೧೯೮೪ರ ಅಕ್ಟೋಬರ್ ೩೧
ಇಂದಿರಾಗಾಂಧಿಯವರ ಚಿತೆ ಉರಿಯುತ್ತಿತ್ತು.
ಭಾರತಕ್ಕೆ ಆಗಷ್ಟೇ ಟೀವಿ ಕಾಲಿಟ್ಟಿತ್ತು.
ದೂರದರ್ಶನ ನಮ್ಮ ಪ್ರಧಾನಿಯ ಅಂತಿಮಯಾತ್ರೆಯನ್ನು ನೇರಪ್ರಸಾರ ಮಾಡುತ್ತಿತ್ತು.
ಪ್ರಿಯಾಂಕ ಗಾಂಧಿ ತನ್ನ ತಮ್ಮ ರಾಹುಲ್ ಗಾಂಧಿಯ ಜೊತೆ ಚಿತೆಯ ಸಮೀಪ ನಿಂತಿದ್ದರು. ಸ್ವಲ್ಪ ದೂರದಲ್ಲಿ ವರುಣ ಗಾಂಧಿ ಒಂಟಿಯಾಗಿ ನಿಂತಿದ್ದ.
ವರುಣನಿನ್ನೂ ಪುಟ್ಟ ಬಾಲಕ. ಸಾವಿನ ಗಂಭೀರತೆ ಅರಿವಾಗುವ ವಯಸ್ಸಲ್ಲ. ಅವನ ಅಮ್ಮ ಮನೇಕಾ ಗಾಂಧಿ ಸ್ವಲ್ಪ ದೂರದಲ್ಲಿದ್ದರು. ಪ್ರಿಯಾಂಕಳಿಗೆ ಆ
ಕ್ಷಣ ಏನನ್ನಿಸಿತೋ.. ಕೈಚಾಚಿ ಅವನನ್ನು ಪಕ್ಕಕ್ಕೆಳೆದುಕೊಂಡು ತನ್ನ ಮಗ್ಗುಲಲ್ಲಿಯೇ ಇರಿಸಿಕೊಂಡಳು.
ಆಗ ನಾನಿನ್ನೂ ಕಾಲೇಜು ವಿದ್ಯಾರ್ಥಿನಿ. ಆದರೆ ಈ
ದೃಶ್ಯ ಅತ್ಯಂತ ಸ್ಪಷ್ಟವಾಗಿ ಮನಸ್ಸಿನಲ್ಲಿ ಅಚ್ಚೊತ್ತಿಬಿಟ್ಟಿತ್ತು.
ಮೊನ್ನೆ ಮೇ ೧೮. ೨೦೦೪ ಪಾರ್ಲಿಮೆಂಟ್ ಭವನ.
ಪ್ರಿಯಾಂಕಳ ತಾಯಿ ಸೋನಿಯಾಗಾಂಧಿ ತನ್ನ ’ಆತ್ಮಸಾಕ್ಷಿ’ಗೆ ಓಗೊಟ್ಟು ಪ್ರಪಂಚದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೊಂದರ ಪ್ರಧಾನಿ ಹುದ್ದೆಯನ್ನು ನಿರಾಕರಿಸಿದ ದಿನ.
ಅಂದು ಕಾಂಗೆಸ್ ಪಕ್ಷದ ಅಧ್ಯಕ್ಷರ ಕುಟುಂಬದವರಿಗಾಗಿ ಮೀಸಲಾದ ಜಾಗದಲ್ಲಿ ಪ್ರಿಯಾಂಕ ಮತ್ತು ರಾಹುಲ್ ಕುಳಿತಿದ್ದರು. ಅವರ ಮಧ್ಯದಲ್ಲಿ ಪ್ರಿಯಾಂಕ ಪತಿ ರಾಬರ್ಟ್ ವಧೆರಾ ಇದ್ದರು. ಕಾಂಗ್ರೆಸ್ ಸಂಸದರು ಪ್ರಧಾನಿ ಹುದ್ದೆ ವಹಿಸಿಕೊಳ್ಳುವಂತೆ ಸೋನಿಯಾ ಮೇಲೆ ಹೇರುತ್ತಿದ್ದ ಒತ್ತಡವನ್ನು ಅವರು ಗಮನಿಸುತ್ತಿದ್ದರು.
