Wednesday, July 27, 2016

ಪ್ರಭುತ್ವದಡಿ ನಲುಗುತ್ತಿರುವ ಮಣಿಪುರದರಸಿಯರು!


ಯಕ್ಷಗಾನದಲ್ಲಿ ’ಸಲಾಂ ತಕ್ಕೋ ಮಣಿಪುರ ದೊರೆಯೇ...’ ಎಂಬ ಹಾಡು ಬಲು ಜನಪ್ರಿಯ. ಹೀಗೆ ಹಾಸ್ಯಗಾರನಿಂದ ಬಾಗಿ ನಮಿಸಿಕೊಳ್ಳುವಾತ ಮಣಿಪುರದರಸು ಬಬ್ರುವಾಹನ. ಆದರೆ ಅಂತಹ ವೀರಾಧಿವೀರ ಬಬ್ರುವಾಹನನ್ನು ರೂಪಿಸಿದ ಮಣಿಪುರದ ಅರಸಿ ಚಿತ್ರಾಂಗದೆಯ ಸ್ಥಾನ ಯಾವುದು.? ಪುರಾಣದ ಪಾತ್ರವನ್ನು ಈ ಆಧುನಿಕ ಕಾಲಘಟ್ಟದಲ್ಲಿ ನಿಂತು ನೋಡುವುದರ ಔಚಿತ್ಯವೇನು ಎಂದು ಪ್ರಶ್ನಿಸುವುದಾದರೆ...ಅದಕ್ಕೆ ಕಾರಣವಿದೆ.
ಅದು.  ೧೯೪೪ ನೇ ಇಸವಿ, ಏಪ್ರಿಲ್ ೧೪ನೇ ತಾರೀಖು. ಮಣಿಪುರದ ರಾಜಧಾನಿ ಇಂಪಾಲದಿಂದ ೫೨ ಕಿಮೀ ದೂರದ ಮೊಯಿರಂಗ್ ನಲ್ಲಿ ಅಜಾದ್ ಹಿಂದ್ ಪೌಜ್ ನ [INA] ಸಂಸ್ಥಾಪಕ ಸುಭಾಸ್ ಚಂದ್ರ ಭೋಸ್ ರವರು ಭಾರತೀಯ ನೆಲದಲ್ಲಿ ಮೊತ್ತ ಮೊದಲ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದ್ದರು.
ಮುಂದಿನ ಘಟನೆಗಳಿಗೆ ಪೂರಕವಾಗಿ ಒಂಚೂರು ಮಾಹಿತಿ;  ಈಶಾನ್ಯ ರಾಜ್ಯಗಳಲ್ಲಿ ಸೇನೆಗೆ ಪರಮಾಧಿಕಾರವಿದೆ. ಅದಕ್ಕೆ ಯಾರ ಮೇಲಾದರೂ ದೇಶದ್ರೋಹಿಗಳು, ಸಮಾಜ ಘಾತುಕರು, ಉಗ್ರಗಾಮಿಗಳೆಂದು ಶಂಕೆ ಉಂಟಾದಲ್ಲಿ ಎಲ್ಲಿಗೆ ಬೇಕಾದರೂ ನುಗ್ಗಿ  ವಾರಂಟ್ ಇಲ್ಲದೆ ಅವರನ್ನು ವಿಚಾರಣೆಯ ನೆಪದಲ್ಲಿ ವಶಕ್ಕೆ ಪಡೆದುಕೊಳ್ಳಬಲ್ಲುದು. ಶಂಕಿತರನ್ನು ಗುಂಡು ಹೊಡೆದು ಕೊಂದರೂ ಅದನ್ನು ಯಾರೂ ಪ್ರಶ್ನಿಸಲಾರರು.
ಇನ್ನೊಂದು ಘಟನೆ; ೨೦೦೦ನೇ ಇಸವಿಯ ನವೆಂಬರ್ ೨ನೇ ತಾರೀಖು. ಇಂಪಾಲದಿಂದ ೧೫ ಕಿ.ಮೀ ದೂರದಲ್ಲಿರುವ ಮಾಲೋಮ್ ಎಂಬ ಊರಿನ ಬಸ್ ಸ್ಟ್ಯಾಂಡ್ ನಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ಜನರ ಮೇಲೆ ಭಾರತೀಯ ಸೇನೆ ಗುಂಡಿನ ಧಾಳಿ ನಡೆಸಿತು. ಹತ್ತು ಜನ ನಾಗರಿಕರು ಸತ್ತರು. ಇದರಲ್ಲಿ ಅರುವತ್ತು ವರ್ಷದ ಮಹಿಳೆಯೊಬ್ಬಳ ಜೊತೆ ೧೯೯೮ರಲ್ಲಿ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪಡೆದ ಹದಿನೆಂಟು ವರ್ಷದ ಸಿಮನ್ ಚಂದ್ರಮಣಿ ಎಂಬಾಕೆಯೂ ಶವವಾಗಿ ಬಿದ್ದಳು..

