Wednesday, May 25, 2011

’ಸ್ಮರ ಸಂಜೀವನೆ ಕೃಷ್ಣೆ ಪೂ ಮುಡಿದಳ್’!




ಅಂದು ನಮ್ಮ ಮದುವೆಯ ವಾರ್ಷಿಕೋತ್ಸವ. ಅದು ನಮಗೇನೂ ವಿಶೇಷ ದಿನವಲ್ಲ. ಆದರೆ ಆ ದಿನ ಭಾನುವಾರ ಬಂದಿದ್ದರಿಂದ ನಮ್ಮ ಮನೆಗೆ ಇಬ್ಬರು ಕಿರಿಯ ಸ್ನೇಹಿತರು ಬಂದಿದ್ದರು.

ಈ ಘಟನೆ ನಡೆದು ಹಲವಾರು ವರ್ಷಗಳು ಕಳೆದಿವೆ. ಆದರೂ ಅದಿನ್ನೂ ನಿನ್ನೆ ಮೊನ್ನೆ ನಡೆದಿದೆಯೆನೋ ಎಂಬಷ್ಟು ಹಸಿರಾಗಿ ನನ್ನ ಮನದಲ್ಲಿ ಅಚ್ಚೊತ್ತಿಬಿಟ್ಟಿದೆ.

ನಾನು ಅಡುಗೆ ಮನೆಯಲ್ಲಿ ಸಾರಿಗೆ ಒಗ್ಗರಣೆ ಹಾಕುವುದರಲ್ಲಿ ನಿರತಳಾಗಿದ್ದೆ. ಆಗ ಆ ಹುಡುಗ ಅಡುಗೆ ಮನೆಗೆ ಬಂದ. ಬಂದವನೇ ನನ್ನೆಡೆಗೆ ಪ್ರಶೆಯೊಂದನ್ನು ಎಸೆದ. ತುಂಬಾ ಸರಳವಾದ ಪ್ರಶ್ನೆಯದು; ’ನೀವು ಕೂಡಾ ಹೂ ಮುಡಿಯುತ್ತಿರಾ?’ ’ನೀವು ಕೂಡಾ’ ಎಂಬ ಪದಗಳನ್ನು ಆತ ಒತ್ತಿ ಹೇಳಿದ ರೀತಿಯಲ್ಲಿ ನಾನೇನೋ ಮಾಡಬಾರದ್ದನ್ನು ಮಾಡಿದ್ದೇನೆನೋ ಎಂಬುದನ್ನು ಧ್ವನಿಸುತ್ತಿತ್ತು.

ಆ ಹುಡುಗ ಪ್ರಶ್ನೆ ಮಾಡಿದ ರೀತಿ, ಅದರ ಹಿಂದಿನ ಭಾವವನ್ನು ಅರ್ಥ ಮಾಡಿಕೊಳ್ಳಲು ನನಗಿ ಒಂದೆರಡು ನಿಮಿಷ ಬೇಕಾಯಿತು. ಹಾಗಿದ್ದರೂ ಸಮಯಸ್ಪೂರ್ತಿಯಿಂದ ಉತ್ತರಿಸಿದೆ, ’ಯಾಕೆ ನಾನು ಹೆಣ್ಣಲ್ಲವೇ?’

ಊಟವೆಲ್ಲಾ ಮುಗಿದು ಹರಟೆ ಹೊಡೆಯುತ್ತಾ ಕೂತಿದ್ದರೂ ಆ ಪ್ರಶ್ನೆಯ ಗುಂಗಿನಲ್ಲೇ ನಾನಿದ್ದೆ. ನನಗಿಂತ ತುಂಬಾ ಚಿಕ್ಕವನಾದ ಆ ಹುಡುಗನ ಬಳಿ ಆ ಪ್ರಶ್ನೆ ಮೂಡಿಸಿದ ಗೊಂದಲವನ್ನು ಚರ್ಚಿಸುವಂತಿರಲಿಲ್ಲ. ಅವನಿಗಿಂತ ಸ್ವಲ್ಪ ಭಿನ್ನವಾಗಿ ಯೋಚಿಸಬಲ್ಲ ನನ್ನ ಕಿರಿಯ ಸ್ನೇಹಿತೆಯ ಬಳಿ ಆತ ಕೇಳಿದ ಪ್ರಶ್ನೆಯನ್ನು ಹೇಳಿ ’ನಾನು ಅಸ್ಟೊಂದು ವಿಲಕ್ಷಣವಾಗಿ ಕಾಣಿಸ್ತಿನೇನೆ’ ಎಂದೆ, ಎಂದೆ ತಲೆಯಲ್ಲಿನ ಮಲ್ಲಿಗೆ ಹೂವನ್ನು ಮುಟ್ಟಿ ನೋಡಿಕೊಳ್ಳುತಾ. ಅದಕ್ಕವಳು ’ಹೂ ಮುಡಿದುಕೊಂಡರೆ ನೀನು ತುಂಬಾ ಚೆನ್ನಾಗಿ ಕಾಣಿಸ್ತಿಯಾ, ಅದೊಂದು ಚೈಲ್ಡ್. ಅದಕ್ಕೇನು ಗೊತ್ತಾಗುತ್ತೆ ಹೆಣ್ತನದ ವಿಸ್ತಾರತೆ’ ಎಂದವಳೇ ಸ್ವಲ್ಪ ಹೊತ್ತು ಸುಮ್ಮನಿದ್ದು, ’ನಾವು ಸ್ತ್ರೀಪರವಾಗಿ ಮಾತಾಡ್ತೀವಿ, ಅವರ ಬಗ್ಗೆ ಲೇಖನಗಳನ್ನು ಬರೀತೇವೆ. ಮಹಿಳಾ ಹಕ್ಕುಗಳ ಬಗ್ಗೆ ಹೋರಾಡುತ್ತಿರುವ ಸಂಘಟನೆಗಳ ಬಗ್ಗೆ ಸಾಪ್ಟ್ ಕಾರ್ನರ್ ಹೊಂದಿದ್ದೇವೆ. ನೀನಂತೂ ಗಂಡನನ್ನು ಸೇಹಿತನ ತರಹ ನೋಡ್ತಿದ್ದೀಯಾ. ಹಾಗಿರುವಾಗ ಸ್ತ್ರೀಯ ಗುಲಾಮಗಿರಿಯ ಸಂಖೆತವಾದ ಬಳೆ, ಕುಂಕುಮ, ಹೂಗಳನ್ನು ತೊಟ್ಟು ಭಾರತೀಯ ಸಂಪ್ರದಾಯಸ್ಥ ಮುತ್ತೈದೆ ತರಹ ನಡೆದುಕೊಂಡರೆ ಆ ಗಂಡು ಜೀವ ಹೇಗೆ ತಡೆದುಕೊಂಡೀತು’ ಎಂದು ಕಣ್ಣು ಮಿಟುಕಿಸಿ ನಕ್ಕಳು.

ಅಂದು ಆ ಹುಡುಗ ಕೇಳಿದ ಪ್ರಶ್ನೆ ಇಂದಿಗೂ ನನ್ನನ್ನು ಕಾಡುತ್ತಲೇ ಇದೆ. ಹೂ ಮೃದು ಭಾವನೆಗಳ ಸಂಕೇತ; ಹೆಣ್ಣಿನ ಮನಸ್ಸಿನಂತೆ. ಈಗೀಗ ನನ್ನಂತವಳು, ನನ್ನ ಹಾಗೆ ಯೋಚಿಸುವ ಮಹಿಳೆಯರು ಹೂವನ್ನು ತಮ್ಮ ಬದುಕಿನಿಂದ ದೂರ ಇಡುತ್ತಿದ್ದಾರೆಯೇ? ಹೂವಿನಂಥ ಹೆಣ್ಣು ಬದಲಾಗುತ್ತಿದ್ದಾಳೆಯೇ?

ನನ್ನ ಮನಸ್ಸು ಬಾಲ್ಯ ಕಾಲದ್ದತ್ತ ಚಲಿಸಿತು. ನನ್ನೂರು ಬಾಳುಗೋಡಿನಿಂದ ಕುಕ್ಕೆಸುಬ್ರಹ್ಮಣ್ಯಕ್ಕೆ ಎಂಟು ಮೈಲಿಗಳ ಹಾದಿ. ದಟ್ಟ ಕಾಡು. ಒಮ್ಮೊಮ್ಮೆ ಕಾಡಾನೆಗಳ ದರ್ಶನವಾಗುದೂ ಉಂಟು. ವಿವಿಧ ರೀತಿಯ ಪಕ್ಷಿ, ಪ್ರಾಣಿಗಳು ದಾರಿಯಲ್ಲಿ ಕಾಣಿಸುತ್ತಿದ್ದವು. ಅದರಲ್ಲಿ ’ಕುಪ್ಪುಳು’ ಅಂದರೆ ಕೆಂಬೂತವೂ ಒಂದು. ಅದಕ್ಕೆ ನಾವನ್ನುತ್ತಿದ್ದುದು-ಗುಡ್ ಲಕ್. ಯಾಕೆಂದರೆ ಅದನ್ನು ನೋಡುವುದು ಶುಭಶಕುನವಂತೆ. ನಾವು ದಿನದಲ್ಲಿ ಕನಿಷ್ಟ ಹತ್ತಾದರೂ ಗುಡ್ ಲಕ್ ನೋಡುತ್ತಿದ್ದೆವು. ಅದನ್ನು ಶಾಲೆಗೆ ಬಂದು ಇತರ ಗುಡ್ ಲಕ್ ವೀಕ್ಷಕರ ಜೊತೆ ತಾಳೆ ಹಾಕುತ್ತಿದ್ದೆವು.

ನಾವು ನಡೆದು ಹೋಗುತ್ತಿದ್ದ ಹಾದಿಯಲ್ಲಿ ಮಾವಿನಕಟ್ಟೆ ಗುಡ್ಡ ಇಳಿದು ಅಜ್ಜಿಗುಡ್ಡೆ ಹತ್ತುವ ಮಧ್ಯದಲ್ಲಿನ ಸ್ವಲ್ಪ ಸಮತಟ್ಟಾದ ಜಾಗದಲ್ಲಿ ಒಂದು ರೆಂಜಾಳ ಹೂವಿನ ಮರವಿತ್ತು. ಮೊದಲು ಬಂದ ಹುಡುಗ-ಹುಡುಗಿಯರೆಲ್ಲಾ ಈ ಮರದಡಿಯಲ್ಲಿ ಸೇರಿ ರೆಂಜಾಳ ಹೂ ಹೆಕ್ಕಿ ಅದನ್ನು ಪೋಣಿಸುವುದು ನಿತ್ಯ ಸಂಪ್ರದಾಯ. ಈ ಹೂ ಇಡೀ ಕಾಡಿಗೆಲ್ಲಾ ಪರಿಮಳ ಬೀರುತ್ತಿತ್ತು. ಅದನ್ನು ಮುಡಿದೇ ನಾವು ಶಾಲೆಗೆ ಹೋಗುತ್ತಿದ್ದುದ್ದು.

ತಲೆಗೆ ಮುಡಿಯಲು ನಮಗೆ ಹೂವೇ ಆಗಬೇಕೆಂದಿರಲಿಲ್ಲ. ಕಾಸರಕನ ಮರದ ಚಿಗುರು [ ಈ ಮರ ತೆಂಗಿನ ಮರಕ್ಕೆ ಒಳ್ಳೆ ಗೊಬ್ಬರ.ಇದನ್ನು ನಾಲ್ಕು ವರ್ಷಕ್ಕೊಮ್ಮೆ ಇದರ ಸೊಪ್ಪನ್ನು ಕಡಿದು ತೆಂಗಿನ ಮರದ ಬುಡಕ್ಕೆ ಹಾಕಿದರೆ ಸಮೃದ್ಧಿಯಾಗಿ ಕಾಯಿ ಬಿಡುತ್ತದೆ.]. ಇದನ್ನು ಮುಡಿದರೆ ದೃಷ್ಟಿ ತಾಗುವುದಿಲ್ಲವೆಂಬ ನಂಬಿಕೆಯಿದೆ.

ಮಲೆನಾಡಿನಲ್ಲಿ ಸುರಗಿ ಹೂವೆಂಬ ವಿಶಿಷ್ಟ ಜಾತೀಯ ಹೂವಿದೆ [ನನ್ನ ’ಮೌನಕಣಿವೆ’ ಬ್ಲಾಗನ್ನು ಎರಡು ವರ್ಷಗಳ ತನಕ ಸುರಗಿ ಎಂಬ ಹೆಸರಿನಲ್ಲಿ ನಿರ್ವಹಿಸುತ್ತಿದ್ದೆ!] ಪುರುಷ ಭೂತಕ್ಕೆ ಹರಕೆ ಒಪ್ಪಿಸುವ ಹೂವಿದು [ತುಳುನಾಡಿನ ಕಾರಣಿಕ ದೈವ ಪುರುಷಭೂತ] ಈ ಹೂವಿನಲ್ಲಿ ಮತ್ತೇರಿಸುವ ಸುಗಂಧವಿರುತ್ತದೆ. ಒಣಗಿದ ಮೇಲೂ ಈ ಸುಗಂಧ ತಿಂಗಳಾನುಗಟ್ಟಲೆ ಹಾಗೆಯೇ ಉಳಿದಿರುತ್ತದೆ. ನಮ್ಮ ಮನೆಯ ಹಿರಿಯರು ಈ ಮರಕ್ಕೆ ಹತ್ತಿ ಹೂ ಕೊಯ್ಯಲು ಬಿಡುವುದಿಲ್ಲ. ಬೇಡ ಎಂದುದ್ದನ್ನು ಮಾಡುವುದರಲ್ಲೇ ನಮಗೆ ಖುಷಿ. ಬಳ್ಳಿ ಪೊದೆಗಳಲ್ಲಿ ಸುಲಭವಾಗಿ ಸಿಗುವ ಹೂಗಳಲ್ಲಿ ನನಗೆ ಅಂಥಾ ಆಕರ್ಷಣೆಯೇನೂ ಇರಲಿಲ್ಲ. ಸೀತೆ ಹೂವನ್ನು ಕೊಯ್ಯಲು ಅಂದು ನಾನು ಹತ್ತುತ್ತಿದ್ದ ಮರಗಳನ್ನು ಈಗ ನೆನೆಸಿದರೆ ಅಚ್ಚರಿಯಾಗುತ್ತದೆ.

’ಹೂ ಕೊಯ್ಯುವುದು’ ಎಂಬುದು ಸರಿಯಾದ ಪದ ಅಲ್ಲ. ಅದರಲ್ಲಿ ಹಿಂಸೆ ಮತ್ತು ಕ್ರೌರ್ಯ ಇದೆ. ’ಹೂ ಬಿಡಿಸುವುದು’ ಎಂಬುದು ಸರಿಯಾದ ಪದ ಎಂದು ನಮ್ಮ ಗುರುಗಳಾದ ತಾಳ್ತಜೆ ವಸಂತ ಕುಮಾರರು ಹೇಳುತ್ತಿದ್ದರು. ಗುಲಾಬಿ ಹೂವಿನ ಹುಟ್ಟಿನ ಬಗ್ಗೆ ಅವರೇ ಹೇಳಿದ ಇನ್ನೊಂದು ಮಾತು ನನ್ನ ನೆನಪಿನಲ್ಲಿದೆ. ಒಮ್ಮೆ ರತಿ ಮನ್ಮಥರಿಬ್ಬರು ಆಕಾಶ ಮಾರ್ಗದಲ್ಲಿ ವಿಹರಿಸುತ್ತಿದ್ದರಂತೆ. ಆಗೊಮ್ಮೆ ರತಿಯ ಕೆಂಪಾದ ತುಟಿಗಳನ್ನು ಕಂಡ ಮನ್ಮಥ ಉನ್ಮತ್ತಗೊಂಡು ಪ್ರೇಮದಿಂದ ಕಚ್ಚಿದನಂತೆ. ಆಗ ರತಿಯ ತುಟಿಯಿಂದ ಒಸರಿದ ರಕ್ತದ ಬಿಂದುವೊಂದು ಧರೆಗೆ ಬಿದ್ದು ಗುಲಾಬಿ ಹೂವಾಗಿ ಅರಳಿತಂತೆ. ಇದು ಕುವೆಂಪು ಕಾವ್ಯವೊಂದರಲ್ಲಿ ಬಂದ ಸಾಲುಗಳೆಂದು ಅವರೇ ಹೇಳಿದ ನೆನೆಪು. ಎಂತಹ ಅದ್ಭುತ ಕಲ್ಪನೆಯಲ್ಲವೇ?

ಪಂಪಭಾರತದಲ್ಲಿ ಪಂಪ ತನ್ನ ಹುಟ್ಟೂರಾದ ಬನವಾಸಿಯ ವರ್ಣನೆ ಮಾಡುವಾಗ ಅಲ್ಲಿಯ ಪುಷ್ಪ ಸಂಪತ್ತಿನ ಬಗ್ಗೆಯೂ ವರ್ಣಿಸುತ್ತಾನೆ. ಆದರೆ ಹರಿಹರನ ’ಪುಷ್ಪ ರಗಳೆ’ಯಲ್ಲಿ ಬರುವ ನೂರಾರು ಜಾತೀಯ ಹೂಗಳ ವರ್ಣನೆ ವಿಶಿಷ್ಟವಾದುದು.ಆತ ಉಷಃಕಾಲದಲ್ಲೇ ’ಅನಿಲ ನಲುಗದ, ರವಿಕರಂ ಪೊಗದ,ದುಂಬಿ ಎರಗದ’ ಪರಿಶುದ್ಧ ಹೂಗಳನ್ನು ಬಿಡಿಸಿ ತಂದು ತನ್ನ ಇಷ್ಟ ದೈವ ಶಿವನಿಗೆ ಸಮರ್ಪಿಸುತ್ತಿದ್ದ.

