Monday, November 10, 2014

...ಇದ್ದೂ ಇಲ್ಲದಂತಿರುವವರು!




ಸಾಮಾಜಿಕವಾಗಿ, ವೈಯಕ್ತಿಕವಾಗಿ ಇತ್ತೀಚೆಗೆ ನನ್ನನ್ನು ಅಲ್ಲಾಡಿಸಿಬಿಟ್ಟ ಎರಡು ಘಟನೆಗಳೆಂದರೆ ಕಂಬಾಲಪಲ್ಲಿ ಪ್ರಕರಣ ಮತ್ತು ರಾಮಚಂದ್ರಪುರ ಮಠದಲ್ಲಿ ನಡೆಯಿತ್ತೆನ್ನಲಾದ ಲೈಂಗಿಕ ಹಗರಣ.
ಈ ಎರಡು ಘಟನೆಗಳನ್ನೇ ಯಾಕೆ ಮುಖ್ಯವಾಗಿ ತೆಗೆದುಕೊಂಡೆನೆಂದರೆ ಇಲ್ಲಿ ಬಲಿಪಶುವಾಗಿದ್ದವರು ಸಮಾಜದ ಅಸಡ್ಡೆಗೆ ಒಳಗಾದ ದಲಿತರು ಮತ್ತು ಪುರುಷಪ್ರಧಾನ ಸಮಾಜವ್ಯವಸ್ಥೆಯಲ್ಲಿ ದಲಿತರಂತೆಯೇ ದನಿಯಿಲ್ಲದೆ ಬದುಕುತ್ತಿರುವ ಮಹಿಳಾ ಸಮೂಹದ ಒಳ ತುಡಿತಗಳು. ಮುಖ್ಯವಾಗಿ ಈ ಘಟನೆಯನ್ನು ನಿಯಂತ್ರಿಸಿದ್ದು ಧರ್ಮ ಮತ್ತು ಜಾತಿಯ ಶಕ್ತಿಗಳು.
ನನಗೀಗಲೂ ಚೆನ್ನಾಗಿ ನೆನಪಿದೆ.
ಆಗ ನಾನಿನ್ನೂ ಪುಟ್ಟ ಬಾಲೆ. ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಕರಿಯನ ಮಗ ಕುಂಡ ತನ್ನಪ್ಪನ ಜೊತೆ ನಮ್ಮ ಮನೆಗೆ ಬರುತ್ತಿದ್ದ. ಆಗೆಲ್ಲಾ ಹರಿಜನರಿಗೆ ಈಗಿನಂತೆ ಸರಕಾರದಿಂದ ವಿಶೇಷ ಸವಲತ್ತುಗಳಿರಲಿಲ್ಲ. ಹಾಗಾಗಿ ಅವರದು ಬಡತನದ ಬಾಳು. ನಮ್ಮ ಮನೆಯಲ್ಲಿ ಹರಿಜನರು ನಮ್ಮ ಮನೆಯೊಳಗೆ ಬರುತ್ತಿರಲಿಲ್ಲ ಎಂಬುದನ್ನು ಬಿಟ್ಟರೆ ಅವರಿಗೆ ಪ್ರತ್ಯೇಕವಾದ ತಟ್ಟೆ ಲೋಟಗಳನ್ನೇನೂ ಇಡುತ್ತಿರಲಿಲ್ಲ.ನಾವು ಊಟ ಮಾಡುತ್ತಿರುವುದೇ ಅವರಿಗೂ ಊಟ. ನಮಗೆ ನಮ್ಮನೆಯ ಪಿಂಗಾಣಿ ಬಟ್ಟಲಲ್ಲಿ ಊಟ. ಅವರಿಗೆ ಹಾಳೆ ಅಥವಾ ಬಾಳೆಯಲ್ಲಿ ಊಟ..ಅವರು ಬಿಸ್ನೀರು ಕೊಟ್ಟಿಗೆಯಲ್ಲಿ ಊಟ ಮಾಡುತ್ತಿರುವಾಗ ನಾನು ನನ್ನ ಬಟ್ಟಲನೆತ್ತಿಕೊಂಡು ಅಲ್ಲಿಗೆ ಹೋಗಿ ಊಟ ಮಾಡುತ್ತಿದ್ದುಂಟು. ಕೊಟ್ಟಿಗೆ ಎಂದರೆ ದನದ ಕೊಟ್ಟಿಗೆಯ ನೆನಪು ನಿಮಗೆ ಬರಬಹುದು. ಆದರೆ ಇದು ಅದಲ್ಲ..ಬಿಸ್ನೀರು ಕೊಟ್ಟಿಗೆಯೆಂದರೆ. ನಮ್ಮ ಮನೆಗಿಂತಲೂ ದೊಡ್ಡದಾದ ಎರಡು ಮಾಡಿನ ಕಟ್ಟಡವದು. ಅದರಲ್ಲಿ ಎರಡು ಪಾರ್ಟೀಷನ್ ಇರುತ್ತಿತ್ತು. ಒಂದರಲ್ಲಿ ಸ್ನಾನದ ರೂಂ .ರೂಂ ಅಂದರೆ ಮತ್ತೆ ಕಲ್ಪನೆಗೆ ಎಡೆ ಕೊಡದಿರಿ. ಅಲ್ಲಿ ದೊಡ್ಡದೊಂದು ತಾಮ್ರದ ಹಂಡೆ. ಪಕ್ಕದಲ್ಲೇ ಹಾಳೆ ಕೊತ್ತಳಿಕೆ, ಸೌದೆಗಳನ್ನು ಒಟ್ಟಿ ಇಡಲು ಸ್ವಲ್ಪ ಜಾಗ. ಈ ರೂಂ ನ ಏಳೆಂಟು ಪಟ್ಟು ದೊಡ್ಡದಾದ ಇನ್ನೊಂದು ರೂಂ. ಅಲ್ಲಿ ಮದ್ಯದಲ್ಲಿ ಭತ್ತ ಕುಟ್ಟುವ ಜಾಗ. ಒನಕೆಯನ್ನು ಮೇಲಕ್ಕೆತ್ತಲು ಜಾಗ ಬೇಕಾದ ಕಾರಣ ಅಲ್ಲಿ ಅಟ್ಟವಿಲ್ಲ. ಆದರೆ ಆ ಹಾಲ್ ನ ಅರ್ಧ ಭಾಗಕ್ಕೆ ಅಟ್ಟವುಂಟು. ಅದರ ತುಂಬಾ ಬೈ ಹುಲ್ಲನ್ನು ತುಂಬಿ ಇಡುತಿದ್ದರು. ಅದು ಜಾನವಾರುಗಳಿಗೆ ಮಳೆಗಾಲದ ಮೇವು. ಕೊಟ್ಟಿಗೆಯ ಮೂಲೆಗಳಲ್ಲಿ ಹಾರೆ, ಪಿಕ್ಕಾಸು, ನೊಗ, ನೇಗಿಲು ವಿವಿಧ ಆಕರದ ಹೆಡಿಗೆಗಳು ಮುಂತಾದ ಕೃಷಿ  ಸಲಕರಣೆಗಳನ್ನು ಒರಗಿಶಿ ಇಡುತ್ತಿದ್ದರು. ಕೊಟ್ಟಿಗೆಯ ಅರ್ಧ ಗೋಡೆಗಳಲ್ಲಿ ಕೋಳಿ ಹುಂಜಗಳು ಗತ್ತಿನಿಂದ  ಪಟಪಟನೆ ರೆಕ್ಕೆ ಬಡಿಯುತ್ತಾ, ಹೇಂಟೆ ಕೋಳಿಗಳನ್ನು ಓಡಿಸುವುದು ಸಾಮಾನ್ಯ ದೃಶ್ಯವಾಗಿತ್ತು.
ಇಂತಪ್ಪ ಪರಿಸರದಲ್ಲಿ ಕುಂಡ ನಮ್ಮ ಜೊತೆ ಆಟವಾಡುತ್ತಿದ್ದ. ಒಂದು ದಿನ ಅವನ ಬೆರಳಿಗೆ ಕತ್ತಿಯಿಂದ ಗಾಯವಾಯಿತು. ರಕ್ತ ಒಸರತೊಡಗಿತು. ಅಲ್ಲೇ ಇದ್ದ ನಾನು ತಕ್ಷಣ ಪಕ್ಕದಲ್ಲಿದ್ದ ಕಮ್ಯೂನಿಸ್ಟ್ ಗಿಡದ [ಈ ಕಮ್ಯೂನಿಸ್ಟ್ ಗಿಡದ ರಸವೆಂಬುದು ಸರ್ವ ಗಾಯಗಳಿಗೂ ರಾಮಬಾಣ ಎಂಬುದು ನಮ್ಮ ನಂಬಿಕೆ..ಅದನ್ನು ಸಣ್ಣಗೆ ಕೊಚ್ಚಿ ಹಾಕಿದರೆ ಹೊಂಡದಲ್ಲಿರುವ ಮೀನುಗಳು ಮತ್ತಿಗೆ ಒಳಗಾಗಿ ನಮ್ಮ ಬುಟ್ಟಿ ಸೇರುತ್ತಿದ್ದುದು ನನ್ನ ಸ್ವಾನುಭವ!] ಬಳಿ ಹೋಗಿ ಅದರ ಚಿಗುರೆಲೆಗಳನ್ನು ಕಿತ್ತು ಅಂಗೈಯಲ್ಲಿ ಹಿಸುಕಿ ರಸಬರ್ಸಿ ಅದಕ್ಕೆ ನನ್ನ ಎಂಜಲನ್ನು ಸೇರಿಸಿ,ಎಂಜಲು ಮಿಶ್ರಿತ ರಸವನ್ನು ಅವನ ಗಾಯಕ್ಕೆ ಹಾಕಿದೆ..