Friday, February 16, 2018

ಆ ನಗುವಿನಲ್ಲಿತ್ತು ಪ್ರಶ್ನಿಸುವ ಸೊಕ್ಕು !




ಮಹಾಭಾರತದಲ್ಲಿ ಒಂದು ಪ್ರಸಂಗ ಬರುತ್ತದೆ;
ಪಾಂಡವರು ಖಾಂಡವವನವನ್ನು ದಹಿಸಿ ಇಂದ್ರಪ್ರಸ್ಥವೆಂಬ ಸುಂದರನಗರವನ್ನು ಕಟ್ಟುತ್ತಾರೆ. ದಾನವಶಿಲ್ಪಿಯಾದ ಮಯ ವರಿಗಾಗಿ ವಿಶಿಷ್ಟವಾದ ಭವ್ಯ ಅರಮನೆಯೊಂದನ್ನು ಕಟ್ಟಿಕೊಡುತ್ತಾನೆ. ಅದನ್ನು ನೋಡುವ ಕುತೂಹಲದಿಂದ ಕೌರವ ಪರಿವಾರ ಹಸ್ತಿನಾಪುರದಿಂದ  ಇಂದ್ರಪ್ರಸ್ಥಕ್ಕೆ ಬರುತ್ತಾರೆ. ಅರಮನೆಯ ಸೌಂದರ್ಯವನ್ನು ವೀಕ್ಷಿಸುತ್ತಾ ಬಂದ ದುರ್ಯೋಧನ ಒಂದೆಡೆ ನೀರಿನ ಕೊಳವಿದೆಯೆಂದು ಭಾವಿಸಿ ತನ್ನ ಪಂಚೆಯನ್ನು ಮೇಲೆತ್ತಿಕೊಳ್ಳುತ್ತಾನೆ. ಅದನ್ನು  ನೋಡಿದ ದ್ರೌಪಧಿ ಕಿಸಕ್ಕನೆ ನಕ್ಕುಬಿಡುತ್ತಾಳೆ. ಈ ನಗುವೇ ಕುರುಕ್ಷೇತ್ರ ಮಹಾಸಂಗ್ರಾಮಕ್ಕೆ ಬೀಜವಾಯ್ತು ಎಂಬು ಪುರಾಣ ಪ್ರತಿತಿ.
ಮೊನ್ನೆ, ಪೆಭ್ರವರಿ ೭ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜ್ಯಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡುತ್ತಿದ್ದರು. ಆ ಸಂದರ್ಭದಲ್ಲಿ ಅವರು, ಭಾರತಿಯರ ವಿಶಿಷ್ಟ ಗುರುತಿನ ಚೀಟಿ ಆಧಾರ್ ಎಂಬುದು ೧೯೯೮ರಲ್ಲಿ ಗೃಹಮಂತ್ರಿಯಾಗಿದ್ದ   ಲಾಲ್ ಕೃಷ್ಣ ಅಡ್ವಾಣಿಯವರ ಕನಸಾಗಿತ್ತು. ಅವರು ಇಪ್ಪತ್ತು ವರ್ಷದ ಹಿಂದೆ ಹೇಳಿದ ಆಧಾರ್ ಇವತ್ತು ಇಲ್ಲಿದೆ’ ಎಂದು ಹೆಮ್ಮೆಯಿಂದ ಹೇಳಿಕೊಂಡಾಗ ಕಾಂಗ್ರೇಸ್ ನ ವಕ್ತಾರಳಾಗಿರುವ ರೇಣುಕಾ ಚೌದರಿ ಸದನಕ್ಕೆ ಸದನವೇ ಪ್ರತಿಧ್ವನಿಸುವಂತೆ ಗಟ್ಟಿಯಾಗಿ ಅಲೆಯಲೆಯಾಗಿ ನಕ್ಕರು.

ಸಭಾಧ್ಯಕ್ಷರಾಗಿದ್ದ ಉಪಪ್ರಧಾನಿ ವೆಂಕಯ್ಯನಾಯ್ಡುರವರು ತಕ್ಷಣ ’ ’ನಿಮಗೆ ಆರೋಗ್ಯದ ಸಮಸ್ಯೆಯಿದ್ದರೆ ವೈದ್ಯರನ್ನು ಕಾಣಿ’ ಎಂದು ಸಿಡುಕಿದರು. ಆಗ ಮೋದಿಯವರು ’ರೇಣುಕಾಜಿಯವರನ್ನು ತಡೆಯಬೇಡಿ ಸಭಾಧ್ಯಕ್ಷರೆ. ಬಹಳ ದಿನಗಳ ನಂತರ ರಾಮಾಯಣ ಧಾರಾವಾಹಿಯಲ್ಲಿ ಕೇಳಿದಂತ ನಗುವನ್ನು ಮತ್ತೆ ಕೇಳಿ ಆನಂದವಾಗುತ್ತಿದೆ’ ಎಂದರು. ಮೋದಿಯವರು ಕೊಟ್ಟ ವ್ಯಂಗ್ಯಲೇಪನದ ಹಗುರ ಮಾತುಗಳು ಈಗ ವ್ಯಾಪಕ ಚರ್ಚೆಯಾಗುತ್ತಿದೆ. ಕೆಲವರು ವಾದಿಸುವಂತೆ ಮೋದಿಯವರದ್ದು ತಮಾಶೆಯ ಪ್ರತಿಕ್ರಿಯೆಯೆಂದೇ ಅಂದುಕೊಳ್ಳೋಣ. ಆದ್ರೆ ಮೇಜುಗುದ್ದಿ ಉಡಾಪೆಯಿಂದ ನಕ್ಕ ಸಂಸತ್ ಸದಸ್ಯರ ನಡವಳಿಕೆಯ ಬಗ್ಗೆ ಯಾಕೆ ಯಾರೂ ಮಾತಾಡುತ್ತಿಲ್ಲ? ಬಹುತೇಕ ಇಡೀ ಸದನ ಹಾಸ್ಯಗೋಷ್ಠಿಯಂತಿತ್ತು.  ಹೆಣ್ಣಿನ ಘನತೆಯ ಬದುಕಿನ ಬಗ್ಗೆ ಮಾತಾಡುವ ಪಕ್ಷ ಅವಳ ಮನೋಸ್ಥೆರ್ಯವನ್ನು ಕುಗ್ಗಿಸುವ ರೀತಿಯಲ್ಲಿ ಅಂದು ವರ್ತಿಸಿತ್ತು. ಇದರ ಬಗ್ಗೆ ಆಕ್ಷೇಪ ಯಾಕಿಲ್ಲ?

ರೇಣುಕಾ ಚೌದರಿ ಹಾಗೆ ಗಹಗಹಿಸಿ ನಕ್ಕಿದ್ದು ಸದನದ ಗೌರವಕ್ಕೆ ತಕ್ಕುದಾಗಿರಲಿಲ್ಲ, ನಿಜ.  ಅದನ್ನೇ ಸಭಾಧ್ಯಕ್ಷರು ಸೌಮ್ಯ ರೀತಿಯಲ್ಲಿ ಅಕ್ಷೇಪಿಸಬಹುದಿತ್ತು. ಅವರ ಮಾತಿನ ಧಾಟಿ ಚೌದರಿಯವರ ಮಾನಸಿಕ ಆರೋಗ್ಯವನ್ನೇ ಪ್ರಶ್ನಿಸುವಂತಿತ್ತು. ಅವರ ಪ್ರತಿಕ್ರಿಯೆ ಸಭಾಧ್ಯಕ್ಷರ ಸ್ಥಾನಘನತೆಗೆ ಹೊಂದುವಂತದ್ದಾಗಿರಲಿಲ್ಲ. ಎಲ್ಲರನ್ನೂ ಸಮತೂಗಿಸಿಕೊಂಡು ಹೋಗಬೇಕಾದ ಸ್ಥಾನದಲ್ಲಿದ್ದ ವ್ಯಕ್ತಿ ಆಡುವ ಮಾತಾಗಿರಲಿಲ್ಲ ಅದು?  ಅದರ ಬಗ್ಗೆ ಚರ್ಚೆಯಾಗಬೇಕಿತ್ತು, ಅದಾಗಲಿಲ್ಲ.
 ಅಂದು ಸಂಸತ್ ಅವಮಾನಿಸಿದ್ದು ಸುದೀರ್ಘ ಮೂವತ್ತನಾಲ್ಕು ವರ್ಷ ರಾಜಕೀಯ ಅನುಭವವುಳ್ಳ ಪ್ರತಿಪಕ್ಷದ ಒಬ್ಬ ಮಹಿಳಾರಾಜಕಾರಣಿಯನ್ನು, ಇಂತಹ ಅನುಭವಿಯ ಸ್ಪೋಟಗೊಂಡ ನಗುವಿಗೆ ಕಾರಣವೇನಿರಬಹುದು ಎಂದು ತಿಳಿದುಕೊಳ್ಳುವ ವ್ಯವಧಾನ ಅಲ್ಲಿರುವ ಒಬ್ಬರ ಮನಸಿಗೂ ಬರಲಿಲ್ಲ ಯಾಕೆ?

ರೇಣುಕಾ ಚೌದರಿ.

ಮಹಿಳೆಯ ಹೆಸರು ನನ್ನ ನೆನಪಿನ ಕೋಶದಲ್ಲಿ ದಾಖಲಾದದ್ದು ಹಲವಾರು ವರ್ಷಗಳ ಹಿಂದೆ. ಬಹುಶಃ ಅದು ನನ್ನ ಕಾಲೇಜು ದಿನಗಳು. ಪರಿಸರ ಮತ್ತು ಕಥೆ ಕಾದಂಬರಿಗಳ ಮೂಲಕ ಪುರುಷ ಪ್ರಪಂಚವನ್ನು ಅರ್ಥ ಮಾಡಿಕೊಳ್ಳುತ್ತಿದ್ದ ಕಾಲ. ಆಗ ಆಂದ್ರಪ್ರದೇಶದ ರೇಣುಕಾ ಚೌದರಿಯೆಂಬ ಮಹಿಳೆ ನಮಗೆ ಗಂಡಸರ ಅಗತ್ಯ ಇಲ್ಲ..... ದೇಶದಾದ್ಯಂತ ವೀರ್ಯ ಬ್ಯಾಂಕ್ ಗಳನ್ನು ಸ್ಥಾಪಿಸಬೇಕು”. ಎಂಬ ಹೇಳಿಕೆ ನೀಡಿಬಿಟ್ಟರು. ಸಂದರ್ಭ ನೆನಪಿಲ್ಲ.