ಒಂದು ಭಾವುಕ ಕ್ಷಣದಲ್ಲಿ ರಾಹುಲ್ ಅಕ್ಕ ಪ್ರಿಯಾಂಕಳ ಬೆರಳುಗಳನ್ನು ತಮ್ಮ ಕೈಯಲ್ಲಿ ತೆಗೆದುಕೊಂಡರು. ಇದನ್ನು ವಧೇರಾ ಆಸಕ್ತಿಯಿಂದ ಗಮನಿಸುತ್ತಿದ್ದರು.
ಮರುದಿನ
ಈ
ಚಿತ್ರ ’ಔಟ್ ಲುಕ್’ ಪತ್ರಿಕೆಯಲ್ಲಿ ಪ್ರಕಟವಾಯಿತು. ಆ ದೃಶ್ಯ ನಂಗೆ ತುಂಬಾ ಆಪ್ಯಾಯಮಾನವೆನಿಸಿತು. ಈ ಕುಟುಂಬದಲ್ಲಿ ಬಹು ಮಧುರವಾದ ಬಾಂಧವ್ಯವೊಂದು ಬೆಸೆದುಕೊಂಡಿದೆ ಎಂದು ಅನ್ನಿಸಿ ಮನಸ್ಸು ಆರ್ದ್ರಗೊಂಡಿತು. ’ ಸೋನಿಯಾ’ ಎಂಬ ತಾಯಿಯ ಬಗೆಗೆ ಹೆಮ್ಮೆ ಮೂಡಿತು.
ನಮ್ಮ ಭಾರತೀಯರ ಮನಸ್ಸೇ ಹಾಗೆ.ನಾವು ಒಬ್ಬ ವ್ಯಕ್ತಿಯನ್ನು ಒಂದು ಕುಟುಂಬದ ಹಿನ್ನೆಲೆಯಲಿಟ್ಟು ನೋಡುತ್ತೇವೆ.ನಮಗೆ ಒಬ್ಬ ವ್ಯಕ್ತಿಗಿಂತ ಕುಟುಂಬ ದೊಡ್ಡದು. ತನಗಿಂತಲೂ ಹೆಚ್ಚಾಗಿ ಕುಟುಂಬಕ್ಕಾಗಿ, ಅದರ ಒಳಿತಿಗಾಗಿ ಒಬ್ಬಾತ ಶ್ರಮಿಸಿದರೆ ಅವರನ್ನು ನಾವು ಹಾಡಿ ಹೊಗಳುತ್ತೇವೆ. ಗೌರವಿಸುತ್ತೇವೆ. ಒಂದು
ವೇಳೆ ಕುಟುಂಬವನ್ನು ಪಕ್ಕಕ್ಕೆ ಸರಿಸಿ ವ್ಯಕ್ತಿಗತವಾಗಿ ಬೆಳೆಯಲು ಪ್ರಯತ್ನಿಸಿದರೆ, ಸ್ವಂತಿಕೆಯನ್ನು ಮೆರೆದರೆ ಅವರನ್ನು ನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕಲು
ಸಾಮೂಹಿಕವಾಗಿ ಪ್ರಯತ್ನಿಸುತ್ತೇವೆ.
ಸೋನಿಯ ವಿಷಯದಲ್ಲೂ ಅಷ್ಟೇ. ಆಕೆ ಇಟಲಿ ಸಂಜಾತೆಯಾಗಿರಬಹುದು. ಆದರೆ ಆಕೆ ಅಪ್ಪಟ ಭಾರತೀಯ ಗೃಹಿಣಿಯಾಗಿ ಬಾಳಿದಳು. ಇಂದಿರಾ ಗಾಂಧಿಯವರ ಮೆಚ್ಚಿನ ಸೊಸೆಯಾಗಿದ್ದಳು. ಅದಕ್ಕಿಂತಲೂ ಹೆಚ್ಚಾಗಿ ತನ್ನ ಅತ್ತೆಯ ಆಪ್ತ ಕಾರ್ಯದರ್ಶಿನಿಯಂತೆ ಕೆಲಸ ಮಾಡಿದರು. ಅವರು ಪ್ರತಿದಿನ ಉಡುವ ಸೀರೆಯಿಂದ ಹಿಡಿದು ಅತಿಥಿ ಸತ್ಕಾರದ ತನಕ ಎಲ್ಲಾ ಕೌಟುಂಬಿಕ ಹೊಣೆಗಾರಿಕೆಯನ್ನು ಸೋನಿಯಾರೇ ನಿಭಾಯಿಸಿದರು. ಊಟದ ಟೇಬಲ್ಲಿನಿಂದಲೇ ಹಿಂದಿಯನ್ನೂ ಕಲಿತುಕೊಂಡರು.
ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳದೆ, ಭಾರತೀಯ ಸಾಂಪ್ರದಾಯಿಕ ಹೆಣ್ಣು ಮಗಳಂತೆ ಮಕ್ಕಳ್ಳನ್ನು ಸುಸಂಸ್ಕೃತರಾಗಿ ಬೆಳೆಸಿದರು. ಹಕ್ಕಿ ಮರಿಗಳಂತೆ ಜೋಪಾನ ಮಾಡಿದರು. ಹಾಗಾಗಿಯೇ ನೆಹರು ವಂಶದ ಘನತೆಯನ್ನು ಸಂರಕ್ಷಿಸಿದ ಸೋನಿಯಾರನ್ನು ದೇಶದ ಜನತೆ ತಮ್ಮವರೆಂದು ಒಪ್ಪಿಕೊಂಡಿತು. ಈ
ದೇಶದ ಸೊಸೆಯೆಂದು ಗೌರವಿಸಿತು.
ಸೋನಿಯಾ ರಾಜೀವ್ ಗಾಂಧಿಯನ್ನು ಪ್ರೀತಿಸಿ ಮದುವೆಯಾದಾಗ ಅವರೊಬ್ಬ ಪೈಲಟ್ ಅಷ್ಟೇ. ಮುಂದೊಂದು ದಿನ ಆತ ಭಾರತದ ಪ್ರಧಾನಿಯಾಗಬಹುದೆಂದು ಕನಸು ಕೂಡಾ ಕಂಡವರಲ್ಲ. ಕೆಳಮಧ್ಯಮ ವರ್ಗದಲ್ಲಿ ಹುಟ್ಟಿದ ಆ
ಹೆಣ್ಣು ಮಗಳು ಮಧ್ಯಮ ವರ್ಗದ ಬದುಕನ್ನೇ ಬದುಕ ಬಯಸಿದ್ದರು. ಕುಟುಂಬದ ಚೌಕಟ್ಟಿನೊಳಗೆ ಸಂತೃಪ್ತ ಗೃಹಿಣಿಯಾಗಿ ಬಾಳಬಯಸಿದ್ದರು. ಇದನ್ನವರು ತಮ್ಮ ’ರಾಜೀವ್’ ಕೃತಿಯಲ್ಲಿ ಹೇಳಿಕೊಂಡಿದ್ದಾರೆ.
ಆದರೆ ಆದದ್ದೇ ಬೇರೆ. ರಾಜಕೀಯದ ಚದುರಂಗದಾಟ ಅವರನ್ನು ಸಾರ್ವಜನಿಕ ವ್ಯಕ್ತಿಯನ್ನಾಗಿ ಮಾಡಿಬಿಟ್ಟಿತು.ಈ
ಚುನಾವಣೆಯಲ್ಲಂತೂ ಅವರು ಪಕ್ಷದ ಸ್ಟಾರ್ ಕ್ಯಾಂಪೈನರ್. ನಿರೀಕ್ಷೆಗೂ ಮೀರಿ ಅವರು ಆ
ಪಕ್ಷಕ್ಕೆ ಗೆಲುವನ್ನು ತಂದು ಕೊಟ್ಟು ಅದರ ವರ್ಚಸನ್ನು ಹೆಚ್ಚಿಸಿದರು.
ಆದರೆ ಶ್ರಮದ ಫಲವನ್ನು ಉಣ್ಣಲು ಅವರಿಗೆ ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣಕರ್ತರು ಯಾರು ಎಂಬುದನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಬಿಜೆಪಿ ಮತ್ತು ಸಂಘ ಪರಿವಾರ ? ಇಲ್ಲವೇ ಅವರಲ್ಲೇ ಹುಟ್ಟಿಕೊಂಡ ಜೀವಭಯ- ಇವೆಲ್ಲಾ ಇದ್ದರೂ ಇರಬಹುದು.
ಇದೆಲ್ಲದರ ಜೊತೆಗೆ ಭಾರತೀಯ ಮನಸ್ಸು ಕೆಲಸ ಮಾಡುವ ರೀತಿಯೂ ಕಾರಣವಾಗಿರಬಹುದು. ಇಲ್ಲಿ ಕುಟುಂಬದಲ್ಲಿ ಸೊಸೆಗೆ ಎಲ್ಲಾ ರೀತಿಯ ಸ್ಥಾನಮಾನಗಳನ್ನು ನೀಡಲಾಗುತ್ತದೆ. ಆಕೆ ಮನೆಮಗಳ ಸಮಾನ. ಆದರೆ ಕುಟುಂಬದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅವಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ. ಅಪನಂಬಿಕೆಯ ಕರಿನೆರಳೊಂದು ಅವಳ ಮೇಲೆ ಬಿದ್ದಿರಿತ್ತದೆ. ಅವಳಿಗಿಂತ ಮನೆ ಮಗಳಿಗೆ-ಅವಳು ಮದುವೆಯಾಗಿ ಗಂಡನ ಮನೆಯಲ್ಲಿದ್ದರೂ ಹೆಚ್ಚಿನ ಅಧಿಕಾರವಿರುತ್ತದೆ.