ಪುರಾಣದಲ್ಲಿ ಬರುವ ನಮ್ಮ ಪ್ರೇಮ ದೇವತೆ ಮನ್ಮಥ. ಅತನ ಬಿಲ್ಲು ಕಬ್ಬು. ಅದಕ್ಕೆ ಹೂಡುವ ಐದು ಬಾಣಗಳು; ಅರವಿಂದ, ಅಶೋಕ,ಚೂತ,ನವಮಲ್ಲಿಕಾ, ನಿಲೋತ್ಪಲಗಳೆಂಬ ಐದು ಬಗೆಯ ಹೂಗಳು. ಸಿಹಿ ಕಬ್ಬಿನ ಬಿಲ್ಲಿನಿಂದ ಹೂವಿನ ಬಾಣವನ್ನು ನಮ್ಮ ಎದೆಗೆ ನೆಟ್ಟು ಮೋಹ ಪಾಶದಲ್ಲಿ ಕೆಡವುತ್ತಾನೆ! ನಮ್ಮ ಪೂರ್ವಿಕರ ಶೃಂಗಾರಭಾವದಲ್ಲಿ ಎಂಥ ಲಾಲಿತ್ಯವಿದೆ ಅಲ್ಲವೇ?

ದ್ರೌಪದಿಗಾಗಿ ಸೌಗಂಧಿಕಾ ಪುಷ್ಪ ತರಲು ಪಾಡುಪಟ್ಟ ಭೀಮ, ತನ್ನ ಪ್ರೀಮದ ಮಡದಿ ಸತ್ಯಭಾಮೆಗಾಗಿ ದೇವಲೋಕದ ಪಾರಿಜಾತವನ್ನು ಭೂಮಿಗೆ ತಂದ ಶ್ರೀಕೃಷ್ಣ-ಇಬ್ಬರೂ ನನ್ನ ದೃಷ್ಟಿಯಲ್ಲಿ ಸಾರ್ವಕಾಲಿಕ ಹೀರೋಗಳೇ. ಯಾಕೆಂದರೆ ಅವರಿಬ್ಬರೂ ಹೆಣ್ಣಿನ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದವರು.

ಗದಾಯುದ್ಧದ ನಾಯಕ ಭೀಮ ದ್ರೌಪದಿಯ ಬಿಚ್ಚಿದ ಮುಡಿಯನ್ನು ದುರ್ಯೊಧನನ [ದುಶ್ಯಾಸನನ ಅಲ್ಲ] ರಕ್ತದಲ್ಲಿ ಅದ್ದಿ, ಅವನ ಹಲ್ಲನ್ನು ಕಿತ್ತು ಅದರಲ್ಲಿ ತಲೆಬಾಚಿ, ತುರುಬು ಕಟ್ಟಿ, ಕರುಳಮಾಲೆಯನ್ನು ಮುಡಿಸಿ ಧನ್ಯತೆಯ ಭಾವ ಪ್ರದರ್ಶಿಸುತ್ತಾನೆ.ತನ್ನ ಪ್ರತಿಜ್ನೆ ನೆರವೇರಿದ ಸಂತಸದಲ್ಲಿ ಬೀಗುತ್ತಿದ್ದ ದ್ರೌಪದಿಯನ್ನು ಕಂಡು ರನ್ನ ಉದ್ಘರಿಸಿದ ಮಾತು, ’ಸ್ಮರ ಸಂಜೀವನೆ ಕೃಷ್ಣೆ ಪೂ ಮುಡಿದಳ್’ ಇಂಥ ಹೂವನ್ನು ಮುಡಿಸಿದ ಭೀಮ ಯಾರಿಗೆ ತಾನೆ ಇಷ್ಟವಾಗಲಾರ?

ನಾನು ಮಂಗಳಗಂಗೋತ್ರಿಯಲ್ಲಿ ಓದುತ್ತಿದ್ದ ದಿನಗಳವು. ನಾವೆಲ್ಲಾ ರ್‍ಯಾಗಿಂಗ್ ವಿರೋಧಿಗಳು. ಆದರೂ ಜ್ಯೂನಿಯರ್ಸನ್ನು ಸಭ್ಯತೆಯ ಚೌಕಟ್ಟಿನೊಳಗೆ ಸ್ವಾಗತಿಸುವ ಪದ್ಧತಿಯಿತ್ತು. ಅದಕ್ಕಾಗಿ ನಮ್ಮ ಕ್ಲಾಸ್ ರೂಮಿನಲ್ಲೇ ಚಿಕ್ಕ ಸಮಾರಂಭ ಏರ್ಪಾಟಾಗಿತ್ತು. ಬಾಕ್ಸೊಂದರಲ್ಲಿ ಹಲವು ಚೀಟಿಗಳನ್ನಿಟ್ಟಿದ್ದೆವು. ಜ್ಯೂನಿಯರ್ಸ್ ಒಬ್ಬೊಬ್ಬಾರಾಗಿ ಬಂದು ಅದರಲ್ಲಿರುವ ಚೀಟಿಯಲ್ಲಿ ಒಂದನ್ನೆತ್ತಿಕೊಂಡು ಅದರಲ್ಲಿ ಬರೆದಂತೆ ಅಭಿನಯಿಸಬೇಕಾಗಿತ್ತು. ಮ್ಯಾಥ್ಯು ಎಂಬ ವಿದ್ಯಾರ್ಥಿಗೆ ಬಂದ ಚೀಟಿಯಲ್ಲಿ ’ಮೇಜಿನ ಮೇಲಿರುವ ಗುಲಾಬಿಗಳಲ್ಲಿ ಒಂದನ್ನು ನೀವು ಇಷ್ಟಪಡುವ ಸೀನಿಯರ್ ವಿದ್ಯಾರ್ಥಿನಿಗೆ ನೀಡಿ’ ಎಂದಿತ್ತು. ಆತ ಒಂದು ಕ್ಷಣ ನಮ್ಮೆಲ್ಲರನ್ನು ಕಣ್ಣಲ್ಲೇ ಅಳೆದ. ಹಳದಿ ಗುಲಾಬಿಯೊಂದನ್ನು ಕೈಗೆತ್ತಿಕೊಂಡು ಎದುರಿಗಿರುವ ಅಧ್ಯಾಪಕ ವೃಂದದತ್ತ ಒಮ್ಮೆ ನೋಡಿ, ನನ್ನ ಕೈಯಲ್ಲಿ ಹೂವಿಟ್ಟು ನಾಚುತ್ತಾ ಹೋದ.

ಮತ್ತೆ ನನ್ನ ಕೈಗೆ ಗುಲಾಬಿ ಹೂ ಬಂದದ್ದು ನಾನು ಪ್ರೀತಿಸಿದ ಹುಡುಗನಿಂದ. ಈಗ ಆತ ನನ್ನ ಪತಿ. ನನ್ನ ಸಹೋದ್ಯೋಗಿಯಾಗಿದ್ದ ಆತ ಪ್ರತಿದಿನ ನನ್ನ ಮೇಜಿನ ಮೇಲೆ ಗುಲಾಬಿ ಹೂವೊಂದನ್ನು ಇಟ್ಟಿರುತ್ತಿದ್ದ. ಮದುವೆಯಾದೊಡನೆ ಇದು ನಿಂತು ಹೋಯಿತು! ಮದುವೆಯಾದ ನಂತರವೂ ಇಂತಹ ಅಮೃತ ಘಳಿಗೆಗಳು ಮತ್ತೆ ಮತ್ತೆ ಸಂಭವಿಸುತ್ತಿರಲಿ ಎಂದು ಪ್ರತಿ ಸ್ತ್ರೀಯೂ ಅಂತರಂಗದಲ್ಲಿ ಬಯಸುತ್ತಿರುತ್ತಾಳೆ. ಆದರದು ಸಾಧ್ಯವಾಗುವುದಿಲ್ಲ.

ಒಮ್ಮೆ ಮಂಗಳೂರಿನ ಬಸ್ ನಿಲ್ದಾಣದಲ್ಲಿ ನಿಂತಿದ್ದೆ. ಹದಿನಾಲ್ಕು ವರ್ಷದ ನಂತರ ಭೇಟಿಯಾದ ಬಾಲ್ಯದ ಗೆಳೆಯ ಪಕ್ಕದಲ್ಲಿದ್ದ. ಸುತ್ತೆಲ್ಲಾ ಮಂಗಳೂರು ಮಲ್ಲಿಗೆ ಮಾರುವ ಹೆಂಗಸರಿದ್ದರು. ಬಾಲ್ಯದಲ್ಲಿ ಸೀತೆ ಹೂವನ್ನು ಕೈಗಿತ್ತ ಹುಡುಗನನ್ನು ಈಗ ತಲೆಯೆತ್ತಿ ನೋಡಬೇಕು.ಆದರೂ ಕೇಳಿದೆ, ’ಮಂಗಳೂರು ಮಲ್ಲಿಗೆಯ ಘಮ ಎಷ್ಟು ಚಂದ ಅಲ್ವಾ’ ಆತ ನಕ್ಕ. ಅವನ ಬಸ್ಸು ಬಂತು. ಓಡಿ ಹತ್ತಿ ಕೈ ಬೀಸಿದ. ಇದನ್ನು ಅವನನ್ನೇ ಹೋಲುವ ಇನ್ನೊಬ್ಬ ಗೆಳೆಯನೊಡನೆ ಹಂಚಿಕೊಂಡೆ. ಅವನಿಗದು ಅರ್ಥವಾಗಲೇ ಇಲ್ಲ. ಪೆಚ್ಚು ಪೆಚ್ಚಾಗಿ ನಕ್ಕ. ಅಥವಾ ನಕ್ಕಂತೆ ನಟಿಸಿರಬೇಕು!

Friday, May 13, 2011

’ಸಂವೇದಿ’ಯಲ್ಲಿ ಪರಿವರ್ತನೆಯ ಬೀಜ




ಪತ್ರಿಕಾರಂಗ ಈಗ ಸೇವಾ ಕ್ಷೇತ್ರವಲ್ಲ. ಅದೊಂದು ಉದ್ಯಮವಾಗಿದೆ. ಉದ್ಯಮ ಅಂದಮೇಲೆ ಅಲ್ಲಿ ಲಾಭ-ನಷ್ಟದ ಲೆಖ್ಖಾಚಾರ ನಡೆಯುತ್ತದೆ. ಮಾರುಕಟ್ಟೆಯ ಶಕ್ತಿಗಳು ಸಂಪಾದಕೀಯ ನೀತಿಯನ್ನು ನಿಯಂತ್ರಿಸುತ್ತವೆ; ನಿರ್ದೇಶಿಸುತ್ತವೆ. ಹಾಗಾಗಿ ಸಾಮಾಜಿಕ ನ್ಯಾಯ, ಸಾಮಾಜಿಕ ಹೊಣೆಗಾರಿಕೆ, ಮಹಿಳಾ ಕಾಳಜಿ ಎನ್ನುವ ಆದರ್ಶಗಳೆಲ್ಲಾ ಸಮೂಹ ಮಾಧ್ಯಮಗಳಿಂದ ದೂರವಾಗುತ್ತಿದೆ.

ಅದಕ್ಕಾಗಿಯೇ ಸಮಾಜ ಬದಲಾವಣೆಯ ಕನಸು ಕಾಣುತ್ತಿದ್ದ ಜನಪರ ಮನಸ್ಸುಗಳು ಪರ್ಯಾಯ ವೇದಿಕೆಗಳತ್ತ ಹೊರಳತೊಡಗಿದರು. ಯುವಮನಸುಗಳು ಅಂತರ್ಜಾಲವನ್ನು ಹೆಚ್ಚೆಚ್ಚಾಗಿ ಬಳಸತೊಡಗಿದರು. ಟ್ವೀಟ್ಟರ್, ಪೇಸ್ ಬುಕ್, ಬ್ಲಾಗ್ ಗಳು ಮನಸ್ಸಿಗೆ ಅನ್ನಿಸಿದ್ದನ್ನು ನೇರವಾಗಿ,ಯಾವುದೇ ಅಳುಕಿಲ್ಲದೆ ಅಭಿಪ್ರಾಯ, ಚಿಂತನೆಗಳನ್ನು ಹಂಚಿಕೊಳ್ಳುವ ವೇದಿಕೆಗಳಾಗಿವೆ. ಮೊನ್ನೆ ಮೊನ್ನೆ ನಡೆದ ಈಜಿಪ್ತಿನ ಜನ ಬಂಡಾಯಕ್ಕೆ ಪೋನ್, ಪೇಸ್ ಬುಕ್ ಗಳ ಮುಖಾಂತರ ಜನಜಾಗೃತಿಯನ್ನು ಮೂಡಿಸಲಾಗಿದ್ದೇ ಕಾರಣವೆನ್ನಲಾಗುತ್ತಿದೆ.

ಕೇವಲ ’ವಿಕಿಲೀಕ್ಸ್’ ಎಂಬ ವೆಬ್ ಸೈಟ್ ಮುಖಾಂತರ ಜಗತ್ತಿನಾದ್ಯಂತ ರಾಜಕೀಯ ಸಂಚಲನವನ್ನುಂಟುಮಾಡಿದ್ದು ಜ್ಯೂಲಿಯನ ಅಸಾಂಜೆ ಎಂಬ ಒಬ್ಬ ಖಾಸಾಗಿ ವ್ಯಕ್ತಿ. ಸಮಾಜ ಬದಲಾವಣೆಯ ಕನಸು ಕಾಣುತ್ತಿರುವ ಕೋಟ್ಯಾಂತರ ಜನಗಳ ಪಾಲಿಗೆ ಇಂದು ಆತ ಆರಾಧ್ಯ ದೈವ.
ನಮ್ಮ ಮುಂದೆ ಸಮಸ್ಯೆಗಳಿವೆ; ಸವಾಲುಗಳಿವೆ ನಿಜ. ಆದರೆ ದಾರಿಯೂ ಇರುತ್ತದೆ. ಅದನ್ನು ನಾವು ಹುಡುಕಿಕೊಳ್ಳಬೇಕು ಅಷ್ಟೇ. ಹಾಗೆ ಪರ್ಯಾಯ ಮಾರ್ಗವನ್ನು ಹುಡುಕಿಕೊಂಡು ಹೊರಟ ಮಂಗಳೂರಿನ ಮಾನಿನಿಯರ ಮನದಲ್ಲಿ ಹುಟ್ಟಿದ್ದು ’ಸಂವೇದಿ’

’ಸಂವೇದಿ’ ಎಂಬ ಸುಂದರ ಹೆಸರಿನ ನಿಯತಕಾಲಿಕವನ್ನು ನಾನು ನೋಡಿದ್ದು ಕೆಲವು ತಿಂಗಳುಗಳ ಹಿಂದೆ. ಮೊದಲ ನೋಟಕ್ಕೆ ನನ್ನನ್ನು ಆಕರ್ಷಿಸಿದ್ದು ಅದರ ಮುಖಪುಟಗಳು. ತುಂಬಾ ಸಾಂಕೇತಿಕವಾದ, ತನ್ನೊಳಗೆ ಹಲವು ಅರ್ಥಗಳನ್ನು ಹುದುಗಿಸಿಕೊಂಡ ವಿಶಿಷ್ಠ ರಚನೆಗಳಿವು.

ಖಾಸಗಿ ಪ್ರಸಾರಕ್ಕಾಗಿ ಮೀಸಲಾದ ಈ ಪತ್ರಿಕೆ ಹದಿನಾರು ಪುಟಗಳನ್ನೊಳಗೊಂಡಿದೆ. ’ಡೀಡ್ಸ್’ ಎನ್ನುವ ಸರ್ಕಾರೇತರ ಸೇವಾ ಸಂಸ್ಥೆಯೊಂದು ಈ ನಿಯತಕಾಲಿಕವನ್ನು ಹೊರತರುತ್ತಿದೆ.
’ಕಿರಿದರೊಳ್ ಪಿರಿದರ್ಥವನ್ ಪೇಳುವ’ ಇದು ಮೊದಲ ಓದಿನಲ್ಲಿಯೇ ನನ್ನಲ್ಲಿ ಕುತೂಹಲ ಮೂಡಿಸಿತು. ಇದಕ್ಕೆ ಹಲವು ಕಾರಣಗಳಿವೆ.
ಮೊತ್ತಮೊದಲನೆಯ ಕಾರಣವೆಂದರೆ ಸಂವೇದಿ, ಮಹಿಳೆಯರ ಕಷ್ಟ-ಕಾರ್ಪಣ್ಯಗಳನ್ನು, ನೋವು-ನಲಿವುಗಳನ್ನು ಅವಳ ನೆಲೆಯಲ್ಲಿಯೇ ನಿಂತು ಗ್ರಹಿಸುತ್ತದೆ. ಹಾಗಾಗಿಯೇ ಅದರ ಹೆಸರಿನಂತೆಯೇ ಒಳಗಿನ ಬರಹಗಳು ಕೂಡ ಆಪ್ತವಾಗಿ ನಮ್ಮನ್ನು ತಟ್ಟುತ್ತದೆ.