ಅವನು ಉರಿ ಉರಿ ಎನ್ನುತ್ತಾ ಕೈ ಕಾಲು ಬಡಿಯುತಾ ಅಳತೊಡಗಿದ. ನಾನು ಬಿಡದೆ ಅವನ ಕೈಹಿಡಿದೆಳೆದು ಅದೇ ಸೊಪ್ಪಿನ ಮಿಶ್ರಣವನ್ನು ಅವನ ಗಾಯದ ಮೇಲಿಟ್ಟು ನನ್ನ ರಿಬ್ಬನಿನಿಂದ ಸುತ್ತಿ ಕಟ್ಟು ಹಾಕಿದೆ..ಇದೆಲ್ಲಾ ಕ್ಷಣಾರ್ಧದಲ್ಲಿ ನಡೆದು ಹೋಗಿತ್ತು. ಅಷ್ಟರಲ್ಲಾಗಲೇ ಅವನ ಬೊಬ್ಬೆಗೆ ದೊಡ್ಡವರೆಲ್ಲಾ ಅಲ್ಲಿಗೆ ಬಂದು ನನ್ನ ಉಪಚಾರವನ್ನು ನಗುತ್ತಾ ನೋಡುತ್ತಿದ್ದರು..ಕರಿಯ ನಗುತ್ತಾ ’ಎಡ್ಡೆ ಬಾಲೆ [ಒಳ್ಳೆ ಮಗು] ಎಂದರೆ ನಮ್ಮ ಅಮ್ಮನಂತೂ ಇಂದಿಗೂ ಈ ಘಟನೆಯನ್ನು ಉದಾಹರಿಸುತ್ತಾ ’ನಮ್ಮ ಉಷಾನಿಗೆ ಜಾತಿ ಗೀತಿ ಅನ್ನೊದು ಹುಟ್ಟಿನಿಂದಲೇ ಇರಲಿಲ್ಲ’ ಅಂತ ಹೇಳುತ್ತಾರೆ. ಅ ಹೇಳಿಕೆಯಲ್ಲಿ ಯಾವ ಭಾವ ಹುದುಗಿದೆಯೆಂಬುದು ನನಗಿಂದಿಗೂ ಅರ್ಥವಾಗಿಲ್ಲ.
ಇದನ್ನಿಲ್ಲಿ ಯಾಕೆ ಹೇಳುತ್ತಿದ್ದೇನೆಂದರೆ ಮೂರು ದಶಕಗಳ ಹಿಂದೆ ಹರಿಜನರು ನಮ್ಮಿಂದ ದೈಹಿಕವಾಗಿ ದೂರವಿದ್ದರು. ಆದರೆ ಮಾನಸಿಕವಾಗಿ ಹತ್ತಿರವಿದ್ದರು. ನಮ್ಮ ಮತ್ತು ಅವರ ನಡುವೆ ಮಾನವೀಯ ಸಂಬಂಧವಿತ್ತು. ಆದರೆ ಇಂದು ಸರಕಾರ ನೀಡಿದ ಹಲವು ಸೌಲಭ್ಯಗಳಿಂದಾಗಿ ಅವರು ಸ್ವಾಭಿಮಾನದಿಂದ ತಲೆಯೆತ್ತಿ ಬದುಕುತ್ತಿದ್ದಾರೆ..ಊರಿಗೆ ಹೋದಾಗ ಈಗಲೂ ನನಗೆ ಕರಿಯ ಸಿಗುತ್ತಾನೆ. ಪ್ರೀತಿಯಿಂದ ನನ್ನ ಗಂಡ ಮಕ್ಕಳ ಬಗ್ಗೆ ವಿಚಾರಿಸಿಕೊಳ್ಳುತ್ತಾನೆ. ಕುಂಡ ಪರಿಚಯದ ಗೌರವನಗು ಬೀರುತ್ತಾನೆ..
ನಮ್ಮ ನಡುವೆ ಗೋಡೆಯೊಂದು ಎದ್ದಿದೆ. ಓಲೈಕೆಯ ಪಕ್ಷ ರಾಜಕಾರಣ ಗ್ರಾಮ ಪಂಚಾಯತ್ ಮಟ್ಟದಲ್ಲೇ ಜನರ ಮನಸುಗಳನ್ನು ಒಡೆದಿದೆ.
ಕಂಬಾಲಪಲ್ಲಿ ಘಟನೆಗೆ ಬನ್ನಿ.
೨೦೦೦ನೇ ಇಸವಿ ಮಾರ್ಚ್೧೧.
ಕೋಲಾರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕಂಬಾಲ ಪಲ್ಲಿಯಲ್ಲಿ ಹಾಡು ಹಗಲೇ ಏಳು ಮಂದಿ ದಲಿತರ ಸಜೀವ ದಹನವಾಯ್ತು. ಕೇವಲ ಕುರಿಯ ನೆಪದಲ್ಲಿ ಸ್ಥಳಿಯ ರೆಡ್ಡಿ ಜನಾಂಗ ಮತ್ತು ದಲಿತರ ನಡುವಿನ ಮುಸುಕಿನ ಗುದ್ದಾಟ ಪೈಶಾಚಿಕ ಕೃತ್ಯದಲ್ಲಿ ಅಂತ್ಯಗೊಂಡಿತ್ತು.
ಸಮಸ್ತ ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರವಿದು. ಆದರೆ ಆದದ್ದೇನು. ಹದಿನಾಲ್ಕು ವರ್ಷಗಳ ನ್ಯಾಯಾಲಯದ ಹೋರಾಟದ ಬಳಿಕ ಆರೋಪಿ ಸ್ಥಾನದಲ್ಲಿದ್ದ ೩೨ ಮಂದಿಯನ್ನು ಆರೋಪ ಮುಕ್ತಗೊಳಿಸಲಾಯ್ತು. ಅಂದರೆ ಆ ಘಟನೆ ನಡೆದೆ ಇಲ್ಲವೇ? ಅಂದು ಸಜೀವವಾಗಿ ಸತ್ತು ಹೋದ ಆ ಏಳು ಮಂದಿ ಜೀವ ಅಷ್ಟು ನಿಕೃಷ್ಟವಾಗಿ ಹೋಯಿತೆ?ಯಾರ ಮುಂದೆ ಈ ಪ್ರಶ್ನೆಗಳನ್ನು ಇಡಬೇಕು?
ನ್ಯಾಯಾಸ್ಥಾನದಲ್ಲಿ ವಿರಾಜಮಾನರಾಗಿರುವವರು ಒಮ್ಮೊಮ್ಮೆ ಯೋಚಿಸುವ ಧಾಟಿಯನ್ನು ನೆನೆದರೆ ಬೆಚ್ಚಿ ಬೀಳುವಂತಾಗುತ್ತದೆ. ಬನ್ವರಿಲಾಲ್ ಕೇಸಿನಲ್ಲಿ ಅಪಾದೀತರನ್ನು ಖುಲಾಸೆ ಮಾಡುವಾಗ ನ್ಯಾಯಾಧೀಶರು ಕೊಟ್ಟ ಕಾರಣ, ಬನ್ವಾರಿಲಾಲ್ ಅಸ್ಪರ್ಶ್ಯಳು. ಹಾಗಾಗಿ ಆಕೆಯ ಮೇಲೆ ಮೇಲ್ಜಾತಿಯವರು ಅತ್ಯಾಚಾರವೆಸಗಲು ಸಾಧ್ಯವಿಲ್ಲವೆಂದು.
ನೀವು ಏನೇ ಅನ್ನಿ ಬಹುತೇಕ ಪುರುಷರ ದೃಷ್ಟಿಯಲ್ಲಿ ಹೆಣ್ಣು ಒಂದು ಉಪಭೋಗದ ವಸ್ತು. ಅವಳು ಗಂಡನ್ನು ರಂಜಿಸುವುದಕ್ಕಷ್ಟೇ ಸೀಮಿತಳು.
ಮಹಿಳಾಸಮೂಹವನ್ನೇಕೆ ಈ ಒಂದು ಘಟನೆಗೆ ತಳುಕು ಹಾಕುತ್ತೀರಿ, ನಾವವರಿಗೆ ನಮ್ಮ ಸಂಸ್ಕ್ರುತಿಯಲ್ಲಿ ಬಹು ಉನ್ನತವಾದ ಸ್ಥಾನವನ್ನು ನೀಡಿದ್ದೇವೆ ಎಂದು ನೀವು ಹೇಳಬಹುದು.ಒಂದರ್ಥದಲ್ಲಿ ಅದು ನಿಜವೇ..ಯಾಕೆಂದರೆ ಆಕೆಯನ್ನು ಕೌಟುಂಬಿಕ ವ್ಯವಸ್ಥೆಯೊಳಗೆ ಬಂದಿಸಿಡುವುದಕ್ಕಾಗಿ ಭ್ರಮಾತ್ಮಕವಾದ ಒಂದು ಪರಿಸರವನ್ನು ನಿರ್ಮಿಸಲೇ ಬೇಕಾದ ಅನಿವಾರ್ಯತೆ ಪುರುಷ ಸಮೂಹಕ್ಕಿತ್ತು. ಹಾಗಾಗಿ ಆಕೆಯನ್ನು ದೇವಿ ಅಂದರು..ಗೃಹ ಸ್ವಾಮಿನಿ ಅಂದರು. ತಾಯ್ತನವನ್ನು ವಿಜೃಂಭಿಸಿ ಅವಳನ್ನು ಭಾವನಾತ್ಮಕವಾಗಿ ಬಂದಿಸಿಟ್ಟರು.ಆಕೆಯ ತನ್ನ ಕರ್ತುತ್ವ ಶಕ್ತಿಯನ್ನೇ ವಿಸ್ಮ್ರುತಿಗೆ ತಳ್ಳಿ ಅವಳನ್ನು ಸಂಸ್ಕೃತಿ ರಕ್ಷಣೆಯ ಕಾವಲುಗಾರರನ್ನಾಗಿ ಮಾಡಿಬಿಟ್ಟರು. ವಾಸ್ತವದಲ್ಲಿ ಅವಳು ಗಂಡಿನ ತೊತ್ತು.

