
Saturday, November 5, 2011
ಹಳೆ ಕಾದಂಬರಿಯ ಹೊಸಪ್ರಶ್ನೆ-’ಸಂಸ್ಕಾರ’ ಯಾರು ಮಾಡಬೇಕು?

Wednesday, October 19, 2011
ಕಟಕಟೆಯಲ್ಲಿ ಯಡ್ಡಿ- ನೋಡಿದ್ದು, ಕಾಡಿದ್ದು

ನಿನ್ನೆ ಇಡೀ ದಿವಸ ನಮ್ಮ ರಾಜ್ಯ ರಾಜಧಾನಿಯಲ್ಲಿ ರಾಜಕೀಯ ದೊಂಬರಾಟ ನಡೆಯಿತು. ಆ ದೊಂಬರಾಟ ನಿನ್ನೆ ಆರಂಭವಾಗಿದ್ದೇನಲ್ಲ. ಎಂದೋ ಆರಂಭವಾಗಿದ್ದು ನಿನ್ನೆ ಉತ್ತುಂಗಕ್ಕೇರಿತ್ತು. ಇಂದೂ ದೊಂಬರಾಟ ಮುಂದುವರಿದಿದೆ….
ನಿನ್ನೆಯ ಪ್ರಹಸನದಲ್ಲಿ ಮೂರು ಘಟನೆಗಳು ನನ್ನ ಗಮನ ಸೆಳೆದವು. ಒಂದು ತುಮಕೂರಿನ ಸಿದ್ಧಗಂಗಾ ಮಠದ ಸ್ವಾಮಿಗಳು ಯಡಿಯೂರಪ್ಪನವರ ಆರೋಗ್ಯ ವಿಚಾರಿಸಲು ಜಯದೇವ ಹೃದ್ರೋಗ ಆಸ್ಪತ್ರೆಗೆ ಭೇಟಿ ನೀಡಿದ್ದು. ಎರಡು, ಹಿರಿಯ ರಾಜಕಾರಣಿ,ಸಮಾಜವಾದಿ ಚಿಂತಕ ಕೆ.ಎಚ್.ರಂಗನಾಥ್ ವಿಧಿವಶರಾದದ್ದು. ಇನ್ನೊಂದು, ನ್ಯಾಯಾಲಯದ ಆಣತಿಯನ್ನೇ ಅಣಕಿಸುವಂತೆ ಜಯದೇವದಿಂದ ವಿಕ್ಟೋರಿಯಾ ಆಸ್ಪತ್ರೆಗೆ ಪೇಷೆಂಟ್ ಯಡಿಯೂರಪ್ಪನವರು ಜಾರಿಕೊಂಡದ್ದು ಮತ್ತು ಅದನ್ನು ಲೈವ್ ಕಾಮೆಂಟ್ರಿಯಂತೆ ದೃಶ್ಯ ಮಾಧ್ಯಮದವರು ಬಿತ್ತರಿಸಿದ್ದು.
ಕೆ.ಎಚ್.ರಂಗನಾಥ ತೀರಿಕೊಂಡರು ಎಂದಾಗ ಅವರ ಬಗ್ಗೆ ಹಿಂದೆ ಹಿರಿಯ ಪತ್ರಕರ್ತರೊಬ್ಬರು ಹೇಳಿದ ಘಟನೆಯೊಂದು ನೆನಪಾಯಿತು..ಅದು ಅವರು ವಿಧಾನ ಸಬಾ ಅಧ್ಯಕ್ಷರಾಗಿದ್ದ ಸಮಯ. ಅವರ ಛೇಂಬರಿನಲ್ಲಿ ಇವರು ಮಾತಾಡುತ್ತಾ ಕುಳಿತ್ತಿದ್ದರಂತೆ. ಬಿಳ್ಕೊಡಲೆಂದು ಎದ್ದು ನಿಂತಾಗ ಏನೋ ತಗುಲಿ ಅವರ ಚಪ್ಪಲಿ ಕಿತ್ತು ಹೋಯಿತಂತೆ. ಹೊರಗೆಲ್ಲೋ ಹೋಗಬೇಕಾದ ಕಾರ್ಯಕ್ರಮವಿದ್ದುದರಿಂದ ಅನಿವಾರ್ಯವಾಗಿ ತಮ್ಮ ಪಿ.ಎ ಯನ್ನು ಕರೆದು ತಮಗೊಂದು ಚಪ್ಪಲಿ ತರುವಂತೆ ಹೇಳಿ ಆ ಪತ್ರಕರ್ತರನ್ನು ಇನ್ನೂ ಸ್ವಲ್ಪ ಹೊತ್ತು ತಮ್ಮಲ್ಲೇ ಉಳಿಸಿಕೊಂಡರಂತೆ. ಪಿ.ಎ ಸುಮಾರು ಎಂಟುನೂರು ರೂಪಾಯಿ ಬೆಲೆಬಾಳುವ ಚಪ್ಪಲಿಯನ್ನು ತಂದು ಅವರ ಮುಂದಿಟ್ಟಾಗ ಅವರು, ಇಂತಹ ದುಬಾರಿ ಬೆಲೆಯ ಚಪ್ಪಲಿಯನ್ಯಾಕೆ ತಂದೆಯೆಂದು ಅವನಿಗೆ ಸಿಕ್ಕಾಪಟ್ಟೆ ಬೈದರಂತೆ.ಬೈದದ್ದು ಮಾತ್ರವಲ್ಲಾ ಶಿವಾಜಿನಗರಕ್ಕೆ ಕಳುಹಿಸಿ ೭೦ ರೂಪಾಯಿಯ ಚಪ್ಪಲಿಯನ್ನು ತರಿಸಿಕೊಂಡರಂತೆ. ಅಂತಹ ಸರಳ ಜೀವಿಯನ್ನು ನಾಳೆ ಆಕ್ರಮ ಸಂಪತ್ತು ಗಳಿಕೆಯ ಹಿನ್ನೆಲೆಯಲ್ಲಿ ನ್ಯಾಯಾಲಯದ ವಿಚಾರಣೆಯನ್ನೆದುರಿಸಲು ಕರ್ನಾಟಕಕ್ಕೆ ಆಗಮಿಸುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಳ ಸಂಗ್ರಹದಲ್ಲಿದ್ದ ೭೫೦ ಜೊತೆ ಚಪ್ಪಲಿಯನ್ನೊಮ್ಮೆ ಹೋಲಿಸಿ ನೋಡಿಕೊಳ್ಳಿ!
ಸಮಾಜವಾದಿ ಚಿಂತನೆಯ ಹಿನ್ನೆಲೆಯಿದ್ದ, ದಲಿತರ ಗಟ್ಟಿ ಧ್ವನಿಯ, ನಿಷ್ಠುರವಾದಿ ಕೆ.ಎಚ್. ಕೊನೆಯ ತನಕ ತೀರಾ ಸರಳವಾಗಿಯೇ ಬದುಕಿದರು. ಬೆಂಗಳೂರಿನ ನವರಂಗ್ ಪಕ್ಕದ ಪ್ರಕಾಶ್ ನಗರದಲ್ಲಿ ಪುಟ್ಟ ಮನೆಯೊಂದರಲ್ಲಿ ಬಾಳಿ ಬದುಕಿದ ಈ ಹಿರಿಯ ರಾಜಕಾರಣಿಯ ಅಂತಿಮ ದರ್ಶನಕ್ಕೆ ಯಾವ ಸ್ವಾಮೀಜಿಯೂ ಬರಲಿಲ್ಲ. ಆದರೆ ಅದೇ ಸಮಯಕ್ಕೆ ಜಯದೇವ ಆಸ್ಪತೆಯಲ್ಲಿ ಪವಡಿಸಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ನೋಡಲು ತುಮಕೂರಿನ ಸಿದ್ಧಗಂಗಾ ಮಠಾದೀಶ ಶಿವಕುಮಾರ ಸ್ವಾಮೀಜಿ ಆಗಮಿಸಿದ್ದರು!
ಇದೇ ಸಂದರ್ಭದಲ್ಲಿ ಪತ್ರಕರ್ತರೊಭ್ಭರು ಹೇಳಿದ ಮಾತೊಂದು ನೆನಪಾಗುತ್ತಿದೆ; ’ಬೀದರಿನಲ್ಲಿ ಲಿಂಗ ಸ್ವಲ್ಪ ಅಲ್ಲಾಡಿದರೂ ಸಾಕು ಚಾಮರಾಜ ನಗರದಲ್ಲಿನ ಪಾಣಿಪೇಠ ಅದಕ್ಕೆ ಪ್ರತಿಕ್ರಿಯಿಸುತ್ತೆ’ ಇದನ್ನು ವಿವರಿಸಿ ಹೇಳಬೇಕಿಲ್ಲ ಅನ್ನುತ್ತೆ. ಹೇಳಲೇ ಬೇಕಾದರೆ ಮೂರು ವರ್ಷದ ಹಿಂದೆ ಮೈಸೂರು ದಸರಾ ಉದ್ಘಾಟನೆಗೆ ಆಗ ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿಯವರು ಸಿದ್ದಗಂಗಾ ಶ್ರೀಗಳನ್ನು ಕೇಳಿಕೊಂಡಿದ್ದರು. ಅವರು ಕೂಡಾ ಒಪ್ಪಿಕೊಂಡಿದ್ದರು. ಆದರೆ ಯಡಿಯೂರಪ್ಪನವರಿಗೆ ಮಾತು ಕೊಟ್ಟಂತೆ ಕುಮಾರ ಸ್ವಾಮಿ ಅಧಿಕಾರ ಹಸ್ತಾಂತರಿಸಲಿಲ್ಲ. ಸಿಟ್ಟುಗೊಂಡ ಸ್ವಾಮಿಗಳು ಉದ್ಗಾಟನೆಗೆ ಬರಲಿಲ್ಲ!
ಈಗಲೂ ಹೇಗಾದರೂ ಮಾಡಿ ಯಡಿಯೂರಪ್ಪನವರನ್ನು ಜೈಲಿನಿಂದ ಹೊರತರಲು ಲಿಂಗಾಯಿತ ಸಮುದಾಯ, ಮಠಮಾನ್ಯರು,ಪತ್ರಕರ್ತರಾದಿಯಾಗಿ ಎಲ್ಲರೂ ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ.
ಇನ್ನು ನಿನ್ನೆ ದೃಶ್ಯ ಮಾಧ್ಯಮದವರ ವರದಿಗಾರಿಕೆ ಹೇಗಿತ್ತೆಂದರೆ ಅವರೆಲ್ಲಾ ಕ್ರಿಕೆಟ್ ಕಾಮೆಂಟ್ರಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆನೋ ಎಂದು ಭಾಸವಾಗುತ್ತಿತ್ತು. ಆದರೆ ತಮ್ಮ ವೃತ್ತಿ ಭಾಂದವರಲ್ಲೇ ಹಲವರ ಹೆಸರುಗಳು ಲೋಕಾಯುಕ್ತ ಯು.ವಿ.ಸಿಂಗ್ ವರದಿಯಲ್ಲಿ ಉಲ್ಲೇಖಿಸಲ್ಪಟ್ಟಿದೆ. ನಾಳೆ ಅವರನೇನಾದರೂ ವಿಚಾರಣೆಗೆ ಒಳಪಡಿಸಿದರೆ ಇದೇ ಉತ್ಸಾಹದಿಂದ ಇವರು ವರದಿ ಮಾಡಬಲ್ಲರೇ?
ಬ್ರಷ್ಟಾಚಾರ. ಸ್ವಜನ ಪಕ್ಷಪಾತವೆಂಬುದು ಯಾವ ಕ್ಷೇತ್ರವನ್ನೂ ಬಿಟ್ಟಿಲ್ಲ.
ನಿನ್ನೆಯವರೆಗೆ ಯಡ್ಡಿಯ ವಿರುದ್ಧ ದಾಖಲೆಗಳ ಮೇಲೆ ದಾಖಲೆಗಳನ್ನು ಬಿಡುಗಡೆ ಮಾಡುತ್ತಿದ್ದ ಕುಮಾರಸ್ವಾಮಿ ನಿನ್ನೆ ಮದ್ಯರಾತ್ರಿ ಕಳ್ಳರಂತೆ ಯಡ್ಡಿಯನ್ನು ಬೇಟಿ ಮಾಡಿದ್ದಾರೆ. ಅಲ್ಲಿ ಅವರು ಯಾವ ತಂತ್ರ ಹಣೆದರೋ ಗೊತ್ತಿಲ್ಲ. ರಾಜಕೀಯದಲ್ಲಿ ಯಾರೂ ವಿರೋಧಿಗಳಲ್ಲ!
ಇಂದಿನ ಕಥೆ ಕೇಳಿ, ಅದು ಇನ್ನೂ ಸ್ವಾರಸ್ಯಕರವಾಗಿದೆ. ಕುಮಾರ ಸ್ವಾಮಿಯ ಮೇಲೆ ಐ.ಪಿ.ಸಿ ೪೯೪ರ ಅಡಿಯಲ್ಲಿ ದಿಪತ್ನಿತ್ವದ ಆರೋಪದಡಿಯಲ್ಲಿ ಕೇಸ್ ದಾಖಲಾಗಿದೆ. ನಗರದ ಲಾಯರ್ ಒಬ್ಬರು, ಮೊದಲನೇ ಹೆಂಡತಿಯಿರುವಾಗಲೇ ಇನ್ನೊಂದು ಮದುವೆಯಾಗಿರುವ ಅಪರಾಧಕ್ಕಾಗಿ ಕುಮಾರಸ್ವಾಮಿಯವರ ಸಂಸತ್ ಸ್ಥಾನವನ್ನು ಅನರ್ಹಗೊಳಿಸಬೇಕೆಂದು ಕೇಸ್ ದಾಖಲಿಸಿದ್ದಾರೆ.
ನಮ್ಮ ಗೃಹ ಸಚಿವ ಸಾಮ್ರಟ್ ಅಶೋಕ್ ಮೇಲೆ ಡಿನೋಟಿಫಿಕೇಶನ್ ಕೇಸ್ ದಾಖಲಾಗಿದೆ.
ಅಂತೂ ಬಿ.ಜೆ.ಪಿಯ ನಾಯಕರೆಲ್ಲಾ ನ್ಯಾಯಾಂಗದ ಮುಂದೆ ಕೈಕಟ್ಟಿ ನಿಲ್ಲುವ ಪ್ರಸಂಗ ಬಂದೊದಗುತ್ತಿದೆ.
ಅಂತೂ ನ್ಯಾಯಾಂಗ ಹಿಂದೆಂದೂ ಇಲ್ಲದಷ್ಟು ಕ್ರಿಯಾಶೀಲವಾಗಿದೆ. ಜನತೆ ಕಾರ್ಯಾಂಗ, ಶಾಸಕಾಂಗ,ನ್ಯಾಯಾಂಗ ಮತ್ತು ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭವಾದ ಪತ್ರಿಕಾರಂಗದ ಮೇಲೆ ಭರವಸೆಯನ್ನು ಕಳೆದುಕೊಂಡಿದ್ದರು. ಸಿನಿಕರಾಗಿದ್ದರು. ಆದರೆ ಈಗ ಅವರಲ್ಲಿ ಮತ್ತೆ ಭರವಸೆ ಮೂಡುತ್ತಿದೆ. ಅದು ಸಮೂಹ ಪ್ರಜ್ನೆಯಾಗಿ ಹೊರಹೊಮ್ಮಬೇಕು. ಅದು ಮುಂಬರುವ ಚುನಾವಣೆಯಲ್ಲಿ ಮತಗಳಾಗಿ ಹೊರಹೊಮ್ಮಬೇಕು ಹಾಗಾಗಲು ಸಾಧ್ಯವೇ? ನಮ್ಮ ಜಾತಿ ವ್ಯವಸ್ಥೆಯನ್ನು ನೋಡಿದರೆ ಆ ಬಗ್ಗೆ ಸಂಶಯಗಳಿವೆ.