೨೦೦೯ರಲ್ಲಿ ಮಂಗಳೂರಿನ ಪಬ್ ದಾಳಿಗೆ ಸಂಬಂಧಪಟ್ಟಂತೆ ಅವರು ’ಮಂಗಳೂರು ತಾಲಿಬಾನ್ ಗೊಳ್ಳುತ್ತಿದೆ. ಎಂಬ ಹೇಳಿಕೆ ನೀಡಿದಾಗ ಮಂಗಳೂರು ಮೇಯರ್ ಆಕೆಗೆ ಶೋಕಾಸ್ ನೋಟೀಸ್ ಜಾರಿ ಮಾಡಿದ್ದರು. ಆಗ ಅವರು ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಖಾತೆಯ ರಾಜ್ಯಸಚಿವರಾಗಿದ್ದರು.ಪಬ್ ಧಾಳಿಗೆ ಸಂಬಂಧಪತ್ತಂತೆ ರಾಷ್ಟ್ರೀಯ ಮಹಿಳಾ ಆಯೋಗದ ವರದಿ ತಮಗೆ ತೃಪ್ತಿ ತಂದಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದಾಗನನ್ನ ವರದಿಯ ಬಗ್ಗೆ ಅಸಮಧಾನ ತೋರಲು ಈಕೆ ಯಾರು?’ ಎಂದು ಪ್ರಶ್ನಿಸಿದ ರಾಷ್ಟ್ರೀಯ ಆಯೋಗದ ಸದಸ್ಯೆ ನಿರ್ಮಲಾ ವೆಂಕಟೇಶರಿಗೆ ಶೋಕಾಶ್ ನೋಟಿಸ್ ಜಾರಿ ಮಾಡಿದರು. ಮಾತ್ರವಲ್ಲ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಕಿರಣ್ ಚಡ್ಡಾರನ್ನು ಮಂಗಳೂರಿಗೆ ಕಳುಹಿಸಿ ಪ್ರತ್ಯೇಕ ವರದಿ ತರಿಸಿಕೊಂಡರು. ’ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಪಬ್ ಪರ ಚಳುವಳಿ ನಡೆಸಬೇಕಾದೀತುಎಂದು ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದರು.

 ಕನ್ನಡದ ಹಿರಿಯ ಪತ್ರಕರ್ತರೊಬ್ಬರೊಬ್ಬರು ರೇಣುಕಾ ಬಗ್ಗೆ ಒಂದಷ್ಟು ಮಾಹಿತಿ ನೀಡಿದ್ದರು.; ರೇಣುಕಾ ಸಕ್ರೀಯ ರಾಜಕಾರಣಕ್ಕೆ ಬರುವ ಮೊದಲು ಆತ್ಮರಕ್ಷಣೆಗಾಗಿ ತಮ್ಮ ಬಳಿ ಸದಾ ಪಿಸ್ತೂಲ್ ಇಟ್ಟುಕೊಂಡಿರುತ್ತಿದ್ದರಂತೆ. ಅವರ ದಾಢಸಿತನವನ್ನು ಮೆಚ್ಚಿಯೇ ತೆಲುಗು ದೇಶಂನ ಸಂಸ್ಥಾಪಕ ಎನ್ ಟಿ ರಾಮರಾವ್ ತಮ್ಮ ಪಕ್ಷಕ್ಕೆ ಅವರನ್ನು ಬರಮಾಡಿಕೊಂಡರಂತೆ.

ರೇಣುಕಾ ೧೯೫೪ರ ಅಗಸ್ಟ್೧೩ರಂದು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಹುಟ್ಟಿದರು. ತಮ್ಮ ೩೦ನೇ ವಯಸ್ಸಿನಲ್ಲಿ ರಾಜಕೀಯ ಪ್ರವೇಶ ಮಾಡಿದರು. ಈಗ ಅವರಿಗೆ ೬೪ ವರ್ಷ. ಅಂದರೆ ಅವರಿಗೆ ೩೪ ವರ್ಷಗಳ ಸಕ್ರಿಯ ರಾಜಕೀಯ ಅನುಭವವಿದೆ. ಅನುಭವ ಎಂತವರನ್ನೂ ಮೆತ್ತಗಾಗಿಸುತ್ತದೆ. ಆದರೆ ರೇಣುಕಾಳ ವಿಚಾರದಲ್ಲಿ ಅದು ಇನ್ನಷ್ಟು ಪ್ರಖರಗೊಂಡಿದೆ.

ಕೆಲವು ವರ್ಷಗಳ ಹಿಂದೆ ಆಕೆ ಕೊಟ್ಟ ಹೇಳಿಕೆಯನ್ನೇ ನೋಡಿ, ’ಮಹಿಳೆಯರೇ ನಿಮ್ಮ ಗಂಡಂದಿರನ್ನು ನಂಬಬೇಡಿ, ಸದಾ ನಿಮ್ಮ ಬಳಿ ಕಾಂಡಮ್ ಗಳನ್ನು ಇಟ್ಟುಕೊಂಡಿರಿಈಕೆಯನ್ನು ವಿರೋಧಿಸಲು ಪುರುಷ ಪ್ರಧಾನ ಸಮಾಜಕ್ಕೆ ಇಷ್ಟು ಸಾಕಲ್ಲವೇ?

ಆಕೆ ಕರ್ನಾಟಕಕ್ಕೆ ಇನ್ನೂ ಹತ್ತಿರದವರು. ಅವರು ಇಂಡಸ್ಟ್ರಿಯಲ್ ಸೈಕಾಲಾಜಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದದ್ದು ಬೆಂಗಳೂರು ವಿಶ್ವವಿದ್ಯಾಲಯದಿಂದ. ೧೯೮೪ರಲ್ಲಿ ತೆಲುಗುದೇಶಂ ಮೂಲಕ ರಾಜಕೀಯಕ್ಕೆ ಪದಾರ್ಪಣೆ ಮಾಡಿದರೂ ೧೯೯೮ರಲ್ಲಿ ಪಕ್ಷ ತೊರೆದು ಕಾಂಗ್ರೇಸ್ ಸೇರಿದರು. ಮೂರು ಸಲ ರಾಜ್ಯಸಭಾ ಸದಸ್ಯರಾಗಿದ್ದರು. ಕುಪ್ಪಂ ಲೋಕಸಭಾ ಕ್ಷೇತ್ರದಿಂದ ಸತತ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ದೇವೇಗೌಡರ ಕ್ಯಾಬಿನೇಟ್ ನಲ್ಲಿ[೧೯೯೭-೯೮] ಸಚಿವೆಯೂ ಆಗಿದ್ದರು. ಪ್ರಸ್ತುತ ಅವರು ಕಾಂಗ್ರೆಸ್ ಪಕ್ಷದ ವಕ್ತಾರರಾಗಿದ್ದಾರೆ.

ಹೌದು ಆಕೆ ಪ್ರಖರ ಸ್ತ್ರೀವಾದಿ. ಮಹಿಳಾಪರವಾದ ನಿಲುವುಗಳನ್ನು ತೆಗೆದುಕೊಳ್ಳುವಾಗ ಆಕೆ ಕೇವಲ ಕಾಂಗ್ರ್ಏಸ್ ಪಕ್ಷದ ವಕ್ತಾರಳಾಗುವುದಿಲ್ಲ ಸಮಸ್ತ ಮಹಿಳಾ ಧ್ವನಿಯಾಗುತ್ತಾಳೆ. ’ನಮ್ಮವಳುಅನ್ನಿಸಿಕೊಂಡುಬಿಡುತ್ತಾಳೆ. ಅದು ಅವಳ ಹೆಚ್ಚುಗಾರಿಕೆ. ಮಹಿಳೆಯರ ಹಕ್ಕುಗಳಿಗೆ ಚ್ಯುತಿ ಬಂದಾಗಲೆಲ್ಲ ಅವಳು ಸಿಡಿದೇಳುತ್ತಾಳೆ. ಹಾಗಾಗಿ ಆಕೆ ಉಳಿದ ರಾಜಕಾರಣಿಗಳಿಗಿಂತ ಭಿನ್ನವಾಗಿ ಕಾಣಿಸಿಕೊಳ್ಳುತ್ತಾಳೆ. ಜಯಲಲಿತ, ಉಮಾಭಾರತಿ, ಮಾಯಾವತಿ, ಶೋಭಾ ಕರಂದ್ಲಾಜೆ ರೂಪಿಸಿದ\ ರೂಪಿಸುವ ರಾಜಕೀಯ ತಂತ್ರಗಾರಿಕೆಗಳು ಈಕೆಯಲ್ಲಿಲ್ಲ. ರೇಣುಕಾಳದ್ದು ಏನಿದ್ದರೂ ನೇರಾನೇರ. ಇಲ್ಲವಾದರೆ ಮುತಾಲಿಕನಂತ ಧರ್ಮಾಂಧ ಬ್ರಹ್ಮಚಾರಿಗೆ ಪ್ರೇಮಿಗಳ ದಿನಾಚರಣೆಯಂದು ಗಿಪ್ಟ್ ಕಳುಹಿಸುತ್ತೇನೆಂದು ಹೇಳಲು ಸಾಧ್ಯವಾಗುತ್ತಿತ್ತೆ? ಅದು ರೇಣುಕಾಗೆ ಮಾತ್ರ ಸಾಧ್ಯ.
;
ಮೂರು ದಶಕಗಳ ಆಕೆಯ ರಾಜಕೀಯ ಅನುಭವದ ಹಿನ್ನೆಲೆಯಲ್ಲಿ ನೋಡುವುದಾದರೆ ಮೊನ್ನೆಯ ನಗುವಿನಲ್ಲಿತ್ತು ಪುರುಷಮದವನ್ನು ಪ್ರಶ್ನಿಸುವ ಸೊಕ್ಕು. ಆ ಸೊಕ್ಕನ್ನು ಕೆಲವರಿಗೆ, ಅಲ್ಲ ಹಲವರಿಗೆ ಅರಗಿಸಿಕೊಳ್ಳುವುದು ಕಷ್ಟ.