ಮಾಲೋಮ್ ಘಟನೆ ೨೮ ವರ್ಷದ ಐರೋಮ್ ಶರ್ಮಿಳಾ ಎಂಬ ಯುವತಿಯನ್ನು ಅಲ್ಲಾಡಿಸಿಬಿಟ್ಟಿತು. ಆಕೆ ಸ್ಥಳಿಯ ಮಟ್ಟದ ಮಾನವ ಹಕ್ಕುಗಳ ಶಾಂತಿ ಅಂದೋಲನದಲ್ಲಿ ಸಕ್ರಿಯಳಾಗಿದ್ದಳು. ಭಾರತೀಯ ಸೇನೆ ನಾಗರೀಕರ ಅದರಲ್ಲೂ ಮಹಿಳೆಯರ ಮೇಲೆ ನಡೆಸುತ್ತಿದ್ದ ಲೈಂಗಿಕ ಅತ್ಯಾಚಾರವನ್ನು ಗಮನಿಸುತ್ತಲೇ ಬಂದಿದ್ದಳು. ಆಕೆ ಮೈಮೇಲೆ ಭೂತ ಸಂಚಾರವಾದಂತೆ ತಟ್ಟನೆ ಎದ್ದು ನಿಂತವಳೇ ತನ್ನ ತಾಯಿಗೆ ನಮಸ್ಕರಿಸಿ ’ಅಮ್ಮಾ ಮನುಷ್ಯತ್ವವನ್ನು ಉಳಿಸುವ ಕಾರ್ಯಕ್ಕೆ ಹೊರಡುತ್ತಿದ್ದೇನೆ’ ಎಂದವಳೇ ಮಾಲೋಮ್ ಗೆ ಬಂದು  ಸೇನೆ ಹತ್ತು ಜನ ನಾಗರಿಕರನ್ನು ಬಲಿ ತೆಗೆದುಕೊಂಡ  ಅದೇ ಜಾಗದಲ್ಲಿ ಅಮರಣಾಂತ ಉಪವಾಸ ಕುಳಿತಳು. ಈಶಾನ್ಯ ರಾಜ್ಯಗಳಲ್ಲಿ ಸೇನೆಗೆ ಕೊಡಮಾಡಿರುವ ಶಸಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ[ Armed forces  Special power Act-   1952] ಯನ್ನು ಹಿಂಪಡೆಯಬೇಕೆಂಬುದು ಆಕೆಯ ಬೇಡಿಕೆಯಾಗಿತ್ತು.   ಇದಾಗಿ ಹದಿನಾರು ವರ್ಷಗಳು ಉರುಳಿವೆ. ಉಪವಾಸ ಇಂದಿಗೂ ಮುಂದುವರಿದಿದೆ.ಅಲ್ಲಿಂದೀಚೆಗೆ ಆಕೆ ಕನ್ನಡಿ ನೋಡಿಲ್ಲ. ತಲೆ ಬಾಚಿಲ್ಲ, ತನ್ನದೇ ಕೈಗಳಿಂದ ಊಟ ಮಾಡಿಲ್ಲ. ಆಕೆಯ ಆಹಾರ ನಿರಾಕರಣೆಯನ್ನು ಸರಕಾರವು ಆತ್ಮಹತ್ಯೆಯ ಪ್ರಯತ್ನ ಎಂದು ಕೇಸು ಜಡಿದು ಜೈಲಿನಲ್ಲಿಟ್ಟು ಮೂಗಿನ ಮೂಲಕ ಬಲವಂತವಾಗಿ ಆಹಾರ ನೀಡುತ್ತಿದೆ. ಆ ಅಪರಾಧಕ್ಕೆ ಒಂದುವರ್ಷ ಸಜೆಯಿದೆ. ಹಾಗಾಗಿ ಆಕೆಯನ್ನು ಮೊನ್ನೆ ಮಾರ್ಚ್ ೨೮ಕ್ಕೆ ಬಿಡುಗಡೆ ಮಾಡಿದರೂ ಮತ್ತೆ ಕೇಸು ಹಾಕಿ ಆಸ್ಪತ್ರೆಗೆ ತಳ್ಳಿದೆ.

ಮೂರನೆಯ ಘಟನೆ; ೨೦೦೪ರ ಜುಲೈ ೧೦.  ಭಾರತೀಯ ಭೂ ಸೇನೆಯ ಭಾಗವಾಗಿರುವ ಅಸ್ಸಾಂ ರೈಪಲ್ಸ್ ನ ಯೋಧರು ಮಧ್ಯರಾತ್ರಿ ಮನೆಯೊಂದಕ್ಕೆ ನುಗ್ಗಿ ೩೨ ವಯಸ್ಸಿನ ತಂಗ್ ಜಮ್ ಮನೋರಮಾ ದೇವಿ ಎಂಬ ಮಹಿಳೆಯನ್ನು ಆಕೆಯ ತಾಯಿ ಮತ್ತು ತಮ್ಮನನ್ನು ಬೆದರಿಸಿ ತಮ್ಮೊಡನೆ ಕರೆದುಕೊಂಡು ಹೋದರು. ಆಕೆ ಬಂಡುಕೋರರ ಜೊತೆ ನಂಟು ಹೊಂದಿದ್ದಾಳೆಯೆಂಬುದು ಅವರ ಆಪಾದನೆಯಾಗಿತ್ತು. ಆಕೆ ಮತ್ತೆ ಕಂಡದ್ದು ಮರುದಿನ ಬೆಳಿಗ್ಗೆ ಹೆಣವಾಗಿ. ಆಕೆಯ ಮೇಲೆ ಗುಂಡಿನ ಮಳೆಗೆರೆಯಲಾಗಿತ್ತು. ದೇಹವನ್ನು ಚಾಕುವಿನಿಂದ ಇರಿಯಲಾಗಿತ್ತು, ಗುಪ್ತಾಂಗಕ್ಕೆ ಗುಂಡು ಹೊಡೆದು ಛಿದ್ರಗೊಳಿಸಲಾಗಿತ್ತು.
ಮನೋರಮಾಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆಯೆಂದು ಮೇಲ್ನೋಟಕ್ಕೆ ಗೊತ್ತಾದ ಅಂಶ. ಮುಂದೆ, ಕೇಂದ್ರೀಯ ವಿಧಿ ವಿಜ್ನಾನ ಸಂಸ್ಥೆ ಆಕೆಯ ಪೆಟ್ಟಿಕೋಟಿನ ಮೇಲಿದ್ದ ವೀರ್ಯದ ಕಲೆ, ಡಿ.ಎನ್.ಎ ಪರೀಕ್ಷೆ ನಡೆಸಿ ಅತ್ಯಾಚಾರದ ಶಂಕೆಯನ್ನು ವ್ಯಕ್ತಪಡಿಸಿತು.. ಈ ಭೀಕರ ಹತ್ಯೆ ಮಣಿಪುರದ ಜನತೆಯನ್ನು ಬೆಚ್ಚಿಬೀಳಿಸಿತು. ತಾಯಂದಿರು ಆತಂಕಗೊಂಡರು.