ಅಲ್ಲದೇ ಇನ್ನೊಂದು ವಿಷಯವೂ ಗಮನಾರ್ಹ. ಹೆಣ್ಣು ಮಗಳೊಬ್ಬಳು ಗಂಡನ ಮನೆಗೆ ಬಂದಾಗ ಅದರಲ್ಲಿಯೂ ಅನ್ಯ ಜಾತಿಯ ಯುವಕನೊಬ್ಬನನ್ನು ಪ್ರೀತಿಸಿ ಮದುವೆಯಾದಾಗ ಅವಳಲ್ಲಿ ಆತಂಕವಿರುತ್ತದೆ. ಅದು ಸಹಜ. ಆಕೆ ಗಂಡನನ್ನು ಸಂಪೂರ್ಣ ಒಪ್ಪಿಕೊಂಡಿದ್ದಾಳೆ ಮತ್ತು ನಂಬಿದ್ದಾಳೆ. ಆದರೆ ಗಂಡನ ಮನೆಯವರನ್ನು ಕ್ರಮೇಣ ಒಪ್ಪಿಕೊಳ್ಳುತ್ತಾಳೆ. ನಂಬುತ್ತಾಳೆ ಎಂದು ಹೇಳಲಾಗದು. ’ಒಪ್ಪಿಕೊಳ್ಳುವುದು’ ಮತ್ತು ’ನಂಬುವುದು’ ಎರಡರ ಮಧ್ಯೆ ಸೂಕ್ಷ್ಮವಾದ ಆದರೆ ಗಂಭೀರವಾದ ವ್ಯತ್ಯಾಸ ಇದೆ. ಒಪ್ಪಿಕೊಳ್ಳುವುದು ಅನಿವಾರ್ಯವಾಗಬಹುದು ಆದರೆ ನಂಬುವುದು ಆಕೆಗೇ ಬಿಟ್ಟಿದ್ದು. ಅದು ಆಕೆಯ ತೀರಾ ಅಂತರಂಗದ ವಿಷಯ. ಸೋನಿಯಾ ಭಾರತೀಯ ಪೌರತ್ವ ಸ್ವೀಕರಿಸಲು ತಡ ಮಾಡಿದ್ದಕ್ಕೆ ಇದೂ ಒಂದು ಕಾರಣವಾಗಿರಬಹುದು.
ಕಾಂಗ್ರೆಸ್ಸಿಗೆ ಆಕೆ ಅನಿವಾರ್ಯವಾಗಿದ್ದರು. ‘ಕೆರೆಗೆ ಹಾರ’ ಜನಪದ ಕಥನ ಕಾವ್ಯದಲ್ಲಿ ಊರ ಏಳ್ಗೆಗಾಗಿ ಕಿರಿ ಸೊಸೆ ಭಾಗೀರಥಿಯನ್ನು ಬಲಿ ಕೊಡುವುದಿಲ್ಲವೇ? ಕುಟುಂಬದ ಒಳಿತಿಗಾಗಿ ಗರ್ಭಿಣಿ ಸೊಸೆಯಂದಿರೇ ಬಲಿಯಾಗಬೇಕು! ಮನೆಮಗಳು ಅದಕ್ಕೆ ಮಾತ್ರ ಅರ್ಹಳಲ್ಲ!
ನಮ್ಮೆಲ್ಲರದ್ದು ಅತ್ತೆ ಮನಸ್ಸು. ಸೋನಿಯಾರ ವಿಚಾರದಲ್ಲಿ ಬಿಜೆಪಿಯ ಮನಸ್ಸಂತೂ ‘ಘಟವಾಣಿ ಅತ್ತೆ’ಯ ಹಾಗೆ ಕೆಲಸ ಮಾಡಿದೆ. ಹಾಗಾಗಿಯೇ ಸೋನಿಯಾ ಪ್ರಧಾನಿಯಾದರೆ ತಲೆ ಬೋಳಿಸಿ ವಿಧವೆಯ ಬಾಳು ಬಾಳುತ್ತೇನೆಂದು ಸುಷ್ಮಾ ಸ್ವರಾಜ್ ಹೇಳುತ್ತಾರೆ. ಉಮಾಭಾರತಿ ಅದಕ್ಕೆ ಪಲ್ಲವಿ ಹಾಡುತ್ತಾರೆ.