ತೀರ ಇತ್ತೀಚೆಗೆ ನಡೆದ ರಾಘವೇಶ್ವರ ಭಾರತಿ ಪ್ರಕರಣವನ್ನೇ ನೋಡಿ.
ಪ್ರೇಮಲತಾ ದಂಪತಿಗಳ ಮೇಲಿರುವುದು ರಾಮಕಥಾ ಕಾರ್ಯಕ್ರಮಕ್ಕೆ ತೆರಳಬಾರದು ಎಂದು ಕಲಾವಿದರಿಗೆ ಬೆದರಿಕೆ ಹಾಕಿದ ಆರೋಪ. ಐ.ಪಿ.ಸಿ ೫೦೬ ಸೆಕ್ಷನ್ ಅಡಿಯಲ್ಲಿ ದಾಖಲಾದ ಕೇಸ್. ಇದಕ್ಕೆ ಬಂದನದ ಅವಶ್ಯಕತೆಯೇ ಇಲ್ಲ. ಹಾಗೊಂದು ವೇಳೆ ಬಂದಿಸಿದರೂ  ಸುಲಭದಲ್ಲಿ ಬೇಲ್ ಸಿಗಬಹುದಾದ ಈ ಪ್ರಕರಣ್ದಲ್ಲಿ ಪ್ರೇಮಲತಾ ದಂಪತಿಗಳು ಸರಿ ಸುಮಾರು ಒಂದು ತಿಂಗಳವರೆಗೂ ಜೈಲಿನಲ್ಲಿದ್ದರು. ಆದರೆ ಅತ್ಯಾಚಾರದ ಆರೋಪ ಹೊತ್ತ ಸ್ವಾಮೀಜಿಯ ಬಂಧನ ಇದುವರೆಗೂ ಆಗಿಲ್ಲ. ಅತ್ಯಾಚಾರದ ಆರೋಪಿಯನ್ನು ತಕ್ಷಣ ಬಂದಿಸಬೇಕು ಮತ್ತು ಅದಕ್ಕೆ ಜಾಮೀನಿಲ್ಲ. ಅದರೆ ಪ್ರೇಮಲತಾ ಮಗಳು ತನ್ನ ತಾಯಿಯ ಮೇಲೆ ಸ್ವಾಮೀಜಿ ಲೈಂಗಿಕ ಅತ್ಯಾಚಾರವೆಸಗಿದ್ದಾರೆಂದು ದೂರು ನೀಡಿ ಎರಡು ತಿಂಗಳು ಕಳೆದರೂ ಸ್ವಾಮೀಜಿಯ ಬಂದನವಾಗಿಲ್ಲ. ಈ ನಡುವೆ ಈ ಪ್ರಕರಣದ ನಿಮಿತ್ತವಾಗಿ ಒಂದು ಒಂದು ಸಾವು ಕೂಡಾ ಸಂಭವಿಸಿದೆ. ಅದರಲ್ಲಿಯೂ ಆರೋಪಿಯಾಗಿರುವ ಈ ಸ್ವಾಮೀಜಿಯ ಬಂಧನವಾಗದೆ ಈಗಾಗಲೇ ಎರಡು ತಿಂಗಳು ಉರುಳಿಹೋಗಿದೆ.  ವಿಚಾರಣೆಗೆ ಒಳಪಡುವ ಪ್ರತಿ ಹಂತದಲ್ಲಿಯೂ ಮೇಲಿಂದ ಮೇಲೆ ನ್ಯಾಯಲಯದಿಂದ ತಡೆಯಾಜ್ನೆ ತರುವುದನ್ನು ಗಮನಿಸುವಾಗ ನ್ಯಾಯದ ತಕ್ಕಡಿ ಯಾರ ಕಡೆಗೆ ವಾಲುತ್ತಿದೆಯೆಂಬುದು ಅರ್ಥವಾಗದೇ?
ಇನ್ನೊಂದು ಪ್ರಮುಖ ಅಂಶವನ್ನಿಲ್ಲಿ ಗಮನಿಸಬೇಕು. ಮಹಿಳೆಯೊಬ್ಬಳು ತನಗಾದ ಅನ್ಯಾಯದ ವಿರುದ್ಧ ದನಿಯೆತ್ತೆದಾಗ ಆಕೆಯನ್ನು ಹಣಿಯಲು ಸಿದ್ಧರಾಗಿ ನಿಂತಿರುವವರು ಮೊದಲು ಮಾಡುವ ಕೆಲಸವೆಂದರೆ ಆಕೆಯ ಚಾರಿತ್ರ್ಯ ಹನನಕ್ಕೆ ಮುಂದಾಗುವುದು..ಈಗ ಪ್ರೇಮಲತಾ ಕೇಸಿನಲ್ಲಿ ಆಗುತ್ತಿರುವುದು ಅದೇ..ಆಕೆಯನ್ನು ಮಾತ್ರವಲ್ಲ. ಆಕೆಯ ಹೆಣ್ಣುಮಕ್ಕಳ ವಿಚಾರದಲ್ಲಿಯು ಅದೇ ಕಮ್ಯೂನಿಟಿಗೆ ಸೇರಿದ ರೋಗಗ್ರಸ್ತ ಮನಸ್ಸುಗಳು ಅದನ್ನೇ ಮಾಡುತ್ತಿವೆ. ಆಕಾಶಕ್ಕೆ ಉಗಿದರೆ ಬೀಳುವುದು ಯಾರಮೇಲೆ? ಈ ಬುದ್ಧಿಗೇಡಿಗಳಿಗೆ ಅಷ್ಟೂ ತಿಳಿಯಬಾರದೆ? ಆ ಕಮೂನಿಟಿಯಲ್ಲಿರುವ ವಿಚಾರವೆತ್ತವರು ಏನು ಮಾಡುತ್ತಿದ್ದಾರೆ?
ಹೌದು.. ಈ ದೇಶದಲ್ಲಿ ಹೆಣ್ಣುಮಕ್ಕಳು ಮತ್ತು ದಲಿತರು ಒಂದೇ ಕೆಟಗರಿಯಲ್ಲಿ ನಿಲ್ಲುತ್ತಾರೆ.ಜಾತೀಯ ಕಾರಣಕ್ಕಾಗಿ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ದುರ್ಭಲರು. ಲಿಂಗತಾರಮ್ಯದ ಕಾರಣಕ್ಕಾಗಿ ಮಹಿಳೆಯರು ದುರ್ಭಲರು. ಅವರು ಸವಾರಿ ಮಾಡಿಕೊಳ್ಳಲ್ಲಷ್ಟೇ ಅರ್ಹರು.ಅವರಿಗೆ ನ್ಯಾಯ ಬೇಡುವ ಹಕ್ಕಿಲ್ಲ. ಅವರಿಗೆ ನ್ಯಾಯ ನೀಡಲು ಸಂಬಂಧಪಟ್ಟವರಿಗೆ ಮನಸ್ಸಿಲ್ಲ. ಒಬ್ಬ ಮಹಿಳೆಯಾಗಿ ನನಗನ್ನಿಸುತ್ತಿರುವುದು ಇದು..ಹಾಗಾಗಿಯೇ ನನ್ನ ದಲಿತ ಬಂಧುಗಳಲ್ಲಿ ನಾನು ಹೇಳುತಿರುವುದು; ಅಪ್ಪಗಳಿರಾ..ನಾವೂ ನೀವೆಲ್ಲಾ ಒಂದೇ..ನಾವು ಈ ಸಮಾಜದಲ್ಲಿ ಇದ್ದೂ ಇಲ್ಲದಂತಿರುವವರು.ಅಸ್ಪರ್ಶ್ಯರು.
ಕೆಳ ಜಾತಿಯಲ್ಲಿ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯ ಸ್ಮೃತಿ ಕೋಶದಲ್ಲಿಯೂ ದಾಖಲಾದ ಹಲವಾರು ಕಹಿ ಸತ್ಯಗಳಿರುತ್ತವೆ. ಹಾಗಾಗಿಯ ನಮ್ಮ ಬಾಗಲಕೋಟದ ಬಿ.ಜೆ.ಪಿ ಸಂಸದ ರಮೇಶ್ ಜಿಗಜಿಣಗಿಯವರು ಬಸವನ ಬಾಗೇವಾಡಿಯ ಬಸವೇಶ್ವರ ದೇವಾಲಯದ ಒಳಗೆ ಹೋಗಲು ಮನಸು ಮಾಡುವುದಿಲ್ಲ. ಹೊರಗಿನಿಂದಲೇ ಕೈಮುಗಿದು ಬರುತ್ತಾರೆ..ಅಧಿಕಾರ ಸ್ಥಾನ ಮತ್ತು ಅರ್ಥಿಕ ಸ್ವಾವಲಂಬನೆಯೆಂಬುದು ಎಲ್ಲಾ ಸಂದರ್ಭಗಳಲ್ಲಿ ಜಾತಿಯಾಧಾರಿತ ಸಾಮಾಜಿಕ ವ್ಯವಸ್ಥೆಯಲ್ಲಿ ಮನ್ನಣೆಯನ್ನು ತಂದುಕೊಡುವುದಿಲ್ಲ