ಈ ಘಟನೆ ನಡೆದ ಐದೇ ದಿನದಲ್ಲಿ ಅಂದರೆ ಜುಲೈ ೧೫ರಂದು ಒಂದು ಡಜನ್ನಿಗಿಂತಲೂ ಜಾಸ್ತಿ ಮಹಿಳೆಯರು ಸಂಪೂರ್ಣ ಬೆತ್ತಲಾಗಿ ಅಸ್ಸಾಂ ರೈಫಲ್ಸ್ ನ ೧೭ನೇ ಬೆಟಲಿಯನ್ ನ ಕೇಂದ್ರ ಸ್ಥಾನದೆದುರು ಪ್ರತಿಭಟನೆ ನಡೆಸಿದರು. ತಂತಮ್ಮ ಹೆಣ್ಣುಮಕ್ಕಳ ಭವಿಷ್ಯದ ಬಗ್ಗೆ ಆ ತಾಯಂದಿರು ಆತಂಕಿತರಾಗಿದ್ದರು. ’ಭಾರತೀಯ ಸೈನಿಕರೇ, ಬನ್ನಿ ನಮ್ಮನ್ನು ರೇಪ್ ಮಾಡಿ [ ’ ಇಂಡಿಯನ್ ಆರ್ಮಿ ರೇಪ್ ಅಸ್” ”ಇಂಡಿಯನ್ ಆರ್ಮಿ ಟೇಕ್ ಅವರ್ ಪ್ಲೆಶ್’] ಎಂಬ ಬ್ಯಾನರ್ ಗಳು ಅವರ ಕೈಗಳಲ್ಲಿದ್ದುವು. ಸೈನಿಕರ ಬಂದೂಕಿನ ನಳಿಗೆಯೆದುರಲ್ಲಿ ಅವರ ಬೆತ್ತಲೇ ದೇಹವೇ ಆಯುಧವಾದಾಗ ಸಮಸ್ತ ಬಾರತವೇ ಈಶಾನ್ಯ ರಾಜ್ಯಗಳೆಡೆಗೆ ತಲ್ಲಣದ ನೋಟ ಬೀರಿತು. ಮಾತ್ರವಲ್ಲ. ಈ ಘಟನೆ ಅಂತರಾಷ್ಟ್ರೀಯ ಮಟ್ಟದಲ್ಲೂ ದೊಡ್ಡ ಸುದ್ದಿಯನ್ನು ಮಾಡಿತು.

ಮೇಲಿನ ಮೂರೂ ಘಟನೆಗಳಿಗೆ ರಾಜಕೀಯ ಆಯಾಮಗಳಿವೆ. ಕೊನೆಯ ಎರಡೂ ಘಟನೆಗಳು ಯುದ್ಧದಾಹಿ ಪುರುಷನ ಮಹಾತ್ವಾಂಕ್ಷೆಗಳು ಸ್ರೀ ಸಂವೇಧನೆಗಳ ಮೇಲೆ ನಡೆಸಿದ, ನಡೆಸುತ್ತಿರುವ ಧಾಳಿಯಾಗಿತ್ತು. ಅ ಧಾಳಿಯನ್ನು ಮಹಿಳೆಯರು ತಾಯ್ತನದ ಅಂತಃಕರಣದಿಂದಲೇ ಎದುರಿಸಿದರು.
ಪರಿಣಾಮ ಏನಾಯ್ತು?
ಕೇಂದ್ರ ಸರಕಾರವು ತಾಯಂದಿರ ಪ್ರತಿಭಟನೆಯ ಕಾರಣದಿಂದಾಗಿ ಅಸ್ಸಾಂ ರೈಪಲ್ಸ್ ನ ೧೭ನೇ ತುಕಡಿಯನ್ನು ಹಿಂದಕ್ಕೆ ಕರೆಸಿಕೊಂಡಿತು. ಸಶಸ್ತ್ರಪಡೆಗಳ ವಿಶೇಷಾಧಿಕಾರಗಳ ಕಾಯ್ದೆಯ ಮರು ಪರಿಶೀಲನೆಗಾಗಿ ಜೀವನ ರೆಡ್ಡಿ ಆಯೋಗವನ್ನು ನೇ
ಮಿಸಿತು.

ಜಮ್ಮು-ಕಾಶ್ಮೀರ ಸೇರಿದಂತೆ ಈಶಾನ್ಯ ರಾಜ್ಯಗಳಾದ ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ. ತ್ರಿಪುರ ಮತ್ತು ನಾಗಲ್ಯಾಂಡ್, ಮಿಜೋರಾಂ [ಸೆವೆನ್ ಸಿಸ್ಟರ್ಸ್]ಗಳಲ್ಲಿ ಸೇನಾ ಪಾರಮ್ಯವಿದೆ. ನಾವೆಲ್ಲಾ ಒಂದೇ ದೇಶಕ್ಕೆ ಸೇರಿದವರಾಗಿದ್ದರೂ ಆ ರಾಜ್ಯಗಳಿಗೆ ಪ್ರವೇಶಿಸಬೇಕಾದರೆ ಅಲ್ಲಿನ ರಾಜ್ಯಗಳ ಅನುಮತಿಯನ್ನು ಮುಂಚಿತವಾಗಿ ಪಡೆಯಬೇಕು.ಆ ರಾಜ್ಯಗಳಲ್ಲಿ ಸದಾ ಕಂಕುಳಲ್ಲಿ ಮೆಷಿನ್ ಗನ್ನ್ ಗಳನ್ನಿಟ್ಟುಕೊಂಡೇ ತಿರುಗುವ ಸೇನಾ ಸಿಬ್ಬಂದಿ ಅಲ್ಲಲ್ಲಿ ಕಾಣಸಿಗುತ್ತಾರೆ. ಯಾಕೆ ಹೀಗೆ?