ಪ್ರಗತಿಪರ ಚಳುವಳಿಗಳಿಲ್ಲ; ಹೋರಾಟಗಳಿಲ್ಲ, ಚಿಂತಕರಿಲ್ಲ, ಆದರ್ಶ ವ್ಯಕ್ತಿತ್ವಗಳಿಲ್ಲ ಒಟ್ಟಿನಲ್ಲಿ ಹೇಳಬೇಕೆಂದರೆ ಮುಂದೆ ಗುರಿಯಿಲ್ಲ, ಹಿಂದೆ ಗುರುವಿಲ್ಲ. ಅಡಿಗರು ಹೇಳಿದಂತೆ, ’ಹೆಳವನ ಹೆಗಲ ಮೇಲೆ ಕುರುಡ ಕುಳಿತ್ತಿದ್ದಾನೆ. ದಾರಿ ಸಾಗುವುದೆಂತೋ ನೋಡಬೇಕು’Monday, October 10, 2011
ಪ್ರೀತಿಯೆಂಬ ಮಾಯಾಮೃಗ

ಅವರು ಕನ್ನಡದ ಖ್ಯಾತ ಪತ್ರ್ಕರ್ತರು.ಅವರಿಗೊಬ್ಬ ಮಗನಿದ್ದ. ಆತನಿಗೆ ಆಗ ಖ್ಯಾತಿಯಲ್ಲಿದ್ದ ಚಿತ್ರನಟಿ ಮೀನಾಕ್ಷಿ ಶೇಷಾದ್ರಿಯೆಂದರೆ ಹುಚ್ಚು ಮೋಹ. ಆತ ಎಲ್ಲರೆದುರು ’ಮೀನಾಕ್ಷಿ ನನ್ನನ್ನು ಪ್ರೀತಿಸುತ್ತಿದ್ದಾಳೆ’ ಎಂದು ಹೇಳಿಕೊಳ್ಳುತ್ತಿದ್ದ. ಈಗ ತಾನೇ ಅವಳಿಗೆ ಪೋನ್ ಮಾಡಿದೆ, ಅವಳು ತನ್ನನ್ನು ಬಾಂಬೆಗೆ ಬರಹೇಳಿದ್ದಾಳೆ. ಅಂತೆಲ್ಲಾ ತನ್ನ ಸೇಹಿತರೆದುರು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ.
ಸ್ವಲ್ಪಮಟ್ಟಿಗೆ ಆತ ಅವನು ಮಾನಸಿಕ ಅಸ್ವಸ್ಥ. ಹಾಗಾಗಿ ಬೇರೆಯವರಿಗೆ ಆತ ಲೇವಡಿಯ ವಸ್ತುವಾಗಿದ್ದ. ಆತನ ಭ್ರಮಾ ಲೋಕದಲ್ಲಿ ಆತ ಮತ್ತು ಮೀನಾಕ್ಷಿ ಶೇಷಾದ್ರಿ ಪರಸ್ಪರ ಪ್ರೇಮಿಸುತ್ತಿದ್ದರು. ಆದರದು ನಿಜವಾಗುವ ಸಾಧ್ಯತೆಯೇ ಇರಲಿಲ್ಲ. ಇದನ್ನು ಆತನಿಗೆ ತಿಳಿಸಿ ಹೇಳಿದರೂ ನಂಬುವ ಸ್ಥಿತಿಯಲ್ಲಿ ಆತನಿರಲಿಲ್ಲ. ಅದು ಅವನೇ ಸೃಷ್ಟಿಸಿಕೊಂಡಿರುವ ಜಗತ್ತು.
ನನ್ನ ಗೆಳತಿಯೊಬ್ಬಳು ಒಂದು ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದಳು. ಅದೇ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ತರುಣನೊಬ್ಬ ಆಕೆಯಲ್ಲಿ ಅನುರಕ್ತನಾದ. ಆದರೆ ಅದನ್ನಾತ ಅವಳಲ್ಲಿ ಹೇಳಿಕೊಳ್ಳಲಿಲ್ಲ. ಆಕೆ ಇನ್ನ್ಯಾರನ್ನೋ ಇಷ್ಟಪಟ್ಟಳು; ಪ್ರೀತಿಸಿದಳು. ಅವರಿಬ್ಬರೂ ಜೊತೆಯಲ್ಲಿ ಓಡಾಡಲು ಶುರುಮಾಡಿದರು. ಇವನಿಗೆ ಅದನ್ನು ಸಹಿಸಲಾಗಲಿಲ್ಲ. ಆತ ಕೆಲಸ ಬಿಟ್ಟು ಇನ್ನೆಲ್ಲಿಗೋ ಹೊರಟು ಹೋದ. ಇಲ್ಲಿ ಆ ಹುಡುಗಿ ಮದುವೆಯಾದಳು. ಮಕ್ಕಳನ್ನು ಪಡೆದಳು. ಅನ್ಯೋನ್ಯ ದಾಂಪತ್ಯ ನಡೆಸುತ್ತಿದ್ದಳು.
ಒಂದು ದಿನ ಆ ಹುಡುಗನ ಬಗ್ಗೆ ಇವಳಿಗೆ ವಿವರಗಳು ದೊರಕಿದವು. ಮಧ್ಯವಯಸ್ಸನ್ನು ದಾಟುತ್ತಿರುವ ಆತ ಇನ್ನೂ ವಿವಾಹವಾಗದೇ ಕೇವಲ ಇವಳ ಆರಾಧನೆಯಲ್ಲೇ ಬದುಕು ನಡೆಸುತ್ತಿದ್ದಾನೆ ಎನ್ನುವುದು ತಿಳಿಯಿತು. ತನ್ನಿಂದಾಗಿ ಒಬ್ಬ ಒಳ್ಳೆಯ ಮನಸಿನ, ಪ್ರತಿಭಾವಂತ ಹುಡುಗನ ಬದುಕು ಹೀಗಾಯ್ತಲ್ಲಾ ಎಂದು ಆಕೆ ಈಗ ಕೊರಗುತ್ತಿದ್ದಾಳೆ ಆಕೆ ಏನೂ ಮಾಡುವ ಸ್ಥಿತಿಯಲ್ಲಿ ಇಲ್ಲ.
ಇದಕ್ಕೆಲ್ಲಾ ಯಾರು ಹೊಣೆ?
ಏಕಮುಖವಾದ ಪ್ರೀತಿಯೇ ಹಾಗೆ. ಅದು ಒಬ್ಬರ ಮನಸ್ಸಿನಲ್ಲಿ ಹುಟ್ಟಿ, ಅಲ್ಲಿಯೇ ಬೆಳೆದು ಹೆಮ್ಮರವಾಗುತ್ತದೆ. ಅವರದೇ ಭಾವನೆಯ ಜಗತ್ತಿನಲ್ಲಿ ಅವರೇ ಚಕ್ರವರ್ತಿಗಳು.
ಭೂಮಿಯ ಒಡಲಲ್ಲಿ ನೀರಿನ ಸೆಲೆ ಹೇಗೆ ಅತ್ಯಂತ ಸಹಜವಾಗಿ ಇದೆಯೋ ಹಾಗೆಯೇ ಪ್ರತಿಯೊಬ್ಬ ಮನುಷ್ಯನ ಹೃದಯಾಂತರಾಳದಲ್ಲೂ ಪ್ರೀತಿಯ ಒರತೆ ಇದ್ದೇ ಇರುತ್ತದೆ. ಅನುಕೂಲ ಪರಿಸ್ಥಿತಿಯಲ್ಲಿ ಅದು ಉಕ್ಕಿ ಹರಿಯಲಾರಂಭಿಸುತ್ತದೆ. ಹದಿಹರೆಯದ ದಿನಗಳಲ್ಲಿ ಈ ಒರತೆ ಒಸರಲು ಆರಂಭಗೊಳ್ಳುತ್ತದೆ. ಯಾರೋ ತನ್ನನ್ನು ಗಮನಿಸುತ್ತಿದ್ದಾರೆ, ಇನ್ಯಾರಿಗೋ ತಾನು ಇಷ್ಟವಾಗುತ್ತಿದ್ದೇನೆ, ಹಾಗಾಗಿ ತಾನು ಇನ್ನಷ್ಟು ಆಕರ್ಷಕವಾಗಿ ಕಾಣಬೇಕು, ತನ್ನ ನಡೆ-ನುಡಿ-ಅಭಿರುಚಿಗಳಲ್ಲಿ ಬದಲಾವಣೆಯಾಗಬೇಕು-ಎಂದೆಲ್ಲಾ ಹುಡುಗ, ಹುಡುಗಿಯರು ಭಾವಿಸಿಕೊಳ್ಳುತ್ತಾರೆ. ಕನ್ನಡಿಯ ಮುಂದೆ ದಿನದರ್ಧ ಭಾಗವನ್ನು ಕಳೆಯುವ ಕಾಲ ಇದು.
ಸಾಹಿತ್ಯದ ಪರಿಭಾಷೆಯಲ್ಲಿ ನಾರ್ಸಿಸಂ ಅಥವಾ ಆತ್ಮರತಿ ಎಂದು ಕರೆಯಿಸಿಕೊಳ್ಳುವ ಸ್ವಮೋಹಿತ ಸ್ಥಿತಿ ಇದು. ಅಂದರೆ ತನ್ನನ್ನೇ ತಾನು ಅತಿಯಾಗಿ ಪ್ರೀತಿಸಿಕೊಳ್ಳುವ ಅವಧಿ. ನಮ್ಮ ಹೆಚ್ಚಿನ ಹುಡುಗ-ಹುಡುಗಿಯರು ಏಕಮುಖವಾದ ಪ್ರೀತಿಗೆ ಬೀಳುವುದೇ ಈ ಕಾಲದಲ್ಲಿ.
ಹುಡುಗನೆದುರು ಹುಡುಗಿ ಸಮೀಪದಲ್ಲಿ ಸುಳಿದರೂ ಸಾಕು, ಅವನ ಮೈ-ಮನಸು ಆಳಿಬಿಡುತ್ತದೆ. ಕಾರಣವಿಲ್ಲದೆ ಮನಸ್ಸು ಒಮ್ಮೊಮ್ಮೆ ಖುಷಿಯಿಂದ ನಲಿದಾಡುತ್ತಿದ್ದರೆ, ಇನ್ನೊಮ್ಮೆ ಯಾವುದೋ ಸಂಕಟದಿಂದ ವಿಲವಿಲನೆ ಒದ್ದಾಡುತ್ತಿರುತ್ತದೆ. ಯಾರೋ ಒಬ್ಬರು ಪ್ರೀತಿಯಿಂದ ಮಾತಾಡಿಸಿದರೆ, ಒಂಚೂರು ನಕ್ಕು ಬಿಟ್ಟರೆ ಅವರಿಗೆ ತನ್ನಲ್ಲಿ ಆಸಕ್ತಿಯಿದೆ, ಅದು ಪ್ರೀತಿಯೇ ಇರಬೇಕು ಎಂದು ಹುಡುಗ-ಹುಡುಗಿಯರು ಭ್ರಮಿಸಿಬಿಡುತ್ತಾರೆ. ಪ್ರಪೋಸ್ ಮಾಡಿದರೆ ಹೇಗೆ ಎಂದು ಆ ಬಗ್ಗೆ ತಾಲೀಮ್ ನಡೆಸುತ್ತಾರೆ. ಕೆಲವು ಭೂಪರು ಪ್ರಪೋಸ್ ಮಾಡಿಯೂ ಬಿಡುತ್ತಾರೆ. ’ಭೂಪರು’ ಅಂತ ಹುಡುಗರ ಬಗ್ಗೆಯೇ ಯಾಕೆ ಹೇಳುತ್ತಿದ್ದೇನೆ ಎಂದರೆ, ಅವರಲ್ಲೊಂದು ಭಂಡ ಧೈರ್ಯ ಇರುತ್ತದೆ. ಆದರೆ ಹುಡುಗಿಯರಲ್ಲಿ ಇಂಥ ದಿಟ್ಟತನ ಇರುವುದಿಲ್ಲ. ಅವರದು ಹಿಂಜರಿಕೆಯ ಸ್ವಭಾವ. ಪ್ರೀತಿ, ಪ್ರೇಮದ ವಿಷಯದಲ್ಲಿ, ಅದೂ ಹದಿಹರೆಯದ ಸಂದರ್ಭದಲ್ಲಿ ಅವರು ತಾವಾಗಿಯೇ ಮುಂದುವರಿಯುವುದು ಕಡಿಮೆ.
ಹುಡುಗನೊಬ್ಬ ಪ್ರಪೋಸ್ ಮಾಡಿದಾಗ ಹುಡುಗಿ ಒಪ್ಪಿಕೊಂಡರೆ ಸರಿ. ಹೋಟೇಲ್,ಸಿನೇಮಾ, ಪಾರ್ಕ್, ಪಿಕ್ ನಿಕ್ ಎಂದು ಹುಡುಗನ ಒಂದಷ್ಟು ದುಡ್ಡು ಖರ್ಚೂ ಆಗುತ್ತೆ; ಒಂದಷ್ಟು ಪೆಟ್ರೋಲ್ ಉರಿಯುತ್ತೆ. ಕಾಲೇಜು ಹಂತ ಮುಗಿದು ಗಂಭೀರ ಓದು ಅಥವಾ ಬದುಕಿಗೆ ತಿರುಗಿಕೊಂಡಾಗ ಈ ಪ್ರೀತಿಯು ಸವಕಲಾಗಿರುತ್ತೆ. ಇಂಥ ಹದಿಹರೆಯದ ಪ್ರೀಮ ಪ್ರಕರಣಗಳು ಬಾಳುವುದುದು ಕಡಿಮೆ.
