವನ್ನು ಪ್ರೀತಿಸುವ ಸೂಕ್ಷ್ಮಜ್ನರಿಗೆ ಚೆನ್ನಾಗಿ ಗೊತ್ತಿದೆ; ಹೊರಗೆ ಲಯ ಬದ್ಧವಾಗಿ ಬೀಳುವ ಮಳೆ ನಮ್ಮೊಳಗಿನ ಕವಿಮನಸ್ಸನ್ನು ಜಾಗೃತಗೊಳಿಸುತ್ತದೆ. ಕಲಾವಿದನನ್ನು ಬಡಿದೆಬ್ಬಿಸುತ್ತದೆ.

ಇಂತಹ ಜಡಿಮಳೆಯ ನೀರವ ರಾತ್ರಿಯಲ್ಲಿ ಮುದ್ದಣ ’ರಾಮಾಶ್ವಮೇಧ’ದ ರಚನೆಗೆ ತೊಡಗುತ್ತಾನೆ. ಪಕ್ಕದಲ್ಲಿ ಆತನ ಮನದನ್ನೆ ಮನೋರಮೆಯಿದ್ದಾಳೆ. ಆಕೆ ಎಲೆಯಡಿಕೆಯನ್ನು ಮಡಚಿ ಆತನ ಬಾಯಲ್ಲಿಡುತ್ತಿದ್ದರೆ, ಗದ್ಯ-ಪದ್ಯ ಮಿಶ್ರಿತವಾದ ಕಾವ್ಯ ಪುಂಖಾನುಪುಂಖವಾಗಿ ಹಾಳೆಯ ಮೇಲೆ ಪಡಿ ಮೂಡುತ್ತಿತ್ತು. ನವೋದಯ ಸಾಹಿತ್ಯದ ಮೊದಲ ಕಾವ್ಯವೊಂದು ಮುದ್ದಣ ಮನೋರಮೆಯರ ಸರಸ ಸಲ್ಲಾಪದೊಂದಿಗೆ ಮಳೆಯ ಹಿಮ್ಮೇಳನದಲ್ಲಿ ಮೈದಾಳಿ ಬಂದಿತ್ತು.
ಆದರೆ ಮುದ್ದಣ್ಣನ ಹಾಗೆ ಎಲ್ಲಾ ಕವಿಗಳಿಗೂ ಮಳೆಗಾಲ ಕಾಡಲಿಲ್ಲ. ಅವರಿಗೆ ಚಳಿಗಾಲವೇ ಹೆಚ್ಚು ಪ್ರಚೋದನೆ ನೀಡಿತ್ತು. ಜಾನಪದ ಕವಿಗಳಂತೂ ಹೊಳೆದಂಡೆಯ ಬದಿ, ಕೆರೆ-ಬಾವಿ ಕಟ್ಟೆಗಳ ಮೇಲೆ ಪ್ರೀತಿ ಮಾಡಿದಷ್ಟು ಸಲೀಸಾಗಿಮಳೆಯಲ್ಲಿ ನೆನೆಯುತ್ತಾ ಪ್ರೀತಿ ಮಾಡಿಲ್ಲ.

ಬಹುಶಃ ನಮ್ಮ ಜಾನಪದರಿಗೆ ಪ್ರೀತಿ ಮಾಡುವುದಕ್ಕಿಂತಲೂ ಮುಖ್ಯವಾಗಿ ತುತ್ತಿನ ಚೀಲ ತುಂಬುವುದು ಮುಖ್ಯವಾಗಿರಬೇಕು. ಹಾಗಾಗಿಯೇ ಅವರು ’ಮಳೆ ಬರುವ ಕಾಲಕ್ಕೆ ಒಳಗ್ಯಾಕ ಕುಂತೇವಾ....ಇಳೆಯೊಡನೆ ಜಳಕ ಮಾಡೋಣ..ನಾವೂನೂ ಮೋಡಗಳ ಕೂಡೆ ಆಡೋಣ’ ಎಂದಿದ್ದಾರೆ. ಇಳೆಯೊಡನೆ ಜಳಕ ಮಾಡುವ ಮಂದಿ; ಆಕಾಶದತ್ತ ಕಣ್ಣೆತ್ತಿ ನೋಡುತ್ತಾ ಮಳೆಯ ಬರುವಿಗಾಗಿ ಕಾತರಿಸಿ ನಿಂತ ಮಂದಿ, ನಮ್ಮ ರೈತಾಪಿ ಜನ. ಮಳೆಯನ್ನು ಪ್ರೀತಿಸಿದ ಜನ ಇವರು. ಮಳೆ ನಕ್ಷತ್ರಗಳನ್ನು ಒಂದೊಂದು ನುಡಿಗಟ್ಟಿನಿಂದ ಬಣ್ಣಿಸಿದವರು.

ಆರಿದ್ರಾ ಮಳೆ ಬಂದರೆ ದಾರಿದ್ರ್ಯಾ ಹೋಗುತ್ತದೆ; ಸ್ವಾತಿ ಮಳೆ ಬಂದರೆ ಬ್ಃಮಿಯಲ್ಲಿ ಮುತ್ತು ಬೆಳೆಯುತ್ತದೆ.; ಪುನರ್ವಸು ಮಳೆ ಹೆಣ ಎತ್ತುವುದಕ್ಕೂ ಬಿಡುವುದಿಲ್ಲ; ಭರಣಿ ಮಳೆಗೆ ಕೈ ಬೀಜ ಬಿತ್ತಬೇಕು; ಹಲಸಿನ ಬೀಜ ಇದ್ದವನು ಆಶ್ಲೇಷ ಮಳೆಯಲ್ಲಿ ಮನೆ ಬಿಟ್ಟು ಕದಲಲಾರ...ಇತ್ಯಾದಿ ನುಡಿಗಟ್ಟುಗಳು ಬಳಕೆಯಲ್ಲಿವೆ. ಮಳೆ ಅವರ ಬದುಕಿನಲ್ಲಿ ಹಾಸುಹೊಕ್ಕಾದ ಪರಿ ಇದು.

ಮಳೆ ಎಂದರೆ ನೀರು. ನಮ್ಮ ಪೂರ್ವಿಕರು ದಾರ್ಶಕರ ಹಾಗೆ ಬಾಳಿದವರು. ಅವರು ಬದುಕು ಅಥವಾ ಜೀವನ ಎನ್ನುವುದನ್ನು ನೀರು ಎಂದು ಕೂಡಾ ಕರೆದಿದ್ದಾರೆ. ನೀರು ಎಂದೂ ಹಿಂದಕ್ಕೆ ಹರಿಯುವುದಿಲ್ಲ.ದು ತನ್ನ ಪಾತ್ರವನ್ನು [ಹರಿಯುವಿಕೆ] ತಾನೇ ಕಂಡುಕೊಳ್ಳುತ್ತದೆ. ಯಾವ ಆಕಾರದಲ್ಲಿಯೂ ಹೊಂದಿಕೊಳ್ಳುತ್ತದೆ. ಪಾರದರ್ಶಕವಾಗಿರುತ್ತದೆ.ಅನೇಕ ಖನಿಜಾಂಶಕಗಳನ್ನು, ಲವಣಾಂಶಗಳನ್ನು ತನ್ನೊಳಗೆ ಗರ್ಭೀಕರಿಸಿಕೊಂಡು ಹರಿವೆಡೆಯಲೆಲ್ಲಾ ಜೀವರಾಶಿಯನ್ನು ಪೋಷಿಸುತ್ತದೆ. ಪ್ರಾಣಚೈತನ್ಯವನ್ನು ತುಂಬುತ್ತದೆ. ಹಾಗಾಗಿಯೇ ಜೀವನ ಎನ್ನುವುದಕ್ಕೆ ನೀರು ಎಂಬ ಅರ್ಥವೂ ಬಂದಿರಬೇಕು. ಪ್ರೀತಿಯ ಗುಣವಿಶೇಷಗಳು ಕೂಡಾ ಇವುಗಳೇ ತಾನೆ?

ನೀರುಕ್ಕಿಸುವ ಇಂತಹ ಮಳೆಗಾಗಿ ನಾವು ಕಾಯುತ್ತೇವೆ. ಹಾಗೆಯೇ ಪ್ರೀತಿಗೂ ಕೂಡಾ. ಇಲ್ಲಿ ’ಕಾಯುವಿಕೆ’ ಅನ್ನುವುದು ನಿರಂತರವಾಗಿರುತ್ತದೆ. ಮಳೆಗಾಲದಲ್ಲಿ ಮಳೆ ಬಂದೇ ಬರುತ್ತದೆ. ಮಳೆ ಸುರಿಯುವ ಪ್ರಮಾಣದಲ್ಲಿ ಹೆಚ್ಚು ಕಮ್ಮಿ ಇರಬಹುದು. ಆದರೆ ಪೂರ್ತಿ ನಿರಾಶೆ ನೀಡಲಾರದು. ಆದರೆ ಪ್ರೀತಿ ಹಾಗಲ್ಲ. ಅದು ಒಲಿಯುತ್ತದೆ ಎಂಬ ಬಗ್ಗೆ ಭರವಸೆಯಿಲ್ಲ. ಒಲ್ಲಿದರೆ ಅದೇ ಮಹಾಭಾಗ್ಯ.

ನನಗೊಬ್ಬಳು ಅಜ್ಜಿಯಿದ್ದಳು. ನಾನು ನೋಡಿದಾಗಲೇ ಅವಳು ಬೆನ್ನು ಬಾಗಿದ ಅಜ್ಜಿ. ಗೋದಿ ಮೈಬಣ್ಣದ ದಪ್ಪ ದೇಹದ ಆ ನನ್ನಮ್ಮನ ಅಮ್ಮ, ಯೌವನದಲ್ಲಿ ಹೇಗಿದ್ದಿರಬಹುದು ಎಂಬುದು ನಮ್ಮ ಮತ್ತು ದೊಡ್ಡಮ್ಮನ ಮಕ್ಕಳ ಕುತೂಹಲದ ಸಂಗತಿ. ಆಕೆ ರಾಜಮಾತೆಯ ಹಾಗಿದ್ದಿರಬಹುದು ಎಂಬುದು ನಮ್ಮೆಲ್ಲರ ಒಕ್ಕೊರಲ ತೀರ್ಮಾನ. ಆದರೆ ಆಕೆಗೆ ಗಂಡು ಸಂತತಿಯೇ ಇರಲಿಲ್ಲ. ಅದು ಬೇರೆ ವಿಷಯ.
ಆ ಅಜ್ಜಿ ನನ್ನ ಬಾಲ್ಯದ ಸಖಿಯಾಗಿದ್ದಳು. ನಾನು ಅವಳ ಪಕ್ಕದಲ್ಲೇ ಮಲಗುತ್ತಿದ್ದೆ. ಮಳೆಗಾಲದ ರಾತ್ರಿಗಳಲ್ಲಿ ಆಕೆ ರಸವತ್ತಾದ ಕಥೆಗಳನ್ನು ಹೇಳುತ್ತಿದ್ದಳು. ಇಡೀ ಮನೆಯಲ್ಲಿ ನಾನು ಮತ್ತು ಅಜ್ಜಿ ಮಾತ್ರವೇ ಇರುತ್ತಿದ್ದೆವು. ಅಜ್ಜಿಗೆ ಆಸರೆಯಾಗಿರಲೆಂದು ನನ್ನ ಅಪ್ಪ-ಅಮ್ಮ ಅಜ್ಜಿಮನೆಯಲ್ಲಿ ನನ್ನನ್ನು ಶಾಲೆಗೆ ಹೋಗಲು ಬಿಟ್ಟಿದ್ದರು.ಆದರೆ ಇಲ್ಲಿ ಯಾರು ಯಾರಿಗೆ ಆಸರೆಯಾಗಿದ್ದರೆಂಬುದನ್ನು ನನ್ನೂರಿನ ಜನರೇ ಹೇಳಬೇಕು.