ಎರಡನೆಯ ಕಾರಣ ಅದರ ಸ್ಪಷ್ಟತೆ ಮತ್ತು ನಿಖರತೆ. ತಾನು ಏನನ್ನು ಹೇಳುತ್ತಿದ್ದೇನೆ? ಯಾರಿಗೆ ಹೇಳುತ್ತಿದ್ದೇನೆ? ಹೇಗೆ ಹೇಳುತ್ತಿದ್ದೇನೆ? ಎಂಬುದರ ಸ್ಪಷ್ಟ ಅರಿವು ಸಂವೇದಿ ಬಳಗಕ್ಕಿದೆ. ಅದರಲ್ಲಿನ ಲೇಖನಗಳನ್ನು ಓದುತ್ತಾ ಹೋದಂತೆಲ್ಲಾ ಆ ನಿಯತಕಾಲಿಕದ ಹಿಂದೆ ಎಂಥ ಮನಸ್ಸುಗಳು ಕೆಲಸ ಮಾಡುತ್ತಿವೆ ಎಂಬುದು ನಮಗೆ ಅರಿವಾಗುತ್ತಾ ಹೋಗುತ್ತದೆ.

ಉದಾಹರಣೆಗೆ ೨೦೦೯ರಲ್ಲಿ ಮಂಗಳೂರಿನಲ್ಲಿ ಭಜರಂಗದಳದವರಿಂದ ಪಬ್ ದಾಳಿ ನಡೆಯಿತು. ಅದಕ್ಕೆ ಈ ಪುಟ್ಟ ಪತ್ರಿಕೆ ಪ್ರತಿಕ್ರಿಯಿಸಿದ್ದು ಹೀಗೆ;
ಅದರ ಮುಖಪುಟದಲ್ಲಿ ಒಬ್ಬ ಮಹಿಳೆಯ ಮುಖದ ಕ್ಯಾರಿಕೇಚರ್ ಇದೆ. ಹಿಂದಿನಿಂದ ಬಂದ ಬಲಿಷ್ಟ ಕೈಯೊಂದು ಅವಳ ಬಾಯನ್ನು ಮುಚ್ಚಿದೆ. ಆ ಕೈಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದು ಮಂದಿರ, ಮಸಿದಿ ಮತ್ತು ಚರ್ಚ್ ಗಳಿಂದ ಬಂದಿರುತ್ತದೆ. ದೆಹಲಿಯ ಸಹೇಲಿ ಪತ್ರಿಕೆಯಿಂದ ಈ ಚಿತ್ರವನ್ನು ಎರವಲು ಪಡೆಯಲಾಗಿದೆಯೆಂದು ಸಂಪಾದಕೀಯದ ಎರಡನೆ ಪುಟದಲ್ಲಿ ನಮೂದಿಸಲಾಗಿದೆ.
ಪುಟ ತೆರೆಯುತ್ತಿದ್ದಂತೆ ಕಣ್ಣಿಗೆ ಬೀಳುವ ಮೊದಲ ಲೇಖನ’ ಭಯೋತ್ಪಾದನೆ ಏನೆಂದು ತಿಳಿಯಬೇಕೆ? ಬನ್ನಿ ಮಂಗಳೂರಿಗೆ’ ಎಂಬ ಲೇಖನ. ಸಂದರ್ಶನ ಆಧಾರಿತವಾದ ಈ ಲೇಖನದಲ್ಲಿ ನೈತಿಕ ಪೋಲಿಸ್ ಪಡೆ ವಿದ್ಯಾರ್ಥಿವೃಂದವನ್ನು ಹೇಗೆ ಹೆದರಿಸಿ ಬೆದರಿಸಿ ವಿದ್ಯಾಸಂಸ್ಥೆಗಳ ವಾತಾವರಣವನ್ನು ಹಾಳುಗೆಡವುತ್ತಿದೆ ಎಂಬುದನ್ನು ಸರಳವಾಗಿ ಹೇಳಲಾಗಿದೆ.

ಎರಡನೆಯ ಲೇಖನ ’ನಾವು ಪಬ್ ದಾಳಿಯನ್ನು ವಿರೋಧಿಸುತ್ತೇವೆ ಯಾಕೆಂದರೆ......’
ಮೂರನೆಯ ಲೇಖನ ’ಕೋಮು ಗಲಭೆ [ಪ್ರತಿಬಂಧ, ನಿಯಂತ್ರಣ ಮತ್ತು ಸಂತ್ರಸ್ತರ ಪುನರ್ವಸತಿ] ಮಸೂದೆ ೨೦೦೫’
ನಾಲ್ಕನೆಯ ಲೇಖನ ’ಜಿಲ್ಲಾ ಮಹಿಳಾ ನ್ಯಾಯಾಲಯ’ದ ಉದ್ಘಾಟನಾ ವರದಿ.
ಕೊನೆಯ ಪುಟದ ಹಿಂದಿನ ಪುಟದಲ್ಲಿ, ಅಂದರೆ ಹದಿನೈದನೆ ಪುಟದಲ್ಲಿ ’ಡೀಡ್ಸ್ ಸುತ್ತ’ದಲ್ಲಿ ಮಂಗಳೂರಿನ ಸುತ್ತಮುತ್ತದಲ್ಲಿ ನಡೆದ ಮಹಿಳಾಪರವಾದ ಚಟುವಟಿಕೆಗಳ ಪುಟ್ಟ ವರದಿಗಳಿರುತ್ತವೆ.
ಕೊನೆಯ ಪುಟ ’ಸಂವಾದ ಸಾಂತ್ವನ’. ಇದು ಬಹಳ ಮಹತ್ವದ ಪುಟ. ಒಂದು ದೃಷ್ಟಿಯಲ್ಲಿ ಇದು ಸಂವೇದಿಯ ಆತ್ಮ ಇದ್ದಂತೆ. ಯಾಕೆಂದರೆ ಇದು ಓದುಗರ ಜೊತೆ ನೇರ ಸಂವಾದವನ್ನು ನಡೆಸುತ್ತದೆ. ಇದು ಶಾಶ್ವತವಾದ ಅಂಕಣ. ಪ್ರತಿಬಾರಿಯೂ ಇಲ್ಲಿ ಒಂದು ಸಮಸ್ಯೆಯನ್ನು ಎತ್ತಿಕೊಳ್ಳಲಾಗುತ್ತದೆ. ಆ ಸಮಸ್ಯೆಯ ಬಗ್ಗೆ ಮಾನವೀಯವಾದ ವರಿದಿಯನ್ನು ನೀಡಲಾಗುತ್ತದೆ. ಆ ಸಮಸ್ಯೆಯನ್ನು ಹೇಗೆ ಪರಿಹರಿಸಬಹುದು ಎಂಬುದರ ಬಗ್ಗೆ ಕೆಲವು ಪ್ರಶ್ನೆಗಳನ್ನು ಓದುಗರ ಮುಂದಿಡುತ್ತದೆ. ಅದಕ್ಕೆ ಓದುಗರಿಂದ ಬಂದ ಅಭಿಪ್ರಾಯಗಳನ್ನು ಸಂವೇದಿ ತನ್ನ ಮುಂದಿನ ಸಂಚಿಕೆಯಲ್ಲಿ ಪ್ರಕಟಿಸುತ್ತದೆ. ಅದಕ್ಕೆ ಕೊನೆಯ ಪುಟದ ಹಿಂದಿನ ಪುಟವನ್ನು ಬಳಸಿಕೊಳ್ಳುತ್ತದೆ. ಓದುಗರು ಇದಕ್ಕೆ ಪೂರಕವಾಗಿ ಸ್ಪಂದಿಸುತ್ತಿದ್ದಾರೆ ಎಂಬುದು ಅಲ್ಲಿ ಪ್ರಕಟವಾದ ಪತ್ರಗಳನ್ನು ಓದಿದರೆ ತಿಳಿಯುತ್ತದೆ.

ಇಡೀ ಸಂವೇದಿಯೇ ಒಂದು ಸಮಸ್ಯೆಯ ಗುಚ್ಚದಂತೆ ಕಲಾತ್ಮವಾಗಿ ರೂಪಗೊಳ್ಳುತ್ತದೆ. ಹಾಗೆ ರೂಪುಗೊಂಡು ನಿಗದಿತ ಸಮಯಕ್ಕೇ ಓದುಗರ ಮುಂದೆ ಬರುತ್ತದೆ. ಆಗ ಆ ಸಮಸ್ಯೆ ಓದುಗರದೂ ಆಗಿಬಿಡುತ್ತದೆ. ಸಮೂಹದ ಪಾಲ್ಗೊಳ್ಳುವಿಕೆ ಇಲ್ಲಿ ಬಹು ಮುಖ್ಯವಾದುದು

ಪ್ರತಿಷ್ಟಿತ, ಜನಪ್ರಿಯ ಪತ್ರಿಕೆಗಳು ಸಾಮಾನ್ಯವಾಗಿ ಯಾವುದೋ ಒಂದು ವ್ಯಕ್ತಿಯ ಜೋತೆ, ಇಲ್ಲವೇ ಪಕ್ಷರಾಜಕಾರಣದ ಜೊತೆ ಪ್ರತ್ಯಕ್ಷವಾಗಿ ಇಲ್ಲವೇ ಅಪ್ರತ್ಯಕ್ಷವಾಗಿ ಗುರುತಿಸಿಕೊಂಡಿರುತ್ತವೆ. ಅವು ಕಾಲಕ್ಕನುಗುಣವಾಗಿ ವ್ಯವಸ್ಥೆಯೊಡನೆ ರಾಜಿ ಮಾಡಿಕೊಳ್ಳುತ್ತವೆ. ಆದರೆ ಸಾಮಾಜಿಕ ಸಮಸ್ಯೆಗಳೊಡನೆ ಸೆಣಸಾಡುತ್ತಾ ಪರಿವರ್ತನೆಯ ಕನಸನ್ನು ಹುಟ್ಟುಹಾಕುತ್ತಾ, ಮನಸ್ಸುಗಳನ್ನು ಕಟ್ಟುವ ಕಾಯಕದಲ್ಲಿ ಸಂವೇದಿ, ಸಂವಾದ, ಮಾನಸ, ಶೈನಿ[ಕೈಬರಹದ ಪತ್ರಿಕೆ]ಯಂಥ ಪತ್ರಿಕೆಗಳು ತೊಡಗಿಕೊಂಡಿರುವುದು ಭರವಸೆಗೆ ಕಾರಣವಾಗಿದೆ.

ಸಂವೇದಿಯಂಥ ಪತ್ರಿಕೆಗಳು ಸಮಾಜದ ಪಿಸುನುಡಿಗಳಿದ್ದಂತೆ. ಅವು ಪಿಸುನುಡಿಗಳೇ ಆಗಿದ್ದರೂ ಸಮಾಜದ ನಡುವಿನಿಂದ ಎಳುತ್ತಿರುವ ಶಕ್ತಿಯುತವಾದ ಧ್ವನಿಗಳು. ಸ್ವಸ್ಥ ಸಮಾಜ ರಚನೆಯಲ್ಲಿ ಇಂಥ ಸಶಕ್ತ ಪಿಸುನುಡಿಗಳು ಮಹತ್ವದ ಪಾತ್ರ ವಹಿಸುತ್ತವೆ. ಯಾಕೆಂದರೆ ಸಮಾಜ ಪರಿವರ್ತನೆಯ ಬೀಜಗಳು ಇಂಥ ಪಿಸುನುಡಿಗಳಲ್ಲಿ ಅಡಗಿರುತ್ತವೆ.

[ಮಂಗಳೂರಿನಿಂದ ಪ್ರಕಟವಾಗುತ್ತಿರುವ ’ಸಂವೇದಿ’ಯ ದಶಮಾನೋತ್ಸವ ಸಂಚಿಕೆಗಾಗಿ ಬರೆದ ಲೇಖನ]

Wednesday, May 4, 2011

ಕಣ್ಣು ಕಿತ್ತ ಘಟನೆ; ನೋಡಿ ಪ್ರೇಮದಂದವ!




ರಘು ಎಂಬ ಪ್ರೇಮಿಯ ಕಣ್ಣು ಕಿತ್ತ ಘಟನೆ ಈಗ ನೇಪಥ್ಯಕ್ಕೆ ಸರಿದಿದೆ. ನನ್ನನ್ನು ಗಾಢವಾಗಿ ತಟ್ಟಿದ ಘಟನೆಯಿದು. ಗಾಢವಾಗಿ ತಟ್ಟಿದ್ದನ್ನು ಗದ್ಯದಲ್ಲಿ ಹಿಡಿದಿಡುವುದು ಕಷ್ಟ. ಅದು ಮೌನದಲ್ಲಿ ಮಾಗಬೇಕು. ಪದ್ಯದಲ್ಲಿ ಅರಳಬೇಕು. ಆದರೆ ಪದ್ಯ ನನಗೆ ಒಲಿಯದ ಮಾಧ್ಯಮ.

ಪಂಚೆಂದ್ರಿಯಗಳಾಚೆ ತುಡಿಯಲಾರದ್ದು ಪ್ರೀತಿಯೇ ಅಲ್ಲ ಎಂದು ಬಲವಾಗಿ ನಂಬಿರುವವಳು ನಾನು. ಲೌಕಿಕವನ್ನು ಮೀರಿ ಪ್ರೀತಿ ಇನ್ಯಾವುದಕ್ಕೋ ತುಡಿಯಬೇಕು. ಅಂಥ ಪ್ರೇಮಾನುಭೂತಿ ಎಂದೂ ಜೀವವಿರೋಧಿಯಾಗಲು ಸಾಧ್ಯವೇ ಇಲ್ಲ. ಆದರೆ ಕಣ್ಣು ಕಿತ್ತ ಪ್ರಕರಣದಲ್ಲಿ ಪ್ರೀತಿ ಆ ಹಂತವನ್ನು ಏರಲು ಪ್ರಯತ್ನಿಸಿತ್ತೇ? ಇಲ್ಲ. ಇಲ್ಲಿ ಅದು ಜೀವವಿರೋಧಿಯಾಗಿ, ಹಿಂಸ್ರಾರೂಪ ಪಡೆದಿದೆ. ಮಾನವೀಯವಾಗಿ ಸ್ಪಂದಿಸಬೇಕಾದ ಸಂಗತಿಯೊಂದು ಮನುಷ್ಯನ ಅನಾಗರಿಕ ವರ್ತನೆಗಳಿಂದ ರಕ್ತಲೇಪನಗೊಂಡಿದೆ.

ಯಾಕೆ ಹಾಗಾಯ್ತು? ಹಾಗಾದರೆ ರಘು-ಅನುಷಾ ಪರಸ್ಪರ ಪ್ರೀತಿಸಿದ್ದು ಸುಳ್ಳೆ?
ಸುಳ್ಳಲ್ಲ ಎಂಬುದು ಅವರ ನಡವಳಿಕೆಗಳಿಂದ, ಹೇಳಿಕೆಗಳಿಂದ ಗೊತ್ತಾಗುತ್ತದೆ. . ಎಲ್ಲಾ ಪ್ರೇಮಿಗಳಂತೆ ಅವರೂ ಪ್ರೀತಿಸಿದ್ದರು. ಪಂಚೇಂದ್ರಿಯಗಳ ವಶವಾದರು. ರೂಪ, ಗಂಧ, ಸ್ವಾದ, ಸ್ಪರ್ಶ, ಮಾತುಗಳು ವರ್ತಮಾನವನ್ನು ಮರೆಸಿಬಿಟ್ಟವು. ಪ್ರೇಮದಮಲಿನಲಿ ಅವರು ತೇಲಿ ಹೋದರು. ಆ ಸ್ಥಿತಿಯನ್ನು ಉಮರ್ ಖಯ್ಯಾಮ್ ಹೀಗೆ ಹೇಳುತ್ತಾನೆ;

’ಅಲ್ಲಿ ಮರದಡಿಯಲ್ಲಿ ನಲ್ಗಾವ್ಯವೊಂದಿರಲು,
ರೊಟ್ಟಿಯೊಂದಿನಿಸೊಂದು ಕುಡಿಕೆಯಲಿ ಮಧುವು,
ಮೇಣ್ ಮುಗುದೆ, ನೀನೆನ್ನ ಬಳಿ ಕುಳಿತು ಪಾಡಲಹ!
ಕಾಡಾದೊಡೇನದುವೆ ಸಗ್ಗಸುಖವೆನಗೆ.’