ಈ ರಾಜ್ಯಗಳಲ್ಲಿ ಆದಿವಾಸಿ ಮತ್ತು ಬುಡಕಟ್ಟು ಜನಾಂಗದವರೇ ಅತೀ ಹೆಚ್ಚಾಗಿದ್ದಾರೆ. ಇವರಲ್ಲಿ ಬಹುತೇಕರನ್ನು ಬ್ರಿಟಿಶರು  ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಿದ್ದಾರೆ.ಹಾಗಿದ್ದರೂ ಅವರು ತಮ್ಮ  ಶ್ರೀಮಂತ ಸಂಸ್ಕ್ರುತಿಯನ್ನು ಉಳಿಸಿ ಬೆಳಸಿಕೊಂಡು ಬಂದಿದ್ದಾರೆ. ಭಾರತೀಯ ಮುಖ್ಯವಾಹಿನಿಯ ಸಂಸ್ಕ್ರುತಿಗೂ ಇವರ ಸಂಸ್ಕ್ರುತಿಗೂ ಅಪಾರ ವ್ಯತ್ಯಾಸಗಳಿವೆ. ಇದಲ್ಲದೆ ಇವರಲ್ಲಿ ಹೆಚ್ಚಿನವರು ಮಂಗೋಲಿಯನ್ ಬುಡಕಟ್ಟಿಗೆ ಸೇರಿದವರಾದ ಕಾರಣ ದೈಹಿಕವಾಗಿ ಭಾರತಿಯರಿಗಿಂತ ಬಿನ್ನರಾಗಿ ಕಾಣುತ್ತಾರೆ.  ಭಾರತದ ಇನ್ನಿತರ ಭಾಗಗಳಲ್ಲಿ ಕಾಣಿಸಿಕೊಂಡಾಗ ಇವರು ನಮ್ಮ ದೇಶಕ್ಕೆ ಸೇರಿದವರೇ ಅಥವಾ ವಿದೇಶಿಯರೇ ಎಂಬ ಸಂಶಯ ಮೂಡುತ್ತದೆ. ಈ ಭಾವನೆ ಈಶಾನ್ಯೇತರ ರಾಜ್ಯಗಳಲ್ಲಿರುವುದು ಅವರಿಗೂ ಗೊತ್ತಿದೆ. ಹಾಗಾಗಿಯೇ ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಇಲ್ಲಿಯ ಜನರು ಪ್ರತ್ಯೇಕತೆಯ ಕೂಗು ಹಾಕಿದರು. ಈ ನಿಟ್ಟಿನಲ್ಲಿ ಅನೇಕ ಸಂಘಟನೆಗಳನ್ನು ಕಟ್ಟಿಕೊಂಡರು. ಅದರಲ್ಲಿ ಬಹುಮುಖ್ಯವಾದದ್ದು ೧೯೬೪ರಲ್ಲಿ ಸಮರೇಂದ್ರ ಸಿಂಗ್ ಹುಟ್ಟು ಹಾಕಿದ ಯೂನೈಟೆಡ್ ನ್ಯಾಷನಲ್ ಲಿಬರೇಷನ್ ಪ್ರಂಟ್. ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ ಮತ್ತು ನಾಗಲ್ಯಾಂಡ್ ಒಳಗೊಂಡಂತೆ ”ಗ್ರೇಟರ್ ನಾಗಲ್ಯಾಂಡ್’ [ UNLF ] ಎಂಬ ಪ್ರತ್ಯೇಕ ರಾಷ್ಟ್ರದ ಕನಸ್ಸನ್ನು ಕಟ್ಟಿಕೊಂಡು ಗೆರಿಲ್ಲಾ ಮಾದರಿಯ ಯುದ್ಧ ತಂತ್ರಗಳನ್ನು ಹೂಡುತ್ತಿದ್ದಾರೆ.  ನೆರೆಯ ಪಾಕಿಸ್ತಾನ, ಚೀನಾ [ಹಿಂದಿನ ತಿಬೇಟ್] ಬಾಂಗ್ಲಾ, ಮಯನ್ಮಾರು [ಹಿಂದಿನ ಬರ್ಮಾ] ನೇಪಾಳ ಮತ್ತು ಭೂತಾನ್ ದೇಶಗಳು ಈ ರಾಜ್ಯಗಳೊಡನೆ ಗಡಿಯನ್ನು ಹಂಚಿಕೊಂಡಿವೆ.  ಇದರಲ್ಲಿ ಕೆಲವು ರಾಷ್ಟ್ರಗಳು ಈ ಬಂಡುಕೋರ ಸಂಘಟನಗಳಿಗೆ ಕುಮ್ಮಕ್ಕು ನೀಡುತ್ತಿವೆ. ಶಸ್ತಾಸ್ತ್ರಗಳನ್ನು ಪೂರೈಸುತ್ತಿವೆ. ಇವುಗಳು ನಮ್ಮ ರಾಷ್ಟ್ರದ ಅಖಂಡತೆ ಮತ್ತು ಸಾರ್ವಬೌಮತೆಗೆ ಧಕ್ಕೆ ತರುತ್ತಿವೆ.