ಒಂದು ವೇಳೆ ಹುಡುಗನೊಬ್ಬ ಪ್ರಪೋಸ್ ಮಾಡಿದಾಗ ಹುಡುಗಿ ಒಪ್ಪಿಕೊಳ್ಳದಿದ್ದರೆ, ಕೆಲವು ಸಂದರ್ಭಗಳಲ್ಲಿ ಅದು ಅತಿರೇಕಕ್ಕೆ ತಿರುಗಿದ್ದು ಇದೆ. ಮಂಗಳೂರಿನ ಶ್ರೀಮಂತ ಕುಟುಂಬದ ಹುಡುಗನೊಬ್ಬ ತನ್ನ ಸಹಪಾಠಿಯೊಬ್ಬಳೆಡೆಗೆ ಆಕರ್ಷಿತನಾದ. ಆಕೆ ಮುಗ್ಧ ಸ್ವಭಾವದ, ಚೆಲುವೆಯಾದ ಬಡಹುಡುಗಿ. ಆತ.ಸಿನೇಮಾ ಮಂದಿರದ ಮಾಲೀಕನೊಬ್ಬನ ಮಗ. ಯಾವ ಕೊರತೆಯೂ ಇಲ್ಲದ ಹುಡುಗ. ಇವಳು ಖಂಡಿತಾ ಒಪ್ಪಿಕೊಳ್ಳುತ್ತಾಳೆ ಎಂದು ಪ್ರಪೋಸ್ ಮಾಡಿದ. ಅವಳು ನಿರಾಕರಿಸಿದಳು. ಇವನಿಗೆ ಅದನ್ನು ತಡೆದುಕೊಳ್ಳಲಾಗಲಿಲ್ಲ. ಅವನ ’ಅಹಂ’ಗೆ ಬಿದ್ದ ಹೊಡೆತ ಅದು. ಅಂಗಲಾಚಿದ, ಬೇಡಿದ ಹುಡುಗಿ ಮನಸ್ಸು ಬದಲಾಯಿಸಲಿಲ್ಲ. ಹುಡುಗ ಮಾದಕ ವ್ಯಸನಗಳಿಗೆ ಬಿದ್ದ, ದುಶ್ಚಟಗಳಿಗೆ ದಾಸನಾದ. ಎಂಜಿನಿಯರಿಂಗ್ ಓದನ್ನು ಅರ್ಧದಲ್ಲಿ ಕೈಬಿಟ್ಟ. ಇಂದು ಆತ ಯಾವುದೋ ಚಿಕ್ಕ ಕಂಪೆನಿಯೊಂದರಲ್ಲಿ ಕೇವಲ ಮೂರು ಸಾವಿರ ರೂಪಾಯಿಗಳಿಗೆ ಕೆಲಸ ಮಾಡುತ್ತಿದ್ದಾನೆ. ಒಂದು ಏಕಮುಖವಾದ ಪ್ರೀತಿ ಅವನನ್ನು ಪ್ರಪಾತಕ್ಕೆ ತಳ್ಳಿಬಿಟ್ಟಿತ್ತು.
ಏಕಮುಖವಾದ ಪ್ರೀತಿ ಒಮೊಮ್ಮೆ ಏನೇನೋ ತಿರುವುಗಳನ್ನು ಪಡೆದುಬಿಡುತ್ತದೆ. ಸಾಮಾನ್ಯ ಮನುಷ್ಯನೂ ಅಬ್ ನಾರ್ಮಲ್ ಆಗಿ ವರ್ತಿಸಿಬಿಡುತ್ತಾನೆ. ಇದಕ್ಕೆ ಕಾರಣಗಳೇನಿರಬಹುದು? ಹಾಗೆ ನೋಡಿದರೆ ಅಕ್ಕ ಮಹಾದೇವಿ, ಮೀರಾಬಾಯಿಯವರದೂ ಏಕಮುಖವಾದ ಪ್ರೀತಿ ತಾನೇ? ಅವರ ಪ್ರೇಮದ ಆರಾಧನೆಯಲ್ಲಿ ಪ್ರತಿಸ್ಪಂದನ ಇರಲಿಲ್ಲ. ಆದರೂ ಅವರು ಪ್ರೀತಿಸುತ್ತಲೇ ಹೋದರು.
ಏಕಮುಖ ಪ್ರೀತಿಯ ಲಕ್ಷಣವೇ ಅದು. ಅಲ್ಲಿರುವುದು ಕೇವಲ ಅರ್ಪಣಾಭಾವ. ಪ್ರೀತಿಸುವ ವ್ಯಕ್ತಿ ಪ್ರೀತಿಸಲ್ಪಡುವ ವ್ಯಕ್ತಿಯಿಂದ ಏನನ್ನೂ ಅಪೇಕ್ಷಿಸುವುದಿಲ್ಲ. ಸರ್ವಸಮರ್ಪಣಾ ಭಾವ ಅದು. ಕರ್ಪೂರದ ಹಾಗೆ ಕರಗಿ ಹೋಗುವ ಆರಾಧನೆ. ಇದನ್ನು ನಾನು ಹದಿಹರೆಯದ ಕಾಮ ಮಿಶ್ರಿತವಾದ ಪ್ರೇಮಕ್ಕೆ ಸಂಬಂಧಿಸಿದಂತೆ ಹೇಳುತ್ತಿಲ್ಲ. ಪ್ರಭುದ್ದ ಮನಸ್ಸೊಂದು ವಿನಾ ಕಾರಣವಾಗಿ ಪ್ರೀತಿಯ ಅನುಭೂತಿಗೆ ಒಳಗಾಗುವ ಸನ್ನಿವೇಶವನ್ನು ಹೇಳುತ್ತಿದ್ದೇನೆ. ಇದು ಕೇವಲ ಮಾನಸಿಕವಾದ ಪ್ರೀತಿ ಎಂದು ಹೇಳುತ್ತಿಲ್ಲ. ಪ್ರೀತಿಯ ಅತ್ಯುನ್ನತ ಸ್ಥಿತಿಯಲ್ಲಿ ದೇಹ ಮತ್ತು ಮನಸ್ಸು ಎಂಬುದು ಬೇರೆ ಬೇರೆಯಾಗಿರುವುದಿಲ್ಲ. ಅವೆರಡೂ ಅವಿನಾಭಾವವಾದುದು.
ಕರ್ಪೂರದ ಹಾಗೆ ಕರಗಿ ಹೋಗುವ, ದೇಹ ಮತ್ತು ಆತ್ಮದ ಹಾಗೆ ಒಂದಾಗಿ ಬೆಸೆಯುವ ತುಡಿತದ ಈ ಪ್ರೇಮಿಯ ಮನಸ್ಸನ್ನು ಪ್ರೇಮಿಸಲ್ಪಡುವ ವ್ಯಕ್ತಿ ಅರಿಯದೆ ಹೋದರೆ, ಅಥವಾ ಅದನ್ನು ಅರಿಯಗೊಡುವ ಪ್ರಯತ್ನವನ್ನು ಈ ಪ್ರೇಮಿ ಮಾಡದೆ ಹೋದರೆ ಅದು ಒಂದು ಆರಾಧನೆಯಾಗಿಯೇ ಉಳಿದುಬಿಡುತ್ತದೆ; ಲೇಖನದ ಆರಂಭದಲ್ಲಿ ನಾನು ಹೇಳಿದ ನನ್ನ ಗುಪ್ತ ಪ್ರೇಮಿಯ ಹಾಗೆ. ಬಹುಶಃ ಆತ ತನ್ನ ಪ್ರೇಮವನ್ನು ತನ್ನಲ್ಲೇ ಬಚ್ಚಿಟ್ಟುಕೊಂಡ ಕಾರಣದಿಂದಾಗಿ ಆತ ಅಮರ ಪ್ರೇಮಿಯಾಗಿ ನಮ್ಮೆದುರು ಬಿಂಬಿತವಾಗಿದ್ದಾನೆ.
ಒಂದು ವೇಳೆ ಆತ ಬಾಯಿಬಿಟ್ಟು ಹೇಳಿದ್ದರೆ ಮಂಗಳೂರಿನ ಪ್ರೇಮಿಯ ಹಾಗೆ ತಿರಸ್ಕೃತನಾಗುವ ಸಂದರ್ಭವವೂ ಇದ್ದಿರಬಹುದು.
ಏಕಮುಖ ಪ್ರೀತಿಯ ತೊಡಕೇ ಅದು. ಮನುಷ್ಯನಿಗೆ ಯಾವಾಗಲೂ ಸುಲಭವಾಗಿ ಸಿಕ್ಕುವುದರ ಬಗ್ಗೆ ಒಂದು ರೀತಿಯ ಅಸಡ್ಡೆ ಇರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಅದನ್ನು ಆತ ತಿರಸ್ಕರಿಸಿ ಬಿಡುತ್ತಾನೆ. ಸಿಗಲಾರದಕ್ಕೆ ಬೆನ್ನು ಹತ್ತುತ್ತಾನೆ. ಅರ್ಪಿಸಿಕೊಳ್ಳಲು ಬಂದವರು ತಿರಸ್ಕೃತಗೊಂಡು ಜರ್ಜರಿತರಾಗುತ್ತಾರೆ.
ಏಕಮುಖವಾದ ಪ್ರೀತಿ ಒಮ್ಮೊಮ್ಮೆ ಮನುಷ್ಯನನ್ನು ರಾಕ್ಷಸತ್ವಕ್ಕೂ ಇಳಿಸಿಬಿಡುತ್ತದೆ. ಪ್ರೇಮಪ್ರಕರಣಗಳಿಗೆ ಸಂಬಂಧಿಸಿದ ಬೆದರಿಕೆ, ಹಲ್ಲೆ, ಕೊಲೆಗಳೆಲ್ಲಾ ಸಾಮಾನ್ಯವಾಗಿ ಏಕಮುಖ ಪ್ರೀತಿಯ ಪರಿಣಾಮಗಳೇ. ಒಬ್ಬರ ನಿರಾಕರಣೆ ಇನ್ನೊಬ್ಬರ ’ಅಹಂ’ ಅನ್ನು ಕೆರಳಿಸಿಬಿಡುತ್ತೆ. ತನಗೆ ಸಿಕ್ಕಲಾರದವಳು ಇನ್ನಾರಿಗೂ ದಕ್ಕಬಾರದು ಎಂಬ ಪೈಶಾಚಿಕ ಆಲೋಚನೆಯೇ ಇಲ್ಲಿ ಕ್ರಿಮಿನಲ್ ಚಟುವಟಿಕೆಗಳಿಗೆ ಪ್ರೇರಣೆ ನೀಡುತ್ತದೆ. ಹುಡುಗಿಯರ ಮುಖಕ್ಕೆ ಆಸಿಡ್ ಎರಚಿದ ಪ್ರಕರಣಗಳಲ್ಲಂತೂ ಇಂತಹ ಸ್ಯಾಡಿಸ್ಟ್ ಮನಸ್ಸೇ ಮೃಗದಂತೆ ವರ್ತಿಸಿರುತ್ತದೆ.
ಒಂದು ಏಕಮುಖವಾದ ಪ್ರೀತಿ ಬಹಿರಂಗಗೊಂಡರೆ ಏನೇನೋ ಆಗಬಹುದು. ಸಂಬಂಧಪಟ್ಟ ಹೆಣ್ಣು-ಗಂಡುಗಳಲ್ಲಿ, ಹಿಂದೆಯೇ ಹೇಳಿದಂತೆ ಕೆಲವರು ಜೀವನ ಪ್ರೀತಿಯನ್ನು ಕಳೆದುಕೊಂಡು ದುಶ್ಚಟಗಳ ದಾಸನಾಗಬಹುದು. ಇಲ್ಲವೇ ಜೀವವಿರೋಧಿಯಾಗಿ ಸಮಾಜ ಕಂಟಕನಾಗಬಹುದು. ಇದೆಲ್ಲಾ ಋಣಾತ್ಮಕ ಅಂಶಗಳಾದವು. ಹಾಗಾದರೆ ಏಕಮುಖವಾದ ಪ್ರೀತಿಯೊಂದು ಪಾಸಿಟೀವ್ ಆಗಿ ಕೆಲಸ ಮಾಡಲಾರದೇ? ಯಾಕಿಲ್ಲ? ನಮ್ಮ ಸಾಹಿತಿ-ಕಲಾವಿದರ ಶ್ರೇಷ್ಟ ಸಾಧನೆಗಳತ್ತ ನೋಡಿ; ಬಹಳಷ್ಟು ಸಂದರ್ಭಗಳಲ್ಲಿ ಅವರೆಲ್ಲರ ಸಾಧನೆಯ ಹಿಂದೆಯೂ ಒಂದು ವಿಫಲ ಪ್ರೇಮ ಕಥೆಯಿರುತ್ತದೆ.
ಏಕಮುಖವಾದ ಪ್ರೀತಿ ಎನ್ನುವುದು ಕೇವಲ ಹದಿಹರೆಯದವರನ್ನು ಮಾತ್ರ ಆವರಿಸಿಕೊಳ್ಳುವ ಭಾವನೆಯೇ? ಖಂಡಿತಾ ಅಲ್ಲ. ಅದು ಎಲ್ಲಾ ವಯೋಮಾನದವರ ಮನಸ್ಸಿನಲ್ಲಿಯೂ ಹುಟ್ಟಿಕೊಳ್ಳುವ ಸಾಮಾನ್ಯ ಭಾವನೆ. ಅದಕ್ಕೆ ವಿವಾಹಿತರೂ ಕೂಡಾ ಹೊರತಲ್ಲ. ಯಾಕೆಂದರೆ ಪ್ರೀತಿ ಎನ್ನುವ ಅನೂಹ್ಯ ಭಾವನೆ ನಮ್ಮ ಉಸಿರಾಟದಷ್ಟೇ ಸಹಜವಾದುದು. ದೇಹಕ್ಕೆ ವಯಸ್ಸಾಯಿತು ಅಂದಮಾತ್ರಕ್ಕೆ ಉಸಿರಾಟದಲ್ಲಿ ವ್ಯತ್ಯಾಸವಾಗುತ್ತದೆಯೇ?
ವ್ಯಯಕ್ತಿಕ ಮತ್ತು ಸಾಮಾಜಿಕ ಉದ್ದೇಶಗಳಿಗಾಗಿ ವ್ಯಕ್ತಿಯೊಬ್ಬ ಮದುವೆಯಾಗುತ್ತಾನೆ. ಮದುವೆಗೊಂದು ಚೌಕಟ್ಟಿದೆ. ಬಂಧ ಇದೆ-ಬಂಧನಗಳಿವೆ. ರೀತಿ ನೀತಿಯಿದೆ. ಆದರೆ ಮನಸ್ಸಿಗೆ ಯಾವುದೇ ಚೌಕಟ್ಟುಗಳಿಲ್ಲ. ಅದು ಹೇಗೆ ಬೇಕಾದರೂ ವಿಹರಿಸಬಹುದು. ಹಾಗಾಗಿ ಮದುವೆಯಾದ ವ್ಯಕ್ತಿ ಕೂಡಾ ಯಾರದೋ ಸೆಳೆತಕ್ಕೆ ಒಳಗಾಗಬಹುದು. ಮಾನಸಿಕವಾಗಿ ಅವರನ್ನು ಅವಲಂಬಿಸಿಬಿಡಬಹುದು.ಈ ಅವಲಂಬನೆ ಅವರ ದೈನಂದಿನ ಎಲ್ಲಾ ಚಟುವಟಿಕೆಗಳನ್ನು ನಿಯಂತ್ರಿಸಬಹುದು. ಆದರೆ, ಅದನ್ನು ಬಹಿರಂಗಗೊಳಿಸಿದರೆ ತಾನು ಸಾಮಾಜಿಕವಾಗಿ ಬಹಿಷ್ಕೃತಗೊಳ್ಳುವ, ಕುಟುಂಬದ ಅನಾದರಣೆಗೆ ಒಳಗಾಗುವ ಸಂಭವವಿರುವುದರಿಂದ ಆತ ಅದನ್ನು ತನ್ನಲ್ಲಿಯೇ ಅದುಮಿಟ್ಟುಕೊಳ್ಳಬಹುದು. ಒಮ್ಮೊಮ್ಮೆ ಅದು ಅಬ್ಸೆಷನ್ ಆಗಿಯೂ ಕಾಡಬಹುದು.
