Monday, June 4, 2012

”ಲ್ಯಾಂಡ್ ಬ್ಯಾಂಕ್” ಯೋಜನೆ; ರೈತರ ಬದುಕಿಗೇ ಚಪ್ಪಡಿ ಕಲ್ಲು


 

ನಾಳಿದ್ದು ಬೆಂಗಳೂರಿನಲ್ಲಿ ’ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ’ ನಡೆಯಲಿದೆ.  ನಮ್ಮ ಕರ್ನಾಟಕ ಸರಕಾರವು ದುಡ್ಡಿರುವ ದೊಡ್ಡಪ್ಪರ ಮುಂದೆ ನಿಂತು ’ ನಮ್ಮಲ್ಲಿ ಯಥೇಚ್ಛವಾಗಿ    ಭೂಮಿ, ನೀರು, ವಿದ್ಯುತ್ತು ಇದೆ. ಅದನ್ನೆಲ್ಲಾ ನಿಮಗೆ ನಾವು ಉದಾರವಾಗಿ ನೀಡುತ್ತೇವೆ. ಇದನ್ನೆಲ್ಲಾ ಬಳಸಿಕೊಂಡು ನೀವಿಲ್ಲಿ ನಿಮಗಿಷ್ಟ ಬಂದ ಕೈಗಾರಿಕೆಗಳನ್ನು ಸ್ಥಾಪಿಸಿ. ನಿಮ್ಮ ದುಡ್ಡಿನ ಚೀಲವನ್ನು ತುಂಬಿಸಿಕೊಳ್ಳಿ’ ಎಂದು ಡಂಗುರ ಸಾರುವ ಪ್ರದರ್ಶನ ಸಮಾವೇಶವಿದು.

 ”ನಮ್ಮಲ್ಲಿ ಭೂಮಿಯಿದೆ. ನೀರನ್ನು ಹೇಗಾದರೂ ಹೊಂದಿಸಿಕೊಳ್ಳುತ್ತೇವೆ. ನಮಗೆ ವಿದ್ಯುತ್ತು ನೀಡಿ. ನಾವು ನಿಮಗೆ ಆಹಾರ ಭದ್ರತೆಯನ್ನು ನೀಡುತ್ತೇವೆ’ ಇದು ನಮ್ಮ ರೈತರು ನಮ್ಮ ಸರಕಾರವನ್ನು ಅಂಗಲಾಚುತ್ತಿರುವ ಪರಿ.

ಮಾನವನ ಮೂಲಭೂತ ಅವಶ್ಯಕತೆಗಳೇನು? ನೀರು, ಆಹಾರ,ವಸತಿ. ಇದು ವರ್ತಮಾನದ ಅವಶ್ಯಕತೆ. ಪ್ರತಿಯೊಂದು ಜೀವಿಗೂ ನೀರು, ಆಹಾರ ಬೇಕೇ ಬೇಕು. ಇದನ್ನು ಈ ನಾಡಿನಲ್ಲಿ ದುಡ್ಡು ಹಾಕಿ ದುಡ್ಡನ್ನು ಬೆಳೆಯಬೇಕೆಂದು ಆಶಿಸುವ ಬಂಡವಾಳಗಾರನಿಂದ ನಿರೀಕ್ಷಿಸಲು ಸಾಧ್ಯವೇ? ಮಾತೆತ್ತಿದರೆ ನಮ್ಮ ಸರಕಾರ ಅಬಿವೃದ್ದಿಯ ಜಪ ಮಾಡುತ್ತಿದೆ. ಆದರೆ ನಮಗೆಂಥಾ ಅಭಿವೃದ್ದಿ ಬೇಕು? ಇದು ಈಗ ನಾವು ಕೇಳಿಕೊಳ್ಳಬೇಕಾದ ಅತಿ ಮುಖ್ಯ ಪ್ರಶ್ನೆ. ಪರಿಸರಕ್ಕೆ ಧಕ್ಕೆಯನ್ನುಂಟುಮಾಡಿ ಕೈಗೆತ್ತಿಕೊಳ್ಳುವ ಯೋಜನೆಗಳು ಖಂಡಿತವಾಗಿಯೂ ನಮ್ಮ ಮುಂದಿನ ಪೀಳಿಗೆಯನ್ನು ಸಂಕಷ್ಟಕ್ಕೆ ದೂಡುತ್ತವೆ.

ರೈತನೊಬ್ಬನಿಗೆ ಭೂಮಿಯೆಂದರೆ ಕೇವಲ ಮಣ್ಣಲ್ಲ. ಅದವನ ಜೀವಧಾತು. ಒಂದು ಉದಾಹರಣೆಯನ್ನು ನೀಡುತ್ತೇನೆ. ನನ್ನಜ್ಜ ತೀರಿಕೊಂಡ ನಂತರ ನಮ್ಮ ಅಜ್ಜಿಯನ್ನು ನೋಡಿಕೊಳ್ಳುವ ಜವಾಬ್ದಾರಿ ನಮಗೆ ಬಂತು. ಯಾಕೆಂದರೆ ಅವರಿಗೆ ಗಂಡು ಸಂತತಿಯಿರಲಿಲ್ಲ. ಹತ್ತಿರದ ಬಂಧುಗಳಿರಲಿಲ್ಲ. ಇದ್ದ ಒಂದಿಬ್ಬರು ಅಜ್ಜಿ ಅವರಿಗೆ ಆಸ್ತಿ ನೀಡಲಿಲ್ಲ ಎಂಬ ಕಾರಣದಿಂದ ಅವರತ್ತ ತಿರುಗಿಯೂ ನೋಡಲಿಲ್ಲ. ತುಂಬಾ ಸ್ವಾಭಿಮಾನಿಯಾದ ನಮ್ಮಜ್ಜಿ ಅಳಿಯನ ಮನೆಯಲ್ಲಿ ಬಂದಿರಲಾರರು ಎಂಬುದು ನಮಗೆ ಗೊತ್ತಿತ್ತು. ನಾವು, ಮೊಮ್ಮಕ್ಕಳು ಅಲ್ಲಿ ಶಾಲೆಗೆ ಹೋಗಲು ಇದ್ದುಕೊಂಡು ಒಂದಷ್ಟು ವರ್ಷ ಕಳೆದೆವು. ನಮ್ಮ ಮನೆ ಹತ್ತಿರವೇ ಆಸ್ತಿಯೊಂದು ಮಾರಾಟಕ್ಕೆ ಬಂದಿತು. ನಾವು ನಮ್ಮಜ್ಜಿಯನ್ನು ಹತ್ತಿರದಲ್ಲಿಟ್ಟುಕೊಂಡು ಚೆನ್ನಾಗಿ ನೋಡಿಕೊಳ್ಳಬಹುದೆಂದು ಅಲ್ಲಿಯ ಆಸ್ತಿಯನ್ನು ಮಾರಿ, ಈ ಜಮೀನನ್ನು ಖರೀದಿಸಿ ಅಲ್ಲೊಂದು ಪುಟ್ಟ ಮನೆ ಕಟ್ಟಿ ಅಜ್ಜಿಯನ್ನು ಇಲ್ಲಿಗೆ ಕರೆ ತಂದೆವು. ಆದರೆ ಅಜ್ಜಿ ಮಂಕಾಗಿ ಒಂದು ತಿಂಗಳಾಗುವಷ್ಟರಲ್ಲಿ ತೀರಿಕೊಂಡರು…ಆ ಗಿಲ್ಟ್ ನಮ್ಮನ್ನಿಂದಿಗೂ ಕಾಡುತ್ತಿದೆ.
ಬೇರುಗಳನ್ನು ಬಿಟ್ಟು ಬದುಕುವುದು ಕಷ್ಟ! ಈಗ ಸರಕಾರ ಬೇರುಗಳನ್ನು ಕೀಳುವ ಕೆಲಸ ಮಾಡುತ್ತಿದೆ.
 ಎಂದೋ ಬರಬಹುದಾದ ಕೈಗಾರಿಕೆಗಳಿಗಾಗಿ ಬಂಡವಾಳಶಾಹಿಗಳಿಗೆ ಭೂಮಿ ಒದಗಿಸುವ ದೃಷ್ಟಿಯಿಂದ ಸ್ಥಾಪಿಸಲಾಗಿರುವ ಯೋಜನೆಯೇ  ’ಲ್ಯಾಂಡ್ ಬ್ಯಾಂಕ್’ ಯೋಜನೆ. ಈ ಯೋಜನೆಯಡಿ ಸರಕಾರವು ರೈತರಿಂದ ಈಗಾಗಲೇ ಲಕ್ಷಾಂತರ ಎಕ್ರೆ ಭೂಮಿಯನ್ನು ವಶಪಡಿಸಿಕೊಂಡಿದೆ. ಆದರೆ ಅಲ್ಲಿ ಉದ್ದೇಶಿತ ಯೋಜನೆಗಳು ಅನುಷ್ಠಾನಗೊಳ್ಳದೆ. ಅವೆಲ್ಲಾ ಭೂಗಳ್ಳರ. ದಳ್ಳಾಳ್ಳಿಗರ, ರಿಯಲ್ ಎಸ್ಟೇಟ್ ಏಜೆಂಟರ ಪಾಲಾಗುತ್ತಿದೆ. ಈ ಅವ್ಯವಹಾರ ನ್ಯಾಯಾಲಯದ ಕೆಂಗೆಣ್ಣಿಗೂ ಗುರಿಯಾಗಿದೆ.  
ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ತನ್ನ ಕೃಷಿ ಜಮೀನು ಕಳೆದುಕೊಂಡ ಮುನಿಯಮ್ಮ ಎಂಬ ರೈತ ಮಹಿಳೆಯೊಬ್ಬರು ಪರಿಹಾರವನ್ನು ಕೋರಿ ಹಾಕಿಕೊಂಡ  ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿ ಡಿ.ವಿ ಶೈಲೇಂದ್ರ ಕುಮಾರ್ ಕಳೆದ ಜೂನ್ ನಲ್ಲಿ ಸರಕಾರವನ್ನು ಪ್ರಶ್ನಿಸಿದ್ದು ಹೀಗೆ; ಸಾಧು ಸಂತರು, ಮಠಾದೀಶರು, ಅಧಿಕಾರಿಗಳು ಮತ್ತು ರಾಜಕಾರಣಿಗಳೊಡನೆ ಕರ್ನಾಟಕ ಕೈಗಾರೀಕಾ ಪ್ರದೇಶ ಅಬಿವೃದ್ಧಿ ನಿಗಮ [KIADB ] ಸಾರ್ವಜನಿಕರ ಹಣ ನುಂಗಿ ಹಾಕುವ ಕೆಲಸ ಮಾಡುತ್ತಿದೆ. ಕೆಐಎಡಿಬಿ ರಿಯಲ್ ಎಸ್ಟೇಟ್ ಆಗಿ ಪರಿವರ್ತನೆ ಹೊಂದಿದೆ. ಅದು ಕೈಗಾರಿಕಾ ಅಬಿವೃದ್ಧಿ ಹೆಸರಿನಲ್ಲಿ ರೈತರ ಕೃಷಿ ಭೂಮಿಯನ್ನು ವಶಪಡಿಸಿಕೊಂಡು ತನ್ನಲ್ಲಿ ಇರಿಸಿಕೊಳ್ಳುತ್ತಿದೆ. ನಂತರ ಅದನ್ನು ಕೇಳಿದವರಿಗೆಲ್ಲಾ ಬೇಕಾಬಿಟ್ಟಿ ಹಂಚುತ್ತದೆ. ಹೀಗೆ ವಶಪಡಿಸಿಕೊಂಡ ಭೂಮಿಯಲ್ಲಿ ಅಭಿವೃದ್ಧಿಪಡಿಸಿದ ನಾಲ್ಕು ಕೈಗಾರಿಕಾ ಪ್ರದೇಶಗಳನ್ನಾದರೂ ಹೆಸರಿಸಿ? ಎಂದು ಪ್ರಶ್ನಿಸಿದ್ದಲ್ಲದೆ, ಅಭಿವೃದ್ಧಿಮಾಡಲಾಗಿದೆ ಎನ್ನುವ ಕೈಗಾರಿಕಾ ಪ್ರದೇಶದಲ್ಲಿ ಕೇವಲ ಕಲ್ಯಾಣ ಮಂಟಪಗಳೇ ತುಂಬಿದೆ ಎಂದು ಹೈಕೋರ್ಟ್ ಛೀಮಾರಿ ಹಾಕಿದೆ.

ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ೫.೨೫ ಲಕ್ಷ ಕೋಟಿ ರೂ. ಹೂಡಿಕೆಯ ೯೧೩ ಒಪ್ಪಂದಗಳಿಗೆ ಸಹಿ ಮಾಡಿದೆ. ಸರಕಾರವೇ ಕೊಡುತ್ತಿರುವ ಮಾಹಿತಿಗಳ ಪ್ರಕಾರ ಈಗ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳು ೧೮. ಅವುಗಳಿಗೆ ಬೇಕಾಗುವ ಜಮೀನು ೪೮೦೫ ಎಕ್ರೆ ಮಾತ್ರ. ಆದರೆ ಸರಕಾರವು ಭೂ ಬ್ಯಾಂಕ್ ಹೆಸರಿನಲ್ಲಿ ಕೈಗಾರಿಕೆಗಳಿಗೆ ೧.೧೯ ಲಕ್ಷ ಎಕ್ರೆ ಮತ್ತು ವಿವಿಧ ಯೋಜನೆಗಳ ಹೆಸರಿನಲ್ಲಿ ೯ ಲಕ್ಷ ಎಕ್ರೆ ಭೂಮಿಯನ್ನು ರೈತರಿಂದ ವಶಪಡಿಸಿಕೊಳ್ಳುತ್ತಿದೆ. ಈಗಾಗಲೇ ಬಳ್ಳಾರಿಯಲ್ಲಿ ಮಿತ್ತಲ್ ಮತ್ತು ರೆಡ್ಡಿಗಳ ಬ್ರಹ್ಮಿಣಿ ಕಂಪೆನಿಗಳಿಗೆ ತಲಾ ಮೂರುಸಾವಿರ ಎಕ್ರೆ ಜಮೀನನ್ನು ವಶಪಡಿಸಿಕೊಳ್ಳಲಾಗಿದೆ. ಆ ಎರಡೂ ಯೋಜನೆಗಳು ಹಳ್ಳ ಹಿಡಿಯುವ ಹಂತದಲ್ಲಿದೆ. ಅಂದರೆ ಹೈಕೋರ್ಟ್ ಅನುಮಾನಪಟ್ಟಂತೆ ರಿಯಲ್ ಎಸ್ಟೇಟ್ ದಂಧೆ ಗರಿಗೆದರುತ್ತಿದೆಯಲ್ಲವೇ? ಅಲ್ಲೇ ಪಕ್ಕದಲ್ಲಿರುವ ಚಾಗನೂರು ಸಿರಿವಾರದ ರೈತರಿಂದ ಬಳ್ಳಾರಿ ವಿಮಾನ ನಿಲ್ದಾಣಕ್ಕಾಗಿ ವಶಪಡಿಸಿಕೊಂಡ ನೀರಾವರಿ ಜಮೀನಿನ ಕಥೆಯೂ ಇದೇ ಅಲ್ಲವೇ?

ನಾನೊಬ್ಬಳು ಗೃಹಿಣಿ. ನನ್ನ ಪತಿಯೊಬ್ಬ ಪತ್ರಕರ್ತ. ಆತನ ವೃತ್ತಿ ಬದುಕು ಎಷ್ಟು ಅಭದ್ರತೆಯಿಂದ ಕೂಡಿದೆಯೆಂದರೆ ಅತ ಆಗಾಗ ಕೆಲಸ ಬದಲಿಸುತ್ತಾನೆ.. ಹೀಗಾದರೆ ನಮಗೆ ಬೀದಿಯೇ ಗತಿ ಎಂದುಕೊಂಡ ನಾನು ನಾಲ್ಕು ವರ್ಷಗಳ ಹಿಂದೆ ಕೃಷಿ ಭೂಮಿಯೊಂದನ್ನು ಖರೀದಿಸಿದೆ. ಇಂದು ಅದು ನನ್ನ ಬದುಕು; ಕನಸು; ಭವಿಷ್ಯ. ಅದಿಲ್ಲದೆ ನನಗೆ ಅಸ್ತಿತ್ವವೇ ಇಲ್ಲ ಅನ್ನುವಷ್ಟರಮಟ್ಟಿಗೆ ಅದು ನನ್ನನ್ನು ಆವರಿಸಿಕೊಂಡಿದೆ. ನನಗೇ ಹೀಗೆ ಅನ್ನಿಸಬೇಕಾದರೆ ತಲೆಮಾರುಗಳಿಂದ ಬಳುವಳಿಯಾಗಿ ಬಂದಿರುವ ರೈತರಿಗೆ ಆ ಭೂಮಿ ಮೇಲಿನ ಮೋಹ ಎಷ್ಟಿರಬೇಡ? ಇಂತಹ ಭೂಮಿಯನ್ನು ರೈತ ದುಡ್ಡಿಗಾಗಿ ಮಾರಬೇಕಾದ ಅನಿವಾರ್ಯತೆ ಬಂದಿರಬೇಕಾದರೆ ಆತನ ಬದುಕು ಎಂತಹ ಹೀನಾಯ ಸ್ಥಿತಿಗಿಳಿದಿರಬಹುದು?