ಇದನ್ನೆಲ್ಲಾ ಮನಗಂಡ ಭಾರತ ಸರಕಾರವು ೧೯೫೮ರಲ್ಲಿ ’ಸಶಸ್ತ್ರ ಪಡೆಗಳ ವಿಶೇಷ ಅಧಿಕಾರಿಗಳ ಕಾಯ್ದೆ [ AFSPA ] ವನ್ನು ಜಾರಿಗೆ ತಂದಿತು. ಇದರ ಬಲದಿಂದ ಸೇನೆ ಈ ರಾಜ್ಯಗಳಲ್ಲಿ ಬಂಡುಕೋರರ ದಮನಕ್ಕೆ ಕಂಕಣ ಬದ್ಧವಾಗಿದೆ. ಆದರೆ ಸೇನೆ ಕೆಲವೊಮ್ಮೆ ತನಗಿಷ್ಟ ಬಂದಂತೆ ವರ್ತಿಸುತ್ತದೆ. ಇದು ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗುತ್ತಿದೆ.
ಇದನ್ನೆಲ್ಲಾ ಯಾಕೆ ಹೇಳುತ್ತಿದ್ದೇನೆಂದರೆ ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ  ಕೇವಲ ಮಹಿಳೆಯರೇ ನಡೆಸುವ ಬೃಹತ್  ಮಾರುಕಟ್ಟೆಯೊಂದು ಇಂಪಾಲದಲ್ಲಿದೆ. ಅದುವೇ ಖೈರಾಮ್ ಬಂದ್ ಬಜಾರ್ ಅಥವಾ ಇಮಾ ಮಾರುಕಟ್ಟೆ. ’ಇಮಾ’ ಅಂದರೆ ಮಣಿಪುರಿ ಭಾಷೆಯಲ್ಲಿ ತಾಯಿ ಎಂದರ್ಥ. ಇದು ತಾಯಂದಿರ ಮಾರುಕಟ್ಟೆ. ಇಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚಿನ ಮಹಿಳೆಯರು ನೆಮ್ಮದಿಯಿಂದ ತಂತಮ್ಮ ಅಂಗಡಿ ಮುಂಗಟ್ಟುಗಳನ್ನು ನಡೆಸುತ್ತಿದ್ದಾರೆ. ಇದು ಸಂಪೂರ್ಣ ಸ್ತ್ರೀ ಜಗತ್ತು. ಮಣಿಪುರಕ್ಕೆ ಹೋಗುವಾಗ ಆ ಮಾರುಕಟ್ಟೆಯನ್ನೊಮ್ಮೆ ನೋಡಬೇಕು, ಅಲ್ಲಿಯ ಮಹಿಳೆಯರನ್ನು ಮಾತಾಡಿಸಬೇಕೆಂಬುದು ನನ್ನ ಇಚ್ಛೆಯಾಗಿತ್ತು.
 ನಾವು ಇಂಪಾಲ ತಲುಪಿದಾಗ ರಾತ್ರಿ ಆರು ಘಂಟೆಯಾಗಿತ್ತು. ಈಶಾನ್ಯ ರಾಜ್ಯಗಳಿಗೆ ಪ್ರವಾಸ ಕೈಗೊಳ್ಳುವವರು ನೆನಪಿನಲ್ಲಿಡಬೇಕಾದ ಮತ್ತೊಂದು ಸಂಗತಿ ಏನೆಂದರೆ ಅಲ್ಲಿ ಬಹುಬೇಗನೇ ಅಂಗಡಿಗಳನ್ನು ಮುಚ್ಚುತ್ತಾರೆ. ರಾತ್ರಿ ಏಳು ಘಂಟೆ ಸುಮಾರಿಗೆ ಇಮಾ ಮಾರುಕಟ್ಟೆಗೆ ನಾ ತಲುಪಿದೆ. ಒಂದೆರಡು ಅಂಗಡಿಗಳು ಮುಚ್ಚುವ ಸಿದ್ಧತೆಯಲ್ಲಿದ್ದುದನ್ನು ಬಿಟ್ಟರೆ ಇಡೀ ಮಾರುಕಟ್ಟೆ ಮುಚ್ಚಿತ್ತು. ಆದರೆ ಮಾರುಕಟ್ಟೆಯ ಪಕ್ಕದ ಮುಖ್ಯ ರಸ್ತೆಯಲ್ಲಿ ಲಾಟೀನು ಮತ್ತು ಮೊಂಬತ್ತಿಯ ಬೆಳಕಿನಲ್ಲಿ ನೂರಾರು ಹೆಂಗಸರು ಸೊಪ್ಪು ತರಕಾರಿ ಮತ್ತು ತಾಜಾ ಮೀನುಗಳನ್ನು ಮಾರಾಟ ಮಾಡುತ್ತಿದ್ದರು. ಅವರಲ್ಲೇ ಹತ್ತಾರು ಮಹಿಳೆಯರನ್ನು ಮಾತಾಡಿಸಿದೆ. ಆದರೆ ಅವರಿಗೆ ಮಣಿಪುರಿ ಬಿಟ್ಟರೆ ಬೇರೆ ಭಾಷೆ ಬರುವುದಿಲ್ಲ. ಹಿಂದಿ ಅರ್ಥವಾಗುತ್ತೆ. ಮಾತಾಡಲು ಬಾರದು. ಕೊನೆಗೆ ಕೈ ಬಾಯಿ ಅಲ್ಲಾಡಿಸುತ್ತಾ ನ ನಗುತ್ತಾ ಮಾತಾಡಿದೆ. ಅವರೂ ಅದನ್ನೇ ಮಾಡಿದರು. ಕೊನೆಗೊಮ್ಮೆ ಒಬ್ಬಳು ತಾಯಿ ಎಷ್ಟು ಚೆನ್ನಾಗಿ ನಕ್ಕು ನನ್ನನ್ನು ಅಪ್ಪಿಕೊಂಡಳೆಂದರೆ ಅವರ ಎಲ್ಲಾ ಭಾವನೆಗಳು ನನ್ನೊಳಗೆ ಹರಿದು ನಾವಿಬ್ಬರೂ ಒಂದೇ ಅನ್ನಿಸಿಬಿಟ್ಟಿತು.