ಆ ಸ್ವರ್ಗಸುಖದಲ್ಲಿ ತಮ್ಮ ಮನೆತನ, ಅಂತಸ್ತು, ಗೌರವ, ಘನತೆಗಳೆಲ್ಲವನ್ನು ಮರೆತುಬಿಟ್ಟರು. ಆದರೆ ಅನುಷಳ ಮನೆಯವರು ಮರೆಯಲಿಲ್ಲ. ಯಾಕೆಂದರೆ ಅವರು ಆರ್ಥಿಕವಾಗಿ ರಘುವಿಗಿಂತ ಮೇಲ್ಮಟ್ಟದಲ್ಲಿದ್ದರು. ತಮ್ಮದೇ ಜಾತಿಯವನಾಗಿದ್ದರೂ ರಘುವನ್ನು ಅಳಿಯನೆಂದು ಒಪ್ಪಿಕೊಳ್ಳಲು ಅವರು ಸಿದ್ಧರಿರಲಿಲ್ಲ. ಹಾಗಾಗಿ ತಮ್ಮ ಪ್ರಭಾವವನ್ನು ಬಳಸಿ ಅನುಷಾಳಿಂದ ರಘುವನ್ನು ದೂರ ಮಾಡಿದರು. ಎರಡು ವರ್ಷ ಕಡಿಮೆ ಅವಧಿಯೇನಲ್ಲ. ಒಬ್ಬ ಮನುಷ್ಯನ ಬ್ರೈನ್ ವಾಶ್ ಮಾಡಲು ಅಷ್ಟು ಅವಧಿ ಸಾಕು. ಅನುಷಾ ಹೆತ್ತವರ ಅಜ್ನಾನುವರ್ತಿಯಾದಳು. ಆಕೆ ಇನ್ನೊಂದು ಮದುವೆಗೆ ಸಿದ್ಧವಾದಳು.

ರಘುವಿನ ದುರಂತ ಕಥೆಯನ್ನು ಕೇಳಿದಾಗ ನನಗೆ ಪಕ್ಕನೆ ನೆನಪಾಗಿದ್ದು ಸಿದ್ದಲಿಂಗಯ್ಯನವರ ’ರಾಣಿಯ ಪ್ರೇಮ’ ಎಂಬ ಕವನ. ”ಕಪ್ಪು ಕಾಡಿನ ಹಾಡು” ಎಂಬ ಕವನ ಸಂಕಲನದಲ್ಲಿರುವ ಈ ಹಾಡನ್ನು ನೀವೂ ಒಮ್ಮೆ ಓದಿಬಿಡಿ;

ಉತ್ತರ ದಿಕ್ಕಿಗೆ ರಾಣಿಯೊಬ್ಬಳು
ಇದ್ದಳು ಬಲು ಹಿಗ್ಗಿ
ಎತ್ತರದಲ್ಲಿ ರಾಣಿ ಇದ್ದಳು
ಕಣ್ಣುಗಳಿಗೆ ಸುಗ್ಗಿ
ಆಳನು ಕರೆದಳು ಪಟ್ಟದ ರಾಣಿ
ಆಳು ಬಾರೊ ನನ್ನ
ಜೀತಗಾರನ ಜೊತೆಗೆ ಕರೆದಳು
ಪ್ರೀತಿ ಮಾಡೊ ನನ್ನ

ಆಳು; ಕೊಕ್ಕರೆಯೊಂದು ಮೀನ ಪ್ರೀತಿಸಿತು
ಈ ಪ್ರೇಮದ ಗುಟ್ಟೇನು
ಮಸೆದ ಕತ್ತಿಯು ಕೊರಳ ಪ್ರೀತಿಸಿತು
ಈ ಒಲವಿನ ಪರಿಯೇನು?
.........................
ಜೀತಗಾರನು ಜೀವ ಭಯದಲ್ಲಿ
ಊರ ಬಿಡುವೆನೆಂದ
ಬೇಲಿ ಮರೆಯಲ್ಲಿ ಹೆಣ ಬಿದ್ದಿತ್ತು
ನೋಡಿ ಪ್ರೇಮದಂದ.

ಇದಕ್ಕೆ ವ್ಯಾಖ್ಯಾನದ ಅವಶ್ಯಕತೆ ಇಲ್ಲವೆನಿಸುತ್ತದೆ. ವರ್ಣಸಂಕರದ, ವರ್ಗಾಂತರದ ಪ್ರೇಮ ಪ್ರಕರಣಗಳೇ ಹಾಗೆ ಅವು ಧಾರುಣ ಅಂತ್ಯವನ್ನು ಕಂಡದ್ದೇ ಹೆಚ್ಚು. ಉನ್ನತ ಕುಲದ ಹೆಣ್ಣೊಬ್ಬಳು ಕೆಳಸ್ತರದ ಇಲ್ಲವೇ ಅಂತ್ಯಜನಾದ ಗಂಡೊಬ್ಬನನ್ನ ಪ್ರೀತಿಸಿದರೆ ಅದು ದುರಂತದಲ್ಲಿ ಅಂತ್ಯಗೊಳ್ಳುವುದೇ ಹೆಚ್ಚು. ಇಲ್ಲಿ ಪ್ರಭುತ್ವ ಕೂಡಾ ಮೇಲ್ಜಾತೀಯ ಮತ್ತು ಮೇಲ್ವರ್ಗದ ಪರವಾಗಿಯೇ ನಿಲ್ಲುತ್ತದೆ. ಆದರೆ ಉನ್ನತ ಸ್ತರದ ಗಂಡೊಬ್ಬ ಕೆಳವರ್ಗದ ಸ್ತ್ರೀಯನ್ನು ಇಷ್ಟಪಟ್ಟರೆ ಅದೇನೂ ಅಪರಾಧವಾಗುವುದಿಲ್ಲ. ಆತ ತನ್ನ ಜಾತಿಯಲ್ಲಿಯೇ,ತನ್ನ ಅಂತಸ್ತಿಗನುಗುಣವಾದ ಹೆಣ್ಣೊಬ್ಬಳನ್ನು ಮದುವೆಯಾಗುತ್ತಾನೆ. ಇವಳನ್ನು ’ಇಟ್ಟುಕೊಳ್ಳುತ್ತಾನೆ’ ಅದನ್ನು ಸಮಾಜ ಒಪ್ಪಿಕೊಳ್ಳುತ್ತದೆ.

ರಘು ಪ್ರಕರಣವನ್ನೇ ನೋಡಿ; ಇಲ್ಲಿ ಹುಡುಗಿ ಮನೆಯವರು ಶ್ರೀಮಂತರು. ಜೊತೆಗೆ ರಾಜಕೀಯ ವ್ಯಕ್ತಿಗಳ ನಂಟುಳ್ಳವರು. ಹಾಗಾಗಿಯೇ ಈ ಪ್ರಕರಣವನ್ನು ಹೆಚ್ಚು ಲಂಬಿಸದಂತೆ ಮಾಧ್ಯಮಗಳ ಮೇಲೆ ಒತ್ತಡವನ್ನು ತಂದರು ಆದರೆ ಆ ವೇಳೆಗಾಗಿಯೇ ಆ ಪ್ರಕರಣ ಮಾಧ್ಯಮಗಳಲ್ಲಿ ಸಾಕಷ್ಟು ಪ್ರಚಾರವನ್ನು ಪಡೆದುಕೊಂಡಿತ್ತು. ಅನಿವಾರ್ಯವಾಗಿ ಪೋಲಿಸ್ ಇಲಾಖೆ ಕಣ್ಣು ಕಿತ್ತ ಆರೋಪ ಹೊತ್ತವರನ್ನು ಬಂದಿಸಲೇ ಬೇಕಾಯ್ತು.

ಮುಂದೆ ಈ ಪ್ರಕರಣ ಯಾವ ಹಾದಿ ಹಿಡಿಯುತ್ತೋ ಗೊತ್ತಿಲ್ಲ. ಆದರೆ ರಘುವಿಗಾದ ಅನ್ಯಾಯವನ್ನು ತುಂಬಿ ಕೊಡಲು ಯಾರಿಂದಲೂ ಸಾಧ್ಯವಿಲ್ಲ. ಯಾಕೆಂದರೆ ಕಣ್ಣು ಬಹು ಮುಖ್ಯವಾದ ಅಂಗ.
ಈ ಪ್ರಕರಣದ ಹೊರ ಆವರಣದಲ್ಲಿ ನಿಂತು ನೋಡುತ್ತಿರುವ ನಾವು ಅದನ್ನು ಕಪ್ಪು ಬಿಳುಪಾಗಿ ವ್ಯಾಖ್ಯಾನಿಸಬಹುದು. ಇದನ್ನು ಎಸ್.ನಾರಾಯಣ್ ಎಂಬ ಸಿನೇಮಾ ನಿರ್ದೇಶಕ ’ನೆನಪಿದೆಯಾ ಓ ಗೆಳತಿ’ ಎಂಬ ಸಿನೇಮಾ ತೆಗೆಯುವುದರ ಮುಖಾಂತರ ಚೆನ್ನಾಗಿಯೇ ಮಾಡುವವರಿದ್ದಾರೆ!
ಆದರೆ ಅದರ ಗೋಜಲು, ಗಂಭೀರತೆಗಳೆಲ್ಲಾ ಅದರಲ್ಲಿ ನೇರವಾಗಿ ಭಾಗವಹಿಸಿದವರಿಗಷ್ಟೇ ಗೊತ್ತಾಗುವ ಸಂಗತಿ.
ಒಳಾವರಣದಲ್ಲಿರುವ ರಘುವಿನ ಗೆಳೆಯರು ಮತ್ತು ಅನುಷಾ ಬಂಧುಗಳು ಕಣ್ಣು ಕಿತ್ತ ಘಟನೆಯ ಭಾಗಿದಾರರು ಮತ್ತು ಸಾಕ್ಷಿದಾರರು. ಆದರೆ ಇದೆಲ್ಲದರ ಕೇಂದ್ರ ಬಿಂದು ಅನುಷಾ ಮತ್ತು ರಘು. ಅವರ ಆತ್ಮಸಾಕ್ಷಿಗೆ ಏನು ಅನ್ನಿಸಿದೆಯೋ ಅದು ಮಾತ್ರ ಸತ್ಯ. ಬಹುಶಃ ಎರಡು ವರ್ಷದ ಹಿಂದೆ ಪರಸ್ಪರ ಮೆಚ್ಚಿ ಮದುವೆಯಾಗಿ, ಎರಡು ತಿಂಗಳು ದಾಂಪತ್ಯ ಜೀವನ ನಡೆಸಿದ ಅವರಿಗೆ ಪ್ರೀತಿಯ ಬಗ್ಗೆ ಇದ್ದ ಭ್ರಮೆಗಳೆಲ್ಲಾ ಕಳಚಿರಬೇಕು. ಪಂಚೇಂದ್ರಿಯಗಳಾಚೆ ಅವರ ಪ್ರೇಮ ತುಡಿಯಲಿಲ್ಲ. ಒಂದು ವೇಳೆ ತುಡಿದಿದ್ದರೆ ಅದು ಪ್ರೇಮಸಾಪಲ್ಯದ ಒಳದಾರಿಗಳನ್ನು ತಾನಾಗಿಯೇ ಹುಡುಕಿಕೊಳ್ಳುತ್ತಿತ್ತು.

ಅನುಷಾ ತನ್ನ ನಿರ್ಧಾರದ ಬಗ್ಗೆ ಗಟ್ಟಿಯಾಗಿದ್ದಾಳೆ. ರಘು ಕೂಡಾ ದುರಂತ ಪ್ರೇಮಿಯಂತೆ ಕಾಣುತ್ತಿಲ್ಲ. ಮಾಧ್ಯಮವನ್ನು ಅವರು ಎದುರಿಸಿದ ರೀತಿಯಲ್ಲಿಯೇ ಅದು ವ್ಯಕ್ತವಾಗುತ್ತಿತ್ತು. ’ಒಲವೇ ಜೀವನ ಲೆಖ್ಖಾಚಾರ’ ನಿಜವಾಗಿದೆ. ಪ್ರೇಮ ಮತ್ತೆ ಸೋತಿದೆ.

Friday, April 22, 2011

ಹೊತ್ತ ಶಿಲುಬೆಗೆ ಏಳು ಮಲ್ಲಿಗೆಯ ತೂಕ !




ನನ್ನ ನಿನ್ನ ಸಂಬಂಧ ಕಡಿಯಿತು ಎಂದಳಾಕೆ
ಆ ಕ್ಷಣಕ್ಕಾಗಿಯೇ ಹಸಿದವನಂತೆ ’ತಥಾಸ್ತು’ ಎಂದವನು
ಬೆನ್ನು ತಿರುಗಿಸಿ ಹೋಗಿಯೇಬಿಟ್ಟ
ಅವಳು ಶಿಲೆಯಾಗಿ ನಿಂತಳು

ಎಂಥವನಿಗೊಲಿದೆನಯ್ಯಾ...ಎನ್ನಬೇಕಾದವಳು
ಇಂಥವನಿಗೊಲಿದೆಯಲ್ಲಾ...!
ಅವನತಮುಖಿ,
ಹೆಬ್ಬೆರಳ ತುದಿಯಲ್ಲಿ ಕೊಂಚ ಕೆಂಪು

ಎಲ್ಲವನ್ನೂ ಹೇಳಿಬಿಟ್ಟಾಗಿದೆ, ನೀರವ ನಿರಾಳತೆ.
ಕೋಟೆ ಕಟ್ಟುವುದಿದೆ,
ತನ್ನ ಶಿಲುಬೆಯ ತಾನೇ ಹೊತ್ತು.
ಹಂಬಲಗಳಿಗೋ ಆಯುಸ್ಸಿದೆ; ದಿನಗಳು ಮುಗಿದವು.

ಜಂಗಮಕ್ಕಳಿವುಂಟು; ಸ್ಥಾವರಕ್ಕಳಿವಿಲ್ಲ.
ಒಳಗೊಳಗೇ ಇಳಿದಳು, ಮೇಲೇರಿದಳು
ಚಂದಮಾಮನ ಮುಟ್ಟಲು ಐದೇ ಮೆಟ್ಟಲು.

ಕೋಟೆ ಕಟ್ಟಬೇಕು, ಅಲ್ಲಲ್ಲಿ ಕಳ್ಳಗಿಂಡಿಗಳನ್ನಿಟ್ಟು ಕಾಯಬೇಕು;
ಖಂಡಾಂತರ ಕ್ಷಿಪಣಿಗಳ ಯುಗ, ಎದೆಯೊಳಗೂ ಇಳಿದು ಬಿಟ್ಟಾವು!
ಸ್ವಚ್ಛಂದ ಆಕಾಶ, ಮಾಯಾಕಂಬಳಿಯಲ್ಲಿ ಕುಳಿತ ರಾಜಕುಮಾರಿ.
ಬಿಂಬಗಳೆಲ್ಲಾ ಜೀವತಳೆದು ನಕ್ಷತ್ರ ಮಾಲೆಯನು ಹಿಡಿದು ನಿಂತವು
ಬದುಕು ಕಾಮನಬಿಲ್ಲು.

ದಶದಿಕ್ಕಿನ ಹಾದಿ, ಒಬ್ಬಂಟಿ ಪಯಣ
ನನ್ನ ಶಿಲುಬೆಯ ನಾನೇ ಹೊರಬೇಕು.

ಎಲ್ಲವನ್ನೂ ಮುರಿಯಬೇಕು, ಮುರಿದು ಕಟ್ಟಬೇಕು
ಮಾತಿನಲ್ಲಿ ಜಾರಿದ್ದು ಮೌನದಲ್ಲಿ ಆಪ್ಪಿದೆ
ಹೊತ್ತ ಶಿಲುಬೆಗೆ ಏಳೇ ಮಲ್ಲಿಗೆಯ ತೂಕ!

Wednesday, April 13, 2011

ಪ್ರಕೃತಿ ಮಾತೆಗೆ ನಮಿಸುವ ’ವಿಷು ಹಬ್ಬ’





ನಮ್ಮ ದೃಶ್ಯ ಮಾದ್ಯಮಗಳು ಚಾಂದ್ರಮಾನ ಯುಗಾದಿಗೆ ಕೊಡುವ ಸಂಬ್ರಮದ ಪ್ರಚಾರವನ್ನು ನೋಡುವಾಗ ನನಗೆ ಪ್ರತಿಭಾ ನಂದಕುಮಾರ್ ಬರೆದ ಮಾತೊಂದು ನೆನಪಿಗೆ ಬರುತ್ತದೆ, ಅವರು ಒಂದೆಡೆ ಹೇಳುತ್ತಾರೆ; ಈ ಪಂಜಾಬಿಗಳು ಇಡೀ ದೇಶಕ್ಕೇ ಸೆಲ್ವಾರ್ ಕಮೀಜ್ ತೋಡಿಸಿಬಿಟ್ಟರು. ಹಾಗೆಯೇ ಯುಗಾದಿ ಆಚರಣೆಯಲ್ಲಿಯೂ ಮಾಧ್ಯಮಗಳು ಏಕತಾನತೆಯನ್ನು ತಂದುಬಿಟ್ಟವು. ಅಂದರೆ ಚಾಂದ್ರಮಾನ ಯುಗಾದಿಯನ್ನೆ ಸಮಸ್ತ ಕನ್ನಡಿಗರ ಯುಗಾದಿ ಹಬ್ಬವೆಂದು ಮಾಧ್ಯಮಗಳು ಪ್ರತಿವರ್ಷ ಹೇಳುತ್ತಲೇ ಬಂದವು.

ಆದರೆ ಇದಕ್ಕಿಂತ ಭಿನ್ನವಾದ ಇನ್ನೊಂದು ಯುಗಾದಿ ಆಚರಣೆಯೂ ನಮ್ಮ ದೇಶದ ಕೆಲವು ಭಾಗಳಲ್ಲಿವೆ. ಕರ್ನಾಟಕದ ಕರಾವಳಿ ಭಾಗದಲ್ಲಿ ಕೂಡಾ ಭಿನ್ನವಾದ ಯುಗಾದಿಯಿದೆ. ಅದನ್ನು ವಿಷು ಹಬ್ಬವೆಂದು ಕರೆಯಲಾಗುತ್ತದೆ.