ರಾಮಾಯಣದ ಪ್ರಸ್ತಾಪ ಮಾಡಿದ ಮೋದಿಯವರನ್ನೂ ಸೇರಿಸಿ ಆ ನಗು ಶೂರ್ಪನಖಿಯದೆಂದು ಯಾರೂ ವಾಚ್ಯವಾಗಿ ಹೇಳಿಲ್ಲ. ಆದರೆ ಅದು ಆಕೆಯನ್ನೇ ಉದ್ದೇಶಿಸಿದ್ದು ಎಂಬುದು ಎಲ್ಲರಿಗೂ ತಿಳಿದಿತ್ತು. ಆದರೆ ಅದು ಬಹಿರಂಗವಾಗಿ ಪ್ರಕಟವಾಗಿದ್ದು. ಕೇಂದ್ರ ಗೃಹಸಚಿವಾಲಯದ ರಾಜ್ಯ ಸಚಿವ ಕಿರಣ್ ರಿಜಿಜು ತಮ್ಮ ಪೇಸ್ಬುಕ್ ಪೇಜಿನಲ್ಲಿ ರೇಣುಕಾರನ್ನು ಶೂರ್ಪನಖಿಗೆ ಹೋಲಿಸಿ, ಅದರ ಜೊತೆಗೆ ಶೂರ್ಪನಖಿಯ ವಿಡಿಯೋ ಕ್ಲಿಪ್ಪಿಂಗ್ ಹಾಕಿದಾಗ. ರೇಣುಕಾ ಬಿಡುತ್ತಾರೆಯೇ? ಇದೀಗ  ಕಿರಣ್ ಗೆ ನೋಟೀಸ್ ಜಾರಿ ಮಾಡಿದ್ದು ಮಾತ್ರವಲ್ಲ, ರಾಜ್ಯಸಭೆಯಲ್ಲಿ ಹಕ್ಕುಚ್ಯುತಿ ನಿಲುವಳಿ ಮಂಡಿಸಿದ್ದಾರೆ.

ರೇಣುಕಾಳ ನಗು ಬುಗ್ಗೆ ಒಡೆದ ಕಾರಣ ಯಾವುದೋ ನಮಗೆ ಗೊತ್ತಿಲ್ಲ. ಆಮೇಲೆ ತಾನು ಯಾಕೆ ನಕ್ಕೆ ಎಂದು ಅವರು ಸಮಜಾಯಿಸಿ ಕೊಟ್ಟಿರಬಹುದು. ಆದ್ರೆ ಅದನ್ನು ನೋಡಿದಾಗ ನನ್ನಂತವರಿಗೆ ಹೊಳೆದದ್ದು. ಭಾರತಿಯರಿಗೆ ವಿಶಿಷ್ಟ ಗುರುತಿನ ಚೀಟಿಯನ್ನು ಕೊಡುವ ಯೋಜನೆಯನ್ನು ಮಾಡಿದ್ದು ಕಾಂಗ್ರೇಸ್ ನೇತೃತ್ವದ UPA ಸರಕಾರ. ಕಾಂಗ್ರೇಸ್ ಸರಕಾರ ತರಲೆತ್ನಿಸಿದ್ದ ಆ ಯೋಜನೆಯನ್ನು ಸ್ವತಃ ಮೋದಿಯವರೇ ವಿರೋದಿಸಿದ್ದರು. ನೆರೆಯ ಶತ್ರು ರಾಷ್ಟ್ರ ಇದರ ದುರುಪಯೋಗಪಡಿಸಿಕೊಳ್ಳಬಹುದೆಂಬ ಶಂಕೆ ವ್ಯಕ್ತಪಡಿಸಿದ್ದರು. ಆಗ ಅವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದರು.ಈಗ ಅದನ್ನು ತಮ್ಮ ಸಾಧನೆಯೆಂದು ಬಿಜೆಪಿ ಬಣ್ಣಿಸಿಕೊಂಡರೆ ಮೂರು ದಶಕಗಳ ರಾಜಕೀಯ ಅನುಭವವಿರುವ ರೇಣುಕಾ ಚೌದರಿಗೆ ನಗು ಉಕ್ಕಿಬಾರದೆ ಇನ್ನೇನಾದೀತು!

 ಇದಲ್ಲದೆ. ಕೇವಲ ಐನೂರು ರೂಪಾಯಿ ಕೊಟ್ಟರೆ ಯಾವ ವ್ಯಕ್ತಿಯ ಆಧಾರ ಮಾಹಿತಿಯನ್ನು ಕೂಡಾ ಪಡೆದುಕೊಳ್ಳಬಹುದು ಎಂಬುದನ್ನ್ನು ತಮ್ಮ ತನಿಖಾವರದಿಯ ಮೂಲಕ ಪ್ರಕಟಿಸಿದ ’ದಿ ಟ್ರಿಬ್ಯೂನ್’ ಪತ್ರಿಕೆಯ ವರದಿಗಾರ್ತಿ ರಚನ ಕೈರಾ ಮೇಲೆ ಎಪ್ ಐ ಆರ್ ದಾಖಲಿಸಿದ್ದು ನೆನಪಾಗಿರಲೂಬಹುದು, ಆಧಾರಕಾರ್ಡ್ ಹೊಂದಿಲ್ಲದ ಅದೆಷ್ಟೊ ಜನರಿಗೆ ವೈದಕೀಯ ಸೇವೆ. ಪಡಿತರ, ಪೆನ್ಷನ್, ಬ್ಯಾಂಕ್ ಅಕೌಂಟ್ ಸೇರಿದಂತೆ ಮೂಲಭೂತ ಸೌಲಭ್ಯಗಳು ದೊರಕದೆ ಪಾಡು ಪಡುತ್ತಿರುವುದನ್ನು ನೆನೆದು ನಗು ಬಂದಿರಬಹುದು. ರೇಣುಕಾ ಜೋರಾಗಿ ನಕ್ಕಿದ್ದಾರೆ, ನಮ್ಮಂತವರು ಮನಸ್ಸಿನಲ್ಲಿಯೇ ನಕ್ಕಿದ್ದೇವೆ. ಆ ಸದನದಲ್ಲಿದ್ದ ಉಮಾಭಾರತಿ ಬಾಯಿಗೆ ಕೈಯಿಟ್ಟು ನಗುತ್ತಿದ್ದರು. ನಿರ್ಮಲ ಸೀತರಾಮನ್ ಭಾವನೆಗಳಿಲ್ಲದೆ ಕಲ್ಲಿನಂತೆ ಕೂತಿದ್ದರು. ಭಾರತೀಯ ಜನತಾ ಪಾರ್ಟಿ ತಮ್ಮ ಮಹಿಳಾ ಸದಸ್ಯರಿಗೆ ಭಾವನೆಗಳನ್ನು ಅದುಮಿಟ್ಟುಕೊಂಡು ಬದುಕಿ ಎಂದು ಹೇಳುತ್ತಿದೆಯೇ? ಶೋಭಾ ಕರಂದ್ಲಾಜೆಯನ್ನು ನೋಡಿದರೆ ಹಾಗೆನಿಸುವುದಿಲ್ಲವಲ್ಲಾ!

ಗಂಡುದೃಷ್ಟಿಯಲ್ಲಿ ನೋಡಿದರೆ ರಾವಣನ ತಂಗಿ ಶೂರ್ಪನಖಿ ಎಂಬ ರಾಮಾಯಣದ ಪಾತ್ರವೊಂದು ಏನನ್ನು ಪ್ರತಿನಿಧಿಸುತ್ತದೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ತೀರಾ ಇತ್ತೀಚೆಗಿನ ಉದಾಹರಣೆಯನ್ನು ಕೊಡುವುದಾದರೆ ’ಪದ್ಮಾವತಿ’ ಸಿನೇಮಾದ ಬಿಡುಗಡೆ ಕುರಿತಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ರಾಜ್ಯದಲ್ಲಿ ಪದ್ಮಾವತಿ ಬಿಡುಗಡೆಗೆ ಯಾವುದೇ ಅಡ್ಡಿ ಇಲ್ಲ ಎಂದು ಹೇಳಿದಾಗ ಅದೇ ರಾಜ್ಯದ  ಬಿಜೆಪಿ ಮುಖಂಡರಾದ ಸೂರಜ್ ಪಾಲ್ ಮುಖ್ಯಮಂತ್ರಿಯನ್ನೇ ಬೆದರಿಸುವ ಧಾಟಿಯಲ್ಲಿ ಹೇಳುತ್ತಾರೆ; ’ಶೂರ್ಪಮಖಿ ರೀತಿಯ ಕೆಟ್ಟ ಉದ್ದೇಶಗಳನ್ನು ಇಟ್ಟುಕೊಂಡ ಕೆಲವು ಮಹಿಳೆಯರಿದ್ದಾರೆ. ಲಕ್ಷ್ಮಣ ಶೂರ್ಪನಖಿಯ ಮೂಗು ಕತ್ತರಿಸಿ ಆಕೆಗೆ ಬುದ್ದಿ ಕಲಿಸಿದ್ದ. ಮಮತಾ ಬ್ಯಾನರ್ಜಿಯವರು ಇದನ್ನು ಮರೆಯಬಾರದು’

’ಬುದ್ದಿ ಕಲಿಸುವುದು ಅಂದರೇನು?