ಮರುದಿನ ಮುಂಜಾನೆಯೇ-ಅಲ್ಲಿ ಐದು ಘಂಟೆಗೆಲ್ಲಾ ಸೂರ್ಯ ಮೇಲೆ ಬಂದಿರುತ್ತಾನೆ- ಇಮಾ ಮಾರುಕಟ್ಟೆಗೆ ಸೈಕಲ್ ರಿಕ್ಷಾದಲ್ಲಿ ಒಬ್ಬಳೇ ಹೋದೆ.  ಮಣಿಪುರದ ರಾಣಿ ಸ್ಥಳೀಯ ಮಾಹಿಳೆಯರಿಗಾಗಿ ಈ ಮಾರುಕಟ್ಟೆನ್ನು ಪ್ರಾರಂಭಿಸಿದ್ದಳು. ತಾವು ಬೆಳೆದ ತರಕಾರಿ ಹಣ್ಣು ಹಂಪಲು, ಕರಕುಶಲ ವಸ್ತುಗಳನ್ನು ಇಲ್ಲಿ ತಂದು ಮಾರಾಟ ಮಾಡಿ ಅಲ್ಪ ಸ್ವಲ್ಪ ದುಡ್ಡು ಗಳಿಸಿಕೊಳ್ಳುತ್ತಿದ್ದರು. ಅಂದು ರಾಣಿಯೊಬ್ಬಳು ಈ ಮಹಿಳೆಯರಿಗೆ ಹಾಕಿಕೊಟ್ಟ ಸ್ವಾವಲಂಬನೆಯ ಹಾದಿ ಇಂದು ನಾಲ್ಕು ಸಾವಿರಕ್ಕೂ ಹೆಚ್ಚಿನ ಮಹಿಳೆಯರ ಬದುಕಿನ ಹಾದಿಯನ್ನು ತೆರೆದಿದೆ. ಈ ಮಾರುಕಟ್ಟೆ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಪ್ರಖ್ಯಾತಿ ಗಳಿಸಿದೆ. ಯಾಕೆಂದರೆ ಇಷ್ಟು ದೊಡ್ಡ ಸಂಕ್ಯೆಯಲ್ಲಿ ಮಹಿಳಾ ವ್ಯಾಪಾರಿಗಳಿರುವ ಇನ್ನೊಂದು ಮಾರುಕಟ್ಟೆ ಜಗತ್ತಿನಲ್ಲಿಲ್ಲ. ಇಲ್ಲಿ ನಿಮಗೆ ದೈನಂದಿನ ಬದುಕಿಗೆ ಏನು ಬೇಕೋ ಅದೆಲ್ಲವೂ ದೊರಕುತ್ತದೆ.

ಈ ಮಾರುಕಟ್ಟೆಯ ಉಸ್ತುವಾರಿಯನ್ನು ನೋಡಿಕೊಳ್ಳಲು ಪದಾಧಿಕಾರಿಗಳಿದ್ದಾರೆ. ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ ನಡೆಸಿ ಅಧ್ಯಕ್ಷರು ಮತ್ತು ಸೆಕ್ರೇಟರಿಯನ್ನು ಆಯ್ದುಕೊಳ್ಳುತ್ತಾರೆ.ಜಗಳ ಜಂಜಾಟವಿಲ್ಲ. ಇಲ್ಲಿನ ಮಹಿಳೆಯರು ಎದೆ ತಟ್ಟಿಕೊಂಡು ಹೇಳುತ್ತಾರೆ  ’ಇಲ್ಲಿ ನಾವು ನಾವೇ ಆಗಿದ್ದೇವೆ. ಇಲ್ಲಿ ಪುರುಷರಿಗೆ ಪ್ರವೇಶವಿಲ್ಲ.’ ಹಾಗಿದ್ದರೂ ಅಲ್ಲಿ ಐದಾರು ಜನ  ಜನ ಪುರುಷ ಪೋರ್ಟರ್ ಗಳಿದ್ದಾರೆ. ಅಲ್ಲಿ ತಾಯಂದಿರೇ ಅಂದರೆ ನಲ್ವತ್ತು ಮೀರಿದ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣದಿಂದಾಗಿ ಅವರ ಸಾಮಾನು ಸರಂಜಾಮ್ ಗಳನ್ನು ಹತ್ತಿಳಿಸಲು ಅವರಿಗೆ ಈ ಪೋರ್ಟರ್ ಗಳು ನೆರವಾಗುತ್ತಾರೆ. ಯಾಕೆ ಪುರುಷರಿಗೆ ಪ್ರವೇಶ ಬೇಡ ಅಂತ ಪ್ರಶ್ನಿಸಿದರೆ. ಅವರು ತಮ್ಮ ಅಂಗಡಿಯ ಚಿಕ್ಕ ಜಾಗವನ್ನು ತೋರಿಸಿ, ಇಲ್ಲಿ ಪಕ್ಕದಲ್ಲಿ ಮಹಿಳೆಯರೇ ಕೂತು ಅಂಗಡಿ ನಡೆಸಿದರೆ ನಮಗೇನೂ ಅನ್ನಿಸುವುದಿಲ್ಲ. ಆ ಜಾಗಕ್ಕೆ ಪುರುಷ ಬಂದಾಗ ಮುಜುಗರವಾಗುತ್ತದೆ ಎನ್ನುತ್ತಾರೆ. ನಾವು ಇದಕ್ಕೆ ಕಂಪರ್ಟೇಬಲ್ ಅನ್ನುವ ಪದ ಬಳಸುತ್ತೇವೆ ಅಲ್ಲವೇ?