ಸೂರ್ಯನ ಚಲನೆಯನ್ನು ಆಧಾರಿಸಿದ್ದು ಸೌರಮಾನ ಯುಗಾದಿ. ಚಂದ್ರನ ಚಲನೆಯನ್ನು ಆಧಾರಿಸಿದ್ದು ಚಂದ್ರಮಾನ ಯುಗಾದಿ. ಅಂದರೆ ಇದು ಖಗೋಳ ವಿಜ್ನಾನಕ್ಕೆ, ಗಣಿತಶಾಸ್ತ್ರವನ್ನು ಆಧರಿಸಿದ ಹಬ್ಬ.

ಸೌರಮಾನ ಯುಗಾದಿ ಆಚರಿಸುವುದು ಮೇಷ ಮಾಸದ ಮೊದಲದಿನ. ಅಂದು ಸೂರ್ಯ ಮೇಷರಾಶಿಯನ್ನು ಪ್ರವೇಶಿಸುತ್ತಾನೆ. ಚಾಂದ್ರಮಾನ ಯುಗಾದಿ ಬರುವುದು ಚೈತ್ರಮಾಸದ ಮೊದಲ ದಿನ. ಚೈತ್ರ ವೈಶಾಖ ವಸಂತಋತು ಅಂತ ನಾವು ಬಾಲ್ಯದಲ್ಲಿ ಕಲಿತದ್ದು ನೆನಪಗಿರಬೇಕಲ್ಲಾ...ಬೇಸಗೆಯ ರಜೆ, ಮಾವು, ಹಲಸು,ಗೇರು, ಅಜ್ಜನ ಮನೆ...ನೆನಪುಗಳ ಮೆರವಣಿಗೆ ಸಾಗಿ ಬಂದಿರಲೇಬೇಕು.

ನಾನು ತುಳುನಾಡಿನವಳು. ನಮ್ಮದು ಸೌರಮಾನ ಯುಗಾದಿ ಆಚರಣೆ. ಅಂದರೆ ನಮಗೆ ನಾಳೆ ಹೊಸ ವರ್ಷ . ಅದನ್ನು ನಾವು ’ವಿಷು ಹಬ್ಬ’ ಎಂದು ಆಚರಿಸುತ್ತೇವೆ. ಪ್ರತಿ ವರ್ಷ ಏಪ್ರಿಲ್ ೧೪ ರಂದು ಇದು ಸಂಭವಿಸುತ್ತದೆ.

ತುಳುನಾಡು ಮಾತ್ರ ಅಲ್ಲ, ತಮಿಳು ನಾಡು, ಕೇರಳ, ಪಂಜಾಬ್, ಬಂಗಾಳ, ಅಸ್ಸಾಂ ರಾಜ್ಯಗಳಲ್ಲೂ ಇಂದಿನ ದಿನವನ್ನು ಹೊಸ ವರ್ಷವೆಂದು ಆಚರಿಸಲಾಗುತ್ತದೆ.
ತುಳುವರಿಗೆ-ಬಿಸುಪರ್ಬ, ಮಲೆಯಾಳಿಗಳಿಗೆ-ವಿಷು, ತಮಿಳರಿಗೆ-ಪುತ್ತಾಂಡ್, ಪಂಜಾಬಿಗಳಿಗೆ-ಬೈಸಾಕಿ, ಅಸ್ಸಾಮಿಗಳಿಗೆ-ಬಿಹು. ಒಟ್ಟಿನಲ್ಲಿ ಇದು ರೈತಾಪಿ ವರ್ಗದ ಹಬ್ಬ.

ನಾವು ಸಮೃದ್ಧವಾಗಿ ಬದುಕಲು ಬೇಕಾದ್ದನ್ನೆಲ್ಲವನ್ನು ಕೊಟ್ಟ ಭೂತಾಯಿಗೆ ಕೃತಜ್ನತೆಗಳನ್ನು ಅರ್ಪಿಸುವ ದಿನವೇ ’ಬಿಸು ಪರ್ಬ’. ಈಹಬ್ಬದಲ್ಲಿ ’ಬಿಸುಕಣಿ’ಗೆ ತುಂಬಾ ಮಹತ್ವ. ಬಿಸುಕಣಿ ಅಂದರೆ ಹೊಸವರ್ಷದ ಸ್ವಾಗತಕ್ಕೆ ಇಡುವ ಕಳಶ. ಬಿಸುವಿನ ಹಿಂದಿನ ದಿನ ರಾತ್ರಿಯೇ ದೇವರ ಮುಂದೆ ಕಣಿಯನ್ನು ಇಡಲಾಗುತ್ತದೆ.
[ಕಣಿಹೇಳುವುದು, ಅಂದರೆ ಭವಿಷ್ಯ ಹೇಳುವುದು ಎಂಬ ಪದ ನಮ್ಮ ಆಡುಮಾತಿನಲ್ಲಿ ಚಾಲ್ತಿಯಲ್ಲಿದೆ. ಅದಕ್ಕೂ ಇದಕ್ಕೂ ಸಂಬಂಧವಿದೆಯೇನೋ ನನಗೆ ಗೊತ್ತಿಲ್ಲ,]

ದೇವರ ಮುಂದೆ ದೊಡ್ಡ ಹರಿವಾಣದಲ್ಲಿಒಂದು ಸೇರು ಅಕ್ಕಿಯನ್ನು ಹಾಕಿ ಅದರ ಮಧ್ಯೆ ಸುಲಿಯದ ತೆಂಗಿನಕಾಯಿಯನ್ನು ಇಡುತ್ತಾರೆ. ಅದರ ಸುತ್ತ ಆ ವರ್ಷ ತಮ್ಮ ಜಮೀನಿನಲ್ಲಿ ಬೆಳೆದ ಹೊಸ ಫಲ ವಸ್ತುಗಳನ್ನು ಜೋಡಿಸಬೇಕು. ಮುಖ್ಯವಾಗಿ ಮುಳ್ಳುಸೌತೆ, ಮಾವು, ಗೇರು, ಹಲಸು, ಸಿಹಿಕುಂಬಳಕಾಯಿ, ಒಡ್ಡುಸೌತೆ[ಮಂಗಳೂರು ಸೌತೆ], ಬೆಂಡೆ, ತೊಂಡೆ, ಅಲಸಂಡೆ ಮುಂತಾದವುಗಳನ್ನಿಟ್ಟು ನಡುವೆ ಒಂದು ಕನ್ನಡಿಯನ್ನಿಡಬೇಕು. ಕೆಲವೆಡೆ ಇವುಗಳ ಜೊತೆ ಬಂಗಾರದ ಆಭರಣಗಳು ಹಾಗು ಹೊಸಬಟ್ಟೆಗಳನ್ನೂ ಕಣಿಯ ಮುಂದಿಡುತ್ತಾರೆ.

ಬಿಸು ಹಬ್ಬದಲ್ಲಿ ಕಣಿಯ ದರ್ಶನ ಪಡೆಯುವುದು ಬಹಳ ಮುಖ್ಯವಾದುದು. ಮರುದಿನ ಬೆಳಿಗ್ಗೆ ಎಚ್ಚರವಾದೊಡನೆ ಕಣ್ಣು ತೆರೆಯದೆ ಹಾಗೆಯೇ ಕಣ್ಣ್ಮುಚ್ಚಿಕೊಂಡೇ ದೇವರ ಮುಂದೆ ಬಂದು ವಿಷುಕಣಿಯ ದರ್ಶನ ಪಡೆಯಬೇಕು. ಅನಂತರವೇ ಎಣ್ಣೆ ಅಭ್ಯಂಜನ ಮಾಡಿ ಹೊಸಬಟ್ಟೆ ತೊಟ್ಟು ಹಿರಿಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆದು ಅಲ್ಲಿಟ್ಟಿರುವ ಕನ್ನಡಿಯಲ್ಲಿ ಮುಖ ನೋಡಿಕೊಳ್ಳಬೇಕು. ಮಧ್ಯಾಹ್ನ ಹಬ್ಬದೂಟ ಉಂಡು ಸಂಜೆ ಸಮೀಪದ ದೇವಸ್ಥಾನ ಅಥವಾ ಭೂತಸ್ಥಾನಕ್ಕೆ ಹೋಗಿ ದೇವರ ಅಥವಾ ದೈವದ ದರ್ಶನ ಪಡೆಯಬೇಕು.

ನನಗೆ ಈಗಲೂ ನೆನಪಿದೆ; ನಾನು ಬೆಂಗಳೂರಿಗೆ ಉದ್ಯೋಗಕ್ಕಾಗಿ ಬಂದಾಗ ದುಡಿಯುವ ಮಹಿಳೆಯರ ಹಾಸೇಲ್ ನಲ್ಲಿದ್ದೆ. ನನ್ನ ರೂಂಮೇಟ್ ಒಬ್ಬಳು ಮಲೆಯಾಳಿಯಾಗಿದ್ದಳು. ಅವಳ ಅಪೇಕ್ಷೆಯಂತೆ ಪ್ರತಿವರ್ಷ ವಿಷು ಹಬ್ಬದಂದು ಬೆಳಿಗ್ಗೆ ಅವಳು ಕಣ್ತೆರೆಯುವ ಮೊದಲೇ ಅವಳ ಚಾಚಿದ ಕೈಗಳಿಗೆ ಒಂದು ರೂಪಾಯಿಯ ಪಾವಲಿಯನ್ನಿಡುತ್ತಿದ್ದೆ. ಅದನ್ನವಳು ಭಕ್ತಿಯಿಂದ ಕಣ್ಣಿಗೊತ್ತಿಕೊಳ್ಳುತ್ತಿದ್ದಳು. ವಿಷು ಹಬ್ಬದಂದು ಸಂತೋಷವಾಗಿದ್ದರೆ ವರ್ಷವಿಡೀ ಸಂತೋಷವಾಗಿರುತ್ತಾರೆ ಎಂಬುದು ನಂಬಿಕೆ.

ವಿಷು ಹಬ್ಬದ ವಿಶೇಷ ಅಡುಗೆ ಏನಿರುತ್ತದೆ ಎಂಬುದರ ಬಗ್ಗೆ ನನಗೆ ಸ್ಪಷ್ಟವಾಗಿ ನೆನಪಿಲ್ಲ. ಆದರೆ ಒಬ್ಬಟ್ಟು ಇರುವುದಿಲ್ಲ ಅಂತ ಗೊತ್ತಿದೆ. ಹೆಸರು ಬೇಳೆ ಪಾಯಸ, ಎಳೆ ಗೋಡಂಬಿ ಹಾಕಿ ಮಾಡಿದ ತೊಂಡೆಕಾಯಿ ಪಲ್ಯ. ಮತ್ತು ಎಲ್ಲಾ ತರಕಾರಿ ಹಾಕಿ ಮಾಡಿದ ಅವಿಲು ಅಂದರೆ ಹುಳಿ ಇವಿಷ್ಟು ಇದ್ದೇ ಇರುತ್ತದೆ. ಜೊತೆಗೆ ಹಪ್ಪಳ. ಮೊಸರು, ಉಪ್ಪಿನಕಾಯಿ ಇದ್ದೇ ಇರುತ್ತದೆ.

ನಮ್ಮ ಮನೆಯಲ್ಲಿ ಮಾತ್ರ ಹಲಸಿನಹಣ್ಣಿನಿಂದ ’ಮುಳ್ಕ’ ಎಂಬ ಕರಿದ ತಿಂಡಿಯನ್ನು ಕಡ್ಡಾಯವಾಗಿ ಮಾಡಲೇಬೇಕಾಗುತ್ತದೆ. ಯಾಕೆಂದರೆ ನಮ್ಮ ಕುಟುಂಬದ ದೇವರಗದ್ದೆ ನಮ್ಮ ಪಾಲಿಗೆ ಬಂದಿತ್ತು. ಅದಕ್ಕೆ ಪರಂಪರೆಯಿಂದಲೂ ವಿಷು ಹಬ್ಬದಂದು ಪೂಜೆ ಮಾಡುವ ಪದ್ದತಿ ಇತ್ತು. ಕಂಬಳ ನಡೆಯುವ ಆ ಗದ್ದೆಯನ್ನು ನಾವು ದೊಡ್ಡಗದ್ದೆ ಎಂದು ಕರೆಯುತ್ತೇವೆ. ನೆನೆಸಿದ ಬೆಳ್ತಿಗೆ ಅಕ್ಕಿಯನ್ನು ಹಲಸಿನಹಣ್ಣಿನೊಂದಿಗೆ ರುಬ್ಬಿ ಅದಕ್ಕೆ ಎಳ್ಳನ್ನು ಸೇರಿಸಿ ಪಕೋಡದಂತೆ ಕರೆದರೆ ಅದೇ ಮುಳ್ಕ. ನಮ್ಮ ಮನೆಯಲ್ಲಿ ಕೆಲವು ವರ್ಷ ಏಪ್ರೀಲ್ ತಿಂಗಳಲ್ಲಿ ಹಲಸು ಹಣ್ಣಾಗುತ್ತಿರಲಿಲ್ಲ. ಅದು ಯಾರಿಗಾದರೂ ಗೊತ್ತಾದರೆ, ಅವರಲ್ಲಿ ಹಲಸಿನ ಹಣ್ಣಿದ್ದರೆ ನಮ್ಮ ಮನೆಗೆ ತಂದು ಕೊಡುತ್ತಿದ್ದರು.

ಪ್ರಸಕ್ತ ವರ್ಷದಿಂದ ನಮ್ಮ ಮನೆಯಲ್ಲಿ ಮುಳ್ಕ ಮಾಡಲಾರರು ಯಾಕೆಂದರೆ ಈಗ ಕಂಬಳ ನಡೆಯುವ ಆ ದೇವರ ಗದ್ದೆ ಕೊಕ್ಕೊ ತೋಟವಾಗಿ ಬದಲಾಗಿದೆ. ಕೃಷಿಕರ ಬದುಕು ಬದಲಾಗಿದೆ. ಹಾಗಾಗಿ ಆಚರಣೆಗಳೂ ಬದಲಾಗಿವೆ. ನಮ್ಮ ಹಳ್ಳಿಗಳು ಬದಲಾಗಿವೆ. ನಮ್ಮ ನಗರದ ಬದುಕು ಕೂಡ.

ನಾನು ಮನೆಯಲ್ಲಿ ಹಬ್ಬದಡುಗೆ ಮಾಡುವುದಿಲ್ಲ.ಅದಕ್ಕೆ ಹಲವಾರು ಕಾರಣಗಳಿವೆ. ಮಕ್ಕಳಿಗೆ ಸಿಹಿ ಇಷ್ಟವಾಗುವುದಿಲ್ಲ. ಗಂಡ ಡಯಾಬಿಟಿಕ್ ಅಲ್ಲವಾದರೂ ಆ ಭ್ರಮೆಯಲ್ಲಿ ಸಿಹಿ ತಿನ್ನುವುದಿಲ್ಲ. ಸಿಹಿ ಇಲ್ಲದಿದ್ದರೆ ಅದೆಂಥ ಹಬ್ಬ ಅಲ್ಲವೇ? ಅದಲ್ಲದೆ ಆತ ಸುದ್ದಿ ಚಾನಲ್ಲೊಂದರಲ್ಲಿ ಕೆಲಸ ಮಾಡುತ್ತಾನೆ. ಹಾಗಾಗಿ ಇಪ್ಪತ್ತನಾಲ್ಕು ಘಂಟೆಯೂ ಜರ್ನಲಿಸ್ಟೇ. ಹಾಗಾಗಿ ನಾನು ಮಾಡಿದ್ದನ್ನು ನಾನೊಬ್ಬಳೇ ಭೂತದಂತೆ ತಿನ್ನಬೇಕು. ಆದರೂ ’ಹಳ್ಳಿ ಮನೆ’ಯಿಂದ ಹಬ್ಬದೂಟ ತರಿಸುತ್ತೇನೆ. ಆಯ್ಕೆ ಮಾಡಿಕೊಂಡು ಇಷ್ಟವಾದದ್ದನ್ನು ತಿನ್ನುತ್ತೇವೆ ಉಳಿದದ್ದು ತಿಪ್ಪೆ ಸೇರುತ್ತದೆ.

ನಿಮಗ್ಯಾರಿಗಾದರೂ ’ವಿಷು ಕಣಿ’ ನೋಡಬೇಕೆನಿಸಿದರೆ ಅಕ್ಕ ಪಕ್ಕ ಎಲ್ಲಿಯಾದರೂ ತೆಂಗಿನ ಮರ ಇದ್ದರೆ ಅದನ್ನೇ ಕಣ್ಣು ತೆರೆದಾಗ ನೋಡಿಬಿಡಿ. ಯಾಕೆಂದರೆ ಅದು ಬೇಡಿದ್ದನ್ನು ಕೊಡುವ ಕಲ್ಪವೃಕ್ಷ ಎಂಬ ನಂಬಿಕೆ ಹಿಂದಿನಿಂದಲೂ ಬಂದಿದೆ.
ಹಬ್ಬದಡುಗೆ ಮಾಡದಿದ್ದರೂ ಬಾಗಿಲಿಗೆ ಮಾವಿನ ತೋರಣ ಕಟ್ಟುವುದನ್ನು ಮರೆಯುವುದಿಲ್ಲ. ಯಾಕೆಂದರೆ ಅದು ಚೈತ್ರದ ಚಿಗುರು; ವಸಂತ ಋತುವಿಗೆ ಮುನ್ನುಡಿ.
ಎಲ್ಲರಿಗೂ ವಿಷು ಹಬ್ಬದ ಶುಭಾಶಯಗಳು. ವಸಂತ ಋತು ನಿಮ್ಮೆಲ್ಲರ ಬಾಳಿನಲ್ಲಿಯೂ ಸದಾ ಕಾಲ ನಳನಳಿಸುತ್ತಿರಲಿ.