ರೈತರಿಗೆ ಭೂಮಿಯೆಂದರೆ ಕೇವಲ ಮಣ್ಣಲ್ಲ. ಅದವರ ಜೀವದ್ರವ್ಯ. ಅವರು ಮಳೆರಾಯನ ಕೈ ಹಿಡಿದಿರಬಹುದು. ಆತ ಆಗಾಗ ಕೈ ಕೊಡುತ್ತಿದ್ದಾನೆಂದು ಅವರು ಆತನಿಗೆ ಸೋಡಾಚೀಟಿ ಕೊಡುವುದಿಲ್ಲ. ಬದಲಾಗಿ ಆಗಾಗ ಮನೆಗೆ ಬೀಗ ಹಾಕಿ ಗುಳೆ ಹೋಗುತ್ತಾರೆ. ಅನುಕೂಲವಿದ್ದಲ್ಲಿ ಮೈಮುರಿದು ದುಡಿದು ಮತ್ತೆ ಇಲ್ಲಿಗೇ ಬರುತ್ತಾರೆ. ಭೂಮಿಯೆಂಬುದು ಅವರ ಪಾಲಿಗೆ ಮೂಲಧನ. ಅದರಲ್ಲಿ ತೆಗೆಯುವ ಬೆಳೆ ಬಡ್ಡಿಯಿದ್ದಂತೆ. ಈಗ ಸರಕಾರವೇ ಮೂಲಧನವನ್ನು ಕಸಿದುಕೊಂಡರೆ ಅವರೆಲ್ಲಿ ಹೋಗಬೇಕು?

ಕೈಗಾರಿಕೆಗಳಿಗೆ ಕೊಡುವ ನೀರು, ವಿದ್ಯುತ್ ಇತ್ಯಾದಿ ಮೂಲ ಸೌಕರ್ಯಗಳನ್ನು ರೈತರಿಗೇ ನೀಡಿ ಅವರನ್ನು ಸ್ವಾಭಿಮಾನಿಗಳನ್ನಾಗಿ ರೂಪಿಸುವ ಯೋಜನೆಗಳನ್ನು ಸರಕಾರ ಹಾಕಿಕೊಳ್ಳಬೇಕು. ಬದಲಾಗಿ ಅವರಿಗೆ ಯಥೇಚ್ಛ ಸಬ್ಸಿಡಿಗಳನ್ನು ನೀಡಿ  ಅವರನ್ನು ದಾಸ್ಯಕ್ಕೆ ದೂಡಬಾರದು; ಸೋಮಾರಿಗಳನ್ನಾಗಿ ಮಾಡಬಾರದು. ದುರ್ಭಲ ಮಗುವನ್ನು ಪ್ರತ್ಯೇಕವಾಗಿ ವಿಶೇಷ ಕಾಳಜಿ, ಅಕ್ಕರೆಗಳಿಂದ ನೋಡಿಕೊಳ್ಳಬೇಕು;ಸ್ವತಂತ್ರವಾಗಿ ಬದುಕಲು ಅನುವು ಮಾಡಿಕೊಡಬೇಕು. ಉಪೇಕ್ಷಿಸಬಾರದು.
ನಮ್ಮ ರಾಜ್ಯ ಕೈಗಾರಿಕೆಯಲ್ಲಿ ಅಬಿವೃದ್ಧಿ ಹೊಂದಬೇಕು ನಿಜ. ಅದಕ್ಕಾಗಿ ನಮ್ಮ ರಾಜ್ಯದ ಉತ್ಸಾಹಿ ಉದ್ದಿಮೆದಾರರಿಗೇ ಪ್ರೋತ್ಸಾಹ ನೀಡಬೇಕು. ಅವರನ್ನು.ಕೃಷಿಯಾದಾರೀತ ಉದ್ದಿಮೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡಿದರೆ ನಮ್ಮ ರೈತರ ಬದುಕನ್ನು ಎತ್ತರಿಸಬಹುದು. ಹಾಗೆ ಮಾಡಿದರೆ ಆ ಕ್ಷೇತ್ರಕ್ಕೊಂದು ಘನತೆ ಒದಗಿ ಬರಬಹುದು. ಇಲ್ಲವಾದರೆ ಅವನ ಕೃಶ ಶರೀರದಂತೆಯೇ ಅವನ ಬದುಕು ಕೂಡಾ ಬಹುದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿಯೇ ಉಳಿದು ಬಿಡಬಹುದು!

[ ವಿಜಯ ಕರ್ನಾಟಕದಲ್ಲಿ ಪ್ರಕಟವಾಗುತ್ತಿದ್ದ ನನ್ನ ಕಾಲಂ ’ಅನುರಣನ’ ಕ್ಕಾಗಿ ಬರೆದ ಅಪ್ರಕಟಿತ ಬರಹ ]



Tuesday, May 22, 2012

’ಯಾರಿಗೂ ಬೇಡದ ಪ್ರಾಮಾಣಿಕತೆ ನಿಂಗ್ಯಾಕೋ ಬೇಕಿತ್ತು ಮಹಾಂತೀ..?’



ಇದು ನಿನ್ನೆ ಸಾವನಪ್ಪಿರುವ ಕೆ.ಎ.ಎಸ್ ಅಧಿಕಾರಿ ಮಹಾಂತೇಶ್ ಅವರ ಆಕ್ಕ ತಮ್ಮನ ಶವದ ಮೇಲೆ ಬಿದ್ದು ರೋಧಿಸುತ್ತಾ ಕೇಳಿದ ಪ್ರಶ್ನೆ.
ಇದೇ ಪ್ರಶ್ನೆಯನ್ನು ಮೊನ್ನೆ ಮೊನ್ನೆ ದುಷ್ಕರ್ಮಿಗಳ ಧಾಳಿಗೆ ತುತ್ತಾಗಿ ಸಾವಿಗೀಡಾಗಿದ್ದ ದಾಂಡೇಲಿಯ ಎಸಿಎಫ಼್ ಮದನನಾಯಕ್ ಅವರ ಕುಟುಂಬದವರೂ ಕೇಳುತ್ತಿರಬಹುದಲ್ಲವೇ?

ಮುದ್ರಣ ಮಾಧ್ಯಮವು ಮಹಂತೇಶ್ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅದರ ಕುರಿತಾದ ವಿಸ್ತೃತ ವರಧಿಯನ್ನು  ಪ್ರಕಟಿಸಿದವು. ಅದು ಒಂದು ಸಮೂಹ ಮಾಧ್ಯಮಕ್ಕಿರುವ ಸಾಮಾಜಿಕ ಜವಾಭ್ದಾರಿ. ಅವು ನಿನ್ನೆ ಇನ್ನೊಂದು ಸುದ್ದಿಯನ್ನೂ ಪ್ರಕಟಿಸಿದವು. ಅದು ನಮ್ಮ ನಡುವಿನ ಪ್ರಮುಖ ಸಾಹಿತಿಯಾದ ಕುಂ. ವೀರಭದ್ರಪ್ಪ ಹೇಳಿದ ಮಾತುಗಳು-’ಸಮಾಜದಲ್ಲಿ ನಾಚಿಕೆ ಹಾಗೂ ಸಂಕೋಚ ಇಂದು ಸ್ಥಾನ ಪಲ್ಲಟವಾಗಿದೆ. ಕೇವಲ ರಾಜಕಾರಣಿಗಳಲ್ಲಿ ಮಾತ್ರವಲ್ಲ. ಎಲ್ಲಾ ವರ್ಗದ ಜನರಲ್ಲಿಯೂ ಇದು ಎದ್ದು ಕಾಣುತ್ತದೆ.’

 ಮೇಲೆ ಆ ಅಕ್ಕ ನೊಂದು ನುಡಿದ ಮಾತುಗಳು ಮತ್ತು ಸಮಾಜದ ಸಾಕ್ಷಿಪ್ರಜ್ನೆಯಂತಿರುವ ಸಾಹಿತಿಯೊಬ್ಬರು ಹತಾಶೆಯಿಂದ ಹೇಳಿದ ಮಾತುಗಳ ಆವರಣಗಳು ಬೇರೆ ಬೇರೆಯಾಗಿರಬಹುದು. ಆದರೆ ಇವೆರಡೂ ಒಂದಕ್ಕೊಂದು ಅಂತರ್ ಸಂಬಂಧ ಹೊಂದಿವೆ. ಸಮಾಜದಲ್ಲಿ ಹಿಂಸೆಯ ವೈಭವೀಕರಣ ಹೆಚ್ಚಾಗುತ್ತಲಿದೆ. ಹಿಂಸೆಯೂ ಒಂದು ಮೌಲ್ಯವೇನೋ ಎಂದು ಭ್ರಮೆ ಹುಟ್ಟುವಷ್ಟರಮಟ್ಟಿಗೆ ಅದರ ಗುಣಗಾನ ನಡೆಯುತ್ತಿದೆ. ಅದರ ಪರಿಣಾಮ ಎಷ್ಟು ಘೋರವಾಗಿದೆಯೆಂದರೆ ಸಮಾಜ ತನ್ನ ಸೂಕ್ಷತೆಯನ್ನೇ ಕಳೆದುಕೊಳ್ಳುತ್ತಲಿದೆ. ನಾವೀಗ ಒಂದು ಕೊಲೆಯನ್ನೋ, ಆತ್ಮಹತ್ಯೆಯನ್ನೋ ಲೈವ್ ಆಗಿ ಯಾವುದೇ ಭಾವನೆಗಳಿಲ್ಲದೆ ನೋಡಬಲ್ಲೆವು; ಸಾಮೂಹಿಕವಾಗಿ ಎಂಜಾಯ್ ಮಾಡಬಲ್ಲೆವು. ಹಿಂದಾದರೆ ಅದಕ್ಕಾಗಿ ನಾವು ಪ್ರಾಣಿಗಳನ್ನು ಬಳಸಿಕೊಳ್ಳುತ್ತಿದ್ದೆವು ಈಗ ಮನುಷ್ಯರನ್ನು ಬಳಸಿಕೊಳ್ಳುತ್ತಿದ್ದೇವೆ. ಯಾಕೆ ಹೀಗಾದೆವು? ಮನುಷ್ಯನ ಮನಸ್ಸಿನಾಳದಲ್ಲಿರುವ ಮೃಗತ್ವ ಸೂಕ್ತ ಸಮಯಕ್ಕಾಗಿ ಹೊಂಚು ಹಾಕಿ ಕಾಯುತ್ತಿದೆಯೇ? ನಮ್ಮಲ್ಲೇ ನಾವು ಕೇಳಿಕೊಳ್ಳಬೇಕಾದ ಪ್ರಶ್ನೆಯಿದು.

ಮಹಂತೇಶ್ ಹತ್ಯೆ ಪ್ರಕರಣ ಅಥವಾ ದಾಂಡೇಲಿಯ ವನ್ಯಜೀವಿ ವಿಭಾಗದ ಸಹಾಯಕ ಸಂರಕ್ಷಣಾಧಿಕಾರಿ ಮಾಧವ ನಾಯಕ್ ಅವರ ಮೇಲಾದ ಹತ್ಯೆ ಮತ್ತು ಅನಂತರದ ಸಾವಿನ ಘಟನೆಗಳನ್ನೇ ತೆಗೆದುಕೊಳ್ಳಿ. ಅದಕ್ಕೆ ಸಂಬಂಧಪಟ್ಟವರು ಪ್ರತಿಕ್ರಿಯಿಸಿದ, ಪ್ರತಿಕ್ರಿಯಿಸುತ್ತಿರುವ ನಿಧಾನಗತಿಯನ್ನು ನೋಡಿದರೆ ’ನ್ಯಾಯದ ನಿಧಾನವೇ ನ್ಯಾಯದ ನಿರಾಕರಣೆ’ ಎಂಬ ನಾಣ್ನುಡಿಯ ನೆನಪು ಬರುತ್ತದೆಯಲ್ಲವೇ? ಗ್ರಾಮ ಸ್ವರಾಜ್ಯದ ಕನಸು ಕಂಡ ಅಹಿಂಹೆಯ ಹರಿಕಾರ ಗಾಂದೀಜಿ ಹುಟ್ಟಿದ ನಾಡಿನಲ್ಲಿ ಒಬ್ಬ ಒಬ್ಬ ಪ್ರಾಮಾಣಿಕ  ಕೆ.ಎ.ಎಸ್ ಅಧಿಕಾರಿ ಬೀದಿಯಲ್ಲಿ ಹೆಣವಾಗಿ ಬಿದ್ದರೆ ಯಾರಿಗೂ ಏನೂ ಅನ್ನಿಸುವುದಿಲ್ಲವೇ?
 ಅಧಿಕಾರ ಶಕ್ತಿಕೇಂದ್ರವಾದ ವಿಧಾನಸೌಧದಿಂದ ಕೂಗಳತೆಯ ದೂರದಲ್ಲಿ,  ತುಂಬಾ ಸರಳ ಹಾಗೂ ಪ್ರಮಾಣಿಕ ಅಧಿಕಾರಿಯೆಂದು ಹೆಸರು ಪಡೆದಿದ್ದ ಮಹಂತೇಶ್ ಮೇಲೆ ಕರ್ತವ್ಯದಲ್ಲಿದ್ದಾಗಲೇ ಮಾರಣಾಂತಿಕವಾಗಿ ಹಲ್ಲೆಯಾಗಿತ್ತು.
 ಸಹಕಾರ ಸಂಘಗಳ ಇಲಾಖೆ ಉಪನಿರ್ದೇಶಕ ರಾಗಿದ್ದ ಅವರ ಮೇಲಿನ ಹಲ್ಲೆಯಲ್ಲಿ ಭೂಮಾಪಿಯದ ಕೈವಾಡ ಇದೆಯೆಂದು ಶಂಕಿಸಲಾಗಿತ್ತು. ಸಹಕಾರಿಸಂಘಗಳ ಅಡಿಟಿಂಗ್ ಜವಾಬ್ದಾರಿ ಹೊತ್ತವರು ಮಹಾಂತೇಶ್. ಬೆಂಗಳೂರಿನಲ್ಲಿ೨೮೨ ಗೃಹನಿರ್ಮಾಣ ಸಂಘಗಳಿವೆ. ಇಲ್ಲಿ ಮೂರುಲಕ್ಷ ಕೋಟಿಗೂ ಹೆಚ್ಚು ಅವ್ಯವಹಾರ ನಡೆದಿರಬಹುದೆಂದು ಅಂದಾಜಿಸಲಾಗಿದೆ. ಅದನ್ನು ಇತ್ತೀಚೆಗಷ್ಟೇ ಅವರ ಇಲಾಖೆ ಬಯಲಿಗೆಳೆದಿತ್ತು. ಇಂತಹ ಗುರುತರವಾದ ಜವಾಬ್ದಾರಿಯನ್ನು ಹೊತ್ತ ಅಧಿಕಾರಿಯನ್ನು  ಮಾನವೀಯ ನೆಲೆಯಲ್ಲಾದರೂ ಭೇಟಿಮಾಡುವ ಸೌಜನ್ಯವನ್ನು ಈ ನಾಡಿನ ಯಾವ ರಾಜಕಾರಣಿಯೂ ಮಾಡಲಿಲ್ಲ. ಕೊನೆಯ  ಪಕ್ಷ ಪ್ರಮಾಣಿಕ ಅಧಿಕಾರಿಗಳಲ್ಲಿ ದೈರ್ಯ ತುಂಬುವ ಹೇಳಿಕೆಯನ್ನೂ ನೀಡಲಿಲ್ಲ. ಅದೇ ಬ್ರಷ್ಟಾಚಾರದ ಆರೋಪ ಹೊತ್ತ ರಾಜಕಾರಣಿಯನ್ನು ನೋಡಲು ಜೈಲಿಗೇ ಹಿಂಡುಗಟ್ಟಿಕೊಂಡು ಹೋಗುವ ರಾಜಕಾರಣಿಗಳಿದ್ದಾರೆ; ಮಠಾದೀಶರಿದ್ದಾರೆ. ಬ್ರಷ್ಟಾಚಾರ ಸರ್ವವ್ಯಾಪಿಯಾಗಿದೆ.
ನಮ್ಮ ರಾಜ್ಯದ ಗೃಹಮಂತ್ರಿಯವರೇ ಭೂಹಗರಣದಲ್ಲಿ ಸಿಕ್ಕಿಬಿದ್ದಿದ್ದರೆ ಅರಣ್ಯ ಸಚಿವರು ವಂಚನೆಯ ಆರೋಪಕ್ಕೆ ಒಳಗಾಗಿದ್ದವರು. ಇಂತವರಿಂದ ಎಂತಹ ಪ್ರಾಮಾಣಿಕತೆಯನ್ನು ನಿರೀಕ್ಷಿಸಲಾದೀತು? ಸಮಾಜದ ಕೆನೆಪದರದಲ್ಲಿರುವ ವ್ಯಕ್ತಿಗಳೇ ಬ್ರಷ್ಟರಾದರೆ ಅವರ ಕೈಕೆಳಗಿನ ಅಧಿಕಾರಿಗಳು ಅಸಹಾಯಕರಾಗುತ್ತಾರೆ.