 ಮಣಿಪುರ ನಮ್ಮ ಬೆಂಗಳೂರಿನಿಂದ  3416 ಕಿ.ಮೀ ದೂರದಲ್ಲಿದೆ. ಸುತ್ತ ನೀಲಿ ಬಣ್ಣದ ಪರ್ವತ ಶ್ರೇಣಿಗಳಿಂದ ಸುತ್ತುವರಿದ ರಮಣೀಯ ಪ್ರದೇಶವಿದು. ನೆಹರು ಈ ರಾಜ್ಯದ ಪಕೃತಿ ಸೌಂದರ್ಯಕ್ಕೆ ಮಾಋ ಹೋಗಿ ಇದನ್ನು ’ಭಾರತದ ಆಭರಣ’ ಎಂದು ಕರೆದಿದ್ದರು.  ಸರಿ ಸುಮಾರು ಇಷ್ಟೇ ದೂರದಲ್ಲಿರುವ ಇನ್ನುಳಿದ ಏಳು ಈಶಾನ್ಯ ರಾಜ್ಯಗಳನ್ನು ಸುತ್ತಿ ಬಂದಿದ್ದೇನೆ. ವಿದ್ಯಾಭ್ಯಾಸಕ್ಕಾಗಿ. ಹೊಟ್ಟೆಪಾಡಿಗಾಗಿ ಅಥವಾ ಅಲ್ಲಿನ ಜಂಜಾಟವನ್ನು ತಪ್ಪಿಸಿಕೊಳ್ಳುವುದಕ್ಕಾಗಿಯೋ ಅಲ್ಲಿನ ಜನರು ಗಣನೀಯ ಸಂಖ್ಯೆಯಲ್ಲಿ ಬೆಂಗಳೂರಿಗೆ ಬಂದಿದ್ದಾರೆ.ಅವರನ್ನು ಕೆಲವರು ’ಚಿಂಕಿ’ಗಳೆಂದು ಕರೆದು ಜನಾಂಗೀಯ [ರೇಸಿಸ್ಟ್] ಅವಹೇಳನ ಮಾಡುವುದನ್ನು ಕಂಡಿದ್ದೇನೆ. ಇಲ್ಲಿದ್ದು ತಾಯ್ನಾಡಿಗೆ ಹಿಂದಿರುಗಿದ್ದ ಹಲವರನ್ನು ನಾನಲ್ಲಿ ಬೇಟಿಯಾಗಿದ್ದೇನೆ. ಅವರು ಬೆಂಗಳೂರನ್ನು ಕೃತಜ್ನತೆಯಿಂದ ಸ್ಮರಿಸುತ್ತಾರೆ. ಅರುಣಾಚಲ ಪ್ರದೇಶದ ತವಾಂಗ್ ನಲ್ಲಿ ನಾವಿಳಿದುಕೊಂಡಿದ್ದ ಹೋಟೇಲ್ ನ ಮಾಲೀಕರು ಬೆಂಗಳೂರಿನಲ್ಲಿ ಇಂಜಿನೀಯರ್ ಆಗಿದ್ದರಂತೆ. ಅವರ ಮಗ ಇಲ್ಲಿಯೇ. ವಿದ್ಯಾಭ್ಯಾಸವನ್ನು ಮಾಡಿದವನು. ಇಬ್ಬರೂ ನಮ್ಮನ್ನು ಆದರದಿಂದ ಸ್ವಾಗತಿಸಿ ಕನ್ನಡದಲ್ಲಿಯೇ ವ್ಯವಹರಿಸಿದ್ದರು. ಇಂಪಾಲದಲ್ಲಿ ಸಿಕ್ಕಿದ್ದಾತನೊಬ್ಬ ೨೦೦೮ರ ಬಿಎಂಟಿಸಿ ಬಸ್ ಪಾಸ್ ಅನ್ನು ಇನ್ನೂ ಜತನವಾಗಿಟ್ಟುಕೊಂಡದ್ದನ್ನು ತೋರಿಸಿ ಕನ್ನಡದಲ್ಲಿಯೇ ಬೆಂಗಳೂರಿನ ಬಗ್ಗೆ ಅಭಿಮಾನದಿಂದ ಮಾತಾಡಿದ.