Friday, April 8, 2011

ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು




ಹಿರಿಯ ಗಾಂಧೀವಾದಿ ಹಾಗು ಸಮಾಜಸೇವಕ ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಉಪಾವಾಸ ಸತ್ಯಾಗ್ರಹ ಅಂದೋಲನದ ರೂಪ ಪಡೆಯುತ್ತಿದೆ.

ಯುವಕರು ಅಂದೋಲನಕ್ಕೆ ದುಮುಕ್ಕುತ್ತಿದ್ದಾರೆ. ಇದೊಂದು ಆಶಾದಾಯಕ ಬೆಳವಣಿಗೆ. ಹಿಂದಿ ಚಿತ್ರರಂಗದ ಸದಭಿರುಚಿಯ ನಿರ್ದೇಶಕರು, ನಟರು ಚಳುವಳಿಗೆ ಬೆಂಬಲ ಸೂಚಿಸಿದ್ದಾರೆ. ಮುಖ್ಯವಾಗಿ ಯುವ ನಟ ಅಮಿರ್ ಖಾನ್ ಎಲ್ಲರಿಗಿಂತಲೂ ಮೊದಲು ತನ್ನ ಬೆಂಬಲ ವ್ಯಕ್ತಪಡಿದ್ದಾನೆ. ಆತ ’ಲಗಾನ್’ ಚಿತ್ರದ ಮೂಲಕ ಯುವಕರ ಹೃದಯದಲ್ಲಿ ದೇಶಪ್ರೇಮದ ಕಿಚ್ಚನ್ನು ಹೊತ್ತಿಸಿದವನು. ರೈತರ ಆತ್ಮಹತ್ಯೆ ಸಮಸ್ಯೆಗಳನ್ನೆತ್ತಿಕೊಂದು, ದೃಶ್ಯ ಮಾಧ್ಯಮದ ಕ್ರೌರ್ಯವು ಸೇರಿದಂತೆ ಅಧಿಕಾರಿಶಾಯಿಯ ದಬ್ಬಾಳಿಕೆಯನ್ನು ’ಪಿಪ್ಲಿ ಲೈವ್..’ ಸಿನೇಮಾದಲ್ಲಿ ತೋರಿಸಿದ್ದಾನೆ. ಆತನ ಬೆಂಬಲ ಈ ಆಂದೋಲನಕ್ಕೆ ಅಥೆಂಟಿಸಿಟಿಯನ್ನು ತಂದು ಕೊಟ್ಟಿದೆ.

ನಮಗೆ ಭರವಸೆಯಿರಲಿಲ್ಲ, ನಾವು ಅಸಹಾಯಕರಾಗಿದ್ದೆವು; ಗ್ರಾಮ ಲೆಕ್ಕಿಗನಿಂದ ಹಿಡಿದು ಎಲ್ಲಾ ಅಧಿಕಾರಶಾಹಿಗಳು, ಜನಪ್ರತಿನಿಧಿಗಳು ಭ್ರಷ್ಟಾಚಾರದ ಪೋಷಕರಾಗಿದ್ದರು. ಭ್ರಷ್ಟಾಚಾರ ನಮ್ಮ ಜೀವನಕ್ರಮದ ಭಾಗವೇ ಆಗಿಹೋಗಿದೆ. ಅದನ್ನು ನಾವು ಒಪ್ಪಿಕೊಂಡಿದ್ದೇವೆ.

ನೀತಿನಿರೂಪಕರ ಸ್ಥಾನದಲ್ಲಿರುವ ಮಠಾದೀಶರು, ಅಧಿಕಾರಿಶಾಹಿವರ್ಗ
ಜನಪ್ರತಿನಿಧಿಗಳು ಮತ್ತು ಪತ್ರಿಕಾವಲಯ ಎಲ್ಲವೂ ಬ್ರಷ್ಟಾಚಾರದಲ್ಲಿ ಮುಳುಗಿ ಹೋಗಿ ನೈತಿಕ ಅದಃಪತನದತ್ತ ಜಾರಿ ಹೋಗಿದ್ದಾರೆ. ಇವರೇ ಇಂದು ಅಣ್ಣಾ ಹಜಾರೆಯ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಲು ಮುಂದೆ ಬಂದಿದ್ದಾರೆ. ಆದರೆ ಹೋರಾಟಗಾರರು ಅವರನ್ನೆಲ್ಲಾ ದೂರವಿಟ್ಟಿದ್ದಾರೆ. ಮಂಗಳವಾರ, ಹಜಾರೆ ಸತ್ಯಾಗ್ರಹ ಅರಂಭಿಸಿದ ದಿನದಂದೇ ಅವರಿಗೆ ಬೆಂಬಲ ವ್ಯಕ್ತಪಡಿಸಲು ಬಂದ ಉಮಾಭಾರತಿ ಮತ್ತು ಓಂಪ್ರಕಾಶ್ ಚೌತಾಲ ಅವರನ್ನು ಹೋರಾಟಗಾರರು ಹತ್ತಿರಕ್ಕೂ ಸೇರಿಸಿಕೊಳ್ಳಲಿಲ್ಲ. ಬ್ರಷ್ಟಾಚಾರ ವಿರೋಧಿ ಅಂದೋಲನಕ್ಕೆ ಬ್ರಷ್ಟಾಚಾರದ ಮೂಟೆಗಳಂತಿರುವ ರಾಜಕಾರಣಿಗಳು ಬೆಂಬಲ ವ್ಯಕ್ತಪಡಿಸುವುದು ವ್ಯಂಗ್ಯವಲ್ಲವೇ?

ಈ ವ್ಯಂಗ್ಯ ಕನ್ನಡದ ಪತ್ರಿಕಾ ರಂಗಕ್ಕೂ ಅನ್ವಯವಾಗುತ್ತದೆ. ಕೆಲವು ಪತ್ರಕರ್ತರು ದುಡ್ಡು-ಆಸ್ತಿ ಸಂಪಾದನೆಯಲ್ಲಿ, ಗುಂಪುಗಾರಿಕೆಯಲ್ಲಿ ರಾಜಕಾರಣಿಗಳನ್ನೂ ಮೀರಿಸುತ್ತಿದ್ದಾರೆ. ಅಣ್ಣಾ ಹಜಾರೆಯ ಜನಾಂದೋಲನವನ್ನು ಬೆಂಬಲಿಸಿ ಪ್ಲಾಪ್ ಅಪ್ ಹಾಕುತ್ತಿರುವ ಕೆಲವು ಚಾನಲ್ ಗಳು ರಾಜಕಾರಣಿಗಳ ಹಿಡಿತದಲ್ಲಿವೆ. ’ಭ್ರಷ್ಟರ ಬೆನ್ನತ್ತಿ ಸುವರ್ಣ ನ್ಯೂಸ್’ ಎನ್ನುವ ಸುವರ್ಣ ಚಾನಲ್ ಮೊದಲು ಬೆಂಬೆತ್ತಬೇಕಾದದ್ದು ಅದರ ಮಾಲೀಕ ರಾಜೀವ ಚಂದ್ರಶೇಖರ್ ಅವರನ್ನು. ಯಾಕೆಂದರೆ ದುಡ್ಡುಕೊಟ್ಟು ಎಂಪಿ ಸೀಟ್ ಖರೀದಿಸಿದವರು ಅವರು. ಅದರಲ್ಲೂ ಜನಶ್ರೀ ಚಾನಲ್ ಒಡೆಯರು ಪತ್ರಕರ್ತರನ್ನೂ ಬ್ರಷ್ಟಾಚಾರದ ತೆಕ್ಕೆಯೊಳಗೆ ತೆಗೆದುಕೊಂಡ ಮಹಾನುಭಾವರು. ಪಾಳೆಗಾರಿಕೆ ಪದ್ದತಿಯ ಪಳೆಯುಳಿಕೆಯಂತಿರುವ ಇವರು ತಮ್ಮದೇ ಹೆಸರಿನಲ್ಲಿ ಚಾನಲ್ ತೆರೆದು ವ್ಯಕ್ತಿಪೂಜೆ ಮಾಡಿಸಿಕೊಂಡವರು. ಅಂತಹ ಚಾನಲ್ ’ಭ್ರಷ್ಟಾಚಾರದ ವಿರುದ್ಧ ಜನಶ್ರೀ ಅಭಿಯಾನ’ ಎಂದು ಹಾಕಿಕೊಂಡರೆ ಅದಕ್ಕಿಂತ ದೊಡ್ಡ ವ್ಯಂಗ್ಯ ಇನ್ನೊಂದಿರಬಹುದೇ? ಇಂದು ಪ್ರೀಡಂ ಪಾರ್ಕಿನಲ್ಲಿ ಧರಣಿ ಕುಳಿತಿರುವ ಜ್ನಾನಪೀಠ ಪ್ರಶಸ್ತಿ ವಿಜೇತರಾದ ಯು.ಆರ್. ಅನಂತಮೂರ್ತಿಯವರು, ’ಗಣಿ ಧಣಿಗಳ ಚಾನಲ್ ಒಂದಿದೆ. ಅದಕ್ಕೆ ನಾನು ಮಾತಾಡುವುದಿಲ್ಲ’ ಎಂದು ಲೈವ್ ಟೆಲಿಕಾಸ್ಟ್ ನಲ್ಲಿ ಹೇಳಿದರು. ಅಂತಹ ಧಿಕ್ಕಾರದ ಧ್ವನಿ ಜನಸಾಮಾನ್ಯರಿಂದಲೂ ಬರಬೇಕಾಗಿದೆ.

ಕನ್ನಡ ಪತ್ರಿಕೋಧ್ಯಮ ನಮಗೆ ಸುದ್ದಿಗಳನ್ನಷ್ಟೇ ನೀಡಲಿ. ಅದರ ವ್ಯಾಖ್ಯಾನ ಬೇಡ. ಸುದ್ದಿಯ ಹಿಂದಿನ ಸುದ್ದಿಯನ್ನು ನಾವು ಅರ್ಥ ಮಾಡಿಕೊಳ್ಳುತ್ತವೆ. ನಿಜ, ದೃಶ್ಯ ಮತ್ತು ಪ್ರಿಂಟ್ ಮೀಡಿಯಾಗಳು ಬ್ರಷ್ಟಾಚಾರ ವಿರುದ್ಧ ಆಂದೋಲನಕ್ಕೆ ವ್ಯಾಪಕ ಪ್ರಚಾರ ನೀಡುತ್ತಿವೆ. ಆದರೆ ಅದು ಅವರ ಉದ್ಯೋಗದ ಒಂದು ಭಾಗ ಎಂಬುದನ್ನು ನಾವು ಮರೆಯಬಾರದು. ನಾಳೆ ಇದಕ್ಕಿಂತ ರೋಚಕವಾದ ಘಟನೆಯೊಂದು ದೊರೆತರೆ ಮೀಡಿಯಾದ ಗಮನ ಅತ್ತ ಹೋಗುತ್ತದೆ. ಆದರೆ ಆಂದೋಲನ ಮುಂದುವರೆಯುತ್ತದೆ.

ನಮ್ಮ ಯುವಕರಿಗೆ ಕನಸುಗಳಿವೆ; ಆದರ್ಶಗಳಿವೆ; ಬ್ರಷ್ಟಾಚಾರ ಮುಕ್ತ ದೇಶ ಕಟ್ಟುವ ಹುಮ್ಮಸಿದೆ ಎಂಬುದು ಜಂತರ್ ಮಂತರ್ ನತ್ತ ಹರಿದು ಬರುತ್ತಿರುವ ವಿದ್ಯಾರ್ಥಿ ವೃಂದವನ್ನು ನೋಡಿದರೆ ಗೊತ್ತಾಗುತ್ತದೆ. ದೇಶದಾದ್ಯಂತ ಮತ್ತು ಹೊರದೇಶಗಳಲ್ಲಿರುವ ಯುವವೃಂದ ಈ ಆಂದೋಲನಕ್ಕೆ ಪೂರಕ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿರುವ ರೀತಿ ನೋಡಿದರೆ ರೋಮಾಂಚನವಾಗುತ್ತಿದೆ. ನಮ್ಮ ಯುವ ಜನಾಂಗ ಸ್ವಕೇಂದ್ರಿತ ವ್ಯಕ್ತಿತ್ವನ್ ಹೊಂದಿದ್ದಾರೆ.ಅವರಲ್ಲಿ ಸಾಮಾಜಿಕ ಹೊಣೆಗಾರಿಕೆ ಇಲ್ಲಾ ಎನ್ನುತ್ತಿದ್ದವರಿಗೆಲಾ ಅವರೀಗ ತಮ್ಮ ನಡವಳಿಕೆಗಳಿಂದಲೇ ಸೂಕ್ತ ಉತ್ತರ ಕೊಡುತ್ತಿದ್ದಾರೆ. ಅವರಿಗೆ ನಾಯಕತ್ವದ ಕೊರತೆಯಿತ್ತು; ಮಾರ್ಗದರ್ಶಕರು ಬೇಕಾಗಿತ್ತು. ಅವರಿಗೆ ಸಮರ್ಥ ಗುರು ಸಿಕ್ಕಿದ.

ಸಮಾಜದ ಕೆಳಸ್ತರದಲ್ಲಿ. ಮಧ್ಯಮವರ್ಗದಲ್ಲಿ ಕುದಿಯುವ ಅಸಹನೆಯಿತ್ತು. ಅದು ಅಂಡರ್ ಕರೆಂಟ್ ನಂತೆ ಒಳಗೊಳಗೆ ಪ್ರವಾಹಿಸುತ್ತಿತ್ತು. ಅದಕ್ಕೆ ಹಜಾರೆ ಕಿಡಿ ತಾಗಿಸಿದರು. ಅದೀಗ ಮೆಲ್ಪದರಕ್ಕೆ ಬಂದಿದೆ. ಸ್ಫೋಟಗೊಳ್ಳುವ ಹಂತ ತಲುಪಿದೆ. ಅದನ್ನು ತಣಿಸದಿದ್ದರೆ ಖಂಡಿತವಾಗಿಯೂ ಅದು ಕಾಡ್ಗಿಚ್ಚಿನಂತೆ ಹಬ್ಬಿ ಸಿಕ್ಕಿದ್ದೆಲ್ಲವನ್ನೂ ಆಪೋಶನ ತೆಗೆದುಕೊಳ್ಳಬಹುದು. ನಮ್ಮ ಕಣ್ಣ ಮುಂದೆ ಈಜಿಪ್ಟ್, ಲಿಬಿಯಾಗಳ ಉದಾಹರಣೆಯಿದೆ.

ತುರ್ತುಪರಿಸ್ಥಿತಿಯ ನಂತರ ಇಡೀ ದೇಶವನ್ನು ಒಂದಾಗಿ ಬೆಸೆಯುವ ಯಾವ ಆಂದೋಲನವೂ ನಡೆದಿರಲಿಲ್ಲ. ಜಾಗತೀಕರಣದ ಮುಕ್ತ ಆರ್ಥಿಕತೆಗೆ ತೆರೆದುಕೊಂಡ ನಂತರವಂತೂ ಎಲ್ಲರೂ ಹಣದ ಹಿಂದೆ ಓಡತೋಡಗಿದರು. ಹೇಗಾದರೂ ಸೇರಿ ಆಸ್ತಿ ಸಂಪಾದಿಸುವುದು, ದುಡ್ಡು ಮಾಡುವುದೇ ಮುಖ್ಯವೆನಿಸತೊಡಗಿತು.ಇಂಥ ಸ್ಥಿತಿಯಲ್ಲಿ ಜನಾಂದೋಲನ ಸಾಧ್ಯವೇ? ಸಾಮಾಜಿಕ ಸಮಸ್ಯೆಯೊಂದು ಭಾರತವನ್ನು ಮತ್ತೆ ಒಂದಾಗಿ ಬೆಸೆದು ಹೋರಾಟಕ್ಕೆ ಅಣಿಗೊಳಿಸಲಲು ಸಾಧ್ಯವೇ? ಎಂದು ಅಂದುಕೊಳ್ಳುವ ಹೊತ್ತಿನಲ್ಲೇ ಗಾಂಧೀವಾದಿ ಅಣ್ಣಾಹಜಾರೆ ದೇವದೂತನಂತೆ ಅವತರಿಸಿದ್ದಾರೆ.

ಇಂದು ಇಡೀ ದೇಶ ಅವರತ್ತ ನೋಡುತ್ತಿದೆ. ಯುವ ಜನಾಂಗ ಅವರೆಡೆಗೆ ಸ್ವಯಂ ಪ್ರೇರಿತರಾಗಿ ಹರಿದು ಬರುತ್ತಿದೆ. ಜನಾಂದೋಲನಕ್ಕೆ ಚಾಲನೆ ದೊರೆತಿದೆ. ಒಂದು ಒಳ್ಳೆಯ ಉದ್ದೇಶಕ್ಕಾಗಿ ಜನ ಒಟ್ಟಾಗುತ್ತಿದ್ದಾರೆ. ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಪ್ರತಿಭಟನಾ ಧರಣಿಯಲ್ಲಿ ನಾನೂ ಭಾಗಿಯಾಗುತ್ತಿದ್ದೇನೆ.