ಗುತ್ತಿಗಾರಿನ ಶಾಲೆಯಿಂದ ನನ್ನ ಅಜ್ಜಿಮನೆ ಇರುವ ಕಮಿಲಕ್ಕೆ ಮೂರು ಮೈಲಿ ನಡೆದು ಬರಬೇಕು. ಹಾಕಿದ ಉದ್ದ ಲಂಗ ಒದ್ದೆ ಮುದ್ದೆಯಾಗಿ ಎಡಗೈಯಲ್ಲಿ ಪುಸ್ತಕ, ಬಲಗೈಯಲ್ಲಿ ಕೊಡೆ ಹಿಡಿದು ನಾನು ಬರುತ್ತಿದೆ. ಅಜ್ಜಿ ದಿನಾ ಬಾಗಿಲಲ್ಲೇ ನನಗಾಗಿ ಕಾಯುತ್ತಾ ನಿಂತಿರುತ್ತಿದ್ದಳು. ತನ್ನ ಸೆರಗಿನಿಂದಲೇ ತಲೆ ಒರಸಿ ಬಟ್ಟೆ ಬದಲಿಸುವಂತೆ ಗದರಿಸುತ್ತಿದ್ದಳು. ಆಮೇಲೆ ಒಗ್ಗರಣೆ ಹಾಕಿ ಬೇಯಿಸಿದ ಹಳಸಿನ ತೊಳೆಯನ್ನು ತೆಂಗಿನ ಕಾಯಿ ಬೆರೆಸಿ ಕೊಡುತ್ತಿದ್ದಳು. ನಮ್ಮೆಲ್ಲರ ಬಾಯಲ್ಲಿ ಅದು ’ಕೆಟ್ಟ ತಿನಿಸು’ ಆದರೆ ಅಜ್ಜಿಗೆ ಅದು ಇಷ್ಟ. ಯಾಕೆಂದರೆ ಹಲ್ಲಿಲ್ಲದ ಬಾಯಲ್ಲಿ ಅದನ್ನು ’ಗುಳುಂ’ ಎಂದು ನುಂಗಲು ಸಾಧ್ಯವಾಗುತ್ತಿತ್ತು.

ಒಮ್ಮೊಮ್ಮೆ ಅಜ್ಜಿ ’ತಂಬಿಟ್ಟು’ ಮಾಡಿ ಇಡುತ್ತಿದ್ದಳು. ಕುಚ್ಚಿಗೆ ಅಕ್ಕಿಯನ್ನು ಹುರಿದು, ಒರಳಲ್ಲಿ ಕುಟ್ಟಿ, ಅದಕ್ಕೆ ತೆಂಗಿನಕಾಯಿಯನ್ನು ಹಾಕಿ, ಮೈಸೂರು ಬಾಳೆಹಣ್ಣನ್ನು ಕಿವುಚಿ ಹಾಕಿ, ಎಲ್ಲವನ್ನು ಸೇರಿಸಿ ದೊಡ್ಡ ದೊಡ್ಡ ಉಂಡೆ ಮಾಡಿದರೆ ಅಜ್ಜಿಯ ತಂಬಿಟ್ಟು ರೆಡಿ. ಏನೂ ಇಲ್ಲವಾದರೆ ಹಲಸು ಅಥವಾ ಗೇರು ಬೀಜವನ್ನಾದರೂ ಸುಟ್ಟು ಇಡುತ್ತಿದ್ದರು. ಮೊಮ್ಮಗಳ ಸೇವೆ ಮಾಡಲು ಅಜ್ಜಿಯ ಶಿಥಿಲ ರಟ್ಟೆಗಳಲ್ಲಿ, ಬಾಗಿದ ಬೆನ್ನಿನಲ್ಲಿ ಎಲ್ಲಿಯೋ ಶಕ್ತಿ ಅಡಗಿಕೊಂಡಿರುತ್ತಿತ್ತು.

ಈಗ ನನ್ನ ಅಜ್ಜಿ ಇಲ್ಲ. ಆದರೆ ಅವರು ನನ್ನ ಕನಸಿನಲ್ಲಿ ಆಗಾಗ ಬರುತ್ತಿರುತ್ತಾರೆ. ನಾವು, ಅಜ್ಜಿಗಾಗಿ ಕಟ್ಟಿಸಿದ ಹೊಸ ಮನೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ನಮ್ಮಜ್ಜ ಕಟ್ಟಿಸಿದ ಹಳೆಯ ಮನೆಯ ಬಾಗಿಲ ಮುಂದೆ ಬಾಗಿಕೊಂಡು ನಡೆದು ಬರುತ್ತಿರುವಂತೆ ಕಾಣಿಸಿಕೊಳ್ಳುತ್ತಾರೆ.

ಮಳೆಯಲ್ಲಿ ನೆನೆಯುವುದು ಎಂದರೆ ಹೀಗೆಯೇ. ಇಲ್ಲಿ ’ನೆನೆಯುವುದು’ ಎಂದರೆ ಈ ಮಳೆಗಾಲದಲ್ಲಿ ನಿಂತು ಹಳೆಯ ನೆನಪುಗಳನ್ನು ಮೆಲುಕು ಹಾಕುವುದು ಎಂದಾಗುತ್ತದೆ. ಇಲ್ಲವೇ ದೈಹಿಕವಾಗಿ ಮಳೆಗೆ ಒಡ್ಡಿಕೊಳ್ಳುವುದು ಎಂದು ಕೂಡಾ ಅರ್ಥವಾಗುತ್ತದೆ. ’ಅಕ್ಕಿ ನೆನೆ ಹಾಕುವುದು’ ಎನ್ನುತ್ತೇವೆ.ಇಲ್ಲಿ ನೆನೆ ಎಂದರೆ ಹೀರಿಕೊಳ್ಳುವುದು, ಉಬ್ಬಿಕೊಳ್ಳುವುದು ಎಂದಾಗುತ್ತದೆ.

ಇಲ್ಲಿ ನಾನು ನೆನೆಯುವುದು ನನ್ನ ಬಾಲ್ಯವನ್ನು. ಅಲ್ಲಿ ನಾನು ಮಳೆಯಲ್ಲಿ ನೆಮ್ದಿದ್ದೆನೆ. ಅದು ನನ್ನ ಸುಕೋಮಲ ಭಾವನೆಗಳನ್ನು ಉದ್ದೀಪನಗೊಳಿಸಿದೆ. ಬಹುಶಃ ನನ್ನ ಮನೋಭೂಮಿಕೆಯಲ್ಲಿ ಪ್ರೀತಿಯ ಒಂದು ಬೀಜ ಬಿದಿದ್ದು ಇದೇ ಮಳೆಗಾಲದಲ್ಲಿ.

ಕುಕ್ಕೆಸುಬ್ರಹ್ಮಣ್ಯವನ್ನು ಬಗಲಲ್ಲಿಟ್ಟುಕೊಂಡ ಪಶ್ಚಿಮ ಘಟ್ಟಶ್ರೇಣಿ. ದಟ್ಟ ಅರಣ್ಯದ ಕಾಲುಹಾದಿ. ಮಳೆಗಾಲದ ದಿನಗಳು. ಸೂರ್ಯ ಮಾರ್ಕಿನ ಕೊಡೆ ಹಿಡಿದು ತಲೆತಗ್ಗಿಸಿ ನಡೆಯುತ್ತಿದ್ದರೆ ಸುಬ್ರಹ್ಮಣ್ಯದ ದೇವರ ಗದ್ದೆ ತಲುಪಿದಾಗಲೇ ತಲೆ ಎತ್ತುವುದು. ಯಾಕೆಂದರೆ ಕಾಲಿಗೆ ಹತ್ತಿ ಬರುವ ಜಿಗಣೆಗಳನ್ನು ಕೋಲಿನಿಂದಲೋ, ಕಲ್ಲಿನಿಂದಲೋ ಸರಿಸುವ ಕಾಯಕದಲ್ಲಿ ಮಗ್ನರಾಗಬೇಕಲ್ಲಾ!

ಇಂತಹ ಒಂದು ಮಳೆಗಾಲದಲ್ಲಿ ಜೋರಾಗಿ ಹಾಡು ಹೇಳಿಕೊಳ್ಳುತಾ ನಾನು ನಡೆದುಕೊಂಡು ಬರುತ್ತಿದ್ದೆ. ಹೇಗಿದ್ದರೂ ಮಳೆಯ ಹಿಮ್ಮೇಳ ಇತ್ತಲ್ಲಾ. ಆಗ ನನ್ನ ಹೆಸರಿಡಿದು ಕೂಗಿದಂತಾಯ್ತು. ಹಿಂತಿರುಗಿ ನೋಡಿದರೆ ದೂರದಲ್ಲಿ ಶರು ಓಡೋಡಿ ಬರುತ್ತಿದ್ದಾನೆ. ಕೈಯಲ್ಲಿ ಸೀತೆ ಹೂವಿನ ಗೊಂಚಲು. ಅದನ್ನು ನನ್ನೆಡೆಗೆ ಚಾಚಿ, ’ವರ್ಷದ ಅತ್ಯಂತ ದೀರ್ಘ ಹಗಲಿನ ದಿನದಂದು ಹುಟ್ಟಿದ ಉಷೆಗೆ ಜನ್ಮ ದಿನದ ಶುಭಾಶಯಗಳು’ ಎಂದ ನನಗೆ ಆಶ್ಚರ್ಯವಾಯಿತು. ಅವನತ್ತ ನೋಡಿದೆ. ಮೊಳಕೈಯಲ್ಲಿ ತರಚಿದ ಗಾಯಗಳಾಗಿದ್ದವು. ಚಡ್ಡಿ-ಶರ್ಟ್ ನೆಂದಿದ್ದವು; ಅಲ್ಲಲ್ಲಿ ಕೊಳೆಯೂ ಆಗಿತ್ತು. ಮರಹತ್ತಿ, ಜಾರಿ, ಕಷ್ಟಪಟ್ಟು ಹೂ ಕೊಯ್ದಿರಬೇಕು. ಆ ಕ್ಷಣ ನನ್ನಲ್ಲಿ ಸ್ಥಾಯಿಯಾಗಿ ಉಳಿದುಬಿಟ್ಟಿತು.

ಮಳೆಗಾಲದಲ್ಲಿ ನನ್ನೊಡನೆ ಜತೆಯಾಗಿ ನಡೆದವನು, ನನಗೆ ಕನಸು ಕಾಣುವುದನ್ನು ಹೇಳಿಕೊಟ್ಟವನು,ಈ ಶರು.
ಮಳೆ ಮತ್ತು ಪ್ರೀತಿ ಎರಡೂ ಕೂಡಾ ನೈಸರ್ಗಿಕವಾದುದು. ಎರಡೂ ಕೂಡಾ ಸಹಜ ಕ್ರಿಯೆಗಳು. ತನ್ನಷ್ಟಕ್ಕೆ ಘಟಿಸುವಂತಹದು. ಎರಡು ಕೂಡಾ ಮನಕ್ಕೆ ಮುದ ನೀಡುವಂತಹುದು.
ಈ ಶರೂ ಎನ್ನುವ ವ್ಯಕ್ತಿ, ವ್ಯಕ್ತಿಯೋ ಅದು ನನ್ನೊಳಗಿನ ಭಾವವೋ ಸ್ಪಷ್ಟವಾಗಿ ಗೊತ್ತಿಲ್ಲ. ವ್ಯಕ್ತಿಯನ್ನೂ ಮೀರಿ ಭಾವ ಬೆಳೆಯುತ್ತಲೇ ಹೋಯಿತು. ಆ ಪಾತ್ರವನ್ನು ನಾನು ಎಷ್ಟೊಂದು ಪೋಷಿಸಿಕೊಂಡು ಬಂದೆನೆಂದರೆ, ಇಂದು ನಾನು ಕಾಣುತ್ತಿರುವ ಪ್ರತಿ ಪುರುಷನಲ್ಲೂ ನಾನು ಶರೂವನ್ನೇ ಅರಸುತ್ತೇನೆ. ಶರು ಎಷ್ಟು ಪರಿಪೂರ್ಣ ಆಗಿದ್ದಾನೆಂದರೆ ಭೇಟಿಯಾದ ಯಾವ ವ್ಯಕ್ತಿಯೂ ನನಗೆ ಪೂರ್ತಿ ಇಷ್ಟವಾಗುವುದಿಲ್ಲ. ಹಾಗಾಗಿ ನನ್ನ ಭಾವುಕ ಜಗತ್ತಿನಲ್ಲಿ ನಾನು ಒಂಟಿ. ಹಾಗೆಂದರೂ ತಪ್ಪಾಗುತ್ತದೆ; ಅಲ್ಲಿ ಶರು ಸದಾ ನನ ಜತೆಗಿರುತ್ತಾನೆ.

ಬಹುಶಃ ನನ್ನ ಬಾಲ್ಯದ ಶರುವನ್ನು ನಾನು ಹುಡುಕಿಕೊಂಡು ಹೋಗಿದ್ದರೆ ಆತ ಈಗ ಹೆಗಲ ಮೇಲೆ ಗುದ್ದಲಿ ಇಟ್ಟುಕೊಂಡು ಅಡಿಕೆ ತೋಟದ ಕಡೆ ಹೊರಟಿರಬಹುದು. ಇಲ್ಲವೇ ಯಾವುದೋ ಗ್ರಾಮೀಣ ಬ್ಯಾಂಕಿನ ಕಚೇರಿಯಲ್ಲಿ ಕ್ಲಾರ್ಕ್ ಆಗಿ ಕೆಲಸ ಮಾಡುತ್ತಿರಬಹುದು. ಇನ್ನೂ ಹೆಚ್ಚೆಂದರೆ ಸ್ಕೂಲ್ ಟೀಚರ್ ಆಗಿರಬಹುದು. ಅವನನ್ನು ಈಗ ಬೇಟಿ ಮಾಡಿ ನನ್ನ ಭಾವುಕ ಜಗತ್ತನ್ನು ಛಿದ್ರಗೊಳಿಸಿಕೊಳ್ಳುವುದು ನನಗೆ ಇಷ್ಟವಿಲ್ಲ.