ನಾವು ಸತತವಾಗಿ ಏನನ್ನು ಕೇಳುತ್ತೆವೆಯೋ, ನೋಡುತ್ತೆವೆಯೋ ಅದು ನಮ್ಮ ಆಲೋಚನಾಕ್ರಮದ ಮೇಲೆ ಪರೆಣಾಮ ಬೀರುತ್ತದೆ. ಒಂದು ಸಮಾಜವನ್ನು ಅದೋಗತಿಗೆ ತಳ್ಳಲು ಅದರ ಸಾಂಸ್ಕೃತಿಕ ಅನನ್ಯತೆಯನ್ನು ನಾಶಪಡಿಸಿದರೆ ಸಾಕು. ಆ ಕೆಲಸವನ್ನು ರಾಜಕಾರಣ ಮಾಡುತ್ತಲೇ ಬಂದಿದೆ ಪ್ರಜಾಪ್ರಭುತ್ವದ ನಾಲ್ಕು ಸ್ತಂಭಗಳಲ್ಲಿ ಒಂದಾದ ಮಾಧ್ಯಮ ಅದಕ್ಕೆ ಸಾತ್ ನೀಡುತ್ತಲಿದೆ. ಹಾಗಾಗಿ ಜನರು ಹತಾಶರಾಗುತ್ತಿದ್ದಾರೆ.  ಅವರಲ್ಲಿ ಪ್ರತಿಭಟನೆಯ ಧ್ವನಿ ಹುಟ್ಟುತ್ತಿಲ್ಲ. ರಾಷ್ಟ್ರಪಿತ ಗಾಂಧಿಯಂತೆ ಬಿಂಬಸಲ್ಪಟ್ಟ ಅಣ್ಣಾ ಹಜಾರೆಯವರ ಜನಾಂದೋನವೇ ಮಸುಕಾಗಿರುವುದೇ ಇದಕ್ಕೆ ಸಾಕ್ಷಿ. ಇಡೀ ವ್ಯವಸ್ಥೆಯೇ ಜಡ್ಡುಗಟ್ಟಿ ಹೋಗಿದೆ.

ಮಹಂತೇಶರ ಅಕ್ಕ ವೈಯಕ್ತಿಕ ಮಟ್ಟದಲ್ಲಿ ಕೇಳಿದ ಪ್ರಶ್ನೆಯನ್ನು ಒಂದು ಸಾವಿರ ವರ್ಷಗಳ ಹಿಂದೆ ಪಂಪ ಸಮೂಹದ ನೆಲೆಯಿಂದ ಕೇಳಿದ್ದ ಮತ್ತು ಅದಕ್ಕೆ ಉತ್ತರವನ್ನೂ ನೀಡಿದ್ದ
’ಒತ್ತಿ ತರುಂಬಿ ನಿಂದ ರಿಪುಭೂಜ ಸಮಾಜದ ಬೇರ್ಗಳಂ ನಭಕೆತ್ತದೆ
ಬಂಧು ತನ್ನ ಮರೆವೊಕ್ಕಡೆ ಕಾಯ್ವದೆ, ಚಾಗದ ಒಳ್ಪಿನ ಅಚ್ಚೊತ್ತದೆ,
ಮಾಣ್ದು ಬಾಳವ ಪುಳುವಾನಸನ್, ಅಜಾಂಡಮೆಂಬೊಂದು ಅತ್ತಿಯ
ಪಣ್ಣೊಳಿರ್ಪ ಪುಳುವಲ್ಲದೆ ಮಾನಸನೇ ಮುರಾಂತಕಾ?’

ಅಂತಹ ಹುಳ ಸಮಾನವಾದ ಬದುಕು ನಮಗೆ ಬೇಕೆ? ಬೇಡ ಎಂದು ಧಿಕ್ಕರಿಸಿ ನಿಂತ ಮಹಂತೇಶ್, ಮದನನಾಯಕರಂಥ ಅಧಿಕಾರಿಗಳನ್ನು ಉಳಿಸಿಕೊಳ್ಳಲು ನಾವೇನು ಮಾಡಬೇಕು? ಇದು ನಾಡಿನ ಪ್ರಜ್ನಾವಂತರು ತಮ್ಮೊಳಗೆ ಕೇಳಿಕೊಳ್ಳಬೇಕಾದ ಪ್ರಶ್ನೆ.


[ ವಿಜಯಕರ್ನಾಟಕದ ’ಅನುರಣನ’ ಅಂಕಣದಲ್ಲಿ ಪ್ರಕಟವಾದ ಬರಹ ]

Thursday, May 17, 2012

ಬರಗಾಲದಲ್ಲಿ ನೆನಪಾದ ಸೂಳೆಕೆರೆಗಳು ಮತ್ತು ಬಿದಿರಕ್ಕಿ






ಕಳೆದ ವಾರ ನಾನು ನನ್ನ ತವರೂರಿಗೆ ಹೋಗಿದ್ದೆ. ಕುಕ್ಕೆಸುಬ್ರಹ್ಮಣ್ಯ ಸಮೀಪದ ಬಾಳುಗೋಡು ಎಂಬ ಹಳ್ಳಿಯದು.ನಿತ್ಯಹರಿದ್ವರ್ಣದ ಪಶ್ಚಿಮ ಘಟ್ಟಶ್ರೇಣಿಯ ಸೆರಗಿನೂರು. ನನ್ನ ಮನೆಗೆ ಹೋಗುವ ರಸ್ತೆಯ ಎರಡೂ ಬದಿಗಳಲ್ಲಿ ದಟ್ಟವಾದ ಬಿದಿರುಹಿಂಡಿಲುಗಳಿವೆ. ಪ್ರತಿ ಬಾರಿ ಊರಿಗೆ ಹೋದಾಗಲೂ ಅವು ರಸ್ತೆಗೆ ಬಾಗಿ ನನಗೆ ಸ್ವಾಗತ ಕೋರುವುದು ಸಾಮಾನ್ಯ ಸಂಗತಿ. ಆದರೆ ಈ ಬಾರಿಯ ಸ್ವಾಗತ ಸಾಮಾನ್ಯವಾಗಿರಲಿಲ್ಲ. ಅವು ತೆನೆ ತುಂಬಿ ಭತ್ತದ ಬಾರಕ್ಕೆ ಬಳುಕುತ್ತಿದ್ದವು.
ನನ್ನ ಮನಸ್ಸು ಸುಮಾರು ನಲ್ವತ್ತು ವರ್ಷಗಳ ಹಿಂದಕ್ಕೆ ಓಡಿತು.

ಅಂದು ಮಂಗಳವಾರ.ಇನ್ನೂ ಬೆಳಕು ಹರಿದಿರಲಿಲ್ಲ. ನನ್ನಮ್ಮ ನನ್ನನ್ನು ಕಂಕುಳಲ್ಲಿ ಎತ್ತಿಕೊಂಡಳು. ಇನ್ನೊಂದು ಕಯ್ಯಲ್ಲೆ ಒಂದು ದೊಡ್ಡ ಕುಕ್ಕೆ, ಕುಕ್ಕೆಯೊಳಗೊಂದು ಕತ್ತಿ. ತಲೆಯ ಮೇಲೆ ತುಳು ಭಾಷೆಯಲ್ಲಿ  ’ತಡ್ಪೆ’ ಎಂದು ಕರೆಯುವ ತುಳುವೇತರರು ಮೊರ ಎನ್ನುವ ಅಗಲವಾದ ಗೆರಸೆ. ಅದರ ಮೇಲೊಂದು ಪೊರಕೆ. ಬಿರಬಿರನೆ ಹೆಜ್ಜೆ ಹಾಕುತ್ತಾ ಕುಡುಮುಂಡೂರು ಹೊಳೆಯನ್ನು ದಾಟಿ, ಅದರ ಪಕ್ಕದ ಅಡ್ಕದಲ್ಲಿದ್ದ ಬಿದಿರು ಮೆಳೆಯತ್ತ ಸಾಗಿದವಳೇ ನನ್ನನ್ನು ಒಂದೆಡೆ ಕುಳ್ಳಿರಿಸಿದಳು. ಬೆಳ್ಳುಳ್ಳಿ ಮತ್ತು ಈರುಳ್ಳಿ ನಾಯಿಗಳು ನನಗೆ ಕಾವಲಾಗಿ ಅಕ್ಕ-ಪಕ್ಕ ಕುಳಿತವು. ಒಂದು ವಿಶಾಲವಾದ ಬಿದಿರು ಹಿಂಡಲನ್ನು ಆಯ್ಕೆ ಮಾಡಿದವಳೇ ಅಮ್ಮ ಅದರಡಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿದ್ದ ಬಿದಿರಕ್ಕಿಯನ್ನು ಗುಡಿಸಿ ಗುಡ್ಡೆ ಮಾಡತೊಡಗಿದಳು. ಮಂಗಳವಾರವನ್ನೇ ಆಯ್ಕೆ ಮಾಡಿಕೊಳ್ಳಲು ಕಾರಣವಿತ್ತು. ಅಂದು ಬಿದಿರಕ್ಕಿಯನ್ನು ಯಾರೂ ಸಂಗ್ರಹಿಸುವುದಿಲ್ಲ.. ಕಾಡನ್ನು ರಕ್ಷಿಸುವ ಚಾಮುಂಡಿ ತಾಯಿಗೆ ಆ ದಿನದ ಅಕ್ಕಿ ಮೀಸಲು. ಬಹುಶಃ ನನ್ನಮ್ಮ ದೇವರಿಗೆ ತಪ್ಪು ಕಾಣಿಕೆಯನ್ನು ತೆಗೆದಿಟ್ಟು ಬಿದಿರಕ್ಕಿ ಆರಿಸಲು ಬಂದಿರಬೇಕು. ಇಲ್ಲಿ ಬಿದಿರಕ್ಕಿ ಅಂದರೂ ವಾಸ್ತವದಲ್ಲಿ ಅದು ಭತ್ತವೇ. ಅದನ್ನು ಗುಡ್ಡದಿಂದ ತಂದು ಕಲ್ಲು ಮಣ್ಣನ್ನು ಬೇರ್ಪಡಿಸಿ, ಕುಟ್ಟಿ ಹೊಟ್ಟು ತೆಗೆದು ಅಕ್ಕಿ ಮಾಡಲು ದೀರ್ಘ ಪರಿಶ್ರಮ ಬೇಕು.

ಬರವನ್ನು ಎದುರಿಸಲು ಪ್ರಕೃತಿಮಾತೆ ತನ್ನ ಮಕ್ಕಳಿಗೆ ಹಲವಾರು ಒಳದಾರಿಗಳನ್ನು ಹೇಳಿಕೊಟ್ಟಿದ್ದಾಳೆ. ತನ್ನೊಡಲೊಳಗೇ ಹಲವಾರು ಗೆಡ್ಡೆಗೆಣಸುಗಳನ್ನು ಹುದುಗಿಟ್ಟುಕೊಂಡಿರುತ್ತಾಳೆ. ’ನೊರೆ’ ಎಂದು ಕರೆಯಲ್ಪಡುವ ಬಳ್ಳಿಯ  ಹಿಟ್ಟು ತುಂಬಿದ ಉದ್ದವಾದ ಬೇರಿನ ಗೆಡ್ಡೆಗಳನ್ನು ಕಾಡಿನಿಂದ ಅಗೆದು ತಂದು ಬೇಯಿಸಿ ಬಾಯಿ ಚಪ್ಪರಿಸುತ್ತಾ ತಿಂದ ನೆನಪು ನನಗಿದೆ. ಹಾಗೆಯೇ ಬೈನೆ ಮರದ ಹಿಟ್ಟು ಕೂಡಾ ಬರಗಾಲದಲ್ಲಿ ಹಸಿದ ಹೊಟ್ಟೆಗೆ ಹಿಟ್ಟಾಗುತ್ತಿತ್ತು. ಇದು ನಮ್ಮೂರಿನ ಕಥೆಯಾದರೆ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಗೋಟಿ ಹಾಗು ಕತ್ತಾಳೆಗಡ್ಡೆಯನ್ನು ಬೇಯಿಸಿಕೊಂಡು ತಿನ್ನುತ್ತಿದ್ದರೆಂದು ಕೇಳಿದ್ದೇನೆ.

ಇದನ್ನೆಲ್ಲಾ ಯೋಚಿಸುತ್ತಾ ಮನೆಗೆ ಬಂದರೆ ಸಂಬಂಧದಲ್ಲಿ ನನಗೆ ಅತ್ತೆಯಾಗಬೇಕಾಗಿದ್ದ, ಅಂದಿನ ಬರಗಾಲದ ದಿನಗಳಲ್ಲಿ ನಮ್ಮ ಗೇಣಿ ಒಕ್ಕಲಾಗಿದ್ದ ಅಜ್ಜಿ ನಮ್ಮ ಮನೆಯಲ್ಲಿ ಕೂತಿದ್ದರು. ನನ್ನನ್ನು ಕಂಡು, ’ಹೇಗೂ ಉಷಾ ಬಂದಿದ್ದಾಳೆ. ಅವಳಿಗೆ ಇದನ್ನು ರೊಟ್ಟಿಮಾಡಿ ಕೊಡು’ ಎಂದು ಕುಕ್ಕೆಯಲ್ಲಿದ್ದ ನುಚ್ಚಿನಂತ ಅಕ್ಕಿಯನ್ನು ಅಮ್ಮನ ಕೈಯ್ಯಲ್ಲಿಟ್ಟು ಹೋದರು.  ಅದು ಬಿದಿರಕ್ಕಿ.  ಈ ಬಾರಿ ಒಂದು ಕೇಜಿ ಅಕ್ಕಿಗೆ ನೂರೈವತ್ತು ರೂಪಾಯಿಯಂತೆ. ದುಡ್ಡು ಕೊಡಲು ಹೋದರೆ ಎಷ್ಟೇ ಒತ್ತಾಯಿಸಿದರೂ ಅತ್ತೆ ತಗೊಳ್ಳಲೇ ಇಲ್ಲ ಎಂದು ಅಮ್ಮ ನನ್ನಲ್ಲಿ ಅವಲತ್ತುಕೊಂಡರು. ಈ ವಯಸ್ಸಿನಲ್ಲೂ ಅವರು ಸುಮಾರು ಐವತ್ತು ಕೇಜಿಯಷ್ಟು ಅಕ್ಕಿಯನ್ನು ಸಂಗ್ರಹಿಸಿದ್ದಾರೆ ಎಂಬುದನ್ನು ಕೇಳಿ ನಾನು ಆಶ್ಚರ್ಯ ಪಟ್ಟೆ

ಬಿದಿರು ಹೂ ಹೋದ ವರ್ಷ ಬರಗಾಲ ಬರುತ್ತದೆಯೆಂಬುದು ವಾಡಿಕೆ. ಪ್ರಕೃತಿ ಯಾವಾಗಲೂ ತಾಯಿಯೇ. ಆಕೆ ತನ್ನ ಮಕ್ಕಳನ್ನು ಪೊರೆಯಲು ತನ್ನ ಶಕ್ತಿ ಮೀರಿ ಪ್ರಯತ್ನಿಸುತ್ತಾಳೆ. ಒಂದು ಬಿದಿರ ಹಿಂಡಲಿನಲ್ಲಿ ಕನಿಷ್ಟ ೨೫ ಕೇಜಿ ಭತ್ತ ದೊರೆಯುತ್ತದೆ.  ಬಿದಿರು ಹೂ ಬಿಡುವುದು ಅರುವತ್ತು ವರ್ಷಕ್ಕೊಮ್ಮೆ, ಅದೂ ಸಾವಿರಾರು ಎಕರೆ ವಿಸ್ತಾರದಲ್ಲಿ. ಹಾಗೆ ಹೂ ಬಿಟ್ಟು, ಬೀಜವಾಗಿ ತನ್ನ ಸಂತತಿ ಬೆಳೆಯಲು ಅನುವು ಮಾಡಿಕೊಟ್ಟು ತಾನು ಸತ್ತು ಹೋಗುತ್ತದೆ. ಸಾಮೂಹಿಕ ನಾಶದ ಕಾರಣದಿಂದಾಗಿ ಅದನ್ನು”ಕಟ್ಟೆ ರೋಗ’ ಎಂದೂ ಕರೆಯುತ್ತಾರೆ. ಸ್ಥಳೀಯವಾಗಿ ಅದನ್ನು ’ರಾಜನ್ ಹೋಗುವುದು’ ಎಂದೂ ಕರೆಯುತ್ತಾರೆ. ಹಾಗೆಂದರೆ ಏನು ಎಂಬುದು ನನಗೂ ತಿಳಿದಿಲ್ಲ. ಬಹುಶಃ ’ರಾಜನ್ ದೈವ’ಗಳಿಗೂ ಇದಕ್ಕೂ ಸಂಬಂಧವಿದ್ದರೂ ಇರಬಹುದು; ಯಾಕೆಂದರೆ ಇದು ತುಳುನಾಡು.

ಬರಗಾಲ ಅಂದರೆ ಏನು? ಮಳೆ ಆಗದಿರುವುದು. ಮಳೆ ಆಗದಿದ್ದರೆ ಭೂಮಿ ಬರಡಾಗುತ್ತದೆ. ಬೆಳೆ ಬೆಳೆಯಲಾಗುವುದಿಲ್ಲ. ಪರಿಣಾಮವಾಗಿ ಜನರ ಹೊಟ್ಟೆಗೆ ಹಿಟ್ಟಿಲ್ಲ. ಜನ-ಜಾನುವಾರು ಸೇರಿದಂತೆ ಪ್ರಾಣಿಸಂಕುಲಕ್ಕೆ ಕುಡಿಯಲು ನೀರಿಲ್ಲ. ಚಿಕ್ಕಂದಿನಲ್ಲಿ ನಾವು ಹಾಡಿದ್ದೇವೆ ’ಹುಯ್ಯೋ ಹುಯ್ಯೋ ಮಳೆರಾಯ, ಬಾಳೆಯ ತೋಟಕ್ಕೆ ನೀರಿಲ್ಲ’ ಆದರೆ ನಮ್ಮ ಮಕ್ಕಳು ’rain rain go away’ಎಂದು ಹಾಡುತ್ತಿರುವುದು ವಿಪರ್ಯಾಸ ಅಲ್ಲವೇ? ಬರಗಾಲದ ಭೀಕರತೆಯನ್ನು ಹೇಳುವ ಒಂದು ಜನಪದ ಹಾಡು ಯವಾಗಲೂ ನನಗೆ ನೆನಪಿಗೆ ಬರುತ್ತದೆ. ಅದು ’ಬಣ್ಣಾದ ಗುಬ್ಯಾರು ಮಳೆರಾಯ..ಮಕ್ಕಳಾ ಮಾರ್ಯಾರು ಮಳೆರಾಯ…ರೊಕ್ಕವಾ ಹಿಡಕೊಂಡು ಭತ್ತಂತ ತಿರುಗ್ಯಾರು ಮಳೆರಾಯ..’ ಮಕ್ಕಳನ್ನೇ ಮಾರಿ ಕಯ್ಯಲ್ಲಿ ದುಡ್ಡು ಹಿಡ್ಕೊಂಡು ಅನ್ನಕ್ಕಾಗಿ ಅಲೆದಾಡುವ ಧಾರುಣ ಸ್ಥಿತಿ ಬರಗಾಲದ ಭೀಕರತೆಯ ಸಮರ್ಥ ಚಿತ್ರಣವನ್ನು ಕಟ್ಟಿಕೊಡುತ್ತದೆ.

ಪ್ರಕೃತಿ ವಿಕೋಪಗಳು ಸಂಭವಿಸುವುದು ಅತ್ಯಂತ ಸಹಜ. ಅದನ್ನು ತಡೆಯಲು ಸಾಧ್ಯವಿಲ್ಲ. ಆದರೆ ಅದನ್ನು ಸಮರ್ಥವಾಗಿ ಎದುರಿಸಲು ಬುದ್ಧಿವಂತನಾದ ಮಾನವ ಹಲವಾರು ದಾರಿಗಳನ್ನು ಕಂಡುಕೊಂಡಿದ್ದಾನೆ. ಹಿಂದೆ ಜನಾನುರಾಗಿ ನಾಯಕನೊಬ್ಬ ಹೇಗೆ ರೂಪುಗೊಳ್ಳುತ್ತಿದ್ದ ಎಂದರೆ ಆತ, ಕೆರೆಗಳನ್ನು ಕಟ್ಟಿಸುತ್ತಿದ್ದ, ಬಾವಿಯನ್ನು ತೋಡಿಸುತ್ತಿದ್ದ, ಅರವಟ್ಟಿಗೆ [ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ] ಗಳನ್ನು ನಿರ್ಮಿಸುತ್ತಿದ್ದ. ಅನ್ನ ಛತ್ರಗಳನ್ನು ಕಟ್ಟಿಸುತ್ತಿದ್ದ, ಸಾಲುಮರಗಳನ್ನು ನೆಡಿಸುತ್ತಿದ್ದ.

ಇದನ್ನು ಒಬ್ಬ ಸೂಳೆಯೂ ಮಾಡುತ್ತಿದ್ದಳು. ನಮ್ಮ ನಾಡಿನುದ್ದಕ್ಕೂ ಹರಡಿಕೊಂಡಿರುವ ಅಸಂಖ್ಯಾತ ಬೃಹತ್ ’ಸೂಳೆ ಕೆರೆ’ಗಳನ್ನು ನೆನಪಿಸಿಕೊಳ್ಳಿ. ಸಮಾಜದಿಂದ ಗಳಿಸಿದ ಹಣವನ್ನು ಪಶ್ಚಾತ್ತಾಪದ ರೀತಿಯಲ್ಲಿ ಮತ್ತೆ ಅದನ್ನು ಜನೋಪಯೋಗಿ ಕೆಲಸಕ್ಕೆ ಆಕೆ ವಿನಿಯೋಗಿಸುತ್ತಿದ್ದಳು. ಜೀವ ಜಲಕ್ಕಿರುವ ಮಹತ್ವ ಆಕೆಗೂ ಗೊತ್ತಿತ್ತು. ಆ ತಾಯಂದಿರು ಕಟ್ಟಿಸಿದ ವಿಶಾಲ ಕೆರೆಗಳಲ್ಲಿ ಇವತ್ತಿಗೂ ಅಪಾರ ಜಲರಾಸಿಯಿದೆ. ಆಕೆಯ ಜೊತೆ ನಮ್ಮ ರಾಜಕಾರಣಿಗಳನ್ನು, ಮಠಾದೀಶರನ್ನು, ದಿಡೀರ್ ಶ್ರೀಮಂತರಾಗುವುದಕ್ಕೆ ಹೊರಟ ಪ್ರಕೃತಿಭಂಜಕರನ್ನು ಒಮ್ಮೆ ಹೋಲಿಸಿ ನೋಡಿ…
ಈಗ ಕೆರೆಗಳೆಲ್ಲಾ ಸೈಟ್ ಗಳಾಗುತ್ತಿವೆ. ಕಾಡುಗಳೆಲ್ಲಾ ರೆಸಾರ್ಟ್ ಗಳಾಗುತ್ತಿವೆ. ನೀರಿನ ಆಗರಗಳಾಗಿರುವ ಬೆಟ್ಟ ಗುಡ್ಡಗಳು ದುಡ್ಡಿನ ಖಜಾನೆಗಳಂತೆ ಗೋಚರಿಸುತ್ತವೆ.

 ಬರಗಾಲ ಬಂತೆಂದರೆ ಕಂಟ್ರಾಕ್ಟ್ ದಾರರು, ದಲ್ಲಾಳಿಗಳು ಹಬ್ಬವನ್ನಾಚರಿಸುತ್ತಾರೆ. ನಲ್ವತ್ತು ವರ್ಷಗಳ ಹಿಂದೆ ಸಂಭವಿಸಿದ ಬರಗಾಲದಲ್ಲಿ ಅಮೇರಿಕಾದಂತಹ ಕೊಬ್ಬಿದ ರಾಷ್ಟ್ರ ಸಮುದ್ರಕ್ಕೆಸೆಯುವ ಹುಳು ಹಿಡಿದ ರವೆಯನ್ನು ಜೊತೆಗೆ ಪಾಮ್ ಆಯಿಲ್ ನ ಬಿಕ್ಷೆಯನ್ನು ಹಾಕಿ, ಪಾರ್ಥೆನಿಯಮ್ ಅನ್ನು ಉಚಿತವಾಗಿ ನೀಡಿತ್ತು! ಆಗಲೇ ಆರಂಭವಾಗಿದ್ದು ಶಾಲಾ ಮಕ್ಕಳಿಗೆ ಮಧ್ಯಾಹ್ನ ಊಟವನ್ನು ನೀಡುವ ಕೇರ್‍ ಪ್ರೋಜೆಕ್ಟ್ ಯೋಜನೆ. ಇದನ್ನು  ಸಮಾಜವಾದಿಗಳು ತೀವ್ರವಾಗಿ ಪ್ರತಿಭಟಿಸಿದ್ದರು. ಆಗ ಹರಡಿದ ಪಾರ್ಥೆನಿಯಮ್ ಅನ್ನು ನಿಯಂತ್ರಿಸಲು ಮೆಕ್ಸಿಕೋದಿಂದ ’ಮೆಕ್ಸಿಕನ್ ಭೀ’ ಯನ್ನು ಆಮದು ಮಾಡಿಕೊಳ್ಳಲಾಗಿತ್ತು!.

ಅಂದು ಕುಡಿಯಲು ನೀರಿತ್ತು; ತಿನ್ನಲು ಆಹಾರವಿರಲಿಲ್ಲ. ಇಂದು ಸರಕಾರದ ಹಲವಾರು ಯೋಜನೆಗಳಿಂದ ಬಡ ಜನರ ಹೊಟ್ಟೆ ಅನಾಯಸವಾಗಿ ತುಂಬುತ್ತಿದೆ. ಹಾಗಾಗಿ ಅವರೀಗ ಹಸಿವೆಯಿಂದ ಸಾಯಲಾರರು. ’ಉದ್ಯೋಗ ಖಾತ್ರಿ’ಯೆಂಬ ದೂರದರ್ಶಿತ್ವವಿಲ್ಲದ ಯೋಜನೆಯಿಂದಾಗಿ ಸುಲಭದಲ್ಲಿ ಒಂದಷ್ಟು ದುಡ್ಡು ಅವರ ಕೈಸೇರುತ್ತಿದೆ. ಹೇಗೂ ಬಿಪಿಎಲ್ ಕಾರ್ಡ್ ನಲ್ಲಿ ಅತೀ ಕಡಿಮೆ ದರದಲ್ಲಿ ಪಡಿತರ ದೊರೆಯುತ್ತದೆ. ಇದರ ನೇರ ಪರಿಣಾಮ ಕೃಷಿಕ್ಷೇತ್ರದ ಮೇಲಾಗಿದೆ. ಅಲ್ಲೀಗ ಕೃಷಿಕಾರ್ಮಿಕರ ಕೊರತೆಯುಂಟಾಗಿ ಕೃಷಿಭೂಮಿಯೆಲ್ಲ ಪ್ಲಾಂಟೇಷನ್ ಬೆಳೆ ಬೆಳೆಯುವ ಜಾಗಗಳಾಗಿ ಪರಿವರ್ತನೆಯಾಗುತ್ತಿದೆ.
ಮುಂದಿನ ದಿನಗಳಲ್ಲಿ ಜನರು  ಸತ್ತರೆ ನೀರಿಲ್ಲದೆ ಸಾಯಬೇಕಷ್ಟೇ.ಮನುಷ್ಯ ಪ್ರಕೃತಿಯ ಮೇಲೆ ಹೀಗೆಯೇ ದೌರ್ಜನ್ಯ ನಡೆಸುತ್ತಾ ಹೋದರೆ ಆ ದಿನಗಳೂ ದೂರವಿಲ್ಲವೆನಿಸುತ್ತಿದೆ

[ ಮೇ ೮ರ ವಿಜಯಕರ್ನಾಟಕದ ನನ್ನ ಅಂಕಣ ’ಅನುರಣನ’ದಲ್ಲಿ ಪ್ರಕಟವಾದ ಬರಹ.]

Monday, May 7, 2012

’ಬೌತಿಕದ ಹಸಿವು ಮತ್ತು ಅಧ್ಯಾತ್ಮದ ಸೆಳೆತ




ಬಯಲು ಬಯಲನೇ ಬಿತ್ತಿ ಬಯಲು ಬಯಲನೇ ಬೆಳೆದು
ಬಯಲು ಬಯಲಾಗಿ ಬಯಲಾಯಿತಯ್ಯಾ
ಬಯಲು ಜೀವನ ಬಯಲು ಭಾವನೆ
ಬಯಲು ಬಯಲಾಗಿ ಬಯಲಾಯಿತಯ್ಯಾ
ನಿಮ್ಮ ಪೂಜಿಸಿದವರು ಮುನ್ನವೇ ಬಯಲಾದರು
ನಾ ನಿಮ್ಮ ನಂಬಿ ಬಯಲಾದೆ ಗುಹೇಶ್ವರಾ

ಅಲ್ಲಮನ ಈ ವಚನವನ್ನು ಮತ್ತೆ ಮತ್ತೆ ಗುನುಗುಣಿಸಲು ಕಾರಣವಾಗಿದ್ದು ಇತ್ತೀಚೆಗೆ ಬೆಂಗಳೂರಿನ ಕಲಾಕ್ಷೇತ್ರದಲ್ಲಿ ನಾಲ್ಕು ದಿನಗಳ ಕಾಲ ನಡೆದ ’ಜನಪರ ಸಂಸ್ಕೃತಿ ಉತ್ಸವ’ ಎಂಬ ನಾಟಕೋತ್ಸವ.
ರಂಗಚೇತನ ಕಲಾವಿದರು ಆಯೋಜಿಸಿದ ಈ ನಾಟಕೋತ್ಸವದಲ್ಲಿ ಒಟ್ಟು ನಾಲ್ಕು ನಾಟಕಗಳು ಪ್ರದರ್ಶನಗೊಂಡವು. ಜೊತೆಗೊಂದು ಬೀದಿ ನಾಟಕವೂ ಇತ್ತು. ಎಲ್ಲಾ ನಾಟಕೋತ್ಸವದಂತೆ ಇಲ್ಲಿಯೂ ವಿಚಾರಸಂಕಿರಣ, ಕವಿಗೋಷ್ಠಿ, ಜಾನಪದ ಮೇಳ, ಪ್ರಶಸ್ತಿ ವಿತರಣೆಗಳಿದ್ದವು.

ನಾಟಕೋತ್ಸವದ ಆರಂಭದ ದಿನ ಪ್ರದರ್ಶಿತಗೊಂಡ ನಾಟಕ ’ಅರಿವಿನಮನೆ. ಈ ನಾಟಕೋತ್ಸವದ ಆಯೋಜಕರಾದ ನಂಜುಂಡಸ್ವಾಮಿ ರಚಿಸಿ, ಕೆ.ಎಸ್.ಡಿ.ಎಲ್ ಚಂದ್ರು ನಿರ್ದೇಶಿಸಿದ ಈ ನಾಟಕವನ್ನು ರಂಗಚೇತನ ತಂಡದ ಕಲಾವಿದರು ಅಭಿನಯಿಸಿದ್ದರು.

ಮಾದಾರ ಚೆನ್ನಯ್ಯ ಕೀಳು ಜಾತಿಯವನು ವೃತ್ತಿಯಿಂದ ಚಪ್ಪಲಿ ಹೊಲಿಯುವವನು. ಆದರೆ ಕರಸ್ಥಳದಲ್ಲಿ ಲಿಂಗವನ್ನಿಟ್ಟು ಭಕ್ತಿ ನೈವೇಧ್ಯವನ್ನು ಅರ್ಪಿಸುವಾತ.  ಆ ರಾಜ್ಯದ ಒಡೆಯ ಚೋಳ ಮಹಾರಾಜ ಭಕ್ಷ್ಯಬೋಜ್ಯಗಳನ್ನಿತ್ತು ನೈವೇದ್ಯ ಮಾಡಿದರೂ ಸ್ವೀಕರಿಸದ ಶರಣವೇಷದಾರಿ ಶಿವ. ಚೆನ್ನಯ್ಯನ ಮನೆಯ ಅಂಬಲಿಯನ್ನು ಅಕ್ಕರೆಯಿಂದ ಉಣ್ಣುತ್ತಾನೆ. ಇದನ್ನು ತಿಳಿದ ರಾಜ ’ನನ್ನ ಶಿವನಿಗೆ ಅಂಬಲಿ ಕುಡಿಸಿದನೇ’ ಎಂದು ಚೆನ್ನಯ್ಯನ ಮೇಲೆ ಮೊದಲು ಕುಪಿತಗೊಂಡರೂ ಅಮೇಲೆ ಚೆನ್ನಯ್ಯನ ಮನೆಗೆ ಬಂದು ಅವನ ಭಕ್ತಿ ಪಾರಮ್ಯವನ್ನು ಕಂಡು ಮನಪರಿವರ್ತನೆಗೊಂಡು ಅವನನ್ನು ಆಸ್ಥಾನಕ್ಕೆ ಅಹ್ವಾನಿಸುತ್ತಾನೆ.
 ಚೆನ್ನಯ್ಯ ಆ ರಾಜ್ಯವನ್ನು ಬಿಟ್ಟು ಬಸವಣ್ಣನಿರುವ ಕಲ್ಯಾಣಕ್ಕೆ ತಪ್ಪಿಸಿಕೊಂಡು ಬರುತ್ತಾನೆ. ಅಲ್ಲಿ ಬಸವಣ್ಣನ ಜೊತೆಗೂಡಿ ಅರಿವಿನ ಮನೆಯನ್ನು ಹುಟ್ಟು ಹಾಕುತ್ತಾನೆ. ಅಕ್ಷರ ಕ್ರಾಂತಿಯ ಕನಸು ಕಾಣುತ್ತಾನೆ. ಅರಿವಿನ ಮನೆಗೆ ರಾಜಾಶ್ರಯವನ್ನು ನಯವಾಗಿ ತಿರಸ್ಕರಿಸುವ ಮಾದಾರ ಚೆನ್ನಯ್ಯ, ಮುಂದೆ ಬಿಜ್ಜಳನೇ ಅರಿವಿನ ಮನೆಯನ್ನು ಉದ್ಘಾಟಿಸುವ ಕ್ಷಣಕ್ಕೆ ಸಾಕ್ಷಿಯಾಗಬೇಕಾಗುತ್ತದೆ.  ಆ ಐತಿಹಾಸಿಕ ಕ್ಷಣದಲ್ಲಿಯೇ ಚೆನ್ನಯ್ಯ ಬ್ರಮ ನಿರಸನಗೊಂಡು ಅಲ್ಲಿಂದ ಕಣ್ಮರೆಯಾಗುತ್ತಾನೆ.

ಬಯಲು ಎನ್ನುವುದು ಅಧ್ಯಾತ್ಮಿಕತೆಯ ಅತ್ಯುನ್ನತ ಸಂಕೇತ; ಶೂನ್ಯ ಸ್ಥಿತಿ. ಅದನ್ನೇ ಅಲ್ಲಮ ’ಬಯಲು’ ಎನ್ನುತ್ತಾನೆ. ಅದಕ್ಕೆ ಆದಿಯಿಲ್ಲ ಅಂತ್ಯವಿಲ್ಲ.ಅದು ಅನಂತ.  ಈ ನಾಟಕದಲ್ಲಿ ಚೆನ್ನಯ್ಯ ಅಲ್ಲಮನಿಗೆ ಆಪ್ತನಾಗುತ್ತಾನೆ.
ಒಂದುಮುಕ್ಕಾಲು ಘಂಟೆಯ ಈನಾಟಕವನ್ನು ನಿರ್ದೇಶಕರು ಎಪ್ಪತ್ತು ನಿಮಿಷಗಳಿಗೆ ಇಳಿಸಿಕೊಂಡರೂ ನಾಟಕದ ಆಶಯಕ್ಕೆ ಧಕ್ಕೆಯಾಗಲಿಲ್ಲ. ನಾಟಕದುದ್ದಕ್ಕೂ ಬಳಸಿಕೊಂಡ ಅಲ್ಲಮ, ಬಸವಣ್ಣ ಮತ್ತು ಮಾದಾರ ಚೆನ್ನಯ್ಯನ ವಚನಗಳು ನಾಟಕದ ಸರಾಗ ಚಲನೆಗೆ ಕಾರಣವಾಗಿದ್ದವು.
ನಾಟಕೋತ್ಸವದ ಎರಡನೆಯ ನಾಟಕವಾಗಿ ಪ್ರದರ್ಶನಗೊಂಡದ್ದು ಅಮರೇಶ ನಿಡುಗೋಣಿಯವರ  ಸಣ್ಣ ಕಥೆಯಾಧಾರಿತ ನಾಟಕ ’ನೀರು ತಂದವರು’.ಶಶಿಧರ್ ಭಾರೀಘಾಟ್ ರಂಗರೂಪಕ್ಕೆ ಅಳವಡಿಸಿದ ಈ ನಾಟಕವನ್ನು ರಂಗನಿರಂತರ ತಂಡಕ್ಕಾಗಿ ನಿರ್ದೇಶಿಸಿದವರು ಎಂ. ರವಿ.
ಮೂರನೆಯ ದಿನ ದಾಕ್ಷಾಯಣಿ ಭಟ್ ನಿರ್ದೇಶನದ ’ಮರುಗಡಲು ನಾಟಕ ಪ್ರದರ್ಶನವಾಯಿತು.ಗ.ಸು.ಭಟ್ ರಚಿಸಿದ ಈ ನಾಟಕವನ್ನು ದೃಶ್ಯ ತಂಡದವರು ಅಭಿನಯಿಸಿದ್ದರು.

ಸಮಾರೋಪದಂದು ಪೂರ್ವನಿಗಧಿತವಾದ ನಾಟಕ ’ಕರ್ವಾಲೋ’ ಪ್ರದರ್ಶಿತವಾಗದೇ ಅದೇ ತಂದದವರಿಂದ ’ರಾಮಧಾನ್ಯ’ ನಾಟಕ ಪ್ರದರ್ಶಿತಗೊಂಡಿತು.ನಿರ್ದೇಶನ ಕೆ.ಎಸ್.ಡಿ.ಎಲ್ ಚಂದ್ರು ಅವರದೇ. ಹಾಗಾಗಿ ಒಂದೇ ನಾಟಕೋತ್ಸವದಲ್ಲಿ ಒಬ್ಬರೇ ನಿರ್ದೇಶಕರ, ಒಂದೇ ತಂಡದ ಎರಡು ನಾಟಕಗಳನ್ನು ನೋಡುವಂತಾದುದು ವಿಶೇಷ !
ರಾಮಧಾನ್ಯದ ಕಥೆ ಎಲ್ಲರಿಗೂ ಗೊತ್ತಿರುವಂತಹದೇ. ಇದು ಕನಕದಾಸರ ಕೃತಿ. ಆಕ್ಕಿ ಮತ್ತು ರಾಗಿ ಮಧ್ಯೆ ಯಾರು ಶ್ರೇಷ್ಟರೆಂಬ ವಾಗ್ವಾದ ಶುರುವಾಗಿ ನ್ಯಾಯ ತೀರ್ಮಾನಕ್ಕಾಗಿ ರಾಮನ ಬಳಿ ಬರುತ್ತಾರೆ. ರಾಮ ಅವರಿಬ್ಬರ ವಾದವನ್ನು ಆಲಿಸಿ ರಾಗಿಯೇ ಶ್ರೇಷ್ಟವೆಂದು ತೀರ್ಪು ಕೊಡುತ್ತಾನೆ.
ಈ ನಾಟಕದ ರಾಮ ಕ್ಯಾಲೆಂಡರಿನ ರಾಮನಲ್ಲ. ಕಾಲಿಗೆ ಸ್ಕೆಟಿಂಗ್ ಕಟ್ಟಿಕೊಂಡು ರಂಗದಲೆಲ್ಲಾ ಕರಾರುವಕ್ಕಾಗಿ ಹರಿದಾಡುತ್ತಾನೆ.
ನಾಟಕೋತ್ಸವದ ಆರಂಭ ಮತ್ತು ಅಂತ್ಯದ ನಾಟಕಗಳೆರಡರ ನಿರ್ದೇಶಕ ಮತ್ತು ತಂಡ ಒಂದೇ ಆದ ಕಾರಣದಿಂದಾಗಿಯೋ ಏನೋ ಪರಿಣಾಮದ ದೃಷ್ಟಿಯಿಂದ ಉತ್ತಮ ಪ್ರಯೋಗವೆಂದೇ ಹೇಳಬಹುದು. ಮೊದಲನೆಯದು ಹೊಸ ನಾಟಕ. ಕೊನೆಯದು ಈಗಾಗಲೇ ಹಲವಾರು ಪ್ರಯೋಗಗಳನ್ನು ಕಂಡ ನಾಟಕ. ಎರಡರಲ್ಲು ಉತ್ತಮ ಲೈವ್ ಸಂಗೀತವಿತ್ತು. ಆರಂಭದಿಂದ ಅಂತ್ಯದ ತನಕ ಬಿಗಿಯಾದ ನಿರೂಪಣೆಯಿತ್ತು.ಒಂದೇ ಲಯವಿತ್ತು. ಕೆಲವು ಕಡೆ ಅದ್ದ್ಭುತವೆನಿಸುವಂತ ಬೆಳಕಿನ ವಿನ್ಯಾಸವಿತ್ತು.ಏಕಾತನತೆಯನ್ನು ಭಂಗಗೊಳಿಸಲು ಸಂಗೀತ ಮತ್ತು ನೃತ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿತ್ತು.

 ’ಅರಿವಿನ ಮನೆ’ ನಾಟಕದುದ್ದಕ್ಕೂ ನಾಟಕದ ಆಶಯಕ್ಕೆ ಪೂರಕವಾಗಿ ರಿಂಗುಣಿಸಿದ ’ಬಯಲು ಬಯಲನೇ ಬಿತ್ತಿ ಬಯಲು ಬಯಲನೇ ಬೆಳೆದು”ಎಂಬ ಅಲ್ಲಮನ ವಚನದ ಧ್ವನಿ ಸಮಾರೋಪದ ನಾಟಕವಾದ ’ರಾಮಧಾನ್ಯ’ದಲ್ಲೂ ಮುಂದುವರಿದಿತ್ತು. ವ್ಯ್ತತ್ಯಾಸ ಇಷ್ಟೆ.ಅಲ್ಲಿ ಇದ್ದುದು ಅಧ್ಯಾತ್ಮದ ಹಸಿವು. ಇಲ್ಲಿ ಇದ್ದುದು ಬೌತಿಕ ಹಸಿವು. ಅಲ್ಲಿಯ ಎಳೆ ಇಲ್ಲಿಯವರೆಗೂ ಹರಿದಿತ್ತು ಅದು ಈ ನಾಟಕೋತ್ಸವದ ಯಶಸ್ಸು.

[ ವಿಜಯಕರ್ನಾಟಕದ ಸಾಪ್ತಾಹಿಕದಲ್ಲಿ ಪ್ರಕಟವಾದ ಬರಹ ]

Saturday, April 28, 2012

ಕನ್ನಡಕ್ಕೆ ಡಬ್ಬಿಂಗ್ ಯಾಕೆ ಬೇಡ?




ಕನ್ನಡದ ಡಬ್ಬಿಂಗ್ ವಿರೋಧಿ ಭೂತ ಮತ್ತೊಮ್ಮೆ ಕಾಣಿಸಿಕೊಂಡಿದೆ.
ಇದಕ್ಕೆ ಕಾರಣವಾಗಿದ್ದು. ಮೇ ೬ರಂದು ಪ್ರಸಾರವಾಗಲಿರುವ ಅಮಿರ್ ಖಾನ್ ನ ಮಹತ್ವಾಕಾಂಕ್ಷೆಯ ರಿಯಾಲಿಟಿ ಶೋ ’ಸತ್ಯ ಮೇವ ಜಯತೇ’. ಅಮಿರ್ ಹೇಳುವ ಪ್ರಕಾರ ಅದು ಕನ್ನಡವೂ ಸೇರಿದಂತೆ ದಕ್ಷಿಣಭಾರತದ ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಿಗೆ ಡಬ್ ಆಗಿ ಪ್ರಸಾರವಾಗಲಿದೆ. ಹಿಂದೆ ರಾಮಾಯಣ, ಮಹಾಭಾರತಗಳು ಪ್ರಸಾರವಾಗುತ್ತಿದ್ದ ಭಾನುವಾರದ ಹನ್ನೊಂದು ಘಂಟೆಯ ಜನಪ್ರಿಯ ಸ್ಲಾಟ್ ನಲ್ಲಿ ಇದು ಪ್ರಸಾರ ಕಾಣಲಿದೆ. ಮೊತ್ತ ಮೊದಲಬಾರಿಗೆ ಖಾಸಗಿ ಮತ್ತು ದೂರದರ್ಶನ ಚಾನಲ್ ಗಳಲ್ಲಿ ಏಕ ಕಾಲದಲ್ಲಿ ಪ್ರಸಾರವಾಗಲಿರುವ ಈ ಶೋ ಇತಿಹಾಸ ನಿರ್ಮಿಸಲಿದೆ ಮತ್ತು ಭಾರತವನ್ನು ಭಾವನಾತ್ಮಕವಾಗಿ ಬೆಸೆಯಲಿದೆ ಎಂಬುದು ಅಮೀರ್ ಖಾನ್ ಹೇಳಿಕೆ. ಆತ ಈ ಶೋದ ಪ್ರಚಾರಕ್ಕಾಗಿ ಖರ್ಚು ಮಾಡದ ಹಣ ೬.೨೫ ಕೋಟಿ ರೂಪಾಯಿಗಳು. ಸಲ್ಮಾನ್ ಖಾನ್, ಶಾರೂಕ್ ಖಾನ್ ನಂತ ತಾರೆಯರ ಸಿನೇಮಾಗಳ ಪ್ರಚಾರಕ್ಕೆ ಖರ್ಚು ಮಾಡುವುದು ೨.೫ ಕೋಟಿ ರೂಪಾಯಿಗಳು ಅಂದರೆ ಅಮಿರ್ ತನ್ನ ಶೋದ ಮೇಲೆ ಇಟ್ಟಿರುವ ಭರವಸೆ ನಮಗೆ ಅರ್ಥವಾಗುತ್ತದೆ.
   
ಅಮಿರ್ ನ ಶೋವನ್ನು ಕನ್ನಡ ಟೆಲಿವಿಷನ್ ಸಂಘಟನೆಗಳು ವಿರೋಧಿಸಿವೆ ಮತ್ತು ಕನ್ನಡಕ್ಕೆ ಡಬ್ ಆಗದಂತೆ ನೋಡಿಕೊಂಡಿವೆ. ನಾವೀಗ ಅದನ್ನು ಹಿಂದಿಯಲ್ಲೋ ಅಥವಾ ನೆರೆ ರಾಜ್ಯದ ಭಾಷೆಗಳಾದ ತೆಲುಗು, ತಮಿಳು ಅಥವಾ ಮಲೆಯಾಳ ಭಾಷೆಗಳಲ್ಲಿ ನೋಡಬೇಕಾಗಿದೆ.
ಕನ್ನಡ ಟೆಲಿವಿಷನ್ ಸಂಘಟನೆಗಳು ಯಾಕೆ ಈ ತೀರ್ಮಾನಕ್ಕೆ ಬಂದಿವೆ? ಅದಕ್ಕೆ ಅವು ಕೊಡುವ ಪ್ರಮುಖ ಕಾರಣಗಳು ಎರಡು. ಒಂದು; ಕನ್ನಡ ಚಿತ್ರರಂಗವನ್ನೇ ನಂಬಿಕೊಂಡಿರುವ ಸುಮಾರು ಐದು ಸಾವಿರ ಕಲಾವಿದರು ಮತ್ತು ತಂತ್ರಜ್ನರು ತಮ್ಮ ಕೆಲಸವನ್ನು ಕಳೆದುಕೊಳ್ಳುತ್ತಾರೆ. ಆ ಮೂಲಕ ಅವರ ಕುಟುಂಬ ಬೀದಿಗೆ ಬರುತ್ತದೆ.
ಇನ್ನೊಂದು ಕಾರಣ,  ಕನ್ನಡ ಭಾಷೆ ಮತ್ತು ಸಂಸ್ಕೃತಿ ನಾಶವಾಗುತ್ತಿದೆಯೆಂಬ ಆತಂಕ.
ಟೆಲಿವಿಷನ್ ಸಂಘಟನೆಗಳು ಮಾತ್ರವಲ್ಲ  ಬಹುತೇಕ ಇಡೀ ಕನ್ನಡ ಚಿತ್ರರಂಗ ಡಬ್ಬಿಂಗ್ ವಿರೋಧಿಯಾಗಿದೆ. ಕನ್ನಡದ ಹಲವು ಸಿನೇಮಾ ಪತ್ರಕರ್ತರೂ ಅವರ ಪರವಾಗಿ ನಿಂತಂತಿದೆ. ಇಲ್ಲಿ ಒಂದು ವಿಷಯ ಗಮನಿಸಬೇಕು.ಕನ್ನಡ ಚಿತ್ರರಂಗ ಮತ್ತು ಟೀವಿ ಚಾನಲ್ ಗಳ ಸಂಬಂಧ ಅವಿನಾಭವವಾದುದು. ಅವರು ಎಂದೂ ಪರಸ್ಪರ ವಿರೋಧಿಗಳಲ್ಲ. ಅವರ ಸಿನೇಮಾಕ್ಕೆ ಇವರು ಪ್ರಚಾರ ಕೊಡಬೇಕು ಅವರ ಸಿನೇಮಾಗಳು, ಹಾಡುಗಳು, ಕ್ಲಿಪ್ಪಿಂಗ್ಸ್ ಗಳು ಇಲ್ಲದಿದ್ದರೆ ಇವರ ಟಿಅರ್ ಪಿ ಗ್ರಾಫ್ ಏರುವುದಿಲ್ಲ. ಇಲ್ಲಿ ಇಂಗು ತಿಂದ ಮಂಗನಂತಾಗಿರುವುದು, ಕನ್ನಡ ಭಾಷೆ ಮಾತ್ರ ಬಲ್ಲ ಪ್ರೇಕ್ಷಕರು
 ಡಬ್ಬಿಂಗ್ ವಿರೋಧಿಗಳು ಕೊಡುವ ಕಾರಣಗಳು ಕಾರಣಗಳೇ ಅಲ್ಲ. ಅದರಲ್ಲಿ ವಾಣಿಜ್ಯ ಉದ್ದೇಶಗಳಿವೆ. ಚಿತ್ರರಂಗವೊಂದು ಉದ್ಯಮ. ಗ್ರಾಹಕನಿಗೆ ಬೇಕಾದುದು ಎಲ್ಲವೂ ಅಲ್ಲಿ ದೊರೆಯಬೇಕು.ಕೆಲವನ್ನು ಮಾತ್ರ ಕೊಡುತ್ತೆಯೆಂಬುದು ಸರಿಯಲ್ಲ, ಎಂಬುದು ಡಬ್ಬಿಂಗ್ ಪರವಾಗಿರುವವರ ವಾದ.

 ಸಿನೇಮಾ ಒಂದು ಕಲಾ ಪ್ರಕಾರ; ಸೃಜನಶೀಲ ಕ್ಷೇತ್ರ. ಕಲೆಗೆ ಮಾನವನ  ಬದುಕನ್ನು ಮುನ್ನಡೆಸುವ,  ಬದಲಾಯಿಸುವ ಮತ್ತು ಎತ್ತರಿಸುವ ಶಕ್ತಿಯಿದೆ. ಅದು ಕೊಡುವ ಅನುಭವ ಶಬ್ದಾತೀತವಾದುದು. ಭಾಷಾತೀತವಾದುದು. ಅಲ್ಲಿ  ಅದೊಂದು ಜ್ನಾನಶಾಖೆ. ಹಾಗಾಗಿ ಅದು ಮನೋರಂಜನೆಯ ಜೊತೆ ಜೊತೆಗೆ ಜ್ನಾನವನ್ನು ಹಂಚುತ್ತದೆ.  ಉಳಿದ ಕಲೆಗಳಲ್ಲಿ ಇರದ ವಿಶೇಷವಾದ ಒಂದು ಗುಣ ಸಿನೇಮಾದಲ್ಲಿದೆ. ಅದು ಅಕ್ಷರ ಹೀನರನ್ನೂ ಸುಸಂಸ್ಕೃತರನ್ನಾಗಿ ಮಾಡುತ್ತದೆ

 ಕನ್ನಡ ಭಾಷೆಗೆ ಒಂದು ಸಾವಿರ ವರ್ಷಗಳ ಲಿಖಿತ ಇತಿಹಾಸವಿದೆ. ಅದಕ್ಕೂ ಮೀರಿದ ಜಾನಪದ ಪರಂಪರೆಯಿದೆ. ಯಾವ ಅನ್ಯ ಸಂಸ್ಕೃತಿಯೂ ಕನ್ನಡ ಸಂಸ್ಕೃತಿಯನ್ನು ನಾಶ ಮಾಡಲು ಇದುವರೆಗೂ ಸಾಧ್ಯವಾಗಿಲ್ಲ. ಅದಕ್ಕೆ ಎಲ್ಲವನ್ನೂ ತನ್ನದಾಗಿಸಿಕೊಳ್ಳುವ, ಜೀರ್ಣಿಸಿಕೊಳ್ಳುವ ಅಗಾಧ ಶಕ್ತಿಯಿದೆ. ಒಂದು ಕಾಲಕ್ಕೆ ಸಂಸ್ಕೃತ ಪಂಡಿತರ ಅಂದರೆ ಅಕ್ಷರವಂತರ ಭಾಷೆಯಾಗಿತ್ತು. ಪ್ರಭುತ್ವದ ರಕ್ಷಣೆಯಲ್ಲಿತ್ತು . ಇಂತಹ ಸುರಕ್ಷಿತ ವಲಯದಲ್ಲಿ ಹುಟ್ಟಿದ ರಾಮಾಯಣ ಮಹಾಭಾರತಗಳನ್ನು ನಮ್ಮ ಅಕ್ಷರವಂಚಿತ ಜನಸಾಮಾನ್ಯರು ತಮ್ಮದಾಗಿಸಿಕೊಂಡ ಪರಿಯನ್ನು ನೋಡಿದರೆ ಅವರ ಜ್ನಾನಕ್ಕೆ ಅಚ್ಚರಿಪಡಲೇ ಬೇಕು. ಪತಿ ಊರಲ್ಲೂ ರಾಮಾಯಣವನ್ನು ನೆನಪಿಸುವ ಮತ್ತು ಪಾಂಡವರು ನಡೆದಾಡಿದ ಕುರುಹುಗಳನ್ನು ಜನರ ಬಾಯಲ್ಲಿ ಕೇಳಬಹುದು. ಅವರ ಗ್ರಹಿಕೆ ಮತ್ತು ಪುನರ್ ಸೃಷ್ಟಿ ಅನನ್ಯವಾದುದು.  ಇಂತಹ  ಸಂಸ್ಕೃತಿಯನ್ನು ಕಡೆಗಣಿಸಿ  ಕತ್ತಿ, ಲಾಂಗ್, ಮಚ್ಚು-ಮಚ್ಛಾಗಳಿಂದ ಕೂಡಿದ ಡಾಗರ್ ಸಂಸ್ಕೃತಿಯನ್ನೇ ಕನ್ನಡದ ಸಂಸ್ಕೃತಿ ಎಂಬಂತೆ ಬಿಂಬಿಸಿ ’ಇದನ್ನು ಮಾತ್ರ ನೋಡಿ’ ಎಂದು ತಾಕೀತು ಮಾಡಿದರೆ..? ತಾವು ಬಾವಿಯಲ್ಲಿನ ಕಪ್ಪೆಗಳಂತಿರುವುದಲ್ಲದೆ ಪ್ರೇಕ್ಷಕರನ್ನು ಕೂಡಾ ಹಾಗೆಯೇ ಇರಿ ಎಂದು ಹೇಳಿದರೆ..?

ಭಾಷೆ ಬೆಳೆಯುವುದೇ ಕೊಡು-ಕೊಳ್ಳುವಿಕೆಯಿಂದ.’ಇವಳ ತೊಡುಗೆ ಅವಳಿಗಿಟ್ಟು ನೋಡಬಯಸಿದೆ’ ಎಂದು ಪ್ರಯೋಗಕ್ಕೆ ಒಡ್ಡಿಕೊಂಡು ಇಂಗ್ಲೀಷನ್ನು ಅಪ್ಪಿಕೊಂಡ ಕಾರಣದಿಂದಲೇ ಕನ್ನಡ ಭಾಷೆ ಇಂದು ಸಮೃದ್ಧವಾಗಿ ಬೆಳೆದು ನಿಂತಿದೆ. ಅವರೆಲ್ಲಾ ಅನ್ಯಭಾಷೆಯ ಮೂಲದ್ರವ್ಯವನ್ನು ತೆಗೆದುಕೊಂಡು ಕನ್ನಡೀಕರಿಸುತ್ತಿದ್ದರು. ಯೋಗ್ಯರಾದವರ ಕೈಯ್ಯಲ್ಲಿ ಸಿಕ್ಕಿದರೆ ಕನ್ನಡಭಾಷೆಗೆ ಮೂಲವನ್ನು ಮೀರುವ ಧ್ವನಿಶಕ್ತಿಯಿದೆ. ’lead kindly light’ ಇಂಗ್ಲೀಷ್ ಹಾಡು ಬಿ.ಎಮ್.ಶ್ರೀ ಕೈಯ್ಯಲ್ಲಿ ’ಕರುಣಾಳು ಬಾ ಬೆಳಕೇ…’ಎಂಬ ಅನುಭಾವದ ಹಾಡಿನಂತೆ. ಬರ್ನ್ ಕವಿಯ ’my love is like a red red rose’ ಹಾಡು ’ನನ್ನ ಪ್ರೇಮದ ಹುಡುಗಿ ತಾವರೆಯ ಹೊಸ ಕೆಂಪು’ ಆಗಿ ಕನ್ನಡ ಹಾಡಾಗಿ ಉಳಿದುಬಿಡುತ್ತದೆ. ಕನ್ನಡ ಸಾಹಿತ್ಯ ಪ್ರಪಂಚ ಅನುವಾದ ಸಾಹಿತ್ಯಕ್ಕೆ ತೆರೆದುಕೊಳ್ಳದಿರುತ್ತಿದ್ದರೆ ನಮಗೆ ಪಾಶ್ಚಾತ್ಯ ಮತ್ತು ಪೌರಾತ್ಯ ಜಗತ್ತಿನ ಸಾಹಿತ್ಯ ಮತ್ತು  ಚಿಂತನೆಯ ಪರಿಚಯವೇ ಆಗುತ್ತಿರಲಿಲ್ಲ.

 ಜಾಗತೀಕರಣಕ್ಕೆ ತೆರೆದುಕೊಂಡವರು ನಾವು. ಸ್ಪರ್ಧೆ ಅನಿವಾರ್ಯ. ಗ್ರಾಹಕ ಸಂಸ್ಕೃತಿಯಲ್ಲಿ ಗುಣಮಟ್ಟದ ಉತ್ಪಾದನೆಯೇ ಅಂತಿಮ. ಅದು ನಮಗೆ  ನಮ್ಮದೇ ಭಾಷೆಯಲ್ಲಿ  ದೊರೆಯಬೇಕು. .ಇಲ್ಲವಾದರೆ ಯಾವ ಭಾಷೆಯಲ್ಲಿ ನಮಗದು ಸಿಗುತ್ತದೋ ಆ ಭಾಷೆಯನ್ನು ನಾವು ಕಲಿಯುತ್ತೇವೆ. ಆಗ ನಿಜವಾಗಿಯೂ ನಮ್ಮ ಭಾಷೆ ಸೊರಗುತ್ತದೆ. ನಾನು ತಮಿಳು ಮತ್ತು ಮಲೆಯಾಳಂ ಭಾಷೆ ಕಲಿತದ್ದು ಹಾಗೆಯೇ. ಬೆಂಗಾಲಿ ಮತ್ತು ಅಸ್ಸಾಂ ಭಾಷೆಯ ಚಿತ್ರಗಳು ನನಗೆ ಕಾಲೇಜು ದಿನಗಳಲ್ಲಿ ನೋಡಲು ಸಿಗುತ್ತಿದ್ದರೆ ಆ ಭಾಷೆಯನ್ನೂ ಕಲಿಯುತ್ತಿದ್ದೆನೇನೋ..! ಆಗ ನನಗೆ ಆಯ್ಕೆಗಳು ಕಮ್ಮಿ ಇತ್ತು..!! ಹಾಗಾಗಿ ನಾನು ಕನ್ನಡವನ್ನೂ ಕಲಿತೆ…!!! ಈಗಿನ ಪೀಳಿಗೆಯವರು ಹೆಚ್ಚೆಚ್ಚು ಭಾಷೆಯನ್ನು ಕಲಿತ್ತಿದ್ದರೆ, ಕಲಿಯುತ್ತಿದ್ದರೆ ಅದಕ್ಕೆ ಕನ್ನಡ ಚಿತ್ರರಂಗದ ಜಿಗುಟುತನವೂ ಒಂದು ಕಾರಣ. ಅವರಿಗೆ ಕನ್ನಡ ಹೊರಜಗತ್ತಿಗೂ ಬೇಡ, ಒಳಜಗತ್ತಿಗೂ ಬೇಡ..!

 ’ಇನ್ ಸೆಪ್ಷನ್’”ಅವಟಾರ್’ ನಂತಹ ಸಿನೇಮಾಗಳು ಅದರ ಎಲ್ಲಾ ತಾಂತ್ರಿಕ ವೈಭವದೊಡನೆ ನನಗೆ ಬೇಕಾಗಿದ್ದರೆ ಹಳ್ಳಿಯಲ್ಲಿರುವ ನನ್ನ ಅಮ್ಮನಿಗೆ ನ್ಯಾಷನಲ್ ಜಿಯಾಗ್ರಪಿಯಲ್ಲಿ ಪ್ರಸಾರವಾಗುವ ಕಡಲಾಳದ ವಿಸ್ಮಯಗಳು ಬೇಕು. ನನ್ನ ಅಪ್ಪನಿಗೆ ಡಿಸ್ಕವರಿಯ ಪ್ರಾಣಿಪ್ರಪಂಚ, ಅಣ್ಣನಿಗೆ ಹಿಸ್ಟರಿ ಚಾನಲ್, ಕೆಲಸದವಳಿಗೆ ರಾಮಾಯಣ- ಮಹಾಭಾರತ ..ಮಗನಿಗೆ ಕಾರ್ಟೂನ್ ಚಾನಲ್ ಗಳು ಬೇಕು. ಕನ್ನಡ ಚಿತ್ರರಂಗದ ಸೀಮಿತ ಮಾರುಕಟ್ಟೆ ಮತ್ತು ಅದರ ಅರ್ಥಿಕ ಸಾಮರ್ಥ್ಯದ ಅರಿವು ನಮಗಿದೆ. ಹಾಗಾಗಿ ನಮಗೆ ವಿಶ್ವದ ಆಯ್ದ ಸಿನೇಮಾಗಳ, ಡಾಕ್ಯುಮೆಂಟರಿಗಳ ಡಬ್ಬಿಂಗ್ ವರ್ಷನ್ ಬೇಕು.   ಕಾರಣವೇ ಅಲ್ಲದ ಕಾರಣಗಳನ್ನು ಮುಂದಿಟ್ಟುಕೊಂಡು  ನಮ್ಮ ಜ್ನಾನ ವಿಸ್ತಾರದ ಬಾಗಿಲುಗಳನ್ನು ಮುಚ್ಚುತ್ತಾ, ಸ್ಪರ್ಧೆಯಿಂದ ಹಿಂದೆ ಸರಿಯುವುದೆಂದರೆ ಅದು ಆರು ಕೋಟಿ ಕನ್ನಡಿಗರಿಗೆ ಎಸಗುತ್ತಿರುವ ಅನ್ಯಾಯ.  ಈ ಬಗ್ಗೆ ಚಿಂತನೆ ನಡೆಯಬೇಕು. 

