Friday, April 22, 2011

ಹೊತ್ತ ಶಿಲುಬೆಗೆ ಏಳು ಮಲ್ಲಿಗೆಯ ತೂಕ !




ನನ್ನ ನಿನ್ನ ಸಂಬಂಧ ಕಡಿಯಿತು ಎಂದಳಾಕೆ
ಆ ಕ್ಷಣಕ್ಕಾಗಿಯೇ ಹಸಿದವನಂತೆ ’ತಥಾಸ್ತು’ ಎಂದವನು
ಬೆನ್ನು ತಿರುಗಿಸಿ ಹೋಗಿಯೇಬಿಟ್ಟ
ಅವಳು ಶಿಲೆಯಾಗಿ ನಿಂತಳು

ಎಂಥವನಿಗೊಲಿದೆನಯ್ಯಾ...ಎನ್ನಬೇಕಾದವಳು
ಇಂಥವನಿಗೊಲಿದೆಯಲ್ಲಾ...!
ಅವನತಮುಖಿ,
ಹೆಬ್ಬೆರಳ ತುದಿಯಲ್ಲಿ ಕೊಂಚ ಕೆಂಪು

ಎಲ್ಲವನ್ನೂ ಹೇಳಿಬಿಟ್ಟಾಗಿದೆ, ನೀರವ ನಿರಾಳತೆ.
ಕೋಟೆ ಕಟ್ಟುವುದಿದೆ,
ತನ್ನ ಶಿಲುಬೆಯ ತಾನೇ ಹೊತ್ತು.
ಹಂಬಲಗಳಿಗೋ ಆಯುಸ್ಸಿದೆ; ದಿನಗಳು ಮುಗಿದವು.

ಜಂಗಮಕ್ಕಳಿವುಂಟು; ಸ್ಥಾವರಕ್ಕಳಿವಿಲ್ಲ.
ಒಳಗೊಳಗೇ ಇಳಿದಳು, ಮೇಲೇರಿದಳು
ಚಂದಮಾಮನ ಮುಟ್ಟಲು ಐದೇ ಮೆಟ್ಟಲು.

ಕೋಟೆ ಕಟ್ಟಬೇಕು, ಅಲ್ಲಲ್ಲಿ ಕಳ್ಳಗಿಂಡಿಗಳನ್ನಿಟ್ಟು ಕಾಯಬೇಕು;
ಖಂಡಾಂತರ ಕ್ಷಿಪಣಿಗಳ ಯುಗ, ಎದೆಯೊಳಗೂ ಇಳಿದು ಬಿಟ್ಟಾವು!
ಸ್ವಚ್ಛಂದ ಆಕಾಶ, ಮಾಯಾಕಂಬಳಿಯಲ್ಲಿ ಕುಳಿತ ರಾಜಕುಮಾರಿ.
ಬಿಂಬಗಳೆಲ್ಲಾ ಜೀವತಳೆದು ನಕ್ಷತ್ರ ಮಾಲೆಯನು ಹಿಡಿದು ನಿಂತವು
ಬದುಕು ಕಾಮನಬಿಲ್ಲು.

ದಶದಿಕ್ಕಿನ ಹಾದಿ, ಒಬ್ಬಂಟಿ ಪಯಣ
ನನ್ನ ಶಿಲುಬೆಯ ನಾನೇ ಹೊರಬೇಕು.

ಎಲ್ಲವನ್ನೂ ಮುರಿಯಬೇಕು, ಮುರಿದು ಕಟ್ಟಬೇಕು
ಮಾತಿನಲ್ಲಿ ಜಾರಿದ್ದು ಮೌನದಲ್ಲಿ ಆಪ್ಪಿದೆ
ಹೊತ್ತ ಶಿಲುಬೆಗೆ ಏಳೇ ಮಲ್ಲಿಗೆಯ ತೂಕ!

Wednesday, April 13, 2011

ಪ್ರಕೃತಿ ಮಾತೆಗೆ ನಮಿಸುವ ’ವಿಷು ಹಬ್ಬ’





ನಮ್ಮ ದೃಶ್ಯ ಮಾದ್ಯಮಗಳು ಚಾಂದ್ರಮಾನ ಯುಗಾದಿಗೆ ಕೊಡುವ ಸಂಬ್ರಮದ ಪ್ರಚಾರವನ್ನು ನೋಡುವಾಗ ನನಗೆ ಪ್ರತಿಭಾ ನಂದಕುಮಾರ್ ಬರೆದ ಮಾತೊಂದು ನೆನಪಿಗೆ ಬರುತ್ತದೆ, ಅವರು ಒಂದೆಡೆ ಹೇಳುತ್ತಾರೆ; ಈ ಪಂಜಾಬಿಗಳು ಇಡೀ ದೇಶಕ್ಕೇ ಸೆಲ್ವಾರ್ ಕಮೀಜ್ ತೋಡಿಸಿಬಿಟ್ಟರು. ಹಾಗೆಯೇ ಯುಗಾದಿ ಆಚರಣೆಯಲ್ಲಿಯೂ ಮಾಧ್ಯಮಗಳು ಏಕತಾನತೆಯನ್ನು ತಂದುಬಿಟ್ಟವು. ಅಂದರೆ ಚಾಂದ್ರಮಾನ ಯುಗಾದಿಯನ್ನೆ ಸಮಸ್ತ ಕನ್ನಡಿಗರ ಯುಗಾದಿ ಹಬ್ಬವೆಂದು ಮಾಧ್ಯಮಗಳು ಪ್ರತಿವರ್ಷ ಹೇಳುತ್ತಲೇ ಬಂದವು.

ಆದರೆ ಇದಕ್ಕಿಂತ ಭಿನ್ನವಾದ ಇನ್ನೊಂದು ಯುಗಾದಿ ಆಚರಣೆಯೂ ನಮ್ಮ ದೇಶದ ಕೆಲವು ಭಾಗಳಲ್ಲಿವೆ. ಕರ್ನಾಟಕದ ಕರಾವಳಿ ಭಾಗದಲ್ಲಿ ಕೂಡಾ ಭಿನ್ನವಾದ ಯುಗಾದಿಯಿದೆ. ಅದನ್ನು ವಿಷು ಹಬ್ಬವೆಂದು ಕರೆಯಲಾಗುತ್ತದೆ.

ಸೂರ್ಯನ ಚಲನೆಯನ್ನು ಆಧಾರಿಸಿದ್ದು ಸೌರಮಾನ ಯುಗಾದಿ. ಚಂದ್ರನ ಚಲನೆಯನ್ನು ಆಧಾರಿಸಿದ್ದು ಚಂದ್ರಮಾನ ಯುಗಾದಿ. ಅಂದರೆ ಇದು ಖಗೋಳ ವಿಜ್ನಾನಕ್ಕೆ, ಗಣಿತಶಾಸ್ತ್ರವನ್ನು ಆಧರಿಸಿದ ಹಬ್ಬ.

ಸೌರಮಾನ ಯುಗಾದಿ ಆಚರಿಸುವುದು ಮೇಷ ಮಾಸದ ಮೊದಲದಿನ. ಅಂದು ಸೂರ್ಯ ಮೇಷರಾಶಿಯನ್ನು ಪ್ರವೇಶಿಸುತ್ತಾನೆ. ಚಾಂದ್ರಮಾನ ಯುಗಾದಿ ಬರುವುದು ಚೈತ್ರಮಾಸದ ಮೊದಲ ದಿನ. ಚೈತ್ರ ವೈಶಾಖ ವಸಂತಋತು ಅಂತ ನಾವು ಬಾಲ್ಯದಲ್ಲಿ ಕಲಿತದ್ದು ನೆನಪಗಿರಬೇಕಲ್ಲಾ...ಬೇಸಗೆಯ ರಜೆ, ಮಾವು, ಹಲಸು,ಗೇರು, ಅಜ್ಜನ ಮನೆ...ನೆನಪುಗಳ ಮೆರವಣಿಗೆ ಸಾಗಿ ಬಂದಿರಲೇಬೇಕು.

ನಾನು ತುಳುನಾಡಿನವಳು. ನಮ್ಮದು ಸೌರಮಾನ ಯುಗಾದಿ ಆಚರಣೆ. ಅಂದರೆ ನಮಗೆ ನಾಳೆ ಹೊಸ ವರ್ಷ . ಅದನ್ನು ನಾವು ’ವಿಷು ಹಬ್ಬ’ ಎಂದು ಆಚರಿಸುತ್ತೇವೆ. ಪ್ರತಿ ವರ್ಷ ಏಪ್ರಿಲ್ ೧೪ ರಂದು ಇದು ಸಂಭವಿಸುತ್ತದೆ.

ತುಳುನಾಡು ಮಾತ್ರ ಅಲ್ಲ, ತಮಿಳು ನಾಡು, ಕೇರಳ, ಪಂಜಾಬ್, ಬಂಗಾಳ, ಅಸ್ಸಾಂ ರಾಜ್ಯಗಳಲ್ಲೂ ಇಂದಿನ ದಿನವನ್ನು ಹೊಸ ವರ್ಷವೆಂದು ಆಚರಿಸಲಾಗುತ್ತದೆ.
ತುಳುವರಿಗೆ-ಬಿಸುಪರ್ಬ, ಮಲೆಯಾಳಿಗಳಿಗೆ-ವಿಷು, ತಮಿಳರಿಗೆ-ಪುತ್ತಾಂಡ್, ಪಂಜಾಬಿಗಳಿಗೆ-ಬೈಸಾಕಿ, ಅಸ್ಸಾಮಿಗಳಿಗೆ-ಬಿಹು. ಒಟ್ಟಿನಲ್ಲಿ ಇದು ರೈತಾಪಿ ವರ್ಗದ ಹಬ್ಬ.

ನಾವು ಸಮೃದ್ಧವಾಗಿ ಬದುಕಲು ಬೇಕಾದ್ದನ್ನೆಲ್ಲವನ್ನು ಕೊಟ್ಟ ಭೂತಾಯಿಗೆ ಕೃತಜ್ನತೆಗಳನ್ನು ಅರ್ಪಿಸುವ ದಿನವೇ ’ಬಿಸು ಪರ್ಬ’. ಈಹಬ್ಬದಲ್ಲಿ ’ಬಿಸುಕಣಿ’ಗೆ ತುಂಬಾ ಮಹತ್ವ. ಬಿಸುಕಣಿ ಅಂದರೆ ಹೊಸವರ್ಷದ ಸ್ವಾಗತಕ್ಕೆ ಇಡುವ ಕಳಶ. ಬಿಸುವಿನ ಹಿಂದಿನ ದಿನ ರಾತ್ರಿಯೇ ದೇವರ ಮುಂದೆ ಕಣಿಯನ್ನು ಇಡಲಾಗುತ್ತದೆ.
[ಕಣಿಹೇಳುವುದು, ಅಂದರೆ ಭವಿಷ್ಯ ಹೇಳುವುದು ಎಂಬ ಪದ ನಮ್ಮ ಆಡುಮಾತಿನಲ್ಲಿ ಚಾಲ್ತಿಯಲ್ಲಿದೆ. ಅದಕ್ಕೂ ಇದಕ್ಕೂ ಸಂಬಂಧವಿದೆಯೇನೋ ನನಗೆ ಗೊತ್ತಿಲ್ಲ,]

ದೇವರ ಮುಂದೆ ದೊಡ್ಡ ಹರಿವಾಣದಲ್ಲಿಒಂದು ಸೇರು ಅಕ್ಕಿಯನ್ನು ಹಾಕಿ ಅದರ ಮಧ್ಯೆ ಸುಲಿಯದ ತೆಂಗಿನಕಾಯಿಯನ್ನು ಇಡುತ್ತಾರೆ. ಅದರ ಸುತ್ತ ಆ ವರ್ಷ ತಮ್ಮ ಜಮೀನಿನಲ್ಲಿ ಬೆಳೆದ ಹೊಸ ಫಲ ವಸ್ತುಗಳನ್ನು ಜೋಡಿಸಬೇಕು. ಮುಖ್ಯವಾಗಿ ಮುಳ್ಳುಸೌತೆ, ಮಾವು, ಗೇರು, ಹಲಸು, ಸಿಹಿಕುಂಬಳಕಾಯಿ, ಒಡ್ಡುಸೌತೆ[ಮಂಗಳೂರು ಸೌತೆ], ಬೆಂಡೆ, ತೊಂಡೆ, ಅಲಸಂಡೆ ಮುಂತಾದವುಗಳನ್ನಿಟ್ಟು ನಡುವೆ ಒಂದು ಕನ್ನಡಿಯನ್ನಿಡಬೇಕು. ಕೆಲವೆಡೆ ಇವುಗಳ ಜೊತೆ ಬಂಗಾರದ ಆಭರಣಗಳು ಹಾಗು ಹೊಸಬಟ್ಟೆಗಳನ್ನೂ ಕಣಿಯ ಮುಂದಿಡುತ್ತಾರೆ.

ಬಿಸು ಹಬ್ಬದಲ್ಲಿ ಕಣಿಯ ದರ್ಶನ ಪಡೆಯುವುದು ಬಹಳ ಮುಖ್ಯವಾದುದು. ಮರುದಿನ ಬೆಳಿಗ್ಗೆ ಎಚ್ಚರವಾದೊಡನೆ ಕಣ್ಣು ತೆರೆಯದೆ ಹಾಗೆಯೇ ಕಣ್ಣ್ಮುಚ್ಚಿಕೊಂಡೇ ದೇವರ ಮುಂದೆ ಬಂದು ವಿಷುಕಣಿಯ ದರ್ಶನ ಪಡೆಯಬೇಕು. ಅನಂತರವೇ ಎಣ್ಣೆ ಅಭ್ಯಂಜನ ಮಾಡಿ ಹೊಸಬಟ್ಟೆ ತೊಟ್ಟು ಹಿರಿಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆದು ಅಲ್ಲಿಟ್ಟಿರುವ ಕನ್ನಡಿಯಲ್ಲಿ ಮುಖ ನೋಡಿಕೊಳ್ಳಬೇಕು. ಮಧ್ಯಾಹ್ನ ಹಬ್ಬದೂಟ ಉಂಡು ಸಂಜೆ ಸಮೀಪದ ದೇವಸ್ಥಾನ ಅಥವಾ ಭೂತಸ್ಥಾನಕ್ಕೆ ಹೋಗಿ ದೇವರ ಅಥವಾ ದೈವದ ದರ್ಶನ ಪಡೆಯಬೇಕು.

ನನಗೆ ಈಗಲೂ ನೆನಪಿದೆ; ನಾನು ಬೆಂಗಳೂರಿಗೆ ಉದ್ಯೋಗಕ್ಕಾಗಿ ಬಂದಾಗ ದುಡಿಯುವ ಮಹಿಳೆಯರ ಹಾಸೇಲ್ ನಲ್ಲಿದ್ದೆ. ನನ್ನ ರೂಂಮೇಟ್ ಒಬ್ಬಳು ಮಲೆಯಾಳಿಯಾಗಿದ್ದಳು. ಅವಳ ಅಪೇಕ್ಷೆಯಂತೆ ಪ್ರತಿವರ್ಷ ವಿಷು ಹಬ್ಬದಂದು ಬೆಳಿಗ್ಗೆ ಅವಳು ಕಣ್ತೆರೆಯುವ ಮೊದಲೇ ಅವಳ ಚಾಚಿದ ಕೈಗಳಿಗೆ ಒಂದು ರೂಪಾಯಿಯ ಪಾವಲಿಯನ್ನಿಡುತ್ತಿದ್ದೆ. ಅದನ್ನವಳು ಭಕ್ತಿಯಿಂದ ಕಣ್ಣಿಗೊತ್ತಿಕೊಳ್ಳುತ್ತಿದ್ದಳು. ವಿಷು ಹಬ್ಬದಂದು ಸಂತೋಷವಾಗಿದ್ದರೆ ವರ್ಷವಿಡೀ ಸಂತೋಷವಾಗಿರುತ್ತಾರೆ ಎಂಬುದು ನಂಬಿಕೆ.

ವಿಷು ಹಬ್ಬದ ವಿಶೇಷ ಅಡುಗೆ ಏನಿರುತ್ತದೆ ಎಂಬುದರ ಬಗ್ಗೆ ನನಗೆ ಸ್ಪಷ್ಟವಾಗಿ ನೆನಪಿಲ್ಲ. ಆದರೆ ಒಬ್ಬಟ್ಟು ಇರುವುದಿಲ್ಲ ಅಂತ ಗೊತ್ತಿದೆ. ಹೆಸರು ಬೇಳೆ ಪಾಯಸ, ಎಳೆ ಗೋಡಂಬಿ ಹಾಕಿ ಮಾಡಿದ ತೊಂಡೆಕಾಯಿ ಪಲ್ಯ. ಮತ್ತು ಎಲ್ಲಾ ತರಕಾರಿ ಹಾಕಿ ಮಾಡಿದ ಅವಿಲು ಅಂದರೆ ಹುಳಿ ಇವಿಷ್ಟು ಇದ್ದೇ ಇರುತ್ತದೆ. ಜೊತೆಗೆ ಹಪ್ಪಳ. ಮೊಸರು, ಉಪ್ಪಿನಕಾಯಿ ಇದ್ದೇ ಇರುತ್ತದೆ.

ನಮ್ಮ ಮನೆಯಲ್ಲಿ ಮಾತ್ರ ಹಲಸಿನಹಣ್ಣಿನಿಂದ ’ಮುಳ್ಕ’ ಎಂಬ ಕರಿದ ತಿಂಡಿಯನ್ನು ಕಡ್ಡಾಯವಾಗಿ ಮಾಡಲೇಬೇಕಾಗುತ್ತದೆ. ಯಾಕೆಂದರೆ ನಮ್ಮ ಕುಟುಂಬದ ದೇವರಗದ್ದೆ ನಮ್ಮ ಪಾಲಿಗೆ ಬಂದಿತ್ತು. ಅದಕ್ಕೆ ಪರಂಪರೆಯಿಂದಲೂ ವಿಷು ಹಬ್ಬದಂದು ಪೂಜೆ ಮಾಡುವ ಪದ್ದತಿ ಇತ್ತು. ಕಂಬಳ ನಡೆಯುವ ಆ ಗದ್ದೆಯನ್ನು ನಾವು ದೊಡ್ಡಗದ್ದೆ ಎಂದು ಕರೆಯುತ್ತೇವೆ. ನೆನೆಸಿದ ಬೆಳ್ತಿಗೆ ಅಕ್ಕಿಯನ್ನು ಹಲಸಿನಹಣ್ಣಿನೊಂದಿಗೆ ರುಬ್ಬಿ ಅದಕ್ಕೆ ಎಳ್ಳನ್ನು ಸೇರಿಸಿ ಪಕೋಡದಂತೆ ಕರೆದರೆ ಅದೇ ಮುಳ್ಕ. ನಮ್ಮ ಮನೆಯಲ್ಲಿ ಕೆಲವು ವರ್ಷ ಏಪ್ರೀಲ್ ತಿಂಗಳಲ್ಲಿ ಹಲಸು ಹಣ್ಣಾಗುತ್ತಿರಲಿಲ್ಲ. ಅದು ಯಾರಿಗಾದರೂ ಗೊತ್ತಾದರೆ, ಅವರಲ್ಲಿ ಹಲಸಿನ ಹಣ್ಣಿದ್ದರೆ ನಮ್ಮ ಮನೆಗೆ ತಂದು ಕೊಡುತ್ತಿದ್ದರು.

ಪ್ರಸಕ್ತ ವರ್ಷದಿಂದ ನಮ್ಮ ಮನೆಯಲ್ಲಿ ಮುಳ್ಕ ಮಾಡಲಾರರು ಯಾಕೆಂದರೆ ಈಗ ಕಂಬಳ ನಡೆಯುವ ಆ ದೇವರ ಗದ್ದೆ ಕೊಕ್ಕೊ ತೋಟವಾಗಿ ಬದಲಾಗಿದೆ. ಕೃಷಿಕರ ಬದುಕು ಬದಲಾಗಿದೆ. ಹಾಗಾಗಿ ಆಚರಣೆಗಳೂ ಬದಲಾಗಿವೆ. ನಮ್ಮ ಹಳ್ಳಿಗಳು ಬದಲಾಗಿವೆ. ನಮ್ಮ ನಗರದ ಬದುಕು ಕೂಡ.

ನಾನು ಮನೆಯಲ್ಲಿ ಹಬ್ಬದಡುಗೆ ಮಾಡುವುದಿಲ್ಲ.ಅದಕ್ಕೆ ಹಲವಾರು ಕಾರಣಗಳಿವೆ. ಮಕ್ಕಳಿಗೆ ಸಿಹಿ ಇಷ್ಟವಾಗುವುದಿಲ್ಲ. ಗಂಡ ಡಯಾಬಿಟಿಕ್ ಅಲ್ಲವಾದರೂ ಆ ಭ್ರಮೆಯಲ್ಲಿ ಸಿಹಿ ತಿನ್ನುವುದಿಲ್ಲ. ಸಿಹಿ ಇಲ್ಲದಿದ್ದರೆ ಅದೆಂಥ ಹಬ್ಬ ಅಲ್ಲವೇ? ಅದಲ್ಲದೆ ಆತ ಸುದ್ದಿ ಚಾನಲ್ಲೊಂದರಲ್ಲಿ ಕೆಲಸ ಮಾಡುತ್ತಾನೆ. ಹಾಗಾಗಿ ಇಪ್ಪತ್ತನಾಲ್ಕು ಘಂಟೆಯೂ ಜರ್ನಲಿಸ್ಟೇ. ಹಾಗಾಗಿ ನಾನು ಮಾಡಿದ್ದನ್ನು ನಾನೊಬ್ಬಳೇ ಭೂತದಂತೆ ತಿನ್ನಬೇಕು. ಆದರೂ ’ಹಳ್ಳಿ ಮನೆ’ಯಿಂದ ಹಬ್ಬದೂಟ ತರಿಸುತ್ತೇನೆ. ಆಯ್ಕೆ ಮಾಡಿಕೊಂಡು ಇಷ್ಟವಾದದ್ದನ್ನು ತಿನ್ನುತ್ತೇವೆ ಉಳಿದದ್ದು ತಿಪ್ಪೆ ಸೇರುತ್ತದೆ.

ನಿಮಗ್ಯಾರಿಗಾದರೂ ’ವಿಷು ಕಣಿ’ ನೋಡಬೇಕೆನಿಸಿದರೆ ಅಕ್ಕ ಪಕ್ಕ ಎಲ್ಲಿಯಾದರೂ ತೆಂಗಿನ ಮರ ಇದ್ದರೆ ಅದನ್ನೇ ಕಣ್ಣು ತೆರೆದಾಗ ನೋಡಿಬಿಡಿ. ಯಾಕೆಂದರೆ ಅದು ಬೇಡಿದ್ದನ್ನು ಕೊಡುವ ಕಲ್ಪವೃಕ್ಷ ಎಂಬ ನಂಬಿಕೆ ಹಿಂದಿನಿಂದಲೂ ಬಂದಿದೆ.
ಹಬ್ಬದಡುಗೆ ಮಾಡದಿದ್ದರೂ ಬಾಗಿಲಿಗೆ ಮಾವಿನ ತೋರಣ ಕಟ್ಟುವುದನ್ನು ಮರೆಯುವುದಿಲ್ಲ. ಯಾಕೆಂದರೆ ಅದು ಚೈತ್ರದ ಚಿಗುರು; ವಸಂತ ಋತುವಿಗೆ ಮುನ್ನುಡಿ.
ಎಲ್ಲರಿಗೂ ವಿಷು ಹಬ್ಬದ ಶುಭಾಶಯಗಳು. ವಸಂತ ಋತು ನಿಮ್ಮೆಲ್ಲರ ಬಾಳಿನಲ್ಲಿಯೂ ಸದಾ ಕಾಲ ನಳನಳಿಸುತ್ತಿರಲಿ.

Friday, April 8, 2011

ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು




ಹಿರಿಯ ಗಾಂಧೀವಾದಿ ಹಾಗು ಸಮಾಜಸೇವಕ ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಉಪಾವಾಸ ಸತ್ಯಾಗ್ರಹ ಅಂದೋಲನದ ರೂಪ ಪಡೆಯುತ್ತಿದೆ.

ಯುವಕರು ಅಂದೋಲನಕ್ಕೆ ದುಮುಕ್ಕುತ್ತಿದ್ದಾರೆ. ಇದೊಂದು ಆಶಾದಾಯಕ ಬೆಳವಣಿಗೆ. ಹಿಂದಿ ಚಿತ್ರರಂಗದ ಸದಭಿರುಚಿಯ ನಿರ್ದೇಶಕರು, ನಟರು ಚಳುವಳಿಗೆ ಬೆಂಬಲ ಸೂಚಿಸಿದ್ದಾರೆ. ಮುಖ್ಯವಾಗಿ ಯುವ ನಟ ಅಮಿರ್ ಖಾನ್ ಎಲ್ಲರಿಗಿಂತಲೂ ಮೊದಲು ತನ್ನ ಬೆಂಬಲ ವ್ಯಕ್ತಪಡಿದ್ದಾನೆ. ಆತ ’ಲಗಾನ್’ ಚಿತ್ರದ ಮೂಲಕ ಯುವಕರ ಹೃದಯದಲ್ಲಿ ದೇಶಪ್ರೇಮದ ಕಿಚ್ಚನ್ನು ಹೊತ್ತಿಸಿದವನು. ರೈತರ ಆತ್ಮಹತ್ಯೆ ಸಮಸ್ಯೆಗಳನ್ನೆತ್ತಿಕೊಂದು, ದೃಶ್ಯ ಮಾಧ್ಯಮದ ಕ್ರೌರ್ಯವು ಸೇರಿದಂತೆ ಅಧಿಕಾರಿಶಾಯಿಯ ದಬ್ಬಾಳಿಕೆಯನ್ನು ’ಪಿಪ್ಲಿ ಲೈವ್..’ ಸಿನೇಮಾದಲ್ಲಿ ತೋರಿಸಿದ್ದಾನೆ. ಆತನ ಬೆಂಬಲ ಈ ಆಂದೋಲನಕ್ಕೆ ಅಥೆಂಟಿಸಿಟಿಯನ್ನು ತಂದು ಕೊಟ್ಟಿದೆ.

ನಮಗೆ ಭರವಸೆಯಿರಲಿಲ್ಲ, ನಾವು ಅಸಹಾಯಕರಾಗಿದ್ದೆವು; ಗ್ರಾಮ ಲೆಕ್ಕಿಗನಿಂದ ಹಿಡಿದು ಎಲ್ಲಾ ಅಧಿಕಾರಶಾಹಿಗಳು, ಜನಪ್ರತಿನಿಧಿಗಳು ಭ್ರಷ್ಟಾಚಾರದ ಪೋಷಕರಾಗಿದ್ದರು. ಭ್ರಷ್ಟಾಚಾರ ನಮ್ಮ ಜೀವನಕ್ರಮದ ಭಾಗವೇ ಆಗಿಹೋಗಿದೆ. ಅದನ್ನು ನಾವು ಒಪ್ಪಿಕೊಂಡಿದ್ದೇವೆ.

ನೀತಿನಿರೂಪಕರ ಸ್ಥಾನದಲ್ಲಿರುವ ಮಠಾದೀಶರು, ಅಧಿಕಾರಿಶಾಹಿವರ್ಗ
ಜನಪ್ರತಿನಿಧಿಗಳು ಮತ್ತು ಪತ್ರಿಕಾವಲಯ ಎಲ್ಲವೂ ಬ್ರಷ್ಟಾಚಾರದಲ್ಲಿ ಮುಳುಗಿ ಹೋಗಿ ನೈತಿಕ ಅದಃಪತನದತ್ತ ಜಾರಿ ಹೋಗಿದ್ದಾರೆ. ಇವರೇ ಇಂದು ಅಣ್ಣಾ ಹಜಾರೆಯ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಲು ಮುಂದೆ ಬಂದಿದ್ದಾರೆ. ಆದರೆ ಹೋರಾಟಗಾರರು ಅವರನ್ನೆಲ್ಲಾ ದೂರವಿಟ್ಟಿದ್ದಾರೆ. ಮಂಗಳವಾರ, ಹಜಾರೆ ಸತ್ಯಾಗ್ರಹ ಅರಂಭಿಸಿದ ದಿನದಂದೇ ಅವರಿಗೆ ಬೆಂಬಲ ವ್ಯಕ್ತಪಡಿಸಲು ಬಂದ ಉಮಾಭಾರತಿ ಮತ್ತು ಓಂಪ್ರಕಾಶ್ ಚೌತಾಲ ಅವರನ್ನು ಹೋರಾಟಗಾರರು ಹತ್ತಿರಕ್ಕೂ ಸೇರಿಸಿಕೊಳ್ಳಲಿಲ್ಲ. ಬ್ರಷ್ಟಾಚಾರ ವಿರೋಧಿ ಅಂದೋಲನಕ್ಕೆ ಬ್ರಷ್ಟಾಚಾರದ ಮೂಟೆಗಳಂತಿರುವ ರಾಜಕಾರಣಿಗಳು ಬೆಂಬಲ ವ್ಯಕ್ತಪಡಿಸುವುದು ವ್ಯಂಗ್ಯವಲ್ಲವೇ?

ಈ ವ್ಯಂಗ್ಯ ಕನ್ನಡದ ಪತ್ರಿಕಾ ರಂಗಕ್ಕೂ ಅನ್ವಯವಾಗುತ್ತದೆ. ಕೆಲವು ಪತ್ರಕರ್ತರು ದುಡ್ಡು-ಆಸ್ತಿ ಸಂಪಾದನೆಯಲ್ಲಿ, ಗುಂಪುಗಾರಿಕೆಯಲ್ಲಿ ರಾಜಕಾರಣಿಗಳನ್ನೂ ಮೀರಿಸುತ್ತಿದ್ದಾರೆ. ಅಣ್ಣಾ ಹಜಾರೆಯ ಜನಾಂದೋಲನವನ್ನು ಬೆಂಬಲಿಸಿ ಪ್ಲಾಪ್ ಅಪ್ ಹಾಕುತ್ತಿರುವ ಕೆಲವು ಚಾನಲ್ ಗಳು ರಾಜಕಾರಣಿಗಳ ಹಿಡಿತದಲ್ಲಿವೆ. ’ಭ್ರಷ್ಟರ ಬೆನ್ನತ್ತಿ ಸುವರ್ಣ ನ್ಯೂಸ್’ ಎನ್ನುವ ಸುವರ್ಣ ಚಾನಲ್ ಮೊದಲು ಬೆಂಬೆತ್ತಬೇಕಾದದ್ದು ಅದರ ಮಾಲೀಕ ರಾಜೀವ ಚಂದ್ರಶೇಖರ್ ಅವರನ್ನು. ಯಾಕೆಂದರೆ ದುಡ್ಡುಕೊಟ್ಟು ಎಂಪಿ ಸೀಟ್ ಖರೀದಿಸಿದವರು ಅವರು. ಅದರಲ್ಲೂ ಜನಶ್ರೀ ಚಾನಲ್ ಒಡೆಯರು ಪತ್ರಕರ್ತರನ್ನೂ ಬ್ರಷ್ಟಾಚಾರದ ತೆಕ್ಕೆಯೊಳಗೆ ತೆಗೆದುಕೊಂಡ ಮಹಾನುಭಾವರು. ಪಾಳೆಗಾರಿಕೆ ಪದ್ದತಿಯ ಪಳೆಯುಳಿಕೆಯಂತಿರುವ ಇವರು ತಮ್ಮದೇ ಹೆಸರಿನಲ್ಲಿ ಚಾನಲ್ ತೆರೆದು ವ್ಯಕ್ತಿಪೂಜೆ ಮಾಡಿಸಿಕೊಂಡವರು. ಅಂತಹ ಚಾನಲ್ ’ಭ್ರಷ್ಟಾಚಾರದ ವಿರುದ್ಧ ಜನಶ್ರೀ ಅಭಿಯಾನ’ ಎಂದು ಹಾಕಿಕೊಂಡರೆ ಅದಕ್ಕಿಂತ ದೊಡ್ಡ ವ್ಯಂಗ್ಯ ಇನ್ನೊಂದಿರಬಹುದೇ? ಇಂದು ಪ್ರೀಡಂ ಪಾರ್ಕಿನಲ್ಲಿ ಧರಣಿ ಕುಳಿತಿರುವ ಜ್ನಾನಪೀಠ ಪ್ರಶಸ್ತಿ ವಿಜೇತರಾದ ಯು.ಆರ್. ಅನಂತಮೂರ್ತಿಯವರು, ’ಗಣಿ ಧಣಿಗಳ ಚಾನಲ್ ಒಂದಿದೆ. ಅದಕ್ಕೆ ನಾನು ಮಾತಾಡುವುದಿಲ್ಲ’ ಎಂದು ಲೈವ್ ಟೆಲಿಕಾಸ್ಟ್ ನಲ್ಲಿ ಹೇಳಿದರು. ಅಂತಹ ಧಿಕ್ಕಾರದ ಧ್ವನಿ ಜನಸಾಮಾನ್ಯರಿಂದಲೂ ಬರಬೇಕಾಗಿದೆ.

ಕನ್ನಡ ಪತ್ರಿಕೋಧ್ಯಮ ನಮಗೆ ಸುದ್ದಿಗಳನ್ನಷ್ಟೇ ನೀಡಲಿ. ಅದರ ವ್ಯಾಖ್ಯಾನ ಬೇಡ. ಸುದ್ದಿಯ ಹಿಂದಿನ ಸುದ್ದಿಯನ್ನು ನಾವು ಅರ್ಥ ಮಾಡಿಕೊಳ್ಳುತ್ತವೆ. ನಿಜ, ದೃಶ್ಯ ಮತ್ತು ಪ್ರಿಂಟ್ ಮೀಡಿಯಾಗಳು ಬ್ರಷ್ಟಾಚಾರ ವಿರುದ್ಧ ಆಂದೋಲನಕ್ಕೆ ವ್ಯಾಪಕ ಪ್ರಚಾರ ನೀಡುತ್ತಿವೆ. ಆದರೆ ಅದು ಅವರ ಉದ್ಯೋಗದ ಒಂದು ಭಾಗ ಎಂಬುದನ್ನು ನಾವು ಮರೆಯಬಾರದು. ನಾಳೆ ಇದಕ್ಕಿಂತ ರೋಚಕವಾದ ಘಟನೆಯೊಂದು ದೊರೆತರೆ ಮೀಡಿಯಾದ ಗಮನ ಅತ್ತ ಹೋಗುತ್ತದೆ. ಆದರೆ ಆಂದೋಲನ ಮುಂದುವರೆಯುತ್ತದೆ.

ನಮ್ಮ ಯುವಕರಿಗೆ ಕನಸುಗಳಿವೆ; ಆದರ್ಶಗಳಿವೆ; ಬ್ರಷ್ಟಾಚಾರ ಮುಕ್ತ ದೇಶ ಕಟ್ಟುವ ಹುಮ್ಮಸಿದೆ ಎಂಬುದು ಜಂತರ್ ಮಂತರ್ ನತ್ತ ಹರಿದು ಬರುತ್ತಿರುವ ವಿದ್ಯಾರ್ಥಿ ವೃಂದವನ್ನು ನೋಡಿದರೆ ಗೊತ್ತಾಗುತ್ತದೆ. ದೇಶದಾದ್ಯಂತ ಮತ್ತು ಹೊರದೇಶಗಳಲ್ಲಿರುವ ಯುವವೃಂದ ಈ ಆಂದೋಲನಕ್ಕೆ ಪೂರಕ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿರುವ ರೀತಿ ನೋಡಿದರೆ ರೋಮಾಂಚನವಾಗುತ್ತಿದೆ. ನಮ್ಮ ಯುವ ಜನಾಂಗ ಸ್ವಕೇಂದ್ರಿತ ವ್ಯಕ್ತಿತ್ವನ್ ಹೊಂದಿದ್ದಾರೆ.ಅವರಲ್ಲಿ ಸಾಮಾಜಿಕ ಹೊಣೆಗಾರಿಕೆ ಇಲ್ಲಾ ಎನ್ನುತ್ತಿದ್ದವರಿಗೆಲಾ ಅವರೀಗ ತಮ್ಮ ನಡವಳಿಕೆಗಳಿಂದಲೇ ಸೂಕ್ತ ಉತ್ತರ ಕೊಡುತ್ತಿದ್ದಾರೆ. ಅವರಿಗೆ ನಾಯಕತ್ವದ ಕೊರತೆಯಿತ್ತು; ಮಾರ್ಗದರ್ಶಕರು ಬೇಕಾಗಿತ್ತು. ಅವರಿಗೆ ಸಮರ್ಥ ಗುರು ಸಿಕ್ಕಿದ.

ಸಮಾಜದ ಕೆಳಸ್ತರದಲ್ಲಿ. ಮಧ್ಯಮವರ್ಗದಲ್ಲಿ ಕುದಿಯುವ ಅಸಹನೆಯಿತ್ತು. ಅದು ಅಂಡರ್ ಕರೆಂಟ್ ನಂತೆ ಒಳಗೊಳಗೆ ಪ್ರವಾಹಿಸುತ್ತಿತ್ತು. ಅದಕ್ಕೆ ಹಜಾರೆ ಕಿಡಿ ತಾಗಿಸಿದರು. ಅದೀಗ ಮೆಲ್ಪದರಕ್ಕೆ ಬಂದಿದೆ. ಸ್ಫೋಟಗೊಳ್ಳುವ ಹಂತ ತಲುಪಿದೆ. ಅದನ್ನು ತಣಿಸದಿದ್ದರೆ ಖಂಡಿತವಾಗಿಯೂ ಅದು ಕಾಡ್ಗಿಚ್ಚಿನಂತೆ ಹಬ್ಬಿ ಸಿಕ್ಕಿದ್ದೆಲ್ಲವನ್ನೂ ಆಪೋಶನ ತೆಗೆದುಕೊಳ್ಳಬಹುದು. ನಮ್ಮ ಕಣ್ಣ ಮುಂದೆ ಈಜಿಪ್ಟ್, ಲಿಬಿಯಾಗಳ ಉದಾಹರಣೆಯಿದೆ.

ತುರ್ತುಪರಿಸ್ಥಿತಿಯ ನಂತರ ಇಡೀ ದೇಶವನ್ನು ಒಂದಾಗಿ ಬೆಸೆಯುವ ಯಾವ ಆಂದೋಲನವೂ ನಡೆದಿರಲಿಲ್ಲ. ಜಾಗತೀಕರಣದ ಮುಕ್ತ ಆರ್ಥಿಕತೆಗೆ ತೆರೆದುಕೊಂಡ ನಂತರವಂತೂ ಎಲ್ಲರೂ ಹಣದ ಹಿಂದೆ ಓಡತೋಡಗಿದರು. ಹೇಗಾದರೂ ಸೇರಿ ಆಸ್ತಿ ಸಂಪಾದಿಸುವುದು, ದುಡ್ಡು ಮಾಡುವುದೇ ಮುಖ್ಯವೆನಿಸತೊಡಗಿತು.ಇಂಥ ಸ್ಥಿತಿಯಲ್ಲಿ ಜನಾಂದೋಲನ ಸಾಧ್ಯವೇ? ಸಾಮಾಜಿಕ ಸಮಸ್ಯೆಯೊಂದು ಭಾರತವನ್ನು ಮತ್ತೆ ಒಂದಾಗಿ ಬೆಸೆದು ಹೋರಾಟಕ್ಕೆ ಅಣಿಗೊಳಿಸಲಲು ಸಾಧ್ಯವೇ? ಎಂದು ಅಂದುಕೊಳ್ಳುವ ಹೊತ್ತಿನಲ್ಲೇ ಗಾಂಧೀವಾದಿ ಅಣ್ಣಾಹಜಾರೆ ದೇವದೂತನಂತೆ ಅವತರಿಸಿದ್ದಾರೆ.

ಇಂದು ಇಡೀ ದೇಶ ಅವರತ್ತ ನೋಡುತ್ತಿದೆ. ಯುವ ಜನಾಂಗ ಅವರೆಡೆಗೆ ಸ್ವಯಂ ಪ್ರೇರಿತರಾಗಿ ಹರಿದು ಬರುತ್ತಿದೆ. ಜನಾಂದೋಲನಕ್ಕೆ ಚಾಲನೆ ದೊರೆತಿದೆ. ಒಂದು ಒಳ್ಳೆಯ ಉದ್ದೇಶಕ್ಕಾಗಿ ಜನ ಒಟ್ಟಾಗುತ್ತಿದ್ದಾರೆ. ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಪ್ರತಿಭಟನಾ ಧರಣಿಯಲ್ಲಿ ನಾನೂ ಭಾಗಿಯಾಗುತ್ತಿದ್ದೇನೆ.

ಪ್ರಜ್ನಾವಂತ ನಾಗರಿಕ ಸಮೂಹ, ಸಾಹಿತಿ-ಕಲಾವಿದರು, ಸಂಸ್ಕೃತಿ ಚಿಂತಕರು, ನಾಟಕ ರಂಗ, ಸಿನೇಮಾಕ್ಷೇತ್ರ, ಪ್ರಗತಿಪರ ಸಂಘಟನೆಗಳು, ವಿದ್ಯಾರ್ಥಿ ಸಮೂಹ, ಐಟಿ-ಬಿಟಿ ಸೇರಿದಂತೆ ವಿವಿಧ ಉದ್ಯೋಗಗಳಲ್ಲಿ ತೊಡಗಿಕೊಂಡವರೆಲ್ಲಾ ಅಣ್ಣಾಹಜಾರೆಯವರ ಭ್ರಷ್ಟಾಚಾರ ವಿರೋಧಿ ಅಂದೋಲನಕ್ಕೆ ಬೆಂಬಲ ಸೂಚಿಸಿದ್ದಾರೆ. ಅದು ತೋರಿಕೆಯ ಬೆಂಬಲ ಅಲ್ಲ ಎಂಬುದು ಸತ್ಯಾಗ್ರಹದ ನಾಲ್ಕನೆಯ ದಿನವಾದ ಇಂದು ನಿಚ್ಚಳವಾಗಿ ಗೊತ್ತಾಗುತ್ತಲಿದೆ.

ಈ ಆಂದೋಲನ ತಾರ್ಕಿಕ ಅಂತ್ಯವನ್ನು ಕಾಣುವಂತಾಗಲಿ

ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು.

Friday, March 18, 2011

’ರಿಯಾಲಿಟಿ ಶೋ’ಗಳ ವೈನೋದಿಕ ಹಿಂಸೆ

[ಬಾಗಲಕೋಟೆ ಜಿಲ್ಲೆಯ ಕೆರಕಲ್ ಮಟ್ಟಿ ಹಳ್ಳಿಯಲ್ಲಿ ೬ ವರ್ಷದ ಬಾಲಕನನ್ನು ಪ್ಯ್ಯಾಟೆ ಹುಡುಗಿಯರು ಚಡ್ಡಿ ಬಿಚ್ಚಿ ಅಹ್ಲೀಲವಾಗಿ ಲೇವಡಿ ಮಾಡಿದ್ದು ಅಂತರ್ಜಾಲದಲ್ಲಿ ಚರ್ಚೆಯಾಗುತ್ತಿದೆ .ಸುವರ್ಣ ಚಾನಲ್ ಗಾಗಿ ಚಿತ್ರಿಕರಿಸಲಾಗುತ್ತಿದ್ದ ಈ ರಿಯಾಲಿಟಿ ಶೋ ಮುಗ್ಧ ಮನಸ್ಸಿನ ಮೇಲಾಗುತ್ತಿರುವ ನಗರ ಸಂಸ್ಕೃತಿಯ ದಾಳಿ ಎಂದೇ ನಾನು ಪರಿಗಣಿಸುತ್ತೇನೆ.
ಕಳೆದ ವರ್ಷ ಸೆಪ್ಟಂಬರದಲ್ಲಿ ನಾನು ’ರಿಯಾಲಿಟಿ ಶೋಗಳಲ್ಲಿ ವೈನೋದಿಕ ಹಿಂಸೆ’ ಎಂಬ ಲೇಖನ ಬ್ಲಾಗಿಗೆ ಪೋಸ್ಟ್ ಮಾಡಿದ್ದೆ. ಅದು ಈಗಲೂ ಪ್ರಸ್ತುತವಾಗಬಹುದೆಂದು ಮತ್ತೆ ಪೋಸ್ಟ್ ಮಾಡುತ್ತಿದ್ದೇನೆ ]


ಇಪ್ಪತ್ತು ವರ್ಷಗಳ ಹಿಂದಿನ ಸಮಾಚಾರ; ’ಮನ್ವಂತರ’ ಎಂಬ ರಾಜಕೀಯ ವಾರಪತ್ರಿಕೆಯ ಮುಖಾಂತರ ನಾನು ಪತ್ರಿಕಾರಂಗಕ್ಕೆ ಅಡಿಯಿಟ್ಟೆ. ಆ ಪತ್ರಿಕೆಯ ಸಹ ಪ್ರಕಟಣಾ ಮಾಸಪತ್ರಿಕೆಯೊಂದಿತ್ತು. ಅದರ ಹೆಸರು ’ಸುರತಿ’. ಮಾರುಕಟ್ಟೆಯಲ್ಲಿ ಅದಕ್ಕೆ ಪೈಪೋಟಿ ನೀಡುತ್ತಿರುವ ಇನ್ನೊಂದು ಮಾಸಪತ್ರಿಕೆಯಿತ್ತು. ಅದರ ಹೆಸರು ’ರತಿವಿಜ್ನಾನ’. ಸರ್ಕ್ಯೂಲೇಶನಿನಲ್ಲೂ ಪರಸ್ಪರ ಪೈಪೋಟಿ ನೀಡುತ್ತಿದ್ದ ಆ ಪತ್ರಿಕೆಗಳ ಒಟ್ಟು ಪ್ರಸರಣ ಸಂಖ್ಯೆ ಐದು ಲಕ್ಷ ದಾಟಿ ಹೋಗುತ್ತಿತ್ತು.

ಪ್ರಸರಣದ ದೃಷ್ಟಿಯಿಂದ ನೋಡಿದರೆ ಅವೆರಡು ಪತ್ರಿಕೆಗಳು ಜನಪ್ರಿಯವಾದ ಮಾಸಪತ್ರಿಕೆಗಳು. ಆದರೆ ಅವು ಮನುಷ್ಯನ ಬೇಸಿಕ್ ಇನ್ಸ್ಟಿಂಗ್ಟ್ ಆದ ಲೈಂಗಿಕ ಕುತೂಹಲವನ್ನು, ತಣಿಸುವ, ಕೆರಳಿಸುವ ಪುಸ್ತಕಗಳು ಅಷ್ಟೆ. ’ಸೆಗಣಿಯಲ್ಲಿ ಸಾವಿರ, ಮಧ್ಯಾಹ್ನಕ್ಕೆ ಲಯ’ ಎಂಬಂತೆ ಅದರಿಂದಾಚೆಗೆ ಅವುಗಳಿಗೆ ಪ್ರತ್ಯೇಕ ಐಡೆಂಟಿಟಿ ಇರಲಿಲ್ಲ.

ಅದು ಮುದ್ರಣ ಮಾಧ್ಯಮದ ಸಾರ್ವಭೌಮತ್ವದ ಕಾಲಘಟ್ಟ. ಈಗ ಏನಿದ್ದರೂ ದೃಶ್ಯ ಮಾಧ್ಯಮದ ಯುಗ. ಸರ್ಕ್ಯೂಲೇಷನ್ ಎಂಬುದು ಹಿಂದಕ್ಕೆ ಸರಿದು ಟಿ.ಆರ್.ಪಿ ಎಂಬ ಭೂತ ಟಿ.ವಿಯನ್ನು ಆಳುತ್ತಿರುವ ಕಾಲ. ಇಲ್ಲೂ ಅದೇ ಟೆಕ್ನಿಕ್; ಮನುಷ್ಯನ ಮೂಲಭೂತ ಕಾಮನೆಗಳನ್ನು ತಣಿಸುವುದು. ಮನುಷ್ಯ ಮೂಲತಃ ಕ್ರೂರಿ. ಆತ ಹಿಂಸ್ರಾ ಪಶು. ಆತನಲ್ಲಿರುವ ಆಕ್ರಮಣಶೀಲತೆ ಸೂಕ್ತ ಸಂದರ್ಭಕ್ಕಾಗಿ ಹೊಂಚು ಹಾಕುತ್ತಿರುತ್ತದೆ.

ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಟಿ.ವಿ ಧಾರಾವಾಹಿಗಳನ್ನೇ ನೋಡಿ; ಟಿ,ಅರ್.ಪಿ ಗ್ರಾಪ್ ಉರ್ಧ್ವಮುಖಿಯಾಗಿ ಸಾಗಿದ್ದು, ಸಾಗುತ್ತಿರುವುದು; ಸಚ್ ಕಾ ಸಾಮ್ನ್, ಇಮೋಷನಲ್ ಅತ್ಯಾಚಾರ್, ಕನ್ನಡದ ಹಳ್ಳಿಹೈದ ಪ್ಯಾಟೆಗೆ ಬಂದ...ಮುಂತಾದ ಭಾವಕೋಶವನ್ನು ಕಲುಷಿತಗೊಳಿಸುವ ದಾರಾವಾಹಿಗಳಿಗೆ ಮಾತ್ರ. ಇದರ ಜೊತೆಗೆ ಕೃತ್ರಿಮತೆಯನ್ನೇ ಢಾಳಾಗಿ ತೋರಿಸುವ ಸ್ವಯಂವರದ ಧಾರಾವಾಹಿಗಳು, ಖಾಸಗಿ ಬದುಕನ್ನು ನಾಟಕಿಯವಾಗಿ ರಂಗದ ಮೇಲೆ ತಂದು ಸಾರ್ವಜನಿಕರ ಬಾಯಿಗೆ ಎಲೆಯಡಿಕೆಯಾಗಿಸುವ ಕಥೆಯಲ್ಲ ಜೀವನಗಳು; ಬದುಕು ಜಟಕಾ ಬಂಡಿಗಳು. ಸಾವಿನಾಚೆಗೆ ಏನಿದೆ ಎಂಬ ಮನುಷ್ಯನ ಅನಾದಿ ಕಾಲದ ಜಿಜ್ನಾಸೆಯನ್ನು, ಸಹಜ ಕುತೂಹಲವನ್ನು ಮಾರುಕಟ್ಟೆಯ ಮೌಲ್ಯಗಳಿಗೆ ಬಾಗಿಸುತ್ತಿರುವ ಜನ್ಮಾಂತರಗಳು, ಹೀಗೇ ಉಂಟುಗಳು..!

ಟಿ.ಅರ್.ಪಿ ಗ್ರಾಪ್ ಮೇಲೆರಿದಂತೆಲ್ಲಾ ಚಾನಲ್ ಗಳಿಗೆ ಅಡ್ ರೆವಿನ್ಯು ಜಾಸ್ತಿಯಾಗುತ್ತದೆ. ಟಿ.ಅರ್.ಪಿ ಅಂದರೆ ಟಾರ್ಗೆಟ್ ರೇಟಿಂಗ್ ಪಾಯಿಂಟ್. ಇದು ಜನಪ್ರಿಯ ಟಿ.ವಿ ಪ್ರೋಗ್ರಾಮ್ ಗಳ ಪಟ್ಟಿಯನ್ನು ಕೊಡುತ್ತದೆ. ಕನ್ನಡದಲ್ಲಿ ಪ್ರತಿ ಬುದವಾರದಂದು ಈ ಪಟ್ಟಿ ಬಿಡುಗಡೆಯಾಗುತ್ತದೆ. ಹಾಗಾಗಿ ವಾರಕೊಮ್ಮೆ ಟಿ.ವಿ ನಿರ್ಮಾಪಕರ ಎದೆಬಡಿತ ಏರುಪೇರಾಗುತ್ತದೆ!. ಯಾಕೆಂದರೆ ರೇಟಿಂಗ್ ಇಲ್ಲ ಎಂಬ ಕಾರಣದಿಂದಾಗೆ ಹಲವು ಸದಭಿರುಚಿಯ ಕಾರ್ಯಕ್ರಮಗಳು ವೈಂಡ್ ಅಫ್ ಆದ ಉದಾಹರಣೆ ಟಿ.ವಿ ಇತಿಹಾಸಕ್ಕಿದೆ.

ಟಿ.ಅರ್.ಪಿಯನ್ನು ಯಾರು ನಿರ್ಧರಿಸುತ್ತಾರೆ? ವಿಕ್ಷಕರು. ಆದರೆ ಎಲ್ಲಾ ವಿಕ್ಷಕರಲ್ಲ. ಆಯ್ದ ವೀಕ್ಷಕರು. ಅದರ ನಿರ್ವಹಣೆಯನ್ನು ಏಜನ್ಸಿಯೊಂದು ಮಾಡುತ್ತದೆ. ಅವರು ಆಯ್ದ ಕೆಲವರ ಮನೆಗಳಲ್ಲಿ ’ಪೀಪಲ್ಸ್ ಮೀಟರ್’ ಎಂಬ ಉಪಕರಣವೊಂದನ್ನು ಅಳವಡಿಸುತ್ತಾರೆ. ಆ ಮನೆಯವರು ಯಾವ ಚಾನಲ್, ಯಾವ ಪ್ರೋಗ್ರಾಮನ್ನು ಎಷ್ಟೊತ್ತು ನೋಡುತ್ತಾರೆ ಎಂಬುದರ ಮೇಲೆ ಕಾರ್ಯಕ್ರಮಗಳ ಜನಪ್ರಿಯತೆಯನ್ನು ಏಜನ್ಸಿ ಸಂಯೋಜಿಸುತ್ತದೆ. ಅದೇ ಟಿ.ಅರ್.ಪಿ. ಆದರೆ ಅದರ ನಿಖರತೆಯ ಬಗ್ಗೆಯೇ ಈಗೀಗ ಸಂಶಯ ವ್ಯಕ್ತವಾಗುತ್ತಿದೆ.

ಕರ್ನಾಟಕದಲ್ಲಿ ಬೆಂಗಳೂರನ್ನು ಹೊರತುಪಡಿಸಿ ಒಟ್ಟು ೮ ಟಿ.ಅರ್.ಪಿ ಸೆಂಟರ್ ಗಳಿವೆ.ಅದನ್ನು ಟಿ.ವಿ ಭಾಷೆಯಲ್ಲಿ ಅರ್.ಒ.ಕೆ ಎಂದು ಕರೆಯುತ್ತಾರೆ. ಅಂದರೆ ರೆಸ್ಟ್ ಅಫ್ ಕರ್ನಾಟಕ. ಅವು ಮೈಸೂರು, ಮಂಗಳೂರು, ದಾವಣಗೆರೆ, ಹುಬ್ಬಳಿ, ಗದಗ, ಬೆಳಗಾವಿ, ಗುಲ್ಬರ್ಗಾ ಮತ್ತು ರಾಯಚೂರು. ಜಾಹಿರಾತುದಾರರು ಈ ಸೆಂಟರ್ ಗಳಿಗಿಂತಲೂ ಬೆಂಗಳೂರಿಗೇ ಹೆಚ್ಚು ಗಮನ ಕೊಡುತ್ತಾರೆ. ಯಾಕೆಂದರೆ ಬೆಂಗಳೂರಲ್ಲಿ ಹೆಚ್ಚು ದುಡ್ಡು ಓಡಾಡುತ್ತದೆ. ಇಲ್ಲಿಯ ಜನರ ಖರೀದಿ ಶಕ್ತಿ ಜಾಸ್ತಿ ಎಂಬುದು ಅವರ ತರ್ಕ. ಹಾಗಾಗಿ ಈ ನಗರವೊಂದರಲ್ಲೇ ಸುಮಾರು ೧೮೦ ಮನೆಗಳಲ್ಲಿ ಟಿ.ಅರ್.ಪಿ ಮಾಪನವಾದ ’ಪೀಪಲ್ಸ್ ಮೀಟರ್’ ಗಳನ್ನು ಅಳವಡಿಸಲಾಗಿದೆ.

ಇದರರ್ಥ ಇಷ್ಟೆ; ಟಿ.ವಿ ಮಾಧ್ಯಮದವರ ಲೆಕ್ಕಾಚಾರದಲ್ಲಿ ಗ್ರಾಮಾಂತರ ಪ್ರದೇಶದ, ಬಹುಸಂಖ್ಯಾತ ಜನರು ಟಿ.ವಿ ವೀಕ್ಷಕರೇ ಅಲ್ಲ. ಅಡ್ ರೆವಿನ್ಯೂ ತರುವ ಟಿ.ಅರ್.ಪಿ ಸೆಂಟರ್ ನ ಜನರಿಗಾಗಿ ಅವರು ಕಾರ್ಯಕ್ರಮವನ್ನು ತಯಾರಿಸಬೇಕು. ಅಂದರೆ ಆಧುನಿಕ ಮನೋಭಾವದ, ಉಳ್ಳವರ ಮನೋರಂಜನೆಗಾಗಿ ಕಾರ್ಯಕ್ರಮ ಹಣೆಯಬೇಕು. ನಿಜಕ್ಕೂ ಅದೊಂದು ಸವಾಲು. ಸಾಹಸ, ಹಾಸ್ಯ ಮತ್ತು ಭಾವುಕತೆಯ ಹದವಾದ ಮಿಶ್ರಣದ ಕಾರ್ಯಕ್ರಮಗಳು ಎಲ್ಲಾ ವರ್ಗದ ಪ್ರೇಕ್ಷಕರನ್ನು ಸೆಳೆಯುತ್ತದೆ. ಆದರ ತಯಾರಿಕೆಗೆ ಶ್ರಮ ಮತ್ತು ಪ್ರತಿಭೆ ಬೇಕು. ಮುಖ್ಯವಾಗಿ ಹೃದಯವಂತಿಕೆ ಬೇಕು. ಅದಿಲ್ಲವಾದರೆ ಏನಾಗುತ್ತದೆ ಎಂಬುದಕ್ಕೆ ಇತ್ತೀಚೆಗೆ ಪ್ರಸಾರವಾಗುತ್ತಿರುವ ’ಹಳ್ಳಿಹೈದ ಪ್ಯಾಟೆಗೆ ಬಂದ’ ರಿಯಾಲಿಟಿ ಶೋ ಉತ್ತಮ ಉದಾಹರಣೆ.
ಇಲ್ಲಿ ಎಲ್ಲವೂ ಇದೆ. ಆದರೆ ಹೃದಯವಂತಿಕೆ ಇಲ್ಲ. ಹಳ್ಳಿಯ ಎಳೆಂಟು ಹುಡುಗರನ್ನು ಪೇಟೆಗೆ ತಂದು ಹಾಕಿದ್ದಾರೆ. ಅವರಿಗೆ ನಾಗರಿಕೆ ನಡವಳಿಕೆಗಳನ್ನು[!] ಕಲಿಸಲು ಒಬ್ಬೊಬ್ಬ ಹುಡುಗಿಯರನ್ನು ನೇಮಿಸಲಾಗಿದೆ. ಅವರ ವೇಷ ಭೂಷಣಗಳನ್ನು ನೋಡಿಯೇ ಪಾಪ ಆಹುಡುಗರು ದಂಗಾಗಿರಬೇಕು! ಅಮೇಲೆ ಶುರು ನೋಡಿ, ಅವರಿಗೆ ನಾಗರಿಕ ನಡತೆಯನ್ನು ಕಲಿಸುವ ಪಾಠಗಳು; ಮಾಲ್ ಗಳಲ್ಲಿ ಬಿಕ್ಷೆ ಬೇಡುವುದು, ಬ್ರಿಗೇಡ್ ರೋಡ್ ನಲ್ಲಿ ಹುಡುಗಿಯರ ಮೊಬೈಲ್ ನಂಬರ್ ಗಳನ್ನು ಕಲೆಕ್ಟ್ ಮಾಡುವುದು, ಇಂಗ್ಲೀಷ್ ಕಲಿಯುವುದು, ಯಾರ್ಯರನ್ನೊ ಕಾಡಿ ಬೇಡಿ ಮೆಜೆಸ್ಟಿಕ್ ತಲುಪುವುದು, ಹುಡುಗಿಯರನ್ನು ಹೊತ್ತುಕೊಂಡು ಕೆಸರಿನಲ್ಲಿ ಓಡುವುದು. ಇದೆಲ್ಲಕಿಂತಲೂ ಬೀಬತ್ಸಕರವಾದ ಇನ್ನೊಂದು ಟಾಸ್ಕ್ ಇತ್ತು, ಅತೀ ಹೆಚ್ಚು ಯಾರು ತಿನ್ನುತ್ತಾರೆ, ಕುಡಿಯುತ್ತಾರೆ ಅಂತ. ಅದರಲ್ಲಿ ಸ್ಪರ್ಧಿಗಳಿಗೆ ಗೊತ್ತಿಲ್ಲದಂತೆ ಭೇದಿ ಮಾತ್ರೆ ಹಾಕಿರ್ತಾರೆ. ಆದರೆ ಟಾಯ್ಲೆಟ್ಗೆ ಹೋದ್ರೆ ಸ್ಪರ್ಧೆಯಿಂದ ಹೊರ ಹೋಗಬೇಕಾಗುತ್ತಾದೆ. ದೇಹ ಭಾದೆಯನ್ನು ತಡೆದುಕೊಂಡು ಅವರು ಒದ್ದಾಡುವುದು ನೋಡುವಾಗ ಇದು ಅಮಾನವೀಯ ಅನ್ನಿಸಿಬಿಡುತ್ತಾದೆ. ಇನ್ನು ಆ ಹಳ್ಳಿ ಹುಡುಗರ ಜೋತೆ ಪೇಟೆ ಹುಡುಗಿಯರನ್ನು ರೆಸ್ಲಿಂಗ್ [ಕುಸ್ತಿ] ಆಡಿಸುವುದು ಖಂಡಿತವಾಗಿಯೂ ಆರೋಗ್ಯಕರ ಟಾಸ್ಕ್ ಅನ್ನಿಸುವುದಿಲ್ಲ. ಯಾವ ಮನಸ್ಥಿತಿಯಿಂದ ಅವರು ಪ್ಯಾಟೆಗೆ ಬಂದರೋ ಅದೇ ಮನಸ್ಥಿತಿಯೊಂದಿಗೆ ಅವರು ಹಳ್ಳಿಗೆ ಮರಳಲು ಸಾಧ್ಯವೇ? ಅವರ ಮುಗ್ಧತೆಯನ್ನು ನಾಶ ಮಾಡಿದ ಶಾಪ ಯಾರನ್ನು ತಟ್ಟುತ್ತದೆ?

ಇದೇ ಚಾನಲಿನ ’ಪ್ಯಾಟೆ ಹುಡ್ಗೀರ ಹಳ್ಳಿ ಲೈಪ್’ ಇದಕ್ಕೆ ಹೋಲಿಸಿದರೆ ಚೆನ್ನಾಗಿತ್ತು, ಯಾಕೆಂದರೆ ಹಳ್ಳಿಯಲ್ಲಿ ಮುಕ್ತವಾದ ವಾತಾವರಣವಿರುತ್ತದೆ. ಅವರಲ್ಲಿ ಇನ್ನೂ ಅಂತಃಕರಣ ಉಳಿದಿರುತ್ತದೆ. ಹೊರಗಿನಿಂದ ಬಂದವರನ್ನು ಕೂಡ ಅವರು ಕ್ರಮೇಣ ತಮ್ಮವರೆಂದು ಒಪ್ಪಿಕೊಂಡುಬಿಡುತ್ತಾರೆ. ನಗರದ ಜನತೆಯದು ಕವರ್ಡ್ ಮನಸ್ಥಿತಿ, ಅವರು ಯಾರನ್ನು ನಂಬಲಾರರು. ಹಳ್ಳಿ ಹುಡುಗರಿಗೆ ಮೊಬೈಲ್ ನಂಬರ್ ಕಲೆಕ್ಟ್ ಮಾಡುವುದು, ಲಿಪ್ಟ್ ಪಡೆಯುವುದು ಹಾಗಾಗಿಯೇ ತುಂಬಾ ಕಷ್ಟವಾಗಿದ್ದು. ನಾಗರಿಕ ಜನರ ಕೈಯಲ್ಲಿ ಸಿಕ್ಕು ಅವರು ಪಡುವ ಪರಿಪಾಟಲು ಕಂಡಾಗ ೨೦ ವರ್ಷಗಳ ಹಿಂದೆ ಹಳ್ಳಿಯಿಂದ ನೇರವಾಗಿ ಬೆಂಗಳೂರೆಂಬ ಮಾಯಾಂಗನೆಯ ತೆಕ್ಕೆಗೆ ಬಂದು ಬಿದ್ದ ನನ್ನದೇ ಅನುಭವ ಮರುಕಳಿಸಿದಂತಾಯಿತು. ರಾಜೇಶನೆಂಬ ಹಳ್ಳಿ ಹುಡುಗನಲ್ಲಿ ನನ್ನನ್ನು ನಾನು ಕಂಡುಕೊಂಡೆ.

ಇನ್ನು, ನಿರೂಪಕ ಅಕುಲ್ ಬಾಲಾಜಿಯ ಇಂಗೀಷ್ ಶೈಲಿಯ ಕನ್ನಡ ಉಚ್ಛಾರಣೆ ಮತ್ತು ಅವರು ಹುಡುಗಿಯರನ್ನು ಬಹುವಚನದಲ್ಲೂ ಹುಡುಗರನ್ನು ಏಕವಚನದಲ್ಲೂ ಸಂಬೋಧಿಸುವುದು. ಹುಡಿಗಿಯರಿಗೆ ಗಂಭೀರವಾಗಿ ಬಯ್ಯುವುದು,ಹುಡುಗರಿಗೆ ಅದನ್ನೇ ಗೇಲಿ ಮಾಡುತ್ತಾ ಎಚ್ಚರಿಸುವುದು ಅವರು ನಗರ ಪಕ್ಷಪಾತಿ ಎಂಬುದನ್ನು ತೋರಿಸುತ್ತದೆ. ಇನ್ನು ಸ್ಕ್ರಿಪ್ಟ್ ಮತ್ತು ವಾಯ್ಸ್ ಒವರ್ ವೈನೋದಿಕ ಹಿಂಸೆಗೆ ಅತ್ಯುತ್ತಮ ಉದಾಹರಣೆ. ಅವಕಾಶ ಸಿಕ್ಕಾಗಲೆಲ್ಲಾ ಇಡೀ ಗ್ರಾಮೀಣ ಜನತೆಯನ್ನು, ಅವರ ನಂಬಿಕೆಗಳನ್ನು ಮತ್ತು ಅವರ ಕಪ್ಪು ವರ್ಣವನ್ನು ಲೇವಡಿ ಮಾಡಲಾಗಿದೆ. ಇದಲ್ಲದೆ ಆ ಹುಡುಗರ ಬಾಯಲ್ಲಿ ಪ್ರೀತಿ, ಪ್ರೇಮ, ಮುತ್ತು ಎಂಬ ಮಾತುಗಳನ್ನೆಲ್ಲಾ ಆಡಿಸಿ ಕಾಮನೆಗಳನ್ನು ಕೆರಳಿಸುವ ಪ್ರಯತ್ನವೂ ನಡೆಯುತ್ತಿದೆ.

ರಿಯಾಲಿಟಿ ಶೋಗಳಲ್ಲಿ ಕೆಲಸ ಮಾಡಿದ ನನ್ನ ಗೆಳತಿಯೊಬ್ಬಳು ಹೇಳುತ್ತಿದ್ದಳು; ಅಲ್ಲಿ ’ಡಿವೈಡ್ ಅಂಡ್ ರೂಲ್’ ಅಂದರೆ ಒಡೆದು ಆಳುವ ನೀತಿಯನ್ನು ಅನುಸರಿಸಲಾಗುತ್ತದೆಯೆಂದು. ಸ್ಪರ್ಧಿಗಳಲ್ಲೇ ಪೈಪೋಟಿಯನ್ನು ಹುಟ್ಟು ಹಾಕಿ ಪರಸ್ಪರ ಅಪನಂಬಿಕೆಯನ್ನು ಸೃಷ್ಟಿಸುವುದು. ಪ್ರತಿಯೊಬ್ಬರಿಗೂ ಗೆಲ್ಲುವ ತವಕ. ಹಳ್ಳಿಹೈದ....ದಲ್ಲಿ ಪ್ಯಾಟೆ ಸುಂದರಿಯರಿಗೆ ಮಾತ್ರ ಗೆಲ್ಲುವ ತವಕ .ಹೈದರಿಗೆ ಇಲ್ಲಿಂದ ತಪ್ಪಿಸಿಕೊಂಡು ಊರಿಗೆ ಓಡುವ ತುಡಿತ. ಬಹುಶಃ ಕಾರ್ಯಕ್ರಮದ ನಿಬಂಧನೆಗಳು ಮತ್ತು ಆಕರ್ಷಣೆಗಳು ಅವರನ್ನು ’ಇಲ್ಲಿರಲಾರೆ ಅಲ್ಲಿಗೆ ಪೋಗಲಾರೆ’ ಎಂದು ಕಟ್ಟಿ ಹಾಕಿರಬಹುದು.