 ನನ್ನ ಬಾಲ್ಯದಲ್ಲಿ ನಮ್ಮಜ್ಜಿ ಹೇಳುತ್ತಿದ್ದರು; ನೆಲ ಅದುರುವಂತೆ ಹೆಣ್ಮಕ್ಕಳು ನಡೆಯಬಾರದು, ಅವರ ನಗು ಹಿತ್ತಲಿಗೆ ಕೇಳಿಸಬಾರದು. ಗಂಡಸರ ಎದುರು ಕಾಲು ಮೇಲೆ ಕಾಲು ಹಾಕಿ ಕೂತುಕೊಳ್ಳಬಾರದು,ಅವರೆದುರು ತಲೆಯೆತ್ತಿ ನಿಲ್ಲಬಾರದು. ಅವರಿಗೆ ಎದುರುತ್ತರ ಕೊಡಬಾರದು

ಆದರೆ ಅದನ್ನೆಲಾ ನಾವು ದಿಕ್ಕರಿಸಿ ನಿಂತವರೇ. ಈಗ ನಮ್ಮಜ್ಜಿಯ ಸ್ಥಾನದಲ್ಲಿ ಈ ಬಿಜೆಪಿಯ ಮುಖಂಡರು ನಿಂತಿದ್ದಾರೆ!
ಯಾಕೆ ಗಂಡಸರು ಹೆಣ್ಣಿನ ನಗೆಯನ್ನು. ಆಕೆಯ ಸ್ವಾಭಿಮಾನದ ನಿಲುವನ್ನು, ಆಕೆಯ ಜೀವನಪ್ರೀತಿಯನ್ನು ತಮ್ಮ ಅಪಮಾನ, ತಮ್ಮ ಸೋಲು ಎಂದು ಭಾವಿಸುತ್ತಾರೆ. ಅದು ಆಕೆಯ ಬೌದ್ಧಿಕ ಆಸ್ಮಿತೆಯೂ ಯಾಕಾಗಿರಬಾರದು?
ಯಾರಾದರೂ ಜೋರಾಗಿ ನಕ್ಕಾಗ, ಆ ನಗುವನ್ನು ಶೂರ್ಪನಖಿಯ ನಗೆಗೆ ಹೋಲಿಸಿದಾಗ ನನ್ನಲ್ಲಿ ಕೆಲವು ಪ್ರಶ್ನೆಗಳು ಮೂಡುವುದುಂಟು;

ಶೂರ್ಪನಖಿ ಯಾವಾಗ ಹಾಗೆ ನಕ್ಕಳು? ಯಾಕೆ ನಕ್ಕಳು? . ರಾಮಾಯಣವನ್ನು ಓದಿದದವರಿಗೆ ಗೊತ್ತಿದೆ; ಆಕೆ ರಾಮನನ್ನು ನೋಡಿ ಮೋಹಗೊಂಡವಳು. ಹಾಗಾಗಿ ಆಕೆ ಅವನನ್ನು ನೋಡಿ ಲಜ್ಜೆಯಿಂದ ಮುಗುಳ್ನಕ್ಕಿರಬಹುದು. ಕುತಂತ್ರಿ ರಾಮನಿಂದಾಗಿ ಲಕ್ಷ್ಮಣ ಆಕೆಯ ಮೊಲೆ,ಮೂಗುಗಳನ್ನು ಕೊಯ್ದು ವಿರೂಪಗೊಳಿಸುತ್ತಿರುವಾಗ ನೋವಿನಿಂದ ಆರ್ತನಾದ ಮಾಡಿರಬಹುದು. ಆದರೆ ಅಟ್ಟಹಾಸದ ನಗು? ಅಂಥ ನಗು ರಾಮಾಯಣದಲ್ಲಿ ಇದ್ದಂತಿಲ್ಲ. ಅಂದರೆ ಕಾಲಾಂತರದಲ್ಲಿ ಆಕೆಯ ಹೆಸರಿಗೆ ಆ ನಗುವನ್ನು ಆರೋಪಿಸಲಾಯ್ತು; ಹೇರಲಾಯ್ತು. ಯಾರು ಹೇರಿದರು? ಹೆಣ್ಣಿನ ಅಸ್ಮಿತೆಯನ್ನು ಸಹಿಸಲಾಗದ  ’ಪುರುಷ ಅಹಂ’ ಹುಟ್ಟು ಹಾಕಿದ್ದೇ ’ಶೂರ್ಪನಖಿ ನಗು’

ಹಿಡಿಬೆಯೂ ತನ್ನನ್ನು ಮದುವೆಯಾಗು ಎಂದು ಭೀಮನನ್ನು ಕೇಳಿದ್ದಳು; ಆತ ತನ್ನ ಆಪ್ತರ ಒಪ್ಪಿಗೆಯನ್ನು ಪಡೆದು ಅವಳನ್ನು ಮದುವೆಯಾಗಿದ್ದ. ಲೋಕ ಆ ದಾಂಪತ್ಯವನ್ನು ಒಪ್ಪಿಕೊಂಡಿತ್ತು. ಮಾತ್ರವಲ್ಲ .ಗಾಢಪ್ರೀತಿಯನ್ನು ’ಹಿಡಿಂಬೆ ಪ್ರೀತಿ’ ಎಂದೂ ಮೆಚ್ಚುಗೆಯನ್ನೂ ವ್ಯಕ್ತಪಡಿಸುತ್ತದೆ.
ಇಲ್ಲಿ, ಹಿಡಿಂಬೆಯ ಪ್ರೀತಿ ಶ್ರೇಷ್ಟವಾದದ್ದು, ಶೂರ್ಪನಖಿಯ ಪ್ರೀತಿ ಕನಿಷ್ಟಮಟ್ಟದ್ದು ಎಂದು ಹೇಳಲು ಸಾಧ್ಯವೇ? ಪ್ರೀತಿ, ಪ್ರೀತಿ ಮಾತ್ರ. ಆದರೂ ಲೋಕದೃಷ್ಟಿಯಲ್ಲಿ ಶೂರ್ಪನಖಿಯ ಪ್ರೇಮ ಕೀಳು. ಹಿಡಿಂಬೆಯ ಪ್ರೀತಿ ಶ್ರೇಷ್ಟ!. ಒಂದು ರೀತಿಯಲ್ಲಿ ಈ ಎರಡು ಪಾತ್ರಗಳು ಎರಡು ಮಾಹಾಕಾವ್ಯಗಳ ನಡುವಿನ ಕಾಲದ ಅಂತರವನ್ನು ಕೂಡಾ ಹೇಳುತ್ತದೆ. ಎರಡು ಕಾಲಘಟ್ಟಗಳಲ್ಲಿ, ಎರಡು ಕವಿಗಳು ಕೆತ್ತಿದ, ಎರಡು ಸ್ತ್ರೀ ಪಾತ್ರಗಳು ಆ ಕಾಲದ ಸಮಾಜಿಕ ಮೌಲ್ಯಗಳನ್ನು ಕೂಡಾ ಹೇಳುತ್ತದೆ.

ಇಂದು ಈ ಕಾಲಘಟ್ಟದಲ್ಲಿ ನಿಂತು ಆ ಕಾಲದ ಹೆಣ್ಣುಗಳನ್ನು ಇಲ್ಲಿನ ಸ್ತ್ರೀಯರಿಗೆ ಹೋಲಿಸುವುದು ಎಷ್ಟು ಸರಿ?
ಈ ಲೇಖನವನ್ನು ಬರೆದು. ಈ ಹಿಂದೆಯೇ ನಿಗದಿಪಡಿಸಿದಂತೆ ಶೂರ್ಪನಖಿಯ ತವರುಭೂಮಿಯಾದ ಶ್ರೀಲಂಕಾಕ್ಕೆ ಹೋಗುತ್ತಿದ್ದೇನೆ. ಅಲ್ಲಿ ಎಲ್ಲಿಯಾದರೂ ಪುರಾಣ ಪ್ರತಿಮೆಯಾದ ದಿಟ್ಟ, ಸ್ವತಂತ್ರ ವ್ಯಕ್ತಿತ್ವದ ಸ್ವಾಭಿಮಾನಿ ಶೂರ್ಪನಖಿ ಮುಖಾಮುಖಿಯಾಗುತ್ತಾಳೋ ಅಂತ ಹುಡುಕಾಡುತ್ತೇನೆ. ಅವಳೇನಾದರೂ ಸಿಕ್ಕಿದರೆ ಅವಳನ್ನೇ ಕೇಳುತ್ತೇನೆ ’ಶೂರ್ಪನಖಿ ನಗು ಎಂದರೇನು?’


Sunday, December 10, 2017

’ಮಜೂಲಿ ’ ಬ್ರಹ್ಮಪುತ್ರನ ಕಂದ!



ಏಳು ಸಮುದ್ರಗಳ ನಡುವೆಯೊಂದು ದ್ವೀಪ. ಅಲ್ಲಿ  ಬಂಧನದಲ್ಲಿರುವ ರಾಜಕುಮಾರಿ. ಅವಳನ್ನು ಬಿಡಿಸಿಕೊಂಡು ಬರಲು ಹೊರಟ್ ರಾಜಕುಮಾರ್. ಅವನು ಎದುರಿಸುವ ಸಂಕಷ್ಟಗಳು...ಇದೆಲ್ಲಾ ಬಾಲ್ಯದಲ್ಲಿ ನಾವು ಕಣ್ಣರಳಿಸಿಕೊಂಡು ಕೇಳುತ್ತಿದ್ದ ರಮ್ಯ ಕಥೆ.  ಆ ರಾಜಕುಮಾರಿ ನಾನಾಗಿದ್ದರೆ? ಆ ದ್ವೀಪಕ್ಕೆ ಹೋಗಲು ಸಾಧ್ಯವಾಗಿದ್ದರೆ?