ಕಾನೂನು ಕತ್ತೆಯಿದ್ದಂತೆ ಎಂಬ ಮಾತೊಂದಿದೆ. ಅದಕ್ಕೆ ಹೇರನ್ನು ಹೊರುವುದಷ್ಟೇ ಗೊತ್ತು. ಅದರಲ್ಲಿರುವ ಹೂರಣ ಏನೆಂಬುದುದು ಅದಕ್ಕೆ ಬೇಕಾಗಿಲ್ಲ.ಅದು ಸಾಕ್ಸ್ಯ ಮತ್ತು ಸಾಂದರ್ಭಿಕ ಸಾಕ್ಷ್ಯಗಳನ್ನ್ನಷ್ಟೇ ನೋಡುತ್ತದೆ. ಆದರೆ ಸಾಕ್ಷ್ಯಗಳಿಗೂ ಮೀರಿದ್ದು ಇನ್ನೆನೋ ಇರುತ್ತೆ ಅಲ್ವಾ? ನ್ಯಾಯ ಸ್ಥಾನದಲ್ಲಿ ಕೂತುಕೊಳ್ಳುವವರಿಗೆ ಮಾತೃ ಹೃದಯ ಇರಬೇಕು..ಅದು ದುರ್ಭಲರತ್ತ ವಿಶೇಶಗಮನಕೊಡಬೇಕು.ಅದಕ್ಕೆ ಲಿಂಗ ತಾರತಮ್ಯದ ಬಗ್ಗೆ ಒಳನೋಟವಿರಬೇಕು . ಬಹುಶಃ ಬ್ರಿಟೀಶ್ ನೋಟದಲ್ಲಿರುವ ನಮ್ಮ ಇಂಡಿಯನ್ ಪೀನಲ್ ಕೋಡ್ ಅನ್ನು ಮತ್ತೊಮ್ಮೆ ಪರಾಮಾರ್ಶಿಸಬೇಕಾದ ಅವಶ್ಯಕತೆಯಿದೆಯೇನೋ. ಅಲ್ಲಿ ನ್ಯಾಯಾಲಯದ ಜೊತೆಗೆ ಜ್ಯೂರಿಗಳು ಇರುತ್ತಾರೆ. ನ್ಯಾಯದಾನದ ಪ್ರಕ್ರಿಯೆಯಲ್ಲಿ ಸಮಾಜದ ವಿವಿಧ ವರ್ಗವನ್ನು ಪ್ರತಿನಿಧಿಸುವ ಜ್ಯೂರಿಗಳೂ ಇದ್ದಾಗ ”ಕಾನೂನಿಗೆ ಕಣ್ಣಿಲ್ಲ’ ಎಂಬ ನಾಣ್ನುಡಿ ವ್ಯಂಗಾರ್ಥದಲ್ಲಿ ಬಳಸುವುದು ತಪ್ಪಬಹುದೆನೋ!