ಕನ್ನಡದ ಕಿರುತೆರೆಯ ಹಿರಿಯ ನಟರೊಬ್ಬರು ತಮ್ಮ ಕಛೇರಿಯಲ್ಲಿ ಕೆಲಸ ಮಾಡುತ್ತಿರುವ ಹುಡುಗಿಯೊಬ್ಬಳಲ್ಲಿ ಏಕಮುಖ ಪ್ರೀತಿಯೆನ್ನಬಹುದಾದ ಮಾನಸಿಕ ಅವಲಂಬನೆ ಹೊಂದಿರುವುದನ್ನು ನನ್ನಲ್ಲಿ ಹೇಳಿಕೊಂಡಿದ್ದರು. ಇದೆಲ್ಲಾ ಮಾನವ ಸಹಜ ಭಾವನೆಗಳು. ಅದನ್ನು ನೈತಿಕತೆಯ ಪ್ರಶ್ನೆ ಮುಂದು ಮಾಡಿ ಸಂಬಂಧಪಟ್ಟವರನ್ನು ಅವಮಾನಿಸಬಾರದು..ಕೀಳಾಗಿ ಕಾಣಬಾರದು.
ಸಾಮಾಜಿಕವಾಗಿ ಉನ್ನತ ಸ್ಥಾನದಲ್ಲಿರುವವರ ಮನಸ್ಸಿನಲ್ಲಿ ಇಂತಹದೊಂದು ಭಾವನೆ ಮೊಳಕೆಯೊಡೆದಾಗ ಅವರು ಕಿಳರಿಮೆಯಿಂದ ನರಳುವುದನ್ನು ನಾನು ನೋಡಿದ್ದೇನೆ. ತಮ್ಮ ಪತ್ನಿಗೆ ಮೋಸ ಮಾಡುತ್ತಿದ್ದೇನೇನೋ ಎಂಬ ಭಾವನೆ ಅವರ ಕರ್ತೃತ್ವ ಶಕ್ತಿಯನ್ನೇ ಕಸಿದುಕೊಂಡುಬಿಟ್ಟರೆ…? ಹಾಗಾಗುವ ಸಂದರ್ಭವನ್ನು ವಿವಾಹಿತರು ಸೃಷ್ಟಿಸಿಕೊಳ್ಳಬಾರದು. ಏಕಮುಖವಾದ ಪ್ರೀತಿಯನ್ನು ಹೊಂದಿರುವ ಎಳೆಯರಿಗಿಂತ-ಯುವಕರಿಗಿಂತ ಇವರಿಗೆ ಹೆಚ್ಚಿನ ಸ್ವಾತಂತ್ರ್ಯವಿರುತ್ತದೆ. ವಿವಾಹಪೂರ್ವದಲ್ಲಿ ಒಂದು ಹುಡುಗ-ಹುಡುಗಿ ಸಲುಗೆಯಿಂದ ಮಾತಾಡುತ್ತಿದ್ದರೆ, ಪದೇ ಪದೇ ಭೇಟಿಯಾಗುತ್ತಿದ್ದರೆ ಸಮಾಜ ಅವರನ್ನು ವಕ್ರ ದೃಷ್ಟಿಯಿಂದ ನೋಡುತ್ತದೆ. ಅವರಲ್ಲಿ ಪರಸ್ಪರ ಯಾವುದೇ ನಿರ್ದಿಷ್ಟ ಭಾವನೆಗಳಿರದಿದ್ದರೂ ಒಮ್ಮೊಮ್ಮೆ ಪ್ರೇಮಿಗಳೆಂದೇ ಆರೋಪಿಸಿಬಿಡುತ್ತದೆ. ಆಗ ಅವರು ಅನಿವಾರ್ಯವಾಗಿ ಪ್ರೇಮಿಗಳಾಗಬೇಕಾಗುತ್ತದೆ. ಅಮೇಲೆ ಮದುವೆಯೂ ಆಗಬೇಕಾಗುತ್ತದೆ.
ವಿವಾಹಿತರಾದರೆ ಇನ್ನೊಬ್ಬ ಮಹಿಳೆ\ಪುರುಷನ ಜೊತೆ ಒಡನಾಟ ಇಟ್ಟುಕೊಂಡರೂ ಸಮಾಜ ಅವರತ್ತ ವಿಶೇಷ ಲಕ್ಷ್ಯ ಕೊಡುವುದಿಲ್ಲ. ಸಮಾನ ಚಿಂತನೆಯ ಸೇಹಿತರಿರಬಹುದು ಎಂದು ಅಂದುಕೊಳ್ಳುತ್ತದೆ. ಹಾಗಾಗಿ ಇಂತವರಲ್ಲಿ ಏಕಮುಖವಾದ ಪ್ರೀತಿಯೊಂದು ಮೊಳಕೆಯೊಡೆದರೆ ಅದನ್ನು ಪ್ರೀತಿಸಲ್ಪಡುವ ವ್ಯಕ್ತಿಯಲ್ಲಿ ಹೇಳಿಕೊಳ್ಳಬಹುದು; ಆದರೆ ಹೇಳಿಕೊಳ್ಳುವ ಮೊದಲು ಆ ವ್ಯಕ್ತಿಯ ಗುಣ ಸ್ವಭಾವಗಳ ಬಗ್ಗೆ ಚೆನ್ನಾಗಿ ಅರಿತುಕೊಂಡಿರಬೇಕು. ಈಕೆಯ\ಈತನ ಭಾವನೆಗಳನ್ನು ಲೇವಡಿ ಮಾಡುವ, ಉಪೇಕ್ಷೆ ಮಾಡುವ, ಹಗುರವಾಗಿ ಕಾಣುವ ವ್ಯಕ್ತಿಗಳೊಡನೆ ಅಂತರಂಗವನ್ನು ಬಿಚ್ಚಿಡಬಾರದು. ಹೇಗೆ ಹೇಳುವುದು, ನೀವು ಭಾಗ್ಯಶಾಲಿಗಳಾಗಿದ್ದರೆ, ನಿಮ್ಮ ಮನದ ಇಂಗಿತವನ್ನು ಎದುರಿನ ವ್ಯಕ್ತಿ ಅರಿತುಕೊಂಡು ಸಹಕರಿಸಲೂಬಹುದು! ನಿಮ್ಮ ಯಾಂತ್ರಿಕವಾದ ಬದುಕಿನಲ್ಲಿ ಅವರು ಹೊಸ ಚೈತನ್ಯ ತುಂಬಬಹುದು. ಹಿಂದೆ ಯಾವ್ಯವುದೋ ಕಾರಣಗಳಿಗಾಗಿ ಮದುವೆಯಾದ ನೀವು ಈಗ ನವಪ್ರೀಮಿಯಂತೆ ಮತ್ತೆ ಪ್ರೇಮದ ನವಿರು ಭಾವನೆಗಳನ್ನು ಅನುಭವಿಸಬಹುದು.
ಪ್ರೇಮವೇ ಯಾಕಾಗಬೇಕು? ಗಂಡು-ಹೆಣ್ಣು ತಾವು ಜತೆಯಾಗಿರಬೇಕು ಎಂದು ಬಯಸುವುದಕ್ಕೆ ಹತ್ತಾರು ಕಾರಣಗಳಿರಬಹುದು. ’ಡ್ರೈವರ್ ಜೊತೆ ಓಡಿ ಹೋದಳು’ ’ಪಕ್ಕದ ಮನೆಯವನ ಜೊತೆ ಸಂಬಂಧ ಇಟ್ಟುಕೊಂಡಳು’ ’ಕೆಲಸದವಳನ್ನು ಹಾಸಿಗೆಗೆ ಕರೆದುಕೊಂಡ’…ಎಂದೆಲ್ಲಾ ಹೇಳುತ್ತೇವಲ್ಲಾ, ಇವೆಲ್ಲಾ ಹೇಳಿದಷ್ಟು ಸರಳವಾದ ವಿಷಯಗಳಲ್ಲ. ಈ ಕ್ರಿಯೆಗಳ ಹಿಂದೆ ಸೆಕ್ಸ್ ಒಂದೇ ಕೆಲಸ ಮಾಡಿರುವುದಿಲ್ಲ. ಆದಕ್ಕೆ ನಾನಾ ಆಯಾಮಗಳಿರುತ್ತವೆ.
ಯಾರಿಗ್ಗೊತ್ತು, ಒಂದು ಏಕಮುಖವಾದ ಪ್ರೀತಿ ಒಳ್ಳೆಯ ಗೆಳೆತನವಾಗಿ ಮುಂದುವರಿಯಬಹುದು. ಯಾಕೆಂದರೆ ಅನೇಕ ಸಂದರ್ಭಗಳಲ್ಲಿ ಗಂಡು-ಹೆಣ್ಣಿಗೆ ಮುಕ್ತವಾಗಿ ಮಾತಾಡಲು ಅವಕಾಶಗಳೇ ಇರುವುದಿಲ್ಲ. ಹಾಗಾಗಿ ಆರಾಧನೆ ಕೇವಲ ಆರಾಧನೆಯಾಗಿಯೇ ಉಳಿದುಬಿಡುತ್ತದೆ. ಒಮ್ಮೆ ಮನಸ್ಸನ್ನು ಮುಕ್ತವಾಗಿ ಹರಿಯಬಿಟ್ಟರೆ ಎಲ್ಲವೂ ಮುಗಿಯಿತು.ಆಮೇಲೆ ಏನೂ ಇರುವುದಿಲ್ಲ. ಎಲ್ಲವೂ ಶಾಂತ; ಒತ್ತಡಮುಕ್ತ ಮನಸ್ಸು. ಆದರೆ ಯಾರೆದುರಿಗೆ ಹರಿಯಬಿಡುತ್ತಿದ್ದೇನೆ ಎಂಬ ಎಚ್ಚರವಿರಬೇಕು ಎರಡು ಪ್ರಬುದ್ಧ ಮನಸ್ಸುಗಳು; ಅವು ವಿವಾಹಿತರಿರಲಿ, ಅವಿವಾಹಿತರಿರಲಿ ಪರಸ್ಪರ ನಂಬಿಕೊಂಡು ಒಪ್ಪಿ ನಡೆಸುವ ಯಾವುದೇ ಚಟುವಟಿಕೆಗಳು ಅನೀತಿಯೆನಿಸುವುದಿಲ್ಲ. ಅದವರ ಅಂತರಂಗದ ವಿಷಯ.
ಪ್ರೀತಿ ಎನ್ನುವುದು ಒಂದು ಅನುಭೂತಿ. ಅದು ದೈವಿಕವಾದುದು. ಪಂಚೇಂದ್ರಿಯಗಳ ಅನುಭವವನ್ನು ಮೀರಿದ್ದು. ಅದು ಮನುಷ್ಯನ ಮಟ್ಟಕ್ಕೆ ಇಳಿದರೆ ಮನುಷ್ಯ-ಮನುಷ್ಯರ ನಡುವೆ ಇರಬೇಕಾದ ಗೌರವ, ನಂಬಿಕೆ, ಕರುಣೆ, ದಯೆಗಳಾಗುತ್ತದೆ. ಗಂಡು ಹೆಣ್ಣಿನ ಸಂಬಂಧಕ್ಕೆ ಬಂದರೆ ಅದು ಎರಡು ಮನಸ್ಸು ಮತ್ತು ಎರಡು ದೇಹ ಐಕ್ಯಗೊಳ್ಳುವ ವಿಸ್ಮಯ. ಅದು ಏಕತೆಯನ್ನು ಕೊಡುವ ಸಂತೋಷ. ದೈವತ್ವಕ್ಕೆ ಏರಬಹುದಾದ ಇಂತಹ ಒಂದು ಪ್ರೇಮ ಸುಲಭದಲ್ಲಿ ಘಟಿಸುವಂತಹದ್ದಲ್ಲ. ಅದು ಕಳೆದುಕೊಳ್ಳುವ ಭಯ, ಆತಂಕ, ತುಡಿತ, ತಲ್ಲಣಗಳನ್ನು ಅನುಭವಿಸುತ್ತಾ ಕಾಲದ ನಿಕಷದಲ್ಲಿ ಮಿಂದೆದ್ದು ಬರಬೇಕು.
[ ೨೦೦೫ರಲ್ಲಿ ’ಓ ಮನಸೇ’ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ]
Wednesday, September 7, 2011
”ದಿ ಪ್ಯಾಕ್’- ಕಾಡಿನೊಳಗೊಂದು ಸಜ್ಜನಿಕೆ



ಅದೊಂದು ಪುಟ್ಟ ಹೆಣ್ಣು ಜೀವ. ಅವಳ ಕಣ್ಣೆದುರೇ ಹುಲಿಯೊಂದು ಅವಳ ಹೆತ್ತಮ್ಮನನ್ನು ಕೊಲ್ಲುತ್ತದೆ. ಒಡಹುಟ್ಟಿದ ಎರಡು ಸಹೋದರರೊಡನೆ ಆಕೆ ಅನಾಥೆಯಾಗುತ್ತಾಳೆ. ತನ್ನ ಬಳಗವನ್ನು ತೊರೆದು ಕಾಡಿನಲ್ಲಿ ಏಕಾಂಗಿಯಾಗಿ ಅಲೆದಾಡುತ್ತಾಳೆ. ತನ್ನದೇ ಸ್ವಂತ ಬದುಕನ್ನು ಕಟ್ಟಿಕೊಳ್ಳಲು ಹೆಣಗಾಡುತ್ತಾಳೆ. ಬದುಕಿನ ಹೋರಾಟದ ಹಾದಿಯಲ್ಲಿ ಆಕೆಗೊಬ್ಬ ಪ್ರಿಯಕರ ದೊರೆಯುತ್ತಾನೆ. ತನ್ನದೇ ಬಳಗ ಕಟ್ಟಿಕೊಳ್ಳುತ್ತಾಳೆ. ಅವರಿಗೆಲ್ಲಾ ಆಹಾರ ಹೊಂಚಲು ಸಂಚುಗಳನ್ನು ರೂಪಿಸುತ್ತಾಳೆ. ಅದನ್ನು ಸಮರ್ಥ, ಬಲಾಢ್ಯ ತಂಡವಾಗಿ ಕಟ್ಟಲು ಎದುರಾಳಿ ತಂಡಗಳ ಜೊತೆ ದಿಟ್ಟತನದಿಂದ ಹೋರಾಡುತ್ತಾಳೆ. ಕಾಡ್ಗಿಚ್ಚಿನಿಂದ ತನ್ನ ತಂಡವನ್ನು ರಕ್ಷಿಸಿಕೊಳ್ಳುತ್ತಾಳೆ. ಸವಾಲುಗಳನ್ನು ಎದುರಿಸುತ್ತಲೇ ಬದುಕು ಕಟ್ಟಿಕೊಂಡ ಆಕೆಗೆ ತನ್ನ ಮಗಳೇ ಸವತಿಯಾಗುತ್ತಾಳೆ.ಆದರೂ ನೋವು ನುಂಗಿಕೊಳ್ಳುತ್ತಾಳೆ. ತಾಯಿ-ಮಗಳಿಬ್ಬರೂ ಒಮ್ಮೆಲೇ ಗರ್ಭಿಣಿಯರಾಗಿ ತಮ್ಮ ತಂಡದ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಾರೆ.
ಆ ಮಹಾತಾಯಿಯ ಹೆಸರು ಕೆನ್ನಾಯಿ. ಹೌದು, ಇವಳು ’ದಿ ಪ್ಯಾಕ್’’ ಸಾಕ್ಷ್ಯ ಚಿತ್ರದ ನಾಯಕಿ; ಒಂದು ಕಾಡು ನಾಯಿ. ಈಕೆ ಯಾವ ಆಧುನಿಕ ಮಹಿಳೆಗೂ ಕಡಿಮೆಯಿಲ್ಲ. ಅವಳು ಎದುರಿಸುವ ಎಲ್ಲಾ ಸವಾಲುಗಳನ್ನು ಈಕೆಯೂ ಎದುರಿಸುತ್ತಾಳೆ.