[ ವಿಜಯಕರ್ನಾಟಕದ ’ಅನುರಣನ’ ಕಾಲಂ ನಲ್ಲಿ ಪ್ರಕಟವಾದ ಲೇಖನದ ಪರಿಷ್ಕೃತ ಬರಹ ]

Monday, April 9, 2012

ವಧಾಸ್ಥಾನದಲ್ಲಿ ವೈಯಕ್ತಿಕ ಸಂಬಂಧಗಳು



”ಇಬ್ಬರು ವ್ಯಕ್ತಿಗಳ ನಡುವಿನ ಸಂಬಂಧ ಸಮಾಜವನ್ನು ಸೃಷ್ಟಿಸುತ್ತದೆ; ಸಮಾಜ ನನ್ನನ್ನು ಮತ್ತು ನಿಮ್ಮನ್ನು ಬಿಟ್ಟು ಬೇರೆಯಾಗಿಲ್ಲ; ಇಬ್ಬರು ವ್ಯಕ್ತಿಗಳು ತಾವು ಪರಸ್ಪರ ಸೇರಿಕೊಂಡಿದ್ದೇವೆಂಬುದನ್ನು ಅರಿತರೆ,ಅದೇ ಸಂಬಂಧ. ಸಂಬಂಧವೆಂದರೆ ಭಯವಿಲ್ಲದ ಸಹಭಾಗಿತ್ವ ಅಥವಾ ಭಾವೈಕತೆ, ಪರಸ್ಪರ ಅರ್ಥ ಮಾಡಿಕೊಳ್ಳಲು, ನೇರವಾಗಿ ಸಂಪರ್ಕಿಸಲು ಮುಕ್ತ ವಾತಾವರಣ. ಆದರೆ ನಾವು ಸಂಬಂಧವನ್ನು ಸುಖಸಾದನವನ್ನಾಗಿ ಬಳಸಿಕೊಳ್ಳುತ್ತೇವೆ. ”. ಇದು ಪ್ರಸಿದ್ಧ ದಾರ್ಶನಿಕ ಜೆ. ಕೃಷ್ಣಮೂರ್ತಿಯವರು ಸಂಬಂಧಕ್ಕೆ ನೀಡುವ ವ್ಯಾಖ್ಯಾನ.
ಇಲ್ಲಿ ಅವರು ’ಸಂಬಂಧಗಳ ಬಳಸಿಕೊಳ್ಳುವಿಕೆ’ ಎಂಬ ಶಬ್ದವನ್ನು ಉಪಯೋಗಿಸಿದ್ದಾರೆ. ಅದರ ಬಗ್ಗೆ ನನಗೆ ಕುತೂಹಲವಿದೆ. ಸಂಬಂಧಗಳನ್ನು ಬಳಸಿಕೊಳ್ಳುವುದು ಎಂದರೆ ಏನು? ಅದರಿಂದ ಪ್ರಯೋಜನವನ್ನು ಪಡೆದುಕೊಳ್ಳುವುದೇ? ವ್ಯವಾಹರಿಕವಾದ ದೃಷ್ಟಿಕೋನದಿಂದ ನೋಡುವುದೇ?. ಅದು ನನಗೆ ಸುಖವನ್ನು ಕೊಡುವುದಿಲ್ಲ ಎಂದು ಅನ್ನಿಸಿದರೆ ಅಥವಾ ಅದು ಹಳೆಯದಾಯಿತು, ಆಕರ್ಷಣೆಯನ್ನು ಕಳೆದುಕೊಂಡಿತು ಎಂದರೆ ಅದನ್ನು ತ್ಯಜಿಸಿಬಿಡುವುದೇ?. ಸಂಬಂಧಗಳು ಅಂದರೆ ಅಷ್ಟೆನಾ…?
ನಾವು ಸಂಬಂಧಗಳನ್ನು ವ್ಯವಹಾರಿಕ ಸಂಬಂಧಗಳು. ಭಾವನಾತ್ಮಕ ಸಂಬಂಧಗಳು, ರಕ್ತ ಸಂಬಂಧಗಳು ಮಾನವೀಯ ಸಂಬಂಧಗಳು ಎಂದೆಲ್ಲಾ ವಿಂಗಡಿಸುತ್ತೇವೆ. ಈ ಎಲ್ಲಾ ಸಂಬಂಧಗಳಲ್ಲೂ ಬಳಸುವಿಕೆ ಎಂಬುದು ಅಲ್ಪ ಪ್ರಮಾಣದಲ್ಲಿ ಇದ್ದೇ ಇರುತ್ತದೆ. ಏಕೆಂದರೆ ಇಲ್ಲಿ ಪರಸ್ಪರ ಅವಲಂಬನೆ, ನಂಬಿಕೆ. ವಿಶ್ವಾಸ ಪ್ರೀತಿ ಮತ್ತು ಪ್ರಾಮಾಣಿಕತೆಯಿರುತ್ತದೆ. ಒಳ್ಳೆಯ ಬದುಕಿನ ಹಂಬಲವಿರುತ್ತದೆ. ಆ ಮೂಲಕ ಸ್ವಸ್ಥ ಸಮಾಜ ರೂಪುಗೊಳ್ಳುತ್ತದೆ. ಆದರೆ ಇಂದು ಮಾಧ್ಯಮಗಳಲ್ಲಿ ಪರಸ್ಪರ ಹೊಡೆದಾಡುತ್ತಿರುವ, ಕೆಸರೆರೆಚಿಕೊಳ್ಳುತ್ತಿರುವ ಸಂಬಂಧಗಳನ್ನು ನೋಡುತ್ತಿರುವಾಗ ಇಲ್ಲಿ ’ಬಳಸಿಕೊಳ್ಳುವಿಕೆ’ಯೇ ಪ್ರಮುಖ ಅಸ್ತ್ರವಾಗಿ ಬಳಕೆಯಾಗುತ್ತಿದೆ ಎಂದು ಅನ್ನಿಸುವುದಿಲ್ಲವೇ?
ಮೊನ್ನೆ ಭಾನುವಾರ ಕನ್ನಡದ ಸುದ್ದಿವಾಹಿನಿಗಳಲ್ಲಿ ಸೆಲೆಬ್ರಿಟಿಗಳಿಗೆ ಸಂಬಂಧಪಟ್ಟಂತೆ ಎರಡು ಕೆಸರೆರಚಾಟ ನಡೆಯಿತು. ಒಂದು ಭಾವನಾತ್ಮಕ ಸಂಬಂಧಕ್ಕೆ ಸಂಬಂಧಪಟ್ಟದಾದರೆ ಇನ್ನೊಂದು ವ್ಯವಾಹರಿಕ ಸಂಬಂಧಕ್ಕೆ ಸಂಬಂಧಿಸಿದ್ದು. ಆದರೆ ಇವೆರಡರಲ್ಲಿ ನಲುಗಿದ್ದು ಮಾನವೀಯ ಸಂಬಂಧಗಳು. ಇಲ್ಲಿನ ಚರ್ಚೆಯ ಪರಿ, ಚರ್ಚೆಗೆ ವಿನಿಯೋಗಿಸಿದ ಕಾಲಾವಧಿಯನ್ನು ಗಮನಿಸಿದರೆ ಸಂಬಂಧಗಳ ಬಳಸಿಕೊಳ್ಳುವಿಕೆಯ ವಿವಿಧ ರೂಪಗಳು ಅನಾವರಣಗೊಂಡವು.
ಚರ್ಚೆ ನಡೆಯಲಿ, ಬೇಡ ಎನ್ನುವುದಿಲ್ಲ. ಅದಕ್ಕೊಂದು ಘನತೆ, ಗಾಂಭೀರ್ಯ, ತಾರ್ಕಿಕತೆ ಬೇಡವೇ? ನ್ಯಾಯಾಧೀಶರ ಗತ್ತಿನಲ್ಲಿ ಕುಳಿತುಕೊಳ್ಳವವರು ನ್ಯಾಯದಾನ ನೀಡುವಷ್ಟು ಪ್ರಾಮಾಣಿಕರಾಗಿರಬೇಕಲ್ಲವೇ? ನೀತಿ ಪಾಠ ಹೇಳುವವರು ಸ್ವತಃ ನೀತಿವಂತರಾಗಿರಬೇಕಲ್ಲವೇ?
ಪ್ರತಿಯೊಬ್ಬರ ಬದುಕಿನಲ್ಲೂ ಹತ್ತಾರು ಧಾರಾವಾಹಿಗಳಿಗಾಗುವಷ್ಟು ಸರಕಿರುತ್ತದೆ. ಹಾಗೆಂದುಕೊಂಡು ಅವುಗಳನ್ನೆಲ್ಲಾ ಮಾರಾಟಕ್ಕಿಡಲು ಸಾಧ್ಯವೇ?
ನಮ್ಮ ಬದುಕು ಕೇವಲ ”ನನ್ನದು’ ಮಾತ್ರ ಆಗಿರುವುದಿಲ್ಲ. ಅದು ’ನಮ್ಮವರ’ ಜೊತೆ ಹಣೆಯಲ್ಪಟ್ಟಿರುತ್ತೆ. ನಾವು ಎಲ್ಲವನ್ನೂ ತೆರೆದಿಡುತ್ತಾ ಹೋದರೆ ಅವರ ಬದುಕು ಅಲ್ಲಾಡಿಬಿಡುತ್ತದೆ. ಆ ಅರಿವು ಸಾರ್ವಜನಿಕ ವೇದಿಕೆಗಳಲ್ಲಿ ತಮ್ಮ ಬದುಕನ್ನು ತೆರೆದಿಡುವವರ ಅರಿವಿನಲ್ಲಿರಬೇಕು. ತಾವಾಗಿಯೇ ತಮ್ಮ ಬದುಕನ್ನು ಬೀದಿಗೆ ಹರಡಿ ನಿಲ್ಲುವುದರಲ್ಲಿ ಬೇರೆ ಬೇರೆ ಉದ್ದೇಶಗಳು ಅಡಗಿರಬಹುದು. ಆದರೆ ಕೆಲವೊಮ್ಮೆ ಬೇರೆಯವರು ನಮ್ಮ ಬದುಕನ್ನು ಎಳೆದು ತಂದು ವಧಾಸ್ಥಾನದಲ್ಲಿ ನಿಲ್ಲಿಸುತ್ತಾರಲ್ಲಾ, ಅದಕ್ಕೇನು ಮಾಡುವುದು?
ಪ್ರತಿಯೊಬ್ಬ ಮನುಷ್ಯನಿಗೂ ಒಂದು ವ್ಯಯಕ್ತಿಕ ಬದುಕು ಇನ್ನೊಂದು ಸಾರ್ವಜನಿಕ ಬದುಕಿರುತ್ತದೆ. ಸಾರ್ವಜನಿಕ ಬದುಕಿನಲ್ಲಿರುವ ಸೆಲೆಬ್ರಿಟಿಗಳ ಬದುಕಿನ ಬಗ್ಗೆ ಜನಸಾಮಾನ್ಯರಿಗೆ ಯಾವಾಗಲೂ ಕುತೂಹಲವಿರುತ್ತದೆ. ಅದು ಗಂಡು ಹೆಣ್ಣಿನ ಸಂಬಂಧಕ್ಕೆ ಸಂಬಂಧಪಟ್ಟಿದ್ದಾದರೆ ಅದಕ್ಕೊಂದು ಸಾಮಾಜಿಕ ಚೌಕಟ್ಟು ಇದ್ದೇ ಇರುತ್ತದೆ. ಕೆಲವು ಸಂಬಂಧಗಳು ಸಮಾಜದ ದೃಷ್ಟಿಯಲ್ಲಿ ಅನೈತಿಕ ಎನಿಸಬಹುದು. ಆದರೆ ವ್ಯಯಕ್ತಿಕವಾಗಿ ಸಹ್ಯ ಅನಿಸಬಹುದು. ಆದರೆ ಚೌಕಟ್ಟುಗಳನ್ನು ಮೀರುವ ಕನಸು ಎಲ್ಲರಲ್ಲೂ ಇದ್ದೇ ಇರುತ್ತದೆ.
ಅಂತಹದೊಂದು ಸಂಬಂಧ ಆತನಿಗೆ/ಅವಳಿಗೆ ವಾಸ್ತವದಲ್ಲಿ ದೊರಕಿದ್ದರೆ, ಅದನ್ನವರು ಜತನದಿಂದ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿದ್ದರೆ ಅದನ್ನು ಛಿದ್ರಗೊಳಿಸುವ ಪ್ರಯತ್ನವನ್ನು ನಾವ್ಯಾಕೆ ಮಾಡಬೇಕು? ಒಂದು ವೇಳೆ ಅದು ಕಾನೂನು ವಿರೋಧಿಯಾಗಿದ್ದರೆ ಅದರಿಂದ ಬಾಧೆಗೊಳಗಾದವರು ಕಾನೂನಿನ ಚೌಕಟ್ಟಿನೊಳಗಡೆಯೇ ಪ್ರಶ್ನಿಸಲಿ. ಅವರೇ ಅದನ್ನು ನಿರ್ಲಕ್ಷಿಸಿದ್ದರೆ..ಉಪೇಕ್ಷಿಸಿದ್ದರೆ… ಬೇರೆಯವರು ಯಾಕೆ ಮೂಗು ತೂರಿಸಬೇಕು? ಒಂದು ವೇಳೆ ಅವರು ತಮ್ಮ ವೈಯಕ್ತಿಕ ಸಂಕಷ್ಟಗಳಿಂದ, ಗೋಜಲುಗಳಿಂದ ಹೊರಬರಲು ಅನ್ಯರ ಮೊರೆ ಹೋದಲ್ಲಿ ಅವರಿಗೆ ಪ್ರಾಮಾಣಿಕ ರೀತಿಯಲ್ಲಿ ಸಹಾಯ ಮಾಡಬೇಕೆ ಹೊರತು ಅದನ್ನು ಮತ್ತಷ್ಟು ಕಗ್ಗಂಟು ಮಾಡಬಾರದು.
ಜನ್ನನ ಯಶೋಧರ ಚರಿತೆಯ ಅಮೃತಮತಿಯನ್ನು ಬೀದಿಯಲ್ಲಿ ತಂದು ನಿಲ್ಲಿಸಿದ್ದು ಯಾಕೆ ಎಂಬುದು ಇಂದಿಗೂ ನನ್ನನ್ನು ಕಾಡುವ ಪ್ರಶ್ನೆ. ಅಮೃತಮತಿಯ ಗಂಡ ಯಶೋಧರ, ’ಗಂಡ’ನಾಗಿ ವರ್ತಿಸಿದ್ದನೇ? ಅದು ಅವಳಿಗೆ ತಾನೇ ಗೊತ್ತು? ನಮ್ಮ ತರ್ಕಗಳೇನಿದ್ದರೂ ಹೊರನೋಟದ್ದು. ಬೇರೆಯದೇ ಆದ ಒಳಜಗತ್ತೊಂದು ಇರುತ್ತದೆಯಲ್ಲವೇ? ಅದರ ಆಳಕ್ಕೆ ಇನ್ನೊಬ್ಬರು ಎಷ್ಟು ಇಳಿಯಲು ಸಾಧ್ಯ?
ಇಂದಿನ ಕಾಲಘಟ್ಟದಲ್ಲಿ ನಿಂತು ಯೋಚಿಸಿದರೆ ನನಗನಿಸಿದ್ದು ಇಷ್ಟು; ನಾನು ಒಬ್ಬ ಹುಡುಗನನ್ನು ಪ್ರೀತಿಸಿದ್ದರೆ, ಪ್ರೀತಿಸುತ್ತಿದ್ದರೆ ಅದು ನನಗೆ ಮತ್ತು ಅವನಿಗೆ ಸಂಬಂಧಿಸಿದ ವಿಚಾರ.. ಅದರಲ್ಲಿ ಇನ್ನೊಬ್ಬರ ’ಇಣುಕುವಿಕೆ’ಯನ್ನು ನಾನು ಸಹಿಸುವುದಿಲ್ಲ. ನಮ್ಮ ಮುನಿಸು, ನಮ್ಮ ಹಠ, ನಮ್ಮ ಸಾಂತ್ವನ, ನಮ್ಮ ಪಾಪ ನಿವೇದನೆ ಎಲ್ಲವೂ ನಮ್ಮ ಖಾಸಗಿ ಪ್ರಪಂಚಕ್ಕೆ ಸಂಬಂಧಿಸಿದ್ದು.
ಗಂಡು-ಹೆಣ್ಣಿನ ಸಂಬಂಧವೊಂದನ್ನು, ಅದು ವಿವಾಹಿತರಿರಲಿ ಅವಿವಾಹಿತರಿರಲಿ ಅದನ್ನು ಮತ್ತೆ ಮತ್ತೆ ಕೆದಕುವುದು, ಚುಚ್ಚುವುದು, ಅಲ್ಲಾಡಿಸುವುದು ಆ ವ್ಯಕ್ತಿಗಳ ಮಾನಸಿಕ ಆರೋಗ್ಯ ಮತ್ತು ಒಟ್ಟು ಸಮಾಜದ ಆರೋಗ್ಯದ ದೃಷ್ಟಿಯಿಂದಲೂ ಕ್ಷೇಮವಲ್ಲ. ನೈತಿಕತೆಗಿಂತ ಮಾನವೀಯತೆ, ಮನುಷ್ಯ ಸಂಬಂಧಗಳೇ ಮುಖ್ಯವಾಗಬೇಕು.
[ ವಿಜಯ ಕರ್ನಾಟಕದ ’ಅನುರಣನ’ ಅಂಕಣದಲ್ಲಿ ಪ್ರಕಟವಾದ ಬರಹ ]

Saturday, April 7, 2012

’ಶಿಶಿರ ವಸಂತ’ ದಲ್ಲಿ ವಸಂತನೇ ನಾಪತ್ತೆ…!