[ನವೆಂಬರ್ ೬ರಂದು ಶಿವಮೊಗ್ಗದಲ್ಲಿ ಬಿಡುಗಡೆಯಾದ ’ಸ್ವತಂತ್ರ ಪತ್ರಿಕೆಗಾಗಿ ಬರೆದ ಲೇಖನ]





Friday, October 24, 2014

ಎರಡಲುಗಿನ ಕತ್ತಿ!



ಬೋಳು ಮರದಡಿಯಲ್ಲಿ ನಿಂತಿದ್ದೆವು.
ಮಾತಿನ ಸೇತುವೆ ಶಿಥಿಲಗೊಳ್ಳುತ್ತಿತ್ತು.
ಅವನಂದ; ನಿನ್ನಲ್ಲೂ ಇದೆ ಅಲ್ಪಸ್ವಲ್ಪ ಒಳ್ಳೆತನ.
ಕಣ್ಣು ಮಂಜಾಯಿತು, ತಲೆ ತಗ್ಗಿಸಿದೆ.
ಮರು ಮಾತಾಡಲಿಲ್ಲ.
ಓಡಿ ಹೋಗಿ ಏರು ಹಾದಿಯಲ್ಲಿ ನಡೆಯುತ್ತಿರುವ ಮಕ್ಕಳನ್ನು ಕೂಗಿ ಕರೆದೆ.
ಹಿಂತಿರುಗಿದವು, ಎರಡು ಹೆಜ್ಜೆ ಹಿಂದೆ ಬಂದು ”ಏನಮ್ಮಾ?’ ಅಂದವು
ಏನಿಲ್ಲಾ.. ಅಂದು ಸ್ವಲ್ಪ ಹೊತ್ತು ಅಲ್ಲೇ ನಿಂತೆ.
ಮತ್ತೆ ಮತ್ತೆ ಹಿಂತಿರುಗಿ ನೋಡುತ್ತಾ ನಡಿಗೆ ಮುಂದುವರಿಸಿದವು.
ಅಂಗೈ ನೋಡಿಕೊಂಡೆ; ಒದ್ದೆಯಾಗಿತ್ತು..

ಸಿರಿವಂತರ ನಾಲಗೆಯೆಂಬುದು ಎರಡಲುಗಿನ ಕತ್ತಿ.
ಕತ್ತರಿಸಲು ನಿಂತವರಿಗೆ ನಾನದರೇನು..ನೀನಾದರೇನು?
ಹಿಂದೊಬ್ಬ ರಸ್ತೆಯಲ್ಲೇ ಕಾಲಪ್ಪಳ್ಳಿಸಿದ್ದ.
ಮತ್ತೆ ಮನದಂಗಳಕ್ಕೆ ಬಂದು ಹೇಳಿದ್ದ ’ನೀನೆಷ್ಟು ಒಳ್ಳೆಯವಳು!’
ಹಾಗನ್ನುತ್ತಲೇ ಕಾಲನ ತೆಕ್ಕೆಯಲಿ ಕರಗಿಹೋದ.
ಈಗ ಇವನು ಹೇಳುತ್ತಿದ್ದಾನೆ., ನಿನ್ನಲ್ಲೂ ಇದೆ ಅಲ್ಪಸ್ವಲ್ಪ ಒಳ್ಳೆತನ.
ಇಬ್ಬರೂ ಅಕ್ಷರ ಸ್ನೇಹಿತರು; ಕಂಡಿಲ್ಲ ಮಾತಾಡಿಲ್ಲ.
ಯಾರ ಮಾತನ್ನು ನಂಬುವುದು?

ಎದೆ ಮೇಲೆ ಕೈಯಿಟ್ಟು ಕ್ಷಣಕಾಲ ಕಣ್ಮುಚ್ಚಿದೆ. 
ಒಳಗಿನ ಆಕಾಶಕ್ಕೆ ಯಾವ ಅಳತೆಗೋಲಿನ ಹಂಗು?  
ಆದರೂ ಒಂದು ಸಣ್ಣ ಚಲನೆ ನನ್ನನ್ನೀಗ ಆಳುತ್ತಿದೆ!


Monday, October 13, 2014

’ಒಪ್ಪಿಸುವಿಕೆಯ ಸೆಕ್ಸ್’ ಎಂಬುದೊಂದು ಇದೆಯಾ?