ಹೌದು, ಕನಸುಗಾರರ. ಸಾಹಸಿಗಳ. ಏಕಾಂತಪ್ರಿಯರ ಮನಸ್ಸನ್ನು ಸೆಳೆಯುವ ನಿಗೂಡಶಕ್ತಿ ದ್ವೀಪಗಳಿಗಿದೆ; ಸಮುದ್ರಕ್ಕಿದೆ; ಸಮುದ್ರದಂತಹ ನದಿಗಿದೆ. ಬ್ರಹ್ಮಪುತ್ರವೆಂಬ ಉನ್ಮತ್ತ ನದಿಯ ಕಾಂತಶಕ್ತಿ ಇನ್ನೂ ವಿಸ್ತಾರವಾದದ್ದು. ಅಂತಹ ಕಾಂತಶಕ್ತಿಯಿಂದ ಸೆಳೆಯಲ್ಪಟ್ಟು ನಾನು ಮಜೂಲಿ ಎಂಬ ದ್ವೀಪಕ್ಕೆ ಹೋದೆ. ನನ್ನ ಪ್ರವಾಸದ ಪಟ್ಟಿಯಲ್ಲಿ ಮಜೂಲಿಯ ಹೆಸರಿರಲಿಲ್ಲ. ನನ್ನ ಗಮ್ಯ ಬ್ರಹ್ಮಪುತ್ರ ಎಂಬ ಮಹಾನದಿಯ ಚೊಚ್ಚಲ ಉತ್ಸವ ’ ನಮಾಮಿ ಬ್ರಹ್ಮಪುತ್ರ’ವನ್ನು ನೋಡುವುದಾಗಿತ್ತು ಆದರೆ ನಾನವನ ಮಗುವಿನ ಮೋಹದಲ್ಲಿ ಬಿದ್ದೆ.!

ಹೌದು! ಮಾಜೂಲಿ ಬ್ರಹ್ಮಪುತ್ರ ಸ್ರುಜಿಸಿದ ದ್ವೀಪ. ಜಗತ್ತಿನಲ್ಲಿಯೇ ನದಿಯೊಂದು ಹುಟ್ಟು ಹಾಕಿದ  ಅತ್ಯಂತ ದೊಡ್ಡ ದ್ವೀಪವಿದು. ಹಾಗೆಂದು ಗಿನ್ನಿಸ್ ಬುಕ್ ನಲ್ಲಿಯೂ ದಾಖಲಾಗಿದೆ.
ಸತ್ರದೊಳಗಿನ ಮೂಲದೇವರು ಕೃಷ್ಣ.
ಜಗತ್ತಿನ ಅತೀ ದೊಡ್ಡ ನದಿಗಳ ಪಟ್ಟಿಯಲ್ಲಿ ಭಾರತದ ಬ್ರಹ್ಮಪುತ್ರವೂ ಸೇರಿದೆ. ಅದೊಂದು ಉನ್ಮತ್ತ ನದಿ. ಬ್ರಹ್ಮದೇವನ ಪುತ್ರನಾದ ಕಾರಣ ಇದು ಬ್ರಹ್ಮಪುತ್ರ. ಹಾಗಾಗಿಯೇ ಇದು ಗಂಡುನದಿ, ಗಂಡಾದ ಕಾರಣದಿಂದಾಗಿಯೇ ಅಬ್ಬರ ಜಾಸ್ತಿ; ವಿದ್ವಂಸಕತೆಯೆಡೆಗೆ ಒಲವೆನ್ನಬಹುದೇ?. ಇದರ ಹರಹನ್ನು ನೋಡಿದವರು ಖಂಡಿತವಾಗಿಯೂ ಇದನ್ನು ನದಿಯೆನ್ನಲಾರರು ಅದೊಂದು ಸಮುದ್ರ.ಅದರಲ್ಲಿಯೂ ಸಾಗರದಂತೆ ಅಲೆಗಳೇಳುತ್ತವೆ. ಸೊಕ್ಕಿ ಹರಿದರೆ ಅಪಾರ ಸಂಖ್ಯೆಯಲ್ಲಿ ಆಸ್ತಿ ಮತ್ತು ಜೀವ ಹಾನಿಯನ್ನು ಉಂಟುಮಾಡುತ್ತದೆ. ಪ್ರತಿವರ್ಷವೂ ಈ ನದಿ ಉಕ್ಕಿ ಹರಿಯುತ್ತದೆ; ಇಲ್ಲಿಯ ಜನರ ದುಃಖಕ್ಕೆ ಕಾರಣವಾಗುತ್ತದೆ.

ಬ್ರಹ್ಮಪುತ್ರ ಅಸ್ಸಾಂ ಜನತೆಯ ಜೀವಚೈತನ್ಯವೂ ಹೌದು, ಕಣ್ಣೀರಿನ ನದಿಯೂ ಹೌದು. ೧೯೭೦ರಲ್ಲಿ ಸಂಭವಿಸಿದ ಭೀಕರ ನೆರೆಯಲ್ಲಿ ಸುಮಾರು ಮೂರು ಲಕ್ಷದಿಂದ ಐದು ಲಕ್ಷದಷ್ಟು ಜನರು ಸತ್ತಿರಬಹುದೆಂದು ಅಂದಾಜು ಮಾಡಲಾಗಿದೆ. ಕಳೆದ ವರ್ಷ ಈ ನದಿಯಲ್ಲಿ ನೆರೆ ಬಂದು ಕಾಜೀರಂಗ ನ್ಯಾಷನಲ್ ಪಾರ್ಕ್ ಮುಳುಗಿ ಅಸಂಖ್ಯಾತ ಪ್ರಾಣಿಗಳು ಕೊಚ್ಚಿ ಹೋಗಿದ್ದವು.
ಬ್ರಹ್ಮಪುತ್ರನ ಪುಟ್ಟ ಮಗು ಮಾಜುಲಿ. ಇದಕ್ಕಿರುವುದು ಕೇವಲ ನಾಲ್ಕು ಶತಮಾನಗಳ ಇತಿಹಾಸ.ಇದರ ಹುಟ್ಟಿನ ಕಥೆ ಕೇಳಿ;
ಮಾಜುಲಿ ಅಂದರೆ ಅಸ್ಸಾಮಿ ಭಾಷೆಯಲ್ಲಿ ಸಮಾನಂತರವಾಗಿ ಹರಿಯುವ ಎರಡು ನದಿಗಳ ನಡುವಿನ ಭೂಮಿ ಎಂದರ್ಥ. ಈಗ ನಮಗೆ ಗೋಚರವಾಗುವ ಮಾಜುಲಿ ದ್ವೀಪ ಹಿಂದೊಮ್ಮೆ ಬ್ರಹ್ಮಪುತ್ರನ ಒಡಲೊಳಗಿತ್ತು. . ಡಿಬಾಂಗ್ ಮತ್ತು ಬ್ರಹ್ಮಪುತ್ರ ನದಿಗಳು ಪರಸ್ಪರ ೧೯೦ ಕಿ.ಮೀ ದೂರದಲ್ಲಿ ಸಮಾನಂತರವಾಗಿ ಹರಿಯುತ್ತಿದ್ದವು. ಅದು ೧೭೫೦ ರ ಸಮಯ.ಸತತ ಹದಿನೈದು ದಿನಗಳ ಕಾಲ ಮಳೆ ಸುರಿಯಿತು. ಜೊತೆಗೆ ಆ ಪ್ರದೇಶದಲ್ಲಿ ಭೂಕಂಪನವೊಂದು ಸಂಭವಿಸಿತು. ಎರಡೂ ನದಿಗಳು ಹುಚ್ಚೆದ್ದು ಕುಣಿದು ತಮ್ಮ ತಮ್ಮ ಪಾತ್ರಗಳ ಮೇರೆ ಮೀರಿ ಹರಿದು ಒಂದನ್ನೊಂದು ಅಪ್ಪಿಕೊಂಡವು. ಆವರಿಬ್ಬರೂ ಸೇರಿ ಬಳುಕಿದ ಜಾಗದಲ್ಲಿ ಭೂಭಾಗವೊಂದು ನಿರ್ಮಾಣವಾಯ್ತು, ಅದುವೇ ಮಜೂಲಿ ದ್ವೀಪ.

ಸತ್ರದ ಹೊರಮೈ
ಮಜೂಲಿ ದ್ವೀಪ ಉದಯವಾದ ಕಾಲಕ್ಕೆ ಅದರ ವಿಸ್ತೀರ್ಣ ೧೨೨೫ ಚದರ ಕಿ.ಮೀ ಆಗಿತ್ತು. ಕ್ರಮೇಣ ಬ್ರಹ್ಮಪುತ್ರ ಅದನ್ನು ಕಬಳಿಸುತ್ತಾ ಬಂದು ಈಗ ಕೇವಲ ೫೨೦ ಚದರ ಕಿ.ಮೀ ಭೂಭಾಗ ಉಳಿದುಕೊಂಡಿದೆ. ಭೂಮಿಯ ತಾಪಮಾನ ಏರುತ್ತಲೇ ಇದೆ. ವಾತಾವರಣದಲ್ಲಿ ಅಸಾಧಾರಣವಾದ ಏರುಪೇರುಗಳಾಗುತ್ತಿದೆ. ಹಿಮಾಲಯ ಕರಗುತ್ತಿದೆ. ಹಾಗಾಗಿ ಬ್ರಹ್ಮಪುತ್ರನ ನೆರೆ ಹೆಚ್ಚುತ್ತಲೇ ಇದೆ. ಹೀಗೇ ಮುಂದುವರಿದರೆ ಇನ್ನೆರಡು ದಶಕದಲ್ಲಿ ಮಾಜುಲಿ ದ್ವೀಪ ಮತ್ತೆ ಬ್ರಹ್ಮಪುತ್ರನ ಒಡಲನ್ನು ಸೇರಲಿದೆ ಎಂದು ತಜ್ನರು ಈಗಾಗಲೇ ಅಭಿಪ್ರಾಯ ಪಟ್ಟಿದ್ದಾರೆ.

ಇದೇ ವರ್ಷ ಮಾರ್ಚ್ ೩೧ರಿಂದ ಏಪ್ರಿಲ್ ೪ ರತನಕ ಅಸ್ಸಾಂನಲ್ಲಿ ’ನಮಾಮಿ ಬ್ರಹ್ಮಪುತ್ರ’ ಉತ್ಸವ ನಡೆಯಿತು. ಅದರಲ್ಲಿ ಭಾಗವಹಿಸುವುದಕ್ಕಾಗಿ ಅಸ್ಸಾಂನ ರಾಜಧಾನಿ ಗೌಹಾಟಿಗೆ ಹೋಗಿದ್ದೆ. ಈ ಹಿಂದೆ ಕಾಶ್ಮೀರದ ಲಡಾಕ್ ನಲ್ಲಿ ನಡೆಯುತ್ತಿರುವ ’ಸಿಂಧು ಉತ್ಸವ’ ವನ್ನು ನೋಡಿದ್ದೆ. ಹಾಗಾಗಿ ಇದನ್ನೂ ನೋಡುವ ಬಯಕೆ ಹುಟ್ಟಿತ್ತು. ಆದರೆ ಈ ಬಾರಿ ಅಸ್ಸಾಂಗೆ ವಾಡಿಕೆಯ ಮೊದಲೇ ಮಳೆಗಾಲ ಆರಂಭವಾದಂತಿತ್ತು. ಉದ್ಘಾಟನೆಯಂದು ಆರಂಭವಾದ ಮಳೆ ಸಮಾರೋಪದ ತನಕ ಎಡೆಬಿಡದೆ ಸುರಿಯಿತು. ಬ್ರಹ್ಮಪುತ್ರದ ದಂಡೆಯ ಮೇಲೆ ನಿರ್ಮಿಸಿದ ಮುಖ್ಯ ವೇದಿಕೆಯಲ್ಲಿ ಒಂದೇ ಒಂದು ಸಾಂಸ್ಕ್ರುತಿಕ ಕಾರ್ಯಕ್ರಮವೂ ನಡೆಯಲಿಲ್ಲ. ನಾನು ಮತ್ತು ನನ್ನ ಪ್ರೆಂಡ್ ಹೊರಗೆ ಸುರಿಯುತ್ತಿದ್ದ ಮಳೆಯನ್ನು ನೋಡುತ್ತಾ ಬೆಂಗಳೂರಿನ ರಣಬಿಸಿಲನ್ನು ನೆನಪಿಸಿಕೊಳ್ಳುತ್ತಾ ಎರಡು ದಿನ ಕಳೆದವು. ರಿಟರ್ನ್ ಟಿಕೇಟ್ ಬುಕ್ ಆಗಿದ್ದ ಕಾರಣದಿಂದ ಅಲ್ಲಿಯೇ ಉಳಿಯುವುದು ಅನಿವಾರ್ಯವಾಗಿತ್ತು. ಎರಡನೆಯ ರಾತ್ರಿ ಗೂಗಲ್ ನಲ್ಲಿ ಸರ್ಚ್ ಮಾಡುತ್ತಾ  ಗೌಹಾಟಿಯ ಸುತ್ತಮುತ್ತ ಯಾವುದಾದರೂ ಪ್ರೇಕ್ಷಣಿಯ ಸ್ಥಳವಿದೆಯೇ ಎಂದು ಹುಡುಕಾಡತೊಡಗಿದೆವು. ಆಗ ಸಿಕ್ಕಿದ್ದೇ ಈ ಮಜೂಲಿಯೆಂಬ ಸ್ವರ್ಗ. ಸರಿ ಬ್ಯಾಗನ್ನು ಹೋಟೇಲ್ ನಲ್ಲೇ ಬಿಟ್ಟು ಬ್ಯಾಕ್ ಪ್ಯಾಕ್ ಏರಿಸಿಕೊಂಡು ರಾತ್ರಿ ಬಸ್ಸಿನಲ್ಲಿ ಕುಳಿತೆವು.

ಸತ್ರದ ಪ್ರವೇಶ ದ್ವಾರ.
 ಗೌಹಾಟಿಯಿಂದ ಮಜೂಲಿ ೩೦೦ ಕಿ.ಮೀ ದೂರದಲ್ಲಿದೆ. ಮಾಜುಲಿಗೆ ಹೋಗಲು ಎರಡು ಮಾರ್ಗಗಳಿವೆ, ಹತ್ತಿರದ ದಾರಿಯೆಂದರೆ ಗೌಹಾಟಿಯಿಂದ ಜೋರಾಟ್ ಗೆ ಹೋಗಬೇಕು. ಬಸ್ಸಿನಲ್ಲಾದರೆ ಆರು ಘಂಟೆ ಬೇಕು. ಅಲ್ಲಿಂದ ಶೇರ್ ಆಟೋ ಹಿಡಿದು ನಿಮಾಟಿ ಘಾಟ್ಗೆ ಬಂದರೆ ಅಲ್ಲಿ ಮಜೂಲಿಗೆ ಹೋಗುವ ಪೆರ್ರಿ ಸಿಗುತ್ತದೆ. ನಿಮಾಟಿ ಘಾಟ್ ಎಂಬುದು ಬ್ರಹ್ಮಪುತ್ರಾದ ನದಿ ಬಂದರು. ಗೌಹಾಟಿಯಿಂದ ಕಾರು ಮಾಡಿಕೊಂಡು ಬಂದರೆ ಕಾರು ಸಮೇತ ಪೆರ್ರಿಯಲ್ಲಿ ಸಾಗಬಹುದು. ನಿಮಟಿಘಾಟ್ ನಿಂದ ಮಜೂಲಿ ೨೦ ಕಿ.ಮೀ ದೂರದಲ್ಲಿದೆ. ಇನ್ನೊಂದು ಹಾದಿ ಲಕಮಿಪುರದ ಮೇಲೆ ನೇರ ಮಜೂಲಿಯನ್ನು ತಲುಪುವುದು. ಇದು ತುಂಬಾ ದೂರದ ಹಾದಿ ಒಂಬತ್ತು ಘಂಟೆಯ ಪಯಣ. ಈ ಹಾದಿಯಲ್ಲಿ ಪೆರ್ರಿಯಲ್ಲಿ ಹೋಗಬೇಕಾಗಿಲ್ಲ. ಬ್ರಹ್ಮಪುತ್ರ ಮತ್ತು ಮಜೂಲಿಯ ನಡುವೆ ಕಿರಿದಾದ ನದಿ ಹರಿವು ಇದ್ದೆಡೆಯಲ್ಲಿ ಭೂಮಿಯನ್ನೇ ಮುಂದೊತ್ತಿ ಒಂದು ಸೇತುವೆಯನ್ನು ನಿರ್ಮಿಸಿ ಅದರ ಮುಖಾಂತರ ಬಸ್ಸು ಹೋಗುವಂತೆ ಮಾಡಲಾಗಿತ್ತು. ನಾವು ಮಾಹಿತಿಯ ಕೊರತೆ ಕಾರಣವಾಗಿ ಈ ಬಸ್ಸಿನಲ್ಲಿ ಟಿಕೇಟ್ ರಿಸರ್ವ ಮಾಡಿಸಿದ್ದೆವು. ಬಸ್ಸು ಹತ್ತುವಾಗಲೇ ನಮಗೆ ಅನುಮಾನ ಮೂಡಿತ್ತು. ಅದರಲ್ಲಿದ್ದುದು ಕೆಲವೇ ಪ್ರಯಾಣಿಕರು. ಲಕುಮಿಪುರಕ್ಕೆ ಹೋಗುವ ಐದಾರು ಪ್ರಯಾಣಿಕರ ಜೊತೆ  ಮಜುಲಿಗೆ ಹೊರಟವರು ನಾವಿಬ್ಬರೇ!

ನಮ್ಮ ಗ್ರಹಚಾರ ನೆಟ್ಟಗಿರಲಿಲ್ಲ. ಮಧ್ಯರಾತ್ರಿಯಲ್ಲಿ ಯಾವುದೋ ಊರಲ್ಲಿ ಬಸ್ಸು ಕೆಟ್ಟು ನಿಂತಿತು. ಡ್ರೈವರ್ ರಿಪೇರಿ ಮಾಡಿದ, ಬಸ್ಸು ಮುಂದೆ ಹೋಗುತ್ತಿತ್ತು. ಮತ್ತೆ ಕೆಟ್ಟು ನಿಲ್ಲುತ್ತಿತ್ತು..ಮತ್ತೆ ..ಮತ್ತೆ..
ಆದಿವಾಸಿಗಳ ಗುಡಿಸಲು
ಬೆಳಿಗ್ಗೆ ಮಜೂಲಿಗೆ ತಲುಪಬೇಕಾದವ್ರು ಅಂತೂ ಇಂತೂ ಮಧ್ಯಾಹ್ನ ಒಂದೂವರೆಗೆ ತಲುಪಿದೆವು. ಆದರೆ ಬಹಳಷ್ಟು ಸಂದರ್ಭದಲ್ಲಿ ನನಗೆ ನಾನೇ ಹೇಳಿಕೊಳ್ಳುವ ಹಾಗೆ ಗುರಿಯಷ್ಟೇ ಮುಖ್ಯವಲ್ಲ ಅದನ್ನು ಕ್ರಮಿಸುವ ಹಾದಿಯೂ ಅಷ್ಟೇ ಮುಖ್ಯ ಎಂಬುದು ಇಲ್ಲಿಯೂ ಮನದಟ್ಟಾಯ್ತು. ದಾರಿಯ ಎರಡೂ ಬದಿಯಲ್ಲೂ ಹಸಿರೇ ಹಸಿರು. ಪೈರಿನಿಂದ ಕಂಗೊಳಿಸುವ ಹೊಲಗದ್ದೆಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿದ್ದವು.ಅಲ್ಲಲ್ಲಿ ಸಿಗುತ್ತಿದ್ದ ಸ್ಥಳೀಯ ಮುಗ್ಧ ಜನರು, ಅವರ ಪ್ರೀತಿ, ವಿಶ್ವಾಸದ ಮಾತುಗಳ ಮಧ್ಯೆ ಪ್ರಯಾಣ ಕಷ್ಟವೆನಿಸಲಿಲ್ಲ.

ಮಜೂಲಿ ಬಸ್ ನಿಲ್ದಾಣ್ದಲ್ಲಿ ಇಳಿದ ಜಾಗದಲ್ಲಿ ಪುಟ್ಟ ಕಟ್ಟಡದ ಮಹಡಿ ಮೇಲೊಂದು ಊಟದ ಹೋಟೇಲಿತ್ತು. ಆ ಹೋಟಿಲಿನ ಓನರ್ ಒಬ್ಬ ನಗುಮೊಗದ ಯುವಕ, ಕಲ್ಕತ್ತಾದವನಂತೆ, ಅತ್ಯಂತ ಆದರದಿಂದ ಬಿಸಿ ಬಿಸಿಯಾದ ರುಚಿಯಾದ ಊಟ ಬಡಿಸಿದಾಗ ಆತನೊಬ್ಬ ದೇವದೂತನಂತೆ ನಮಗೆ ಕಂಡ. ಯಾಕೆಂದರೆ ಕಳೆದ ರಾತ್ರಿಯಲ್ಲಿ ಯಾವುದೋ ಊರಿನಲ್ಲಿ ಒಂದು ಮೀನು ಪ್ರೈ ತಿಂದಿದ್ದು ಬಿಟ್ಟರೆ  ಏನನ್ನೂ ತಿಂದಿರಲಿಲ್ಲ. ಬ್ಯಾಗಲಿದ್ದ ಬಿಸ್ಕತ್ತು, ಕುರುಕಲು ತಿಂಡಿಗಳು ಬೀಮನ ಹೊಟ್ಟೆಗೆ ಕಾಸಿನ ಮಜ್ಜಿಗೆಯಾಗಿದ್ದವು. ನಮ್ಮೊಡನೆ ನಮ್ಮ ಡ್ರೈವರ್ ಕೂಡಾ ಉಪವಾಸವಿದ್ದ. ಅಷ್ಟು ಅಡೆತಡೆಗಳಾದರೂ ತಮಾಶೆಯಾಗಿ ಹರಟುತ್ತಾ ಇದ್ದ ಕೆಲವೇ ಮಂದಿ ಪ್ರಯಾಣಿಕರನ್ನು ಉಲ್ಲಾಸದಿಂದಿಡಲು ಪ್ರಯತ್ನಿಸುತ್ತಿದ್ದ ಅವರ ನೆನಪು ಊಟ ಮಾಡುತ್ತಿರುವಾಗ ಕಾಡಿತು.
ಇದು ತುಲಸಿ ಮರದ ದಿಮ್ಮಿಯಂತೆ!
ಗೌಹಾಟಿಯಿಂದ ಹೊರಡುವಾಗಲೇ ಮಜೂಲಿಯಲ್ಲಿ ಒಂದು ವೆಹಿಕಲ್ ತಗೊಂಡು ಇಡೀ ದಿನ ದ್ವೀಪ ಸುತ್ತುವ ಪ್ಲಾನ್ ಮಾಡಿದ್ದೆವು. ಸಾಧ್ಯಾವಾದರೆ ಅಲ್ಲಿಯ ಮೂಲನಿವಾಸಿಯ ಮನೆಯಲ್ಲಿ ಅವರದೇ ಶೈಲಿಯ ಊಟ ಮಾಡಬೇಕೆಂದಿದ್ದೆವು. ಆದರೆ ಈ ಲಟಾರಿ ಬಸ್ಸಿನ ದೆಸೆಯಿಂದ ನಮ್ಮ ಪ್ಲಾನ್ ಎಲ್ಲಾ ಉಲ್ಟಾ ಆಗಿತ್ತು. ಈಗ ನಮ್ಮಲ್ಲಿ  ಹೆಚ್ಚೆಂದರೆ ಎರಡು ಘಂಟೆಯಷ್ಟೇ ಸಮಯವಿತ್ತು. ನಮ್ಮ ಸಮಸ್ಯೆಯನ್ನು ನಮಗೆ ಅನ್ನ ನೀಡಿದ ಯುವಕನಲ್ಲಿ ತೋಡಿಕೊಂಡಾಗ ಆತ ಮಹಡಿ ಮೇಲಿನಿಂದಲೇ ಕೆಳಗಿದ್ದ ಕಾರಿನವನಿಗೆ ಏನೋ ಹೇಳಿ ನಮ್ಮತ್ತ ತಿರುಗಿ’ ಆ ಕಾರಿನಲ್ಲಿ ಹೋಗಿ ಆತ ನಿಮ್ಮನ್ನು ಊರಲ್ಲಾ ಸುತ್ತಾಡಿ ನಿಮ್ಮನ್ನು ಪೆರ್ರಿಗೆ ಸಕಾಲದಲ್ಲಿ ತಲುಪಿಸುತ್ತಾನೆ ಎಂದ. ನಿಮಿಟಿಘಾಟ್ ಗೆ ಹೋಗುವ ಕೊನೆಯ ಪೆರ್ರಿ ಮೂರೂವರೆಗೆ ಎಂದು ಗೊತ್ತಾಯ್ತು. ಅಷ್ಟರೊಳಗೆ ಅಂದರೆ ಒಂದೂಮುಕ್ಕಾಲು ಘಂಟೆಯೊಳಗೆ ನಾವು ಊರೆಲ್ಲಾ ಸುತ್ತಬೇಕಾಗಿತ್ತು; ಹೊರಟೆವು. ಪ್ರವಾಸ ಕಾಲದಲ್ಲಿ ಪ್ಲಾನ್ ಗಳು ತಲೆ ಕೆಳಗಾಗುವುದು ಸಾಮನ್ಯ. ಆಗ ಅದನ್ನು ತಮಗೆ ಅನುಕೂಲಕರವಾಗುವಂತೆ ಪರಿವರ್ತಿಸಿಕೊಳ್ಳುವುದೂ ಒಂದು ಕಲೆ. ’ಇದಲ್ಲದಿದ್ದರೆ ಅದು. ಅದು ಸಾಧ್ಯವಾಗದಿದ್ದರೆ ಇದು ” ಅಷ್ಟೇ. ಮುಖ ಬಾಡಿಸಿಕೊಂಡು ಯಾರನ್ನೋ ಬಯ್ದುಕೊಂಡು, ಅದ್ರುಷ್ಟವನ್ನು ಹಳಿದುಕೊಂಡು ಕೈಚೆಲ್ಲಿ ಕುಳಿತುಕೊಳ್ಳಬಾರದು. .

ತುಲಸಿ ಮರ!
೫೨೦ ಚದರ ಕಿ.ಮೀ ಸುತ್ತಳತೆಯ ಮಜೂಲಿ ಜಿಲ್ಲೆಯ ಜನಸಂಖ್ಯೆ ಸುಮಾರು ಒಂದು ಲಕ್ಷದ ಅರುವತ್ತೇಳು ಸಾವಿರ. ಕಾರಲ್ಲಿ ಕೂತ ಒಡನೆಯೇ ನಾವು ಭೇಟಿ ಕೊಟ್ಟದ್ದು ಇಲ್ಲಿಯ ಸತ್ರಗಳಿಗೆ. ಸತ್ರಗಳು ಮಾಜೂಲಿಯ ವೈಶಿಷ್ಟತೆಗಳಲ್ಲೊಂದು. ೧೬ನೇಯ ಶತಮಾನದ ಸಮಾಜ ಸುಧಾರಕ ಶಂಕರದೇವ ಈ ದ್ವೀಪಕ್ಕೆ ಭೇಟಿ ನೀಡಿ ೬೫ ಸತ್ರಗಳನ್ನು [ಧಾರ್ಮಿಕ ಕೇಂದ್ರ] ಸ್ಥಾಪಿಸಿ ವೈಷ್ಣವ ಧರ್ಮವನ್ನು ಪ್ರಚುರಪಡಿಸಿದರಂತೆ. [ ಅಂದರೆ ೧೬ ಶತಮಾನದಲ್ಲಿ ಈ ದ್ವೀಪ ಅಸ್ತಿತ್ವದಲ್ಲಿತ್ತು] ಈಗಲೂ ಅಲ್ಲಿ ೨೨ ಸತ್ರಗಳಿವೆ. ಇವುಗಳು ಪುರಾತನ ಸಾಹಿತ್ಯ, ಸಂಸ್ಕ್ರುತಿ, ಆಚಾರ ವಿಚಾರಗಳನ್ನು ಪೋಷಿಸುತ್ತವೆ ಮಾತ್ರವಲ್ಲ ದ್ವೀಪದ ಪರಂಪರೆಯ ಗುರುತುಗಳಾದ ಕಲಾಕ್ರುತಿಗಳು, ಆಯುಧಗಳನ್ನು ಸಂರಕ್ಷಿಸಿ ಇಡುವ ತಾಣಗಳಾಗಿವೆ. ನನ್ನನ್ನು ಹೆಚ್ಚು ಆಕರ್ಷಿಸಿದ್ದು ಔನಿಯಟಿ [Auniati ] ಸತ್ರ. ನಾವು ಹೋದಾಗ ಪುಟ್ಟ ಮಕ್ಕಳಿಗೆ ಗುರುಕುಲ ಮಾದರಿಯಲ್ಲಿ ಸ್ಥಳೀಯ ಜಾನಪದ ಶೈಲಿಯ ಸಂಗೀತ ಪಾಠ ಹೇಳಿಕೊಡುತ್ತಿದ್ದರು. ಅಲ್ಲಿ ಅಭ್ಯಾಸ ಮಾಡುತ್ತಿದ್ದ ಸಂಗೀತದ ಆಲಾಪನೆ ಮತ್ತು ದೀಪದ ಪರಿಕರಗಳು ತುಂಬಾ ಆಸಕ್ತಿದಾಯಕವಾಗಿದ್ದವು. ಇದೆಲ್ಲಕ್ಕಿಂತಲೂ ನನಗೆ ಅತೀ ಅಚ್ಚರಿಯನ್ನು ಉಂಟು ಮಾಡಿದ್ದು ಅಲ್ಲಿನ ಮುಖ್ಯ ಪುಜಾರಿ\ ಮೇಲ್ವಿಚಾರಕರು ಪರಿಚಯಿಸಿದ್ದ  ತುಳಸಿ ಮರದ ದಿಮ್ಮಿಗಳು. ನನ್ನ ಜೀವಮಾನದಲ್ಲೇ ಮೂರಡಿಗಿಂತ ಎತ್ತರದ ತುಳಸಿ ಗಿಡವನ್ನು ನೋಡಿರಲಿಲ್ಲ. ಹಾಗಿರುವಾಗ ಅಷ್ಟು ದೊಡ್ಡ ಗಾತ್ರದ ಮರದ ದಿಮ್ಮಿಗಳನ್ನು ತೋರಿಸಿ ಇವು ತುಳಸಿ ಮರಗಳೆಂದು ತೋರಿಸಿದರೆ ನನಗೆ ಹೇಗಾಗಬೇಡ!.. ಸಮಯ ಕಮ್ಮಿ ಇತ್ತು. ಆದರೂ ಅದರ ಪೋಟೋ ಮತ್ತು ವಿಡಿಯೋ ತಗೊಂಡೆ. ಅಲ್ಲಿಂದ ಇನ್ನೊಂದು ಸತ್ರಕ್ಕೆ ಹೋದೆ ಅಲ್ಲಿಯ ಕಟ್ಟಡವನ್ನು ತುಳಸಿ ಮರದ ದಿಮ್ಮಿಗಳಿಂದಲೇ ಕಟ್ಟಲಾಗಿತ್ತು!.’