ಪ್ರಜ್ನಾವಂತ ನಾಗರಿಕ ಸಮೂಹ, ಸಾಹಿತಿ-ಕಲಾವಿದರು, ಸಂಸ್ಕೃತಿ ಚಿಂತಕರು, ನಾಟಕ ರಂಗ, ಸಿನೇಮಾಕ್ಷೇತ್ರ, ಪ್ರಗತಿಪರ ಸಂಘಟನೆಗಳು, ವಿದ್ಯಾರ್ಥಿ ಸಮೂಹ, ಐಟಿ-ಬಿಟಿ ಸೇರಿದಂತೆ ವಿವಿಧ ಉದ್ಯೋಗಗಳಲ್ಲಿ ತೊಡಗಿಕೊಂಡವರೆಲ್ಲಾ ಅಣ್ಣಾಹಜಾರೆಯವರ ಭ್ರಷ್ಟಾಚಾರ ವಿರೋಧಿ ಅಂದೋಲನಕ್ಕೆ ಬೆಂಬಲ ಸೂಚಿಸಿದ್ದಾರೆ. ಅದು ತೋರಿಕೆಯ ಬೆಂಬಲ ಅಲ್ಲ ಎಂಬುದು ಸತ್ಯಾಗ್ರಹದ ನಾಲ್ಕನೆಯ ದಿನವಾದ ಇಂದು ನಿಚ್ಚಳವಾಗಿ ಗೊತ್ತಾಗುತ್ತಲಿದೆ.

ಈ ಆಂದೋಲನ ತಾರ್ಕಿಕ ಅಂತ್ಯವನ್ನು ಕಾಣುವಂತಾಗಲಿ

ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು.

Friday, March 18, 2011

’ರಿಯಾಲಿಟಿ ಶೋ’ಗಳ ವೈನೋದಿಕ ಹಿಂಸೆ

[ಬಾಗಲಕೋಟೆ ಜಿಲ್ಲೆಯ ಕೆರಕಲ್ ಮಟ್ಟಿ ಹಳ್ಳಿಯಲ್ಲಿ ೬ ವರ್ಷದ ಬಾಲಕನನ್ನು ಪ್ಯ್ಯಾಟೆ ಹುಡುಗಿಯರು ಚಡ್ಡಿ ಬಿಚ್ಚಿ ಅಹ್ಲೀಲವಾಗಿ ಲೇವಡಿ ಮಾಡಿದ್ದು ಅಂತರ್ಜಾಲದಲ್ಲಿ ಚರ್ಚೆಯಾಗುತ್ತಿದೆ .ಸುವರ್ಣ ಚಾನಲ್ ಗಾಗಿ ಚಿತ್ರಿಕರಿಸಲಾಗುತ್ತಿದ್ದ ಈ ರಿಯಾಲಿಟಿ ಶೋ ಮುಗ್ಧ ಮನಸ್ಸಿನ ಮೇಲಾಗುತ್ತಿರುವ ನಗರ ಸಂಸ್ಕೃತಿಯ ದಾಳಿ ಎಂದೇ ನಾನು ಪರಿಗಣಿಸುತ್ತೇನೆ.
ಕಳೆದ ವರ್ಷ ಸೆಪ್ಟಂಬರದಲ್ಲಿ ನಾನು ’ರಿಯಾಲಿಟಿ ಶೋಗಳಲ್ಲಿ ವೈನೋದಿಕ ಹಿಂಸೆ’ ಎಂಬ ಲೇಖನ ಬ್ಲಾಗಿಗೆ ಪೋಸ್ಟ್ ಮಾಡಿದ್ದೆ. ಅದು ಈಗಲೂ ಪ್ರಸ್ತುತವಾಗಬಹುದೆಂದು ಮತ್ತೆ ಪೋಸ್ಟ್ ಮಾಡುತ್ತಿದ್ದೇನೆ ]


ಇಪ್ಪತ್ತು ವರ್ಷಗಳ ಹಿಂದಿನ ಸಮಾಚಾರ; ’ಮನ್ವಂತರ’ ಎಂಬ ರಾಜಕೀಯ ವಾರಪತ್ರಿಕೆಯ ಮುಖಾಂತರ ನಾನು ಪತ್ರಿಕಾರಂಗಕ್ಕೆ ಅಡಿಯಿಟ್ಟೆ. ಆ ಪತ್ರಿಕೆಯ ಸಹ ಪ್ರಕಟಣಾ ಮಾಸಪತ್ರಿಕೆಯೊಂದಿತ್ತು. ಅದರ ಹೆಸರು ’ಸುರತಿ’. ಮಾರುಕಟ್ಟೆಯಲ್ಲಿ ಅದಕ್ಕೆ ಪೈಪೋಟಿ ನೀಡುತ್ತಿರುವ ಇನ್ನೊಂದು ಮಾಸಪತ್ರಿಕೆಯಿತ್ತು. ಅದರ ಹೆಸರು ’ರತಿವಿಜ್ನಾನ’. ಸರ್ಕ್ಯೂಲೇಶನಿನಲ್ಲೂ ಪರಸ್ಪರ ಪೈಪೋಟಿ ನೀಡುತ್ತಿದ್ದ ಆ ಪತ್ರಿಕೆಗಳ ಒಟ್ಟು ಪ್ರಸರಣ ಸಂಖ್ಯೆ ಐದು ಲಕ್ಷ ದಾಟಿ ಹೋಗುತ್ತಿತ್ತು.

ಪ್ರಸರಣದ ದೃಷ್ಟಿಯಿಂದ ನೋಡಿದರೆ ಅವೆರಡು ಪತ್ರಿಕೆಗಳು ಜನಪ್ರಿಯವಾದ ಮಾಸಪತ್ರಿಕೆಗಳು. ಆದರೆ ಅವು ಮನುಷ್ಯನ ಬೇಸಿಕ್ ಇನ್ಸ್ಟಿಂಗ್ಟ್ ಆದ ಲೈಂಗಿಕ ಕುತೂಹಲವನ್ನು, ತಣಿಸುವ, ಕೆರಳಿಸುವ ಪುಸ್ತಕಗಳು ಅಷ್ಟೆ. ’ಸೆಗಣಿಯಲ್ಲಿ ಸಾವಿರ, ಮಧ್ಯಾಹ್ನಕ್ಕೆ ಲಯ’ ಎಂಬಂತೆ ಅದರಿಂದಾಚೆಗೆ ಅವುಗಳಿಗೆ ಪ್ರತ್ಯೇಕ ಐಡೆಂಟಿಟಿ ಇರಲಿಲ್ಲ.

ಅದು ಮುದ್ರಣ ಮಾಧ್ಯಮದ ಸಾರ್ವಭೌಮತ್ವದ ಕಾಲಘಟ್ಟ. ಈಗ ಏನಿದ್ದರೂ ದೃಶ್ಯ ಮಾಧ್ಯಮದ ಯುಗ. ಸರ್ಕ್ಯೂಲೇಷನ್ ಎಂಬುದು ಹಿಂದಕ್ಕೆ ಸರಿದು ಟಿ.ಆರ್.ಪಿ ಎಂಬ ಭೂತ ಟಿ.ವಿಯನ್ನು ಆಳುತ್ತಿರುವ ಕಾಲ. ಇಲ್ಲೂ ಅದೇ ಟೆಕ್ನಿಕ್; ಮನುಷ್ಯನ ಮೂಲಭೂತ ಕಾಮನೆಗಳನ್ನು ತಣಿಸುವುದು. ಮನುಷ್ಯ ಮೂಲತಃ ಕ್ರೂರಿ. ಆತ ಹಿಂಸ್ರಾ ಪಶು. ಆತನಲ್ಲಿರುವ ಆಕ್ರಮಣಶೀಲತೆ ಸೂಕ್ತ ಸಂದರ್ಭಕ್ಕಾಗಿ ಹೊಂಚು ಹಾಕುತ್ತಿರುತ್ತದೆ.

ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಟಿ.ವಿ ಧಾರಾವಾಹಿಗಳನ್ನೇ ನೋಡಿ; ಟಿ,ಅರ್.ಪಿ ಗ್ರಾಪ್ ಉರ್ಧ್ವಮುಖಿಯಾಗಿ ಸಾಗಿದ್ದು, ಸಾಗುತ್ತಿರುವುದು; ಸಚ್ ಕಾ ಸಾಮ್ನ್, ಇಮೋಷನಲ್ ಅತ್ಯಾಚಾರ್, ಕನ್ನಡದ ಹಳ್ಳಿಹೈದ ಪ್ಯಾಟೆಗೆ ಬಂದ...ಮುಂತಾದ ಭಾವಕೋಶವನ್ನು ಕಲುಷಿತಗೊಳಿಸುವ ದಾರಾವಾಹಿಗಳಿಗೆ ಮಾತ್ರ. ಇದರ ಜೊತೆಗೆ ಕೃತ್ರಿಮತೆಯನ್ನೇ ಢಾಳಾಗಿ ತೋರಿಸುವ ಸ್ವಯಂವರದ ಧಾರಾವಾಹಿಗಳು, ಖಾಸಗಿ ಬದುಕನ್ನು ನಾಟಕಿಯವಾಗಿ ರಂಗದ ಮೇಲೆ ತಂದು ಸಾರ್ವಜನಿಕರ ಬಾಯಿಗೆ ಎಲೆಯಡಿಕೆಯಾಗಿಸುವ ಕಥೆಯಲ್ಲ ಜೀವನಗಳು; ಬದುಕು ಜಟಕಾ ಬಂಡಿಗಳು. ಸಾವಿನಾಚೆಗೆ ಏನಿದೆ ಎಂಬ ಮನುಷ್ಯನ ಅನಾದಿ ಕಾಲದ ಜಿಜ್ನಾಸೆಯನ್ನು, ಸಹಜ ಕುತೂಹಲವನ್ನು ಮಾರುಕಟ್ಟೆಯ ಮೌಲ್ಯಗಳಿಗೆ ಬಾಗಿಸುತ್ತಿರುವ ಜನ್ಮಾಂತರಗಳು, ಹೀಗೇ ಉಂಟುಗಳು..!

ಟಿ.ಅರ್.ಪಿ ಗ್ರಾಪ್ ಮೇಲೆರಿದಂತೆಲ್ಲಾ ಚಾನಲ್ ಗಳಿಗೆ ಅಡ್ ರೆವಿನ್ಯು ಜಾಸ್ತಿಯಾಗುತ್ತದೆ. ಟಿ.ಅರ್.ಪಿ ಅಂದರೆ ಟಾರ್ಗೆಟ್ ರೇಟಿಂಗ್ ಪಾಯಿಂಟ್. ಇದು ಜನಪ್ರಿಯ ಟಿ.ವಿ ಪ್ರೋಗ್ರಾಮ್ ಗಳ ಪಟ್ಟಿಯನ್ನು ಕೊಡುತ್ತದೆ. ಕನ್ನಡದಲ್ಲಿ ಪ್ರತಿ ಬುದವಾರದಂದು ಈ ಪಟ್ಟಿ ಬಿಡುಗಡೆಯಾಗುತ್ತದೆ. ಹಾಗಾಗಿ ವಾರಕೊಮ್ಮೆ ಟಿ.ವಿ ನಿರ್ಮಾಪಕರ ಎದೆಬಡಿತ ಏರುಪೇರಾಗುತ್ತದೆ!. ಯಾಕೆಂದರೆ ರೇಟಿಂಗ್ ಇಲ್ಲ ಎಂಬ ಕಾರಣದಿಂದಾಗೆ ಹಲವು ಸದಭಿರುಚಿಯ ಕಾರ್ಯಕ್ರಮಗಳು ವೈಂಡ್ ಅಫ್ ಆದ ಉದಾಹರಣೆ ಟಿ.ವಿ ಇತಿಹಾಸಕ್ಕಿದೆ.

ಟಿ.ಅರ್.ಪಿಯನ್ನು ಯಾರು ನಿರ್ಧರಿಸುತ್ತಾರೆ? ವಿಕ್ಷಕರು. ಆದರೆ ಎಲ್ಲಾ ವಿಕ್ಷಕರಲ್ಲ. ಆಯ್ದ ವೀಕ್ಷಕರು. ಅದರ ನಿರ್ವಹಣೆಯನ್ನು ಏಜನ್ಸಿಯೊಂದು ಮಾಡುತ್ತದೆ. ಅವರು ಆಯ್ದ ಕೆಲವರ ಮನೆಗಳಲ್ಲಿ ’ಪೀಪಲ್ಸ್ ಮೀಟರ್’ ಎಂಬ ಉಪಕರಣವೊಂದನ್ನು ಅಳವಡಿಸುತ್ತಾರೆ. ಆ ಮನೆಯವರು ಯಾವ ಚಾನಲ್, ಯಾವ ಪ್ರೋಗ್ರಾಮನ್ನು ಎಷ್ಟೊತ್ತು ನೋಡುತ್ತಾರೆ ಎಂಬುದರ ಮೇಲೆ ಕಾರ್ಯಕ್ರಮಗಳ ಜನಪ್ರಿಯತೆಯನ್ನು ಏಜನ್ಸಿ ಸಂಯೋಜಿಸುತ್ತದೆ. ಅದೇ ಟಿ.ಅರ್.ಪಿ. ಆದರೆ ಅದರ ನಿಖರತೆಯ ಬಗ್ಗೆಯೇ ಈಗೀಗ ಸಂಶಯ ವ್ಯಕ್ತವಾಗುತ್ತಿದೆ.

ಕರ್ನಾಟಕದಲ್ಲಿ ಬೆಂಗಳೂರನ್ನು ಹೊರತುಪಡಿಸಿ ಒಟ್ಟು ೮ ಟಿ.ಅರ್.ಪಿ ಸೆಂಟರ್ ಗಳಿವೆ.ಅದನ್ನು ಟಿ.ವಿ ಭಾಷೆಯಲ್ಲಿ ಅರ್.ಒ.ಕೆ ಎಂದು ಕರೆಯುತ್ತಾರೆ. ಅಂದರೆ ರೆಸ್ಟ್ ಅಫ್ ಕರ್ನಾಟಕ. ಅವು ಮೈಸೂರು, ಮಂಗಳೂರು, ದಾವಣಗೆರೆ, ಹುಬ್ಬಳಿ, ಗದಗ, ಬೆಳಗಾವಿ, ಗುಲ್ಬರ್ಗಾ ಮತ್ತು ರಾಯಚೂರು. ಜಾಹಿರಾತುದಾರರು ಈ ಸೆಂಟರ್ ಗಳಿಗಿಂತಲೂ ಬೆಂಗಳೂರಿಗೇ ಹೆಚ್ಚು ಗಮನ ಕೊಡುತ್ತಾರೆ. ಯಾಕೆಂದರೆ ಬೆಂಗಳೂರಲ್ಲಿ ಹೆಚ್ಚು ದುಡ್ಡು ಓಡಾಡುತ್ತದೆ. ಇಲ್ಲಿಯ ಜನರ ಖರೀದಿ ಶಕ್ತಿ ಜಾಸ್ತಿ ಎಂಬುದು ಅವರ ತರ್ಕ. ಹಾಗಾಗಿ ಈ ನಗರವೊಂದರಲ್ಲೇ ಸುಮಾರು ೧೮೦ ಮನೆಗಳಲ್ಲಿ ಟಿ.ಅರ್.ಪಿ ಮಾಪನವಾದ ’ಪೀಪಲ್ಸ್ ಮೀಟರ್’ ಗಳನ್ನು ಅಳವಡಿಸಲಾಗಿದೆ.