ರಾಘವೇಶ್ವರ ಭಾರತಿ-ಪ್ರೇಮಲತಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹಳಷ್ಟು ಜನರು ಪ್ರಶ್ನಿಸುವುದು, ಪ್ರೇಮಲತಾ ಎಂಬ ಈ ಮಹಿಳೆ ತನ್ನ ಮೇಲೆ ವರ್ಷಗಳಿಂದ ಲೈಂಗಿಕ ಅತ್ಯಾಚಾರ ನಡೆದರೂ ಅದನ್ನು ಯಾರಿಗೂ ಹೇಳದೆ ಈಗ ಯಾಕೆ ಬಹಿರಂಗಗೊಳಿಸಿದ್ದಾರೆ? ಅದರ ಹಿಂದೆ ಇನ್ನೆನೋ ಹುನ್ನಾರ ಅಡಗಿರುವಂತಿದೆ!

’ಕಾನೂನು ಕತ್ತೆಯಿದ್ದಂತೆ’ ಎಂಬ ಮಾತಿದೆ. ಅದು ಸಾಕ್ಷ್ಯಾಧಾರಗಳನ್ನು ಮಾತ್ರ ಕಲೆ ಹಾಕುತ್ತದೆ ಮತ್ತು ಪರಿಶೀಲಿಸುತ್ತದೆ. ಆದರೆ ಕಾನೂನಿನ ತೆಕ್ಕೆಗೂ ನಿಲುಕದ ಹಲವಾರು ಅಂಶಗಳಿರುತ್ತವೆ.ಅದರಲ್ಲಿಯೂ ಒಂದು ಹೆಣ್ಣಿನ ಅಂತರಂಗವನ್ನು ಹೊಕ್ಕು ನೋಡುವ ಸಾಮರ್ಥ್ಯ ಈ ಜಗತ್ತಿಗೆ ಇನ್ನೂ ಸಾಧ್ಯವಾಗಿಲ್ಲವೇನೋ!. ಹೀಗೆ ಹೇಳುವಾಗ ಪುರುಷನ ರೀತಿಯಲ್ಲೇ ಯೋಚಿಸುವುದನ್ನು ರೂಢಿಸಿಕೊಂಡ ಸ್ತ್ರೀಯರು ಕೂಡಾ ನನ್ನ ಮುಂದಿದ್ದಾರೆ. ಅವೠ ಹಾಗೇ ಯೋಚಿಸುವುದು  ತಲೆತಲಾಂತರದಿಂದ ವಿನ್ಯಾಸಗೊಂಡತಿದೆ.

ಪ್ರೇಮಲತಾ ಯಕಃಶ್ಚಿತ್ ಒಬ್ಬಳು ಹೆಣ್ಣು. ಆಕೆ ತನ್ನ ಸೌಂದರ್ಯದಿಂದಲೇ ಒಬ್ಬ ಸ್ವಾಮೀಜಿಯನ್ನು ತನ್ನ ಮೋಹ ಪಾಶದಲ್ಲಿ ಕೆಡವಿಕೊಂಡಳು, ಅನಂತರ ಬ್ಲಾಕ್ ಮೈಲ್ ಮಾಡಿದಳು ಅಂದುಕೊಳೋಣ. ಈ ಸ್ವಾಮಿಜಿಯೇನು ಕಳ್ಳೆಪುರಿ ತಿನ್ನುವ ಗಮಾರನೇ?

ಶ್ರೀ ರಾಮಚಂದ್ರಾಪುರ ಮಠವೇ ಹೇಳಿಕೊಳ್ಳುವ ಹಾಗೆ ಅದು ಸಾವಿರಾರು ವರ್ಷಗಳ ಇತಿಹಾಸವಿರುವ ಮಠ. ನಿನ್ನೆ ಮೊನ್ನೆ ಹುಟ್ಟಿದ ಸಾಮನ್ಯ ಮಠವಲ್ಲ. ಆ ಮಠದ ಪೀಠಾಧಿಪತಿ ತನ್ನನ್ನು ತಾನು ’ಗೋಕರ್ಣ ಮಂಡಲಾದೀಶ್ವರ’ ಎಂದು ಕರೆದುಕೊಳ್ಳುತ್ತಾರೆ. ಅದು ಕೇವಲ ಗುರುಪೀಠವಲ್ಲ. ರಾಜಪೀಠವೂ ಹೌದು.. ಅದಕ್ಕೊಂದು ದಂತದ ಸಿಂಹಾಸನವಿದೆ..ಅಡ್ಡಪಲ್ಲಕ್ಕಿ ಉತ್ಸವದ ಪರಂಪರೆಯಿದೆ. ಶಂಕರಾಚಾರ್ಯರ ಪಾದುಕೆಗಳು ತಮ್ಮಲ್ಲಿದೆಯೆಂದು ಅದು ಹೇಳಿಕೊಳ್ಳುತ್ತದೆ. ಇಂತಹ ಪರಂಪರೆಯ ಅಧಿಕಾರಪೀಠದಲ್ಲಿರುವ ಸರ್ವಸಂಗ ಪರಿತ್ಯಾಗಿಯಾದ ಸ್ವಾಮೀಜಿಗೆ ಸಾಮಾನ್ಯ ಗಾಯಕಿಯೊಬ್ಬಳು ಲೈಂಗಿಕ ಅತ್ಯಾಚಾರದ ಕೇಸನ್ನು ಕೊಡಲು ಸಾಧ್ಯವೇ? ಹಾಗೆಯೇ ತನ್ನ ಸ್ಥಾನದ ಘನತೆಯನ್ನು ಮರೆತು ಒಬ್ಬ ಪೀಠಾಧಿಪತಿ ಲಂಪಟನಂತೆ ವರ್ತಿಸಲು ಸಾಧ್ಯವೇ? ಇದು ಯೋಚಿಸಬೇಕಾದ ವಿಷಯ.

ಪ್ರೇಮಲತಾ ಕೊಟ್ಟಿರುವ ದೂರಿನಲ್ಲಿ ತಾನು ವಶೀಕರಣಕ್ಕೆ ಒಳಗಾಗಿ ಸ್ವಾಮೀಜಿಯ ಜೊತೆ ದೈಹಿಕ ಸಂಪರ್ಕಕ್ಕೆ ಒಳಗಾದೆ ಎಂದು ಹೇಳುತ್ತಾರೆ. ಸ್ವಾಮೀಜಿಯೊಬ್ಬರು ಹೆಣ್ಣಿನ ಸಂಗ ಮಾಡಿರಬಹುದೇ? ಅದು ತನಿಖೆಯಿಂದ ಗೊತ್ತಾಗಲಿದೆ. ಅದರ ಬಗ್ಗೆ ಎಲ್ಲೂ ಚರ್ಚೆಯಾಗುತ್ತಿಲ್ಲ.. ಅದರೆ ಪ್ರೇಮಲತಾ ನಡತೆಯ ಬಗ್ಗೆ ಎಗ್ಗಿಲ್ಲದೆ ಚರ್ಚೆ ನಡೆಯುತ್ತಿದೆ.