”ದಿ ಪ್ಯಾಕ್’ ; ಕೃಪಾಕರ-ಸೇನಾನಿ ಎಂಬ ವನ್ಯ ಜೀವಿ ಪೋಟೋಗ್ರಾಪ್ ರ ಜೋಡಿ ನಿರ್ಮಿಸಿದ ಸಾಕ್ಷ್ಯ ಚಿತ್ರ. ಪ್ಯಾಕ್ ಎಂದರೆ ಬಳಗ; ತಂಡ. ಇದು ಕೆನ್ನಾಯಿಗಳ ಬಳಗ. ಕೆನ್ನಾಯಿ ಇದು ಕನ್ನಡದ ಶಬ್ದ. ಕೆಂಪು ನಾಯಿ- ಕೆನ್ನಾಯಿ. ದಿ ಪ್ಯಾಕ್ ಡಾಕ್ಯುಮೆಂಟರಿ ಮೂಲಕ ಈ ಶಬ್ದ ಇದೀಗ ಜಗತ್ತಿಗೆ ಪರಿಚಯಯವಾಗಿದೆ. ಅದಕ್ಕಾಗಿ ಕನ್ನಡಿಗರೆಲ್ಲರೂ ಕೃಪಾಕರ-ಸೇನಾನಿ ಜೋಡಿಗೆ ಕೃತಜ್ನರು.
ಕೆನ್ನಾಯಿ- ಈ ಶಬ್ದ ನನಗೆ ಅಪರಿಚಿತವಲ್ಲ. ಕುಕ್ಕೇ ಸುಬ್ರಹ್ಮಣ್ಯ ಸಮೀಪದ ಬಾಳುಗೋಡು ನನ್ನೂರು. ಅದು ಪಶ್ಚಿಮ ಘಟ್ಟದಂಚಿನ ಊರು. ಆ ಊರಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಯಾವುದೇ ಮಗು ಏನಾದರು ಹಠ ಹಿಡಿದರೆ ಸೌಮ್ಯ ಗದರಿಕೆಯ ಧ್ವನಿಯಲ್ಲಿ ’ಗುಮ್ಮ ಬರುತ್ತದೆ ನೋಡು’ ಎಂದು ಹೆದರಿಸುತ್ತಿದ್ದರು. ಮಗು ಗಪ್ ಚುಪ್. ಇನ್ನೂ ಹಠ ಮಾಡಿದರೆ ’ಕಾಡಿನಿಂದ ಕೆನ್ನ ನಾಯಿ ಬಂದು ಕಚ್ಚಿಕೊಂಡು ಹೋಗುತ್ತದೆ’ ಎಂದು ಹೆದರಿಸುತ್ತಿದ್ದರು. ಆದರೆ ಕೆನ್ನಾಯಿಯನ್ನು ಯಾರಾದರೂ ನೋಡಿ ವರ್ಣಿಸಿದ್ದು ನನಗೆ ನೆನಪಿಲ್ಲ. ಆದರೆ ನಮ್ಮ ನದಿಯಂಚಿನ ಕಾಡಿನಲ್ಲಿ ಆಗಾಗ ಕಡವೆಯ ತಲೆಗಳು ಬಿದ್ದಿರುತ್ತಿದ್ದವು. ಅವುಗಳನ್ನು ತೋರಿಸಿ ಇದು ಕೆನ್ನಾಯಿಗಳೇ ತಿಂದಿದ್ದು ಎಂದು ನಮ್ಮೂರಿನ ಜನ ವರ್ಣಿಸುತ್ತಿದ್ದರು. ಕೆಲವೊಮ್ಮೆ ತಾಯಿಯೊಡನೆ ಕಾಡಿಗೆ ಹೋದ ಕರುಗಳು ಪುನಃ ಹಟ್ಟಿಗೆ ಹಿಂದಿರುಗದಿದ್ದರೆ ಕೆನ್ನಾಯಿ ಹಿಡಿದಿರಬೇಕೆಂದು ಮಾತಾಡಿಕೊಳ್ಳುತ್ತಿದ್ದರು.
ಬಾಯಿ ಮಾತುಗಳಲ್ಲಿ ಮಾತ್ರ ಕೆನ್ನಾಯಿಗಳ ಬಗ್ಗೆ, ಅವುಗಳ ಕ್ರೂರತ್ವದ ಬಗ್ಗೆ ತಿಳಿದುಕೊಂಡಿದ್ದ ನನಗೆ ಅದರ ಬದುಕಿನ ವಿವರಗಳೊನ್ನೊಳಗೊಂಡಿದ್ದ ’ದ್ ಪ್ಯಾಕ್’ ಎಂಬ ಸಾಕ್ಷ್ಯ ಚಿತ್ರವೊಂದು ತಯಾರಾಗುತ್ತಿದೆಯೆಂಬ ಸುದ್ದಿ ಬಹಳ ಹಿಂದೆಯೇ ಪತ್ರಿಕೆಗಳ ಮುಖಾಂತರ ಗೊತ್ತಾಗಿತ್ತು. ನಮ್ಮ ಪರಿಸರ ಪ್ರೇಮಿ ಪೂರ್ಣಚಂದ್ರ ತೇಜಸ್ವಿಯವರಂತೆ ಕಾಡಿನಲ್ಲೇ ವಾಸಿಸುತ್ತಾ, ಕೃಪಾಕರ ಸೇನಾನಿಯರೆಂಬ ಛಾಯಗ್ರಾಹಕರಿಬ್ಬರು ಅದರಲ್ಲೇ ಮುಳುಗಿ ಹೋಗಿದ್ದಾರೆಂದು ತಿಳಿದ್ದಾಗ ಕುತೂಹಲ ಮೂಡಿತ್ತು. ಕಳೆದ ವರ್ಷ ಅದಕ್ಕೆ ಪ್ರತಿಷ್ಠಿತ ಗ್ರೀನ್ ಆಸ್ಕರ್ ಪ್ರಶಸ್ತಿ ಬಂದಾಗ ಅದನ್ನೊಮ್ಮೆ ನೋಡಬೇಕಲ್ಲಾ ಅನ್ನಿಸಿತ್ತು. ಆದರೆ ಅದಕ್ಕೆ ಅಪರೂಪದ ಪುರಸ್ಕಾರ ದೊರೆತಾಗಲೂ ಮಾಧ್ಯಮಗಳು ವಿಶೇಷ ಪ್ರಚಾರವೆನನ್ನೂ ಕೊಡಲಿಲ್ಲ. ಹಾಗೂ ಮೈಸೂರು ಬಿಟ್ಟರೆ ರಾಜ್ಯ ರಾಜಧಾನಿಯಲ್ಲಿ ಅದರ ಪ್ರದರ್ಶನಕ್ಕೆ ಯಾರೂ ಏರ್ಪಾಟು ಮಾಡಲಿಲ್ಲ. ಆದರೆ ಕಳೆದ ಭಾನುವಾರ ಸಂವಾದ ಡಾಟ್ ಕಾಂ ಗೆಳೆಯರು ಬೆಂಗಳೂರಿನ ಯವನಿಕಾದಲ್ಲಿ ಅದರ ಪ್ರದರ್ಶನದ ಏರ್ಪಾಟು ಮಾಡಿದ್ದರು. ಸ್ವತಃ ಕೃಪಾಕರ- ಸೇನಾನಿ ಜೋಡಿ ಮತ್ತು ಕೆಲವು ತಂತ್ರಜ್ನರು ಈ ಪ್ರದರ್ಶನದಲ್ಲಿ ಪಾಲ್ಗೊಂಡು ಪ್ರೇಕ್ಷಕರ ಜೊತೆ ಸಂವಾದ ನಡೆಸಿದರು.
’ದಿ ಪ್ಯಾಕ್’ ಸಾಕ್ಷ್ಯ ಚಿತ್ರವನ್ನು ಹೇಗೆ ನೋಡಬೇಕು ಎಂಬುದರ ಬಗ್ಗೆ ಸೇನಾನಿ ಹೇಗೆ ಹೇಳುತ್ತಾರೆ; ’ಈ ಚಿತ್ರವನ್ನು ಒಂದೋ ನೀವು ಮೇಲಿನಿಂದ ನೋಡಬೇಕು ಇಲ್ಲವೇ ಕೆಳಗಿನಿಂದ ನೋಡಬೇಕು’ ನಿಜ, ಈ ಚಿತ್ರವನ್ನು ನೇರವಾಗಿ ನೋಡಲು ಸಾಧ್ಯವಾಗಲಾರದು. ಇದರಲ್ಲಿ ಕೃಪಾಕರ- ಸೇನಾನಿ ಜೋಡಿಯ ಹದಿನೆಂಟು ವರುಷಗಳ ತಪಸ್ಸಿನ ಸಾರವಿದೆ. ಎಂದೋ ಅವರ ಕಣ್ಣೆದುರಿನಲ್ಲಿ ಮಸುಕಾಗಿ ಮಿಂಚಿ ಮರೆಯಾದ ಕಾಡುನಾಯಿಗಳ ಚಿತ್ರಣವೊಂದರ ನೆನಪು ಅವರನ್ನು ಎಡೆಬಿಡದೆ ಕಾಡಿ”ದಿ ಪ್ಯಾಕ್’ ಆಗಿ ರೂಪು ಪಡೆದಿದೆ. ಅವರಿಗದು ಜೀವಂತ ಅನುಭವ. ಅದೇ ಅವರ ಬದುಕು. ನೋಡುವ ನಮಗೆ ಅದೊಂದು ಪಕ್ಷಿನೋಟ. ಕ್ಯಾಮಾರ ಭಾಷೆಯಲ್ಲಿ areal shot ಅಷ್ಟೇ. ದಕ್ಕಿದ್ದಷೇ ಭಾಗ್ಯ.
ಅವರೇ ಹೇಳುವಂತೆ ಸೀಳುನಾಯಿಗಳ ಬಗ್ಗೆ myth ಇದೆ. ಅಂದರೆ ಕಲ್ಪಿತ ಕತೆಗಳಿವೆ. ಅವು ನಿಜವಲ್ಲ, ಆದರೆ ನಿಜದ ಎಳೆಯೊಂದು ಅದರಲ್ಲಿರಬಹುದು. ನಮ್ಮೂರಿನ ಸುತ್ತಮುತ್ತ ಕೆನ್ನಾಯಿ ಅಥವಾ ಸೀಳುನಾಯಿಗಳೆಂದು ಕರೆಯುವ ಈ ಕಾಡುನಾಯಿಗಳನ್ನು ಇಂಗ್ಲೀಷಿನಲ್ಲಿ dhole ಎಂದು ಕರೆಯುತ್ತಾರೆ. ಧೊಳ್ ಎಂಬ ಶಬ್ದದ ವ್ಯುತ್ಪತ್ತಿ ತೋಳ ಆಗಿರಬಹುದೇ? ಯಾಕೆಂದರೆ ಅವುಗಳನ್ನು ತೋಳ ಅಂತಲೂ ನಮ್ಮೂರಿನಲ್ಲಿ ಕರೆಯುತ್ತಾರೆ. ಅಂತರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಕೆನ್ನಾಯಿಗಳನ್ನು ಅವಸಾನದ ಅಂಚಿನಲ್ಲಿರುವ ಪ್ರಾಣಿ ಪ್ರಬೇದ ಎಂದು ಗುರುತಿಸಿದೆ. ಭಾರತದಲ್ಲಿ ಪಶ್ಚಿಮ ಘಟ್ಟ ಪ್ರದೇಶದ ನಿತ್ಯ ಹರಿದ್ವರ್ಣದ ದಟ್ಟ ಕಾಡುಗಳಲ್ಲಿ ಇವು ಗುಂಪಾಗಿ ವಾಸಿಸುತ್ತವೆ. ಇವು ಹಿಡಿದ ಬೇಟೆಯನ್ನು-ಅಂದರೆ ಆಹಾರವನ್ನೂ-ಕಿತ್ತುಕೊಳ್ಳಲು ಸದಾ ಹೊಂಚು ಹಾಕುವ ಮನುಷ್ಯನನ್ನು ಇವುಗಳು ಎಂದೂ ನಂಬುದಿಲ್ಲ ಎಂದು ಅವುಗಳ ವರ್ತನೆಯನ್ನು ಹದಿನೆಂಟು ವರ್ಷಗಳಿಂದ ಸೂಕ್ಷವಾಗಿ ಅಧ್ಯಯನ ನಡೆಸಿದ ಈ ಜೋಡಿ ಹೇಳುತ್ತಾರೆ. ಅವರ ಬದುಕಿನ ಬಹು ಭಾಗವನ್ನು ಕಾಡಿನಲ್ಲಿ ಕಳೆದು ತಯಾರಿಸಿದ ’ದಿ ಪ್ಯಾಕ್’ ಗೀನ್ ಅಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಾಗ ಅವರು ಪ್ರಶಸ್ತಿ ಸಿಕ್ಕಷ್ಟೆ ಸಂತೋಷಗೊಂಡರಂತೆ. ಅದಕ್ಕೆ ಕಾರಣವೂ ಇತ್ತು.
೨೦೧೦ರ ತನಕ ಗ್ರೀನ್ ಆಸ್ಕರ್ ಪ್ರಶಸ್ತಿ ಯುರೋಪ್ ಮತ್ತು ಅಮೇರಿಕಾ ದೇಶಗಳ ಕ್ರೀಟವನ್ನು ಅಲಂಕರಿಸುತ್ತಿದ್ದವು. ಆದರೆ ೨೦೧೦ರಲ್ಲಿ ಏಷ್ಯಾ ಖಂಡದಿಂದ ಪ್ರಥಮ ಬಾರಿಗೆ ಸಾಕ್ಷ್ಯ ಚಿತ್ರವೊಂದು ವೈಲ್ಡ್ ಸ್ಕ್ರೀನ್ ಚಿತ್ರೋತ್ಸವದ ಮುಕ್ತ ವಿಭಾಗಕ್ಕೆ ಪ್ರವೇಶ ಪಡೆಯಿತು, ಅದುವೇ ಕೃಪಾಕರ ಸೇನಾನಿಯವರ ’ದಿ ಪ್ಯಾಕ್’’ ಚಿತ್ರ. ಅವರು ಸಂತೋಷ ಪಡಲು ಇನ್ನೂ ಒಂದು ಕಾರಣವಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಚಿತ್ರ ನಿರ್ಮಾಪಕರ ಹತ್ತಿರ ಅತ್ಯಾಧುನಿಕ ಕ್ಯಾಮಾರ ಮತ್ತು ನುರಿತ ತಂತ್ರಜ್ನರ ದೊಡ್ಡ ಪಡೆಯೇ ಇರುತ್ತಿತ್ತು. ಆದರೆ ಈ ಜೋಡಿಯ ಬಳಿ ಅದ್ಯಾವುದೂ ಇರಲಿಲ್ಲ. ಆದರೆ ಕಠಿಣ ಪರಿಶ್ರಮ, ತಾಳ್ಮೆ, ಸೂಕ್ಷ್ಮ ಸಂವೇದನೆ ಮತ್ತು ಅವರೇ ಹೇಳಿಕೊಳ್ಳುವಂತೆ ಕಾಡಿನ ಸಜ್ಜನಿಕೆಯ ನಡಳಿಕೆ ಅವರಲ್ಲಿತ್ತು.
ಆ ವರ್ಷ ೪೪೬ ಚಿತ್ರಗಳು ಸ್ಪರ್ಧೆಗೆ ಬಂದಿದ್ದವು.ಆದರಲ್ಲಿ ಅಂತಿಮ ಸುತ್ತಿನಲ್ಲಿ ಉಳಿದುಕೊಂಡದ್ದು ೬೧. ’ದಿ ಪ್ಯಾಕ್’’ ಅರ್ದ ಘಂಟೆಯ ಐದು ಕಂತುಗಳನ್ನು ಒಳಗೊಂಡಿತ್ತು. ಅದರ ಕೊನೆಯ ಕಂತು ಪ್ರಾಣಿವರ್ತನಾ ವಿಬಾಗದ ಗ್ರೀನ್ ಆಸ್ಕರ್ ಪ್ರಶಸ್ತಿಗೆ ಬಾಜನವಾಯಿತು.
ಕೃಪಾಕರ- ಸೇನಾನಿ ವನ್ಯ ಜೀವಿ ಛಾಯಾಗ್ರಹಕರೆಂದು ನಮಗೆ ಗೊತ್ತಿದೆ. ಹೇಗೆಂದರೆ, ಅವರು ತೆಗೆದ ಅಪರೂಪದ ಚಿತ್ರಗಳನ್ನು ಪತ್ರಿಕೆಗಳು ಆಗಾಗ ಪ್ರಕಟಿಸುತ್ತಿರುತ್ತವೆ. ಆದರೆ ಅವರಲ್ಲಿ ಕೃಪಾಕರ ಯಾರು? ಸೇನಾನಿ ಯಾರು ಎಂಬುದರ ಬಗ್ಗೆ ಹಲವರಿಗೆ ಗೊಂದಲಗಳಿವೆ. ಅದು ಮೊನ್ನೆ ನಡೆದ ಸಂವಾದದಲ್ಲೂ ವ್ಯಕ್ತವಾಯಿತು. ಪ್ರೇಕ್ಷಕರು ಅವರ ಕಾರ್ಯ ವೈಖರಿಯ ಬಗ್ಗೆ ಕುತೂಹಲದಿಂದ ಕೇಳಿದ ಪ್ರಶ್ನೆಗಳಿಗೆ ಅವರು ತಾಳ್ಮೆಯಿಂದ ಸರಳ ಕನ್ನಡದಲ್ಲಿಯೇ ಉತ್ತರಿಸುತ್ತಿದ್ದರು. ಗ್ರಾಮೀಣ ಪ್ರದೇಶದ ಮಕ್ಕಳಿಗಾಗಿಯೇ ಕನ್ನಡದಲ್ಲಿ ಕಿರು ಚಿತ್ರಗಳನ್ನು ನಿರ್ಮಿಸುವ ಯೋಚನೆಯನ್ನು ಹಂಚಿಕೊಂಡರು. ಕನ್ನಡ ಎಂಬ ಪದವನ್ನು ಯಾಕೆ ಒಪಯೋಗಿಸಿದೆ ಎಂದರೆ ಅವರಿಗೆ ಕನ್ನಡದ ಬಗ್ಗೆ ಅಸಡ್ಡೆಯಿದೆ ಎಂಬ ವದಂತಿಗಳಿವೆ. ಕೃಪಾಕರ, ಕನ್ನಡಿಗರ ವೈಚಾರಿಕ ಪ್ರಜ್ನೆಯನ್ನು ವಿಸ್ತರಿಸಿದ ವಡ್ಡರಸೆ ರಘುರಾಮ ಶೆಟ್ಟರ’ಮುಂಗಾರು’ ಪೇಪರಿನಲ್ಲೂ ಸ್ವಲ್ಪ ಕಾಲ ಕೆಲಸ ಮಾಡಿದ್ದವರು. ಸೇನಾನಿ, ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಓದಿದವರು. ಸೂಕ್ಷ್ಮ ಮತ್ತು ಆರೋಗ್ಯಕರ ಮನಸ್ಸಿನ ಈ ಜೋಡಿ ಕಾಡನ್ನು ಬಿಟ್ಟು ನಮ್ಮ ನಾಡಿಗೂ ಆಗಾಗ ಭೇಟಿ ನೀಡುತ್ತಾ ಕಾಡಿನ ಸಜ್ಜನಿಕೆಯನ್ನು ನಮಗೂ ತಿಳಿಸುತ್ತಿರಲಿ ಎಂಬುದು ನಮ್ಮ ಕೋರಿಕೆ.
Saturday, August 27, 2011
ಮಾಧ್ಯಮ ಲೋಕ; ಒಡೆದ ಕನ್ನಡಿ
ಪ್ರತಿ ಮಂಗಳವಾರ ಬೆಳಿಗ್ಗೆ ಎಂಟು ಗಂಟೆಗೆ ನಾನು ಎಫ಼್ ಎಮ್ ರೈನ್ ಬೋ ದಲ್ಲಿ’ ಕರ್ತ-ಪತ್ರಕರ್ತ’ ಕಾರ್ಯಕ್ರಮವನ್ನು ಕೇಳುತ್ತೇನೆ. ಪತ್ರಿಕೋದ್ಯಮದಲ್ಲಿ ಅಪಾರ ಅನುಭವವನ್ನು ಪಡೆದಿಕೊಂಡಿರುವ ಖ್ಯಾತ ಪತ್ರಕರ್ತರನ್ನು ಸ್ಟುಡಿಯೋಕ್ಕೆ ಅಹ್ವಾನಿಸಿಅವರ ಸಾಧನೆಯನ್ನು ಶೋತೃಗಳಿಗೆ ಪರಿಚಯಿಸುವ ಸಂದರ್ಶನವನ್ನಾಧರಿಸಿದ ನೇರ ಪ್ರಸಾರದ ಕಾರ್ಯಕ್ರಮವಿದು. ಎಸ್ ಎಸ್ ಉಮೇಶ್ ನಡೆಸುವ ಈ ಕಾರ್ಯಕ್ರಮ ಈಗಾಗಲೇ ನೂರು ಎಪಿಸೋಡ್ ದಾಟಿದೆ. ಇಂದು ಅದರ ಅತಿಥಿಯಾಗಿದ್ದವರು ಹಿಂದು ಪತ್ರಿಕೆಯ ಬೆಂಗಳೂರಿನ ಸ್ಥಾನಿಕ ಸಂಪಾದಕರಾಗಿದ್ದ ಅರಕರೆ ಜಯರಾಮ್ .
ಅರಕರೆ ಜಯರಾಮ್ ಎಂದರೆ ಸದಾ ಸೂಟ್ ದಾರಿಯಾಗಿರುವ, ಗಂಭೀರ ವ್ಯಕ್ತಿತ್ವದ, ಗುಂಡು ಮುಖದ ವ್ಯಕ್ತಿಯೊಬ್ಬರು ನಮ್ಮ ಕಣ್ಣ ಮುಂದೆ ನಿಲ್ಲುತ್ತಾರೆ. ಪ್ರೆಸ್ ಕ್ಲಬ್ ನಲ್ಲಿ ಅಗೊಮ್ಮೆ-ಈಗೊಮ್ಮೆ ದೂರದಿಂದ ಅವರನ್ನು ನೋಡಿದ್ದೆ. ಅವರಿಗೆ ಅಸ್ಖಲಿತವಾಗಿ ಕನ್ನಡ ಮಾತಾಡಲು ಬರುತ್ತದೆಯೆಂದು ನನಗೆ ಗೊತ್ತೇ ಇರಲಿಲ್ಲ.
ಜಯರಾಮ್ ಅವರು ಸಮಕಾಲಿನ ಪತ್ರಿಕೊಧ್ಯಮದ ಬಗ್ಗೆ ಮಾತಾಡುತಾ, ಬೆಂಗಳೂರಲ್ಲಿ ಐವತ್ತಕ್ಕಿಂತಲೂ ಜಾಸ್ತಿ ಕಾಲೇಜುಗಳಲ್ಲಿ ಪತ್ರಿಕೋಧ್ಯಮವನ್ನು ಕಲಿಸುತ್ತಾರೆ.ಆದರೆ ಗುಣಮಟ್ಟದ ಉಪನ್ಯಾಸಕರಿಲ್ಲ, ಆಲ್ಲದೆ ಪತ್ರಕರ್ತನೊಬ್ಬ ಕ್ಲಾಸ್ ರೂಮ್ ನಲ್ಲಿ ರೂಪುಗೊಳ್ಳುವುದಿಲ್ಲ, ಎಂದು ಹೇಳುತ್ತಾ ಹಿಂದಿನ ತಲೆಮಾರಿನ ಪತ್ರಕರ್ತರಲ್ಲಿದ್ದ ಬದ್ಧತೆ ಮತ್ತು ವೃತ್ತಿಪರತೆಯ ಬಗ್ಗೆ ಅಧಿಕಾರಯುತವಾಗಿ ಮಾತಾಡತೊಡಗಿದರು.
ಟೀವಿ ಜರ್ನಲಿಸ್ಟ್ ಗಳ ಬಗ್ಗೆ ಮಾತಾಡುತ್ತಾ ಅವರೊಂದು ಮಾತು ಹೇಳಿದರು; ಟೀವಿ ಜರ್ನಲಿಸ್ಟ್ ಗಳು ಎಮಿನೆಂಟ್ ಅಲ್ಲ, ಅವರೆಲ್ಲಾ ಪ್ರಾಮಿನೆಂಟ್ ಗಳು, ಅಂತ. ನಿಜ, ಹಿಂದೆ ಪತ್ರಿಕೋಧ್ಯಮವೆಂಬುದು ಸೇವಾಕ್ಷೇತ್ರವಾಗಿತ್ತು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಂತೆ ಪತ್ರಿಕಾರಂಗವು ಕೂಡಾ ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭವೆಂದು ಪರಿಗಣಿತವಾಗಿತ್ತು. ಸಮಾಜ ಸೇವೆಗೆ ಸಮೂಹ ಮಾಧ್ಯಮಗಳು ಪೂರಕವಾಗಿ ಕೆಲಸ ಮಾಡುತ್ತಿದ್ದವು. ಹಾಗಾಗಿ ಆದರ್ಶಗಳನ್ನಿಟ್ಟುಕೊಂಡ, ತತ್ವಬದ್ಧರಾದ ಯುವಕರು ನಾನಾ ಕ್ಷೇತ್ರಗಳಿಂದ ಪತ್ರಿಕಾರಂಗಕ್ಕೆ ಬರುತ್ತಿದ್ದರು.
ಆದರೆ ಇಂದು ಹಾಗಿಲ್ಲ. ಪತ್ರಿಕಾ ರಂಗ ಇವತ್ತು ಉದ್ಯಮ ಆಗಿದೆ. ಸಿನೇಮಾ, ಕ್ರೀಕೆಟ್ ನಂತೆ ಅದೊಂದು ಗ್ಲಾಮರ್ ಜಗತ್ತು. ಅಲ್ಲಿ ಹಣ ಮತ್ತು ಖ್ಯಾತಿ ಎರಡೂ ಇದೆ. ಹಾಗಾಗಿ ಅಲ್ಲಿ ಹಣ ಹಾಕಿ ದುಡ್ಡು ದುಡಿಯುವುದನ್ನು ಕರಗತ ಮಾಡಿಕೊಳ್ಳಲು ಹವಣಿಸುವವರ ದೊಡ್ಡ ವರ್ಗವೇ ಇದೆ. ರಿಯಲ್ ಎಸ್ಟೇಟ್ ಕುಳಗಳು ಸಿನೇಮಾರಂಗಕ್ಕೆ ಧಾಂಗುಡಿಯಿಟ್ಟ ಮೇಲೆ ಕನ್ನಡ ಸಿನೇಮಾ ಪ್ರಪಂಚ ಬದಲಾದ ಪರಿಯನ್ನೇ ಗಮನಿಸಿ. ಸುರೇಶ ಕಲ್ಮಾಡಿ ಒಬ್ಬ ಸಾಕಲ್ಲಾ; ಕ್ರೀಡಾ ಜಗತ್ತಿನಲ್ಲಿ ಹಣದ ಮೆರೆದಾಟದ ವೈಖರಿಯನ್ನು ತಿಳಿದುಕೊಳ್ಳಲು.
ಮಾಧ್ಯಮ ರಂಗಕ್ಕೆ ಬನ್ನಿ, ನೀರಾ ರಾಡಿಯಾ ಪ್ರಕರಣದಲ್ಲಿ ಶಾಮೀಲಾದರೆನ್ನಲಾದ ಬರ್ಕಾದತ್ತ, ವೀರಸಾಂಘ್ವಿ, ಪ್ರಭು ಚಾವ್ಲ ಮುಂತಾದವರೆಲ್ಲಾ ಈಗಲೂ ಸ್ವಲ್ಪವೂ ಪಾಪ ಪ್ರಜ್ನೆಯಿಲ್ಲದೆ ನ್ಯಾಯಾಧೀಶರ ಧಿಮಾಕಿನಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ.
ಸಾಂಸ್ಕೃತಿಕವಾಗಿ ಗುರುತಿಸಿಕೊಂಡಿರುವ ರಾಜಕಾರಣಿ ಬಿ.ಎಲ್. ಶಂಕರ್ ತಮ್ಮ ಮಾತುಗಳಲ್ಲಿ ಮತ್ತೆ ಮತ್ತೆ ಒತ್ತಿ ಹೇಳುತ್ತಾರೆ, ಕನ್ನಿಮೋಳಿ, ಎ. ರಾಜ ಮುಂತಾದವರೆಲ್ಲಾ ಆರೋಪ ಹೊತ್ತು ಜೈಲಿಗೆ ತಳ್ಳಲ್ಪಡುತ್ತಾರೆ. ಮಾಧ್ಯಮದವರಿಗೇಕೆ ವಿನಾಯಿತಿ? ನಿಜ, ತಪ್ಪು ಯಾರು ಮಾಡಿದರೂ ತಪ್ಪೇ. ನಮಗೆಲ್ಲರಿಗೂ ಇರುವುದು ಒಂದೇ ಸಂವಿಧಾನ ತಾನೇ?
ಈಗ ಕರ್ನಾಟಕವನ್ನೇ ನೋಡಿ. ಲೋಕಾಯುಕ್ತ ವರದಿ ಬಂದಿದೆ. ಯು.ವಿ.ಸಿಂಗ್ ವರಧಿಯಲ್ಲಿ ಸ್ಪಷ್ಟ ವಾಗಿ ಉಲ್ಲೇಖಿತವಾಗಿದೆ; ಕನ್ನಡದ ಕೆಲವೊಂದು ಪತ್ರಕರ್ತರು ಗಣಿಕಪ್ಪವನ್ನು ಪಡೆದಿದ್ದಾರೆಂದು.
ಗಣಿಗಾರಿಕೆಯಲ್ಲಿ ದಂತಕಥೆಯಾಗುತ್ತಿರುವ ರೆಡ್ಡಿ ಸಹೋದರರ ಗ್ಯಾಂಗ್ ವಿಷಯ ಬಿಟ್ಟುಬಿಡಿ. ಅವರು ವ್ಯಾಪಾರಿಗಳು. ’ವ್ಯಾಪಾರಂ ದ್ರೋಹ ಚಿಂತನಂ’ ಎಂಬ ಮಾತೇ ಇದೆಯಲ್ಲಾ. ದುಡ್ಡು ಬಾಚಿಕೊಳ್ಳುವುದೇ ವ್ಯಾಪಾರದ ಉದ್ದೇಶ. ಆದ್ರೆ ಪತ್ರಕರ್ತರ ಮುಖವಾಡಗಳನ್ನು ತೊಟ್ಟುಕೊಂಡು ಸಮಾಜಕ್ಕೆ ನೀತಿ ಪಾಠ ಹೇಳುವುದನ್ನು ಹಾಬಿಯನ್ನಾಗಿ ಇಟ್ಟುಕೊಂಡವರನ್ನು ಏನಂತ ಕರೆಯುವುದು?
ಕಳೆದವಾರ ಡೆಕ್ಕನ್ ಹೆರಾಲ್ಡ್ ಬಯಲು ಮಾಡಿದ ಗಣಿ ಕಪ್ಪ ಪಡೆದವರ ಹೆಸರುಗಳು ಒಂದು ಸಂಕೇತ ಮಾತ್ರ. ಮಧುಶ್ರೀಯಂಥ ನೂರಾರು ಕಂಪೆನಿಗಳಿವೆ ನೂರಾರು ’ಖಾರದ ಪುಡಿ ಮಹೇಶ’ರಿದ್ದಾರೆ. ಸಂಜಯ್ ಸರ್ ಗಳಿದ್ದಾರೆ, ಮೂರ್ತಿಗಳಿದ್ದಾರೆ. ಹಾಗೆಯೇ ನೂರಾರು ವಿ.ಭಟ್, ಆರ್.ಬಿಗಳಿದ್ದಾರೆ.
ಪತ್ರಿಕೋದ್ಯಮವೆಂಬ ಗ್ಲಾಮರ್ ಲೋಕದಲ್ಲಿ ಮುಖವಾಡ ತೊಟ್ಟಿರುವ ಕೆಲವು ಪತ್ರಕರ್ತರ ಸ್ವವೈಭವೀಕರಣ, ಐಷಾರಾಮಿ ಬದುಕು ಹೇಗಿದೆಯೆಂದರೆ ನಿಜವಾದ ಪತ್ರಕರ್ತರೆಂದರೆ ಹೀಗೆಯೇ ಇರಬೇಕೆಂಬ ಭ್ರಮೆಯನ್ನು ಸಾರ್ವಜನಿಕರಲ್ಲಿ ಉಂಟುಮಾಡುವಂತೆ ಅವರ ನಡವಳಿಕೆಯಿರುತ್ತದೆ. ಅವರಲ್ಲಿ ಗಣಿ ಮಾಲೀಕರಿದ್ದಾರೆ; ರಿಯಲ್ ಎಸ್ಟೇಟ್ ಎಜೆಂಟರಿದ್ದಾರೆ; ಬ್ಲಾಕ್ ಮೇಲ್ ಮಾಡುವವರಿದ್ದಾರೆ; ಹಿಡನ್ ಅಜೆಂಡಗಳನ್ನಿಟ್ಟುಕೊಂಡಿರುವ ರಾಜಕೀಯ ಪಕ್ಷ ಪ್ರಾಯೋಜಿತರಿದ್ದಾರೆ. ರಾಜಕೀಯ ದಲ್ಲಾಳಿಗಳಿದ್ದಾರೆ. ಕಾರ್ಪೋರೇಟ್ ಕಂಪೆನಿಗಳ ಪಿ.ಅರ್.ಓ ಗಳಿದ್ದಾರೆ. ಜಾತೀಯ ವಕ್ತಾರರಿದ್ದಾರೆ. ಇವರ ಮೆರೆದಾಟದಲ್ಲಿ ಬಹುಸಂಖ್ಯಾತರಾಗಿರುವ ಪತ್ರಕರ್ತರ ಪ್ರಾಮಾಣಿಕತೆ, ಸಮಾಜಿಕ ಕಾಳಜಿ ಮಸುಕಾಗಿ ಕಾಣುತ್ತದೆ. ರಾಜಕಾರಣಿಗಳೆಲ್ಲಾ ಭ್ರಷ್ಟರು, ಸ್ವಾರ್ಥಿಗಳು ಎಂದು ಸಾರಸಗಟಾಗಿ ಅನುಮಾನದಿಂದ ನೋಡಿದಂತೆ ಪತ್ರಕರ್ತರೆಲ್ಲಾ ಎಂಜಲು ಕಾಸಿಗೆ ಕೈಯೊಡ್ಡುವವರು ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡುತ್ತಿದೆ.
ಸಂಶಯವಂತೂ ಇದ್ದೇ ಇದೆ; ಗಣಿ ಲಾಬಿ ಮತ್ತು ಕಾರ್ಪೋರೇಟ್ ಜಗತ್ತು ಪತ್ರಿಕೋಧ್ಯಮವನ್ನು ನಿಯಂತ್ರಿಸುತ್ತದೆಯೆಂದು. ಕಳೆದ ಮೂರ್ನಾಲ್ಕು ವರ್ಷಗಳಿಂದ ಮಾಧ್ಯಮದ ಆದ್ಯತೆಗಳು ಬದಲಾಗಿರುವುದು ಸಾರ್ವಜನಿಕರ ಕಣ್ಣಿಗೂ ನಿಚ್ಚಳವಾಗಿ ಗೋಚರಿಸುತ್ತಿದೆ. ಇಲ್ಲವಾದರೆ ಕರ್ನಾಟಕದ ಮಟ್ಟಿಗೆ ಮೂರು ಪ್ರಮುಖ ವಿಷಯಗಳಾದ ಅಕ್ರಮ ಗಣಿಗಾರಿಕೆ, ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಇನ್ನೂ ಸಿಗದ ಪುನರ್ವಸತಿ, ರೈತರ ಕೃಷಿ ಭೂಮಿ ಸ್ವಾಧೀನ ಇವುಗಳಿಗೆ ಮಾಧ್ಯಮ ಲೋಕ ಸಶಕ್ತ ಧ್ವನಿಯಾಗಬೇಕಿತ್ತು. ಆದರೆ ಹಾಗಾಗಲಿಲ್ಲ. ಅವೆಲ್ಲಾ ವರಧಿಗಾರಿಕೆಯ ಮಟ್ಟದಲ್ಲಿ ಉಳಿದುಬಿಟ್ಟವು.
ಅಣ್ಣಾ ಹಜಾರೆಯವ ಬ್ರಷ್ಟಾಚಾರ ವಿರೋಧಿ ಹೋರಾಟದಲ್ಲೂ ಅಷ್ಟೇ. ಸುದ್ದಿಯನ್ನು ರೋಚಕವಾಗಿ, ರಂಜನೀಯವಾಗಿ, ಎಮೋಷನಲಾಗಿ ಕೊಡುತ್ತಿದೆ. ಕಾರ್ಪೋರೇಟ್ ಜಗತ್ತು ಪ್ರಜಾಪ್ರಭುತ್ವವನ್ನು ನಿಶ್ಯಕ್ತಗೊಳಿಸುತ್ತಿದೆಯೇನೋ ಎಂಬ ಸಂಶಯವೂ ಅವರನ್ನು ಕಾಡುವುದಿಲ್ಲ. ಆಡಳಿತ ಮಂಡಳಿಯಲ್ಲಿ ಬದ್ಧತೆಯಿಲ್ಲ. ಬದ್ಧತೆ ಕಾಣುತ್ತಿಲ್ಲ. ಬದ್ಧತೆಯಿರುತ್ತಿದ್ದರೆ ಬ್ರಷ್ಟಾಚಾರದ ಆಪಾದನೆ ಹೊತ್ತಿರುವ ಪತ್ರಕರ್ತರ ಮೇಲೆ ಮ್ಯಾನೇಜ್ ಮೆಂಟಿನವರು ಕ್ರಮ ಕೈಗೊಳ್ಳುತ್ತಿದ್ದರು. ದೃಶ್ಯ ಮಾಧ್ಯಮದ ಚರ್ಚೆಗಳಲ್ಲಿ ಭಾಗವಹಿಸುವವರಿಗೆಲ್ಲಾ ಗೊತ್ತಿದೆ, ತಾವು ಪರಸ್ಪರ ಕಳ್ಳರೆಂದು.
ಅಕ್ರಮ ಗಣಿಗಾರಿಕೆಯಿಂದ ದುಡ್ಡು ಸಂಪಾದನೆ ಮಾಡಿದವರು, ದುಡ್ಡು ಕೊಟ್ಟು ಎಂಪಿ ಸೀಟ್ ಖರೀದಿ ಮಾಡಿದವರು, ಸರಕಾರದ ಕೃಪಾಶ್ರಯದಿಂದ ಭೂಮಿ ಡಿನೋಟಿಪಿಕೇಶೆನ್ ಮಾಡಿಸಿಕೊಂಡವರು, ವೈಯಕ್ತಿಕ ವರ್ಚಸ್ಸು ಹೆಚ್ಚಿಸಿಕೊಳ್ಳಲು ಪತ್ರಿಕೆ ನಡೆಸುತ್ತಿರುವವರು- ಇವರೆಲ್ಲಾ ಮಾಧ್ಯಮವನ್ನು ಅಸ್ತ್ರ-ಶಸ್ತ್ರಗಳಂತೆ ಬಳಸುತ್ತಿದ್ದಾರೆ. ಇಂತವರಿಂದ ಸಾಮಾಜಿಕ ಹೊಣೆಗಾರಿಕೆಯನ್ನು ನಿರೀಕ್ಷಿಸಲು ಸಾಧ್ಯವೇ? ಇವರಿಗೆಲ್ಲಾ ಪತ್ರಕರ್ತರು ಬೇಕಾಗಿಲ್ಲ, ದಲ್ಲಾಳಿಗಳು ಬೇಕಾಗಿದ್ದಾರೆ. ಹಾಗಾಗಿ ಈ ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿಯ ಗಂಧ ಗಾಳಿ ಇಲ್ಲದವರು ಕೂಡಾ ಪತ್ರಕರ್ತರಾಗುತ್ತಿದ್ದಾರೆ.
ದಲ್ಲಾಳಿಗಳು ಯಾವಾಗಲೂ ಅರ್ಥಿಕರಾಗಿ ಬಲಾಢ್ಯರಾಗುತ್ತಲೇ ಹೋಗುತ್ತಾರೆ. ಇಲ್ಲವಾದರೆ ಪತ್ರಕರ್ತನೊಬ್ಬ ನೂರಾರು ಕೋಟಿಯ ಒಡೆಯನಾಗಲು ಸಾಧ್ಯವೇ ಇಲ್ಲ. ದುಡ್ಡು ಎಲ್ಲಾ ದೌರ್ಭಲ್ಯಗಳನ್ನು, ಅವಲಕ್ಷಣಗಳನ್ನು ಮುಚ್ಚಿ ಹಾಕುತ್ತದೆ.
ಆದರೆ ಇದರಿಂದೆಲ್ಲಾ ಆಘಾತಕ್ಕೊಳಗಾಗುವವರು ಜನಸಾಮಾನ್ಯರು, ಅವರ ಮುಗ್ದ ಮನಸು. ಅವರ ನಂಬಿಕೆಯ ಜಗತ್ತು. ಅವರ ಬದುಕಿನ ಮಾದರಿಗಳು ಛಿದ್ರಗೊಳ್ಳುತ್ತಿದೆ. ಛಿದ್ರಗೊಂಡ ಕನ್ನಡಿಯಲ್ಲಿ ಪೂರ್ಣ ಬಿಂಬವನ್ನು ಕಾಣಲು ಸಾಧ್ಯವಿಲ್ಲ.
Thursday, August 18, 2011
ಒಳಗೂ ಹೊರಗೂ ವ್ಯಾಪಿಸಿರುವ ’gloomy Sunday’ _ ಆತ್ಮಹತ್ಯೆಯ ಹಾಡು…..
The hours are slumberless
dearest the shadows
I live with are numberless
Little white flowers
will never awaken you,
not where the dark coach
of sorrow has taken you
Angels have no thought
of ever returning you
would they be angry
if I thought of joining you?
Gloomy Sunday
Gloomy Sunday
with shadows I spend it all
my heart and I
have decided to end it all
Soon there'll be prayers
and candles are lit, I know
let them not weep
let them know, that I'm glad to go
Death is no dream
for in death I'm caressing you
with the last breath of my soul
I'll be blessing you
Gloomy Sunday
Dreaming, I was only dreaming
I wake and I find you asleep
on deep in my heart, dear
Darling, I hope
that my dream hasn't haunted you
my heart is telling you
how much I wanted you
Gloomy Sunday
It's absolutely gloomy sunday
*rezso seress
Thursday, August 11, 2011
ನಾವೆಷ್ಟು ಸ್ವತಂತ್ರರು?
ನಾವೆಷ್ಟು ಸ್ವತಂತ್ರರು ಎಂಬ ಪ್ರಶ್ನೆ ಮೂಲಭೂತವಾಗಿ ಅಧ್ಯಾತ್ಮದ ಜಿಜ್ನಾಸೆ. ಆದರೆ ಈ ಪ್ರಶ್ನೆಯನ್ನು ಸಾಮಾಜಿಕ ಮತ್ತು ರಾಜಕೀಯದ ಹಿನ್ನೆಲೆಯಲ್ಲಿಟ್ಟು ನೋಡಿದರೆ ನಾವೆಷ್ಟು ಅಸಹಾಯಕರು ಎಂಬುದು ಅರಿವಾಗುತ್ತದೆ. ಮಾನವನ ನೆಲೆಯಲ್ಲಿ ನಿಂತು ಸ್ವಾತಂತ್ರ್ಯದ ಬಗ್ಗೆ ಯೋಚಿಸಿದಾಗ ವ್ಯಕ್ತಿಯೊಬ್ಬನಿಗೆ ಮೂರು ರೀತಿಯ ಸ್ವಾತಂತ್ರ್ಯದ ಅಪೇಕ್ಷೆ ಇರುತ್ತದೆ. ಅದು ವೈಯಕ್ತಿಕ ಸ್ವಾತಂತ್ರ್ಯ, ಸಾಮಾಜಿಕ ಸ್ವಾತಂತ್ರ್ಯ ಮತ್ತು ರಾಜಕೀಯ ಸ್ವಾತಂತ್ರ್ಯ. ಇದು ಅಪೇಕ್ಷೆ ಮಾತ್ರ. ಯಾಕೆಂದರೆ ನಾವೆಲ್ಲಾ ಒಂದಲ್ಲಾ ಒಂದು ರೀತಿಯಲ್ಲಿ ಅವಲಂಬಿತರೇ.
ಮೊನ್ನೆ ಮೊನ್ನೆ ಚಿಕ್ಕ ಬಳ್ಳಾಪುರದ ಚಿಂತಾಮಣಿ ತಾಲೂಕಿನ ಎರ್ರಾಕೋಟೆ ಮತ್ತು ಬಾರ್ಲಹಳ್ಳಿಯಲ್ಲಿ ನಡೆದ ಹತ್ತು ಮಂದಿಯ ಧಾರುಣ ಹತ್ಯೆಯನ್ನೇ ಗಮನಿಸಿ, ಅಲ್ಲಿ ನಾವು ಯಾರನ್ನು ತಪ್ಪಿತಸ್ಥರನ್ನಾಗಿ ನೋಡಬೇಕು? ನಾವು ಒಪ್ಪಿಕೊಂಡ ರಾಜಕೀಯ ವ್ಯವಸ್ಥೆಯನ್ನೇ? ಆ ರಾಜಕೀಯ ವ್ಯವಸ್ಥೆಯ ಭಾಗವಾಗಿರುವ ಪೋಲಿಸರ ನಿಷ್ಕ್ರೀಯತೆಯನ್ನೇ? ಅಥವಾ ಮನುಷ್ಯನ ಮನದಾಳದಲ್ಲಿ ಹುದುಗಿರುವ ಕ್ರೌರ್ಯದ ವಿಜೃಂಭಣೆಯೇ? ಇದನ್ನು ನೋಡುತ್ತಿರುವಾಗ ಸ್ವಾತಂತ್ರ್ಯದ ಜೊತೆಯಲ್ಲಿಯೇ ಜವಾಬ್ದಾರಿಯೂ ಇರಬೇಕು ಅನ್ನಿಸುತ್ತದೆಯಲ್ಲವೇ? ನಮ್ಮ ಸಂವಿಧಾನದಲ್ಲಿ ಅದು ಉಲ್ಲೇಖಿತವಾಗಿದೆ. ಆದರೆ ಅದನ್ನು ನಾವು ಪರಿಪಾಲಿಸುತ್ತಿದ್ದೇವೆಯೇ?
ನಾನೊಬ್ಬಳು ಮಹಿಳೆ.ನನ್ನ ಸ್ವಾತಂತ್ರ್ಯದ ಕಲ್ಪನೆಗೂ ಪುರುಷನೊಬ್ಬನ ಸ್ವಾತಂತ್ರ್ಯದ ಕಲ್ಪನೆಗೂ ಸಾಮಾಜಿಕ ನೆಲೆಯಲ್ಲಿ ಅಪಾರ ವ್ಯತ್ಯಾಸವಿದೆ. ನಾನು ಬದುಕನ್ನು ಅರ್ಥೈಸಿಕೊಳ್ಳುವ ರೀತಿಯೇ ಬೇರೆ ಆತನ ರೀತಿಯೇ ಬೇರೆ. ನನಗೆ ಆತ ಪ್ರತಿಸ್ಪರ್ಧಿಯಲ್ಲ. ಯಾಕೆಂದರೆ ಪ್ರಕೃತಿ ಇಬ್ಬರನ್ನೂ ಅನನ್ಯ ರೀತಿಯಲ್ಲಿ ಸೃಷ್ಟಿಸಿದೆ. ಇಬ್ಬರೂ ಸ್ವತಂತ್ರವಾಗಿ ಆದರೆ ಪೂರಕವಾಗಿ ಬದುಕಿ ಎಂದಿದೆ. ಆದರೆ ನಾವು ಹಾಗಿದ್ದೇವೆಯೇ?
ವ್ಯಯಕ್ತಿಕ ಮಟ್ಟದಲ್ಲಿ ನಾವು ನಮ್ಮ ಭಾವನೆಗಳಿಗೆ ದಾಸರಾಗಿರುತ್ತೇವೆ. ನಮ್ಮ ಹೆತ್ತವರಿಗೆ, ಬಂಧುಗಳಿಗೆ,ಸೇಹಿತರಿಗೆ ಮತ್ತು ಪ್ರೀತಿ ಪಾತ್ರರಿಗಾಗಿ ಹಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳುತ್ತೇವೆ. ಈ ಹೊಂದಾಣಿಕೆಗಳು ಹಲವು ಬಾರಿ ನಮಗೆ ನೆಮ್ಮದಿಯ ಬದುಕನ್ನು ಸಹಾ ಕಟ್ಟಿ ಕೊಡಬಲ್ಲುವು. ಆದರೆ ಇದರಿಂದಾಚೆಯ ಸಾಮಾಜಿಕ ಸಾತಂತ್ರ್ಯಕ್ಕಾಗಿ ಕೈಚಾಚಿದರೆ ಹಿಂದಿನಿಂದಲೂ ನಡೆದುಬಂದಿರುವ ರೂಢಿಗತ ಕಟ್ಟುಪಾಡುಗಳು ನಮ್ಮ ಸ್ವಾತಂತ್ಯವನ್ನು ನಿಯಂತ್ರಿಸುತ್ತವೆ. ಇದನ್ನು ಮೀರುವುದು ತುಂಬಾ ಸಾಹಸದ ಕೆಲಸವೇ ಸರಿ. ಇದಕ್ಕೆ ಒಳನೋಟದ ಮತ್ತು ಚಾಣಕ್ಷತೆಯ ನಡೆ ಬೇಕಾಗುತ್ತದೆ. ಇಲ್ಲವಾದರೆ ಅದು ಸ್ವೇಛ್ಚಾಚಾರವೆಂಬ ಮೂದಲಿಕೆಗೆ ಕಾರಣವಾಗಬಹುದು.
ಆದರೆ ರಾಜಕೀಯ ಸ್ವಾತಂತ್ರ್ಯದ ಮಾತು ಬಂದಾಗ ನಾವು ಇದೆಲ್ಲಕ್ಕಿಂತಲೂ ಹೆಚ್ಚು ಗೊಂದಲಕ್ಕಿಡಾದಂತೆ ನನಗೆ ಭಾಸವಾಗುತ್ತೇನೆ. ಯಾಕೆಂದರೆ ನಾವು ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡವರು. ಅಂದರೆ ಇಲ್ಲಿ ಪ್ರಜೆಗಳೇ ಪ್ರಭುಗಳು. ಆದರೆ ಎಂತಹ ಪ್ರಜೆಗಳು? ಎಂತಹ ಪ್ರಭುಗಳು?
ಕಣ್ಣೆದುರಿನಲ್ಲೇ ಇದೆ, ನಮ್ಮ ರಾಜ್ಯದ ರಾಜಕೀಯ ದೊಂಬರಾಟಗಳು. ಇದಕ್ಕೆ ನಾವು ಕೇವಲ ರಾಜಕಾರಣಿಗಳನ್ನು ದೂರಿ ಪ್ರಯೋಜನವಿಲ್ಲ. ಅವರು ನಾವು ಆರಿಸಿ ಕಳುಹಿಸಿರುವ ನಮ್ಮ ಪ್ರತಿನಿಧಿಗಳು. ಅವರು ತಪ್ಪು ಕಾರ್ಯಗಳನ್ನೆಸಗುತ್ತಿದ್ದರೆ ಅದರಲ್ಲಿ ನೈತಿಕವಾಗಿ ನಾವು ಕೂಡಾ ಪಾಲುದಾರರು!
ಒಂದು ದಶಕದಿಂದ ಈಚೆಗೆ ನಮ್ಮ ಆದ್ಯತೆಗಳು ಬದಲಾಗಿವೆ.ನಾವೀಗ ಜಾಗತೀಕರಣದ ಯುಗದಲ್ಲಿದ್ದೇವೆ. ಪ್ರಪಂಚವೇ ಒಂದು ಹಳ್ಳಿಯಾಗಿದೆ. ಇಲ್ಲಿ ಎಲ್ಲವೂ ಮಾರಟಕ್ಕಿಟ್ಟ ವಸ್ತುಗಳೇ. ಮೂರ್ತ ವಸ್ತುಗಳಾದ ಭೂಮಿ, ಚಿನ್ನ, ಕಬ್ಬಿಣ ಮುಂತಾದ ಖನಿಜ ಸಂಪತ್ತಿನ ಮಾತು ಹಾಗಿರಲಿ ,ಜಾತಿ, ಧರ್ಮ, ದೇವರು, ವೃತ್ತಿನಿಷ್ಟೆ, ಸೌಂದರ್ಯ ಕೊನೆಗೆ ಹೆಣ್ತತನದಂತಹ ಅಮೂರ್ತ ವಿಚಾರಗಳೂ ಕೂಡಾ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೈಪೋಟಿ ಬೆಲೆಗೆ ಮಾರಟವಾಗುತ್ತಿದೆ. ರಾಜಕಾರಣಿಗಳು ಇವುಗಳ ಪ್ರಮುಖ ದಲ್ಲಾಳಿಗಳಾಗುತ್ತಿದ್ದಾರೆ. ಹಣ ಎಲ್ಲವನ್ನೂ ಆಳುತ್ತಲಿದೆ. ಕುರುಡು ಕಾಂಚಾಣದ ಮೋಡಿ ಮನುಷ್ಯತ್ವವನ್ನೇ ಮಂಕಾಗಿಸಿದೆ.
ಸ್ವಾತಂತ್ರ್ಯವನ್ನು ಯಾರೋ ನಮಗೆ ಧಾರೆಯೆರೆದು ಕೊಡುವುದಿಲ್ಲ. ಅದನ್ನು ನಾವೇ ಕಂಡುಕೊಳ್ಳಬೇಕು; ಪಡೆದುಕೊಳ್ಳಬೇಕು. ಸ್ವಾತಂತ್ರ್ಯದ ಹಂಬಲ ಮೂಡಬೇಕಾದರೆ ತಾನು ಬಂಧನದಲ್ಲಿದ್ದೇನೆ ಎಂಬ ಅರಿವು ಮೂಡಬೇಕಲ್ಲವೇ? ಗ್ರಾಮೀಣ ಪ್ರದೇಶದಲ್ಲಿರುವ ಮಹಿಳೆಯೊಬ್ಬಳಿಗೆ ಕೂಡಾ ಸ್ವಾತಂತ್ರ್ಯದ ಬಗ್ಗೆ ತನ್ನದೇ ಆದ ಕಲ್ಪನೆಯಿರುತ್ತದೆ. ಆದರೆ ಅದು ನಮ್ಮಂತಹ ನಗರ ಕೇಂದ್ರಿತ ಬದುಕಿನ ಅರ್ಥಿಕ ಸ್ವಾತಂತ್ರ್ಯದ ಕಲ್ಪನೆಯ ಮೇಲೆ ರೂಪಿತವಾದ ಸ್ವಾತಂತ್ರ್ಯಕಿಂತ ಭಿನ್ನ. ಆಕೆ ಕೌಟುಂಬಿಕ ಚೌಕಟ್ಟುಗಳನ್ನು ಮೀರಲಾರಳು. ಅಲ್ಲಿದ್ದುಕೊಂಡೇ ತನ್ನ ಅಸ್ತಿತ್ವಕ್ಕಾಗಿ ಹೊರಾಡುತ್ತಾಳೆ. ಆದರೆ ಗಂಡಸು ಹಾಗಲ್ಲ.
ಪ್ರಕೃತಿ ಗಂಡಸನ್ನು ಸ್ವಛ್ಚಂದವಾಗಿ, ಮುಕ್ತವಾಗಿ ಸೃಷ್ಟಿಸಿದೆ. ಆತನಿಗೆ ಯಾವುದೇ ಜವಾಬ್ದಾರಿಗಳಿಲ್ಲ. ಕುಟುಂಬ ವ್ಯವಸ್ಥೆ ಜಾರಿಗೆ ಬಂದ ಮೇಲೆ ಮನೆಯ ಯಜಮಾನನಾಗಿ, ಗೃಹಸ್ಥನಾಗಿ ಆತನಿಗೆ ಕೆಲವೊಂದು ಜವಾಬ್ದಾರಿಗಳನ್ನು ಸಮಾಜ ನೀಡಿತ್ತು. ಅದನ್ನಾತ ತೀರಾ ಇತ್ತೀಚಿನವರೆಗೂ ತಕ್ಕ ಮಟ್ಟಿಗ ನಿರ್ವಹಿಸುತ್ತಾನೂ ಬಂದಿದ್ದ. ಆದರೆ ಈಗ ಆತ ಆ ಜವಾಬ್ದಾರಿಯನ್ನೆಲ್ಲಾ ಪತ್ನಿಯ ಹೆಗಲ ಮೇಲೆ ಜಾರಿಸಿದ್ದಾನೆ. ನಗರದಲ್ಲಿ ಈ ಬದಲಾವಣೆ ನಮಗೆ ಎದ್ದು ಕಾಣುತ್ತದೆ. ಅಂದರೆ ಆಧುನಿಕ ಮಹಿಳೆಗೆ ಗಂಡನ ಅವಶ್ಯಕತೆ ಇದೆಯೇ? ಬಹುಶಃ ಇದ್ದಂತಿಲ್ಲ.
ನಿಸರ್ಗ ಸ್ತ್ರೀಗೆ ಪಾಲನೆಯ ಮತ್ತು ವಂಶಾಭಿವೃದ್ಧಿಯ ಜವಾಬ್ದಾರಿಯನ್ನು ನೀಡಿದೆ. ಆಕೆಯ ಗುಣಮಟ್ಟದ, ಅಮೂಲ್ಯ ಬದುಕು ಇದಕ್ಕಾಗಿಯೇ ಕಳೆದು ಹೋಗುತ್ತದೆ. ಹಾಗೆ ಕಳೆದು ಹೋಗುತ್ತಿರುವುದರ ಬಗ್ಗೆ ಹಿಂದಿನ ಕಾಲದ ಮಹಿಳೆಗೆ ಅರಿವಿರಲಿಲ್ಲ. ಆದರೆ ಇಂದಿನ ಮಹಿಳೆಗೆ ಅದು ಅರಿವಾಗುತ್ತಲಿದೆ. ಹಾಗಾಗಿ ಆಕೆ ತನಗೆ ಪ್ರಕೃತಿ ಹೊರಿಸಿರುವ ಜವಾಬ್ದಾರಿಯನ್ನು ನಿಭಾಯಿಸುತ್ತಲೇ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಿದ್ದಾಳೆ. ತನ್ನೊಳಗೆ ಕಂಪಾರ್ಟ್ ಮೆಂಟ್ ಗಳನ್ನು ಸೃಷ್ಟಿಸಿಕೊಂಡು ಅದರೊಳಗೇ ತನ್ನ ಸುಖದ ಹಾದಿಯನ್ನು ಕಂಡುಕೊಳ್ಳುತ್ತಿದ್ದಾಳೆ. ಅಲ್ಲಿ ಆಕೆ ಯಾರಿಗೂ ಅವಲಂಬಿತಳಲ್ಲ.
ಸ್ವತಂತ್ರನಾಗುವುದು ಎಂದರೆ ಬಂದನಗಳನ್ನು ಕಳಚಿಕೊಳ್ಳುತ್ತಾ ಮುನ್ನಡೆಯುವುದು ಎಂದರ್ಥ. ತೊಟ್ಟು ಕಳಚಿ ಹಣ್ಣು ಕೆಳಗೆ ಬಿದ್ದಂತೆ. ಒಮ್ಮೆ ನೆಲಕ್ಕೆ ಬಿದ್ದ ಮೇಲೆ ಮತ್ತೆಂದೂ ಅದು ತೊಟ್ಟಿಗೆ ಅಂಟಿಕೊಳ್ಳದು. ಅದು ಬಿಡುಗಡೆಯ ಸುಖ. ಆದರೆ ನಾವು ಹುಲುಮಾನವರು; ಸಂಸಾರವೆಂಬ ಮೋಹಪಾಶದಲ್ಲಿ ಬಿದ್ದು ಒದ್ದಾಡುತಿರುವೆವು. ಒಂದು ಹಂತದಲ್ಲಿ ಇದಲ್ಲದರಿಂದ ಮುಕ್ತಿಯನ್ನು ಪಡೆಯಬೇಕು. ಅದು ನಮ್ಮೊಳಗೆ ನಡೆಯುವ ಅಂತರ್ಯುದ್ಧ. ಆ ಯುದ್ಧವನ್ನು ನಿಭಾಯಿಸಲು ಗೊತ್ತಾದರೆ ನಾವು ಪರಮ ಸುಖಿಗಳು. ಹೊರಗಿನ ಯಾವ ಬಂಧನಗಳೂ ನಮ್ಮನ್ನು ಎನು ಮಾಡಲಾಗದು.
[ ವಿಜಯ ನೆಕ್ಸ್ಟ್ ಗಾಗಿ ಬರೆದ ಲೇಖನ ]