ಇದರರ್ಥ ಇಷ್ಟೆ; ಟಿ.ವಿ ಮಾಧ್ಯಮದವರ ಲೆಕ್ಕಾಚಾರದಲ್ಲಿ ಗ್ರಾಮಾಂತರ ಪ್ರದೇಶದ, ಬಹುಸಂಖ್ಯಾತ ಜನರು ಟಿ.ವಿ ವೀಕ್ಷಕರೇ ಅಲ್ಲ. ಅಡ್ ರೆವಿನ್ಯೂ ತರುವ ಟಿ.ಅರ್.ಪಿ ಸೆಂಟರ್ ನ ಜನರಿಗಾಗಿ ಅವರು ಕಾರ್ಯಕ್ರಮವನ್ನು ತಯಾರಿಸಬೇಕು. ಅಂದರೆ ಆಧುನಿಕ ಮನೋಭಾವದ, ಉಳ್ಳವರ ಮನೋರಂಜನೆಗಾಗಿ ಕಾರ್ಯಕ್ರಮ ಹಣೆಯಬೇಕು. ನಿಜಕ್ಕೂ ಅದೊಂದು ಸವಾಲು. ಸಾಹಸ, ಹಾಸ್ಯ ಮತ್ತು ಭಾವುಕತೆಯ ಹದವಾದ ಮಿಶ್ರಣದ ಕಾರ್ಯಕ್ರಮಗಳು ಎಲ್ಲಾ ವರ್ಗದ ಪ್ರೇಕ್ಷಕರನ್ನು ಸೆಳೆಯುತ್ತದೆ. ಆದರ ತಯಾರಿಕೆಗೆ ಶ್ರಮ ಮತ್ತು ಪ್ರತಿಭೆ ಬೇಕು. ಮುಖ್ಯವಾಗಿ ಹೃದಯವಂತಿಕೆ ಬೇಕು. ಅದಿಲ್ಲವಾದರೆ ಏನಾಗುತ್ತದೆ ಎಂಬುದಕ್ಕೆ ಇತ್ತೀಚೆಗೆ ಪ್ರಸಾರವಾಗುತ್ತಿರುವ ’ಹಳ್ಳಿಹೈದ ಪ್ಯಾಟೆಗೆ ಬಂದ’ ರಿಯಾಲಿಟಿ ಶೋ ಉತ್ತಮ ಉದಾಹರಣೆ.
ಇಲ್ಲಿ ಎಲ್ಲವೂ ಇದೆ. ಆದರೆ ಹೃದಯವಂತಿಕೆ ಇಲ್ಲ. ಹಳ್ಳಿಯ ಎಳೆಂಟು ಹುಡುಗರನ್ನು ಪೇಟೆಗೆ ತಂದು ಹಾಕಿದ್ದಾರೆ. ಅವರಿಗೆ ನಾಗರಿಕೆ ನಡವಳಿಕೆಗಳನ್ನು[!] ಕಲಿಸಲು ಒಬ್ಬೊಬ್ಬ ಹುಡುಗಿಯರನ್ನು ನೇಮಿಸಲಾಗಿದೆ. ಅವರ ವೇಷ ಭೂಷಣಗಳನ್ನು ನೋಡಿಯೇ ಪಾಪ ಆಹುಡುಗರು ದಂಗಾಗಿರಬೇಕು! ಅಮೇಲೆ ಶುರು ನೋಡಿ, ಅವರಿಗೆ ನಾಗರಿಕ ನಡತೆಯನ್ನು ಕಲಿಸುವ ಪಾಠಗಳು; ಮಾಲ್ ಗಳಲ್ಲಿ ಬಿಕ್ಷೆ ಬೇಡುವುದು, ಬ್ರಿಗೇಡ್ ರೋಡ್ ನಲ್ಲಿ ಹುಡುಗಿಯರ ಮೊಬೈಲ್ ನಂಬರ್ ಗಳನ್ನು ಕಲೆಕ್ಟ್ ಮಾಡುವುದು, ಇಂಗ್ಲೀಷ್ ಕಲಿಯುವುದು, ಯಾರ್ಯರನ್ನೊ ಕಾಡಿ ಬೇಡಿ ಮೆಜೆಸ್ಟಿಕ್ ತಲುಪುವುದು, ಹುಡುಗಿಯರನ್ನು ಹೊತ್ತುಕೊಂಡು ಕೆಸರಿನಲ್ಲಿ ಓಡುವುದು. ಇದೆಲ್ಲಕಿಂತಲೂ ಬೀಬತ್ಸಕರವಾದ ಇನ್ನೊಂದು ಟಾಸ್ಕ್ ಇತ್ತು, ಅತೀ ಹೆಚ್ಚು ಯಾರು ತಿನ್ನುತ್ತಾರೆ, ಕುಡಿಯುತ್ತಾರೆ ಅಂತ. ಅದರಲ್ಲಿ ಸ್ಪರ್ಧಿಗಳಿಗೆ ಗೊತ್ತಿಲ್ಲದಂತೆ ಭೇದಿ ಮಾತ್ರೆ ಹಾಕಿರ್ತಾರೆ. ಆದರೆ ಟಾಯ್ಲೆಟ್ಗೆ ಹೋದ್ರೆ ಸ್ಪರ್ಧೆಯಿಂದ ಹೊರ ಹೋಗಬೇಕಾಗುತ್ತಾದೆ. ದೇಹ ಭಾದೆಯನ್ನು ತಡೆದುಕೊಂಡು ಅವರು ಒದ್ದಾಡುವುದು ನೋಡುವಾಗ ಇದು ಅಮಾನವೀಯ ಅನ್ನಿಸಿಬಿಡುತ್ತಾದೆ. ಇನ್ನು ಆ ಹಳ್ಳಿ ಹುಡುಗರ ಜೋತೆ ಪೇಟೆ ಹುಡುಗಿಯರನ್ನು ರೆಸ್ಲಿಂಗ್ [ಕುಸ್ತಿ] ಆಡಿಸುವುದು ಖಂಡಿತವಾಗಿಯೂ ಆರೋಗ್ಯಕರ ಟಾಸ್ಕ್ ಅನ್ನಿಸುವುದಿಲ್ಲ. ಯಾವ ಮನಸ್ಥಿತಿಯಿಂದ ಅವರು ಪ್ಯಾಟೆಗೆ ಬಂದರೋ ಅದೇ ಮನಸ್ಥಿತಿಯೊಂದಿಗೆ ಅವರು ಹಳ್ಳಿಗೆ ಮರಳಲು ಸಾಧ್ಯವೇ? ಅವರ ಮುಗ್ಧತೆಯನ್ನು ನಾಶ ಮಾಡಿದ ಶಾಪ ಯಾರನ್ನು ತಟ್ಟುತ್ತದೆ?

ಇದೇ ಚಾನಲಿನ ’ಪ್ಯಾಟೆ ಹುಡ್ಗೀರ ಹಳ್ಳಿ ಲೈಪ್’ ಇದಕ್ಕೆ ಹೋಲಿಸಿದರೆ ಚೆನ್ನಾಗಿತ್ತು, ಯಾಕೆಂದರೆ ಹಳ್ಳಿಯಲ್ಲಿ ಮುಕ್ತವಾದ ವಾತಾವರಣವಿರುತ್ತದೆ. ಅವರಲ್ಲಿ ಇನ್ನೂ ಅಂತಃಕರಣ ಉಳಿದಿರುತ್ತದೆ. ಹೊರಗಿನಿಂದ ಬಂದವರನ್ನು ಕೂಡ ಅವರು ಕ್ರಮೇಣ ತಮ್ಮವರೆಂದು ಒಪ್ಪಿಕೊಂಡುಬಿಡುತ್ತಾರೆ. ನಗರದ ಜನತೆಯದು ಕವರ್ಡ್ ಮನಸ್ಥಿತಿ, ಅವರು ಯಾರನ್ನು ನಂಬಲಾರರು. ಹಳ್ಳಿ ಹುಡುಗರಿಗೆ ಮೊಬೈಲ್ ನಂಬರ್ ಕಲೆಕ್ಟ್ ಮಾಡುವುದು, ಲಿಪ್ಟ್ ಪಡೆಯುವುದು ಹಾಗಾಗಿಯೇ ತುಂಬಾ ಕಷ್ಟವಾಗಿದ್ದು. ನಾಗರಿಕ ಜನರ ಕೈಯಲ್ಲಿ ಸಿಕ್ಕು ಅವರು ಪಡುವ ಪರಿಪಾಟಲು ಕಂಡಾಗ ೨೦ ವರ್ಷಗಳ ಹಿಂದೆ ಹಳ್ಳಿಯಿಂದ ನೇರವಾಗಿ ಬೆಂಗಳೂರೆಂಬ ಮಾಯಾಂಗನೆಯ ತೆಕ್ಕೆಗೆ ಬಂದು ಬಿದ್ದ ನನ್ನದೇ ಅನುಭವ ಮರುಕಳಿಸಿದಂತಾಯಿತು. ರಾಜೇಶನೆಂಬ ಹಳ್ಳಿ ಹುಡುಗನಲ್ಲಿ ನನ್ನನ್ನು ನಾನು ಕಂಡುಕೊಂಡೆ.

ಇನ್ನು, ನಿರೂಪಕ ಅಕುಲ್ ಬಾಲಾಜಿಯ ಇಂಗೀಷ್ ಶೈಲಿಯ ಕನ್ನಡ ಉಚ್ಛಾರಣೆ ಮತ್ತು ಅವರು ಹುಡುಗಿಯರನ್ನು ಬಹುವಚನದಲ್ಲೂ ಹುಡುಗರನ್ನು ಏಕವಚನದಲ್ಲೂ ಸಂಬೋಧಿಸುವುದು. ಹುಡಿಗಿಯರಿಗೆ ಗಂಭೀರವಾಗಿ ಬಯ್ಯುವುದು,ಹುಡುಗರಿಗೆ ಅದನ್ನೇ ಗೇಲಿ ಮಾಡುತ್ತಾ ಎಚ್ಚರಿಸುವುದು ಅವರು ನಗರ ಪಕ್ಷಪಾತಿ ಎಂಬುದನ್ನು ತೋರಿಸುತ್ತದೆ. ಇನ್ನು ಸ್ಕ್ರಿಪ್ಟ್ ಮತ್ತು ವಾಯ್ಸ್ ಒವರ್ ವೈನೋದಿಕ ಹಿಂಸೆಗೆ ಅತ್ಯುತ್ತಮ ಉದಾಹರಣೆ. ಅವಕಾಶ ಸಿಕ್ಕಾಗಲೆಲ್ಲಾ ಇಡೀ ಗ್ರಾಮೀಣ ಜನತೆಯನ್ನು, ಅವರ ನಂಬಿಕೆಗಳನ್ನು ಮತ್ತು ಅವರ ಕಪ್ಪು ವರ್ಣವನ್ನು ಲೇವಡಿ ಮಾಡಲಾಗಿದೆ. ಇದಲ್ಲದೆ ಆ ಹುಡುಗರ ಬಾಯಲ್ಲಿ ಪ್ರೀತಿ, ಪ್ರೇಮ, ಮುತ್ತು ಎಂಬ ಮಾತುಗಳನ್ನೆಲ್ಲಾ ಆಡಿಸಿ ಕಾಮನೆಗಳನ್ನು ಕೆರಳಿಸುವ ಪ್ರಯತ್ನವೂ ನಡೆಯುತ್ತಿದೆ.

ರಿಯಾಲಿಟಿ ಶೋಗಳಲ್ಲಿ ಕೆಲಸ ಮಾಡಿದ ನನ್ನ ಗೆಳತಿಯೊಬ್ಬಳು ಹೇಳುತ್ತಿದ್ದಳು; ಅಲ್ಲಿ ’ಡಿವೈಡ್ ಅಂಡ್ ರೂಲ್’ ಅಂದರೆ ಒಡೆದು ಆಳುವ ನೀತಿಯನ್ನು ಅನುಸರಿಸಲಾಗುತ್ತದೆಯೆಂದು. ಸ್ಪರ್ಧಿಗಳಲ್ಲೇ ಪೈಪೋಟಿಯನ್ನು ಹುಟ್ಟು ಹಾಕಿ ಪರಸ್ಪರ ಅಪನಂಬಿಕೆಯನ್ನು ಸೃಷ್ಟಿಸುವುದು. ಪ್ರತಿಯೊಬ್ಬರಿಗೂ ಗೆಲ್ಲುವ ತವಕ. ಹಳ್ಳಿಹೈದ....ದಲ್ಲಿ ಪ್ಯಾಟೆ ಸುಂದರಿಯರಿಗೆ ಮಾತ್ರ ಗೆಲ್ಲುವ ತವಕ .ಹೈದರಿಗೆ ಇಲ್ಲಿಂದ ತಪ್ಪಿಸಿಕೊಂಡು ಊರಿಗೆ ಓಡುವ ತುಡಿತ. ಬಹುಶಃ ಕಾರ್ಯಕ್ರಮದ ನಿಬಂಧನೆಗಳು ಮತ್ತು ಆಕರ್ಷಣೆಗಳು ಅವರನ್ನು ’ಇಲ್ಲಿರಲಾರೆ ಅಲ್ಲಿಗೆ ಪೋಗಲಾರೆ’ ಎಂದು ಕಟ್ಟಿ ಹಾಕಿರಬಹುದು.

ಹಳ್ಳಿ ಜನರ ಬಡತನ, ಅಸಹಾಯಕತೆ ಮತ್ತು ಮುಗ್ಧತೆ ಟಿ.ವಿಯಲ್ಲಿ ಮಾರಾಟದ ಸರಕಾಗುತ್ತಿದೆ. ಅದ್ದೂರಿಯ ಬಂಗಲೆಗಳಲ್ಲಿ ಕುಳಿತು, ಕುರುಕುಲು ತಿಂಡಿ ತಿನ್ನುತ್ತಾ ನಗರಗಳ ಸುಶಿಕ್ಷಿತ ಜನರು ಇದನ್ನು ಎಂಜಾಯ್ ಮಡುತ್ತಾರೆ! ಹಾಗೆಂದು ಅವರನ್ನು ಹೃದಯಹೀನರೆಂದು, ಗ್ರಾಮೀಣ ಜನರನ್ನು ಉಪೇಕ್ಷೆಸುವರೆಂದು ಅನ್ನುವ ಹಾಗಿಲ್ಲ. ಯಾಕೆಂದರೆ ಕಳೆದ ಬಾರಿ ಉತ್ತರ ಕರ್ನಾಟಕದ ಜನತೆ ನೆರೆ ಹಾವಳಿಯಿಂದ ಬದುಕು ಕಳೆದುಕೊಂಡಾಗ ಮುಖ್ಯಮಂತ್ರಿಗಳ ಜೋಳಿಗೆಗೆ ಕೋಟ್ಯಾಂತರ ರೂಪಾಯಿಗಳನ್ನು ಹಾಕಿದವರು ಇದೇ ಪೇಟೆ ಜನರು.

ಇದೇ ನಗರದ ಸೆಲೆಬ್ರಿಟಿಗಳನ್ನು ಅಚ್ಚರಿಯ ಕಣ್ಣುಗಳಿಂದ ನೋಡುತ್ತಿದ್ದ ಹಳ್ಳಿ ಜನರೆದುರು ಅವರ ಖಾಸಗಿ ಬದುಕನ್ನು ತೆರೆದಿಟ್ಟು ಮಾದರಿಗಳನ್ನು ಒಡೆಯುವ ಪ್ರಯತ್ನವೂ ಕಿರು ತೆರೆಯಲ್ಲಿ ನಿರಂತರ ನಡೆಯುತ್ತಿದೆ. ಸಾಮಾಜಿಕ ಹೊಣೆಗಾರಿಕೆಯೆಂಬುದು ದೃಶ್ಯ ಮಾಧ್ಯಮದ ನಿಘಂಟಿನಲ್ಲಿಲ್ಲದ ಪದ. ಇದೇ ಚಾನಲ್ ನವರು ಹಿಂದೆ ಸ್ವಯಂವರ ರಿಯಾಲಿಟಿ ಶೋ ಒಂದು ಮಾಡಿದ್ದರು. ಅದರಲ್ಲಿ ಭಾಗವಹಿಸಲು ವಧುಗಳು ಮುಂದೆ ಬರದಾದಾಗ ಕಿರುತೆರೆ ನಟಿಯರನ್ನೇ ಬಾಡಿಗೆ ವಧುಗಳಾಗಿ ತಂದು ವಿವಾಹಕಾಂಕ್ಷಿಗಳನ್ನು ಬೆಚ್ಚಿ ಬೀಳಿಸಿದ ಇತಿಹಾಸವೂ ಇದಕ್ಕಿದೆ.

ನಾನು ಇದನ್ನು ಬರೆಯುವ ಹೊತ್ತಿಗಾಗಲೇ ಪುತ್ತೂರಿನ ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ಮಾಧವ ಭಾವಿಕಟ್ಟೆಯವರು ’ ಹಳ್ಳಿ ಹೈದ ಪ್ಯಾಟೆಗೆ ಬಂದ’ ಕಾರ್ಯಕ್ರಮದ ಬಗ್ಗೆ ತೀವ್ರ ಅಸಮಾಧಾನಗೊಂಡು ನ್ಯಾಯಾಲಯದ ಮೊರೆ ಹೋಗಲು ಸಿದ್ಧತೆಗಳನ್ನು ಮಾಡಿಕೊಳ್ಳೊತ್ತಿದ್ದಾರೆ. ಹಳ್ಳಿ ಜನರನ್ನು ಸ್ನಾನ ಮಾಡದವರು, ತಲೆ ಬಾಚಿಕೊಳ್ಳದವರು, ಕಾಡುಜನರಂತೆ ಬದುಕುತ್ತಾರೆ ಎಂಬಂತೆ ಚಿತ್ರಿಸಲಾಗಿದೆ; ಗ್ರಾಮೀಣ ಜನರನ್ನು ಅವಮಾನಿಸಲಾಗಿದೆ ಎಂಬುದು ಅವರ ಆರೋಪ. ನಾನು ಮಾತಾಡಿಸಿದ ಬಹುತೇಕ ಜನರ ಅಭಿಪ್ರಾಯವೂ ಇದೇ ಆಗಿದೆ.


’ಹಳ್ಳಿ ಹೈದ ಪ್ಯಾಟೆಗೆ ಬಂದ’ ಎಂಬ ರಿಯಾಲಿಟಿ ಶೋದ ಕೆಲವು ಎಪಿಸೋಡುಗಳನ್ನು ನೋಡಿದೆ. ಅದು ನನಗೆ ಇಷ್ಟನ್ನೆಲಾ ಬರೆಯಲು ಪ್ರಚೋದಿಸಿತು. ಅದಕ್ಕಾಗಿ ಆ ಶೋ ದ ಕ್ರಿಯೇಟಿವ್ ಹೆಡ್ ಗೆ ನನ್ನ ಕೃತಜ್ನತೆಗಳು!

[ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ ]