Monday, July 19, 2010

ಬೈರಪ್ಪನವರ ಕವಲು; ಸ್ತ್ರೀ ವಿರೋಧಿ ವಕಾಲತ್ತು




ಎಸ್.ಎಲ್ ಬೈರಪ್ಪನವರ ಹೊಸ ಕಾದಂಬರಿ ’ಕವಲು’ವಿನ ೧೪ನೇ ಪುಟದಲ್ಲಿ ಒಂದು ಸಂಭಾಷಣೆ ಬರುತ್ತದೆ; ”ಓದಿದ ಗಂಡಸರೆಲ್ಲ ಎಂಗಸರಾಗ್ತಾರೆ. ಓದಿದ ಎಂಗಸರೆಲ್ಲಾ ಗಂಡಸರಾಗ್ತಾರೆ. ಗಂಡಸರು ಗಂಡಸರಾಗಿ ಎಂಗಸರು ಎಂಗಸರಾಗಿ ಇರಬೇಕಾದರೆ ಯಾರೂ ಓದಕೂಡದು” ಇದನ್ನು ಹೇಳುವಾತ ಒಬ್ಬ ಪೋಲಿಸ್ ಕಾನ್ಸ್ಟೇಬಲ್.
ಕಥಾನಾಯಕ ಜಯಕುಮಾರ್ ವಾರ್ಷಿಕ ೧೨೦ ಕೋಟಿ ವ್ಯವಹಾರ ನಡೆಸುವ ’ಜಯಂತಿ ಹೈಪ್ರಿಸಿಶನ್’ ಪ್ಯಾಕ್ಟರಿಯ ಮಾಲೀಕ. ಈಗ ಎರಡನೇ ಪತ್ನಿಯ ಮೇಲೆ ಕೌಟುಂಬಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ ಮಹಿಳಾ ಠಾಣೆಯೊಂದರಲ್ಲಿ ಬಂದಿತನಾಗಿದ್ದಾನೆ. ಅವನನ್ನು ನೋಡಿ ಕಾನ್ಸ್ಟೇಬಲ್ ಅನುಕಂಪದಿಂದ ನುಡಿಯುವ ಮಾತುಗಳಿವು. ಈ ಸಂಭಾಷಣೆಯೇ ಇಡೀ ಕಾದಂಬರಿಯ ತಿರುಳೂ ಆಗಿದೆ.

ಬೈರಪ್ಪನವರಿಗೆ ಅಧುನಿಕ ಮನೋಭಾವದ, ಸ್ವತಂತ್ರ ವ್ಯಕ್ತಿತ್ವದ ಮಹಿಳೆಯರ ಬಗ್ಗೆ ಅಪಾರ ಅಸಹನೆಯಿದೆ; ತಿರಸ್ಕಾರವಿದೆ. ಅದರ ಜೊತೆಗೆ ಶಿಥಿಲಗೊಳ್ಳುತ್ತಿರುವ ಕುಟುಂಬ ವ್ಯವಸ್ಥೆಯ ಬಗ್ಗೆ ವ್ಯಥೆಯಿದೆ. ಕೌಟುಂಬಿಕ ಮೌಲ್ಯಗಳು ಕುಸಿಯುತ್ತಿರುವುದಕ್ಕೆ ಮಹಿಳೆಯೇ ಕಾರಣ ಎಂಬುದು ಅವರ ಬಲವಾದ ನಂಬಿಕೆ. ಇದನ್ನವರು ಕಾದಂಬರಿಯುದ್ದಕ್ಕೂ ಬರುವ ಸ್ತ್ರೀ ಪಾತ್ರಗಳ ಮುಖಾಂತರ ಬಿಂಬಿಸಲೆತ್ನಿಸಿದ್ದಾರೆ. ಕಥಾನಾಯಕನ ದಿವಂಗತ ಮೊದಲ ಪತ್ನಿ ವೈಜಯಂತಿ,ಅವರ ಮನೆಗೆಲಸದ ಸಹಾಯಕಿ ದ್ಯಾವಕ್ಕ ಮತ್ತು ಆತನ ತಮ್ಮನ ಪತ್ನಿ ಪಾರ್ವತಿಯನ್ನು ಬಿಟ್ಟು ಉಳಿದ ಎಲ್ಲಾ ಮಹಿಳೆಯರನ್ನು ಉಗ್ರ ವಿಮೋಚನವಾದಿಗಳನ್ನಾಗಿ ಇಲ್ಲವೇ ಜಾರಿಣಿಯರನ್ನಾಗಿ, ವಂಚಕರನ್ನಾಗಿ, ಮನೆಮುರುಕರನ್ನಾಗಿ ಚಿತ್ರಿಸಿದ್ದಾರೆ. ಅವರ ಬಳೆಯಿಲ್ಲದ ಕೈ, ಕುಂಕುಮವಿಲ್ಲದ ಹಣೆ,ಸರವಿಲ್ಲದ ಕತ್ತು ಸೂತಕದ ಕಳೆಯೆಂದು ಕಾದಂಬರಿಯುದ್ದಕ್ಕೂ ಮತ್ತೆ ಮತ್ತೆ ಪ್ರಸ್ತಾಪವಾಗುತ್ತಲೇ ಇರುತ್ತದೆ. ಇವರು ಹೀಗಾಗಲು ಉನ್ನತ ವಿದ್ಯಾಭಾಸ ಪಡೆದುದೇ ಕಾರಣವೆಂದು ಬಿಂಬಿಸಲಾಗಿದೆ. ಈ ವಿದ್ಯಾವಂತೆಯರೆಲ್ಲಾ ಕೌಟುಂಬಿಕ ದೌರ್ಜನ್ಯ ವಿರೋಧಿ ಕಾನೂನನ್ನು ಪುರುಷರ ಶೋಷಣೆಗೆ ಅಸ್ತ್ರವಾಗಿ ಬಳಸುತ್ತಿದ್ದಾರೆ ಎಂಬುದು ಬೈರಪ್ಪನವರ ವಾದ.

ವಿವಾಹ ಬಾಹಿರ ಸಂಬಂಧಗಳು ಬೈರಪ್ಪನವರ ಹಿಂದಿನ ಕಾದಂಬರಿಗಳಲ್ಲಿ ಸಾಮಾನ್ಯ. ಆದರೆ ಅಲ್ಲೆಲ್ಲ ಅದಕ್ಕೊಂದು ತಾರ್ಕಿಕ ಹಿನ್ನೆಲೆಯಿರುತ್ತಿತ್ತು. ಆದರೆ ಇಲ್ಲಿ ಅದು ಗಂಡಸರ ಹಕ್ಕು, ಮಹಿಳೆ ಮಾಡಿದರೆ ಅಪರಾಧ ಎನ್ನುವಂತೆ ಪ್ರತಿಪಾದಿಸಲಾಗಿದೆ. ಹೆಂಗಸರ ಲೈಂಗಿಕ ಸ್ವಾತಂತ್ರ್ಯವನ್ನು ಘೋರ ಅಪರಾಧವೆಂದು ಚಿತ್ರಿತವಾಗಿದೆ. ಮಾತ್ರವಲ್ಲ ಮಹಿಳಾ ವಿಮೋಚನವಾದಿಗಳನ್ನು ಸಲಿಂಗಕಾಮಿಗಳೆಂದು ಬಿಂಬಿಸಲು ಸರಾಪ ಎಂಬ ಪಾತ್ರವನ್ನು ತರಲಾಗಿದೆ. ಡಾಕ್ಟರ್ಸ್, ಲಾಯರುಗಳು, ವಿಶ್ವವಿದ್ಯಾಲಯಗಳ ಪ್ರೋಪೆಸರುಗಳು ಸೇರಿದ ಕ್ರಿಮಿನಲ್ ಗಳ ದೊಡ್ಡ ಜಾಲವೆಂದು ಮಹಿಳಾವಾದಿಗಳನ್ನು ತೋರಿಸಲಾಗಿದೆ.

ಕಾದಂಬರಿಯಲ್ಲಿ ಬೈರಪ್ಪನವರು ಎತ್ತಿಕೊಳ್ಳುವ ಇನ್ನೊಂದು ಬಹು ದೊಡ್ಡ ಜಿಜ್ನಾಸೆ ಎಂದರೆ; ಪತ್ನಿಯಾದವಳು ಪತಿಯನ್ನು ಏಕವಚನದಲ್ಲಿ ಕರೆಯುವುದು ಸರಿಯೇ ಎಂಬುದು. ಮದುವೆಗೆ ಮೊದಲು ಮಂಗಳೆ ಏಕವಚನದಲ್ಲಿ ಕರೆದರೂ ಹಾಸುಗೆಯಲ್ಲಿ ರಸಭಂಗವಾಗದ ಕಥಾನಾಯಕ ಮದುವೆಯ ನಂತರ ಏಕವಚನದಲ್ಲಿ ಕರೆದಾಗ ನಿಷ್ಖ್ರ್‍ಇಯನಾಗುತ್ತಾನೆ. ದೊರೆರಾಜು ಎಂಬ ರಾಜಕಾರಣಿ ಮತ್ತು ಇಳಾ ಮೇಡಂ ನಡುವೆಯೂ ಏಕವಚನದ ಜಿಜ್ನಾಸೆಯಿದೆ. ಇದೇ ರೀತಿಯಲ್ಲಿ ಕಾದಂಬರಿಯುದ್ದಕ್ಕೂ ’ಮೇಲ್ ಇಗೋ’ ವಿಜೃಂಬಿಸಿದೆ.

ಸಾಮಾನ್ಯವಾಗಿ ಬೈರಪ್ಪನವರ ಕಾದಂಬರಿಗಳಲ್ಲಿ ಕಂಡುಬರುವ ಅಧ್ಯಯನಶೀಲತೆ ಕಾದಂಬರಿಗೆ ಆಳವನ್ನು ತಂದುಕೊಡುತ್ತದೆ; ಶೈಲಿ ಓದುಗರನ್ನು ಸೆರೆಹಿಡಿಯುತ್ತದೆ. ಆದರೆ ಕವಲಿನಲ್ಲಿ ಇವೆರಡೂ ಇಲ್ಲ. ಮೇಲ್ಮಟ್ಟದ ಸ್ತ್ರೀ ವಿರೋಧಿ ವಕಾಲತ್ತು ಇದೆ ಅಷ್ಟೆ.

ಮಹಿಳೆ ತನ್ನ ಕರ್ತವ್ಯಗಳನ್ನು ಮರೆತು ವ್ಯಯಕ್ತಿಕ ಬದುಕಿಗೆ ಮಾತ್ರ ಗಮನ ಕೊಡುತ್ತಿದ್ದಾಳೆ ಎಂಬುದು ಕಾದಂಬರಿಕಾರರ ಗ್ರಹಿಕೆ.ಆದರೆ ಭಾರತೀಯ ಸಮಾಜದಲ್ಲಿ ಗೃಹಿಣಿ ಧರ್ಮ ಇರುವಂತೆಯೇ ಗೃಹಸ್ಥ ಧರ್ಮ ಎಂಬುದಿದೆ. ಅದನ್ನು ಸ್ವಲ್ಪ ಮಟ್ಟಿಗಾದರೂ ಪಾಲಿಸಿದರೆ ಮಾತ್ರ ಕುಟುಂಬ ವ್ಯವಸ್ಥೆ ಉಳಿದುಕೊಳ್ಳಲು ಸಾಧ್ಯ. ಸ್ವಸ್ಥ ಸಮಾಜ ರೂಪುಗೊಳ್ಳಲು ಸಾಧ್ಯ. ಆ ಹೊಣೆಗಾರಿಕೆಯನ್ನು ಇವತ್ತಿನ ದಂಪತಿಗಳು ನಿಭಾಯಿಸುತ್ತಿದ್ದಾರೆಯೇ ಎಂಬುದನ್ನು ಬೈರಪ್ಪನಂಥ ಜನಪ್ರಿಯ ಕಾದಂಬರಿಕಾರರು ಶೋಧಿಸಬೇಕಾಗಿದೆ. ಒಬ್ಬ ಗಂಡಸು ಮಗನಾಗಿ, ಗಂಡನಾಗಿ, ಅಪ್ಪನಾಗಿ, ಕುಟುಂಬದ ಯಜಮಾನನಾಗಿ ತನ್ನ ಕರ್ತವ್ಯ ನಿರ್ವಹಿಸುತ್ತಿದ್ದಾನೆಯೇ? ಮಗಳಾಗಿ, ಪತ್ನಿಯಾಗಿ, ಅಮ್ಮನಾಗಿ, ಗೃಹಿಣಿಯಾಗಿ ಒಬ್ಬ ಮಹಿಳೆ ನಿರ್ವಹಿಸಿದಷ್ಟು ಹೊಣೆಗಾರಿಕೆಯನ್ನು ಒಬ್ಬ ಗಂಡಸು ನಿರ್ವಹಿಸುತ್ತಿಲ್ಲವೆಂದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಅದನ್ನು ಕಾದಂಬರಿಕಾರನೊಬ್ಬ ಸಮಾಜಶಾಸ್ತ್ರಜ್ನನ ರೀತಿಯಲ್ಲಿ ವಿಶ್ಲೇಷಿಸಬೇಕಾಗುತ್ತದೆ. ಅದನ್ನು ಬೈರಪ್ಪನವರು ಮಾಡುವುದಿಲ್ಲ ಯಾಕೆಂದರೆ ಅವರು ಅಧುನಿಕತೆಯನ್ನು ಒಪ್ಪಿಕೊಳ್ಳಲಾರರು. ಅವರ ಬದಲಾವಣೆಯೆನಿದ್ದರೂ ಸಂಪ್ರದಾಯಿಕ ಕೌಟುಂಬಿಕ ವ್ಯವಸ್ಥೆಯೊಳಗಡೆಯೇ ಆಗಬೇಕು. ಹಾಗಾಗಿಯೇ ಜಯಕುಮಾರನ ಬುದ್ದಿಮಾಂದ್ಯ ಮಗಳನ್ನು ಅವನ ಅಕ್ಕನ ಮಗ, ವಿದೇಶದಲ್ಲಿ ಎರಡು ಹೆಂಗಸರ ಜೊತೆ ಸಂಬಂಧವಿದ್ದು ಈಗ ಭಾರತಕ್ಕೆ ಬಂದು ನೆಲೆಸಿರುವ ನಚಿಕೇತನ ಜೊತೆ ಮದುವೆ ಮಾಡಿಸಿ ಸುಖ ದಾಂಪತ್ಯದ ಮಾದರಿಯನ್ನು ಕೊಡುತ್ತಾರೆ. ಮಂಗಳೆಯನ್ನು ಶಿಕ್ಷಿಸುವ ಭರದಲ್ಲಿ ಅವಳನ್ನು ಜೀವವಿರೋಧಿಯಾಗಿ, ಭಾವನಾರಹಿತಳಾಗಿ ಚಿತ್ರಿಸಲಾಗಿದೆ. ವಿದೇಶದಲ್ಲಿ ಉನ್ನತ ವಿದ್ಯಾಭ್ಯಾಸ ಪಡೆದ ಇಂಗೀಷ್ ಪ್ರೋಪೆಸರ್ ಇಳಾಮೇಡಂ ಅನ್ನು ವ್ಯಕ್ತಿತ್ವ ಮಾರಿಕೊಂಡಂತೆ ಚಿತ್ರಿಸಿ ರಾಜಕಾರಣಿಯೊಬ್ಬನ ’ಕೀಪ್’ ಮಾಡಿದ್ದಾರೆ.

ಸ್ತ್ರಿ ಸಂವೇದನೆಗಳನ್ನು ಗೌರವಿಸುವ, ಆಕೆಯ ಅನನ್ಯತೆಯನ್ನು ಒಪ್ಪಿಕೊಳ್ಳುವ, ಸಮಾನತೆಗಾಗಿ ತುಡಿಯುವ ಎಲ್ಲರೂ ಉಪೇಕ್ಷಿಸಬೇಕಾದ ಕಾದಂಬರಿಯಿದು.

[ಜುಲೈ ೧೯ರಂದು ಕನ್ನಡ ಪ್ರಭದಲ್ಲಿ ಪ್ರಕಟವಾದ ಬರಹ]

Monday, July 5, 2010

ಮಾಧ್ಯಮಗಳಲ್ಲಿ ಮಹಾ ಕಾವ್ಯಗಳ ಮರು ಓದು




ಮಹಾ ಕಾವ್ಯಗಳು ಸೃಜನಶೀಲ ಮನಸ್ಸುಗಳನ್ನು ಮತ್ತೆ ಮತ್ತೆ ಕಾಡುತ್ತವೆ; ಕೆಣಕುತ್ತವೆ; ಅವರ ಕಲ್ಪನೆಯ ಮೂಸೆಯಲ್ಲಿ ರೂಪಾಂತರ ಹೊಂದುತ್ತವೆ. ಭಾರತೀಯ ಮಹಾಕಾವ್ಯಗಳಾದ ಮಹಾಭಾರತ ಮತ್ತು ರಾಮಾಯಣಗಳು ಅಂಥ ಬತ್ತದ ಕಣಜಗಳು. ಪ್ರಕಾಶ ಝಾ ಮತ್ತು ಮಣಿರತ್ನರು ಆ ಕಣಜಕ್ಕೆ ಕೈ ಹಾಕಿ ’ರಾಜನೀತಿ’ ಮತ್ತು ’ರಾವಣ’ ಎಂಬ ಸಿನೇಮಾಗಳನ್ನು ತಯಾರಿಸಿದ್ದಾರೆ.ಅದ್ದೂರಿ ಪ್ರಚಾರದೊಂದಿಗೆ ತೆರೆ ಕಂಡ ಈ ಚಿತ್ರಗಳು ನಿರೀಕ್ಷೆಯ ಯಶಸ್ಸನ್ನು ಕಾಣಲಿಲ್ಲ. ಮಹಾಕಾವ್ಯದ ಹರಹನ್ನು ಹೊಂದಿರುವ ಕುವೆಂಪುರವರ ಕಾದಂಬರಿ ’ಮಲೆಗಳಲ್ಲಿ ಮದುಮಗಳು’ ಕೂಡಾ ರಂಗ ಪ್ರಯೋಗವಾಗಿ ದಾಖಲೆಯಾಯಿತೇ ಹೊರತು ಯಶಸ್ಸನ್ನು ಕಾಣಲಿಲ್ಲ ಎಂದು ನಾಟಕ ನೋಡಿದವರ ಬಾಯಿಂದ ಕೇಳಿದ್ದೇನೆ.

ಯಾಕೆ ಹೀಗೆ? ಜನ ಮಾನಸದಲ್ಲಿ ನೆಲೆ ನಿಂತಿರುವ ಕಥೆ/ಕೃತಿಯೊಂದನ್ನು ಇನ್ನೊಂದು ಮಾಧ್ಯಮಕ್ಕೆ ಅಳವಡಿಸಿದಾಗ ಪ್ರೇಕ್ಷಕ ಪೂರ್ವನಿರ್ಧಾರಿತ ಮನಸ್ಸಿನೊಂದಿಗೆ ಅದನ್ನು ನೋಡಲು ಬರುತ್ತಾನೆ. ಆತ ಮೂಲ ಕೃತಿಯೊಡನೆ ಇದನ್ನು ಹೊಲಿಸಿ ನೋಡುತ್ತಾನೆ. ನಿರ್ದೇಶಕ ಹೊಸತೇನನ್ನು ಕೊಟ್ಟಿದ್ದಾನೆ ಎಂದು ಹುಡುಕಾಡುತ್ತಾನೆ. ಪ್ರೇಕ್ಷಕನಿಗೆ ಗೊತ್ತಿದೆ; ’ಅದು’ ಇದಾಗದು. ಎಷ್ಟೆಂದರೂ ಇದು ಅದರ ರೀಮೆಕ್. ಇದೇ ಅದಾಗಲು ಪ್ರಯತ್ನಿಸಿದರೆ ಪ್ರೇಕ್ಷಕನನ್ನು ಗೆಲ್ಲಲು ಸಾಧ್ಯವಾಗದು. ಮಣಿರತ್ನಂರವರ ’ರಾವಣ’ ಅದೇ ಆಗಲು ಪ್ರಯತ್ನಿಸಿದೆ. ಸೋತಿದೆ.

ರಾವಣದಲ್ಲಿ ಕಥೆಯೇ ಇಲ್ಲ.ಕೇವಲ ದೃಶ್ಯ ವೈಭವಗಳಷ್ಟೆ ಒಂದು ಸಿನೆಮಾವನ್ನು ಗೆಲ್ಲಿಸಲು ಸಾಧ್ಯವಾಗದು. ನಿರ್ದೇಶಕನಿಗೆ ಕಥನ ಕಲೆ ಗೊತ್ತಿರಬೇಕು. ಭಾರತೀಯ ಪ್ರೇಕ್ಷಕನಿಗಂತೂ ಕಥೆಯೇ ಮುಖ್ಯ.
ರಾಜನೀತಿಯಲ್ಲಿ ಕಥೆ ಇದೆ. ಅದ್ದೂರಿ ತಾರಾ ಸಮೂಹವಿದೆ. ಆದರೆ ಹೀರೊ ಇಲ್ಲ. ಎಲ್ಲಾ ಪಾತ್ರಗಳೂ ವಿಲನ್ ಗಳೇ. ಪ್ರತಿ ಪ್ರೇಮಿನಲ್ಲಿಯೂ ನಮಗೆ ಮಹಾಭಾರತ ನೆನಪಾಗುತ್ತದೆ. ಹಾಗಾಗಿ ಸಿನೇಮಾ ವಾಚ್ಯವಾಗಿದೆ.
ಸಿನೇಮಾವೊಂದು ಬಿಡುಗಡೆಗೆ ಪೂರ್ವದಲ್ಲಿಯೇ ಇದು ಇಂತಹ ಕಾವ್ಯದ ಆಧಾರವೆಂದು ಅದ್ದೂರಿ ಪ್ರಚಾರ ನೀಡಬಾರದು. ಸಿನೇಮಾ ನೋಡಿದ ಪ್ರೇಕ್ಷಕನಿಗೆ ಮಹಾಭಾರತ ಇಲ್ಲವೆ ರಾಮಾಯಣದ ಪಾತ್ರಗಳು, ಘಟನೆಗಳು ನೆನಪಾಗಬೇಕು.

ಕುವೆಂಪುರವರ ’ಮಲೆಗಳಲ್ಲಿ ಮದುಮಗಳು’ ಮಹಾಕಾವ್ಯದ ವಿಸ್ತಾರವನ್ನು ಹೊಂದಿರುವ, ಮಲೆನಾಡಿನ ಸಮಗ್ರ ಚಿತ್ರಣವನ್ನು ಸರಳವಾಗಿ ಕಟ್ಟಿಕೊಡುವ ಬೃಹತ್ ಕಾದಂಬರಿ.ಇಂತಹ ಕಾದಂಬರಿ ರಂಗಪ್ರಯೋಗಕ್ಕೆ ಒಳಪಡುತ್ತಿದೆ ಎಂಬುದನ್ನು ಕೇಳಿದಾಗಲೇ ಅಚ್ಚರಿಯಾಗಿತ್ತು. ಕೆಲವರಿಗೆ ಅದಕ್ಕಿಂತಲೂ ಅಚ್ಚರಿಯಾಗಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅದಕ್ಕೆ ಮಂಜೂರು ಮಾಡಿದ ಹಣದ ಮೊತ್ತ. ಬಹುಶಃ ಆ ಹಣದಲ್ಲಿ ನಮ್ಮ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಒಂದೊಂದು ನಾಟಕೋತ್ಸವವನ್ನು ಏರ್ಪಡಿಸಬಹುದಿತ್ತು ಎಂಬುದು ಅವರ ತಕರಾರು.

ಇದೆಲ್ಲಾ ನಿಜವೇ. ಆದರೆ ಕೇಂದ್ರ ಪಾತ್ರವಿಲ್ಲದ, ಅತ್ಯಲ್ಪ ನಾಟಕೀಯ ಘಟನೆಗಳಿರುವ, ಕೇವಲ ವಿವರಣೆಗಳಲ್ಲೇ ಮಲೆನಾಡಿನ ಸಮಗ್ರ ಚಿತ್ರಣವನ್ನು ಕಟ್ಟಿಕೊಡುವ ೭೧೮ ಪುಟಗಳ ಮಹಾ ಕಾದಂಬರಿ’ ಮಲೆಗಳಲ್ಲಿ ಮದುಮಗಳು’ ನ್ನು ಯಶಸ್ವಿಯಾಗಿ ರಂಗಕ್ಕೆ ಅಳವಡಿಸುವುದಕ್ಕೆ ಧೈರ್ಯ, ಪ್ರತಿಭೆ ಮತ್ತು ಆರ್ಥಿಕ ಸಾಮರ್ಥ್ಯ ಎಲ್ಲವೂ ಬೇಕು.

ಬಸವಲಿಂಗಯ್ಯನವರಿಗೆ ದೈರ್ಯ ಇತ್ತು. ಅವರು ನಾಟಕಕ್ಕೆ ಆಯ್ಕೆ ಮಾಡಿಕೊಳ್ಳುವ ವಸ್ತುಗಳೇ ಅದನ್ನು ಪ್ರತಿಫಲಿಸುತ್ತಿದ್ದವು. ಈ ಮೊದಲೇ ಅವರು ಕುವೆಂಪುರವರ ’ಶೂದ್ರ ತಪಸ್ವಿ’ ಕಾರ್ನಾಡರ ’ಅಗ್ನಿ ಮತ್ತು ಮಳೆ’ ದೇವನೂರು ಮಹಾದೇವರ ’ಕುಸುಮ ಬಾಲೆ’ ’ದ್ಯಾವನೂರು’ಗಳನ್ನು ರಂಗರೂಪಕ್ಕೆ ಅಳವಡಿಸಿದ್ದರು. ಇನ್ನು ಪ್ರತಿಭೆಯೂ ಇತ್ತು. ಯಾಕೆಂದರೆ ಅವರು ಎನ್ ಎಸ್ ಡಿ ಪಧವಿದರರು. ಆರ್ಥಿಕ ಸಹಾಯಕ್ಕಾಗಿ ಅವರು ಸರಕಾರದೆಡೆ ನೋಡಲೇಬೇಕಾಗಿತ್ತು. ಮೈಸೂರಿನಲ್ಲಿರುವ ’ರಂಗಾಯಣ’ ರೆಪರ್ಟರಿ ಸರಕಾರದ ಅಂಗ ಸಂಸ್ಥೆ. ಅಲ್ಲಿಯ ಕಲಾವಿದರೆಲ್ಲಾ ಸರಕಾರಿ ನೌಕರರು. ಬಸವಲಿಂಗಯ್ಯನವರಿಗೆ ಅವಕಾಶ ಒದಗಿ ಬಂತು. ಮದುಮಗಳು ರಂಗಕ್ಕೆ ಬಂದಳು.

ಮಾಧ್ಯಮಗಳಲ್ಲಿ ಮದುಮಗಳ ರಂಗಪ್ರಯೋಗದ ಬಗ್ಗೆ ಹಲವು ಅಭಿಪ್ರಾಯಗಳು ಬಂದವು. ಬೆಂಗಳೂರಿನಲ್ಲಿರುವ ನನಗೆ ಮೈಸೂರಿನಲ್ಲಿ ನಡೆದ ಪ್ರಯೋಗವನ್ನು ನೋಡಲಾಗಲಿಲ್ಲ. ಆದರೆ ಅದು ಒಂಬತ್ತು ಘಂಟೆಗಳ ಸುದೀರ್ಘ ಅವಧಿಯ ಪ್ರಯೋಗವೆಂದು ಕೇಳಿ ಮತ್ತೊಮ್ಮೆ ಅಚ್ಚರಿಯಾಯಿತು. ನಾವು ಕರಾವಳಿಯ ಜನ. ರಾತ್ರಿಯಿಡಿ, ಒಂಬತ್ತು ಘಂಟೆಗಳ ಯಕ್ಷಗಾನವನ್ನು ನೋಡುತ್ತ ಬೆಳೆದು ಬಂದವರು. ಅಂಥ ನನ್ನೂರ ಜನರೇ ಇಂದು ಮೂರು ಘಂಟೆಗಳ ಯಕ್ಷಗಾನಕ್ಕೆ ಒಗ್ಗಿಕೊಂಡಿದ್ದಾರೆ. ಯಕ್ಷಗಾನದ ಯಕ್ಷ, ಕಿನ್ನರ, ಗಂದರ್ವ ಲೋಕವೇ ಕಾಲನ ತೆಕ್ಕೆಯಲ್ಲಿ ಮಸುಕಾಗಿದೆ. ಇನ್ನು ಜೀವಂತ ರಂಗಭೂಮಿಯಾದ ನಾಟಕ ಪ್ರೇಕ್ಷಕನ ಏಕಾಗ್ರತೆಯನ್ನು ಬಯಸುತ್ತೆ. ೧೫೦ ಪಾತ್ರಗಳು,೫೮ ದೃಶ್ಯ, ೪೮ ಹಾಡು, ೬೭ ನಟರು ನಾಲ್ಕು ವಿರಾಮವಿರುವ ಈ ನಾಟಕಕ್ಕೆ ಆರು ತಿಂಗಳ ತಯಾರಿ ನಡೆಸಲಾಗಿತ್ತು.

ಖಂಡಿತವಾಗಿಯೂ ರಂಗಾಯಣ ಮಾತ್ರ ಇಂತಹ ಪ್ರಯೋಗಗಳನ್ನು ಮಾಡಲು ಸಾಧ್ಯ. ಆದರೆ ಅದನ್ನು ರಾಜ್ಯದ ಎಲ್ಲಾ ರಂಗಪ್ರೇಮಿಗಳು ನೋಡುವಂತಾಗಬೇಕು ಯಾಕೆಂದರೆ ಅದಕ್ಕೆ ವ್ಯಯವಾಗಿರೋದು ಪ್ರಜೆಗಳ ತೆರಿಗೆ ಹಣ. ಅದಕ್ಕಾಗಿ ನಾಟಕದ ಅವಧಿಯನ್ನು ಕಡಿಮೆಗೊಳಿಸಿ ಅದನ್ನು ರಾಜ್ಯಾದ್ಯಂತ ತಿರುಗಾಟಕ್ಕೆ ಅಣಿಗೊಳಿಸಬೇಕು.

ಈ ಸಂದರ್ಭದಲ್ಲಿ ಪೀಟರ್ ಬ್ರೂಕ್ ರ ’ಮಹಾಭಾರತ’ ನೆನಪಾಗುತ್ತದೆ. ಒಂಬತ್ತು ಘಂಟೆಗಳ ಈ ನಾಟಕದ ಸ್ಕ್ರೀನ್ ಪ್ಲೆಗಾಗಿ ಅವರು ಎಂಟು ವರ್ಷ ಕೆಲಸ ಮಾಡಿದ್ದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಕಲಾವಿದರನ್ನು ಆಯ್ಕೆ ಮಾಡಲಾಗಿತ್ತು. ಒಟ್ಟು ನಲ್ವತ್ತೆರಡು ಕಲಾವಿದರಲ್ಲಿ ದ್ರೌಪದಿ ಪಾತ್ರ ಮಾಡಿದ್ದು ಭಾರತದ ಮಲ್ಲಿಕಾ ಸಾರಾಭಾಯಿ. ೫ ಮಿಲಿಯನ್ ಡಾಲರ್ ವೆಚ್ಚದಲ್ಲಿ ತಯಾರಾದ ಈ ನಾಟಕದಲ್ಲಿ ಆಪ್ರಿಕಾದ ಕಪ್ಪು ವರ್ಣದವರೇ ಜಾಸ್ತಿಯಿದ್ದರು. ಜೊತೆಗೆ ರವೀಂದ್ರನಾಥ ಠಾಕೂರರ ಸಂಗೀತವಿತ್ತು.ಅದರ ಕಾಸ್ಟ್ಯೂಮ್ ವಾಸ್ತವಕ್ಕೆ ಹತ್ತಿರವಿತ್ತು. ಚಕ್ರವ್ಯೂಹದ ರಚನೆ ನಿರ್ದೇಶಕರ ಸೃಜನಶೀಲತೆಗೆ ಕನ್ನಡಿ ಹಿಡಿದಂತಿತ್ತು. ಬಹುರಾಷ್ಟ್ರೀಯ, ಬಹುಜನಾಂಗೀಯ ಕಲಾವಿದರಿದ್ದ ಈ ತಂಡ ನಾಲ್ಕು ವರ್ಷಗಳ ಕಾಲ ಪ್ರಪಂಚದಾದ್ಯಂತ ತಿರುಗಾಟ ನಡೆಸಿತ್ತು. ಅನಂತರ ಅದು ಆರು ಘಂಟೆಗಳ ಟೀವಿ ಧಾರಾವಾಯಿಯಾಗಿ ಚಿತ್ರಿಕರಿಸಲಾಯಿತು.ಅದು ದೂರದರ್ಶನದಲ್ಲಿಯೂ ಬಿತ್ತರಗೊಂಡಿತು. ಕೊನೆಗೆ ಮೂರು ಘಂಟೆಗಳ ನಾಟಕವಾಗಿಸಿ ಅದರ ಡಿವಿಡಿ ರಿಲೀಸ್ ಮಾಡಲಾಯ್ತು.

ನಾಟಕ, ಸಿನೇಮಾದಂತಹ ಪ್ರಭಾವಿ ಮಾಧ್ಯಮಕ್ಕೆ ಸಮೂಹವನ್ನು ಸಮ್ಮೋಹನಗೊಳಿಸುವ ಶಕ್ತಿ ಇದೆ. ಅದು ನಮಗೆ ಮನರಂಜನೆಯನ್ನು ನೀಡಬೇಕು.ಇಲ್ಲವೇ ಅದು ಪ್ರದರ್ಶನದಾಚೆಯೂ ಕೆಲಕಾಲ ನಮ್ಮನ್ನು ಕಾಡಬೇಕು. ಅಥವಾ ಇನ್ಯಾವುದಕ್ಕೊ ನಮ್ಮನ್ನು ಸಕಾರಾತ್ಮಕವಾಗಿ ಪ್ರೆರೇಪಿಸಬೇಕು. ಅದ್ಯಾವುದನ್ನು ರಾವಣ ಮತ್ತು ರಾಜನೀತಿ ಮಾಡುವುದಿಲ್ಲ.
ಮಲೆಗಳಲ್ಲಿ ಮದುಮಗಳು ಏನು ಮಾಡಿದೆಯೆಂಬುದು ಮೈಸೂರಿನ ರಂಗಾಸಕ್ತರು ಮತ್ತು ಅಲ್ಲಿಗೆ ಹೋಗಿ ನಾಟಕ ನೋಡಲು ವ್ಯವಧಾನ ಮತ್ತು ಸಾಮರ್ಥ್ಯವಿದ್ದ ಕೆಲವರಿಗಷ್ಟೆ ಗೊತ್ತಾಗಿದೆ!
[ ಕನ್ನಡಪ್ರಭದ ಸಾಪ್ತಾಹಿಕದಲ್ಲಿ ಪ್ರಕಟವಾದ ಲೇಖನ]

Saturday, May 29, 2010

ಸುಚೇಂದ್ರಪ್ರಸಾದರ ’ಪ್ರಪಾತ’ಕ್ಕೆ ಹರಿದು ಬಂದ ತೊರೆಗಳು





ಅನ್ನವನ್ನು ಅರಸಿಕೊಂಡು ಕೊಲ್ಲಿ ರಾಷ್ಟ್ರಗಳಿಗೆ ವಲಸೆ ಹೋದ ನನ್ನೂರ ಜನರನ್ನು ತವರೂರಿಗೆ ಹೊತ್ತು ತರುತ್ತಿದ್ದ ವಿಮಾನ ಮೇ ೨೨ರ ಶನಿವಾರ ಬೆಳಿಗ್ಗೆ ಬಜ್ಪೆ ಸಮೀಪದ ಕೆಂಜಾರು ಗುಡ್ಡದ ೩೦೦ ಅಡಿ ಪ್ರಪಾತಕ್ಕೆ ಬಿದ್ದು ಹೊತ್ತಿ ಉರಿಯಿತು. ೬ ಸಿಬ್ಬಂದಿ, ೧೮ ಕಂದಮ್ಮಗಳು ಸೇರಿದಂತೆ ೧೫೮ ಜನ ಉರಿದು ಕರಕಲಾದರು. ೮ ಜನ ಅದೃಷ್ಟವಂತರು ಬದುಕುಳಿದರು.

ಮೃತ್ಯು ಬಂದು ಅಪ್ಪಳಿಸಿದ ಪರಿಯನ್ನು, ಆಪ್ತರ ಆಕ್ರಂದನವನ್ನು ದೃಶ್ಯ ಮಾಧ್ಯಮಗಳಲ್ಲಿ ನೋಡಿ ಭಾರವಾದ ಮನಸ್ಥಿತಿಯಲ್ಲಿರುವಾಗಲೇ ಗೆಳತಿ ಸುಧಾಶರ್ಮ ಚವತ್ತಿ ಪೋನ್ ಮಾಡಿ ಮರುದಿನ ಸುಚೇಂದ್ರಪ್ರಸಾದರ ’ಪ್ರಪಾತ’ದ ಶೋ ಇದೆ ಹೋಗೋಣ್ವಾ? ಎಂದರು.

ಒಂದು ಪ್ರಪಾತದಿಂದ ಇನ್ನೊಂದು ಪ್ರಪಾತಕ್ಕೆ ಯಾನ ಮಾಡಲು ಮನಸ್ಸನ್ನು ಸಿದ್ಧ ಮಾಡಿಕೊಳ್ಳತೊಡಗಿದೆ. ನಟ ಸುಚೇಂದ್ರಪ್ರಸಾದ್ ರಂಗಭೂಮಿಯ ಹಿನ್ನೆಲೆಯೆಯವರು. ರಂಗಭೂಮಿ ಎಂಬುದು ಎಲ್ಲಾ ಕಲೆಗಳ, ಇನ್ನೊಂದರ್ಥದಲ್ಲಿ ಎಲ್ಲಾ ತೆವಲುಗಳ ಸಂಗಮ ಸ್ಥಳ. ಹಾಗಾಗಿ ಅವರ ಸಾಹಸವನ್ನೊಮ್ಮೆ ನೋಡೋಣವೆಂದುಕೊಂಡು ಭಾನುವಾರ ಮಧ್ಯಾಹ್ನ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ರಿಜಾಯ್ಸ್ ಗೆ ಹೋದೆ.

ಭಾರದ್ವಾಜ ಮುನಿ ಸಂಸ್ಕೃತದಲ್ಲಿ ಬರೆದಿರುವ ವೈಮಾನಿಕ ಶಾಸ್ತ್ರ ಕುರಿತಾದ ’ಯಂತ್ರ ಸಾರಸ್ವ’ ಕ್ಕೆ ಭಾಷ್ಯವನ್ನು ಬರೆದಿರುವ ಅನೇಕಲ್ ಸುಬ್ಬರಾಯ ಶಾಸ್ತ್ರಿ ಕುರಿತಾದ ಚಿತ್ರ ’ಪ್ರಪಾತ’. ಹಾಗೆಂದು ಅದು ಸಾಕ್ಷ್ಯ ಚಿತ್ರವಲ್ಲ. ಸಾಕ್ಷ್ಯ ಚಿತ್ರದಂತೆ ಆರಂಭಗೊಂಡರೂ ಮುಂದೆ ಹಲವು ಆಯಾಮಗಳನ್ನು ಪಡೆದುಕೊಳ್ಳುತ್ತಾ ಎರಡು ಗಂಟೆಗಳ ಪೂರ್ಣ ಪ್ರಮಾಣದ ಚಲನಚಿತ್ರವಾಗಿ ರೂಪಾಂತರ ಪಡೆದಿದೆ. ಇಂತಹ ಚಿತ್ರವನ್ನು ನಿರ್ಮಿಸುವ ಸಾಹಸ ಮಾಡಿದವರು ಮಾರುತಿ ಎಸ್ ಜಡಿ ಅವರ್.

ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಹೊಸೂರು ತಾಲೂಕಿನಲ್ಲಿ೧೮೧೬ರಲ್ಲಿ ಜನಿಸಿದ ಶಾಸ್ತ್ರಿಗಳು ’ಯಂತ್ರ ಸಾರಸ್ವ’ ವನ್ನು ಅಧ್ಯಯನ ಮಾಡಿ ೧೯೦೩ರಲ್ಲೇ ಸ್ವದೇಶಿ ನಿರ್ಮಿತ ವಿಮಾನವನ್ನು ಉಡಾಯಿಸಿದ್ದರೆಂಬ ಪ್ರತಿತಿಯಿದೆ. ಕೇವಲ ಒಂದೇ ಶತಮಾನದಲ್ಲಿ ಐತಿಹ್ಯವಾಗಿ ನಂತರ ದಂತಕಥೆಯಾಗಿ ವಿಸ್ಮೃತಿಗೆ ಸಂದಿದ ಸಾಧಕರಿವರು.

ಇಂಥ ಸಾಧಕರನ್ನು’ ಅವರ ಸಾಧನೆಯನ್ನು ಅನ್ವೇಶಕ ದೃಷ್ಟಿಯಿಂದ ನೋಡಿದ್ದಾರೆ ನಿರ್ದೇಶಕ ಸುಚೇಂದ್ರಪ್ರಸಾದ್. ಶಾಸ್ತ್ರೀಯಂಥ ಮೇರುಸದೃಷ ವ್ಯಕ್ತಿತ್ವದವರನ್ನು ಮತ್ತವರ ಸಾಧನೆಯನ್ನು ನಾವು ಪ್ರಪಾತದಲ್ಲಿ ನಿಂತು ನೋಡುತ್ತಿದ್ದೇವೆ. ಅಥವ ಅವರ ಜ್ನಾನದ ಆಳವನ್ನು ಶಿಖರದ ತುದಿಯಲ್ಲಿ ನಿಂತು ನೋಡುತ್ತಿದ್ದೇವೆ. ಅದು ಬೌದ್ಧಿಕತೆಯ ಪ್ರಪಾತ ಎಂಬುದು ಪ್ರಸಾದ್ ಗ್ರಹಿಕೆ.

ಅಪರೂಪಕ್ಕೆ ಆ ಜ್ನಾನಶಿಖರಗಳನ್ನು ಮುಟ್ಟುವ ಪ್ರಯತ್ನ ಮಾಡಿದವರು ಆ ಜ್ನಾನವನ್ನು ಬೇರೆಯವರಿಗೂ ಹಂಚದೆ ತಮ್ಮಲ್ಲಿಯೇ ಬಚ್ಚಿಟ್ಟುಕೊಳ್ಳುವ ಪ್ರಯತ್ನಿಸುತ್ತಾರೆ; ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಾರೆ. ಅಲ್ಪರಂತೆ ವರ್ತಿಸುತ್ತಾರೆ. ಇಂಥ ಅರೆಬೆಂದವರ ಪಾತ್ರದಲ್ಲಿ ದತ್ತಣ್ಣ, ಕೃಷ್ಣ ಅಡಿಗ, ಶಿವರಾಂ, ವಿದ್ಯಾಮೂರ್ತಿ, ಸೇತುರ್‍ಆಂ ಪಾತ್ರದ ಒಳಹೊಕ್ಕು ಅಭಿನಯಿಸಿದ್ದಾರೆ. ಮಾತ್ರವಲ್ಲ ವರ್ತಮಾನದಲ್ಲಿರುವ ಹಲವರನ್ನು ಅನುಕರಣೆ ಮಾಡಿದ್ದಾರೆ. ಅನ್ವೇಶಕನ ಪಾತ್ರದಲ್ಲಿ ಅಮಾನ್ ಅವರದು ಸಂಯಮದ ಅಬಿನಯ. ಆತನ ವಿದ್ಯಾರ್ಥಿ ಮಿತ್ರನ ಪಾತ್ರದಲ್ಲಿರುವ ಸಂತೋಷ್, ಅಡಿಗರ ’ವರ್ಧಮಾನ’ ಕವನದ ನಾಯಕನನ್ನು ನೆನಪಿಸುತ್ತಾರೆ. ಕೆ.ಎಸ್.ಎಲ್ ಸ್ವಾಮಿ, ಸ್ರೀನಿವಾಸಪ್ರಭು ಸೇರಿದಂತೆ ಪ್ರತಿಯೊಬ್ಬರದ್ದೂ ಸಹಜಾಭಿನಯ. ಚಿತ್ರದ ಒಟ್ಟಂದಕ್ಕೆ ಶಶಿಧರ್.ಕೆ ಅವರ ಕ್ಯಾಮರ ವರ್ಕ್ ಮತ್ತು ಎಡಿಟರ್ ಗಳಾದ ಲಿಂಗರಾಜು ಮತ್ತು ನಾಗೇಶ್ ರ ಕಾಣಿಕೆ ದೊಡ್ಡದು.

’ಪ್ರಪಾತ’ದಲ್ಲಿ ನಿರ್ದೇಶಕರ ಪ್ರತಿಭೆ ಚಿಕ್ಕಚಿಕ್ಕ ಶಶಕ್ತ ತೊರೆಗಳಾಗಿ ಪ್ರಪಾತಕ್ಕೆ ಹರಿದಿದೆ-ಆಹ್ವಾನಿತ ಪ್ರೇಕ್ಷಕರು ಕೂಡಾ ತೊರೆಗಳಾಗಿ ಹರಿದು ಬಂದಿದ್ದಾರೆ. ಆದರೆ ಅವೆಲ್ಲಾ ಒಂದಾಗಿ ಜೀವನದಿಯಾಗಿ ಹರಿದ ಅನುಭವವಾಗುವುದಿಲ್ಲ. ಅದರೂ ಇಷ್ಟೆಲ್ಲಾ ಚಿಂತನೆಗೆ, ವಾದಕ್ಕೆ, ಊಹೆಗೆ ಕಾರಣವಾದ ಈ ಚಿತ್ರವನ್ನು ಖಂಡಿತವಾಗಿಯೂ ಒಮ್ಮೆ ನೋಡಬಹುದು. ಸಧ್ಯದಲ್ಲಿಯೇ ನಿರ್ಧೇಶಕರು ಇದರ ಇನ್ನೊಂದು ಪ್ರದರ್ಶನವನ್ನು ಏರ್ಪಡಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

[ ಕನ್ನಡ ಪ್ರಭದ ಸಾಪ್ತಾಹಿಕ ಪ್ರಭದಲ್ಲಿ ಪ್ರಕಟವಾದ ಬರಹ ]





Monday, May 10, 2010

.....ಎನ್ನನು ಮಾರಿ ಕಾಂಚಾಣವನ್ನು ಕೊಂಡರೇ?






’ಹರಕೆಯ ಕುರಿ’ ಎಂಬುದೊಂದು ನಾಟಕವನ್ನು ಚಂದ್ರಶೇಖರ ಕಂಬಾರರು ೧೯೮೩ರಲ್ಲಿ ಬರೆದಿದ್ದಾರೆ. ಇದರಲ್ಲಿ ರಾಜಕೀಯವೆಂಬುದು ನಮ್ಮ ಮನೆಯ ಪಡಸಾಲೆ, ಅಡುಗೆಮನೆಗಳನ್ನು ನಮಗರಿವಿಲ್ಲದಂತೆ ಆವರಿಸಿಕೊಳ್ಳುತ್ತಿರುವ ಪರಿಯನ್ನು ಸೂಕ್ಷವಾಗಿ ಹಿಡಿದಿಟ್ಟಿದ್ದಾರೆ. ಗಂಡ-ಹೆಂಡತಿಯೆಂಬ ಎರಡೇ ಪಾತ್ರವಿರುವ ಈ ನಾಟಕ ಬದಲಾಗುತ್ತಿರುವ ಮಧ್ಯಮ ವರ್ಗದ ತಳಮಳದ ಜೀವನಶೈಲಿಯನ್ನು ಹಿಡಿದಿಡುವ ಪ್ರಯತ್ನ ಮಾಡಿತ್ತು. ಅನಂತರ ಅದು ಸಿನಿಮಾ ಆಗಿ ರಾಷ್ಟ್ರಪ್ರಶಸ್ತಿಯನ್ನೂ ಪಡೆಯಿತು.

ಈಗ ರಾಜಕೀಯವೆಂಬುದು ಮನೆಯನ್ನು ಮಾತ್ರವಲ್ಲ ಮನಸ್ಸಿನೊಳಗೂ ಪ್ರವೇಶ ಪಡೆದಿದೆ. ಭಾವನೆಗಳನ್ನೂ ಆಳತೊಡಗಿದೆ. ಮನುಷ್ಯ ಸಂಬಂಧಗಳನ್ನು ಹಾಳುಮಾಡತೊಡಗಿದೆ. ಮಾನವೀಯವಾಗಿ ನೋಡಬೇಕಾದ ಘಟನೆಗಳಿಗೂ ರಾಜಕೀಯ ಮೆತ್ತಲಾಗುತ್ತಿದೆ.

ಆಹಾರ ಮತ್ತು ನಾಗರಿಕ ಸರಬರಾಜು ಮಂತ್ರಿಯಾಗಿದ್ದ ಹಾಲಪ್ಪನವರ ಅತ್ಯಾಚಾರ ಪ್ರಕರಣವನ್ನೇ ನೋಡಿ; ಅಲ್ಲಿ ಸಚಿವರು ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆಂದು ಚಂದ್ರಾವತಿ ಎಂಬ ಮಹಿಳೆ ದೂರು ಕೊಟ್ಟಿದ್ದಾರೆ. ಜೊತೆಗೆ ಅತ್ಯಾಚಾರ ನಡೆಯಿತ್ತೆನ್ನಲಾದ ಸಂದರ್ಭದ ವಿಡಿಯೋ ಕ್ಲಿಪ್ಪಿಂಗ್ಸ್ ಅನ್ನು ಸಾಕ್ಶ್ಯವಾಗಿ ನೀಡಲಾಗಿದೆ. ಕೇಸ್ ರಿಜಿಸ್ಟರ್ ಮಾಡಿಕೊಂಡು ಅರೋಪಿಯನ್ನು ಬಂದಿಸಲು ಇಷ್ಟು ಸಾಕು. ಯಾಕೆಂದರೆ ಭಾರತೀಯ ಸಮಾಜದಲ್ಲಿ ಮಹಿಳೆಯೊಬ್ಬಳು ತನ್ನ ಮೇಲೆ ಅತ್ಯಾಚಾರ ನಡೆದಿದೆಯೆಂದು ಸಾರ್ವಜನಿಕವಾಗಿ ಹೇಳಿಕೊಳ್ಳುವುದೇ ಘಟನೆಯ ಗಂಭೀರತೆಯನ್ನು ಸೂಚಿಸುತ್ತದೆ. ಆಕೆಗೆ ಗೊತ್ತಿದೆ. ಭವಿಷ್ಯದಲ್ಲಿ ತನ್ನನ್ನು ಮತ್ತು ತನ್ನ ಮಕ್ಕಳನ್ನು ಸಮಾಜ ತುಚ್ಚವಾಗಿ ಕಾಣುತ್ತದೆಯೆಂದು. ಹಾಗಿದ್ದು ಕೂಡಾ ಆಕೆ ಆ ರಿಸ್ಕ್ ತೆಗೆದುಕೊಳ್ಳುತ್ತಾಳೆಂದರೆ ಅದಕ್ಕೆ ಬಲವಾದ ಕಾರಣವಿರಲೇಬೇಕು. ಆ ಕಾರಣ ಏನೆಂಬುದು ನಿಷ್ಪಕ್ಷಪಾತವಾದ ತನಿಖೆಯಿಂದ ಗೊತ್ತಾಗಬೇಕು.
ದೃಶ್ಯಮಾಧ್ಯಮದಲ್ಲಿ ಬಾಡಿಲಾಂಗ್ವೇಜ್ ಎಂಬುದು ಬಹಳ ಪ್ರಮುಖವಾದುದು. ಹಾಲಪ್ಪ ಅತ್ಯಾಚಾರ ಪ್ರಕರಣದ ವಿಡಿಯೋ ಕ್ಲಿಪ್ಪಿಂಗ್ಸ್ ನೋಡುತ್ತಿದ್ದರೆ ಇದರ ನಿರ್ದೇಶಕ ಆಕೆಯ ಗಂಡ ವೆಂಕಟೇಶಮೂರ್ತಿಯೇ ಇರಬಹುದೆಂಬ ಸಂಶಯ ಮೂಡುತ್ತದೆ. ಮನೆಯ ಮರ್ಯಾದೆಯನ್ನು ಬೀದಿಗೆ ತರುವುದರಿಂದ ಆತನಿಗೇನು ಲಾಭವಿದೆ ಎನ್ನುವ ಪ್ರಶ್ನೆ ಸಹಜ. ಗಾಳಿ ಸುದ್ದಿಯ ಪ್ರಕಾರ ಹಾಲಪ್ಪನ ರಾಜಕೀಯ ಎದುರಾಳಿಗಳ ಜೊತೆ ವ್ಯವಹಾರ ಕುದುರಿಸಿ ಕಾಂಚಾಣವನ್ನು ಬಾಚಿಕೊಂಡಿದ್ದಾನೆ. ಆತನ ರಾಜಕೀಯ ವರ್ಚಸ್ಸು ಹೆಚ್ಚಾಗಿದೆ. ಗಂಡು ಹೆಣ್ಣಿನ ಆಪ್ತ ಸಂಬಂಧ ಕೂಡಾ ವ್ಯಾಪಾರಿಕರಣಗೊಳ್ಳುತ್ತಿರುವ ಪರಿಯಿದು.

ಸಭಾಪರ್ವದಲ್ಲಿ ದ್ರೌಪದಿಯನ್ನು ದುಶ್ಯಾಸನ ರಾಜಸಭೆಗೆ ಎಳೆದು ತಂದಾಗ ಆಕೆ ಅಲ್ಲಿದ್ದವರನ್ನು ಉದ್ದೇಶಿಸಿ ಹೀಗೆನ್ನುತ್ತಾಳೆ ” ಪತಿಗಳೆನ್ನನು ಮಾರಿ ಧರ್ಮ ಸ್ಥಿತಿಯನ್ನು ಕೊಂಡರು” ಈಗ ಚಂದ್ರಾವತಿಯದೂ ಅದೇ ಸ್ಥಿತಿ. ’ಎನ್ನ ಮಾನವನು ಮಾರಿ ಕಾಂಚಣವನು ಕೊಂಡರು’ ಎಂದು ಆಕೆ ಕಣ್ಣೀರು ಸುರಿಸಬೇಕಾಗಿದೆ. ಯಾಕೆಂದರೆ ಈಗ ಆಕೆಯ ಮೇಲೆ ನಿಜವಾದ ಅತ್ಯಾಚಾರ ನಡೆಯುತ್ತಿದೆ. ಮಾದ್ಯಮಗಳು ಆ ಕೆಲಸವನ್ನು ನಿರಂತರವಾಗಿ ನಡೆಸುತ್ತಿವೆ. ದೇಹದ ಮೇಲಾಗುವ ಅತ್ಯಾಚಾರ ತೊಳೆದರೆ ಹೋಗುತ್ತದೆ. ಆದರೆ ಮನಸ್ಸಿನ ಮೇಲಾಗುವ ಅತ್ಯಾಚಾರ? ಬಹುಶಃ ಪದ್ಮಪ್ರಿಯ ನೆನಪಿಗೆ ಬರುತ್ತಾರೆ. ಅದು ಕೊಲೆಯೋ ಆತ್ಮಹತ್ಯೆಯೋ ಎಂಬುದು ಇವತ್ತಿಗೂ ಗೊತ್ತಾಗಿಲ್ಲ. ಅದೊಂದು ”ಮರ್ಯಾದೆ ಕೊಲೆ” ಎಂಬ ಅನುಮಾನ ಆಗಲೂ ಇತ್ತು ಈಗಲೂ ಇದೆ..
ಗಂಡ ಅಂದರೆ ರಕ್ಷಕ. ಅರ್ಜುನನ ಬಿರುದೇ ನೋಡಿ ಮೂರು ಲೋಕದ ಗಂಡ. ರಕ್ಷಕನಾದವನೇ ಭಕ್ಷಕನಾದರೆ? ಮಹಿಳೆಯರನ್ನು ಮಾತೆಯರೆಂದು ಮಾತುಗಳಲ್ಲಿ ಗೌರವಿಸುವ ನಮ್ಮಬಿಜೆಪಿ ಸರಕಾರ ಕೃತಿಯಲ್ಲಿ ಅವರ ಮಾನವನ್ನು ಬೀದಿಯಲ್ಲಿ ಹರಾಜು ಹಾಕುತ್ತಿದೆ. ರಾಜಕೀಯದ ಚದುರಂಗದಾಟದಲ್ಲಿ ಅವರನ್ನು ದಾಳಗಳಂತೆ ಉಪಯೋಗಿಸಿಕೊಳ್ಳುತ್ತಿದೆ. ಶೋಭಾ ಕರಂದ್ಲಾಜೆಯ ಉದಾಹರಣೆಯೇ ಸಾಕಲ್ಲ...! ಯೆಡಿಯೂರಪ್ಪನನ್ನು ಮಣಿಸಲು ಶೋಭಳ ಚಾರಿತ್ಯವಧೆ ಮಾಡಲಾಯ್ತು. ಹಾಲಪ್ಪನನನ್ನು ಕೆಡವಲು ಚಂದ್ರಾವತಿಯ ಬಲಿ ಪಡೆಯಲಾಯಿತೇ? ರಾಜಕಾರಣಿಗಳು ಅಷ್ಟಮದಗಳಿಂದ ಬೀಗುತ್ತಿದ್ದಾರೆ. ಇದಕ್ಕೆ ರೇಣುಕಾಚಾರ್ಯ, ಗಣಿದೊರೆಗಳಿಗಿಂತ ಬೇರೆ ಉದಾಹರಣೆ ಬೇಕೆ?

ಇದನ್ನೆಲ್ಲಾ ಗಮನಿಸುತ್ತಿರುವಾಗ ಮತ್ತೆ ಕುಮಾರವ್ಯಾಸನೇ ನೆನಪಾಗುತ್ತಾನೆ. ”ಅರಸು ರಾಕ್ಷಸ, ಮಂತ್ರಿಯೆಂಬುವ ಮೊರೆವ ಹುಲಿ, ಪರಿವಾರ ಹದ್ದಿನ ನೆರವಿ,ಬಡವರ ಬಿನ್ನಪವವಿನ್ನಾರು ಕೇಳುವರು, ಉರಿವುರಿವುತಿದೆ ದೇಶ ” ಅಧಿಕಾರದ ಚುಕ್ಕಾಣಿ ಹಿಡಿದವರು, ಸಾರ್ವಜನಿಕ ಬದುಕಿನಲ್ಲಿರುವವರು ಸಾಧ್ಯವಾದಷ್ಟೂ ಸಚ್ಛಾರಿತ್ಯ ಹೊಂದಿರಬೇಕು. ಇಲ್ಲವಾದರೆ ಇವರೆಲ್ಲಾ ವಿಷಯ ಲಂಪಟರು ಎಂಬ ಭಾವನೆ ಜನ ಸಾಮಾನ್ಯರಲ್ಲಿ ಮೂಡಿಬಿಡುತ್ತದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಹಾಲಪ್ಪನ ಅತ್ಯಾಚಾರ ಪ್ರಕರಣದಂಥ ಘಟನೆಗಳು ಪದೇ ಪದೇ ನಡೆಯುತ್ತಿದ್ದರೆ, ಅದನ್ನು ಮಾಧ್ಯಮಗಳು ಅತಿರಂಜಿತವಾಗಿ ವರ್ಣಿಸುತ್ತಿದ್ದರೆ, ಅದು ಸಮಾಜದ ಮೇಲೆ ಬೀರಬಹುದಾದ ವ್ಯತಿರಿಕ್ತ ಪರಿಣಾಮವನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ನಮ್ಮ ಮನೆಗೆ ಬರುವ ಪುರುಷ ಅಥಿತಿಗಳನ್ನು ಪತಿಯ ಅನುಪಸ್ಥಿತಿಯಲ್ಲೂ ನಾವು ಗೌರವದಿಂದ ಆಧರಿಸಿ ಸತ್ಕರಿಸುತ್ತೇವೆ. ಅದನ್ನು ಅಕ್ಕಪಕ್ಕದವರು ಅನುಮಾನದಿಂದ ನೋಡುವ ಸಂದರ್ಭ ಬಂದರೆ...?ಬಹುಶಃ ಬಿಜೆಪಿ ಸರಕಾರ ಮಹಿಳೆಯರನ್ನು ಹದಿನೈದನೆ ಶತಮಾನಕ್ಕೆ ಕೊಂಡೊಯ್ಯುತ್ತಿರಬೇಕು.
ಲೇಖನದ ಆರಂಭದಲ್ಲಿ ನಾಟಕಕಾರರನ್ನು ಪ್ರಸ್ತಾಪಿಸಿರುವುದು ಪ್ರಾಸಂಗಿಕವಲ್ಲ; ಉದ್ದೇಶ ಪೂರ್ವಕ. ಯಾಕೆಂದರೆ ಹಿಂದೆಲ್ಲಾ ಅನ್ಯಾಯವಾದಾಗ ನೈತಿಕ ಬೆಂಬಲಕ್ಕಾಗಿ ನಾವು ಸಾಹಿತಿ-ಕಲಾವಿದರತ್ತ ನೋಡುತ್ತಿದ್ದೆವು; ಮಾಧ್ಯಮದ ಬೆಂಬಲ ಕೋರುತಿದ್ದೆವು.ಅವರ ಪ್ರತಿಕ್ರಿಯೆಯನ್ನು ಕಾತರದಿಂದ ನಿರೀಕ್ಷಿಸುತ್ತಿದ್ದೆವು. ಆದರೆ ಇಂದು ಸಾಹಿತಿಗಳು ಮೌನಕ್ಕೆ ಜಾರಿದ್ದಾರೆ. ಪತ್ರಿಕಾರಂಗ ಉಧ್ಯಮವಾಗಿದೆ. ಪತ್ರಕರ್ತರೆಲ್ಲಾ ಮದ್ಯವರ್ತಿಗಳಾಗುತ್ತಿದ್ದಾರೆ.ಸುದ್ದಿಯನ್ನೂ ಔತಣವನ್ನಾಗಿ ನೀಡುತ್ತಿದ್ದಾರೆ. ಅವರೆಲ್ಲರ ಒಂದು ಕೈ ಉಳ್ಳವರ ಜೇಬಿನಲ್ಲಿದೆ. ಕಾಲೊಂದು ರಾಜಕೀಯದಂಗಣದಲ್ಲಿದೆ.

ಮೊನ್ನೆ ಹಾಲಪ್ಪನವರು ರಾಜೀನಾಮೆ ಕೊಟ್ಟ ಮರುದಿನ ಕನ್ನಡದ ಸುದ್ದಿವಾಹಿನಿಯೊಂದು ಅವರ ಸಂದರ್ಶನ ಮಾಡುತ್ತಿತ್ತು. ಸಂದರ್ಶಕನ ಪ್ರಶ್ನೆಗಳಿಗೆ ಮಾಜಿ ಸಚಿವರು ತುಂಬು ಆತ್ಮವಿಶ್ವಾಸದಿಂದ ಉತ್ತರಿಸುತ್ತಿದ್ದರು. ತನ್ನ ರಕ್ಷಣೆಗೆ ಸರಕಾರ ಮತ್ತು ಪಕ್ಷ ಟೊಂಕ ಕಟ್ಟಿ ನಿಂತಿದೆ ಎಂಬುದು ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು. ಹಿಂದಿನ ದಿನ ಪತ್ರಿಕೆಯಲ್ಲಿ ಬಂದ ವರದಿಯ ಬಗ್ಗೆ ಕೇಳಿದಾಗ ”ಬರೆದವರೇನು ಕುಲದೀಪ್ ನಯ್ಯರಾ?” ಎಂದು ಪ್ರಶ್ನಿಸಿಬಿಟ್ಟರು ಮಾಜಿ ಸಚಿವ ಹರತಾಳ್ ಹಾಲಪ್ಪ. ಅದು ಪತ್ರಿಕೋಧ್ಯಮದ ನೈತಿಕತೆಗೆ ಎಸೆದ ಪ್ರಶ್ನೆಯಾಗಿತ್ತು. ಅರೋಪಿ ಸ್ಥಾನದಲ್ಲಿರುವ ರಾಜಕಾರಣಿಯೊಬ್ಬ ಲೈವ್ ಸಂದರ್ಶನವೊಂದರಲ್ಲಿ ಪತ್ರಕರ್ತನೊಬ್ಬನ ಬಗ್ಗೆ ಆ ರೀತಿ ವ್ಯಂಗ್ಯವಾಡುತ್ತಾನೆ ಎಂದರೇ? ಅಪರಾಧಿ ಭಾವದಿಂದ ಕುಗ್ಗಿ ಹೋಗಬೇಕಾದ ಸಂದರ್ಭವದು.

ಹೊಣೆಗಾರಿಕೆಯನ್ನು ಹೊರಬೇಕಾದವರೆ ಹೊಂದಾಣಿಕೆಯನ್ನು ಮಾಡಿಕೊಂಡರೆ ಜನಸಾಮಾನ್ಯರ ಪಾಡೆನು? ದುಡ್ಡು ಎಲ್ಲವನ್ನೂ ಆಳುತ್ತದೆ, ಕೊನೆಗೆ ಹೆಂಡತಿಯ ಶೀಲವನ್ನೂ ಕೂಡಾ ಎಂದಾಗಬಾರದಲ್ಲವೇ?

[ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ]

Saturday, March 27, 2010

ಹಕ್ಕುಗಳ ಅಂಗಳದಲ್ಲಿ ವಿವಾಹ ಪೂರ್ವ ಲೈಂಗಿಕತೆ






ಇಬ್ಬರು ಪ್ರಾಯ ಪ್ರಬುದ್ಧರ ನಡುವಿನ ವಿವಾಹ ಪೂರ್ವ ಲೈಂಗಿಕ ಸಂಬಂಧ ಮತ್ತು ಲಿವಿಂಗ್ ಟುಗೆದರ್ [ಕೂಡಿ ಬಾಳುವಿಕೆ] ಅಪರಾಧವಲ್ಲವೆಂದು ಸುಪ್ರಿಂ ಕೋರ್ಟ್ ಅಭಿಪ್ರಾಯ ಪಟ್ಟಿದೆ.

ಚಿತ್ರ ನಟಿ ಖುಷ್ಬು ತನ್ನ ಮೇಲಿರುವ ೨೨ ಕ್ರಿಮಿನಲ್ ಮೊಕದ್ದಮೆಗಳನ್ನು ವಜಾಗೊಳಿಸಬೇಕೆಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರಿಂ ಕೋರ್ಟ್ ಆಕೆಯ ಮೇಲಿನ ದೂರುಗಳಲ್ಲಿ ಯಾವುದೇ ಹುರುಳಿಲ್ಲ ಎಂದಿದೆ.

೨೦೦೫ರಲ್ಲಿ ತಮಿಳು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಿವಾಹ ಪೂರ್ವ ಲೈಂಗಿಕ ಸಂಬಂಧ ಮತ್ತು ಕನ್ಯತ್ವದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು. ವಿವಾಹ ಪೂರ್ವ ಲೈಂಗಿಕ ಸಂಬಂಧ ತಪ್ಪಲ್ಲ ಎಂಬರ್ಥದಲ್ಲಿ ಮಾತಾಡಿದ್ದರು. ಅದು ಸಂಪ್ರದಾಯವಾದಿಗಳನ್ನು ಕೆರಳಿಸಿತ್ತು. ಜನಪ್ರಿಯ ನಟಿಯಾಗಿದ್ದ ಆಕೆಯ ಹೇಳಿಕೆ ಯುವ ಜನಾಂಗದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಎಂಬುದು ಅವರ ವಾದವಾಗಿತ್ತು. ಅದಕ್ಕಾಗಿ ಆಕೆಯ ಮೇಲೆ ತಮಿಳುನಾಡಿನಾದ್ಯಂತ ೨೨ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಲಾಗಿತ್ತು. ೨೦೦೮ರಲ್ಲಿ ಮದ್ರಾಸ್ ಹೈಕೋರ್ಟ್ ಆಕೆಯ ವಿರುದ್ಧ ತೀರ್ಪು ನೀಡಿತ್ತು. ಅದನ್ನು ಖುಷ್ಬು ಸುಪ್ರಿಂ ಕೋರ್ಟ್ ನಲ್ಲಿ ಪ್ರಶ್ನಿಸಿದ್ದರು.

ಇದಿಗ ಸುಪ್ರಿಂ ಕೋರ್ಟ್ ನ ಮುಖ್ಯ ನ್ಯಾಯಮುರ್ತಿ ಕೆ.ಜೆ. ಬಾಲಕೃಷ್ಣನ್, ದೀಪಕ್ ವರ್ಮ, ಬಿ.ಎಸ್.ಚವಾಣ್ ಅವರನ್ನೊಳಗೊಂಡ ತ್ರೀಸದಸ್ಯ ಪೀಠವು ವಿವಾಹಪೂರ್ವ ಲೈಂಗಿಕ ಸಂಬಂಧ ಮತ್ತು ಲಿವಿಂಗ್ ಟುಗೆದರನ್ನು ಭಾರತೀಯ ಸಂವಿಧಾನದ ಕಲಂ ೨೧ರ ವ್ಯಾಪ್ತಿಯಡಿ ತಂದು ಖುಷ್ಬು ಪರವಾಗಿ ಅಭಿಪ್ರಾಯ ನೀಡಿದೆ. ಕಲಂ ೨೧ ವ್ಯಕ್ತಿಯೊಬ್ಬ ಘನತೆ, ಗೌರವಗಳಿಂದ ಸ್ವತಂತ್ರವಾಗಿ ಬದುಕುವ ಹಕ್ಕನ್ನು ನೀಡುತ್ತದೆ.ವಿವಾಹ ಪೂರ್ವ ಲೈಂಗಿಕತೆಯನ್ನು ಅಪರಾಧವೆಂದು ಪರಿಗಣಿಸುವ ಯಾವುದೇ ಕಾನೂನು ನಮ್ಮಲಿಲ್ಲ. ಅದು ಅವಳ ವೈಯಕ್ತಿಕ ಆಯ್ಕೆ. ಅದವಳ ಬದುಕಿನ ಹಕ್ಕು. ಅದು ಹೇಗೆ ಅಪರಾಧವಾಗುತ್ತದೆ? ಎಂದಿದೆ ನ್ಯಾಯಪೀಠ.

ಅದಕ್ಕವರು ಪುರಾಣದ ಸಮರ್ಥನೆಯನ್ನೂ ನೀಡುತ್ತಾರೆ. ಕೃಷ್ಣ ಮತ್ತು ರಾಧೆಯರ ಸಂಬಂಧ ಲಿವಿಂಗ್ ಟುಗೆದರ್ ಆಗಿತ್ತು ಎಂಬುದು ಅವರ ಅಭಿಪ್ರಾಯ. ಭಾರತಿಯರ ಮನಸ್ಸಿನಲ್ಲಿ ಪರಿಶುಭ್ರ ಪ್ರೇಮಕ್ಕೆ ಸಂವಾದಿಯಾಗಿ ರಾಧಾಕೃಷ್ಣರಿದ್ದಾರೆ ನಿಜ. ಆದರೆ ಅವರು ಪ್ರೇಮಿಗಳಾಗಿದ್ದರೇ ಎಂಬುದು ಚರ್ಚಾಸ್ಪದ ವಿಷಯ. ಯಾಕೆಂದರೆ ಮಹಾಭಾರತದಲ್ಲಿ ರಾಧಾಕೃಷ್ಣರ ಪ್ರಸ್ತಾಪ ಬರುವುದು ಗೋಕುಲದಲ್ಲಿ ಮಾತ್ರ. ಬಾಲಕನಾಗಿದ್ದಾಗ ಕೃಷ್ಣ ಗೋಕುಲ ನಿವಾಸಿಯಾಗಿದ್ದ. ಅಲ್ಲಿ ರಾಧೆಯಿದ್ದಳು. ಆಕೆ ಗಂಡುಳ್ಳ ಗರತಿಯಾಗಿದ್ದಳು. ಆಕೆಗೆ ಮಕ್ಕಳಿದ್ದ ಪ್ರಸ್ತಾಪವಿಲ್ಲ. ಕೃಷ್ಣ ಅಸಾಧ್ಯ ತುಂಟನಾಗಿದ್ದ. ಇಂಪಾಗಿ ಕೊಳಲು ನುಡಿಸುತ್ತಿದ್ದ. ಬಾಲಕನಾಗಿದ್ದಾಗಲೇ ಮಾವ ಕಂಸನನ್ನು ಕೊಲ್ಲಲು ಬಿಲ್ಲಹಬ್ಬದ ನೆಪದಲ್ಲಿ ಮಧುರೆಗೆ ಹೊರಟು ಹೋಗುತ್ತಾನೆ. ಮತ್ತೆಂದೂ ಆತ ಗೋಕುಲಕ್ಕೆ ಮರಳುವುದಿಲ್ಲ. ಕೊಳಲನ್ನೂ ಮುಟ್ಟುವುದಿಲ್ಲ. ಮತ್ತೆ ಅವರು ಕೂಡಿ ಬಾಳಿದ್ದು ಯಾವಾಗ?

ವಿವಾಹಪೂರ್ವ ಲೈಂಗಿಕತೆ ಅಪರಾಧವಲ್ಲ ಹಕ್ಕು ಎಂದಾದರೆ, ಹಕ್ಕು ಇದ್ದಲ್ಲಿ ಕರ್ತವ್ಯವೂ ಇರಬೇಕಲ್ಲವೇ? ಕರ್ತವ್ಯ ಎಂದರೆ ಹೊಣೆಗಾರಿಕೆ. ಜೊತೆಯಾಗಿ ಬದುಕಿದ ಆ ಜೋಡಿಗೆ ಅಪ್ಪಿತಪ್ಪಿ ಮಗುವಾದರೆ ಅದನ್ನು ಸಾಕುವ ಜವಾಬ್ದಾರಿ ಯಾರದು? ಗಂಡು ವಿಶ್ವಾಮಿತ್ರ ಹಸ್ತ ತೋರಿಸಿದರೆ ಹೆಣ್ಣು ತನಗೆ ಅನ್ಯಾಯವಾಗಿದೆಯೆಂದು ಗಂಡಿನ ಮನೆ ಮುಂದೆ ಧರಣಿ ಕೂರುತ್ತಿದ್ದಳು; ಪೋಲಿಸ್ ಸ್ಟೇಷನ್ ಮೆಟ್ಟಲೇರುತ್ತಿದ್ದಳು. ಕಾನೂನು ಅವಳ ನೆರವಿಗೆ ಬರುತ್ತಿತ್ತು. ಸಮಾಜ ಅನುಕಂಪ ತೋರುತ್ತಿತ್ತು. ಆದರೆ ಇನ್ನು ಮುಂದೆ ಲೈಂಗಿಕ ಶೋಷಿತಳೆಂಬ ಪದಕ್ಕೆ ಅರ್ಥವಿರಲಾರದು. ಹೆಣ್ಣು ಗಂಡಿನ ಭೋಗದ ವಸ್ತು ಎಂಬುದಕ್ಕೆ ಇನ್ನೂ ಹೆಚ್ಚು ಪುಷ್ಟಿ ದೊರೆಯಬಹುದು. ಒಬ್ಬಳೊಡನೆ ಚಕ್ಕಂದವಾಡುತ್ತಲೇ ಮತ್ತೊಬ್ಬಳನ್ನು ಮದುವೆಯಾಗಬಹುದು. ಅಂತೂ ಹಾದರಕ್ಕೆ ಕಾನೂನಿನ ಅನುಮತಿ ದೊರಕಿದಂತಾಗಿದೆ.

ವಿವಾಹ ಪೂರ್ವ ಲೈಂಗಿಕತೆ ಮತ್ತು ಲಿವಿಂಗ್ ಟುಗೆದರ್ ಮೆಲ್ನೋಟಕ್ಕೆ ಒಂದರಂತೆ ಕಂಡರೂ ಇವೆರಡಕ್ಕೂ ಅಪಾರ ಅಂತರವಿದೆ. ವಿವಾಹ ಪೂರ್ವ ಲೈಂಗಿಕ ಸಂಬಂಧದಲ್ಲಿ ದೈಹಿಕ ತೃಷೆಯೇ ಮುಖ್ಯವಾಗಿರುತ್ತದೆ. ಭಾವನಾತ್ಮಕ ಸಂಬಂಧಕ್ಕೆ ಎಡೆಯಿರುವುದಿಲ್ಲ. ಅಥವಾ ಗಂಡು ತನ್ನ ಮರಳು ಮಾತುಗಳಿಂದ ಭಾವುಕ ಸಂಬಂಧದೊಳಗೆ ಕೆಡವಿಕೊಳ್ಳಬಹುದು. ಹೆಣ್ಣಿನ ಅಸಹಾಯಕತೆಯನ್ನು, ಮುಗ್ಧತೆಯನ್ನು ಗಂಡು ದುರ್ಭಳಕೆ ಮಾಡಿಕೊಳ್ಳಬಹುದು. ಹಸಿ ಹಸಿಯಾಗಿ ಹೇಳುವುದಾದರೆ ಇದನ್ನೇ ’ಇಟ್ಟುಕೊಳ್ಳುವುದು’ ಎನ್ನಬಹುದು. ಆದರೆ ಲಿವಿಂಗ್ ಟುಗೆದರಿನಲ್ಲಿ ಗಂಡು ಹೆಣ್ಣು ಇಬ್ಬರು ವಿದ್ಯಾವಂತರು. ಭಾವುಕವಾಗಿ ಬಂದಿಸಲ್ಪಟ್ಟವರು.ಇವರಲ್ಲಿ ಸೆಕ್ಸ್ ಮುಖ್ಯವಲ್ಲ. ಪರಸ್ಪರ ನಂಬಿಕೆ ಮುಖ್ಯ. ಆದರೆ ಎರಡೂ ಸಂಬಂಧಗಳೂ ಮದುವೆಯೆಂಬ ಸಂಸ್ಥೆಗೆ ಬೀಳುವ ಹೊಡೆತಗಳೇ. ಕೌಟುಂಬಿಕ ಚೌಕಟ್ಟುಗಳಿಂದ ಜಾರಿ ಬಿದ್ದ ಇಟ್ಟಿಗೆಗಳೇ.

ನಿಜ. ನ್ಯಾಯ ಪೀಠ ತನ್ನ ಅಭಿಪ್ರಾಯವನ್ನಷ್ಟೇ ಹೇಳಿದೆ. ಅಂತಿಮ ತೀರ್ಪು ಕಾಯ್ದಿರಿಸಿದೆ. ನ್ಯಾಯ ಪೀಠವೇನಾದರೂ ಖುಷ್ಬು ವಿರುದ್ಧವಾಗಿ ತೀರ್ಪು ನೀಡಿದ್ದರೆ ಧಾರ್ಮಿಕ ಮೂಲಭೂತವಾದಿಗಳು ವಿಜೃಂಭಿಸುತ್ತಿದ್ದರು. ಹಾಗಾಗಲಿಲ್ಲ. ಒಳ್ಳೆಯದೇ. ಆದರೆ ಕೋರ್ಟ್ ಅಭಿಪ್ರಾಯವನ್ನೇ ಯುವ ಜನಾಂಗ ತಮ್ಮ ನಡವಳಿಕೆಗಳಿಗೆ ಗುರಾಣಿಯನ್ನಾಗಿ ಬಳಸಿಕೊಂಡರೆ? ಆ ಸಾಧ್ಯತೆ ಇದ್ದೇ ಇದೆ. ಆದರೂ ಅಷ್ಟು ಕಳವಳಪಡಬೇಕಾದ ಅವಶ್ಯಕತೆಯಿಲ್ಲ. ಮೈಯೇ ಬೇರೆ, ಮನಸ್ಸೇ ಬೇರೆ. ದೈಹಿಕ ವಾಂಛೆಗಳೇ ಮನಸ್ಸನ್ನು ದೀರ್ಘ ಕಾಲ ಆಳಲಾಗದು.

ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಟಿ ನೀನಾಗುಪ್ತ ಮದುವೆಯಾಗದೆ ಮಗು ಪಡೆದಾಗ ಸಮಾಜ ಬೆಚ್ಚಿ ಬಿದ್ದಿತ್ತು. ನಮ್ಮ ಯುವತಿಯರಿಗೆ ಆಕೆ ಮಾದರಿಯಾಗಿಬಿಟ್ಟರೆ ಎಂದು ಭಯ ಪಟ್ಟಿತು. ಆದರೆ ಹಾಗೇನೂ ಆಗಲಿಲ್ಲ. ಅಲ್ಲೊಬ್ಬರು ಇಲ್ಲೊಬ್ಬರು ಆ ದೈರ್ಯ ಮಾಡಿದರಷ್ಟೆ. ಭಾರತಿಯ ಸಮಾಜ ತುಂಬಾ ವಿಶಿಷ್ಟವಾದುದು. ಇಲ್ಲಿಯ ಸಂಸ್ಕೃತಿ,ನೈತಿಕ ಮೌಲ್ಯಗಳು ಜನರ ಜೀನ್ಸ್ ನಲ್ಲೇ ಪ್ರೋಗ್ರಾಮ್ ಆಗಿದೆ. ಆದರೆ ನೈತಿಕತೆಯೇ ಬೇರೆ ಕಾನೂನೇ ಬೇರೆ.

ನಮ್ಮ ಸಮಾಜ ಬದಲಾಗುತ್ತಿದೆ. ನಮ್ಮ ಸರಕಾರಗಳು, ನಮ್ಮ ನ್ಯಾಯಾಂಗ ವ್ಯವಸ್ಥೆ ಅದನ್ನು ಗುರುತಿಸಿದೆ. ಕಳೆದ ವರ್ಷ ಜುಲೈನಲ್ಲಿ ದೆಹಲಿ ಹೈಕೋರ್ಟ್, ಇಬ್ಬರು ವಯಸ್ಕರು ಪರಸ್ಪರ ಸಮ್ಮತಿಯಿಂದ ಸಲಿಂಗಕಾಮದಲ್ಲಿ ತೊಡಗುವುದು ಅಪರಾಧವಲ್ಲ ಎಂದು ತೀರ್ಪು ನೀಡಿತ್ತು. ಅದಕ್ಕೂ ಹಿಂದೆ ೨೦೦೮ರ ಅಕ್ಟೋಬರ್ ನಲ್ಲಿ ಮಹಾರಾಷ್ಟ್ರ ಸರಕಾರವು, ಶಾಸ್ತ್ರೋಕ್ತ ಅಥವಾ ಕಾನೂನು ಬದ್ಧ ವಿಧಿ ವಿಧಾನಗಳ ಹೊರತಾಗಿಯೂ ಪುರುಷ ಮತ್ತು ಮಹಿಳೆ ಸಕಾರಣಗಳಿಂದಾಗಿ ದೀರ್ಘ ಕಾಲ ಒಟ್ಟಿಗೆ ವಾಸಿಸುತ್ತಿದ್ದರೆ ಅಂತಹ ಪ್ರಕರಣಗಳಲ್ಲಿ ಅವರನ್ನು ದಂಪತಿಗಳೆಂದು ಮಾನ್ಯ ಮಾಡಬೇಕೆಂದು ಹೇಳಿತ್ತು.

ಧಾರ್ಮಿಕ ಕಟ್ಟುಪಾಡುಗಳು ಸುಸಂಸ್ಕೃತ, ಸ್ವಸ್ಥ ಸಮಾಜ ಕಟ್ಟಿಕೊಳ್ಳುವ ಕಾಲಘಟ್ಟದಲ್ಲಿ ರಚನೆಗೊಂಡಂತವು.ಅವುಗಳು ಮನುಷ್ಯ ಸರ್ವಕಾಲದಲ್ಲೂ ಹೀಗೆಯೇ ಇರಬೇಕೆಂದು ನಿರ್ದೇಶಿಸುತ್ತದೆ. ಆದರೆ ಸಮಾಜಿಕ ನಡವಳಿಕೆಗಳನ್ನು ಗಮನಿಸಿಕೊಂಡು, ಅರ್ಥೈಸಿಕೊಂಡು ಕಾನೂನನ್ನು ರೂಪಿಸಲಾಗುತ್ತದೆ. ವಿವಾಹದಿಂದ ಹೊರತಾದ ಸಂಬಂಧದಿಂದ ಹುಟ್ಟಿದ ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಪಾಲು ಕೊಡಬೇಕೆಂದು ಸುಪ್ರಿಂಕೋರ್ಟ್ ಈ ಹಿಂದೆ ತೀರ್ಪು ನೀಡಿದೆ. ಕಾನೂನೇ ಬೇರೆ, ನೈತಿಕತೆಯೇ ಬೇರೆ.

ಈಗ ಖುಷ್ಬು ಪ್ರಕರಣದಲ್ಲಿ ಬದಲಾಗುತ್ತಿರುವ ಸಮಾಜವನ್ನು, ಜನರ ಜೀವನ ಶೈಲಿಯನ್ನು, ಯುವ ಜನಾಂಗದ ಮನಸ್ಥಿತಿಯನ್ನು ಗಮನಿಸಿ ವಿವಾಹ ಪೂರ್ವ ಲೈಂಗಿಕತೆ ಅಪರಾಧವಲ್ಲ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಇದು ಧಾರ್ಮಿಕ ಕಟ್ಟುಪಡುಗಳಿಗಿಂತಲೂ ಬದುಕು ಮಿಗಿಲಾದುದು ಎಂಬುದನ್ನು ದೃಢಪಡಿಸುತ್ತದೆ.

[ಮಾ.೨೬ ರಂದು ಪ್ರಜಾವಾಣಿಯಲ್ಲಿ ಪ್ರಕಟವಾದ ಬರಹ ]

Thursday, March 25, 2010

ಮೀಸಲಾತಿ; ಸ್ತ್ರೀ ಕುಲಂ ತಾನೊಂದೆ ವಲಂ




ಶಾಸನ ಸಭೆಗಳಲ್ಲಿ ಮಹಿಳಾ ಮೀಸಲಾತಿ ವಿಧೇಯಕಕ್ಕೆ ಸಂಬಂಧಿಸಿದಂತೆ ಸಂವಿಧಾನ ತಿದ್ದುಪಡಿಗೆ ರಾಜ್ಯಸಭೆ ಒಪ್ಪಿಗೆ ನೀಡಿದೆ. ಆದು ಶಾಸನ ರೂಪ ಪಡೆಯಲು ಲೋಕಸಭೆಯ ಅಂಗೀಕಾರ ಮುದ್ರೆ ಬೇಕು. ಅದು ಸಿಗಬಹುದೆ? ಎಂಬುದೀಗ ಪ್ರಶ್ನೆ.

ಬಿಹಾರದ ಅರ್ ಜೆಡಿಯ ಲಾಲೂ ಪ್ರಸಾದ್ ಯಾದವ್, ಉತ್ತರಪ್ರದೇಶದ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಮಹಾರಾಷ್ಟ್ರದ ನ್ಯಾಷನಲಿಸ್ಟ್ ಕಾಂಗ್ರೇಸ್ ಪಾರ್ಟಿಯ ಶರದ್ ಪವಾರ್ ಮತ್ತು ಉತ್ತರ ಪ್ರದೇಶದ ಬಹುಜನ ಸಮಾಜ ಪಕ್ಷದ ಮಾಯಾವತಿ ಮಹಿಳಾ ಮೀಸಲಾತಿ ಮಸೂದೆಗೆ ತಮ್ಮ ವಿರೋಧವಿದೆ ಎಂದು ಡಂಗೂರ ಸಾರಿದ್ದಾರೆ. ತೃಣಮೂಲ ಕಾಂಗ್ರೇಸಿನ ಮಮತಾ ಬ್ಯಾನರ್ಜಿ ಇವರಿಗೆ ಸಾಥ್ ನೀಡಿದ್ದಾರೆ.

ಅವರೆಲ್ಲರ ಒಕ್ಕೊರಲ ವಾದ ಏನೆಂದರೆ; ಮಹಿಳಾ ಮೀಸಲಾತಿಯಲ್ಲಿ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರಿಗೆ ಒಳಮೀಸಲಾತಿ ನೀಡಬೇಕು. ಇಲ್ಲವಾದರೆ ಈ ಸೌಲಭ್ಯವನ್ನು ಮೇಲ್ವರ್ಗದ ಪ್ರಭಾವಿ ಮಹಿಳೆಯರು ಮಾತ್ರ ಪಡೆದುಕೊಳ್ಳುತ್ತಾರೆ. ಮಹಿಳಾ ವಿಧೇಯಕದ ಸದುದ್ಧೇಶದ ದುರುಪಯೋಗವಾಗುತ್ತದೆ. ಯೋಚಿಸತಕ್ಕ ವಾದವೇ.

ಹೌದು, ಈ ವಿಧೇಯಕದ ನೆರವಿಲ್ಲದೆಯೂ ಬಹುತೇಕ ರಾಜಕೀಯ ಪಕ್ಷಗಳು ತಮ್ಮ ಕುಟುಂಬದ, ಆಪ್ತ ವರ್ಗದ ಮಹಿಳೆಯರನ್ನು ರಾಜಕೀಯಕ್ಕೆ ಎಳೆದು ತಂದಿದ್ದಾರೆ. ಎಳೆದು ತಂದಿದ್ದಾರೆ ಎಂದು ಯಾಕೆ ಹೇಳುತ್ತಿದ್ದೇನೆಂದರೆ ಆ ಮಹಿಳೆಯರನ್ನು ಸೂತ್ರದ ಗೊಂಬೆಗಳನ್ನಾಗಿಸಿಕೊಂಡು ಗಂಡಸರು ಅದಿಕಾರ ಚಲಾಯಿಸುತ್ತಿದ್ದಾರೆ. ಇದಕ್ಕೆ ಮಹಿಳಾ ಮೀಸಲಾತಿಯನ್ನು ವಿರೋಧಿಸುತ್ತಿರುವ ಲಾಲೂಗಿಂತ ಬೇರೆ ಉದಾಹರಣೆ ಬೇಕೆ? ಅನಕ್ಷರಸ್ಥ ಪತ್ನಿಗೂ ಮುಖ್ಯಮಂತ್ರಿ ಪದವಿ ದಯಪಾಲಿಸಿದ ಮಹಾನ್ ವ್ಯಕ್ತಿ ಇವರು! ಮುಲಾಯಂ ಸಿಂಗ್ ಯಾದವ್ ಏನು ಕಮ್ಮಿಯಿಲ್ಲ ತಮ್ಮ ಸೊಸೆಯನ್ನು ಸಂಸತ್ತಿಗೆ ಕಳುಹಿಸಿದವರಿವರು. ಇವರನ್ನೇ ಮೇಲ್ಪಂಕ್ತಿಯಾಗಿಸಿಕೊಂಡು ಪ್ರಭಾವಿ ರಾಜಕಾರಣಿಗಳು ತಮ್ಮ ಕುಟುಂಬದ ಮಹಿಳಾ ಸದಸ್ಯರನ್ನು, ಗೆಳತಿಯರನ್ನು, ಪ್ರೇಯಸಿಯರನ್ನು ಶಾಸನ ಸಭೆಗಳಿಗೆ ಆರಿಸಿ ಕಳುಹಿಸಬಹುದೆಂಬ ಅನುಮಾನ ಜನ ಸಾಮಾನ್ಯರಿಗೆ ಇದ್ದೇ ಇದೆ.

ಆದರೆ, ಭಾರತದ ಪುರಾಣ, ಇತಿಹಾಸಗಳನ್ನು ಗಮನಿಸಿದರೆ ಎಲ್ಲಾ ವರ್ಗದ ಮಹಿಳೆಯರು ಒಂದೇ, ಅವರೆಲ್ಲಾ ಶೋಷಿತರು. ನಮ್ಮ ಶ್ರೇಣಿಕೃತ ಸಮಾಜ ವ್ಯವಸ್ಥೆಯಲ್ಲಿ ಅಂತ್ಯಜರು ಹೇಗೆ ಗುಲಾಮರಾಗಿದ್ದರೋ ಹಾಗೆಯೇ ಉತ್ತಮ ಕುಲದ ಸ್ತ್ರೀಯರಿಗೂ ಸ್ವಂತ ಅಸ್ತಿತ್ವವಿರಲಿಲ್ಲ. ಆದರೂ ಕ್ರೌರ್ಯ ತುಂಬಿದ ಸಮಾಜ ವ್ಯವಸ್ಥೆಯಲ್ಲಿ ಮಾನವೀಯತೆಯನ್ನು ತೋರಿದವರು ಅವರೇ. ಅದಕ್ಕೆ ಬೇಕಾದಷ್ಟು ಉದಾಹರಣೆಗಳನ್ನು ಹೆಕ್ಕಿ ತೆಗೆಯಬಹುದು. ಚಾವಡಿಯಲ್ಲಿ ನಡೆಯುವ ಕ್ರೌರ್ಯಕ್ಕೆ ಹಿತ್ತಿಲ ಬಾಗಿಲಲ್ಲಿ ಸಾಂತ್ವನ ಸಿಗುತ್ತಿತ್ತು. ಮನೆಯೊಡತಿ ಆಳುಮಗನ ಸಂಕಷ್ಟಗಳಿಗೆ ತಾಯಾಗುತ್ತಿದ್ದಳು.

ಅಷ್ಟು ದೂರದ ಮಾತೇಕೆ, ಮೊನ್ನೆ ರಾಜ್ಯಸಭೆಯಲ್ಲಿ ಮಹಿಳಾ ಮೀಸಲು ವಿಧೇಯಕ ಅಂಗೀಕಾರ ಪಡೆದೊಡನೆ ಎಲ್ಲಾ ಸದಸ್ಯರೂ ಪಕ್ಷಭೇದ ಮರೆತು ಸಂತಸದಿಂದ ಪರಸ್ಪರ ಅಭಿನಂಧಿಸಿಕೊಳ್ಳಲಿಲ್ಲವೇ? ಅದು ತೋರಿಕೆಯದಂತೂ ಅಗಿರಲಿಕ್ಕಿಲ್ಲ. ಯಾಕೆಂದರೆ ಅವರು ಆ ಸ್ಥಾನಕ್ಕೆ ಏರಬೇಕಾದರೆ ತಮ್ಮದೇ ಪಕ್ಷದವರು ಸೇರಿದಂತೆ ಪುರುಷ ರಾಜಕಾರಣಿಗಳು ಒಡ್ಡಿದ ಸವಾಲುಗಳು, ರಚಿಸಿದ ಷಡ್ಯಂತರಗಳು ನೆನಪಿಗೆ ಬಂದಿರಬಹುದು. ಇಂಥ ಏಕತ್ವದ ಮನಸ್ಸನ್ನು ಒಡೆಯುವ ಪ್ರಯತ್ನವನ್ನು ಲಾಲೂತ್ರಯರು ನಡೆಸುತ್ತಿದ್ದರೇನೋ ಎಂಬ ಗುಮಾನಿ ನನಗೆ.

‘ಒಲ್ಲದ ಗಂಡಂಗೆ ಮೊಸರಲ್ಲಿ ಕಲ್ಲಂತೆ’ ಮಹಿಳಾ ಮೀಸಲಾತಿಯನ್ನು ವಿರೋಧಿಸುವವರಿಗೆ ’ಒಳಮೀಸಲಾತಿ ಬೇಕು’ ಎಂಬುದೊಂದು ಪಿಳ್ಳೆ ನೆವ. ಇಲ್ಲವಾದರೆ ಅವರವರ ಪಕ್ಷಗಳಲ್ಲೇ ಮಹಿಳೆಯರನ್ನು ಮುಂದಕ್ಕೆ ತರಬಹುದಲ್ಲ. ಅವರೇ ಆಂತರಿಕ ಮೀಸಲಾತಿ ಅಳವಡಿಸಿಕೊಳ್ಳಬಹುದಲ್ಲಾ. ಅವರು ಹಾಗೆ ಮಾಡಲಾರರು. ಮಹಿಳೆಯರು ಬರೀಯ ಕಾರ್ಯಕರ್ತರಾಗಿಯೇ ಉಳಿಯಬೇಕು. ಮೆರವಣಿಗೆ, ಪ್ರತಿಭಟನೆಗಳಿಗೆ ಜನ ಬೇಕಲ್ಲಾ..ಪುರುಷ ರಾಜಕಾರಣಿಗಳಿಗಿರೊದು ಮೂಲತಃ ಭಯ. ಮಹಿಳೆಯ ಕರ್ತೃತ್ವ ಶಕ್ತಿಯ ಭಯ. ಅವರನ್ನು ಎಷ್ಟೇ ತುಳಿದರೂ ಅವರು ಅಲ್ಲಿಂದಲೇ ಜೀವಶಕ್ತಿಯನ್ನು ತುಂಬಿಕೊಳ್ಳುತ್ತಾರೆ. ಜನಾನುರಾಗ ಗಳಿಸುತ್ತಾರೆ. ಒಂದು ವೇಳೆ ಅವರಿಗೆ ಮೀಸಲಾತಿ ದೊರಕಿಬಿಟ್ಟರೆ ತಾವು ನಿರುದ್ಯೋಗಿಗಳಾಗುವ ಭಯ. ಆ ಭಯವೇ ರಾಜ್ಯಸಭಾ ಸದಸ್ಯರೊಬ್ಬರ ಬಾಯಿಂದ ’ಮಸೂದೆಗೆ ಒಪ್ಪಿಗೆ ನೀಡುವುದೆಂದರೆ ಬಲಿದಾನ ಅಥವಾ ಆತ್ಮಹತ್ಯೆ ಮಾಡಿಕೊಂಡಂತೆ’ ಎಂದು ಹೇಳಿಸುತ್ತದೆ.

ಲೋಕಸಭೆಯ ಒಟ್ಟು ಸಂಖ್ಯೆ ೫೪೩. ಇದರಲ್ಲಿ ಮಹಿಳೆಯರು ಕೇವಲ ೫೯. ಮೀಸಲಾತಿ ದೊರೆತರೆ ಮಹಿಳೆಯರ ಸಂಖ್ಯೆ ೧೮೦ಕ್ಕೇರುತ್ತದೆ. ಕರ್ನಾಟಕದಲ್ಲಿ ವಿಧಾನಸಭೆಯ ಸಂಖ್ಯಾಬಲ ೨೨೪. ಮಹಿಳಾ ಶಾಸಕರ ಸಂಖ್ಯೆ ಕೇವಲ ೫. ಮೀಸಲಾತಿ ದೊರಕಿದರೆ ಅದು ೭೪ಕ್ಕೇರುತ್ತದೆ. ದೇಶದ೨೮ ರಾಜ್ಯಗಳಲ್ಲಿನ ಒಟ್ಟು ಶಾಸಕರು,೪೦೩೦. ಇದರಲ್ಲಿ ಮಹಿಳೆಯರ ಸಂಖ್ಯೆ ಕೇವಲ ೩೧೧. ಮೀಸಲಾತಿ ದೊರಕಿದರೆ ಇವರ ಸಂಖ್ಯೆ ೧೩೩೦ಕ್ಕೇರುತ್ತದೆ.

ಪ್ರಜಾಪ್ರಭುತ್ವದಲ್ಲಿ ಸಂಖ್ಯಾಬಲವೇ ಶಕ್ತಿಯುತವಾದುದು. ಶಾಸನ ಸಭೆಗಳಲ್ಲಿ ಮಹಿಳೆಯರ ಬಲ ಹೆಚ್ಚಿದರೆ ಅವರು ಮಹಿಳಾ ಸಮಸ್ಯೆಗಳಿಗೆ ಧ್ವನಿಯಾಗಬಲ್ಲರು. ಪುರುಷ ಜಗತ್ತಿಗೆ ಅರ್ಥವಾಗದ ಹಲವಾರು ಸಮಸ್ಯೆಗಳು ಮಹಿಳೆಯಲ್ಲಿವೆ. ಅವನ್ನು ಮಹಿಳಾ ನೆಲೆಯಿಂದಲೇ ನೋಡಬೇಕಾಗುತ್ತದೆ; ಅದನ್ನು ಮಹಿಳೆ ಮಾತ್ರ ಅರ್ಥ ಮಾಡಿಕೊಳ್ಳಬಲ್ಲಳು. ಮೊನ್ನೆ ಮೊನ್ನೆ ಘಟಿಸಿದ ನೆರೆಹಾವಳಿ ದುರಂತವನ್ನೇ ನೋಡಿ; ಸಂತ್ರಸ್ತರನ್ನು ನೋಡಲು ನಮ್ಮ ಘನ ಸರಕಾರದ ಮುಖ್ಯಮಂತ್ರಿಗಳು, ಸಚಿವರು, ಅಧಿಕಾರಿ ವರ್ಗ ಎಲ್ಲವೂ ಅಲ್ಲಿಗೆ ಹೋಗಿತ್ತು. ಆದರೆ ಅವೆಲ್ಲಾ ಮಾನವೀಯವಾಗಿ ವರ್ತಿಸಿತ್ತಾ ಎಂಬುದು ಪ್ರಶ್ನಾರ್ಹ. ಆದರೆ ಹಂಪೆಯ ಕನ್ನಡ ವಿ.ವಿಯ ಮಹಿಳಾ ಅಧ್ಯಯನ ಸಂಸ್ಥೆಯ ತಂಡವೊಂದು ಅಲ್ಲಿಗೆ ಹೋಗಿ ಪರಿಸ್ಥಿತಿಯ ಅವಲೋಕನ ನಡೆಸಿ ವರದಿಯನ್ನು ಸಿದ್ದಪಡಿಸಿತು. ಅದರಲ್ಲಿ ೧೦ ಅಡಿ ಅಗಲ ೧೫ ಅಡಿ ಉದ್ದದ ಶೆಡ್ಡುಗಳಲ್ಲಿ ಮಹಿಳೆಯರು, ಬಾಣಂತಿಯರು, ಬಾಲಕಿಯರು ಅನುಭವಿಸುತ್ತಿದ್ದ ಮಾನಸಿಕ ಮತ್ತು ದೈಹಿಕ ಹಿಂಸೆಗಳ ವಿವರವನ್ನು ನೀಡಲಾಗಿದೆ. ಮಳೆಯ ಹೊಡೆತಕ್ಕೆ ಸಿಲುಕಿ ಎಲ್ಲವನ್ನು ಬಿಟ್ಟು ಪ್ರಾಣ ಉಳಿಸಿಕೊಳ್ಳಲು ಉಟ್ಟ ಬಟ್ಟೆಯಲ್ಲಿ ಓಡಿ ಬಂದಿದ್ದ ಮಹಿಳೆಯರು ತಮ್ಮ ಮಾಸಿಕ ಋತುಸ್ರಾವವನ್ನು ತಡೆಯುವುದಕ್ಕಾಗಿ ಬಟ್ಟೆಯಿಲ್ಲದೆ ಸಂಕಟಪಡುತ್ತಿದ್ದ ವಿಚಾರ ಒಬ್ಬ ಪುರುಷನ ಮನಸ್ಸಿಗೆ ಇಳಿಯಲು ಸಾಧ್ಯವೇ?. ಅದು ಮಹಿಳೆಗೆ ಮಾತ್ರ ಅರ್ಥವಾಗುವ ಸಂಗತಿ. ಲೇಖಕಿ ನಾಗವೇಣಿಯವರಿಗೆ ಒಮ್ಮೆ ಮಹಿಳಾ ಖೈದಿಗಳನ್ನು ಭೇಟಿ ಮಾಡುವ ಸಂದರ್ಭ ಬಂದಿತ್ತು. ಆಗ ಅಲ್ಲಿರುವ ಖೈದಿಗಳು ’ಇನ್ನೊಮ್ಮೆ ಬಂದಾಗ ಒಂದಷ್ಟು ಹಳೆಯ ಕಾಟನ್ ಬಟ್ಟೆಗಳನ್ನು ತರ್ತೀರಾ’ ಎಂದು ಕೇಳಿಕೊಂಡಿದ್ದರಂತೆ.

ಮಹಿಳೆಯರಿಗೆ ಮೀಸಲಾತಿ ದೊರಕಿದರೆ ಶಾಸನ ಸಭೆಗಳಲ್ಲಿ ಸಾಮಾಜಿಕ ಸಮಸ್ಯೆಗಳು ಹೆಚ್ಚು ಅರ್ಥಪೂರ್ಣವಾಗಿ ಚರ್ಚೆಯಾಗಬಹುದು. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ, ವರದಕ್ಷಿಣೆ ಪಿಡುಗು, ಕೌಟುಂಬಿಕ ಹಿಂಸೆ, ಕುಡಿಯುವ ನೀರು, ಶೌಚಾಲಯ ನಿರ್ಮಾಣದಂತ ಮೂಲಭೂತ ಸಮಸ್ಯೆಗಳ ಚರ್ಚೆಯಲ್ಲಿ ಪಕ್ಷ ಬೇಧ ಮರೆತು ಮಹಿಳೆಯರು ಪಾಲ್ಗೊಳ್ಳಬಹುದು. ರೈತರ ಸಮಸ್ಯೆಗಳನ್ನು ಹೆಚ್ಚು ಮಾನವೀಯವಾಗಿ ಆಲಿಸಬಹುದು. ಯಾಕೆಂದರೆ ಕೃಷಿಯನ್ನು ಕಂಡು ಹಿಡಿದವಳು ಮಹಿಳೆಯೇ. ಯಡಿಯೂರಪ್ಪನವರ ಪತ್ನಿ ಮೈತ್ರಾದೇವಿ, ಉಡುಪಿ ಶಾಸಕ ರಘುಪತಿಭಟ್ ಪತ್ನಿ ಪದ್ಮಪ್ರಿಯ ಸೇರಿದಂತೆ ಹಲವು ಆತ್ಮಹತ್ಯೆಗಳ ನಿಜ ಕಾರಣಗಳು ಗೊತ್ತಾಗಬಹುದು. ಕರ್ನಾಟಕದಲ್ಲಂತೂ ಶೋಭಾ ಕರಂದ್ಲಾಜೆಯಂತ ಮಹಿಳೆ ಪಕ್ಷಕ್ಕಿಬ್ಬರಿದ್ದರೂ ಸಾಕು, ಸರಕಾರಕ್ಕೆ ಮೂಗುದಾರ ಹಾಕಬಹುದು. ಮುಖ್ಯವಾಗಿ ರಾಜಕೀಯ ಅಪರಾಧಿಕರಣ ಕಡಿಮೆಯಾಗಬಹುದು. ನಮ್ಮ ದೇಶದಲ್ಲಿ ಹಲವಾರು ಮಹಿಳೆಯರಿಗೆ ಮುಖ್ಯಮಂತ್ರಿ ಸ್ಥಾನ ಲಭಿಸಿದೆ. ಆದರೆ ಮಹಿಳೆಯೊಬ್ಬಳು ಹಣಕಾಸು ಮತ್ತು ಗೃಹ ಇಲಾಖೆಯನ್ನು ನಿರ್ವಹಿಸಿದ ದಾಖಲೆ ಇದ್ದಂತಿಲ್ಲ. ಮುಂಬರುವ ದಿನಗಳಲ್ಲಿ ಅದನ್ನೂ ನೋಡುವ ಭಾಗ್ಯ ಒದಗಬಹುದು.

ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಅನುಮೋದನೆಗೊಂಡರೆ ಅನಂತರದಲ್ಲಿ ಅದು ಕನಿಷ್ಟ ಹದಿನಾಲ್ಕು ರಾಜ್ಯಗಳ ವಿದಾನಸಭೆ ಮತ್ತು ಪರಿಷತ್ತುಗಳಲ್ಲಿ ಅಂಗೀಕಾರಗೊಳ್ಳಬೇಕು. ಅನಂತರವೇ ಅದು ರಾಷ್ಟ್ರಪತಿಗಳ ಮುದ್ರೆ ಪಡೆದು ಕಾನೂನಾಗುತ್ತದೆ. ಅದು ಬಹಳ ದೀರ್ಘವಾದ ಪ್ರಕ್ರಿಯೆ. ಈ ಮಧ್ಯೆ ಯಾರ್ಯಾರು ಕೈಕೊಡ್ತಾರೋ ಹೇಳಲಾಗದು. ಮುಖ್ಯವಾಗಿ ಬಿಜೆಪಿಯನ್ನು ನಂಬಲಾಗದು. ಅದು ಹಿಂದು ಸಂಸ್ಕೃತಿಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಪಕ್ಷ. ಹಿಂದು ಸಂಸ್ಕೃತಿ ನಿಂತಿರುವುದೇ ಕುಟುಂಬ ವ್ಯವಸ್ಥೆಯೇ ಮೇಲೆ. ಮಹಿಳೆಯರು ರಾಜಕೀಯ ಪ್ರಜ್ನೆ ಬೆಳೆಸಿಕೊಂಡು ರಾಜಕಾರಣ ಮಾಡತೊಡಗಿದರೆ, ಸಮಾನತೆಯ ಕನಸು ಕಾಣತೊಡಗಿದರೆ ಕೌಟುಂಬಿಕ ರಚನೆ ಶಿಥಿಲಗೊಳ್ಳುತ್ತದೆ. ಅದು ಬಿಜೆಪಿಗೆ ಬೇಡ.

೨೦೦೬ರ ಘಟನೆಗಳನ್ನು ನೆನಪಿಸಿಕೊಳ್ಳಿ; ಪ್ರಧಾನ ಮಂತ್ರಿ ಗಾಧಿಗೆ ಸೋನಿಯಾ ಗಾಂಧಿಯ ಹೆಸರು ಕಾಂಗ್ರೇಸ್ ಪಕ್ಷದಿಂದ ಸೂಚಿತವಾಗಿತ್ತು. ಆಗ ಬಿಜೆಪಿ ಪಕ್ಷ ಘಟವಾಣಿ ಅತ್ತೆಯಂತೆ ಪೂತ್ಕರಿಸಿತ್ತು. ’ಸೋನಿಯ ಪ್ರಧಾನಿಯಾದರೆ ನಾನು ತಲೆ ಬೋಳಿಸಿಕೊಂಡು ವಿಧವೆಯ ಬಾಳು ಬದುಕುತ್ತೇನೆ’ ಎಂಬ ಹೇಳಿಕೆಯನ್ನು ಸುಷ್ಮಾ ಸ್ವರಾಜ್ ನೀಡಿಬಿಟ್ಟರು. ಬಳ್ಳಾರಿಯಲ್ಲಿ ಅರಶಿನ ಕುಂಕುಮ ಶೋಭಿತೆಯಾಗಿ ವರಮಾಹಾಲಕ್ಷ್ಮಿ ಪೂಜೆ ಮಾಡುವ ಸುಷ್ಮ, ದೆಹಲಿಯಲ್ಲಿ ಬಿಜೆಪಿಯ ವಕ್ತಾರರಾಗಿಬಿಡುತ್ತಾರೆ. ಅರ್ಥಾತ್ ಪುರುಷರಂತೆ ಯೋಚಿಸುವ ಮಹಿಳೆಯಾಗುತ್ತಾರೆ. ಇಂತಹ ಪಕ್ಷದಿಂದ ಮಹಿಳಾ ಮೀಸಲಾತಿಗೆ ಬೆಂಬಲವನ್ನು ನಿರೀಕ್ಷಿಸುವುದು ಕಷ್ಟ.

ಆದರೂ ಸೋನಿಯ ಪ್ರಯತ್ನದಲ್ಲಿ ನಂಬಿಗೆಯಿಡಬಹುದು. ಆಕೆಯಲ್ಲಿ ಇನ್ನೊಬ್ಬರನ್ನು ಅನುನಯಿಸುವ ಕಲೆ ಇದೆ. ಕ್ಷಮಾ ಗುಣವಿರುವವರಿಗೆ ಅನುನಯ ಕಲೆ ಒಲಿಯುತ್ತದೆ. ನಮ್ಮ ಪುರುಷರಲ್ಲಿ ಕೂಡ ನಮಗೆ ಭರವಸೆಯಿದೆ. ಯಾಕೆಂದರೆ ಅರ್ಧ ನಾರೀಶ್ವರನ ಕಲ್ಪನೆ ಹುಟ್ಟಿದ್ದು ಈ ಮಣ್ಣಿನಲ್ಲಿಯೇ; ಈ ಜಗತ್ತಿನ ಅತ್ಯುನ್ನತ ಶಕ್ತಿಯನ್ನು ಸ್ತ್ರೀಯೊಡನೆ ಸಮೀಕರಿಸಿದ್ದು ಇಲ್ಲಿಯೇ. ಮತ್ತು ಈ ಕಲ್ಪನೆ, ಹೋಲಿಕೆ ಮೊಳಕೆಯೊಡೆದದ್ದು ಪುರುಷನಲ್ಲಿಯೇ. ಇದು ನಮ್ಮ ನಂಬಿಕೆ.

[ ’ಸುಧಾ’ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ]

Sunday, March 14, 2010

ಸಹಸ್ರಾರು ಮಹಿಳೆಯರ ಸ್ಫೂರ್ತಿ ತುಳುನಾಡ ’ಸಿರಿ’


ಸ್ವಾಭಿಮಾನಕ್ಕೆ, ಛಲಕ್ಕೆ, ದಿಟ್ಟತನಕ್ಕೆ, ಪ್ರತಿಭಟನೆಗೆ ಒಳಗೊಳಗಿನ ಗಟ್ಟಿತನಕ್ಕೆ ಮಹಿಳೆಯರು ಯಾರನ್ನು ಮಾದರಿಗಳನ್ನಾಗಿ ತೆಗೆದುಕೊಳ್ಳಬಹುದು? ಇತಿಹಾಸ ಮತ್ತು ವರ್ತಮಾನದಲ್ಲಿ ಅವರವರ ಭಾವಕ್ಕೆ ತಕ್ಕಂತೆ ಅನೇಕ ಹೆಸರುಗಳು ಕಣ್ಮುಂದೆ ಸುಳಿದಾಡಬಹುದು. ಆದರೆ ಪುರಾಣಕ್ಕೆ ಹೊರಳಿದರೆ ನೆನಪಾಗುವ ಹೆಸರು ಎರಡೇ; ಅಂಬೆ ಮತ್ತು ದ್ರೌಪಧಿ.

ಆದರೆ ದ್ರೌಪಧಿಯನ್ನೂ ಮೀರಿಸುವ ಹೆಣ್ಣೊಬ್ಬಳು ತುಳುನಾಡಿನಲ್ಲಿದ್ದಳು. ಅವಳೇ ಸಿರಿ. ತುಳು ಮಹಾಕಾವ್ಯ ’ಸಿರಿ ಪಾಡ್ದನ’ದ ಕೇಂದ್ರ ಪಾತ್ರ ಅದು. ಲೋಕರೂಢಿಗೆ ವಿರುದ್ಧವಾಗಿ ಬದುಕಿದವಳು. ಚೌಕಟ್ಟುಗಳನ್ನು ಮೀರಲೆತ್ನಿಸಿದವಳು. ಪ್ರತಿಭಟನೆಯ ಅಗ್ನಿಕುಂಡದಂತಿದ್ದವಳು ಸಿರಿ.

’ಸಿರಿ’ ೪ ತಲೆಮಾರುಗಳ ಕಥೆಯನ್ನು ಹೇಳುತ್ತದೆ. ಅಂದರೆ ಸಿರಿ, ಅವಳ ಮಕ್ಕಳು, ಮೊಮ್ಮಕ್ಕಳು ಮತ್ತು ಮರಿಮಕ್ಕಳ ಕಥೆ. ಸಿರಿ ಪಾಡ್ದನ ೧೫,೬೮೩ ಸಾಲುಗಳ ದೀರ್ಘ ಕಾವ್ಯ. ಹೋಮರನ ’ಇಲಿಯೆಡ್’ ನಲ್ಲಿ ಇದಕ್ಕಿಂತ ಕೇವಲ ೫ ಸಾಲು ಹೆಚ್ಚಿದೆಯಷ್ಟೆ. ಆದರೆ ಇದು ಮುಖ್ಯವಾಗಿ ಸಿರಿಯ ಕಥೆ.

ಸಿರಿ, ಕೇವಲ ತುಳು ಜಾನಪದದಲ್ಲಿ ಚಿತ್ರಿತವಾದ ಕಾಲ್ಪನಿಕ ಮಹಿಳೆಯಲ್ಲ. ಆಕೆ ಇಂದಿಗೂ ತುಳು ಜನಮಾನಸದಲ್ಲಿ ನೆಲೆನಿಂತಿದ್ದಾಳೆ. ತುಳುನಾಡು ಅಂದರೆ ಇಂದಿನ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳು. ಅಂದರೆ ಅವಿಭಜಿತ ದ.ಕ ಜಿಲ್ಲೆ. ಮತ್ತು ಕೇರಳದ ಕಾಸರಗೋಡು ಜಿಲ್ಲೆ. ತುಳುನಾಡಿನ ಲಕ್ಷಾಂತರ ಮಹಿಳೆಯರು ಸಿರಿಯಲ್ಲಿ ತಮ್ಮನ್ನು ಸಮೀಕರಿಸಿಕೊಂಡು ವರ್ಷದಲ್ಲಿ ಒಂದು ಭಾರಿಯಾದರೂ ಸಿರಿಯಾಗಿ ಪರಕಾಯ ಪ್ರವೇಶ ಪಡೆಯುತ್ತಾರೆ. ಅದಕ್ಕೆ ಅವಕಾಶ ಸಿಗುವುದು ’ಸಿರಿಜಾತ್ರೆ’ಯಲ್ಲಿ. ಪ್ರತಿ ವರ್ಷ ನಂದಳಿಕೆ, ಕವತ್ತಾರು, ನಿಡ್ಗಲ್[ ಬೆಳ್ತಂಗಡಿ]ಗಳಲ್ಲಿ ಹುಣ್ಣಿಮೆಯಂದು ವೈಭವದ ಸಿರಿ ಜಾತ್ರೆ ನಡೆಯುತ್ತದೆ. ಮಾರ್ಚ್ ನಲ್ಲಿ ನಂದಳಿಕೆಯಲ್ಲಿ, ನಂತರ ಕ್ರಮವಾಗಿ ಏಪ್ರಿಲ್,ಮೇ ತಿಂಗಳಿನ ಹುಣ್ಣಿಮೆಗಳಲ್ಲಿ ಕವತ್ತಾರು ಮತ್ತು ನಿಡ್ಗಲ್ ನಲ್ಲಿ ಸಿರಿಜಾತ್ರೆ ನಡೆಯುತ್ತದೆ. ಅದು ಸಂಪೂರ್ಣವಾಗಿ ಮಹಿಳಾ ಜಾತ್ರೆಯೇ. ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಈ ಜಾತ್ರೆ ನಡೆಯುತ್ತದೆ. ಮುಂಬಯಿ, ಕೊಲ್ಲಿ ರಾಷ್ಟ್ರ ಸೇರಿದಂತೆ ವಿದೇಶಗಳಲ್ಲಿರುವ ತುಳುವರು ಮುಖ್ಯವಾಗಿ ಬಂಟ್ಸ್ ಸಮುದಾಯದವರು ಭಯ ಭಕ್ತಿಗಳಿಂದ ಸಿರಿ ಜಾತ್ರೆಯಲ್ಲಿ ಭಾಗವಹಿಸುತ್ತಾರೆ.

ವೈಜ್ನಾನಿಕ ದೃಷ್ಟಿಯಿಂದ ನೋಡಿದರೆ ಈ ಸಿರಿ ಜಾತ್ರೆ ಮಾನಸಿಕ ಚಿಕಿತ್ಸಾ ಕೇಂದ್ರದಂತೆ ಕೆಲಸ ಮಾಡುತ್ತದೆ. ಹತ್ತಾರು ಸಾವಿರ ಮಹಿಳೆಯರ ಮೈಮೇಲೆ ಏಕಕಾಲದಲ್ಲಿ ಸಿರಿ ಅವಾಹನೆಗೊಳ್ಳುತ್ತಾಳೆ. ಸಂಸಾರದ ಜಂಜಡಗಳಿಂದ ನೊಂದು ಬೆಂದು ಹೋದ ಅಸಂಖ್ಯ ಮಹಿಳೆಯರು ಆ ರಾತ್ರಿಯ ಮಟ್ಟಿಗೆ ’ಸಿರಿ’ಯಾಗಿ ಪರಿವರ್ತನೆಗೊಳ್ಳುತ್ತಾರೆ. ಅಲ್ಲೊಂದು ’ಮಧ್ಯಂತರ ಜಗತ್ತು’ ಸೃಷ್ಠಿಯಾಗುತ್ತದೆ. ಅಲ್ಲಿ ದುಃಖಿತ ಮಹಿಳೆಯರು ತಮ್ಮ ಬದುಕನ್ನು ರೀಚಾರ್ಜ್ ಮಾಡಿಕೊಳ್ಳುತ್ತಾರೆ. ವರ್ತಮಾನದಲ್ಲಿ, ಇಂದಿಗೂ ಕೂಡಾ ಸಿರಿಯನ್ನು ಸಾವಿರಾರು ಮಹಿಳೆಯರು ’ಈಕೆ ನಮ್ಮವಳು’ ಎಂದು ಒಪ್ಪಿಕೊಳ್ಳಬೇಕಾದರೆ ಆಕೆಯಲ್ಲೇನೋ ವಿಶೇಷ ಇದ್ದಿರಬೇಕಲ್ಲವೇ? ಏನಾಗಿರಬಹುದು ಅದು? ಅದಕ್ಕಾಗಿ ನಾವವಳ ಜೇವನಗಾಥೆಯನ್ನು ತಿಳಿದುಕೊಳ್ಳಬೇಕು.