ಹಳ್ಳಿ ಜನರ ಬಡತನ, ಅಸಹಾಯಕತೆ ಮತ್ತು ಮುಗ್ಧತೆ ಟಿ.ವಿಯಲ್ಲಿ ಮಾರಾಟದ ಸರಕಾಗುತ್ತಿದೆ. ಅದ್ದೂರಿಯ ಬಂಗಲೆಗಳಲ್ಲಿ ಕುಳಿತು, ಕುರುಕುಲು ತಿಂಡಿ ತಿನ್ನುತ್ತಾ ನಗರಗಳ ಸುಶಿಕ್ಷಿತ ಜನರು ಇದನ್ನು ಎಂಜಾಯ್ ಮಡುತ್ತಾರೆ! ಹಾಗೆಂದು ಅವರನ್ನು ಹೃದಯಹೀನರೆಂದು, ಗ್ರಾಮೀಣ ಜನರನ್ನು ಉಪೇಕ್ಷೆಸುವರೆಂದು ಅನ್ನುವ ಹಾಗಿಲ್ಲ. ಯಾಕೆಂದರೆ ಕಳೆದ ಬಾರಿ ಉತ್ತರ ಕರ್ನಾಟಕದ ಜನತೆ ನೆರೆ ಹಾವಳಿಯಿಂದ ಬದುಕು ಕಳೆದುಕೊಂಡಾಗ ಮುಖ್ಯಮಂತ್ರಿಗಳ ಜೋಳಿಗೆಗೆ ಕೋಟ್ಯಾಂತರ ರೂಪಾಯಿಗಳನ್ನು ಹಾಕಿದವರು ಇದೇ ಪೇಟೆ ಜನರು.

ಇದೇ ನಗರದ ಸೆಲೆಬ್ರಿಟಿಗಳನ್ನು ಅಚ್ಚರಿಯ ಕಣ್ಣುಗಳಿಂದ ನೋಡುತ್ತಿದ್ದ ಹಳ್ಳಿ ಜನರೆದುರು ಅವರ ಖಾಸಗಿ ಬದುಕನ್ನು ತೆರೆದಿಟ್ಟು ಮಾದರಿಗಳನ್ನು ಒಡೆಯುವ ಪ್ರಯತ್ನವೂ ಕಿರು ತೆರೆಯಲ್ಲಿ ನಿರಂತರ ನಡೆಯುತ್ತಿದೆ. ಸಾಮಾಜಿಕ ಹೊಣೆಗಾರಿಕೆಯೆಂಬುದು ದೃಶ್ಯ ಮಾಧ್ಯಮದ ನಿಘಂಟಿನಲ್ಲಿಲ್ಲದ ಪದ. ಇದೇ ಚಾನಲ್ ನವರು ಹಿಂದೆ ಸ್ವಯಂವರ ರಿಯಾಲಿಟಿ ಶೋ ಒಂದು ಮಾಡಿದ್ದರು. ಅದರಲ್ಲಿ ಭಾಗವಹಿಸಲು ವಧುಗಳು ಮುಂದೆ ಬರದಾದಾಗ ಕಿರುತೆರೆ ನಟಿಯರನ್ನೇ ಬಾಡಿಗೆ ವಧುಗಳಾಗಿ ತಂದು ವಿವಾಹಕಾಂಕ್ಷಿಗಳನ್ನು ಬೆಚ್ಚಿ ಬೀಳಿಸಿದ ಇತಿಹಾಸವೂ ಇದಕ್ಕಿದೆ.

ನಾನು ಇದನ್ನು ಬರೆಯುವ ಹೊತ್ತಿಗಾಗಲೇ ಪುತ್ತೂರಿನ ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ಮಾಧವ ಭಾವಿಕಟ್ಟೆಯವರು ’ ಹಳ್ಳಿ ಹೈದ ಪ್ಯಾಟೆಗೆ ಬಂದ’ ಕಾರ್ಯಕ್ರಮದ ಬಗ್ಗೆ ತೀವ್ರ ಅಸಮಾಧಾನಗೊಂಡು ನ್ಯಾಯಾಲಯದ ಮೊರೆ ಹೋಗಲು ಸಿದ್ಧತೆಗಳನ್ನು ಮಾಡಿಕೊಳ್ಳೊತ್ತಿದ್ದಾರೆ. ಹಳ್ಳಿ ಜನರನ್ನು ಸ್ನಾನ ಮಾಡದವರು, ತಲೆ ಬಾಚಿಕೊಳ್ಳದವರು, ಕಾಡುಜನರಂತೆ ಬದುಕುತ್ತಾರೆ ಎಂಬಂತೆ ಚಿತ್ರಿಸಲಾಗಿದೆ; ಗ್ರಾಮೀಣ ಜನರನ್ನು ಅವಮಾನಿಸಲಾಗಿದೆ ಎಂಬುದು ಅವರ ಆರೋಪ. ನಾನು ಮಾತಾಡಿಸಿದ ಬಹುತೇಕ ಜನರ ಅಭಿಪ್ರಾಯವೂ ಇದೇ ಆಗಿದೆ.


’ಹಳ್ಳಿ ಹೈದ ಪ್ಯಾಟೆಗೆ ಬಂದ’ ಎಂಬ ರಿಯಾಲಿಟಿ ಶೋದ ಕೆಲವು ಎಪಿಸೋಡುಗಳನ್ನು ನೋಡಿದೆ. ಅದು ನನಗೆ ಇಷ್ಟನ್ನೆಲಾ ಬರೆಯಲು ಪ್ರಚೋದಿಸಿತು. ಅದಕ್ಕಾಗಿ ಆ ಶೋ ದ ಕ್ರಿಯೇಟಿವ್ ಹೆಡ್ ಗೆ ನನ್ನ ಕೃತಜ್ನತೆಗಳು!

[ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ ]

Sunday, March 13, 2011

ಮೂರ್ತಿಗಳ ’ಇಂಗ್ಲೀಷ್ ಮನಸ್ಸು’ ಮತ್ತು ರೈಗಳ ’ದೇಸಿ ಮನಸ್ಸು’




ಇನ್ಫೋಸಿಸ್ ಟೆಕ್ನಲಾಜೀಸ್ ಸಂಸ್ಥೆಯ ಸಂಸ್ಥಾಪಕ ನಾಗವಾರ ರಾಮರಾಯ ನಾರಾಯಣಮೂರ್ತಿಯವರಿಗೆ ಕನ್ನಡ ಬರುತ್ತದೆಯೆಂದು ಕನ್ನಡ ಕುಲಕೋಟಿಗೆ ಕೊನೆಗೂ ಗೊತ್ತಾಯಿತು. ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಅವರು ಅಚ್ಚಕನ್ನಡದಲ್ಲಿ ಮಾತಾಡಿದರು. ಹಾಗೆಯೇ ಕನ್ನಡದ ಕುವರಿಯೆಂದೇ ಬಿಂಬಿಸಲಾಗುತ್ತಿರುವ ಬಾಲಿವುಡ್ ತಾರೆ ಐಶ್ವರ್ಯ ರೈಗೆ ಕನ್ನಡ ಬರುವುದಿಲ್ಲವೆಂದು ಕೂಡಾ ಸಾಬೀತಾಯಿತು.

ಮೂರ್ತಿಗಳ ಮಾತೃಭಾಷೆ ಕನ್ನಡ. ಹಾಗಾಗಿ ಅವರು ಕನ್ನಡದಲ್ಲಿ ತಡವರಿಸದೆ ಮಾತಾಡಿದರು. ಐಶ್ವರ್ಯಳ ಮಾತೃಭಾಷೆ ತುಳು. ಅದರಲ್ಲಾಕೆ ನಿರರ್ಗಳವಾಗಿ ಮಾತಾಡಬಲ್ಲಳು. ಕೆಲವು ವರ್ಷಗಳ ಹಿಂದೆ ಆಕೆ ಮಂಗಳೂರಿಗೆ ಬಂದಿದ್ದಳು. ಆಗ ಆಕೆಗಿನ್ನೂ ಮದುವೆಯಾಗಿರಲಿಲ್ಲ. ತನ್ನ ಹುಟ್ಟೂರಿನಲ್ಲಿ ತುಂಬಾ ಅಭಿಮಾನದಿಂದ ತುಳುವಿನಲ್ಲೇ ಭಾಷಣ ಮಾಡಿದ ಆಕೆ, "ಯಾನ್ ತುಳು ಆಣನೇ ಮದ್ಮೆ ಆಪಿನಿ" ಅಂದರೆ ’ನಾನು ತುಳು ಹುಡುಗನನ್ನೇ ಮದುವೆಯಾಗುತ್ತೇನೆ’ ಎಂದು ಹೇಳಿ ತುಳು ಹುಡುಗರಲ್ಲಿ ಪುಳಕವನ್ನು ತಂದಿದ್ದಳು.

ತುಳುವರು ಪ್ರಪಂಚದ ಯಾವ ಮೂಲೆಯಲ್ಲಿದ್ದರೂ ಅವರ ಮಾತೃಭಾಷೆ ತುಳುವೇ ಆಗಿರುತ್ತದೆ ಮತ್ತು ಅವರು ತಮ್ಮ ಮಕ್ಕಳಿಗೆ ತುಳು ಕಲಿಸುತ್ತಾರೆ, ಹಾಗಾಗಿ ಅವರ ಮಕ್ಕಳ ಮಾತೃಭಾಷೆ ತುಳುವೇ ಆಗಿರುತ್ತದೆ. ಈ ತುಳುನಾಡು ಕರ್ನಾಟಕವೆಂಬ ರಾಜ್ಯದೊಳಗೆ ಇರುವ ಕಾರಣದಿಂದಾಗಿ ಅವರನ್ನು ನಾವು ಕನ್ನಡಿಗರೆಂದೇ ಪರಿಗಣಿಸುತ್ತೇವೆ. ಅದನ್ನವರು ಪ್ರೀತಿಯಿಂದಲೇ ಒಪ್ಪಿಕೊಳ್ಳುತ್ತಾರೆ. ಇದೇ ಅಭಿಮಾನದಿಂದ ಐಶ್ವರ್ಯ ರೈ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿರಬಹುದು. ಬಾಳ ಠಾಕ್ರೆಯ ಬೆದರಿಕೆಯನ್ನೂ ಧಿಕ್ಕರಿಸಿ ಆಕೆ ಸಮ್ಮೇಳನದಲ್ಲಿ ಭಾಗವಹಿಸಿದಳೆಂಬುದನ್ನು ನಾವು ಗಮನಿಸಬೇಕು. ಬೇಕಾದರೆ ಹಿಂದಿ ತಾರೆಯರಾದ ಸುನಿಲ್ ಶೆಟ್ಟಿ, ಶಿಲ್ಪಶೆಟ್ಟಿ, ನಿರ್ದೇಶಕ ರೋಹಿತ್ ಶೆಟ್ಟಿ, ಸಂಗೀತ ನಿರ್ದೇಶಕ ಸಂದೀಪ್ ಚೌಟ ಅವರನ್ನು ಮಾತಾಡಿಸಿ ನೋಡಿ ಅವರು ತಾವು ತುಳುವರೆಂದು ಹೇಳಿಕೊಳ್ಳಲು ಹೆಮ್ಮೆಪಡುತ್ತಾರೆ, ತಮ್ಮ ಎದುರಿನಲ್ಲಿರುವವರು ತುಳುವರೆಂದು ಗೊತ್ತಾದರೆ ತುಳುವಿನಲ್ಲೇ ಮಾತು ಮುಂದುವರೆಸುತ್ತಾರೆ. ಇಂತಹ ನಡವಳಿಕೆಯನ್ನು ಕನ್ನಡದವರಿಂದ ನಿರೀಕ್ಷಿಸಲು ಸಾಧ್ಯವೇ?

ನಾರಾಯಣಮೂರ್ತಿಯವರು ಸಾರ್ವಜನಿಕವಾಗಿ ಕನ್ನಡ ಮಾತಾಡುವುದಿಲ್ಲ. ಎಲ್ಲಿಯೂ ತಾನು ಕನ್ನಡದವನೆಂದು ಹೆಮ್ಮೆಯಿಂದ ಹೇಳಿಕೊಳ್ಳುವುದಿಲ್ಲ. ಆದರೆ ಐಶ್ವರ್ಯ ರೈ ಸಾರ್ವಜನಿಕವಾಗಿ ತುಳು ಮಾತಾಡುತ್ತಾಳೆ, ತಾನು ತುಳುನಾಡಿನವಳು ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತಾಳೆ. ಇದು ಕನ್ನಡಿಗರಿಗೂ ತುಳುವರಿಗೂ ಇರುವ ವ್ಯತ್ಯಾಸ.

ನನ್ನ ಮಾತೃಭಾಷೆ ತುಳು. ತುಳು ಅಂದ ತಕ್ಷಣ ನನ್ನ ಚಿತ್ತಭಿತ್ತಿಯಲ್ಲಿ ಹಲವು ವಿಚಾರಗಳು ಮೂಡಿಬರುತ್ತವೆ. ಅದು ಯಕ್ಷಗಾನ, ನಾಗಮಂಡಲ, ಭೂತರಾಧನೆ, ಕಂಬಳ, ಕೋಲ, ತಂಬಿಲ, ಡಕ್ಕೆಬಲಿ, ಕೋಳಿ ಅಂಕ, ಖೆಡ್ಡಸ, ಕೋಟಿ-ಚನ್ನಯ್ಯ, ಸಿರಿಜಾತ್ರೆ....ಹೀಗೆ ನಂಬಿಕೆ, ಆಚರಣೆಗಳ ಮೆರವಣಿಗೆ ಸಾಗಿಬರುತ್ತದೆ. ಇದನ್ನೇ ನಾವು ’ತುಳುವ ಮನಸ್ಸು’ ಎಂದು ಕರೆಯುತ್ತೇವೆ. ತುಳು ಕೇವಲ ಒಂದು ಭಾಷೆ ಮಾತ್ರ ಅಲ್ಲ. ಯಕ್ಷಗಾನ, ಕಂಬಳ, ಸಿರಿಜಾತ್ರೆ, ಭೂತರಾದನೆಯ ಹೊರತಾದ ತುಳುನಾಡನ್ನು ಕಲ್ಪಿಸಿಕೊಳ್ಳುವುದಕ್ಕೆ ನನಗೆ ಸಾಧ್ಯವಿಲ್ಲ. ಅದರೆ ಕನ್ನಡ ಎಂದ ತಕ್ಷಣ ಇಷ್ಟು ಶಕ್ತಿಯುತವಾದ ಬಿಂಬಗಳು ನನ್ನ ಚಿತ್ತಭಿತ್ತಿಯಲ್ಲಿ ಮೂಡಿಬರುವುದೇ ಇಲ್ಲ. ನಮ್ಮ ಶಿಷ್ಟ ಸಂಸ್ಕೃತಿ-ಶಿಷ್ಟ ಸಾಹಿತ್ಯವು ಜನಪದ ಸಂಸ್ಕೃತಿ-ಜನಪದ ಸಾಹಿತ್ಯವನ್ನು ಕಡೆಗಣಿಸುತ್ತಿರುವ ಪರಿಣಾಮ ಇದಾಗಿರಬಹುದೇ? ಸಂಸ್ಕೃತ ವಿಶ್ವವಿದ್ಯಾಲಯವನ್ನು ಕಟ್ಟುವಲ್ಲಿನ ಆಸಕ್ತಿ ಜಾನಪದ ವಿಶ್ವವಿದ್ಯಾಲಯವನ್ನು ಕಟ್ಟುವುದರಲ್ಲಿ ಏಕಿಲ್ಲ?

ಕಳೆದ ವರ್ಷ ಧರ್ಮಸ್ಥಳದ ಉಜಿರೆಯಲ್ಲಿ ವಿಶ್ವ ತುಳು ಸಮ್ಮೇಳನ ನಡೆಯಿತು. ಮೂರು ದಿನಗಳ ಕಾಲ ನಡೆದ ಸಮ್ಮೇಳನದಲ್ಲಿ ನಿರೀಕ್ಷೆಗೂ ಮೀರಿ ತುಳುವರು ಭಾಗವಹಿಸಿದ್ದರು. ವೀರೇಂದ್ರ ಹೆಗ್ಗಡೆಯವರನ್ನು ’ಗುರ್ಕಾರ’[ ಯಜಮಾನ] ರನ್ನಾಗಿಸಿ ವೀಳ್ಯಕೊಟ್ಟ ಈ ಸಮ್ಮೇಳನಕ್ಕೆ ೩ಲಕ್ಷ ಜನರು ಬರುವವರೆಂದು ಅಂದಾಜಿಸಲಾಗಿತ್ತು. ಆದರೆ ೬ ಲಕ್ಷಕ್ಕೂ ಅಧಿಕ ತುಳು ಬಂಧುಗಳು ಪ್ರಪಂಚದಾದ್ಯಂತದಿಂದ ಉಜಿರೆಗೆ ಹರಿದು ಬಂದಿದ್ದರು. ಹಿಂದಿನ ಕಾಲದಲ್ಲಿ ಎತ್ತಿನ ಗಾಡಿ ಕಟ್ಟಿಕೊಂಡು ಮನೆ ಮಂದಿಯೆಲ್ಲಾ ಜಾತ್ರೆಗೆ ಬಂದಂತೆ ತುಳು ಬಾಂದವರು ವಾಹನಗಳನ್ನೇರಿ ಉಜಿರೆಗೆ ಬಂದಿದ್ದರು.

ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ದಕ್ಷಿಣ ಭಾಗ ಮತ್ತು ಕೇರಳದ ಉತ್ತರ ಭಾಗವಾದ ಕಾಸರಗೋಡು ಜಿಲ್ಲೆಯಲ್ಲಿ ವಾಸಿಸುವ ಬಹುಸಂಖ್ಯಾತರು ಮಾತಾಡುವ ಭಾಷೆ ತುಳು.ಇದರಲ್ಲಿ ಬಹಳಷ್ಟು ಜನ ದೂರದ ಮುಂಬಯಿ, ಮದ್ಯಪ್ರಾಚ್ಯ ದೇಶಗಳಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಆದರೂ ಅವರು ತುಳುನಾಡನ್ನು, ತುಳುಭಾಷೆಯನ್ನು ಮರೆತವರಲ್ಲ. ತಾವಿರುವೆಡೆಯಲ್ಲಿಯೇ ತಮ್ಮ ದೈವಗಳಿಗೂ ಒಂದು ’ಸ್ಥಾನ’ ಕಲ್ಪಿಸಿಕೊಳ್ಳುತ್ತಾರೆ. ವರ್ಷಕ್ಕೊಮ್ಮೆಯಾದರೂ ತಾಯ್ನಾಡಿಗೆ ಬಂದು ನೇಮ, ಕೋಲ, ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.

ಒಂದು ಅಂದಾಜಿನ ಪ್ರಕಾರ ಸುಮಾರು ೫೦ ಲಕ್ಷ ತುಳುವರು ಪ್ರಪಂಚದಾದ್ಯಂತ ಹರಡಿಕೊಂಡಿದ್ದಾರೆ. ಕರ್ನಾಟಕದ ಒಟ್ಟು ಜನಸಂಖ್ಯೆಯ ಶೇ ೪ರಷ್ಟು ಜನರು ತುಳುವರಾಗಿದ್ದಾರೆ. ಪಂಚದ್ರಾವಿಡ ಭಾಷೆಯಲ್ಲಿ ಒಂದಾದ ತುಳುವಿಗೆ ಸ್ವಂತ ಲಿಪಿಯಿಲ್ಲ; ಭವ್ಯ ಸಾಹಿತ್ಯ ಪರಂಪರೆಯಿಲ್ಲ. ಕೇವಲ ಮೌಕಿಕ ಸಾಹಿತ್ಯದ ಮೂಲಕವೇ ಉಳಿದುಕೊಂಡು ಬಂದಿರುವ ಸಂಸ್ಕೃತಿಯಿದು.

ಇಷ್ಟೆಲ್ಲಾ ಹೇಳಿದುದರ ಸ್ಪಷ್ಟ ಉದ್ದೇಶ ಇಷ್ಟೇ; ಜಾನಪದದ ಜೊತೆ ಅನುಸಂಧಾನ ನಡೆಸದ ಯಾವುದೇ ಭಾಷೆ ಜೀವಂತವಾಗಿ ಉಳಿಯುವುದು ಕಷ್ಟ. ಉಳಿದರೂ ದ್ವೀಪವಾಗಿಬಿಡುತ್ತದೆ. ಸಂಸ್ಕೃತ ಭಾಷೆಯೇ ಇದಕ್ಕೆ ಉದಾಹರಣೆಯಾಗಿ ನಮ್ಮ ಕಣ್ಣ ಮುಂದಿದೆ. ಕನ್ನಡದ ಮಟ್ಟಿಗೆ ಹೇಳುವುದಾರೆ ಮಣ್ಣಿನ ಜೊತೆ ನೇರ ಸಂಪರ್ಕ ಹೊಂದಿರುವ ಬಹುಸಂಖ್ಯಾತ ಜನಸಮುದಾಯವಾದ ರೈತರೊಡನೆ, ಶ್ರಮಿಕವರ್ಗದ ಜೊತೆ ಗುರುತಿಸಿಕೊಂಡು, ಪ್ರಭುತ್ವದ ಭಾಷೆಯಾಗಬೇಕು. ಇಲ್ಲದಿದ್ದರೆ ಜಾಗತೀಕರಣದ ಭರಾಟೆಯಲ್ಲಿ ಕನ್ನಡ ಕೊಚ್ಚಿ ಹೋಗುವ ಸಾಧ್ಯತೆಯಿದೆ. ಅಮೇರಿಕದ ಅಭಿವೃದ್ದಿಯನ್ನು ಮಾದರಿಯನ್ನಾಗಿರಿಸಿಕೊಂಡಿರುವ ನಾರಾಯಣಮೂರ್ತಿಯಂಥ ವ್ಯಾಪಾರಸ್ಥರು ಅದಕ್ಕೆ ಕಾರಣರಾಗುತ್ತಾರೆ.

ಸಂಸ್ಕೃತಿಯೆನ್ನುವುದು ಪ್ರಾದೇಶಿಕ ವೈಶಿಷ್ಟತೆಗಳನ್ನು ಒಳಗೊಂಡಿರುತ್ತದೆ. ಆಯಾಯ ಪ್ರದೇಶದ ಪರಿಸರ, ಜನಜೀವನ, ಆಚಾರ-ವಿಚಾರ, ಆಹಾರ ಪದ್ದತಿ, ಉಡುಗೆ-ತೊಡುಗೆಗಳು ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಪ್ರತಿ ಸಂಸ್ಕೃತಿಯೂ ಅನನ್ಯವಾದುದು. ಇದರ ಅಭಿವ್ಯಕ್ತಿಯೇ ಜನಪದ ಸಾಹಿತ್ಯ, ಜನಪದ ಸಂಸ್ಕೃತಿ. ಇದುವೇ ಕನ್ನಡ ಸಂಸ್ಕೃತಿಯ ಮೂಲದ್ರವ್ಯ. ಈ ಅನನ್ಯತೆಯನ್ನು ನಾಶಪಡಿಸುವ ಹುನ್ನಾರ ಬಹುರಾಷ್ಟ್ರೀಯ ಕಂಪೆನಿಗಳಿಂದ ನಡೆಯುತ್ತಿದೆ.

ಈ ಮೂಲದ್ರವ್ಯ ನಗರ ಕೇಂದ್ರಿತ ಮನಸ್ಸಿನ ಬಹುತೇಕ ಉದ್ದಿಮೆದಾರರಲ್ಲಿ ಇಲ್ಲ. ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭವಾದ ಮಾಧ್ಯಮದಲ್ಲಿ ಇಲ್ಲ. ರಾಜಕಾರಣಿಗಳಲ್ಲಿ ಇಲ್ಲ. ಪ್ರಭುತ್ವದಲ್ಲಿ ಇಲ್ಲ. ಇದ್ದಿದ್ದರೆ ಇವತ್ತು ವಿಶ್ವಕನ್ನಡ ಸಮ್ಮೇಳನದಲ್ಲಿ ಭಾಗವಹಿಸಲು ಬಂದ ಕಲಾತಂಡಗಳು ವಸತಿ ವ್ಯವಸ್ಥೆಯಿಲ್ಲದೆ ಬೀದಿಯಲ್ಲಿ ಮಲಗುವ ಪ್ರಮೇಯ ಬರುತ್ತಿರಲಿಲ್ಲ. ರೈತ ನಾಯಕನೊಬ್ಬ ಇದೇ ವೇದಿಕೆಯಲ್ಲಿ ಕಣ್ಣೀರು ಹಾಕುವ ದೈನ್ಯತೆ ಉಂಟಾಗುತ್ತಿರಲಿಲ್ಲ. ಕನ್ನಡಿಗರು ಸಂಭ್ರಮಪಡಬೇಕಾಗಿದ್ದ ಸಮ್ಮೇಳನದಲ್ಲಿ ಅಪಸ್ವರದ ಧ್ವನಿ ಏಳುತ್ತಿರಲಿಲ್ಲ.

ನಿಜ. ಇಂಗೀಷ್ ಭಾಷೆಯೆನ್ನುವುದು ಜ್ನಾನದ ಕೀಲಿ ಕೈ. ಅದಕ್ಕಿರುವ ಅಗಾದ ಸಾಧ್ಯತೆಗಳ ಅರಿವು ಪ್ರತಿಯೊಬ್ಬ ಕನ್ನಡಿಗನಿಗೂ ಇದೆ. ಅದರಿಂದಾಗಿಯೇ ಗ್ರಾಮಾಂತರ ಪ್ರದೇಶದ ಸರಕಾರಿ ಶಾಲೆಗಳು ಮುಚ್ಚುವ ಸ್ಥಿತಿ ತಲುಪಿದೆ. ಆದರೆ ನಮ್ಮ ಭಾವ ಪ್ರಪಂಚ ವಿಸ್ತಾರಗೊಳ್ಳುವುದು ಮಾತೃಭಾಷೆಯಿಂದ. ಕನ್ನಡದ ಮನಸ್ಸು ರೂಪುಗೊಳ್ಳುವುದು ಇಲ್ಲಿಯೇ. ಹಾಗಾಇಯೇ ಆಡಳಿತ ಭಾಷೆ ಕನ್ನಡವಾಗಬೇಕು. ನಮ್ಮ ದೈನಂಧಿನ ವ್ಯವಹಾರ ಕನ್ನಡದಲ್ಲಿಯೇ ಸರಾಗವಾಗಿ ಸಾಗುವಂತಾಗಬೇಕು. ಆದರೆ ಹಾಗಾಗಲು ಸಾಧ್ಯವೇ? ನಮ್ಮ ರಾಜಕಾರಣಿಗಳಲ್ಲಿ ಆ ಇಚ್ಛಾಶಕ್ತಿ ಬರಲು ಸಾಧ್ಯವೇ?

ಅಭಿವೃದ್ಧಿಯ ಹೆಸರಲ್ಲಿ ಪ್ರಕೃತಿಯ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಪ್ರಕೃತಿ ಮಾತೆ ಒಮ್ಮೆ ಮೈಕೊಡವಿ ಎದ್ದರೆ ಏನಾಗುತ್ತದೆಯೆಂಬುದು ಈಗ ಸುನಾಮಿಯಿಂದ ನರಳುತ್ತಿರುವ ಜಪಾನ್ ಅನ್ನು ನೋಡಿದರೆ ತಿಳಿಯುತ್ತದೆ. ಜಗತ್ತಿನಲ್ಲಿರುವ ಪರಮಾಣು ಸ್ಥಾವರಗಳಲ್ಲಿ ಕೆಲವೇ ಕೆಲವು ಸ್ಫೋಟಗೊಂಡರೂ ಸಾಮೂಹಿಕ ನರಹತ್ಯೆ ಸಂಭವಿಸಬಹುದಲ್ಲವೆ? ಇದು ಮನುಷ್ಯ ತಾನಾಗೇ ತೋಡಿಕೊಳ್ಳುತ್ತಿರುವ ಮರಣಗುಂಡಿಯಲ್ಲವೇ?

ಈ ಸಂದರ್ಭದಲ್ಲಿ ನಾವು ಮತ್ತೆ ದೇಶಿ ಚಿಂತನೆಯತ್ತ ಹೊರಳಬೇಕಾಗಿದೆ. ಅದಕ್ಕೆ ಕನ್ನಡದ ಮನಸ್ಸು ಬೇಕು; ತುಳು ಮನಸ್ಸು ಬೇಕು. ಅಂಥ ಮನಸ್ಸುಗಳನ್ನು ಕಟ್ಟುವ ಕೆಲಸ ಆಗಬೇಕಾಗಿದೆ. ಅದಕ್ಕೆ ಸಾಹಿತ್ಯ ಸಮ್ಮೇಳನಗಳು, ವಿಶ್ವಕನ್ನಡ ಸಮ್ಮೇಳನಗಳು ನೆರವಾಗಬೇಕು. ಆದರೆ ಈಗ ನಡೆಯುತ್ತಿರುವ ಜಾತ್ರೆಯಂಥ ಸಮ್ಮೇಳನಗಳಿಂದ ಇದು ಸಾಧ್ಯವೇ ಎಂಬುದು ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿದೆ.

Sunday, March 6, 2011

ಕಾಷ್ಠ ದೇವರಿಗೊಲಿದ ಕನ್ನೆಮನಸು



ಅಳು ಉಕ್ಕಿ ಬರುತ್ತಿತ್ತು
ಹೇಳಿಕೊಳ್ಳಲು ನೀನಾದರೂ ಇರುತ್ತಿದ್ದರೆ...?
ನೀನು ಕಿವಿಯಾಗುತ್ತಿದ್ದೆಯಾ? ಗೊತ್ತಿಲ್ಲ. ನನಗಾದರೋ ಹೇಳಲೇಬೇಕಾಗಿತ್ತು-

ಹದಿಹರೆಯವನ್ನು ಓದು ನುಂಗಿತು.
ಮದುವೆ ಮಬ್ಬಾಗಿಸಿತು ಯೌವನವನ್ನು
ಪ್ರೌಢತನದಲ್ಲಿ ಪ್ರೇಮಾನುಭೂತಿಯಾಯಿತು ; ಬದುಕು ತಲ್ಲಣಿಸಿತು
ಮೋಡಿಗಾರ ಅವನು, ಕಣ್ಣು ಕೀಳದಾದೆ
ಬದುಕಿನಾಚೆಗಿನ ಕನವರಿಕೆಗಳು;
ತಾಯಿಯಾದೆ, ಹಸ್ತ ಸಾಮುದ್ರಿಕಳಾದೆ, ತಲೆ ಮೊಟಕಿದೆ.
ಅಳುವ ಸಂಜೆಯಲಿ ಕಣ್ಣಿನಾರತಿಯ ಎತ್ತಿ ಬರಮಾಡಿಕೊಂಡೆ ಒಳಮನೆಗೆ
ಕನ್ನೆತನದಿಂದ ಎದೆಗೊರಗಿದೆ.
ಕರಸ್ಥಳದಲ್ಲಿ ಇಷ್ಟಲಿಂಗ; ಶುಕ್ರಸಂಗಮದ ಕನಸು
ಅರ್ಧದಲ್ಲಿ ಎದ್ದು ಹೊರಟ.ಶಿಖರದೆಡೆ ಕಣ್ಣು ನೆಟ್ಟಿತ್ತು.
ಮತ್ತೆ ಕನವರಿಕೆ; ಮಬ್ಬುಗತ್ತಲು
ಕಣ್ಣಿರ ಬಿಸಿಗೆ ಮೋಡ ಹೆಪ್ಪುಗಟ್ಟಿದೆ.
ಒಡಲ ತುಂಬಾ ಕನಸುಗಳ ಕಳ್ಳ ಬಸಿರು
ನಾ ಮಡಿಲಾದೆ; ನೀನು ಹೆಗಲಾಗಲಿಲ್ಲ
ಅವನು ಏಕಾಂಗವೀರ; ಇವಳು ಸಮರೋತ್ಸಾಹಿ.
ಬಸಿರನ್ನು ನೆತ್ತಿಯಲ್ಲಿ ಹೊತ್ತು ಅಷ್ಟ ಭುಜೆಯಾದಳು
ಅರೆದು, ಹುಡಿ ಹಾರಿಸಿ ಭೂಮಿಗೊರಗಿದಳು
ಬೇಡದ ಗರ್ಭಕ್ಕೆ ತಾಯಿಯಾಗುವ ಭಾಗ್ಯ!

ಎಲ್ಲಾ ವಿಪ್ಲವಗಳಾಚೆ ಹೊಸದೊಂದು ಕನಸು
ಬೆಳ್ಳಿರೇಖೆಯಂತೆ ಕುಣಿಕುಣಿದು ಇಳಿದು ಗರ್ಭದಾಳಕ್ಕೆ ಕನ್ನವಿಕ್ಕಿತು
ದ್ರಾವಿಡ ದೇವನವನು; ತಲೆಯಲಿ ಗಂಗೆ ಪಕ್ಕದಲಿ ಸತಿ
ಸುತ್ತೆಲ್ಲಾ ಗಂಧರ್ವ ಕನ್ಯೆಯರ ಲಾಸ್ಯ.
ಪದತಲದಲಿ ಕುಳಿತು ಬೊಗಸೆಯೊಡ್ಡಿ ಉಲಿದಳು
’ಕನ್ನೆಮನಸು ನನ್ನದು, ನಿನ್ನೊಳಗೆ ಐಕ್ಯಮಾಡಿಕೊ’
ಜೋಗಪ್ಪನವನು, ಕೈಗೆ ಕಪಾಲವನ್ನಿಟ್ಟು ಮಾಯವಾದ.

ಎದೆಗೆ ನಾಟಿದ ತ್ರಿಶೂಲ; ಕೈಯಲ್ಲಿ ಕಪಾಲ.
ಹಂಬಲದ ದೇವರಿಗೆ ಹೃದಯವಿಲ್ಲ!