ಭಾರತೀಯರ ‘ಅತ್ತೆ ಮನಸ್ಸು’ ಸೋನಿಯಾಗೆ ಅರ್ಥವಾಗಿದೆ. ಹಾಗಾಗಿ ಆಕೆ ತ್ಯಾಗಿಯಾಗಲು ನಿರ್ಧರಿಸಿದ್ದಾರೆ. ಭಾರತೀಯರಿಗೆ ತ್ಯಾಗಕ್ಕಿಂತ ದೊಡ್ಡದಾದ ಬೇರೊಂದು ಆದರ್ಶವಿಲ್ಲ. ಅವರ ಮಗ ರಾಹುಲ್ ಗಾಂಧಿ ಹೇಳಿದಂತೆ ‘ಯಾರು ಈ
ಅತ್ಯುನ್ನತ ಪದವಿಗಾಗಿ ಹಗಲಿರುಳು ಶ್ರಮಿಸುತ್ತಾರೋ ಅಂತಹ ಪದವಿ ಕೈಯಳತೆಯಲ್ಲಿ ಸಿಕ್ಕಿರುವಾಗ ಅದನ್ನು ನಿರಾಕರಿಸುವುದಕ್ಕೆ ನಿಜವಾಗಿಯೂ ಗಟ್ಟಿ ಗುಂಡಿಗೆ ಬೇಕು.’
‘ನಿರ್ಣಾಯಕ ಘಳಿಗೆಗಳಲ್ಲೆಲ್ಲಾ ನನ್ನೊಳಗಿನ ಧ್ವನಿಯಂತೆ ನಡೆದುಕೊಳ್ಳುತ್ತಾ ಬಂದಿದ್ದೇನೆ. ಆ
ಧ್ವನಿ ನನಗಿಂದು ಪ್ರಧಾನಿ ಹುದ್ದೆ ನಿರಾಕರಿಸುವಂತೆ ಹೇಳುತ್ತಿದೆ’ ಎಂದು ಮೇ ೧೮ರಂದು ಪಾರ್ಲಿಮೆಂಟ್ ಭವನದಲ್ಲಿ ಸೋನಿಯಾ ಹೇಳಿದ್ದಾರೆ. ಅದು ಭಾರತೀಯ ಫಿಲಾಸಫಿಯೂ ಹೌದು.
ಹೀಗೆ ಹೇಳುವುದರ ಮುಖಾಂತರ ಅವರು ಬಿಜೆಪಿಯನ್ನು ನಿಶ್ಯಸ್ತ್ರಗೊಳಿಸಿದ್ದಾರೆ. ಈಗ ಬಿಜೆಪಿಯ ಬತ್ತಳಿಕೆಯಲ್ಲಿ ಬಾಣಗಳೇ ಇಲ್ಲ. ಇದ್ದ ಎರಡು ಬಾಣಗಳಾದ ರಾಮಜನ್ಮಭೂಮಿ ಮತ್ತು ವಿದೇಶಿ ಮೂಲ ಗುರಿ ತಪ್ಪಿದೆ. ಚತುರ ರಾಜಕೀಯ ಮುತ್ಸದ್ಧಿಯಂತೆ ವರ್ತಿಸಿದ ಸೋನಿಯಾ ವಿರೋಧ ಪಕ್ಷಗಳ ಲೆಕ್ಕಾಚಾರಗಳನ್ನೆಲ್ಲಾ ತಲೆಕೆಳಗು ಮಾಡಿದ್ದಾರೆ. ಅವರು ಸೋತಿಲ್ಲ, ಗೆದ್ದಿದ್ದಾರೆ.