ಬಹಳ ಹಿಂದೆ ತುಳುನಾಡಿನಲ್ಲಿ ’ಬೆರ್ಮ ಆಳ್ವ’ನೆಂಬ ಶ್ರೀಮಂತನಿದ್ದನು. ಅವನಿಗೆ ಮಕ್ಕಳಿರಲಿಲ್ಲ. ಆ ಚಿಂತೆ ಅವನನ್ನು ಕಾಡುತ್ತಿತ್ತು. ಅವನ ಚಿಂತೆಯ ಕಾರಣವನ್ನು ತಿಳಿದ ಆದಿ ಅಲ್ಲಡೆ ಕುಲಬ್ರಹ್ಮ ದೇವರು ’ನನ್ನ ಮೂಲ ಸ್ಥಾನ ಹಾಳು ಬಿದ್ದಿದೆ ಅದನ್ನು ಜೀರ್ಣೋದ್ದಾರ ಮಾಡಿಸು’ಎಂದು ಅಪ್ಪಣೆ ಕೊಡಿಸುತ್ತಾನೆ. ಹಾಗೆ ಬೆರ್ಮಾಳನು ದೈವ ಸ್ಥಾನ ಕಟ್ಟಿಸಿ,ನಿತ್ಯ ಪೂಜೆಗೆ ಏರ್ಪಾಟು ಮಾಡಿಸುತ್ತಾನೆ. ಸಂತೃಪ್ತನಾದ ದೇವರು ಬ್ರಾಹ್ಮಣ ವೇಷದಿಂದ ಬಂದು ಸಿಂಗಾರದ ಹಾಳೆಯ ಮೇಲೆ ಗಂಧದ ಉಂಡೆಯನ್ನಿಟ್ಟು ಪ್ರಸಾಧ ಕೊಡುತ್ತಾನೆ. ಅದನ್ನು ಕೈಯಲ್ಲಿ ಹಿಡಿದು ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕುತ್ತಿರುವಾಗ ಅದೊರೊಳಗಿನಿಂದ ಮಗು ಅಳುವುದು ಕೇಳುತ್ತದೆ. ಹೆಣ್ಣು ಮಗು. ಅದನ್ನು ತನ್ನ ಸತ್ಯನಾಪುರದ ಅರಮನೆಗೆ ತಂದು ಬೆರ್ಮಾಅಳ್ವ ಅಕ್ಕರೆಯಿಂದ ಸಾಕುತ್ತಾನೆ. ಆಕೆ ಪ್ರಾಯಪ್ರಬುದ್ಧಳಾದಾಗ ಬಸರೂರಿನ-ಕುಂದಾಪುರ ಸಮೀಪದ- ಕಾಂತುಪೂಂಜನಿಗೆ ಮದುವೆ ಮಾಡಿಕೊಡುತ್ತಾನೆ. ಆಕೆಯ ಹುಟ್ಟು ಹೇಗೆ ನಿಗೂಢವಾಗಿತ್ತೋ ಆಕೆಯ ಮದುವೆ ಕೂಡಾ ಲೋಕಾರೂಢಿಗೆ ವಿರುದ್ಧವಾಗಿತ್ತು. ತನ್ನನ್ನು ಮದುವೆಯಾಗುತ್ತೇನೆಂದು ಅಸೆಪಟ್ಟ ಕಾಂತು ಪೂಂಜನಿಗೆ ಅವಳು ಷರತ್ತನ್ನು ವಿಧಿಸುತ್ತಾಳೆ.ತನ್ನ ತಂದೆಗೆ ಯಾರೂ ಆಶ್ರಯಧಾತರಿಲ್ಲ, ಹಾಗಾಗಿ ತಾನು ಸತ್ಯನಾಪುರದ ಅರಮನೆಯಲ್ಲೇ ಇರುತ್ತೇನೆ, ಇದಕ್ಕೆ ಒಪ್ಪಿದರೆ ಮದುವೆಯಾಗುವುದಾಗಿ ಹೇಳುತ್ತಾಳೆ. ಷರತ್ತು ವಿಧಿಸಿ ಮದುವೆಯಾದ ದಿಟ್ಟ ಹೆಣ್ಣುಮಗಳು ಈಕೆ.

ಸಿರಿ ಗರ್ಭವತಿಯಾಗುತ್ತಾಳೆ. ಸೀಮಂತ ತನ್ನ ಮನೆಯಲ್ಲೇ ಆಗಬೇಕೆಂದು ಕಾಂತುಪೂಂಜ ಅವಳನ್ನು ಬಸ್ರೂರಿಗೆ ಕರೆದುಕೊಂಡು ಬರುತ್ತಾನೆ. ಸೀಮಂತದ ತಯಾರಿ ನಡೆಯುತ್ತದೆ. ಕಾಂತುಪೂಂಜ ಸೀಮಂತಕ್ಕೆ ಸೀರೆ ತರುವಾಗ ದಾರಿಯಲ್ಲಿ ಸೂಳೆ ಮನೆಗೆ ಭೇಟಿ ಕೊಡುತ್ತಾನೆ. ಆಕೆ ಆ ಸೀರೆಯನ್ನು ಉಟ್ಟು ನೋಡುತ್ತಾಳೆ. ಮಾರನೆಯ ದಿನ ಸೀಮಂತದಲ್ಲಿ ಸೀರೆ ಭಾಗಿನ ಕೊಡುವಾಗ ಸಿರಿ, ’ಸೂಳೆ ಉಟ್ಟ ಸೀರೆ ನಾನು ತಗೊಳ್ಳೊದಿಲ್ಲ’ ಎಂದು ಅದನ್ನು ತುಂಬಿದ ಸಭೆಯಲ್ಲಿ ತಿರಸ್ಕರಿಸುತ್ತಾಳೆ. ಕಾಂತು ಪೂಜಾರಿಗೆ ಅವಮಾನವಾಗುತ್ತದೆ.

ಸಿರಿ ಸತ್ಯನಾಪುರದ ಅರಮನೆಗೆ ಹಿಂದಿರುಗಿ ಬರುತ್ತಾಳೆ. ಆಲ್ಲಿ ಗಂಡುಮಗುವಿಗೆ ಜನ್ಮ ಕೊಡುತ್ತಾಳೆ. ಈ ಸುದ್ದಿ ತಿಳಿದರೂ ಮಗುವನ್ನು ನೋಡಲು ಕಾಂತುಪೂಂಜ ಬರುವುದಿಲ್ಲ. ಮಗು ಹುಟ್ಟಿದ ಜಾತಕದ ಪ್ರಕಾರ ”ಅಜ್ಜ ಮಗುವನ್ನು ನೋಡಿದರೆ ಆತನಿಗೆ ಮರಣ ಸಂಭವಿಸುತ್ತದೆ” ಎಂದು ಜ್ಯೋತಿಷಿಗಳು ಭವಿಷ್ಯ ನುಡಿಯುತ್ತಾರೆ. ಒಂದು ದಿನ ಮನೆಯಲ್ಲಿ ಯಾರೂ ಇರುವುದಿಲ್ಲ. ಮಗು ಜೋರಾಗಿ ಅಳುತ್ತಿರುತ್ತದೆ. ಅಜ್ಜ ಬೆರ್ಮಾ ಆಳ್ವ ಅದನ್ನು ಎತ್ತಿಕೊಳ್ಳುತ್ತಾನೆ. ಪರಿಣಾಮವಾಗಿ ಖಾಯಿಲೆ ಬೀಳುತ್ತಾನೆ; ಸತ್ತು ಹೋಗುತ್ತಾನೆ. ಕಾಂತು ಪೂಂಜನಿಗೆ ಸುದ್ದಿ ಮುಟ್ಟಿಸುತ್ತಾರೆ. ಆದರೆ ಕಾಂತುಪೂಂಜ ಬರುವುದಿಲ್ಲ. ಸಿರಿಯೇ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳನ್ನು ಪೂರೈಸುತ್ತಾಳೆ. ಸತ್ಯನಾಪುರದ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದ ಶಂಕರಾಳ್ವನು ಅವಳ ವಿರುದ್ಧ ತಿರುಗಿಬೀಳುತ್ತಾನೆ. ತನಗೆ ಅರಮನೆಯಲ್ಲಿ ಪಾಲು ಬೇಕೆಂದು ತಗಾದೆ ತೆಗೆಯುತ್ತಾನೆ. ಅವನಿಗೆ ಕಾಂತು ಪೂಂಜ ಕುಮ್ಮಕ್ಕು ಕೊಡುತ್ತಾನೆ. ಊರ ಹತ್ತು ಸಮಸ್ತರಿಗೆ ಶಂಕರಾಳ್ವ ದೂರು ಕೊಡುತ್ತಾನೆ. ಅವರನ್ನು ದುಡ್ಡಿನಿಂದ ಕೊಂಡುಕೊಳ್ಳುತ್ತಾನೆ.

ನೋಡಿ, ಒಬ್ಬ ಹೆಣ್ಣು ಮಗಳನ್ನು ಎಲ್ಲಾ ರೀತಿಯಿಂದಲೂ ಹಣೆಯುವ ಪ್ರಯತ್ನ ನಡೆಯುತ್ತದೆ. ಅವಳು ತನ್ನ ಸಹಾಯಕ್ಕೆ ಬರುವಂತೆ ಮತ್ತೊಮ್ಮೆ ಗಂಡನಿಗೆ ಹೇಳಿಕಳುಹಿಸುತ್ತಾಳೆ. ಅವನು ಮನೆಯಲ್ಲಿದ್ದುಕೊಂಡೇ, ಇಲ್ಲವೆಂದು ಹೇಳಿಕಳುಹಿಸುತ್ತಾನೆ. ಆಕೆ ತಡಮಾಡುವುದಿಲ್ಲ. ಪಂಚಾಯ್ತಿ ನಡೆಯುವ ಸ್ಥಳಕ್ಕೆ ಬಂದು ’ನಿಮ್ಮ ಹತ್ತು ಸಮಸ್ತರ ಕೂಟ ಹಾಳಾಗಲಿ, ಸತ್ಯನಾಪುರ ಅರಮನೆ ಉರಿದು ಹೋಗಲಿ’ ಎಂದು ಶಾಪಕೊಟ್ಟು, ತನ್ನ ಆಪ್ತ ಸೇವಕಿ ದಾರು ಮತ್ತು ಮಗುವಿನೊಂದಿಗೆ ಬಸ್ರೂರಿನ ಗಂಡನ ಮನೆಗೆ ಬಂದು ತನಗೆ ವಿಛ್ಚೇಧನ ಬೇಕು ಎಂದು ಕೇಳುತ್ತಾಳೆ. ಆತ ’ಹೊತ್ತು ಮುಳುಗುವುದರೊಳಗಾಗಿ ಮಾಬುಕಳ ಹೊಳೆ ದಾಟಿದರೆ ನಿನಗೆ ಅದೇ ವಿಛ್ಚೇಧನ, ಸಾದ್ಯವಾಗದಿದ್ದರೆ ಎಳೆದು ತರುತ್ತೇನೆ’ ಎಂದು ಬೆದರಿಸುತ್ತಾನೆ. ತುಂಬ ದೂರದ ಹಾದಿಯನ್ನು ಆಕೆ ಕಷ್ಟಪಟ್ಟು ಕ್ರಮಿಸುತ್ತಾಳೆ. ಮುಂದೆ ಆಕೆಗೆ ಬಿಳಿ ದೇಸಿಂಗರಾಯ ಮತ್ತು ಕರಿ ಕಾಮುರಾಯ ಎಂಬ ಅಣ್ಣತಮ್ಮಂದಿರು ಸಿಗುತ್ತಾರೆ. ಅವರು ಆಕೆಯನ್ನು ಸ್ವಂತ ತಂಗಿಯಂತೆ ನೋಡಿಕೊಳ್ಳುತ್ತಾರೆ. ಆದರೆ ಮಗು ಕುಮಾರ ಅಕಾಲ ಮೃತ್ಯುವಪ್ಪುತ್ತಾನೆ. ಮುಂದೆ ಈಕೆಯ ಸೌಂದರ್ಯವನ್ನು ಕೊಡ್ಸರಾಳನೆಂಬವನು ಕಂಡು ಮರುಳಾಗಿ ಮದುವೆ ಮಾಡಿಕೊಳ್ಳುವ ಬಯಕೆ ವ್ಯಕ್ತ ಪಡಿಸಿದನು. ಅಣ್ಣಂದಿರು ಅವಳಿಗೆ ಮದುವೆ ಮಾಡಿಸಿದರು. ಆಕೆ ಹೆಣ್ಣು ಮಗುವನ್ನು ಹೆತ್ತು, ಅದನ್ನು ಕೊಡ್ಸರಾಳ್ವನ ಮೊದಲ ಹೆಂಡತಿಯ ಕೈಯಲ್ಲಿಟ್ಟು ಸತ್ತು ಹೋಗುತ್ತಾಳೆ. ಆ ಮಗುವಿನ ಹೆಸರು ಸೊನ್ನೆ. ಸೊನ್ನೆಯ ಮಕ್ಕಳೇ ಅಬ್ಬಗ-ದಾರಗೆಯೆಂಬ ಅವಳಿಜವಳಿ ಹೆಣ್ಣುಮಕ್ಕಳು. ಇಂದಿಗೂ ಬಂಟ್ಸ್ ಸಮುದಾಯದವರು ಇವರಿಬ್ಬರನ್ನು ತಮ್ಮ ಕುಲದೈವಗಳೆಂದು ಪೂಜಿಸುತ್ತಾರೆ.

ಹುಟ್ಟಿನಲ್ಲಿ ನಿಗೂಢತೆಯನ್ನು ಉಳಿಸಿಕೊಂಡ, ಷರತ್ತು ಹಾಕಿ ಮದುವೆಯಾದ, ಕಡೆತನಕ ತನ್ನ ತಂದೆಯ ಹಿತಕಾಯ್ದು ಒಬ್ಬಳೇ ಆತನ ಅಂತ್ಯ ಸಂಸ್ಕಾರ ಮಾಡಿದ, ಆಸ್ತಿ ಹಕ್ಕಿಗಾಗಿ ಪುರುಷರೊಂದಿಗೆ ಹೋರಾಡಿ ಸಿಗದಾದಾಗ ಸತ್ಯನಾಪುರದ ಅರಮನೆ ನಾಶವಾಗಲಿ ಎಂದು ಶಾಪ ಕೊಟ್ಟ, ಗಂಡನ ನೈತಿಕತೆಯನ್ನು ಪ್ರಶ್ನಿಸಿದ, ತಾನಾಗಿ ಗಂಡನಿಗೆ ವಿಛ್ಚೇಧನ ನೀಡಿದ, ಮತ್ತೆ ಮರುಮದುವೆಯಾಗಿ ಮಗು ಪಡೆದ ಸಿರಿ ಅಸಮಾನ್ಯ ಹೆಣ್ಣಾಗಿ ತೋರುತ್ತಾಳೆ. ಇಂದು ನಮಗಿದು ಸಹಜವಾಗಿ ತೋರಬಹುದು. ಆದರೆ ಅಂದಿನ ಪುರುಷಪ್ರಧಾನ ಸಮಾಜ ವ್ಯವಸ್ಥೆಯಲ್ಲಿ ಇದು ಅಸಾಮಾನ್ಯವೇ ಸರಿ. ಅದಕ್ಕಾಗಿಯೇ ನಾನವಳನ್ನು ದ್ರೌಪಧಿಗೆ ಹೋಲಿಸಿದ್ದು. ದ್ರೌಪದಿಗೆ ಪರಾಕ್ರಮಿಗಳಾದ ೫ ಮಂದಿ ಗಂಡಂದಿರು ಸದಾ ಅವಳ ಬೆಂಗಾವಲಿಗಿದ್ದರು. ಎಲ್ಲಕ್ಕಿಂತಲೂ ಮಿಗಿಲಾಗಿ ಅವಳನ್ನು ಸದಾ ತಲೆಕಾಯ್ವ ಶ್ರೀಕೃಷ್ಣನಿದ್ದ. ಆದರೆ ಸಿರಿಗೆ ಯಾರೂ ಇರಲಿಲ್ಲ. ಆದರೂ ಆಕೆ ಅನ್ಯಾಯದ ವಿರುದ್ಧ ಸಿಡಿದು ನಿಂತಳು. ತನ್ನ ಹಕ್ಕುಗಳಿಗಾಗಿ ಏಕಾಂಗಿಯಾಗಿ ಹೋರಾಡಿದಳು. ತನ್ನ ಧೀಶಕ್ತಿಯ ಬಗ್ಗೆ ಆಕೆಗೆ ಅಪಾರ ನಂಬಿಕೆಯಿತ್ತು. ಆ ನಂಬಿಕೆಯಿಂದಲೇ ಆಕೆ ಬದುಕಿದಳು. ಬದುಕಿ ಸಾಧಿಸಿದಳು. ಹಾಗಾಗಿಯೇ ಆಕೆ ಆಧುನಿಕ ಮಹಿಳೆಗೆ ಮಾದರಿ, ಸ್ತ್ರೀವಾದಿಗಳಿಗೆ ಸ್ಫೂರ್ತಿ.

[ ಮಾರ್ಚ್ ೧೪ರ ಕನ್ನಡ ಪ್ರಭ ಪತ್ರಿಕೆಯ ಸಾಪ್ತಾಹಿಕದಲ್ಲಿ ಪ್ರಕಟವಾದ ಲೇಖನ ]