ಒಂದು ರಾಜ್ಯವೆಂದರೆ ಅಲ್ಲಿ ಹಲವಾರು ಸಮಸ್ಯೆಗಳು, ತಿಕ್ಕಾಟಗಳು ಇರುತ್ತವೆ. ಚಲನಶೀಲವಾದ ಸಮಾಜವೊಂದು ಅಂತರಿಕವಾಗಿ ಒಳಗೊಳಗೆ ಬೇಯುತ್ತಲೂ ಅರಳುತ್ತಲೂ ಇರುತ್ತದೆ. ಕೇವಲ ಇಪ್ಪತ್ತೇಳು ಲಕ್ಷ ಜನಸಂಖ್ಯೆಯಿರುವ ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತವಾಗಿರುವ ಈ ಪುಟ್ಟ ರಾಜ್ಯ ತನ್ನೊಳಗೆ ಎಷ್ಟೊಂದು ಬೇಗುಧಿಯನ್ನಿಟ್ಟುಕೊಂಡಿದೆ!.
ಮಣಿಪುರ ಮಾತ್ರವಲ್ಲ ಈಶಾನ್ಯ ರಾಜ್ಯಗಳೆಲ್ಲಿ ಎಲ್ಲಿ ಬೇಕಾದರೂ ತಿರುಗಾಡಿ ಅಲ್ಲೆಲ್ಲಾ ಅತ್ಯಂತ ಕ್ರಿಯಾಶೀಲರಾದ, ಲವಲವಿಕೆಯ ಮಹಿಳೆಯರೇ ಕಾಣಸಿಗುತ್ತಾರೆ. ಅವರ ಬೆನ್ನಮೇಲೆ ಹೊರೆಯಿದೆ,ಅದು ತಪ್ಪಿದರೆ ಕೂಸಿದೆ .ಸಂಸಾರದ ಭಾರಕ್ಕೆ ಅವರ ನಗು ಮಂಕಾಗಿಲ್ಲ  ಸ್ತ್ರೀತನಕ್ಕೆ ದಕ್ಕೆ ಬಂದಾಗ ಇದೇ ಮಹಿಳೆ ಬೀದಿಗಿಳಿದು ಹೋರಾಡುತ್ತಾಳೆ. ನಿಮ್ಮ ಮನೆಯ ಗಂಡಸರು ಎಲ್ಲಿ ಎಂದು ಪ್ರಶ್ನಿಸಿದರೆ, ಅವರು ಸೈನದಲ್ಲಿರುತ್ತಾರೆ ಅಥವಾ ದೂರದ ನಾಡಿನಲ್ಲೆಲ್ಲೋ ಸೆಕ್ಯೂರಿಟಿ ಗಾರ್ಡ್ ಗಳಾಗಿರುತ್ತಾರೆ. ಇಲ್ಲವಾದರೆ ದೂರದೂರುಗಳಲ್ಲಿ ಟ್ಯಾಕ್ಸಿ ಓ ಡಿಸುತ್ತಿರುತ್ತಾರೆ. ಮೂರೂ ಅಲ್ಲವಾದವರು ಸೋಮಾರಿಗಳಾಗಿರುತ್ತಾರೆ; ಕುಡುಕರಾಗಿರುತ್ತಾರೆ ಎಂದು ಈಶಾನ್ಯ ರಾಜ್ಯಗಳ ಅಪರೂಪದ ಹೂಗಳಂತೆ ಅಲ್ಲಿನ ಮಹಿಳೆಯರು  ಮುಗ್ದವಾಗಿ ನಗುತ್ತಾರೆ.
ಮಣಿಪುರದ ಮಹಿಳೆ ಸಮತೂಕದ ಮಹಿಳೆ,  ವ್ಯಕ್ತಿಯಾಗಿ ಲಂಡನ್ ಒಲಂಪಿಕ್ಸ್ ನಲ್ಲಿ ಮಹಿಳಾ ಬಾಕ್ಸಿಂಗ್ ನಲ್ಲಿ ಭಾರತಕ್ಕೆ ಕಂಚಿನ ಪದಕವನ್ನು ತಂದುಕೊಟ್ಟ ಮೇರಿ ಕೋಮ್ ಇದ್ದಾಳೆ. ಶಕ್ತಿಯಾಗಿ ಹದಿನಾರು ವರ್ಷಗಳಿಂದ ಉಪವಾಸ ಮಾಡುತ್ತಿರುವ ಇರೋಮ್ ಶರ್ಮಿಳಾ ಇದ್ದಾಳೆ.ಇವರಿಬ್ಬರೂ ನಮ್ಮ ನಾಡಿನ ಹೆಮ್ಮೆಯ ಪುತ್ರಿಯರು.

[ಪ್ರಜಾವಾಣಿಯ ಸಾಪ್ತಾಹಿಕ ಪುರವಣಿ ’ಮುಕ್ತಛಂಧ’ ದಲ್ಲಿ ಪ್ರಕಟವಾದ ಲೇಖನ ]




2 comments:

sunaath said...

ಮಣಿಪುರದ ಬಗೆಗೆ ಸ್ವಾನುಭವದ ತಿಳಿವಳಿಕೆಯನ್ನು ಕೊಟ್ಟಿದ್ದೀರಿ. ಅವರ ಬಗೆಗೆ ಹೆಮ್ಮೆ ಎನಿಸುತ್ತದೆ. ಮಹಾಭಾರತದಲ್ಲಿ ಮಣಿಪುರವನ್ನು ಪ್ರಮೀಳಾರಾಜ್ಯ ಎಂದು ಕರೆದಿದ್ದಾರಲ್ಲವೆ?

Unknown said...

ಹೌದು. ಈ ಲೇಖನ ಬರೆಯುವಾಗ ಅದು ನೆನಪಾಗಿತ್ತು ಕಾಕಾ. ಆದರೆ ಪ್ರಮೀಳಾ ರಾಜ್ಯ ಅಂತ ನಾವು ಹೆಚ್ಚಾಗಿ ಕರೆಯೋದು ಪಕ್ಕದ ಕೇರಳವನ್ನು ಅಲ್ವಾ? ಅಲ್ಲದೆ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯನ್ನು ಪಾತಾಳಲೋಕ ಅಂತಲೂ ಹೇಳುವುದುಂಟು. ಅಲ್ಲಿಯ ಸಾಮ್ರಾಜ್ನಿ ಉಲೂಪಿ. ಅವರಿಬ್ಬರು ಅಕ್ಕ ಪಕ್ಕ್ಕದ ರಾಜ್ಯದವರು ಅಂತ ನನ್ನ ಅನ್ನಿಸಿಕೆ. ಹಾಗಾಗಿ ಈ ಗೊಂದಲ ಬೇಡ ಅಂತ ಪ್ರಮೀಳಾ ರಾಜ್ಯದ ಉಲ್ಲೇಖವನ್ನೇ ಮಾಡಿಲ್ಲ.
ನಿಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್ ಸುನಾಥ ಕಾಕ.