ಗಂಡು-ಹೆಣ್ಣಿನ ನಡುವಿನ ಸಂಬಂಧ ಅತ್ಯಂತ ಸಂಕೀರ್ಣವಾದುದು. ಅದನ್ನು ಹೀಗೇ ಎಂದು ವ್ಯಾಖ್ಯಾನಿಸಲು ಬರದು...ಆದರೆ ಮದುವೆ ಎನ್ನುವುದು ವ್ಯಾಖ್ಯಾನಕ್ಕೆ ಸಿಗುತದೆ. ಆ ಮದುವೆಯ ಬಂಧನಕ್ಕೆ ಒಳಪಟ್ಟವಳು ಪ್ರೇಮಲತಾ..ಸುಸಂಸ್ಕ್ರುತ ಮನೆತನದ ಆಕೆ ಆ ಚೌಕಟ್ಟನ್ನು ಯಾಕೆ ಮೀರಿದಳು? 

ಪ್ರೇಮಲತಾ ಒಬ್ಬ ಗಾಯಕಿ, ನ್ರುತ್ಯಗಾತಿ..ಅವರ ಕುಟುಂಬ ಮಠದ ಪರಮ ಭಕ್ತರು. ಹಾಗಿರುವಾಗ ಆಕೆ ಆ ಮಠ ಆಯೋಜಿಸುತ್ತಿರುವ ರಾಮ ಕಥಾದಲ್ಲಿ ಮುಖ್ಯ ಗಾಯಕಿಯಾಗಿ ಹಾಡುವುದರಲ್ಲಿ ಯಾವ ತಪ್ಪೂ ಇಲ್ಲ. ಅದು ಆಕೆಯ ಪ್ರತಿಭೆಗೆ ಸಂದ ಗೌರವ. ಆದರೆ ಆಕೆಯಿಂದ ಏಕಾಂತ ಸೇವೆಯನ್ನು ಸ್ವಾಮಿಜಿ ಯಾಕೆ ಬಯಸಿದರು? 

ಯಾವುದೋ ಒಂದು ಸನ್ನಿವೇಶದಲ್ಲಿ ಒಂದು ಗಂಡು-ಹೆಣ್ಣಿನ ನಡುವೆ ಆಕರ್ಷಣೆ ಹುಟ್ಟುತ್ತೆ..ಮುಂದೆ ಅದೊಂದು ಬಾಂಧವ್ಯವಾಗಿ ಬೆಳೆಯುತ್ತೆ..ದೈಹಿಕ ಮಿಲನಕ್ಕೂ ಎಡೆಮಾಡಿಕೊಡಬಹುದು..ಮನುಷ್ಯ ತಾನಾಗಿಯೇ ಕಟ್ಟಿಕೊಂಡ ಗೋಡೆಗಳನ್ನೊಡೆದು ಗಂಡು-ಹೆಣ್ಣಿನ ಸಹಜ ಸಂಬಂಧವೊಂದು ಏರ್ಪಡಬಹುದು.

ಅಂತಹ ಸಂಬಂಧವೊಂದು ಸ್ವಾಮೀಜಿ ಮತ್ತು ಪ್ರೇಮಲತಾ ಮಧ್ಯೆ ಏರ್ಪಟ್ಟಿದ್ದರೆ ಅದು ಸಹಜ ಎಂದು ಒಪ್ಪಿಕೊಳ್ಳುವ ಒಂದು ವರ್ಗ ಈ ಸಮಾಜದಲ್ಲಿದ್ದಾರೆ .”ಇದ್ದಾರೆ’ ಎಂದು ಯಾಕೆ ಹೇಳುತ್ತಿದ್ದೇನೆ ಎಂದರೆ ಅಂತಹ ಸಂಬಂಧವನ್ನು ’ಇಟ್ಟುಕೊಂಡ’ ಹಲವಾರು ಸನ್ಯಾಸಿಗಳು, ದೇವಮಾನವರು ಕಾಲನ ಗರ್ಭ ಸೇರಿ ಹೋಗಿದ್ದಾರೆ. ವರ್ತಮಾನದಲ್ಲಿ ಸಭ್ಯ ಸಮಾಜವೊಂದು ಅದನ್ನು ಕಂಡೂ ಕಾಣದಂತಿರುತ್ತದೆ.

ಹಾಗೊಂದು ಸಂಬಂಧ ಬಹಿರಂಗಗೊಂಡಾಗ ಸಮಾಜದ ಚೌಕಟ್ಟಿನೊಳಗಡೆ ಬದುಕುತ್ತಿರುವವರು ಅವರನ್ನು ಅಸ್ಪರ್ಶ್ಯರಂತೆ ಕಾಣಬಹುದು. ಇದೂ ಕೂಡಾ ಸಹಜವಾದುದೇ..ಆದರೆ ಇಲ್ಲಿರುವ ಪ್ರಶ್ನೆ ಏನೆಂದರೆ ಇಲ್ಲಿ ಹೆಣ್ಣು ಮಾತ್ರ ಯಾಕೆ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕು?  ಅತ್ಯಾಚಾರ ಪ್ರಕರಣಗಳಲ್ಲಿ, ಇದು ಅತ್ಯಾಚಾರವೇ ಅಥವಾ ಪರಸ್ಪರ ಸಮ್ಮತಿಯ ಲೈಂಗಿಕ ಕ್ರಿಯೆಯೇ ಎಂಬುದನ್ನು ನಿಖರವಾಗಿ ಹೇಳುವುದು ತುಂಬಾ ಕಷ್ಟಸಾಧ್ಯವಾದ ವಿಷಯ. ಆದರೆ ಈ ಪ್ರಕರಣದ ಸಂದರ್ಭವನ್ನು ಗಮನಿಸಿದರೆ ಅತ್ಯಾಚಾರ, ಸಮ್ಮತಿಯ ಸೆಕ್ಸ್ ಎಂಬುದರಾಚೆಗೂ  ’ಒಪ್ಪಿಸುವಿಕೆಯ ಸೆಕ್ಸ್’ ಎಂಬ ಇನ್ನೊಂದು ಆಯಾಮದ ಕಡೆಯೂ ಗಮನ ಹರಿಸಬೇಕಾಗಿದೆ..

ಆಯ್ತು..ಯಾವುದೋ ಮೋಹಪಾಶಕ್ಕೆ ಒಳಗಾಗಿ ಅವರಿಬ್ಬರೂ ದೈಹಿಕವಾಗಿ ಒಂದಾದರು ಅಂತಿಟ್ಟುಕೊಳ್ಳೋಣ..ಹಾಗೊಂದು ಸಂಬಂಧ ಅವರಿಬ್ಬರ ಮಧ್ಯೆ ಏರ್ಪಟ್ಟಿದ್ದರೆ, ಅದು ವರ್ಷಗಳ ತನಕ ಮುಂದುವರಿದಿದ್ದರೆ, ಅಲ್ಲೊಂದು ಅನುಬಂಧ ಬೆಳೆದಿರುತ್ತದೆ.ಆ ಸಲಿಗೆಯಲ್ಲಿ ಅಲ್ಲಿ ಹಣದ ಪ್ರಸ್ತಾಪವೂ ಬಂದಿದ್ದರೆ ಅದು ತಪ್ಪು ಅಥವಾ ಸರಿ ಎನ್ನಲು ನಾವ್ಯಾರು? ಆದರೆ ಅದು ಪೋಲಿಸ್ ಸ್ಟೇಷನ್ ನಲ್ಲಿ ದೂರು ಕೊಡುವಷ್ಟರ ಮಟ್ಟಿಗೆ ಮುಂದುವರಿದಿದ್ದರೆ ಅದಕ್ಕೆ ಬಲವಾದ ಕಾರಣ ಇರಲೇ ಬೇಕಲ್ಲವೇ?