[ ಕಾಲೇಜು ದಿನಗಳ ನಂತರ ಕವನ ಬರೆದಿರಲಿಲ್ಲ. ಮಹಿಳಾದಿನಕ್ಕೆಂದು ಬರೆಯಲು ಪ್ರಯತ್ನಿಸಿದೆ. ಇದು ಕವನವಾಗಿದೆಯೋ ಇಲ್ಲವೋ ನೀವು ಹೇಳಬೇಕು.]

Monday, February 28, 2011

ಹೇಮಳನ್ನು ’ದಡ್ಡಿ’ಯನ್ನಾಗಿ ಮಾಡಿದ್ದು ಯಾರು?




ಪತ್ರಿಕಾರಂಗ ಹೀಗಾಗಿ ಹೋಯ್ತಲ್ಲಾ... ಎಂದು ವ್ಯಥೆಪಡುತ್ತಿರುವ ಹೊತ್ತಿನಲ್ಲೇ ಮಾರ್ಚ್ ೩ರಂದು ನಮ್ಮ ರಾಜ್ಯದಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಬಾಲಿವುಡ್ ನಟಿ ಹೇಮಮಾಲಿನಿಯನ್ನು ಆಯ್ಕೆ ಮಾಡಲಾಗಿದೆ.

ದೆಹಲಿಯಲ್ಲಿ ರಾಜ್ಯ ಸರಕಾರದ ವಿಶೇಷ ಪ್ರತಿನಿಧಿಯಾಗಿರುವ ಧನಂಜಯಕುಮಾರ್ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಮುಖ್ಯಮಂತ್ರಿಗಳು ಶಿಫಾರಸ್ಸು ಮಾಡಿದ್ದರು. ಆದರೆ ಕೇಂದ್ರ ಹೈಕಮಾಂಡ್ ತನ್ನ ಅಬ್ಯರ್ಥಿ ಹೇಮಮಾಲಿನಿಯ ಹೆಸರನ್ನು ರಾಜ್ಯದ ಮೇಲೆ ಹೇರಿದೆ.

ಇದು ಬಿಜೆಪಿಯ ಆಂತರಿಕ ಭಿನ್ನಮತದ ಒಂದು ಝಳಕ್. ಅದು ನಮಗೆ ಬೇಕಾಗಿಲ್ಲ. ನಮ್ಮ ಮುಂದಿರುವ ಪ್ರಶ್ನೆ; ಆರು ಕೋಟಿ ಜನಸಂಖ್ಯೆಯಿರುವ ನಮ್ಮ ರಾಜ್ಯದಲ್ಲಿ ಒಬ್ಬ ಕನ್ನಡಿಗನಿಗೂ ಈ ಯೋಗ್ಯತೆಯಿರಲಿಲ್ಲವೇ?
ಕನ್ನಡನಾಡಿಗೆ ಇಷ್ಟೊಂದು ಬೌದ್ಧಿಕ ದಾರಿದ್ರ್ಯ ಅಡರಿದೆಯಾ? ವಿಶ್ವ ಕನ್ನಡ ಸಮ್ಮೇಳನ ನಡೆಯುತ್ತಿರುವ ಶುಭ ಸಂದರ್ಭದಲ್ಲೇ ಕನ್ನಡೇತರರೊಬ್ಬರನ್ನು ರಾಜ್ಯಸಭೆಗೆ ಆಯ್ಕೆ ಮಾಡುತ್ತಿರುವುದು ಕನ್ನಡ ನಾಡಿನ ಸ್ಥಿತಿಗೆ ಹಿಡಿದ ಕೈಗನ್ನಡಿಯಲ್ಲವೇ? ಕನ್ನಡತನವೆಂಬುದು ಕೇವಲ ಉತ್ಸವಮೂರ್ತಿಯಾಗಿರಬೇಕೇ?

ವಿಧಾನಸಭೆಯಲ್ಲಿ ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತಾಡಿದ ಹೇಮಮಾಲಿನಿ, ”ನನಗೆ ಕರ್ನಾಟಕದ ಸಮಸ್ಯೆಗಳ ಬಗ್ಗೆ ಏನೇನೂ ಗೊತ್ತಿಲ್ಲ. ಆದರೆ ಎಲ್ಲವನ್ನೂ ಅರಿತುಕೊಂಡು ಅವುಗಳ ಪರಿಹಾರಕ್ಕಾಗಿ ಹೋರಾಡುವೆ” ಎಂದು ಪ್ರಾಮಾಣಿಕವಾಗಿ ಹೇಳಿದ್ದಾರೆ.
ಅಂದರೆ ಅದರ ಅರ್ಥ ಸ್ಪಷ್ಟ; ಒಂದು, ಆಕೆಗೇ ಈ ಆಯ್ಕೆ ಅನಿರೀಕ್ಷಿತವಾಗಿರಬೇಕು. ಧನಂಜಯಕುಮಾರ್ ಅವರನ್ನು, ಆ ಮೂಲಕ ಮುಖ್ಯಮಂತ್ರಿಗಳನ್ನು ಉಪೇಕ್ಷಿಸಲು ಹೇಮಮಾಲೀನಿಯವರನ್ನು ಬಿಜೆಪಿ ಹೈಕಮಾಂಡ್ ಇಲ್ಲಿ ದಾಳವಾಗಿ ಬಳಸಿಕೊಂಡಿದೆ. ಇನ್ನೊಂದು, ಆಕೆಗೆ ತಾನು ಪ್ರತಿನಿಧಿಸಲಿರುವ ಸ್ಥಾನಮಹತ್ವದ ಅರಿವಿಲ್ಲದಿರುವುದು ಅಥವಾ ಸ್ಥಾನ ಗೌರವದ ಅರಿವಿದ್ದೂ ಅದರ ಬಗ್ಗೆ ಉಡಾಫೆಯ ಭಾವ ಪ್ರದರ್ಶಿಸಿರುವುದು.
ಯಾಕೆಂದರೆ ಯಾವನೇ ಒಬ್ಬ ಮನುಷ್ಯ ತಾನು ಒಂದು ಕಾರ್ಯವನ್ನು ಕೈಗೊಳ್ಳುವ ಮುನ್ನ ಫೂರ್ವಸಿದ್ದತೆಯನ್ನು ಮಾಡಿಕೊಳ್ಳುತ್ತಾನೆ. ಕಾರ್ಯದ ಗಂಭೀರತೆಯನ್ನು ಹೊಂದಿಕೊಂಡು ಪೂರ್ವಸಿದ್ದತೆಯ ತಯಾರಿ ಇರುತ್ತದೆ. ಅದರೆ ಹೇಮಮಾಲಿನಿಯ ಮಾತುಗಳಲ್ಲಿ ಯಾವುದೇ ಪೂರ್ವಸಿದ್ದತೆಯ ಸುಳಿವೂ ಇರಲಿಲ್ಲ. ಆಕೆಗೆ ಕರ್ನಾಟಕ ಎಂದರೆ ಶೋಲೆ ಸಿನೇಮಾದ ಶೂಟಿಂಗ್ ನೆನಪುಗಳು ಮಾತ್ರ.

ಹೇಮಮಾಲಿನಿಗೆ ವಿಶ್ವಪ್ರಸಿದ್ಧವಾದ ಶ್ರೀಗಂಧ ನೆನಪಿಗೆ ಬರುವುದಿಲ್ಲ. ಕೋಲಾರದ ಚಿನ್ನದ ಗಣಿ ನೆನಪಾಗುವುದಿಲ್ಲ. ಮೈಸೂರು ದಸರಾ ನೆನಪಾಗುವುದಿಲ್ಲ. ಇತಿಹಾಸ ಪ್ರಸಿದ್ಧವಾದ ಹಂಪಿ ನೆನಪಾಗುವುದಿಲ್ಲ. ನಮ್ಮ ನಾಡಿನ ಜೀವನದಿಗಳಾದ ಕೃಷ್ಣೆ-ಕಾವೇರಿಯರು ನೆನಪಾಗುವುದಿಲ್ಲ. ಶ್ರೀಮಂತ ಕಲೆಯಾದ ಯಕ್ಷಗಾನವೂ ನೆನಪಾಗುವುದಿಲ್ಲ. ಸಾಂಸ್ಕೃತಿಕ ಕ್ಷೇತ್ರದಲ್ಲಿರುವ ವ್ಯಕ್ತಿಗಳಿಗೆ ಇದು ಗೊತ್ತಿರಲೇಬೇಕು. ಗೊತ್ತಿಲ್ಲವಾದರೆ ಅವರಿಗೆ ಸಾಂಸ್ಕೃತಿಕ ಕ್ಷೇತ್ರವನ್ನು ಪ್ರತಿನಿಧಿಸುವ ಯೋಗ್ಯತೆ ಖಂಡಿತಾ ಇಲ್ಲ. ಏಕೆಂದರೆ ಇವೆಲ್ಲಾ ಭಾರತದ ಮಟ್ಟಿಗೆ ಹೆಮ್ಮೆ ತರುವ ಏಕಮೇವಾದ್ವೀತಿಯಾಗಳೇ. ಒಬ್ಬ ನೃತ್ಯಗಾತಿ ಹೇಮಮಾಲಿನಿಗೆ, ಒಬ್ಬ ಸಿನೇಮಾ ನಟಿ ಹೇಮಮಾಲಿನಿಗೆ ಇವುಗಳ ಅರಿವಿಲ್ಲದಿದ್ದರೂ ನಡೆದೀತು. ಆದರೆ ಸಂಸತ್ತಿನಲ್ಲಿ ನಮ್ಮ ರಾಜ್ಯವನ್ನು ಪ್ರತಿನಿಧಿಸಲಿರುವ ಒಬ್ಬ ರಾಜಕಾರಣಿಗೆ ಇದೆಲ್ಲದರ ಅರಿವಿರಲೇಬೇಕು. ಯಾಕೆಂದರೆ ನಾಳೆ ಇವುಗಳ ಅಸ್ತಿತ್ವಕ್ಕೆ ದಕ್ಕೆ ಬಂದಾಗ ಇವರು ಇವುಗಳೆಲ್ಲದರ ಪರವಾಗಿ ಧ್ವನಿ ಎತ್ತಬೇಕು. ಅದು ಹೇಮಮಾಲಿನಿಯೆಂಬ ಉತ್ತರ ಭಾರತೀಯ ನಟಿಯಿಂದ ಸಾಧ್ಯವೇ?

ನಮ್ಮ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಅನ್ಯ ರಾಜ್ಯದವರಾದ ರಾಜೀವ ಚಂದ್ರಶೇಖರ್, ವೆಂಕಯ್ಯನಾಯ್ಡು, ಕನ್ನಡದವರಾಗಿದ್ದೂ ಕನ್ನಡ ಮಾತಾಡದ ವಿಜಯಮಲ್ಯ ಇವರೆಲ್ಲರ ಜೊತೆ ಈಗ ಹೇಮಮಾಲಿನಿ ಸೇರಿಬಿಡುತ್ತಾರೆ. ರಾಜ್ಯಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಒಟ್ಟು ಹನ್ನೆರಡು ಸ್ಥಾನಗಳಲ್ಲಿ ನಾಲ್ಕು ಜನರಿಗೆ ಕನ್ನಡವೇಬಾರದು.
ರಾಜ್ಯಸಭೆಯ ಒಟ್ಟು ಸದಸ್ಯರ ಸಂಖ್ಯೆ ೨೪೫. ಅದರಲ್ಲಿ ೨೩೩ ಸದಸ್ಯರನ್ನು ಅಯಾಯ ರಾಜ್ಯಗಳ ವಿಧಾನ ಸಭ ಸದಸ್ಯರು ಆರಿಸಿ ಕಳುಹಿಸುತ್ತಾರೆ. ರಾಜ್ಯಗಳ ಜನಸಂಖ್ಯೆಯನ್ನು ಆಧರಿಸಿ ಸೀಟು ನಿಗದಿಗೊಳಿಸಲಾಗುತ್ತದೆ. ಕರ್ನಾಟಕಕ್ಕೆ ನಿಗದಿಗೊಳಿಸಲಾದ ಸೀಟು ೧೨. ಉಳಿದ ೧೨ ಸದಸ್ಯರನ್ನು ಕಲೆ, ಸಾಹಿತ್ಯ, ವಿಜ್ನಾನ, ಸಮಾಜ ಸೇವೆಯಂತಹ ಮಾನವಿಕ ಕ್ಷೇತ್ರಗಳಿಂದ ರಾಷ್ಟ್ರಪತಿಗಳೇ ನೇರ ನೇಮಕಾತಿ ಮಾಡುತ್ತಾರೆ. ಹಾಗೆ ನೇಮಕಗೊಂಡವರೇ ನಮ್ಮ ನೆಚ್ಚಿನ, ಹೆಮ್ಮೆಯ ರಂಗ ನಟಿ ಬಿ. ಜಯಶ್ರೀ ಅವರು.
ಹೀಗೆ ಇವರು ನಮ್ಮವರೆಂದು ಹೆಮ್ಮೆಯಿಂದ ಹೇಳಿಕೊಳ್ಳಲಾಗದ, ಕನ್ನಡ ಸಂಸ್ಕೃತಿ ತಿಳಿಯದ ಸಂಸದರಿಂದ ನಮಗೇನು ಪ್ರಯೋಜನವಿದೆ?

ಈ ಪ್ರಶ್ನೆ ನಮ್ಮ ನಾಡಿನ ಬುದ್ಧಿಜೀವಿಗಳಲ್ಲಿ, ವಿಚಾರವಂತರಲ್ಲಿ, ಕನ್ನಡದ ಸಂಸ್ಕೃತಿಯ ಬಗ್ಗೆ ಕಾಳಜಿಯುಳ್ಳವರಲ್ಲಿ ಮೂಡಿದೆ. ಅವರ ಸ್ವಾಭಿಮಾನ ಕೆರಳಿದೆ. ಹಾಗಾಗಿ ನಾಡಿನ ಚಿಂತಕರಲ್ಲಿ ಒಬ್ಬರಾದ ಕೆ. ಮರುಳಸಿದ್ದಪ್ಪನವರನ್ನು ಹೇಮಮಾಲಿನಿಯ ವಿರುದ್ಧ ಕಣಕ್ಕಿಳಿಸಲಾಗಿದೆ. ’ಕನಸಿನ ಕನ್ಯೆ’ಯ ಅವಿರೋಧ ಆಯ್ಕೆಯ ಲೆಖ್ಖಾಚಾರ ಹಾಕಿದ್ದ ಬಿಜೆಪಿಗೆ ಸಣ್ಣದೊಂದು ತಡೆಗೋಡೆಯನ್ನು ಈ ನಾಡಿನ ಪ್ರಜ್ನಾವಂತರು ಸೃಷ್ಟಿಸಿದ್ದಾರೆ. ಪ್ರತಿಪಕ್ಷಗಳು ಅವರನ್ನು ಬೆಂಬಲಿಸಿವೆ.

’ಹೇಮಮಾಲಿನಿ ರಾಷ್ಟ್ರೀಯ ಆಸ್ತಿ. ಅವರನ್ನು ಯಾವುದೇ ರಾಜ್ಯಕ್ಕೆ ಸೀಮಿತಗೊಳಿಸಬಾರದು’ ಎಂದು ಬಿ.ಜೆ.ಪಿಯ ರಾಜ್ಯಾಧ್ಯಕ್ಷ ಈಶ್ವರಪ್ಪನವರು ಹೇಳಿದ್ದಾರೆ. ಆ ಮಾತು ನಿಜ. ಆದರೆ..ರಾಜ್ಯಸಭಾ ಸದಸ್ಯತನವೆಂಬುದು ಕೇವಲ ಅಲಂಕಾರಿಕಾ ಹುದ್ದೆ ಅಲ್ವಲ್ಲಾ..

ನನಗೊಂದು ಕುತೂಹಲವಿದೆ; ಜಗತ್ತಿಗೇ ನೀತಿಪಾಠವನ್ನು ಹೇಳುತ್ತಿರುವ, ಸೋನಿಯಾರ ರಾಷ್ಟ್ರೀಯತೆಯನ್ನು ಉಗ್ರವಾಗಿ ಪ್ರಶ್ನಿಸಿದ , ಮತಾಂತರವನ್ನು ಸದಾ ವಿರೋಧಿಸುತ್ತಿರುವ ಬಿಜೆಪಿ ಹೇಮಮಾಲಿನಿಯನ್ನು ಹೇಗೆ ತನ್ನ ಅಬ್ಯರ್ಥಿಯನ್ನಾಗಿ ಆಯ್ಕೆ ಮಾಡಿತು? ಆಕೆ ದರ್ಮೇಂದ್ರನನ್ನು ಮದುವೆಯಾಗುವ ಸಂದರ್ಭದಲ್ಲಿ ಅವರಿಬ್ಬರೂ ಮುಸ್ಲಿಂ ದರ್ಮಕ್ಕೆ ಮತಾಂತರಗೊಂಡಿದ್ದರು. ಯಾಕೆಂದರೆ ಹಿಂದು ಧರ್ಮದಲ್ಲಿ ಮೊದಲನೇ ಹೆಂಡತಿ ಬದುಕಿರುವಾಗಲೇ ಎರಡನೇ ವಿವಾಹಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಇನ್ನೊಂದು ಅಸಕ್ತಿಕರ ವಿಷಯ ಗೊತ್ತಾ? ಹೇಮಮಾಲಿನಿಯನ್ನು ಸಂಜೀವ್ ಕುಮಾರ್ ನಂತೆ ಹಲವಾರು ಜನರು ಉನ್ಮತ್ತರಂತೆ ಪ್ರೀತಿಸಿರಬಹುದು. ಆದರೆ ಈ ಕನಸಿನ ಕನ್ಯೆ ಯಾರಿಗೆ ಮನಸೋತಿದ್ದಳು ಗೊತ್ತೆ? ನಮ್ಮ ಕನ್ನಡದ ರಂಗಕರ್ಮಿ, ಜ್ನಾನಪೀಠ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಅವರಿಗೆ. ಆದರೆ ಕಾರ್ನಾಡ್ ಆಕೆಯ ಪ್ರಪೋಸಲ್ ಅನ್ನು ಪುರಸ್ಕರಿಸಲಿಲ್ಲ. ಯಾಕೆಂದರೆ ಅದಾಗಲೇ ಕಾರ್ನಾಡ್ ಅವರಿಗೆ ಡಾ.ಸರಸ್ವತಿಯವರೊಡನೆ ಮದುವೆ ನಿಶ್ಚಯವಾಗಿತ್ತು. ಮೊನ್ನೆ ತಾನೇ ಈ ಸಂಗತಿಯನ್ನು ಯಾವುದೋ ಪೇಪರಿನಲ್ಲಿ ಓದಿದ ನೆನಪು.

’ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿ ಸ್ವಾತಿಕ ಹಿನ್ನೆಲೆಯಿಂದ ಸ್ಪರ್ಧಿಸುತ್ತಿದ್ದೇನೆ. ಸೋಲು ಗೆಲುವಿನ ಬಗ್ಗೆ ನನಗೆ ಚಿಂತೆ ಇಲ್ಲ.’ ಎಂದಿದ್ದಾರೆ ರಂಗಭೂಮಿಯ ಹಿನ್ನೆಲೆಯುಳ್ಳ, ವಿಮರ್ಶಕ ಕೆ. ಮರುಳಸಿದ್ದಪ್ಪ ಅವರು.

ನಿಜ. ತೋಳ್ಬಲ, ಹಣಬಲದ ರಾಜಕೀಯದ ಮುಂದೆ ಸ್ವಾತಿಕ ಹಿನ್ನೆಲೆಯ ಸಜ್ಜನನೊಬ್ಬ ಗೆಲ್ಲುವುದು ಕಷ್ಟ. ಪ್ರಗತಿಪರ ವಿಚಾರಧಾರೆಯ ಮರುಳಸಿದ್ದಪ್ಪನವರ ಬಂಧುವರ್ಗ ಕೂಡಾ ಶಕ್ತ ರಾಜಕಾರಣದ ಹೊರಗಿನ ವ್ಯಕ್ತಿಗಳೇ ಆಗಿದ್ದಾರೆ. ಅವರು ಸಮನ್ವಯ ಕವಿಯೆಂದೇ ಹೆಸರಾದ ರಾಷ್ಟ್ರಕವಿ ಶಿವರುದ್ರಪ್ಪನವರ ಅಳಿಯ. ಪತ್ನಿ ಜಯಂತಿ ಸುಪ್ರಸಿದ್ಧ ವಸ್ತ್ರವಿನ್ಯಾಸಕಿ. ಮಗ ಕೆ.ಎಂ.ಚೈತನ್ಯ ಸಿನೇಮಾ ಮತ್ತು ಡಾಕ್ಯುಮೆಂಟರಿ ನಿರ್ದೇಶಕ.

ಹೇಮಮಾಲಿನಿ ಕೂಡಾ ಶ್ರೇಷ್ಠ ನಟಿ, ಅದಕ್ಕಿಂತಲೂ ಮಿಗಿಲಾಗಿ ಆಕೆಯೊಬ್ಬ ಅಪ್ರತಿಮ ನೃತ್ಯಗಾತಿ. ಆಕೆಗೆ ರಾಜ್ಯಸಭೆಯ ಸದಸ್ಯಳಾಗುವ ಎಲ್ಲಾ ಅರ್ಹತೆ ಇದೆ. ಈ ಹಿಂದೆಯೂ ಒಮ್ಮೆ ಆಕೆ ಮಹಾರಾಷ್ಟ್ರದಿಂದ ರಾಜ್ಯಸಭೆಗೆ ಆಯ್ಕೆ ಆಗಿದ್ದರು. ಆಕೆ ಯಾವುದೇ ರಾಜ್ಯದ ಹೆಮ್ಮೆಯ ಆಯ್ಕೆಯೇ. ಆದರೆ...
ನಮ್ಮ ನಾಡು-ನುಡಿ, ನೆಲ-ಜಲಗಳ ಬಗ್ಗೆ ಪ್ರೀತಿ-ಕಾಳಜಿಗಳಿಲ್ಲದ ಸಂಸದರಿಂದ ನಮಗೇನು ಪ್ರಯೋಜನವಿದೆ?

ನಮ್ಮ ರಾಜ್ಯದಲ್ಲಿ ಎಷ್ಟೊಂದು ಸಮಸ್ಯೆಗಳಿವೆ!
ನಿಜ, ನಾಡು, ನುಡಿ, ನೆಲ, ಜಲದ ಸಮಸ್ಯೆಗಳನ್ನು ನಾವು ಪರಸ್ಪರ ಸೌಹಾರ್ಧತೆಯಿಂದ ಮಾನವೀಯ ನೆಲೆಯಲ್ಲಿ ಪರಿಹರಿಸಿಕೊಳ್ಳಲು ಸಾಧ್ಯತೆಗಳಿವೆ.. ಆದರೆ ರಾಜಕಾರಣದೊಡನೆ ಸಂಲಗ್ನಗೊಂಡಿರುವ, ಮನುಕುಲವನ್ನು ಸಂಕಷ್ಟಕ್ಕೆ ದೂಡುತ್ತಿರುವ ಸಮಸ್ಯೆಗಳ ವಿರುದ್ದ ಹೊರಾಡಲು ಶಕ್ತ ರಾಜಕಾರಣದ ನೆರವೇ ಬೇಕಾಗುತ್ತದೆ. ನಮ್ಮ ರಾಜ್ಯದ ಮಟ್ಟಿಗೆ ಹೇಳುವುದಾದರೆ ಪರಿಸರ ನಾಶ ಎಂಬುದು ಮುಂಬರುವ ದಿನಗಳಲ್ಲಿ ನಮ್ಮ ಸಹಜ ಜೀವನಕ್ರಮಕ್ಕೆ ಬಹು ದೊಡ್ಡ ಶಾಪವಾಗಿ ಪರಿಣಮಿಸಲಿದೆ. ಅಕ್ರಮ ಗಣಿಗಾರಿಕೆ, ಜಲ ಮಾಲಿನ್ಯ, ಗೊತ್ತು ಗುರಿಯಿಲ್ಲದ ಕೈಗಾರಿಕೀಕರಣ, ರೈತರ ನಿರಂತರ ಶೋಷಣೆ, ರಾಜ್ಯಕ್ಕೆ ರಕ್ಷಣ ಗೋಡೆಯಂತಿರುವ ಪಶ್ಚಿಮ ಘಟ್ಟ ಶ್ರೇಣಿಯ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ. ಇವುಗಳ ವಿರುದ್ಧ ಶಾಸನಸಭೆಗಳಲ್ಲಿ ಧ್ವನಿಯೆತ್ತುವ, ಹೋರಾಡುವ ವ್ಯಕ್ತಿಗಳ ಅವಶ್ಯಕತೆ ಹಿಂದೆಂದಿಗಿಂತಲೂ ಇಂದು ಅತೀ ತುರ್ತಾಗಿ ಬೇಕಾಗಿದೆ.

ನಮ್ಮದು ಪ್ರಜಾಪ್ರಭುತ್ವ ದೇಶ. ಸಂಖ್ಯಾಬಲವೇ ಶಾಸನಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹಾಗಾಗಿ ಶಾಸನಸಭೆಗಳಲ್ಲಿ ರಾಜಕೀಯ ದೃಷ್ಟಿಕೋನವಿರುವ ಸಾಂಸ್ಕೃತಿಕ ಪ್ರತಿನಿಧಿಗಳ ಪ್ರಾತಿನಿಧ್ಯವಿರಬೇಕಾಗುತ್ತದೆ. ಆ ದೃಷ್ಟಿಕೋನವಿರುವ ವ್ಯಕ್ತಿಯೊಬ್ಬರು ಕೆಲವು ವರ್ಷಗಳ ಹಿಂದೆ ಕಲ್ಲು ಗಣಿಗಾರಿಕೆಯನ್ನು ವಿರೋಧಿಸಿ ಹೇಳಿದ ಮಾತುಗಳು ನನಗಿನ್ನೂ ನೆನಪಿವೆ; "ಈ ರಾಜಕಾರಣಿಗಳು ಬೇವಿನಸೊಪ್ಪು ಕಟ್ಟಿಕೊಂಡು ವಿಧಾನಸೌಧದ ಮುಂದೆ ಕುಣಿದಾಡಿದರೂ ಒಂದು ಚಿಕ್ಕ ಕಲ್ಲನ್ನಾದ್ರೂ ಬೆಳೆಯಲು ಸಾಧ್ಯವೇ" ಎಂದೂ ಪ್ರಶ್ನಿಸಿದ್ದರು. ಇದನ್ನು ಒಬ್ಬ ವೃತ್ತಿಪರ ರಾಜಕಾರಣಿಯೇ ಹೇಳಿರಬಹುದು. ಆದರೆ ಇದರಲ್ಲಿ ಎಷ್ಟೊಂದು ಸತ್ಯ ಅಡಗಿದೆ ಅಲ್ಲವೇ?ಮನಸ್ಸು ಮಾಡಿದರೆ ಕೇವಲ ಐವತ್ತು ವರ್ಷಗಳಲ್ಲಿ ನಾವು ಈ ಭೂಮಿಯಲ್ಲಿ ಮತ್ತೆ ದಟ್ಟವಾದ ಅರಣ್ಯ ಬೆಳೆಸಬಹುದು. ಆದರೆ ನೀರಿನ ಸೆಲೆಯನ್ನು ತನ್ನ ಹೊಟ್ಟೆಯಡಿಯಲ್ಲಿ ಬಚ್ಚಿಟ್ಟುಕೊಂಡಿರುವ ಕಲ್ಲು ಬಂಡೆಗಳನ್ನು ಬೆಳೆಯಲು ಸಾಧ್ಯವೇ? ಅಂದು ಗಾಳಿಯಲ್ಲಿ ಹಾರಿ ಹೋದ ಆ ಮಾತುಗಳನ್ನು ಯಾರಾದರು ಬೆಂಬಲಿಸುವ ವಾತಾವರಣವಿದ್ದಿದ್ದರೆ....?

ಸಮಾಜದ ಸಾಕ್ಷಿ ಪ್ರಜ್ನೆಯಂತೆ ಕೆಲಸ ಮಾಡಬೇಕಾದ ವ್ಯಕ್ತಿಗಳು ವಿಧಾನ ಸೌಧದಲ್ಲಿ ಹುಟ್ಟುವುದಿಲ್ಲ. ಅವರನ್ನು ನಾವು ಜನಸಾಮಾನ್ಯರ ಮಧ್ಯೆಯೇ ಹುಡುಕಬೇಕಾಗಿದೆ.ಕಳೆದ ಬಾರಿ ರಾಜೀವ ಚಂದ್ರಶೇಖರ್ ಎಂಬ ಉದ್ಯಮಿ ಬಿಜೆಪಿ ಬೆಂಬಲದೊಂದಿಗೆ ರಾಜ್ಯಸಭೆಗೆ ಸ್ಪರ್ಧಿಸಿದಾಗ ಅವರ ವಿರುದ್ಧ ಪ್ರತಿಪಕ್ಷಗಳು ಸಾಹಿತಿ ಅನಂತಮೂರ್ತಿಯವರನ್ನು ಕಣಕ್ಕಿಳಿಸಿದ್ದವು.

ಈ ಬಾರಿ ಮರುಳಸಿದ್ದಪ್ಪನವರ ಸರದಿ. ಅವರಿಗೆ ಗಿರೀಶ್ ಕಾರ್ನಾಡ್, ಬರಗೂರು ರಾಮಚಂದ್ರಪ್ಪ, ಜಿ.ಕೆ.ಗೋವಿಂದರಾವ್, ಚಂಪಾ, ಶೂದ್ರ ಶ್ರೀನಿವಾಸ ಸೇರಿದಂತೆ ಕನ್ನಡ ಸಾರಸ್ವತ ಲೋಕ ಬೆಂಬಲ ನೀಡಿದೆ. ಆದರೆ ಗೆಲ್ಲುವ ಸಾಧ್ಯತೆಯೇ ಇಲ್ಲದಾಗ ಮಾತ್ರ ಪಕ್ಷ ರಾಜಕಾರಣ ತಮ್ಮನ್ನು ಬೆಂಬಲಿಸುತ್ತದೆ ಎಂದು ಸಾಹಿತಿಗಳು ರಾಜಕಾರಣಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ನಮ್ಮ ಶಾಸಕರು ಆತ್ಮಸಾಕ್ಷಿಯಿಂದ ಮತ ನೀಡಬೇಕೆಂದು ಅವರೆಲ್ಲ ಕೋರಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಮಾತಾಡಿದ ಕಾರ್ನಾಡ್, ’ಹೇಮಾಗೆ ಜೀವನಾನುಭವ ಕಡಿಮೆ. ಜನಸ್ಪಂದನೆ ಗೊತ್ತಿಲ್ಲ. ಕಳೆದ ರಾಜ್ಯಸಭೆಯ ಆರು ವರ್ಷದ ಅವಧಿಯಲ್ಲಿ ಆಕೆ ಒಂದು ಪ್ರಶ್ನೆಯನ್ನೂ ಕೇಳಲಿಲ್ಲ. ಒಳ್ಳೆ ಹುಡ್ಗಿ.ಆದರೆ ದಡ್ಡಿ’ ಎಂದುಬಿಟ್ಟರು.

’ದಡ್ಡಿ’ ಎನ್ನುವ ಪದವನ್ನು ಯಾರೂ ವಾಚ್ಯಾರ್ಥದಲ್ಲಿ ತಗೊಳ್ಳಬೇಕಾಗಿಲ್ಲ. ಇಲ್ಲಿ ಅದು ಪ್ರೀತಿ, ಮಮತೆ ಮತ್ತು ಕಾಳಜಿಗಳಿಂದ ಕೂಡಿದ ಬೈಗಳ ಪದವಾಗಿದೆ. ಅದಕ್ಕೆ ಒಳ್ಳೆ ಹುಡ್ಗಿ ಎಂಬ ವಿಶೇಷಣ ಒತ್ತು ಕೊಡುತ್ತದೆ. ನಮ್ಮ ಅತೀ ಹತ್ತಿರದ ಪ್ರೀತಿಪಾತ್ರರ ಮೇಲೆ ಮಾತ್ರ ಈ ಪದವನ್ನು ಪ್ರಯೋಗಿಸುತ್ತೇವೆ. ಆಕೆ ನಮ್ಮೆಲ್ಲರಿಗೂ ಪ್ರೀತಿಪಾತ್ರಳೇ. ಆದರೆ ಆಕೆ ರಾಜಕಾರಣದಲ್ಲಿ ದಡ್ಡಿಯೇ. ಹಾಗಾಗಿಯೇ ಬಿಜೆಪಿ ಆಕೆಯ ತಾರಾವರ್ಚಸ್ಸನ್ನು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡಿದೆ. ದಡ್ಡಿಯನ್ನಾಗಿ ಮಾಡಿದೆ.

ಪವಾಡಗಳೇನಾದರು ಸಂಭವಿಸದೆ ಇದ್ದಲ್ಲಿ ನಾಳೆ ಹೇಮಮಾಲಿನಿ ನಮ್ಮ ರಾಜ್ಯದ ಎಂಪಿಯಾಗುತ್ತಾಳೆ. ಚಿಂತಕರ ಮನೆಯೆಂದೇ ಹೆಸರಾದ ಮೆಲ್ಮನೆಯ ಸದಸ್ಯಳಾಗುತ್ತಾಳೆ. ಶಾಸನ ರಚನೆಯಲ್ಲಿ ತಾನೂ ಭಾಗಿಯಾಗುತ್ತಾಳೆ. ಆಕೆ ನಾಮಪತ್ರ ಸಲ್ಲಿಸಿದ ದಿನ ಪತ್ರಕರ್ತರೊಡನೆ ಮಾತಾಡುತ್ತಾ, "ರಾಜ್ಯ ಸಭೆಯಲ್ಲಿ ಕರ್ನಾಟಕದ ವಿಷಯ ಚರ್ಚೆಗೆ ಬಂದಾಗ ನಾನೂ ಕೂಡಾ ಅದರ ಧ್ವನಿಯಾಗುತ್ತೇನೆ. ರಾಜ್ಯದಲ್ಲಿ ಯಾವ ಸಮಸ್ಯೆಗಳಿವೆ ಎನ್ನುವುದು ಗೊತ್ತಿಲ್ಲ.ತಿಳಿದುಕೊಂಡು ಆ ಕುರಿತು ರಾಜ್ಯಸಭೆಯಲ್ಲಿ ಚರ್ಚೆ ನಡೆಸುತ್ತೇನೆ" ಎಂದು ಹೇಳಿದ್ದಾರೆ. ನುಡಿದಂತೆ ಆಕೆ ನಡೆದುಕೊಳ್ಳಲಿ ಎಂದು ಆಶಿಸೋಣ.