ಸುರಿಯುವ ಸೋನೆ ಮಳೆಯನ್ನು ನೋಡುತ್ತಾ, ಭೂತ ಕಾಲಕ್ಕೆ ಜಾರಿ ಹೋಗುವುದರಲ್ಲಿ ಎಂತಹ ಸುಖವಿದೆ! ಮೌನದ ಭಾಷೆ ಗೊತ್ತಿರುವವರಿಗೆ ಮಳೆಗಾಲ ಮುದ ನೀಡುತ್ತದೆ. ಆ ಭಾಷೆ ಶರೂಗೆ ಗೊತ್ತಿತ್ತು. ಶಬ್ದಗಳ ಜಗತ್ತಿನಲ್ಲಿ ಕಳೆದು ಹೋಗುತ್ತಿರುವ ನಾವು ಮತ್ತೆ ಬಾಲ್ಯಕ್ಕೆ ಮರಳಲು ಸಾಧ್ಯವೇ?

ನನಗೊಬ್ಬ ಗೆಳೆಯನಿದ್ದಾನೆ. ಸ್ವಲ್ಪ ಮಟ್ಟಿಗೆ ಆತ ನನ್ನ ಶರುವನ್ನೇ ಹೋಲುತ್ತಾನೆ. ತುಂಬಾ ಬೇಸರವಾದಾಗ ’ ನೀನು ನನ್ನ ಶರು ಆಗಬಲ್ಲೆಯಾ?’ ಎಂದು ಕೇಳೋಣವೆಂದುಕೊಳ್ಳುತ್ತೇನೆ. ಆದರೆ ಕೇಳೋದಿಲ್ಲ. ವರ್ತಮಾನದ ಆತ ನನ್ನ ಬಾಲ್ಯಕ್ಕೆ ಹೇಗೆ ಬರಬಲ್ಲ. ಬಾಲ್ಯದ ಕನಸುಗಳೆ ಬೇರೆ, ವರ್ತಮಾನದ ಅಗತ್ಯಗಳೇ ಬೇರೆ. ನಾವು ಈ ಮಳೆಗಾಲಕ್ಕೆ ಮೈಯೊಡ್ಡಿ ನಿಂತರೂ ನಮ್ಮ ಒಳಜಗತ್ತಿನಲ್ಲಿರುವುದು ಬಾಲ್ಯದ ಮಳೆಗಾಲ. ಅಲ್ಲಿ ತೊಟ್ಟಿಕ್ಕಿದ ಪ್ರೀತಿ. ಅಲ್ಲಿ ಅನುಭವಿಸಿದ ನೋವು ನಲಿವುಗಳು. ಅದು ನಮ್ಮ ಸುಖದ ಜಗತ್ತು.

ಮಳೆಗಾಲದಲ್ಲಿ ತನ್ನಿನಿಯನ ಓಲವಿನ ಓಲೆಯನ್ನು ಓದುತ್ತಾ ಜಗತ್ತನ್ನು ಮರೆಯುವುವ ಸೊಗಸಿದೆಯಲ್ಲಾ...ಆ ಸುಖವನ್ನು ಅನುಭವಿಸಿದವರೇ ಧನ್ಯರು. ಮಳೆಗಾಲದಲ್ಲಿ ಪ್ರೇಮಿಗಳಿಗೆ ಆತ್ಮಬಂಧುವಾಗಿ ಕಾಣುತ್ತಿದ್ದವನು ಯಾರು ಗೊತ್ತೇ? ಅಂಚೆಯಣ್ಣ. ಜಡಿಮಳೆ ಸುರಿಯುತ್ತಿದ್ದರೂ ಅಂಚೆ ಇಲಾಖೆಯವರು ಕೊಟ್ಟ ಊರಗಲದ ಕೊಡೆಯನ್ನು ಹಿಡಿದು ಮನೆಮನೆಗೆ ಪತ್ರ ತಲುಪಿಸುತ್ತಿದ್ದ. ನನ್ನ ಶರು ಬರೆದ ಚೀಲಗಟ್ಟಲೆ ಪತ್ರಗಳನ್ನು ಆತ ಜೋಪಾನವಾಗಿ ಮಳೆಗೆ ಒದ್ದೆಯಾಗದಂತೆ ತಂದೊಪ್ಪಿಸಿದ್ದಾನೆ. ಹೃದಯಗಳನ್ನು ಬೆಸೆಯುವ ಪವಿತ್ರ ಕಾರ್ಯವನ್ನು ಮಾಡುವ ಈ ಅಂಚೆಯವನಿಗಾಗಿ ಈಗಲೂ ಕಾಯುವ ಪ್ರೀಮಿಗಳಿದ್ದಾರೆಯೇ? ಗೊತ್ತಿಲ್ಲ.

ಇದೇ ಸಂದರ್ಭದಲ್ಲಿ ನಾನು ನೋಡಿದ ಎರಡು ನಾಟಕಗಳು ನೆನಪಿಗೆ ಬರುತ್ತವೆ. ಮಹಾಕವಿ ಕಾಳಿದಾಸನ ಬದುಕಿನಲ್ಲಿ ನಡೆದಿರಬಹುದು ಎನ್ನಲಾದ ಘಟನೆಯೊಂದರ ಸುತ್ತ ಹಣೆಯಲಾದ ಕಥೆಯ ’ಆಷಾಢದ ಒಂದು ದಿನ’. ಕಾಳಿದಾಸನ ಕಲ್ಪನಾ ಸುಂದರಿ ಮಲ್ಲಿಕಾ ಮತ್ತು ಕಾಳಿದಾಸ ಇದರ ನಾಯಕ-ನಾಯಕಿಯರು. ಒಂದು ಜಡಿಮಳೆಯ ರಾತ್ರಿಯಲ್ಲಿ ಅವರಿಬ್ಬರೂ ಮನೆಯೊಂದರಲ್ಲಿ ಏಕಾಂತದಲ್ಲಿ ಪರಸ್ಪರ ಭೇಟಿಯಾಗುತ್ತಾರೆ. ಬಾವನೆಗಳನ್ನು ಹಂಚಿಕೊಳ್ಳುತ್ತಾರೆ. ಮಳೆಯ ಹಿನ್ನೆಲೆಯಲ್ಲಿ ನಡೆಯುವ ಇನ್ನೊಂದು ನಾಟಕ ’ಮಳೆನಿಲ್ಲುವವರೆಗೆ..’ ನಿರ್ಜನ ಮನೆಯೊಂದರಲ್ಲಿ ನಡೆಯುವ ಘಟನೆಗಳ ಸುತ್ತ ಹಣೆಯಲಾದ ಪತ್ತೆದಾರಿ ನಾಟಕ ಇದು. ಇದಕ್ಕೂ ಜಡಿಮಳೆಯ ಹಿನ್ನೆಲೆಯಿದೆ.

ನಡು ಮಳೆಗಾಲದಲ್ಲಿ ಬರುವ ಆಷಾಢ ಮಾಸ ನವ ದಂಪತಿಗಳ ಪಾಲಿಗೆ ವಿರಹದ ತಿಂಗಳು. ಈ ತಿಂಗಳಲ್ಲಿ ದಂಪತಿಗಳು ಪರಸ್ಪರ ನೋಡಬಾರದು ಎಂಬುದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ದತಿ. ಎರಡು ವ್ಯಕ್ತಿಗಳ ನಡುವೆ ಯಾವುದೇ ಭಾವುಕ ಸಂಬಂಧ ಏರ್ಪಟ್ಟರೂ ಅಗಲಿಕೆ ಎಂಬುದು ಅವರನ್ನು ಮತ್ತಷ್ಟು ಹತ್ತಿರಕ್ಕೆ ತರುತ್ತದೆ. ಪ್ರೀತಿ ಮತ್ತಷ್ಟು ಗಟ್ಟಿಗೊಳ್ಳುತ್ತದೆ. ಹಿರಿಯರು ನಿಂತು ಮಾಡಿಸಿದ ಮದುವೆಯಲ್ಲಿ ದಂಪತಿಗಳು ಪರಸ್ಪರ ದೂರವಿದ್ದುಕೊಂಡೇ ತಮ್ಮನ್ನು ಅರಿತುಕೊಂಡು ಮಾನಸಿಕವಾಗಿ ಹತ್ತಿರ ಬರಲಿ ಎಂಬ ಕಾರಣಕ್ಕೆ ಈ ಪದ್ದತಿ ರೂಢಿಯಲ್ಲಿ ಬಂದಿರಬಹುದು. ಇದಲ್ಲದೆ ರಸಿಕರು ಕೊಡುವ ಇನ್ನೊಂದು ಕಾರಣವೂ ಇದೆ; ಆಷಾಢದಲ್ಲಿ ದಂಪತಿಗಳ ಮಿಲನವಾಗಿ ಅದು ಫಲವಂತಿಕೆಯನ್ನು ಕಂಡರೆ ಕಡು ಬೇಸಿಗೆಯಲ್ಲಿ ಅಂದರೆ ಏಪ್ರಿಲ್ ಮೊದಲ ಭಾಗದಲ್ಲಿ ಮಗು ಜನಿಸುತ್ತದೆ. ಇದು ಬಾಣಂತಿ ಮತ್ತು ಮಗು ಇಬ್ಬರಿಗೂ ತ್ರಾಸದಾಯಕ ದಿನಗಳು.

ಈ ವರ್ಷದ ಜೂನ್ ಹತ್ತೊಂಬತ್ತರಿಂದ ಇಪ್ಪತ್ತೆಡರವರೆಗೆ ಕರಾವಳಿ ಮತ್ತು ಘಟ್ಟ ಪ್ರದೇಶದಲ್ಲಿ ಕುಂಭದ್ರೋಣ ಮಳೆ ಸುರಿಯಿತು. ಆ ಸಂದರ್ಭದಲ್ಲಿ ನಮ್ಮ ರಿಯಾಲಿಟಿ ಶೋ ಒಂದರ ಶೂಟಿಂಗ್ ಗಾಗಿ ನಾನು ಆ ಪ್ರದೇಶದಲ್ಲಿದ್ದೆ. ನದಿಗಳು ಮೈದುಂಬಿ ಹರಿಯುತ್ತಿದ್ದವು. ದಟ್ಟ ಕಾನನ, ಹಗಲಲ್ಲಿ ಬಿಳ್ಳಿಮೋಡಗಳಿಂದ ಮುಚ್ಚಿದ್ದರೆ ರಾತ್ರಿ ಅಳ್ಳೆದೆಯವರಲ್ಲಿ ನಡುಕ ಹುಟ್ಟಿಸುತ್ತಿತ್ತು. ಧರ್ಮಸ್ಥಳ. ಉಜಿರೆ, ಚಾರ್ಮಾಡಿ ಘಾಟ್, ಕುಕ್ಕೆಸುಬ್ರಹ್ಮಣ್ಯ, ಶಿರಾಡಿ ಘಾಟ್, ಸಕಲೇಶಪುರ, ಸೋಮವಾರಪೇಟೆ, ಬಿಸಲೆ ಅರಣ್ಯ ಪ್ರದೇಶಗಳಲ್ಲಿ ಮೂರುರಾತ್ರಿ ಮೂರು ಹಗಲು ಕ್ವಾಲಿಸ್ ನಲ್ಲಿ ಸುತ್ತಾಡಿದ್ದೆ. ಹೊರಗೆ ಜಡಿಮಳೆ; ಮನದಲ್ಲಿ ನೆನಪುಗಳ ಸೋನೆಮಳೆ.

ಪಕ್ಕದ ಸೀಟ್ ಖಾಲಿಯಾಗಿತ್ತು.ಮನಸ್ಸು ಬಾಲ್ಯಕ್ಕೆ ಜಾರಿತ್ತು. ಬೆಚ್ಚನೆಯ ಕನವರಿಕೆಗಳು. ಗ್ಲಾಸ್  ಸರಿಸಿ ಹೊರಗೆ ಸುರಿಯುವ ಮಳೆಯನ್ನೇ ದಿಟ್ಟಿಸುತ್ತಿದ್ದೆ. ಬದುಕಿನ ಯಾವುದೋ ತಿರುವಿನಲ್ಲಿ ಶರು ಮೆಲ್ಲನೆ ಬಂದು ನನ್ನ ಪಕ್ಕದಲ್ಲಿ ನಿಲ್ಲಬಹುದು, ಸೀತೆ ಹೂವನ್ನು ನನ್ನೆಡೆಗೆ ಚಾಚಿ ’ತಗೋ ಉಷೆ’ ಅನ್ನಬಹುದು....