ಹೋದಲ್ಲಿ ಬಂದಲ್ಲಿ ಜತೆಜತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಸೋನಿಯಾ ಕುಟುಂಬದ ಬಗ್ಗೆ ಜನಸಾಮಾನ್ಯರಲ್ಲಿ ವಾತ್ಸಲ್ಯವಿದೆ. ಅನುಕಂಪವಿದೆ. ಅವರ ಶ್ರಮದ ಬಗ್ಗೆ ಗೌರವವಿದೆ. ಅದು ಓಟಾಗಿ ಪರಿಣಮಿಸಿದೆ. ಬಿಜೆಪಿ ಮತ್ತು ಸಂಘ ಪರಿವಾರದ ‘ಅತ್ತೆತನ’ದ ಮುಂದೆ ಜನತೆಯ ‘ತಾಯ್ತನ’ ಗೆದ್ದಿದೆ. ಗಂಡನ ಮನೆಯಲ್ಲಿ ಸೊಸೆ ಇಷ್ಟೆಲ್ಲಾ ಸಾಧಿಸಿದರೆ ಖಂದಿತವಾಗಿಯೂ ಆಕೆಯಲ್ಲೇನೋ ವಿಶೇಷವಿದೆ. ಅದನ್ನು ನಾವು ಕ್ಷುಲ್ಲಕವಾಗಿ ಕಾಣಬಾರದು. ಒಂದಂತೂ ಸತ್ಯ. ತಾನು ತ್ಯಾಗಿಯಾಗುವುದರ ಮುಖಾಂತರ ಆಕೆ ಮಕ್ಕಳ ರಾಜಕೀಯ ಬದುಕನ್ನು ಸುಗಮಗೊಳಿಸಿದ್ದಾಳೆ. ಅದು ಒಬ್ಬ ತಾಯಿಯಿಂದ ಮಾತ್ರ ಸಾಧ್ಯ. ಹಾಗೆಯೇ ಬಿಜೆಪಿಯ ರಾಜಕೀಯ ಭವಿಷ್ಯವನ್ನು ಸದ್ಯಕ್ಕಂತೂ ಮಂಕಾಗಿಸಿದ್ದಾರೆ. ಅದು ಒಬ್ಬ ಮುತ್ಸದ್ಧಿಗೆ ಮಾತ್ರ ಸಾಧ್ಯ!
·
[[೨೦೦೪ರ ಲೋಕಸಭಾ ಚುನಾವಣೆ ಸಂದರ್ಭದದಲ್ಲಿ ’ಹಂಗಾಮ’ ನಿಯತಕಾಲಿಕದಲ್ಲಿ ಪ್ರಕಟವಾದ ಲೇಖನವಿದು.
ಮೇ 18 ರಂದು ಪಾರ್ಲಿಮೆಂಟ್ ನಲ್ಲಿ ನಡೆದ
ವಿದ್ಯಾಮಾನವನ್ನು ನೋಡಿ ನನ್ನ ಮನದಲ್ಲಿ ಮೂಡಿದ ಭಾವವಿದು. ಹಾಗಾಗಿ ಇದನ್ನು ಯಥಾವತ್ತಾಗಿ
ಉಳಿಸಿಕೊಂಡಿದ್ದೇನೆ. ವರ್ತಮಾನದಲ್ಲಿ ನಿಂತು ಯಾವ ತಿದ್ದುಪಡಿಯನ್ನೂ ಮಾಡಿಲ್ಲ. ]
8 comments:
ಸೋನಿಯಾ ಬಗ್ಗೆ ಎಷ್ಟೊಂದು ಬರಹಗಳನ್ನೂ ಓದಿದ್ದೆ. ಅವೆಲ್ಲ Prejudice ಗಳಿಂದ ಮುಕ್ತವಾಗಿರಲಿಲ್ಲ. ಆದರೆ ನೀವು ಸಂಪೂರ್ಣ ವಿಭಿನ್ನ ಚಿತ್ರಣ ಕೊಟ್ಟಿದ್ದೀರಿ. ಚೆನ್ನಾಗಿದೆ :)
ಇಲ್ಲಿಯವರೆಗೆ ಸೋನಿಯಾಜಿ ಮೇಲಿದ್ದ ನನ್ನ ಭಾವನೆ ಬದಲಾಗುವ ಲಕ್ಷಣಗಳು ಕಾಣತೊಡಗಿವೆ ಎನಿಸುತಿದೆ
ಹೌದು ನನ್ನದೂ ಭಾರತೀಯ ಅತ್ತೆ ಮನಸು ಕೇವಲ ಸ್ವದೇಶಿ ನೆರಳಲ್ಲೇ ಸೋನಿಯಾಜಿಯ ಚಿತ್ರವನ್ನು ಕಣ್ಮುಂದೆ ಕಾಣುವ ಬದಲು ಮನೆಯ ಸೊಸೆಯಂತೆ ಆದರಿಸುವ ಹೊತ್ತು ಇದಾಗಿದೆ ಅನ್ನಿಸುತ್ತದೆ .