ಶಿಶಿರ ವಸಂತ’ ನಾಟಕವನ್ನು ನೋಡಲು ರವೀಂದ್ರ ಕಲಾಕ್ಷೇತ್ರಕ್ಕೆ ಹೊರಟಾಗ ನನ್ನಲ್ಲಿ ನಿರೀಕ್ಷೆಗಳ ಜೊತೆಗೆ ಪುಟ್ಟದೊಂದು ಕುತೂಹಲವೂ ಇತ್ತು. ಮೊದಲನೆಯದಾಗಿ ಅದು ಶೇಕ್ಷ್ ಪಿಯರ್ ನ ನಾಟಕ. ಎರಡನೆಯದಾಗಿ ಅದನ್ನು ಅನುವಾದಿಸಿ ನಿರ್ದೇಶಿಸಿದವರು ಅಕ್ಷರ ಕೆ.ವಿ ಮತ್ತು ಅಭಿನಯಿಸುತ್ತಿರುವವರು ಕನ್ನಡದ ಮೊದಲ ರೆಪರ್ಟರಿಯೆನಿಸಿಕೊಂಡಿರುವ ನೀನಾಸಂ ತಂಡ. ಕುತೂಹಲ ಯಾಕೆಂದರೆ ನಾಲ್ಕು ಶತಮಾನಗಳ ಹಿಂದೆ ರಚನೆಗೊಂಡಿರುವ ನಾಟಕವೊಂದು ವರ್ತಮಾನಕ್ಕೆ ಹೇಗೆ ಸ್ಪಂದಿಸುತ್ತದೆಯೆಂಬುದು…
ನಾಟಕದ ವಸ್ತು ಸಾಮಾನ್ಯವಾದುದು. ಎಲ್ಲರಿಗೂ ಅರ್ಥವಾಗುವಂಥದು. ಇಬ್ಬರು ಗೆಳೆಯರಿರುತ್ತಾರೆ. ಅವರು ಅಕ್ಕಪಕ್ಕ ರಾಜ್ಯದ ರಾಜರೂ ಹೌದು. ಲಿಯಾಂಟೆಸ್ ನ ಮನೆಗೆ ಪಾಲಿಕ್ಸೆನಸ್ ಬರುತ್ತಾನೆ; ದೀರ್ಘ ಕಾಲ ಉಳಿಯುತ್ತಾನೆ. ಆತನನ್ನು ಇನ್ನಷ್ಟು ಕಾಲ ಉಳಿಸಿಕೊಳ್ಳುವ ಆಸೆ ಇವನಿಗೆ, ಆದರೆ ಅವನಿಗೆ ತಾಯ್ನಾಡಿಗೆ ಮರಳುವ ಹಂಬಲ, ಇವನ ಮಾತು ಕೇಳದ ಪಾಲಿಕ್ಸೆನಸ್, ಲಿಯಾಂಟೆಸ್ ನ ಪತ್ನಿ ಹರ್ಮಿಯೋನ್ ಳ ಅನುನಯದ ಮಾತುಗಳಿಗೆ ಒಪ್ಪಿ ಇನ್ನಷ್ಟು ಕಾಲ ಇಲ್ಲೇ ಉಳಿಯಲು ಮನಸ್ಸು ಮಾಡುತ್ತಾನೆ. ಇದು ಲಿಯಾಂಟೆಸ್ ನ ಮನಶ್ಯಾಂತಿಯನ್ನು ಕದಡಿಬಿಡುತ್ತದೆ. ಅವನ ಮತ್ತು ಈಕೆಯ ನಡುವೆ ಅನೈತಿಕ ಸಂಬಂಧ ಇರಬಹುದೆಂದು ಶಂಕಿಸುತ್ತಾನೆ. ಆ ಶಂಕೆಯ ಕಾರಣದಿಂದಾಗಿ ಲಿಯಾಂಟೆಸ್ ನ ಬದುಕಿನ ವಸಂತದಲ್ಲಿ ಶಿಶಿರ [ಶಿಶಿರ;ಆರು ಋತುಗಳಲ್ಲಿ ಕೊನೆಯದು. ಮರಗಳೆಲ್ಲಾ ಎಲೆಗಳನುದುರಿಸಿಕೊಂಡು ಬೋಳಾಗಿ ನಿಲ್ಲುವ ಕಾಲ. ಇದು ಮುಪ್ಪನ್ನು, ಮುದುಡುವಿಕೆಯನ್ನು ಸಂಕೇತಿಸುತ್ತದೆ.]ಆವರಿಸಿಕೊಳ್ಳುತ್ತದೆ. ಆ ಶಂಕೆಯೇ ಮುಂದೆ ನಡೆಯುವ ಹಲವು ಅವಘಡಗಳಿಗೆ ಕಾರಣವಾಗುತ್ತದೆ.
ಪತ್ನಿಯ ಶೀಲದ ಮೇಲಿನ ಶಂಕೆ ಕಾಲ, ದೇಶಾತೀತವಾದುದು. ಅದು ಶ್ರೀರಾಮಚಂದ್ರನಿಂದ ಹಿಡಿದು ಪಕ್ಕದ ಮನೆಯ ರಾಮಪ್ಪನ ತನಕ ಇಂದಿಗೂ ಮುಂದುವರಿದಿದೆ. ಮುಂದೆಯೂ ಮುಂದುವರಿಯುತ್ತದೆ. ಇಂಥ ಸಾರ್ವಕಾಲಿಕ ಸತ್ಯದ ಕಥಾಹಂದರವನ್ನು ಹೊಂದಿರುವ ಶೇಕ್ಷ್ ಪಿಯರ್ ನ ’ದಿ ವಿಂಟರ್ಸ್ ಟೇಲ್’ ನಾಟಕವನ್ನು ವಿಮರ್ಶಕರು, ಆತನ ದುರ್ಬಲ ನಾಟಕಗಳಲ್ಲೊಂದು ಎಂದು ಗುರುತಿಸಿದ್ದಾರೆ. ಇಂತಹ ನಾಟಕವೊಂದನ್ನು ಕೆ.ವಿ.ಅಕ್ಷರ ಅನುವಾದಿಸಿದ್ದಲ್ಲದೆ ಅದನ್ನು ಪ್ರಯೋಗಕ್ಕೊಳಪಡಿಸುವ ಸಾಹಸಕ್ಕೂ ಕೈ ಹಾಕಿದ್ದಾರೆ. ಅದರಲ್ಲಿ ಅವರು ಯಶಸ್ವಿಯಾದರೇ?
ನೀನಾಸಂ ನಾಟಕಗಳೆಂದರೆ ’ಹೀಗೆಯೇ ಇರುತ್ತವೆ’ ಎಂಬ ಸಾಮಾನ್ಯ ಕಲ್ಪನೆಗಳನ್ನೆಲ್ಲಾ ಒಡೆದ ನಾಟಕವಿದು. ಅವರ ನಾಟಕಗಳಲ್ಲಿ ವಸ್ತುವನ್ನು ಮೀರಿ ಟೆಕ್ನಿಕ್ ವಿಜೃಂಭಿಸುತ್ತದೆ. ರಂಗಪರಿಕರಗಳ ಭಾರಕ್ಕೆ ನಾಟಕ ನಲುಗಿದಂತೆ ಭಾಸವಾಗುತ್ತದೆ. ನಾಟಕವನ್ನು ಶಿಸ್ತುಬದ್ಧಗೊಳಿಸುತ್ತಾ ಹೋದಂತೆಲ್ಲಾ ಸೃಜನಶೀಲತೆ ಮರೆಯಾಗುತ್ತದೆಯೆನೋ ಎಂಬ ಶಂಕೆಗೆ ನೀನಾಸಂ ನಾಟಕಗಳು ಕಾರಣವಾಗುತ್ತಿದ್ದವು. ಆದರೆ ಶಿಶಿರ ವಸಂತ ಈ ನಂಬಿಕೆಗಳಿಗೆಲ್ಲಾ ಹೊರತಾಗಿತ್ತು.
’ಶಿಶಿರ ವಸಂತ’ದಲ್ಲಿ ಸಮಕಾಲೀನ ವಸ್ತುವಿತ್ತು. ಹಿತಮಿತವಾದ ರಂಗಪರಿಕರಗಳಿದ್ದವು. ಒಳ್ಳೆಯ ಸಂಗೀತವಿತ್ತು.ಆದರೂ ಒಳ್ಳೆಯ ಪ್ರಯೋಗವಾಗವೆಂದು ಹೇಳಲಾಗುವುದಿಲ್ಲ. ಅದಕ್ಕೆ ಕಾರಣ ಸಡಿಲ ನಿರ್ದೇಶನ. ಮೊದಲನೆಯದಾಗಿ ಪಾತ್ರಗಳ ಆಯ್ಕೆಯೇ ಸರಿಯಾಗಿರಲಿಲ್ಲ. ನಾಟಕದ ಕೇಂದ್ರ ಪಾತ್ರವಾದ ಲಿಯಾಂಟೆಸ್ ನದು ದುರಂತ ಪಾತ್ರ. ಆತ ಮಾನಸಿಕ ಅಸ್ವಸ್ಥನಂತೆ ನಟಿಸಬೇಕಾಗಿತ್ತು. ಆದರೆ ಆತನಲ್ಲಿ ಎನರ್ಜಿಯೇ ಇರಲಿಲ್ಲ. ಕುಡುಕನಂತೆ ವರ್ತಿಸುತ್ತಿದ್ದ. ಪೌಲಿನಾ, ಪಾಲಿಕ್ಸ್ ನಸ್,, ಹರ್ಮಿಯೋನ್, ಮುದಿಕುರುಬ ಮುಂತಾದ ಕೆಲವು ಪಾತ್ರಗಳನ್ನು ಹೊರತುಪಡಿಸಿದರೆ ಬಹುತೇಕ ನಟರಲ್ಲಿ ರಂಗ ಹುಮ್ಮಸು ಇರಲಿಲ್ಲ. ರಂಗಚಲನೆಯಿರಲಿಲ್ಲ. ಡೈಲಾಗ್ ಡೆಲಿವರಿ ಮಾತ್ರವೇ ನಾಟಕವಾಗುವುದಿಲ್ಲ. ರಂಗಕ್ರಿಯೆಗಳು ನಡೆಯಬೇಕು. ಅಪೋಲೋ ವಾಣಿಯನ್ನು ಪ್ರೇಕ್ಷಕರ ಮದ್ಯದಿಂದ ಹೊತ್ತು ತಂದು ಬ್ರೆಕ್ಟ್ ನ ಪೋರ್ತ್ ವಾಲ್ ನ ಟೆಕ್ನಿಕ್ ಅನ್ನು ಬಳಸಿಕೊಂಡರೂ ಅದು ನಾಟಕವನ್ನು ಮೇಲೆತ್ತುವಲ್ಲಿ ಸಹಾಯಕವಾಗಲಿಲ್ಲ. ವಸ್ತ್ರ ವಿನ್ಯಾಸದಲ್ಲಿ ಹೊಸತನವಿರಲಿಲ್ಲ.
ನಾಟಕದ ವಸ್ತುವಿನ ಬಗ್ಗೆ ಕಾಲಪ್ರಕೃತಿ ಮತ್ತು ಕಾಲಪುರುಷನ ವಿವರಣೆಯ ನಂತರ ಇಬ್ಬರು ಗೆಳೆಯರ ನಡುವಿನ ಆಪ್ತತೆಯನ್ನು ಬಿಂಬಿಸುವುದರೊಂದಿಗೆ ಆರಂಭವಾದ ನಾಟಕ ಭರವಸೆಯನ್ನು ಹುಟ್ಟಿಸಿತಾದರೂ ಅನಂತರದಲ್ಲಿ ನಿಧಾನ ಗತಿಯಲ್ಲಿ ಸಾಗಿ ಪ್ರೇಕ್ಷಕರ ತಾಳ್ಮೆಯನ್ನು ಪರೀಕ್ಷಿಸುವಂತೆ ಮಾಡಿತು. ಎರಡೂವರೆ ಘಂಟೆಗೂ ಮೀರಿ ಲಂಬಿಸಲ್ಪಟ್ಟ ನಾಟಕದಲ್ಲಿ ಬಿಡಿಬಿಡಿಯಾಗಿ ಕೆಲವು ದೃಶ್ಯಗಳಲ್ಲಿ ಕಲಾವಿದರು ಚೆನ್ನಾಗಿ ಅಭಿನಯಿಸಿದರೂ ನಾಟಕ ಒಟ್ಟು ಶಿಲ್ಪವಾಗಿ ಮೂಡಿ ಬರಲಿಲ್ಲ. ಬಹುಶ’ ಕೃತಿಯಲ್ಲಿಯೇ ಆ ಮಿತಿಗಳಿದ್ದರೆ ಅದನ್ನು ರಂಗಪ್ರಯೋಗದಲ್ಲಿ ತುಂಬಿಕೊಳ್ಳವ ಸ್ವಾತಂತ್ರ್ಯ ನಿರ್ದೇಶಕನಿಗೆ ಇರುತ್ತದೆಯಲ್ಲವೇ?
ನಾಟಕವೊಂದು ಪ್ರೇಕ್ಷಕನಿಗೆ ಏನನ್ನು ದಾಟಿಸಬೇಕು? ಇದನ್ನು ನಿರ್ದೇಶಕ ಯೋಚಿಸುತ್ತಾನೆ. ಪ್ರೇಕ್ಷಕ ನಾಟಕದಿಂದ ಏನನ್ನು ಗ್ರಹಿಸಿದ್ದಾನೆ ಮತ್ತು ಏನನ್ನು ಬಯಸುತ್ತಾನೆ? ಅದು ಅವನ ನಡವಳಿಕೆಯಿಂದ ಗೊತ್ತಾಗುತ್ತದೆ.. ಬೆಂಗಳೂರಿನಂತಹ ಒತ್ತಡದ, ಜನನಿಬಿಡ ನಗರದಲ್ಲಿ ನಾಟಕ ನೋಡಲು ಅರ್ಧ ದಿನವನ್ನು ವ್ಯಯಿಸಬೇಕಾಗುತ್ತದೆ. ಹಾಗಾಗಿಯೇ ಆತ ತಾನು ನಾಟಕಕ್ಕಾಗಿ ಮೀಸಲಿಟ್ಟ ಸಮಯ ಮತ್ತು ಖರ್ಚು ಮಾಡಿದ ದುಡ್ಡು ವರ್ಥ್ ಅನ್ನಿಸುತ್ತದೆಯೇ ಎಂದು ಪ್ರಶ್ನಿಸಿಕೊಳ್ಳುತ್ತಾನೆ. ಆ ದೃಷ್ಟಿಯಿಂದ ನೋಡಿದರೆ ಚಿಕ್ಕದೊಂದು ಅಸಹನೆ ಆತನ ಮನದಲ್ಲಿ ಮೂಡಿದ್ದರೆ ಅಚ್ಚರಿಯೇನಿಲ್ಲ.
[ಇವತ್ತಿನ ವಿಜಯ ಕರ್ನಾಟಕದ ಸಾಪ್ತಾಹಿಕದಲ್ಲಿ ಪ್ರಕಟವಾದ ಬರಹ ]