ಯಾವ ಪ್ರಲೋಭನೆಗಳೂ ಇಲ್ಲದೆ ಸುಮ್ಮನೆ ಒಳಜಗತ್ತಿಗೆ ಸರಿದು ಹೋಗಲು ಈ ವರ್ಷಋತು ಎಷ್ಟೊಂದು ಅನುವುಗಳನ್ನು ಮಾಡಿಕೊಟ್ಟಿದೆ! ಅದಕ್ಕೇ ಕವಿ ಹೇಳಿರಬೇಕು; ಮತ್ತೆ ಮಳೆ ಹೊಯ್ಯುತ್ತಿದೆ ಎಲ್ಲ ನೆನಪಾಗುತ್ತಿದೆ....

[ಹಳೆಯ ಮ್ಯಾಗಜಿನ್ ಗಳನ್ನು ರದ್ದಿಗೆ ಹಾಕುತ್ತಿದ್ದಾಗ ’ಓ ಮನಸೇ’ ನಿಯತಕಾಲಿಕದಲ್ಲಿ  ಈ ಲೇಖನ ಸಿಕ್ಕಿತು.]

Wednesday, May 25, 2011

’ಸ್ಮರ ಸಂಜೀವನೆ ಕೃಷ್ಣೆ ಪೂ ಮುಡಿದಳ್’!




ಅಂದು ನಮ್ಮ ಮದುವೆಯ ವಾರ್ಷಿಕೋತ್ಸವ. ಅದು ನಮಗೇನೂ ವಿಶೇಷ ದಿನವಲ್ಲ. ಆದರೆ ಆ ದಿನ ಭಾನುವಾರ ಬಂದಿದ್ದರಿಂದ ನಮ್ಮ ಮನೆಗೆ ಇಬ್ಬರು ಕಿರಿಯ ಸ್ನೇಹಿತರು ಬಂದಿದ್ದರು.

ಈ ಘಟನೆ ನಡೆದು ಹಲವಾರು ವರ್ಷಗಳು ಕಳೆದಿವೆ. ಆದರೂ ಅದಿನ್ನೂ ನಿನ್ನೆ ಮೊನ್ನೆ ನಡೆದಿದೆಯೆನೋ ಎಂಬಷ್ಟು ಹಸಿರಾಗಿ ನನ್ನ ಮನದಲ್ಲಿ ಅಚ್ಚೊತ್ತಿಬಿಟ್ಟಿದೆ.

ನಾನು ಅಡುಗೆ ಮನೆಯಲ್ಲಿ ಸಾರಿಗೆ ಒಗ್ಗರಣೆ ಹಾಕುವುದರಲ್ಲಿ ನಿರತಳಾಗಿದ್ದೆ. ಆಗ ಆ ಹುಡುಗ ಅಡುಗೆ ಮನೆಗೆ ಬಂದ. ಬಂದವನೇ ನನ್ನೆಡೆಗೆ ಪ್ರಶೆಯೊಂದನ್ನು ಎಸೆದ. ತುಂಬಾ ಸರಳವಾದ ಪ್ರಶ್ನೆಯದು; ’ನೀವು ಕೂಡಾ ಹೂ ಮುಡಿಯುತ್ತಿರಾ?’ ’ನೀವು ಕೂಡಾ’ ಎಂಬ ಪದಗಳನ್ನು ಆತ ಒತ್ತಿ ಹೇಳಿದ ರೀತಿಯಲ್ಲಿ ನಾನೇನೋ ಮಾಡಬಾರದ್ದನ್ನು ಮಾಡಿದ್ದೇನೆನೋ ಎಂಬುದನ್ನು ಧ್ವನಿಸುತ್ತಿತ್ತು.

ಆ ಹುಡುಗ ಪ್ರಶ್ನೆ ಮಾಡಿದ ರೀತಿ, ಅದರ ಹಿಂದಿನ ಭಾವವನ್ನು ಅರ್ಥ ಮಾಡಿಕೊಳ್ಳಲು ನನಗಿ ಒಂದೆರಡು ನಿಮಿಷ ಬೇಕಾಯಿತು. ಹಾಗಿದ್ದರೂ ಸಮಯಸ್ಪೂರ್ತಿಯಿಂದ ಉತ್ತರಿಸಿದೆ, ’ಯಾಕೆ ನಾನು ಹೆಣ್ಣಲ್ಲವೇ?’

ಊಟವೆಲ್ಲಾ ಮುಗಿದು ಹರಟೆ ಹೊಡೆಯುತ್ತಾ ಕೂತಿದ್ದರೂ ಆ ಪ್ರಶ್ನೆಯ ಗುಂಗಿನಲ್ಲೇ ನಾನಿದ್ದೆ. ನನಗಿಂತ ತುಂಬಾ ಚಿಕ್ಕವನಾದ ಆ ಹುಡುಗನ ಬಳಿ ಆ ಪ್ರಶ್ನೆ ಮೂಡಿಸಿದ ಗೊಂದಲವನ್ನು ಚರ್ಚಿಸುವಂತಿರಲಿಲ್ಲ. ಅವನಿಗಿಂತ ಸ್ವಲ್ಪ ಭಿನ್ನವಾಗಿ ಯೋಚಿಸಬಲ್ಲ ನನ್ನ ಕಿರಿಯ ಸ್ನೇಹಿತೆಯ ಬಳಿ ಆತ ಕೇಳಿದ ಪ್ರಶ್ನೆಯನ್ನು ಹೇಳಿ ’ನಾನು ಅಸ್ಟೊಂದು ವಿಲಕ್ಷಣವಾಗಿ ಕಾಣಿಸ್ತಿನೇನೆ’ ಎಂದೆ, ಎಂದೆ ತಲೆಯಲ್ಲಿನ ಮಲ್ಲಿಗೆ ಹೂವನ್ನು ಮುಟ್ಟಿ ನೋಡಿಕೊಳ್ಳುತಾ. ಅದಕ್ಕವಳು ’ಹೂ ಮುಡಿದುಕೊಂಡರೆ ನೀನು ತುಂಬಾ ಚೆನ್ನಾಗಿ ಕಾಣಿಸ್ತಿಯಾ, ಅದೊಂದು ಚೈಲ್ಡ್. ಅದಕ್ಕೇನು ಗೊತ್ತಾಗುತ್ತೆ ಹೆಣ್ತನದ ವಿಸ್ತಾರತೆ’ ಎಂದವಳೇ ಸ್ವಲ್ಪ ಹೊತ್ತು ಸುಮ್ಮನಿದ್ದು, ’ನಾವು ಸ್ತ್ರೀಪರವಾಗಿ ಮಾತಾಡ್ತೀವಿ, ಅವರ ಬಗ್ಗೆ ಲೇಖನಗಳನ್ನು ಬರೀತೇವೆ. ಮಹಿಳಾ ಹಕ್ಕುಗಳ ಬಗ್ಗೆ ಹೋರಾಡುತ್ತಿರುವ ಸಂಘಟನೆಗಳ ಬಗ್ಗೆ ಸಾಪ್ಟ್ ಕಾರ್ನರ್ ಹೊಂದಿದ್ದೇವೆ. ನೀನಂತೂ ಗಂಡನನ್ನು ಸೇಹಿತನ ತರಹ ನೋಡ್ತಿದ್ದೀಯಾ. ಹಾಗಿರುವಾಗ ಸ್ತ್ರೀಯ ಗುಲಾಮಗಿರಿಯ ಸಂಖೆತವಾದ ಬಳೆ, ಕುಂಕುಮ, ಹೂಗಳನ್ನು ತೊಟ್ಟು ಭಾರತೀಯ ಸಂಪ್ರದಾಯಸ್ಥ ಮುತ್ತೈದೆ ತರಹ ನಡೆದುಕೊಂಡರೆ ಆ ಗಂಡು ಜೀವ ಹೇಗೆ ತಡೆದುಕೊಂಡೀತು’ ಎಂದು ಕಣ್ಣು ಮಿಟುಕಿಸಿ ನಕ್ಕಳು.

ಅಂದು ಆ ಹುಡುಗ ಕೇಳಿದ ಪ್ರಶ್ನೆ ಇಂದಿಗೂ ನನ್ನನ್ನು ಕಾಡುತ್ತಲೇ ಇದೆ. ಹೂ ಮೃದು ಭಾವನೆಗಳ ಸಂಕೇತ; ಹೆಣ್ಣಿನ ಮನಸ್ಸಿನಂತೆ. ಈಗೀಗ ನನ್ನಂತವಳು, ನನ್ನ ಹಾಗೆ ಯೋಚಿಸುವ ಮಹಿಳೆಯರು ಹೂವನ್ನು ತಮ್ಮ ಬದುಕಿನಿಂದ ದೂರ ಇಡುತ್ತಿದ್ದಾರೆಯೇ? ಹೂವಿನಂಥ ಹೆಣ್ಣು ಬದಲಾಗುತ್ತಿದ್ದಾಳೆಯೇ?

ನನ್ನ ಮನಸ್ಸು ಬಾಲ್ಯ ಕಾಲದ್ದತ್ತ ಚಲಿಸಿತು. ನನ್ನೂರು ಬಾಳುಗೋಡಿನಿಂದ ಕುಕ್ಕೆಸುಬ್ರಹ್ಮಣ್ಯಕ್ಕೆ ಎಂಟು ಮೈಲಿಗಳ ಹಾದಿ. ದಟ್ಟ ಕಾಡು. ಒಮ್ಮೊಮ್ಮೆ ಕಾಡಾನೆಗಳ ದರ್ಶನವಾಗುದೂ ಉಂಟು. ವಿವಿಧ ರೀತಿಯ ಪಕ್ಷಿ, ಪ್ರಾಣಿಗಳು ದಾರಿಯಲ್ಲಿ ಕಾಣಿಸುತ್ತಿದ್ದವು. ಅದರಲ್ಲಿ ’ಕುಪ್ಪುಳು’ ಅಂದರೆ ಕೆಂಬೂತವೂ ಒಂದು. ಅದಕ್ಕೆ ನಾವನ್ನುತ್ತಿದ್ದುದು-ಗುಡ್ ಲಕ್. ಯಾಕೆಂದರೆ ಅದನ್ನು ನೋಡುವುದು ಶುಭಶಕುನವಂತೆ. ನಾವು ದಿನದಲ್ಲಿ ಕನಿಷ್ಟ ಹತ್ತಾದರೂ ಗುಡ್ ಲಕ್ ನೋಡುತ್ತಿದ್ದೆವು. ಅದನ್ನು ಶಾಲೆಗೆ ಬಂದು ಇತರ ಗುಡ್ ಲಕ್ ವೀಕ್ಷಕರ ಜೊತೆ ತಾಳೆ ಹಾಕುತ್ತಿದ್ದೆವು.

ನಾವು ನಡೆದು ಹೋಗುತ್ತಿದ್ದ ಹಾದಿಯಲ್ಲಿ ಮಾವಿನಕಟ್ಟೆ ಗುಡ್ಡ ಇಳಿದು ಅಜ್ಜಿಗುಡ್ಡೆ ಹತ್ತುವ ಮಧ್ಯದಲ್ಲಿನ ಸ್ವಲ್ಪ ಸಮತಟ್ಟಾದ ಜಾಗದಲ್ಲಿ ಒಂದು ರೆಂಜಾಳ ಹೂವಿನ ಮರವಿತ್ತು. ಮೊದಲು ಬಂದ ಹುಡುಗ-ಹುಡುಗಿಯರೆಲ್ಲಾ ಈ ಮರದಡಿಯಲ್ಲಿ ಸೇರಿ ರೆಂಜಾಳ ಹೂ ಹೆಕ್ಕಿ ಅದನ್ನು ಪೋಣಿಸುವುದು ನಿತ್ಯ ಸಂಪ್ರದಾಯ. ಈ ಹೂ ಇಡೀ ಕಾಡಿಗೆಲ್ಲಾ ಪರಿಮಳ ಬೀರುತ್ತಿತ್ತು. ಅದನ್ನು ಮುಡಿದೇ ನಾವು ಶಾಲೆಗೆ ಹೋಗುತ್ತಿದ್ದುದ್ದು.

ತಲೆಗೆ ಮುಡಿಯಲು ನಮಗೆ ಹೂವೇ ಆಗಬೇಕೆಂದಿರಲಿಲ್ಲ. ಕಾಸರಕನ ಮರದ ಚಿಗುರು [ ಈ ಮರ ತೆಂಗಿನ ಮರಕ್ಕೆ ಒಳ್ಳೆ ಗೊಬ್ಬರ.ಇದನ್ನು ನಾಲ್ಕು ವರ್ಷಕ್ಕೊಮ್ಮೆ ಇದರ ಸೊಪ್ಪನ್ನು ಕಡಿದು ತೆಂಗಿನ ಮರದ ಬುಡಕ್ಕೆ ಹಾಕಿದರೆ ಸಮೃದ್ಧಿಯಾಗಿ ಕಾಯಿ ಬಿಡುತ್ತದೆ.]. ಇದನ್ನು ಮುಡಿದರೆ ದೃಷ್ಟಿ ತಾಗುವುದಿಲ್ಲವೆಂಬ ನಂಬಿಕೆಯಿದೆ.