ಸುರಗಿ,
ನನಗೆ ಅನ್ನಿಸುವದು ಹೀಗೆ:
ಸೋನಿಯಾ ಗಾಂಧೀಯವರ ಕುಟುಂಬದ cohesiveness ನಮಗೆ ಅಂದರೆ ಮತದಾರರಿಗೆ ಅಪ್ರಸ್ತುತ ವಿಷಯ. ಅವರ ತ್ಯಾಗಮಯಿ ಭಾವನೆಗಳು, if at all ಅವು ಪ್ರಾಮಾಣಿಕವಾಗಿ ಇದ್ದರೂ ಸಹ ಅವು ಅಪ್ರಸ್ತುತ.
ನಮಗೆ ಅಂದರೆ ಮತದಾರರಿಗೆ ತಿಳಿಯಬೇಕಾದದ್ದು ಇದು:
ಭಾರತವನ್ನು ಸಶಕ್ತ, ಪ್ರಗತಿಪರ, ಸಮೃದ್ಧ ರಾಷ್ಟ್ರವನ್ನಾಗಿ ಪರಿವರ್ತಿಸಲು ಬೇಕಾದ ಕನಸು ಸೋನಿಯಾರಿಗೆ ಇದೆಯೆ? ಆ ಕನಸನ್ನು ನನಸಾಗಿಸುವ ಮುತ್ಸದ್ದಿತನ ಅವರಿಗಿದೆಯೆ? ಅಂತಹ ಪ್ರಾಮಾಣಿಕತೆ ಅವರಲ್ಲಿದೆಯೆ?
ಮೌನ ಅವರೇ
ವಿಷಯ ಪ್ರಸ್ತಾವನೆ ತುಂಬಾ ಸಾಂದರ್ಭಿಕ. ಇಲ್ಲಿ ಸೋನಿಯಾರವರ ಮೂಲ, ಅಥವಾ ಗಾಂಧಿ ಕುಟುಂಬದ ಹಿನ್ನೆಲೆಗಳು ನಮಗೆ ನಗಣ್ಯ.
ಮೊದಲಬಾರಿ ಪ್ರಧಾನಿಯಾಗುವ ಪೂರ್ಣ ಅವಕಾಶ ಸಿಕ್ಕಾಗ ಒಲ್ಲೆ ಎಂದ ಸೋನಿಯಾ...ಆ ಸಂದರ್ಭಕ್ಕೆ ತಾನು ಇಟಲಿಮೂಲದ ಹೆಣ್ಣು..ಭಾರತೀಯರು ಒಪ್ಪದೇ ಹೋಗಬಹುದು ಇತ್ಯಾದಿ ಕಾರಣಗಳಿಂದ ಎಂದು ಹಲವರ ವಾದವಾಗಿತ್ತು, ಆದರೆ ಅದೇ ಅವರ ಗುಣದ ಪ್ಲಸ್ ಪಾಯಿಂಟ್ ಆಯ್ತು, ಈಗ ರಾಹುಲ್ ಗೆ ಪ್ರಧಾನಿಯಾಗುವ ಎಲ್ಲ ಸಾಧ್ಯತೆಗಳಿದ್ದರೂ ಒಲ್ಲೆಯೆಂದ ರಾಜೀವ, ಅಷ್ಟೇ ಏಕೆ, ಕ್ಯಾಬಿನೆಟ್ ಸಚಿವ ಸ್ಥಾನವನ್ನೂ ನಿರಾಕರಿಸಿರುವುದು...ಕೇವಲ ಕುರ್ಚಿಗಾಗಿ ಗೋಸುಂಬೆಗಳಂತೆ ಬಣ್ಣ ಬದಲಿಸುವ ನಮ್ಮ ಅಪ್ಪಟ ದೇಶೀನಾಯಕರಿಗಿಂತ ಆ ಕುಟುಂಬದ ರಾಷ್ಟ್ರಪ್ರೇಮ ಹಿರಿದು ಎಂದೇ ನನ್ನ ಅನಿಸಿಕೆ. ದೇವರ ಮೇಲೆ ಆಣೆಯಿಟ್ಟ ನಮ್ಮ ಪ್ರಮುಖ ರಾಜಕಾರಣಿಯೊಬ್ಬರು ಅದೇ ಆಣೆ ಮುರಿದು ತನ್ನ ಮಗನಿಗೆ ಶತಾಯ ಗತಾಯ ಕುರ್ಚಿ ಕೊಡಿಸಬೇಕೆಂದು ಪ್ರಯತ್ನಿಸಿದುದು ಎಲ್ಲರಿಗೆ ತಿಳಿದದ್ದೇ. ಅವರಿಗೇ ಇಂತಹ ಅವಕಾಶ ಸಿಕ್ಕಿದ್ದರೆ..ಗಬಕ್ಕನೆ ಕುರ್ಚಿಯಮೇಲೆ ಜಪ್ಪಯ್ಯ ಎಂದು ಕುಂತುಬಿಡುತ್ತಿದ್ದರು...ಅಲ್ಲವೇ...??
good observation and nice writeup.