ಆ ಸ್ವಾಮಿಜೀಯವರು ನಿಷ್ಕಳಂಕರೇ ಆಗಿದ್ದರೆ ವಿಚಾರಣೆಯನ್ನು ಎದುರಿಸಬಹುದಲ್ಲಾ..ಅದನ್ಯಾಕೆ ಮುಂದೂಡುತ್ತಿದ್ದಾರೆ? ಒತ್ತಡ ಹೇರಲು ಪ್ರಯತ್ನಿಸುತ್ತಿದ್ದಾರೆ.?

ತಾನು ದೇವಮಾನವ. ರಾಮನ ಅಪರಾವತಾರಿ, ತನಗೆ ನಿನ್ನನ್ನು ನೀನು ಒಪ್ಪಿಸಿಕೊಂಡರೆ ರಾಮನಲ್ಲೇ ಐಕ್ಯಗೊಂಡಂತೆ ಎಂದು ಮರುಳು ಮಾತುಗಳಿಂದ ಸ್ವಾಮಿಜಿಯವರು ತನ್ನನ್ನು ವಶೀಕರಣಕ್ಕೊಳಪಡಿಸಿ ಭೋಗಿಸಿದರು, ಕೆಲವೊಮ್ಮೆ ಪೈಶಾಚಿಕವಾಗಿಯೂ ವರ್ತಿಸಿದರು ಎಂದು ಪ್ರೇಮಲತಾ ದೂರಿದ್ದಾಳೆ. ಇಲ್ಲಿ ಒಂದು ಮಾತನ್ನು ನೆನಪಿಸಿಕೊಳ್ಳಬೇಕು. ವಶೀಕರಣವೆಂಬುದಕ್ಕೆ ಕಾಲಮಿತಿಯಿಂಟು..ಜೀವನಪೂರ್ತಿ ಯಾರೂ ಯಾರನ್ನೂ ವಶೀಕರಣಕ್ಕೆ ಒಳಪಡಿಸಲಾಗುವುದಿಲ್ಲ. ಮೋಹದ ಪರದೆ ಸರಿದಾಗ ವಾಸ್ತವದ ದರ್ಶನ ಆಗಿಯೇ ಆಗುತ್ತದೆ. ಈಗ ಇಬ್ಬರಿಗೂ ವಾಸ್ತವದ ಅರಿವಾಗಿದೆ.ಹಾಗಾಗಿ ಪರಸ್ಪರ ದೂರು ನೀಡಿದ್ದಾರೆ. ಆ ದೂರನ್ನು ಓದಿದರೆ ಪುರುಷನ ಮೂಲಭೂತ ಗುಣವಾದ ಅಕ್ರಮಣಶೀಲತೆಯ ಗಾಢ ಅನುಭವಾಗುತ್ತದೆ.ಜೊತೆಗೆ ಹೆಣ್ಣಿನ ಮನಸ್ಸನ್ನು, ಅಂಗರಚನೆಯನ್ನು ಹಾಗೆ ರೂಪಿಸಿದ ನಿಸರ್ಗದ ಮೇಲೆಯೂ ಕ್ಷಣಕಾಲ ಮುನಿಸುಂಟಾಗುತ್ತದೆ!.

 ಕಲಾವಿದರು ಸೂಕ್ಷಮತಿಗಳು, ಭಾವುಕರು ಎದುರಿಗಿರುವ ವ್ಯಕ್ತಿಯ ಭಾವನೆಗಳಿಗೆ ಪೂರಕವಾಗಿ ಸ್ಪಂಧಿಸುವವರು.ಅವರನ್ನು ವಶಪಡಿಸಿಕೊಳ್ಳುವುದು ಸುಲಭ. ಲಂಪಟರ ಕೈಯ್ಯಲ್ಲಿ ಭಕ್ತಿ,ಭಾವದ ಬೀಸಣಿಗೆಯಿದ್ದಲ್ಲಿ  ದುರ್ಭಲರನ್ನು ತನ್ನತ್ತ ಸೆಳೆದುಕೊಳ್ಳುವುದು ಕಷ್ಟವೇನಲ್ಲ.ತನ್ನೆದುರಿಗಿರುವವನು ದೇವಮಾನವನೇ..ಅವನು ತೋಳು ಚಾಚಿ ಕರೆಯುತ್ತಿರುವುದು ತನ್ನನ್ನು ಮಾತ್ರ ಎಂದು ಮನದಟ್ಟಾದಾಗ ಒಂದು ಕ್ಷಣ ಮನಸು ಚಂಚಲವಾಗದೇ? ಆದರೆ ’ಅಮ್ರುತಮತಿ ಯಾಕೆ ಜಾರಿದಳು’ ಎಂಬುದನ್ನು ಲೋಕ ಯಾಕೆ ವಿಮರ್ಶಿಸುತ್ತಿಲ್ಲ? ಜಾರುವಿಕೆಯಲ್ಲಿ ಪಾಲುದಾರರಾದವರು  ಲೌಕಿಕದ ನ್ಯಾಯಾಲಯದಲ್ಲಿ ಶಿಕ್ಷೆಗೆ ಅರ್ಹರಲ್ಲವೇ? ಅಲ್ಲ ಎಂಬುದು ಅವರನ್ನು ರಕ್ಷಿಸಲು ಹೊರಟಿರುವ ಎಲ್ಲಾ ಕಡೆ ಹರಡಿಕೊಂಡಿರುವ ಅವರ ಅಪಾರ ಪ್ರಮಾಣದ ಬೆಂಗಾವಲು ಪಡೆ ಹೇಳುತ್ತಿದೆ. ಅವರನ್ನು ರಕ್ಷಿಸುವುದೆಂದರೆ ಸನಾತನ ಧರ್ಮವನ್ನು ರಕ್ಷಿಸಿದಂತೆ ಎಂದು ಪ್ರಚಾರ ಮಾಡುತ್ತಿದೆ. ಅಷ್ಟು ಕೇವಲವಾಯಿತೇ ನಮ್ಮ ಧರ್ಮ? ಅದರಲ್ಲಿ ಹೆಣ್ಣೊಬ್ಬಳ ಆಕ್ರಂದನಕ್ಕೆ ಯಾವ ಬೆಲೆಯೂ ಇಲ್ಲವೇ?

ಅದಕ್ಕೇ ನಾನು ಮೊದಲಲ್ಲೇ ಹೇಳಿರುವುದು ಕಾನೂನು ಕತ್ತೆಯಿದ್ದಂತೆ..ಅದಕ್ಕೆ ಹೇರನ್ನು ಹೊರುವುದಷ್ಟೇ ಗೊತ್ತು. ಅದರೊಳಗೆ ಏನು ಹೂರಣವಿದೆ, ಅದು ಅದಕ್ಕೆ ಬೇಕಾಗಿಲ್ಲ. ಕಾನೂನು ಹ್ರುದಯದ ಮಾತನ್ನೂ ಕೇಳುವಂತಾದಾಗ ಮಾತ್ರ ಹೆಣ್ಣಿಗೆ ನಿಜವಾದ ನ್ಯಾಯ ದೊರಕಬಹುದೆನೋ!