ಮಲೆನಾಡಿನಲ್ಲಿ ಸುರಗಿ ಹೂವೆಂಬ ವಿಶಿಷ್ಟ ಜಾತೀಯ ಹೂವಿದೆ [ನನ್ನ ’ಮೌನಕಣಿವೆ’ ಬ್ಲಾಗನ್ನು ಎರಡು ವರ್ಷಗಳ ತನಕ ಸುರಗಿ ಎಂಬ ಹೆಸರಿನಲ್ಲಿ ನಿರ್ವಹಿಸುತ್ತಿದ್ದೆ!] ಪುರುಷ ಭೂತಕ್ಕೆ ಹರಕೆ ಒಪ್ಪಿಸುವ ಹೂವಿದು [ತುಳುನಾಡಿನ ಕಾರಣಿಕ ದೈವ ಪುರುಷಭೂತ] ಈ ಹೂವಿನಲ್ಲಿ ಮತ್ತೇರಿಸುವ ಸುಗಂಧವಿರುತ್ತದೆ. ಒಣಗಿದ ಮೇಲೂ ಈ ಸುಗಂಧ ತಿಂಗಳಾನುಗಟ್ಟಲೆ ಹಾಗೆಯೇ ಉಳಿದಿರುತ್ತದೆ. ನಮ್ಮ ಮನೆಯ ಹಿರಿಯರು ಈ ಮರಕ್ಕೆ ಹತ್ತಿ ಹೂ ಕೊಯ್ಯಲು ಬಿಡುವುದಿಲ್ಲ. ಬೇಡ ಎಂದುದ್ದನ್ನು ಮಾಡುವುದರಲ್ಲೇ ನಮಗೆ ಖುಷಿ. ಬಳ್ಳಿ ಪೊದೆಗಳಲ್ಲಿ ಸುಲಭವಾಗಿ ಸಿಗುವ ಹೂಗಳಲ್ಲಿ ನನಗೆ ಅಂಥಾ ಆಕರ್ಷಣೆಯೇನೂ ಇರಲಿಲ್ಲ. ಸೀತೆ ಹೂವನ್ನು ಕೊಯ್ಯಲು ಅಂದು ನಾನು ಹತ್ತುತ್ತಿದ್ದ ಮರಗಳನ್ನು ಈಗ ನೆನೆಸಿದರೆ ಅಚ್ಚರಿಯಾಗುತ್ತದೆ.

’ಹೂ ಕೊಯ್ಯುವುದು’ ಎಂಬುದು ಸರಿಯಾದ ಪದ ಅಲ್ಲ. ಅದರಲ್ಲಿ ಹಿಂಸೆ ಮತ್ತು ಕ್ರೌರ್ಯ ಇದೆ. ’ಹೂ ಬಿಡಿಸುವುದು’ ಎಂಬುದು ಸರಿಯಾದ ಪದ ಎಂದು ನಮ್ಮ ಗುರುಗಳಾದ ತಾಳ್ತಜೆ ವಸಂತ ಕುಮಾರರು ಹೇಳುತ್ತಿದ್ದರು. ಗುಲಾಬಿ ಹೂವಿನ ಹುಟ್ಟಿನ ಬಗ್ಗೆ ಅವರೇ ಹೇಳಿದ ಇನ್ನೊಂದು ಮಾತು ನನ್ನ ನೆನಪಿನಲ್ಲಿದೆ. ಒಮ್ಮೆ ರತಿ ಮನ್ಮಥರಿಬ್ಬರು ಆಕಾಶ ಮಾರ್ಗದಲ್ಲಿ ವಿಹರಿಸುತ್ತಿದ್ದರಂತೆ. ಆಗೊಮ್ಮೆ ರತಿಯ ಕೆಂಪಾದ ತುಟಿಗಳನ್ನು ಕಂಡ ಮನ್ಮಥ ಉನ್ಮತ್ತಗೊಂಡು ಪ್ರೇಮದಿಂದ ಕಚ್ಚಿದನಂತೆ. ಆಗ ರತಿಯ ತುಟಿಯಿಂದ ಒಸರಿದ ರಕ್ತದ ಬಿಂದುವೊಂದು ಧರೆಗೆ ಬಿದ್ದು ಗುಲಾಬಿ ಹೂವಾಗಿ ಅರಳಿತಂತೆ. ಇದು ಕುವೆಂಪು ಕಾವ್ಯವೊಂದರಲ್ಲಿ ಬಂದ ಸಾಲುಗಳೆಂದು ಅವರೇ ಹೇಳಿದ ನೆನೆಪು. ಎಂತಹ ಅದ್ಭುತ ಕಲ್ಪನೆಯಲ್ಲವೇ?

ಪಂಪಭಾರತದಲ್ಲಿ ಪಂಪ ತನ್ನ ಹುಟ್ಟೂರಾದ ಬನವಾಸಿಯ ವರ್ಣನೆ ಮಾಡುವಾಗ ಅಲ್ಲಿಯ ಪುಷ್ಪ ಸಂಪತ್ತಿನ ಬಗ್ಗೆಯೂ ವರ್ಣಿಸುತ್ತಾನೆ. ಆದರೆ ಹರಿಹರನ ’ಪುಷ್ಪ ರಗಳೆ’ಯಲ್ಲಿ ಬರುವ ನೂರಾರು ಜಾತೀಯ ಹೂಗಳ ವರ್ಣನೆ ವಿಶಿಷ್ಟವಾದುದು.ಆತ ಉಷಃಕಾಲದಲ್ಲೇ ’ಅನಿಲ ನಲುಗದ, ರವಿಕರಂ ಪೊಗದ,ದುಂಬಿ ಎರಗದ’ ಪರಿಶುದ್ಧ ಹೂಗಳನ್ನು ಬಿಡಿಸಿ ತಂದು ತನ್ನ ಇಷ್ಟ ದೈವ ಶಿವನಿಗೆ ಸಮರ್ಪಿಸುತ್ತಿದ್ದ.

ಪುರಾಣದಲ್ಲಿ ಬರುವ ನಮ್ಮ ಪ್ರೇಮ ದೇವತೆ ಮನ್ಮಥ. ಅತನ ಬಿಲ್ಲು ಕಬ್ಬು. ಅದಕ್ಕೆ ಹೂಡುವ ಐದು ಬಾಣಗಳು; ಅರವಿಂದ, ಅಶೋಕ,ಚೂತ,ನವಮಲ್ಲಿಕಾ, ನಿಲೋತ್ಪಲಗಳೆಂಬ ಐದು ಬಗೆಯ ಹೂಗಳು. ಸಿಹಿ ಕಬ್ಬಿನ ಬಿಲ್ಲಿನಿಂದ ಹೂವಿನ ಬಾಣವನ್ನು ನಮ್ಮ ಎದೆಗೆ ನೆಟ್ಟು ಮೋಹ ಪಾಶದಲ್ಲಿ ಕೆಡವುತ್ತಾನೆ! ನಮ್ಮ ಪೂರ್ವಿಕರ ಶೃಂಗಾರಭಾವದಲ್ಲಿ ಎಂಥ ಲಾಲಿತ್ಯವಿದೆ ಅಲ್ಲವೇ?

ದ್ರೌಪದಿಗಾಗಿ ಸೌಗಂಧಿಕಾ ಪುಷ್ಪ ತರಲು ಪಾಡುಪಟ್ಟ ಭೀಮ, ತನ್ನ ಪ್ರೀಮದ ಮಡದಿ ಸತ್ಯಭಾಮೆಗಾಗಿ ದೇವಲೋಕದ ಪಾರಿಜಾತವನ್ನು ಭೂಮಿಗೆ ತಂದ ಶ್ರೀಕೃಷ್ಣ-ಇಬ್ಬರೂ ನನ್ನ ದೃಷ್ಟಿಯಲ್ಲಿ ಸಾರ್ವಕಾಲಿಕ ಹೀರೋಗಳೇ. ಯಾಕೆಂದರೆ ಅವರಿಬ್ಬರೂ ಹೆಣ್ಣಿನ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದವರು.

ಗದಾಯುದ್ಧದ ನಾಯಕ ಭೀಮ ದ್ರೌಪದಿಯ ಬಿಚ್ಚಿದ ಮುಡಿಯನ್ನು ದುರ್ಯೊಧನನ [ದುಶ್ಯಾಸನನ ಅಲ್ಲ] ರಕ್ತದಲ್ಲಿ ಅದ್ದಿ, ಅವನ ಹಲ್ಲನ್ನು ಕಿತ್ತು ಅದರಲ್ಲಿ ತಲೆಬಾಚಿ, ತುರುಬು ಕಟ್ಟಿ, ಕರುಳಮಾಲೆಯನ್ನು ಮುಡಿಸಿ ಧನ್ಯತೆಯ ಭಾವ ಪ್ರದರ್ಶಿಸುತ್ತಾನೆ.ತನ್ನ ಪ್ರತಿಜ್ನೆ ನೆರವೇರಿದ ಸಂತಸದಲ್ಲಿ ಬೀಗುತ್ತಿದ್ದ ದ್ರೌಪದಿಯನ್ನು ಕಂಡು ರನ್ನ ಉದ್ಘರಿಸಿದ ಮಾತು, ’ಸ್ಮರ ಸಂಜೀವನೆ ಕೃಷ್ಣೆ ಪೂ ಮುಡಿದಳ್’ ಇಂಥ ಹೂವನ್ನು ಮುಡಿಸಿದ ಭೀಮ ಯಾರಿಗೆ ತಾನೆ ಇಷ್ಟವಾಗಲಾರ?

ನಾನು ಮಂಗಳಗಂಗೋತ್ರಿಯಲ್ಲಿ ಓದುತ್ತಿದ್ದ ದಿನಗಳವು. ನಾವೆಲ್ಲಾ ರ್‍ಯಾಗಿಂಗ್ ವಿರೋಧಿಗಳು. ಆದರೂ ಜ್ಯೂನಿಯರ್ಸನ್ನು ಸಭ್ಯತೆಯ ಚೌಕಟ್ಟಿನೊಳಗೆ ಸ್ವಾಗತಿಸುವ ಪದ್ಧತಿಯಿತ್ತು. ಅದಕ್ಕಾಗಿ ನಮ್ಮ ಕ್ಲಾಸ್ ರೂಮಿನಲ್ಲೇ ಚಿಕ್ಕ ಸಮಾರಂಭ ಏರ್ಪಾಟಾಗಿತ್ತು. ಬಾಕ್ಸೊಂದರಲ್ಲಿ ಹಲವು ಚೀಟಿಗಳನ್ನಿಟ್ಟಿದ್ದೆವು. ಜ್ಯೂನಿಯರ್ಸ್ ಒಬ್ಬೊಬ್ಬಾರಾಗಿ ಬಂದು ಅದರಲ್ಲಿರುವ ಚೀಟಿಯಲ್ಲಿ ಒಂದನ್ನೆತ್ತಿಕೊಂಡು ಅದರಲ್ಲಿ ಬರೆದಂತೆ ಅಭಿನಯಿಸಬೇಕಾಗಿತ್ತು. ಮ್ಯಾಥ್ಯು ಎಂಬ ವಿದ್ಯಾರ್ಥಿಗೆ ಬಂದ ಚೀಟಿಯಲ್ಲಿ ’ಮೇಜಿನ ಮೇಲಿರುವ ಗುಲಾಬಿಗಳಲ್ಲಿ ಒಂದನ್ನು ನೀವು ಇಷ್ಟಪಡುವ ಸೀನಿಯರ್ ವಿದ್ಯಾರ್ಥಿನಿಗೆ ನೀಡಿ’ ಎಂದಿತ್ತು. ಆತ ಒಂದು ಕ್ಷಣ ನಮ್ಮೆಲ್ಲರನ್ನು ಕಣ್ಣಲ್ಲೇ ಅಳೆದ. ಹಳದಿ ಗುಲಾಬಿಯೊಂದನ್ನು ಕೈಗೆತ್ತಿಕೊಂಡು ಎದುರಿಗಿರುವ ಅಧ್ಯಾಪಕ ವೃಂದದತ್ತ ಒಮ್ಮೆ ನೋಡಿ, ನನ್ನ ಕೈಯಲ್ಲಿ ಹೂವಿಟ್ಟು ನಾಚುತ್ತಾ ಹೋದ.

ಮತ್ತೆ ನನ್ನ ಕೈಗೆ ಗುಲಾಬಿ ಹೂ ಬಂದದ್ದು ನಾನು ಪ್ರೀತಿಸಿದ ಹುಡುಗನಿಂದ. ಈಗ ಆತ ನನ್ನ ಪತಿ. ನನ್ನ ಸಹೋದ್ಯೋಗಿಯಾಗಿದ್ದ ಆತ ಪ್ರತಿದಿನ ನನ್ನ ಮೇಜಿನ ಮೇಲೆ ಗುಲಾಬಿ ಹೂವೊಂದನ್ನು ಇಟ್ಟಿರುತ್ತಿದ್ದ. ಮದುವೆಯಾದೊಡನೆ ಇದು ನಿಂತು ಹೋಯಿತು! ಮದುವೆಯಾದ ನಂತರವೂ ಇಂತಹ ಅಮೃತ ಘಳಿಗೆಗಳು ಮತ್ತೆ ಮತ್ತೆ ಸಂಭವಿಸುತ್ತಿರಲಿ ಎಂದು ಪ್ರತಿ ಸ್ತ್ರೀಯೂ ಅಂತರಂಗದಲ್ಲಿ ಬಯಸುತ್ತಿರುತ್ತಾಳೆ. ಆದರದು ಸಾಧ್ಯವಾಗುವುದಿಲ್ಲ.

ಒಮ್ಮೆ ಮಂಗಳೂರಿನ ಬಸ್ ನಿಲ್ದಾಣದಲ್ಲಿ ನಿಂತಿದ್ದೆ. ಹದಿನಾಲ್ಕು ವರ್ಷದ ನಂತರ ಭೇಟಿಯಾದ ಬಾಲ್ಯದ ಗೆಳೆಯ ಪಕ್ಕದಲ್ಲಿದ್ದ. ಸುತ್ತೆಲ್ಲಾ ಮಂಗಳೂರು ಮಲ್ಲಿಗೆ ಮಾರುವ ಹೆಂಗಸರಿದ್ದರು. ಬಾಲ್ಯದಲ್ಲಿ ಸೀತೆ ಹೂವನ್ನು ಕೈಗಿತ್ತ ಹುಡುಗನನ್ನು ಈಗ ತಲೆಯೆತ್ತಿ ನೋಡಬೇಕು.ಆದರೂ ಕೇಳಿದೆ, ’ಮಂಗಳೂರು ಮಲ್ಲಿಗೆಯ ಘಮ ಎಷ್ಟು ಚಂದ ಅಲ್ವಾ’ ಆತ ನಕ್ಕ. ಅವನ ಬಸ್ಸು ಬಂತು. ಓಡಿ ಹತ್ತಿ ಕೈ ಬೀಸಿದ. ಇದನ್ನು ಅವನನ್ನೇ ಹೋಲುವ ಇನ್ನೊಬ್ಬ ಗೆಳೆಯನೊಡನೆ ಹಂಚಿಕೊಂಡೆ. ಅವನಿಗದು ಅರ್ಥವಾಗಲೇ ಇಲ್ಲ. ಪೆಚ್ಚು ಪೆಚ್ಚಾಗಿ ನಕ್ಕ. ಅಥವಾ ನಕ್ಕಂತೆ ನಟಿಸಿರಬೇಕು!

Friday, May 13, 2011

’ಸಂವೇದಿ’ಯಲ್ಲಿ ಪರಿವರ್ತನೆಯ ಬೀಜ




ಪತ್ರಿಕಾರಂಗ ಈಗ ಸೇವಾ ಕ್ಷೇತ್ರವಲ್ಲ. ಅದೊಂದು ಉದ್ಯಮವಾಗಿದೆ. ಉದ್ಯಮ ಅಂದಮೇಲೆ ಅಲ್ಲಿ ಲಾಭ-ನಷ್ಟದ ಲೆಖ್ಖಾಚಾರ ನಡೆಯುತ್ತದೆ. ಮಾರುಕಟ್ಟೆಯ ಶಕ್ತಿಗಳು ಸಂಪಾದಕೀಯ ನೀತಿಯನ್ನು ನಿಯಂತ್ರಿಸುತ್ತವೆ; ನಿರ್ದೇಶಿಸುತ್ತವೆ. ಹಾಗಾಗಿ ಸಾಮಾಜಿಕ ನ್ಯಾಯ, ಸಾಮಾಜಿಕ ಹೊಣೆಗಾರಿಕೆ, ಮಹಿಳಾ ಕಾಳಜಿ ಎನ್ನುವ ಆದರ್ಶಗಳೆಲ್ಲಾ ಸಮೂಹ ಮಾಧ್ಯಮಗಳಿಂದ ದೂರವಾಗುತ್ತಿದೆ.

ಅದಕ್ಕಾಗಿಯೇ ಸಮಾಜ ಬದಲಾವಣೆಯ ಕನಸು ಕಾಣುತ್ತಿದ್ದ ಜನಪರ ಮನಸ್ಸುಗಳು ಪರ್ಯಾಯ ವೇದಿಕೆಗಳತ್ತ ಹೊರಳತೊಡಗಿದರು. ಯುವಮನಸುಗಳು ಅಂತರ್ಜಾಲವನ್ನು ಹೆಚ್ಚೆಚ್ಚಾಗಿ ಬಳಸತೊಡಗಿದರು. ಟ್ವೀಟ್ಟರ್, ಪೇಸ್ ಬುಕ್, ಬ್ಲಾಗ್ ಗಳು ಮನಸ್ಸಿಗೆ ಅನ್ನಿಸಿದ್ದನ್ನು ನೇರವಾಗಿ,ಯಾವುದೇ ಅಳುಕಿಲ್ಲದೆ ಅಭಿಪ್ರಾಯ, ಚಿಂತನೆಗಳನ್ನು ಹಂಚಿಕೊಳ್ಳುವ ವೇದಿಕೆಗಳಾಗಿವೆ. ಮೊನ್ನೆ ಮೊನ್ನೆ ನಡೆದ ಈಜಿಪ್ತಿನ ಜನ ಬಂಡಾಯಕ್ಕೆ ಪೋನ್, ಪೇಸ್ ಬುಕ್ ಗಳ ಮುಖಾಂತರ ಜನಜಾಗೃತಿಯನ್ನು ಮೂಡಿಸಲಾಗಿದ್ದೇ ಕಾರಣವೆನ್ನಲಾಗುತ್ತಿದೆ.

ಕೇವಲ ’ವಿಕಿಲೀಕ್ಸ್’ ಎಂಬ ವೆಬ್ ಸೈಟ್ ಮುಖಾಂತರ ಜಗತ್ತಿನಾದ್ಯಂತ ರಾಜಕೀಯ ಸಂಚಲನವನ್ನುಂಟುಮಾಡಿದ್ದು ಜ್ಯೂಲಿಯನ ಅಸಾಂಜೆ ಎಂಬ ಒಬ್ಬ ಖಾಸಾಗಿ ವ್ಯಕ್ತಿ. ಸಮಾಜ ಬದಲಾವಣೆಯ ಕನಸು ಕಾಣುತ್ತಿರುವ ಕೋಟ್ಯಾಂತರ ಜನಗಳ ಪಾಲಿಗೆ ಇಂದು ಆತ ಆರಾಧ್ಯ ದೈವ.
ನಮ್ಮ ಮುಂದೆ ಸಮಸ್ಯೆಗಳಿವೆ; ಸವಾಲುಗಳಿವೆ ನಿಜ. ಆದರೆ ದಾರಿಯೂ ಇರುತ್ತದೆ. ಅದನ್ನು ನಾವು ಹುಡುಕಿಕೊಳ್ಳಬೇಕು ಅಷ್ಟೇ. ಹಾಗೆ ಪರ್ಯಾಯ ಮಾರ್ಗವನ್ನು ಹುಡುಕಿಕೊಂಡು ಹೊರಟ ಮಂಗಳೂರಿನ ಮಾನಿನಿಯರ ಮನದಲ್ಲಿ ಹುಟ್ಟಿದ್ದು ’ಸಂವೇದಿ’

’ಸಂವೇದಿ’ ಎಂಬ ಸುಂದರ ಹೆಸರಿನ ನಿಯತಕಾಲಿಕವನ್ನು ನಾನು ನೋಡಿದ್ದು ಕೆಲವು ತಿಂಗಳುಗಳ ಹಿಂದೆ. ಮೊದಲ ನೋಟಕ್ಕೆ ನನ್ನನ್ನು ಆಕರ್ಷಿಸಿದ್ದು ಅದರ ಮುಖಪುಟಗಳು. ತುಂಬಾ ಸಾಂಕೇತಿಕವಾದ, ತನ್ನೊಳಗೆ ಹಲವು ಅರ್ಥಗಳನ್ನು ಹುದುಗಿಸಿಕೊಂಡ ವಿಶಿಷ್ಠ ರಚನೆಗಳಿವು.

ಖಾಸಗಿ ಪ್ರಸಾರಕ್ಕಾಗಿ ಮೀಸಲಾದ ಈ ಪತ್ರಿಕೆ ಹದಿನಾರು ಪುಟಗಳನ್ನೊಳಗೊಂಡಿದೆ. ’ಡೀಡ್ಸ್’ ಎನ್ನುವ ಸರ್ಕಾರೇತರ ಸೇವಾ ಸಂಸ್ಥೆಯೊಂದು ಈ ನಿಯತಕಾಲಿಕವನ್ನು ಹೊರತರುತ್ತಿದೆ.
’ಕಿರಿದರೊಳ್ ಪಿರಿದರ್ಥವನ್ ಪೇಳುವ’ ಇದು ಮೊದಲ ಓದಿನಲ್ಲಿಯೇ ನನ್ನಲ್ಲಿ ಕುತೂಹಲ ಮೂಡಿಸಿತು. ಇದಕ್ಕೆ ಹಲವು ಕಾರಣಗಳಿವೆ.
ಮೊತ್ತಮೊದಲನೆಯ ಕಾರಣವೆಂದರೆ ಸಂವೇದಿ, ಮಹಿಳೆಯರ ಕಷ್ಟ-ಕಾರ್ಪಣ್ಯಗಳನ್ನು, ನೋವು-ನಲಿವುಗಳನ್ನು ಅವಳ ನೆಲೆಯಲ್ಲಿಯೇ ನಿಂತು ಗ್ರಹಿಸುತ್ತದೆ. ಹಾಗಾಗಿಯೇ ಅದರ ಹೆಸರಿನಂತೆಯೇ ಒಳಗಿನ ಬರಹಗಳು ಕೂಡ ಆಪ್ತವಾಗಿ ನಮ್ಮನ್ನು ತಟ್ಟುತ್ತದೆ.

ಎರಡನೆಯ ಕಾರಣ ಅದರ ಸ್ಪಷ್ಟತೆ ಮತ್ತು ನಿಖರತೆ. ತಾನು ಏನನ್ನು ಹೇಳುತ್ತಿದ್ದೇನೆ? ಯಾರಿಗೆ ಹೇಳುತ್ತಿದ್ದೇನೆ? ಹೇಗೆ ಹೇಳುತ್ತಿದ್ದೇನೆ? ಎಂಬುದರ ಸ್ಪಷ್ಟ ಅರಿವು ಸಂವೇದಿ ಬಳಗಕ್ಕಿದೆ. ಅದರಲ್ಲಿನ ಲೇಖನಗಳನ್ನು ಓದುತ್ತಾ ಹೋದಂತೆಲ್ಲಾ ಆ ನಿಯತಕಾಲಿಕದ ಹಿಂದೆ ಎಂಥ ಮನಸ್ಸುಗಳು ಕೆಲಸ ಮಾಡುತ್ತಿವೆ ಎಂಬುದು ನಮಗೆ ಅರಿವಾಗುತ್ತಾ ಹೋಗುತ್ತದೆ.

ಉದಾಹರಣೆಗೆ ೨೦೦೯ರಲ್ಲಿ ಮಂಗಳೂರಿನಲ್ಲಿ ಭಜರಂಗದಳದವರಿಂದ ಪಬ್ ದಾಳಿ ನಡೆಯಿತು. ಅದಕ್ಕೆ ಈ ಪುಟ್ಟ ಪತ್ರಿಕೆ ಪ್ರತಿಕ್ರಿಯಿಸಿದ್ದು ಹೀಗೆ;
ಅದರ ಮುಖಪುಟದಲ್ಲಿ ಒಬ್ಬ ಮಹಿಳೆಯ ಮುಖದ ಕ್ಯಾರಿಕೇಚರ್ ಇದೆ. ಹಿಂದಿನಿಂದ ಬಂದ ಬಲಿಷ್ಟ ಕೈಯೊಂದು ಅವಳ ಬಾಯನ್ನು ಮುಚ್ಚಿದೆ. ಆ ಕೈಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದು ಮಂದಿರ, ಮಸಿದಿ ಮತ್ತು ಚರ್ಚ್ ಗಳಿಂದ ಬಂದಿರುತ್ತದೆ. ದೆಹಲಿಯ ಸಹೇಲಿ ಪತ್ರಿಕೆಯಿಂದ ಈ ಚಿತ್ರವನ್ನು ಎರವಲು ಪಡೆಯಲಾಗಿದೆಯೆಂದು ಸಂಪಾದಕೀಯದ ಎರಡನೆ ಪುಟದಲ್ಲಿ ನಮೂದಿಸಲಾಗಿದೆ.
ಪುಟ ತೆರೆಯುತ್ತಿದ್ದಂತೆ ಕಣ್ಣಿಗೆ ಬೀಳುವ ಮೊದಲ ಲೇಖನ’ ಭಯೋತ್ಪಾದನೆ ಏನೆಂದು ತಿಳಿಯಬೇಕೆ? ಬನ್ನಿ ಮಂಗಳೂರಿಗೆ’ ಎಂಬ ಲೇಖನ. ಸಂದರ್ಶನ ಆಧಾರಿತವಾದ ಈ ಲೇಖನದಲ್ಲಿ ನೈತಿಕ ಪೋಲಿಸ್ ಪಡೆ ವಿದ್ಯಾರ್ಥಿವೃಂದವನ್ನು ಹೇಗೆ ಹೆದರಿಸಿ ಬೆದರಿಸಿ ವಿದ್ಯಾಸಂಸ್ಥೆಗಳ ವಾತಾವರಣವನ್ನು ಹಾಳುಗೆಡವುತ್ತಿದೆ ಎಂಬುದನ್ನು ಸರಳವಾಗಿ ಹೇಳಲಾಗಿದೆ.

ಎರಡನೆಯ ಲೇಖನ ’ನಾವು ಪಬ್ ದಾಳಿಯನ್ನು ವಿರೋಧಿಸುತ್ತೇವೆ ಯಾಕೆಂದರೆ......’
ಮೂರನೆಯ ಲೇಖನ ’ಕೋಮು ಗಲಭೆ [ಪ್ರತಿಬಂಧ, ನಿಯಂತ್ರಣ ಮತ್ತು ಸಂತ್ರಸ್ತರ ಪುನರ್ವಸತಿ] ಮಸೂದೆ ೨೦೦೫’
ನಾಲ್ಕನೆಯ ಲೇಖನ ’ಜಿಲ್ಲಾ ಮಹಿಳಾ ನ್ಯಾಯಾಲಯ’ದ ಉದ್ಘಾಟನಾ ವರದಿ.
ಕೊನೆಯ ಪುಟದ ಹಿಂದಿನ ಪುಟದಲ್ಲಿ, ಅಂದರೆ ಹದಿನೈದನೆ ಪುಟದಲ್ಲಿ ’ಡೀಡ್ಸ್ ಸುತ್ತ’ದಲ್ಲಿ ಮಂಗಳೂರಿನ ಸುತ್ತಮುತ್ತದಲ್ಲಿ ನಡೆದ ಮಹಿಳಾಪರವಾದ ಚಟುವಟಿಕೆಗಳ ಪುಟ್ಟ ವರದಿಗಳಿರುತ್ತವೆ.
ಕೊನೆಯ ಪುಟ ’ಸಂವಾದ ಸಾಂತ್ವನ’. ಇದು ಬಹಳ ಮಹತ್ವದ ಪುಟ. ಒಂದು ದೃಷ್ಟಿಯಲ್ಲಿ ಇದು ಸಂವೇದಿಯ ಆತ್ಮ ಇದ್ದಂತೆ. ಯಾಕೆಂದರೆ ಇದು ಓದುಗರ ಜೊತೆ ನೇರ ಸಂವಾದವನ್ನು ನಡೆಸುತ್ತದೆ. ಇದು ಶಾಶ್ವತವಾದ ಅಂಕಣ. ಪ್ರತಿಬಾರಿಯೂ ಇಲ್ಲಿ ಒಂದು ಸಮಸ್ಯೆಯನ್ನು ಎತ್ತಿಕೊಳ್ಳಲಾಗುತ್ತದೆ. ಆ ಸಮಸ್ಯೆಯ ಬಗ್ಗೆ ಮಾನವೀಯವಾದ ವರಿದಿಯನ್ನು ನೀಡಲಾಗುತ್ತದೆ. ಆ ಸಮಸ್ಯೆಯನ್ನು ಹೇಗೆ ಪರಿಹರಿಸಬಹುದು ಎಂಬುದರ ಬಗ್ಗೆ ಕೆಲವು ಪ್ರಶ್ನೆಗಳನ್ನು ಓದುಗರ ಮುಂದಿಡುತ್ತದೆ. ಅದಕ್ಕೆ ಓದುಗರಿಂದ ಬಂದ ಅಭಿಪ್ರಾಯಗಳನ್ನು ಸಂವೇದಿ ತನ್ನ ಮುಂದಿನ ಸಂಚಿಕೆಯಲ್ಲಿ ಪ್ರಕಟಿಸುತ್ತದೆ. ಅದಕ್ಕೆ ಕೊನೆಯ ಪುಟದ ಹಿಂದಿನ ಪುಟವನ್ನು ಬಳಸಿಕೊಳ್ಳುತ್ತದೆ. ಓದುಗರು ಇದಕ್ಕೆ ಪೂರಕವಾಗಿ ಸ್ಪಂದಿಸುತ್ತಿದ್ದಾರೆ ಎಂಬುದು ಅಲ್ಲಿ ಪ್ರಕಟವಾದ ಪತ್ರಗಳನ್ನು ಓದಿದರೆ ತಿಳಿಯುತ್ತದೆ.

ಇಡೀ ಸಂವೇದಿಯೇ ಒಂದು ಸಮಸ್ಯೆಯ ಗುಚ್ಚದಂತೆ ಕಲಾತ್ಮವಾಗಿ ರೂಪಗೊಳ್ಳುತ್ತದೆ. ಹಾಗೆ ರೂಪುಗೊಂಡು ನಿಗದಿತ ಸಮಯಕ್ಕೇ ಓದುಗರ ಮುಂದೆ ಬರುತ್ತದೆ. ಆಗ ಆ ಸಮಸ್ಯೆ ಓದುಗರದೂ ಆಗಿಬಿಡುತ್ತದೆ. ಸಮೂಹದ ಪಾಲ್ಗೊಳ್ಳುವಿಕೆ ಇಲ್ಲಿ ಬಹು ಮುಖ್ಯವಾದುದು

ಪ್ರತಿಷ್ಟಿತ, ಜನಪ್ರಿಯ ಪತ್ರಿಕೆಗಳು ಸಾಮಾನ್ಯವಾಗಿ ಯಾವುದೋ ಒಂದು ವ್ಯಕ್ತಿಯ ಜೋತೆ, ಇಲ್ಲವೇ ಪಕ್ಷರಾಜಕಾರಣದ ಜೊತೆ ಪ್ರತ್ಯಕ್ಷವಾಗಿ ಇಲ್ಲವೇ ಅಪ್ರತ್ಯಕ್ಷವಾಗಿ ಗುರುತಿಸಿಕೊಂಡಿರುತ್ತವೆ. ಅವು ಕಾಲಕ್ಕನುಗುಣವಾಗಿ ವ್ಯವಸ್ಥೆಯೊಡನೆ ರಾಜಿ ಮಾಡಿಕೊಳ್ಳುತ್ತವೆ. ಆದರೆ ಸಾಮಾಜಿಕ ಸಮಸ್ಯೆಗಳೊಡನೆ ಸೆಣಸಾಡುತ್ತಾ ಪರಿವರ್ತನೆಯ ಕನಸನ್ನು ಹುಟ್ಟುಹಾಕುತ್ತಾ, ಮನಸ್ಸುಗಳನ್ನು ಕಟ್ಟುವ ಕಾಯಕದಲ್ಲಿ ಸಂವೇದಿ, ಸಂವಾದ, ಮಾನಸ, ಶೈನಿ[ಕೈಬರಹದ ಪತ್ರಿಕೆ]ಯಂಥ ಪತ್ರಿಕೆಗಳು ತೊಡಗಿಕೊಂಡಿರುವುದು ಭರವಸೆಗೆ ಕಾರಣವಾಗಿದೆ.

ಸಂವೇದಿಯಂಥ ಪತ್ರಿಕೆಗಳು ಸಮಾಜದ ಪಿಸುನುಡಿಗಳಿದ್ದಂತೆ. ಅವು ಪಿಸುನುಡಿಗಳೇ ಆಗಿದ್ದರೂ ಸಮಾಜದ ನಡುವಿನಿಂದ ಎಳುತ್ತಿರುವ ಶಕ್ತಿಯುತವಾದ ಧ್ವನಿಗಳು. ಸ್ವಸ್ಥ ಸಮಾಜ ರಚನೆಯಲ್ಲಿ ಇಂಥ ಸಶಕ್ತ ಪಿಸುನುಡಿಗಳು ಮಹತ್ವದ ಪಾತ್ರ ವಹಿಸುತ್ತವೆ. ಯಾಕೆಂದರೆ ಸಮಾಜ ಪರಿವರ್ತನೆಯ ಬೀಜಗಳು ಇಂಥ ಪಿಸುನುಡಿಗಳಲ್ಲಿ ಅಡಗಿರುತ್ತವೆ.

[ಮಂಗಳೂರಿನಿಂದ ಪ್ರಕಟವಾಗುತ್ತಿರುವ ’ಸಂವೇದಿ’ಯ ದಶಮಾನೋತ್ಸವ ಸಂಚಿಕೆಗಾಗಿ ಬರೆದ ಲೇಖನ]

Wednesday, May 4, 2011

ಕಣ್ಣು ಕಿತ್ತ ಘಟನೆ; ನೋಡಿ ಪ್ರೇಮದಂದವ!




ರಘು ಎಂಬ ಪ್ರೇಮಿಯ ಕಣ್ಣು ಕಿತ್ತ ಘಟನೆ ಈಗ ನೇಪಥ್ಯಕ್ಕೆ ಸರಿದಿದೆ. ನನ್ನನ್ನು ಗಾಢವಾಗಿ ತಟ್ಟಿದ ಘಟನೆಯಿದು. ಗಾಢವಾಗಿ ತಟ್ಟಿದ್ದನ್ನು ಗದ್ಯದಲ್ಲಿ ಹಿಡಿದಿಡುವುದು ಕಷ್ಟ. ಅದು ಮೌನದಲ್ಲಿ ಮಾಗಬೇಕು. ಪದ್ಯದಲ್ಲಿ ಅರಳಬೇಕು. ಆದರೆ ಪದ್ಯ ನನಗೆ ಒಲಿಯದ ಮಾಧ್ಯಮ.

ಪಂಚೆಂದ್ರಿಯಗಳಾಚೆ ತುಡಿಯಲಾರದ್ದು ಪ್ರೀತಿಯೇ ಅಲ್ಲ ಎಂದು ಬಲವಾಗಿ ನಂಬಿರುವವಳು ನಾನು. ಲೌಕಿಕವನ್ನು ಮೀರಿ ಪ್ರೀತಿ ಇನ್ಯಾವುದಕ್ಕೋ ತುಡಿಯಬೇಕು. ಅಂಥ ಪ್ರೇಮಾನುಭೂತಿ ಎಂದೂ ಜೀವವಿರೋಧಿಯಾಗಲು ಸಾಧ್ಯವೇ ಇಲ್ಲ. ಆದರೆ ಕಣ್ಣು ಕಿತ್ತ ಪ್ರಕರಣದಲ್ಲಿ ಪ್ರೀತಿ ಆ ಹಂತವನ್ನು ಏರಲು ಪ್ರಯತ್ನಿಸಿತ್ತೇ? ಇಲ್ಲ. ಇಲ್ಲಿ ಅದು ಜೀವವಿರೋಧಿಯಾಗಿ, ಹಿಂಸ್ರಾರೂಪ ಪಡೆದಿದೆ. ಮಾನವೀಯವಾಗಿ ಸ್ಪಂದಿಸಬೇಕಾದ ಸಂಗತಿಯೊಂದು ಮನುಷ್ಯನ ಅನಾಗರಿಕ ವರ್ತನೆಗಳಿಂದ ರಕ್ತಲೇಪನಗೊಂಡಿದೆ.

ಯಾಕೆ ಹಾಗಾಯ್ತು? ಹಾಗಾದರೆ ರಘು-ಅನುಷಾ ಪರಸ್ಪರ ಪ್ರೀತಿಸಿದ್ದು ಸುಳ್ಳೆ?
ಸುಳ್ಳಲ್ಲ ಎಂಬುದು ಅವರ ನಡವಳಿಕೆಗಳಿಂದ, ಹೇಳಿಕೆಗಳಿಂದ ಗೊತ್ತಾಗುತ್ತದೆ. . ಎಲ್ಲಾ ಪ್ರೇಮಿಗಳಂತೆ ಅವರೂ ಪ್ರೀತಿಸಿದ್ದರು. ಪಂಚೇಂದ್ರಿಯಗಳ ವಶವಾದರು. ರೂಪ, ಗಂಧ, ಸ್ವಾದ, ಸ್ಪರ್ಶ, ಮಾತುಗಳು ವರ್ತಮಾನವನ್ನು ಮರೆಸಿಬಿಟ್ಟವು. ಪ್ರೇಮದಮಲಿನಲಿ ಅವರು ತೇಲಿ ಹೋದರು. ಆ ಸ್ಥಿತಿಯನ್ನು ಉಮರ್ ಖಯ್ಯಾಮ್ ಹೀಗೆ ಹೇಳುತ್ತಾನೆ;

’ಅಲ್ಲಿ ಮರದಡಿಯಲ್ಲಿ ನಲ್ಗಾವ್ಯವೊಂದಿರಲು,
ರೊಟ್ಟಿಯೊಂದಿನಿಸೊಂದು ಕುಡಿಕೆಯಲಿ ಮಧುವು,
ಮೇಣ್ ಮುಗುದೆ, ನೀನೆನ್ನ ಬಳಿ ಕುಳಿತು ಪಾಡಲಹ!
ಕಾಡಾದೊಡೇನದುವೆ ಸಗ್ಗಸುಖವೆನಗೆ.’

ಆ ಸ್ವರ್ಗಸುಖದಲ್ಲಿ ತಮ್ಮ ಮನೆತನ, ಅಂತಸ್ತು, ಗೌರವ, ಘನತೆಗಳೆಲ್ಲವನ್ನು ಮರೆತುಬಿಟ್ಟರು. ಆದರೆ ಅನುಷಳ ಮನೆಯವರು ಮರೆಯಲಿಲ್ಲ. ಯಾಕೆಂದರೆ ಅವರು ಆರ್ಥಿಕವಾಗಿ ರಘುವಿಗಿಂತ ಮೇಲ್ಮಟ್ಟದಲ್ಲಿದ್ದರು. ತಮ್ಮದೇ ಜಾತಿಯವನಾಗಿದ್ದರೂ ರಘುವನ್ನು ಅಳಿಯನೆಂದು ಒಪ್ಪಿಕೊಳ್ಳಲು ಅವರು ಸಿದ್ಧರಿರಲಿಲ್ಲ. ಹಾಗಾಗಿ ತಮ್ಮ ಪ್ರಭಾವವನ್ನು ಬಳಸಿ ಅನುಷಾಳಿಂದ ರಘುವನ್ನು ದೂರ ಮಾಡಿದರು. ಎರಡು ವರ್ಷ ಕಡಿಮೆ ಅವಧಿಯೇನಲ್ಲ. ಒಬ್ಬ ಮನುಷ್ಯನ ಬ್ರೈನ್ ವಾಶ್ ಮಾಡಲು ಅಷ್ಟು ಅವಧಿ ಸಾಕು. ಅನುಷಾ ಹೆತ್ತವರ ಅಜ್ನಾನುವರ್ತಿಯಾದಳು. ಆಕೆ ಇನ್ನೊಂದು ಮದುವೆಗೆ ಸಿದ್ಧವಾದಳು.

ರಘುವಿನ ದುರಂತ ಕಥೆಯನ್ನು ಕೇಳಿದಾಗ ನನಗೆ ಪಕ್ಕನೆ ನೆನಪಾಗಿದ್ದು ಸಿದ್ದಲಿಂಗಯ್ಯನವರ ’ರಾಣಿಯ ಪ್ರೇಮ’ ಎಂಬ ಕವನ. ”ಕಪ್ಪು ಕಾಡಿನ ಹಾಡು” ಎಂಬ ಕವನ ಸಂಕಲನದಲ್ಲಿರುವ ಈ ಹಾಡನ್ನು ನೀವೂ ಒಮ್ಮೆ ಓದಿಬಿಡಿ;

ಉತ್ತರ ದಿಕ್ಕಿಗೆ ರಾಣಿಯೊಬ್ಬಳು
ಇದ್ದಳು ಬಲು ಹಿಗ್ಗಿ
ಎತ್ತರದಲ್ಲಿ ರಾಣಿ ಇದ್ದಳು
ಕಣ್ಣುಗಳಿಗೆ ಸುಗ್ಗಿ
ಆಳನು ಕರೆದಳು ಪಟ್ಟದ ರಾಣಿ
ಆಳು ಬಾರೊ ನನ್ನ
ಜೀತಗಾರನ ಜೊತೆಗೆ ಕರೆದಳು
ಪ್ರೀತಿ ಮಾಡೊ ನನ್ನ

ಆಳು; ಕೊಕ್ಕರೆಯೊಂದು ಮೀನ ಪ್ರೀತಿಸಿತು
ಈ ಪ್ರೇಮದ ಗುಟ್ಟೇನು
ಮಸೆದ ಕತ್ತಿಯು ಕೊರಳ ಪ್ರೀತಿಸಿತು
ಈ ಒಲವಿನ ಪರಿಯೇನು?
.........................
ಜೀತಗಾರನು ಜೀವ ಭಯದಲ್ಲಿ
ಊರ ಬಿಡುವೆನೆಂದ
ಬೇಲಿ ಮರೆಯಲ್ಲಿ ಹೆಣ ಬಿದ್ದಿತ್ತು
ನೋಡಿ ಪ್ರೇಮದಂದ.

ಇದಕ್ಕೆ ವ್ಯಾಖ್ಯಾನದ ಅವಶ್ಯಕತೆ ಇಲ್ಲವೆನಿಸುತ್ತದೆ. ವರ್ಣಸಂಕರದ, ವರ್ಗಾಂತರದ ಪ್ರೇಮ ಪ್ರಕರಣಗಳೇ ಹಾಗೆ ಅವು ಧಾರುಣ ಅಂತ್ಯವನ್ನು ಕಂಡದ್ದೇ ಹೆಚ್ಚು. ಉನ್ನತ ಕುಲದ ಹೆಣ್ಣೊಬ್ಬಳು ಕೆಳಸ್ತರದ ಇಲ್ಲವೇ ಅಂತ್ಯಜನಾದ ಗಂಡೊಬ್ಬನನ್ನ ಪ್ರೀತಿಸಿದರೆ ಅದು ದುರಂತದಲ್ಲಿ ಅಂತ್ಯಗೊಳ್ಳುವುದೇ ಹೆಚ್ಚು. ಇಲ್ಲಿ ಪ್ರಭುತ್ವ ಕೂಡಾ ಮೇಲ್ಜಾತೀಯ ಮತ್ತು ಮೇಲ್ವರ್ಗದ ಪರವಾಗಿಯೇ ನಿಲ್ಲುತ್ತದೆ. ಆದರೆ ಉನ್ನತ ಸ್ತರದ ಗಂಡೊಬ್ಬ ಕೆಳವರ್ಗದ ಸ್ತ್ರೀಯನ್ನು ಇಷ್ಟಪಟ್ಟರೆ ಅದೇನೂ ಅಪರಾಧವಾಗುವುದಿಲ್ಲ. ಆತ ತನ್ನ ಜಾತಿಯಲ್ಲಿಯೇ,ತನ್ನ ಅಂತಸ್ತಿಗನುಗುಣವಾದ ಹೆಣ್ಣೊಬ್ಬಳನ್ನು ಮದುವೆಯಾಗುತ್ತಾನೆ. ಇವಳನ್ನು ’ಇಟ್ಟುಕೊಳ್ಳುತ್ತಾನೆ’ ಅದನ್ನು ಸಮಾಜ ಒಪ್ಪಿಕೊಳ್ಳುತ್ತದೆ.

ರಘು ಪ್ರಕರಣವನ್ನೇ ನೋಡಿ; ಇಲ್ಲಿ ಹುಡುಗಿ ಮನೆಯವರು ಶ್ರೀಮಂತರು. ಜೊತೆಗೆ ರಾಜಕೀಯ ವ್ಯಕ್ತಿಗಳ ನಂಟುಳ್ಳವರು. ಹಾಗಾಗಿಯೇ ಈ ಪ್ರಕರಣವನ್ನು ಹೆಚ್ಚು ಲಂಬಿಸದಂತೆ ಮಾಧ್ಯಮಗಳ ಮೇಲೆ ಒತ್ತಡವನ್ನು ತಂದರು ಆದರೆ ಆ ವೇಳೆಗಾಗಿಯೇ ಆ ಪ್ರಕರಣ ಮಾಧ್ಯಮಗಳಲ್ಲಿ ಸಾಕಷ್ಟು ಪ್ರಚಾರವನ್ನು ಪಡೆದುಕೊಂಡಿತ್ತು. ಅನಿವಾರ್ಯವಾಗಿ ಪೋಲಿಸ್ ಇಲಾಖೆ ಕಣ್ಣು ಕಿತ್ತ ಆರೋಪ ಹೊತ್ತವರನ್ನು ಬಂದಿಸಲೇ ಬೇಕಾಯ್ತು.

ಮುಂದೆ ಈ ಪ್ರಕರಣ ಯಾವ ಹಾದಿ ಹಿಡಿಯುತ್ತೋ ಗೊತ್ತಿಲ್ಲ. ಆದರೆ ರಘುವಿಗಾದ ಅನ್ಯಾಯವನ್ನು ತುಂಬಿ ಕೊಡಲು ಯಾರಿಂದಲೂ ಸಾಧ್ಯವಿಲ್ಲ. ಯಾಕೆಂದರೆ ಕಣ್ಣು ಬಹು ಮುಖ್ಯವಾದ ಅಂಗ.
ಈ ಪ್ರಕರಣದ ಹೊರ ಆವರಣದಲ್ಲಿ ನಿಂತು ನೋಡುತ್ತಿರುವ ನಾವು ಅದನ್ನು ಕಪ್ಪು ಬಿಳುಪಾಗಿ ವ್ಯಾಖ್ಯಾನಿಸಬಹುದು. ಇದನ್ನು ಎಸ್.ನಾರಾಯಣ್ ಎಂಬ ಸಿನೇಮಾ ನಿರ್ದೇಶಕ ’ನೆನಪಿದೆಯಾ ಓ ಗೆಳತಿ’ ಎಂಬ ಸಿನೇಮಾ ತೆಗೆಯುವುದರ ಮುಖಾಂತರ ಚೆನ್ನಾಗಿಯೇ ಮಾಡುವವರಿದ್ದಾರೆ!
ಆದರೆ ಅದರ ಗೋಜಲು, ಗಂಭೀರತೆಗಳೆಲ್ಲಾ ಅದರಲ್ಲಿ ನೇರವಾಗಿ ಭಾಗವಹಿಸಿದವರಿಗಷ್ಟೇ ಗೊತ್ತಾಗುವ ಸಂಗತಿ.
ಒಳಾವರಣದಲ್ಲಿರುವ ರಘುವಿನ ಗೆಳೆಯರು ಮತ್ತು ಅನುಷಾ ಬಂಧುಗಳು ಕಣ್ಣು ಕಿತ್ತ ಘಟನೆಯ ಭಾಗಿದಾರರು ಮತ್ತು ಸಾಕ್ಷಿದಾರರು. ಆದರೆ ಇದೆಲ್ಲದರ ಕೇಂದ್ರ ಬಿಂದು ಅನುಷಾ ಮತ್ತು ರಘು. ಅವರ ಆತ್ಮಸಾಕ್ಷಿಗೆ ಏನು ಅನ್ನಿಸಿದೆಯೋ ಅದು ಮಾತ್ರ ಸತ್ಯ. ಬಹುಶಃ ಎರಡು ವರ್ಷದ ಹಿಂದೆ ಪರಸ್ಪರ ಮೆಚ್ಚಿ ಮದುವೆಯಾಗಿ, ಎರಡು ತಿಂಗಳು ದಾಂಪತ್ಯ ಜೀವನ ನಡೆಸಿದ ಅವರಿಗೆ ಪ್ರೀತಿಯ ಬಗ್ಗೆ ಇದ್ದ ಭ್ರಮೆಗಳೆಲ್ಲಾ ಕಳಚಿರಬೇಕು. ಪಂಚೇಂದ್ರಿಯಗಳಾಚೆ ಅವರ ಪ್ರೇಮ ತುಡಿಯಲಿಲ್ಲ. ಒಂದು ವೇಳೆ ತುಡಿದಿದ್ದರೆ ಅದು ಪ್ರೇಮಸಾಪಲ್ಯದ ಒಳದಾರಿಗಳನ್ನು ತಾನಾಗಿಯೇ ಹುಡುಕಿಕೊಳ್ಳುತ್ತಿತ್ತು.

ಅನುಷಾ ತನ್ನ ನಿರ್ಧಾರದ ಬಗ್ಗೆ ಗಟ್ಟಿಯಾಗಿದ್ದಾಳೆ. ರಘು ಕೂಡಾ ದುರಂತ ಪ್ರೇಮಿಯಂತೆ ಕಾಣುತ್ತಿಲ್ಲ. ಮಾಧ್ಯಮವನ್ನು ಅವರು ಎದುರಿಸಿದ ರೀತಿಯಲ್ಲಿಯೇ ಅದು ವ್ಯಕ್ತವಾಗುತ್ತಿತ್ತು. ’ಒಲವೇ ಜೀವನ ಲೆಖ್ಖಾಚಾರ’ ನಿಜವಾಗಿದೆ. ಪ್ರೇಮ ಮತ್ತೆ ಸೋತಿದೆ.