-Hani
ಈ ಲೇಖನ ಓದಿದ ಮೇಲೆ ಹೊಸ ರೀತಿಯಲ್ಲಿ ತಿಳಿದುಕೊಳ್ಳುವ ಅರಿವಾಯಿತು. ಸೋನಿಯ ಮತ್ತು ಅವರ ರಾಜಕೀಯ ಇದು ನನಗೆ ಅರ್ಥವಾಗದ ವಿಚಾರವಾದರೂ, ಆಕೆ ಮನಮೋಹನ್ ಸಿಂಗ್ ಅವರಂತಹ ತಜ್ಞರನ್ನು ದೇಶದ ಪ್ರಧಾನಿಯಾಗಿಸಿದ್ದು ಮತ್ತು ಮುಂದುವರೆದಿಸ್ಸು ಖುಷಿಯ ವಿಚಾರ.
ರಾಜಕೀಯ ಕಾರಣಗಳಿಂದ ಅವರು ಇವರ ಮೇಲೆ ಮತ್ತು ಅವರು ಇವರ ಮೇಲೆ ಹೀಗೆ ಹೆಸರು ಎರಚಾಡಿಕೊಳ್ಳುವುದು ಗೊತ್ತಿರುವ ಸಂಗತಿಯೇ.
ಸಾಮಾಜಿಕ ತಾಣಗಳಲ್ಲಿ ರಾಜಕೀಯ ಪ್ರೇರಿತರು ಹೀಗೆಲ್ಲ ಕೆಟ್ಟ ಚಿತ್ರಗಳನ್ನು ಪ್ರಕಟಿಸುವುದು ಕಂಡಿದ್ದೇವೆ.
ಸಾಮಾಜಿಕ ಬದ್ಧತೆ, ರಾಜಕೀಯ ಧೀಶಕ್ತಿ ಮತ್ತು ಮುಂದಾಲೋಚನೆಯಿರುವ ರಾಜಕಾರಣಿಯೊಬ್ಬರು ನಮಗೆ ಜರೂರಾಗಿ ಬೇಕಾಗಿದೆ.
ಈ ಲೇಖನ ಓದಿದ ಮೇಲೆ ಹೊಸ ರೀತಿಯಲ್ಲಿ ತಿಳಿದುಕೊಳ್ಳುವ ಅರಿವಾಯಿತು. ಸೋನಿಯ ಮತ್ತು ಅವರ ರಾಜಕೀಯ ಇದು ನನಗೆ ಅರ್ಥವಾಗದ ವಿಚಾರವಾದರೂ, ಆಕೆ ಮನಮೋಹನ್ ಸಿಂಗ್ ಅವರಂತಹ ತಜ್ಞರನ್ನು ದೇಶದ ಪ್ರಧಾನಿಯಾಗಿಸಿದ್ದು ಮತ್ತು ಮುಂದುವರೆದಿಸ್ಸು ಖುಷಿಯ ವಿಚಾರ.
ರಾಜಕೀಯ ಕಾರಣಗಳಿಂದ ಅವರು ಇವರ ಮೇಲೆ ಮತ್ತು ಅವರು ಇವರ ಮೇಲೆ ಹೀಗೆ ಹೆಸರು ಎರಚಾಡಿಕೊಳ್ಳುವುದು ಗೊತ್ತಿರುವ ಸಂಗತಿಯೇ.
ಸಾಮಾಜಿಕ ತಾಣಗಳಲ್ಲಿ ರಾಜಕೀಯ ಪ್ರೇರಿತರು ಹೀಗೆಲ್ಲ ಕೆಟ್ಟ ಚಿತ್ರಗಳನ್ನು ಪ್ರಕಟಿಸುವುದು ಕಂಡಿದ್ದೇವೆ.
ಸಾಮಾಜಿಕ ಬದ್ಧತೆ, ರಾಜಕೀಯ ಧೀಶಕ್ತಿ ಮತ್ತು ಮುಂದಾಲೋಚನೆಯಿರುವ ರಾಜಕಾರಣಿಯೊಬ್ಬರು ನಮಗೆ ಜರೂರಾಗಿ ಬೇಕಾಗಿದೆ.
olidu banda pradani pattavanne thiraskarisida jagatthina yekaika thyagi......dheera maatheya kaigalannu balapadisi..
Post a Comment