ಅಲ್ಲಿಯ ಮೂಲನಿವಾಸಿಗಳು ಸರಳಾತಿ ಸರಳರು.  ಸ್ಥಳೀಯವಾಗಿ ಹೇರಳವಾಗಿ ಸಿಗುವ ಬಿದಿರಿನಿಂದ ಕಟ್ಟಿರುವ ತಟ್ಟಿ ಮನೆಗಳು. ಅವು ನೆಲದಿಂದಲೇ ಗೋಡೆಯೆಬ್ಬಿಸಿ ಕಟ್ಟಿದ ಮನೆಗಳಲ್ಲ ; ಸದಾ ನೀರಲ್ಲಿ ಮುಳುಗುವ ಪ್ರದೇಶವಾದ ಕಾರಣ ಎತ್ತರದ ಕಂಬಗಳ ಮೇಲೆ ಮನೆ ಕಟ್ಟಿಕೊಂಡಿರುತ್ತಾರೆ. ಕಳೆದ ವರ್ಷದಿಂದ ಇದು ಜಿಲ್ಲೆಯಾಗಿ ಪರಿವರ್ತನೆಗೊಂಡಿರುವುದರಿಂದ ಇಲ್ಲಿ ಪೋಲಿಸ್, ನ್ಯಾಯಾಲಯ, ಜಿಲ್ಲಾಧಿಕಾರಿ ಕಚೇರಿಯೂ ಸೇರಿದಂತೆ ಎಲ್ಲಾ ಸರಕಾರಿ ಕಚೇರಿಗಳು, ಸ್ಕೂಲ್ ಕಾಲೇಜುಗಳೂ ಇವೆ. ಚಿಕ್ಕದಾದ ಮೂರ್ನಾಲ್ಕು ಪೇಟೆಗಳಿವೆ. ಈಗ ಅಸ್ಸಾಂ ರಾಜ್ಯದ ಮುಖ್ಯಮಂತ್ರಿಯಾಗಿರುವ ಸಬ್ರಾನಂದ ಸೋನುವಾಲ ಈ ಜಿಲ್ಲೆಗೆ ಸೇರಿದವರು.

 ಕೇಂದ್ರ ಸರಕಾರವು ಪ್ರೆಂಚ್ ಸರಕಾರದ ಸಹಯೋಗದಲ್ಲಿ ಇದನ್ನು ಕಾರ್ಬನ್ ಮುಕ್ತ ಜಿಲ್ಲೆಯಾಗಿಸಲು ಯೋಜನೆಗಳನ್ನು ಹಾಕಿಕೊಂಡಿದೆ. ಹಾಗಾದಲ್ಲಿ ಅದು ನಮ್ಮ ದೇಶದ ಮೊದಲ ಕಾರ್ಬನ್ ಮುಕ್ತ ಜಿಲ್ಲೆಯೆನಿಸಲಿದೆ..
ಮಾಜೂಲಿ ಜನರಿಗೆ ವ್ಯವಸಾಯವೇ ಮುಖ್ಯ ವ್ರುತ್ತಿ. ಭತ್ತ ಬಹುಮುಖ್ಯ ಬೆಳೆ. ಇಲ್ಲಿ ನೂರಕ್ಕೂ ಹೆಚ್ಚಿನ ಭತ್ತದ ತಳಿಗಳಿವೆ. ಯಾವುದೇ ರಾಸಾಯನಿಕಗಳನ್ನು ಉಪಯೋಗಿಸದೆ ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಬೇಸಾಯ ಮಾಡುತ್ತಾರೆ. ಡೈರಿ, ಕುಂಬಾರಿಕೆ, ಕೈಮಗ್ಗ ನೇಕಾರಿಕೆ ಇತರ ಉಪಉದ್ಯೋಗಗಳು. ಸಾಲ್ಮರ ವಿಲೇಜ್ ನಲ್ಲಿ ಕೈಗಳಿಂದಲೇ ಮಡಕೆ ಮತ್ತು ಮುಖವಾಡಗಳನ್ನು ತಯಾರಿಸುವ ಕುಶಲಕರ್ಮಿಗಳಿದ್ದಾರೆ. ಈ ಕಲೆಗಾರಿಕೆಯ ಬಗ್ಗೆ ಅರ್ಕ್ಯಾಲಾಜಿಸ್ಟ್ ಗಳು ಆಳವಾದ ಸಂಶೋಧನೆಗಳನ್ನು ಮಾಡುತ್ತಿದ್ದಾರೆ. ಅವರ ಪ್ರಕಾರ ಇದು ಹರಪ್ಪಾ ಮೊಹೆಂಜದಾರೋ ನಾಗರಿಕತೆಯ ನಡುವಿನ ಮಿಸ್ಸಿಂಗ್ ಲಿಂಕ್ ಎನ್ನುತ್ತಾರೆ.
ಮಜೂಲಿ ವೈಷ್ಣವಪಂಥದ ಆರಾಧನ ಭೂಮಿಯಾಗಿರುವ ಕಾರಣದಿಂದಾಗಿ ಹೋಳಿ\ ರಾಸಲೀಲಾ ಈ ದ್ವೀಪದ ಸಂಭ್ರಮದ ಹಬ್ಬ. ಇಲ್ಲಿಗೆ ಹಲವು ಜಾತೀಯ ಅಪರೂಪದ ಪಕ್ಷಿಗಳು ಬರುತ್ತವೆ. ಈ ಕಾರಣದಿಂದ ಪಕ್ಷಿಪ್ರಿಯರಿಗೂ ಇದು ಆಕರ್ಷಕ ಜಾಗ. ಇಲ್ಲಿ ಅಪರೂಪದ ಔಷಧಿಯ ಸಸ್ಯಗಳೂ ಇವೆ.

ನಮ್ಮಲ್ಲಿ ಸಮಯ ಬಹಳ ಕಮ್ಮಿ ಇತ್ತು. ಹಾಗಾಗಿ ಮಜೂಲಿಯಲ್ಲಿ ನಡೆಯುತ್ತಿದ್ದ ನಮಾಮಿ ಬ್ರಹ್ಮಪುತ್ರಾ ಉತ್ಸವನ್ನು ಕಾರಿನಲ್ಲೇ ನೋಡುತ್ತಾ ಪೆರ್ರಿ ನಿಲ್ಲುವ ಜಾಗಕ್ಕೆ ಬಂದೆವು. ಹಾಗೆ ಬರುತ್ತಿರುವಾಗ ಗೊತ್ತಾಯ್ತು, ಬ್ರಹ್ಮಪುತ್ರಾದ ಹರವು ಎಷ್ಟು ದೊಡ್ಡದೆಂದು. ನದಿ ಬೀಚ್ ಮೇಲೆಯೇ ನಾವು ಆರು ಕಿಮೀ ಬಂದೆವು. ಪೆರ್ರಿ ನಿಲ್ಲುವ ಜಾಗದಲ್ಲಿ ಟೀ ಸ್ಟಾಲ್, ಪ್ಯಾನ್ಸಿ ಸ್ಟೋರ್ ಸೇರಿದಂತೆ ಹಲವಾರು ಅಂಗಡಿಗಳಿದ್ದವು. ಪೆರ್ರಿಯಲ್ಲಿ ಬಂದ ಜನರನ್ನು ಕರೆದೊಯ್ಯಲ್ಲು ಹತ್ತರು ವಾಹನಗಳು ನಿಂತಿದ್ದವು.
ಮಜೂಲಿಗೆ ಬರುವಾಗ ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಹಾಗೆ ಬಂದಿದ್ದೆವು. ಹೋಗುವಾಗ ಬ್ರಹ್ಮಪುತ್ರನ ಒಡಲಲ್ಲಿ ಓಲಾಡುತ್ತಾ ತೇಲಾಡುತ್ತಾ ಮೌನವಾಗಿ ಸಾಗುತ್ತಿದ್ದೆವು. ನಿಮಿಟಿ ಘಾಟ್ ಎಂಬ ನದಿ ಬಂದರು ತಲುಪಲು ಎರಡುವರೆ ಘಂಟೆಯ ನದಿ ಪಯಣ. ಆಗಾಗ ನೀಲ ಆಗಸದತ್ತ  ನೋಟ ಬೀರುತ್ತಾ ದಿಗದಂಚಿನಲ್ಲಿ ಎಲ್ಲಾದರೂ ಭೂಮಾತೆ ಬ್ರಹ್ಮಪುತನನ್ನು ಆಲಂಗಿಸುತ್ತಿರುವ ದ್ರುಶ್ಯ ಕಾಣಸಿಗಬಹುದೇ ಅಂತ ಕ್ಯಾಮಾರದಲ್ಲಿ ಕಣ್ಣಿಟ್ಟು ಕೂತೆ. ನಿರಾಶೆಯಾಯ್ತು.. ನೀರು ಎಲ್ಲೆಲ್ಲೂ ನೀರು.. ಹಿಂದೆ ತಿರುಗಿದರೆ ಮಜೂಲಿ ಬರಬರುತ್ತಾ ಚುಕ್ಕೆಯಾಗಿ ನೀರಿನಲ್ಲಿ ಲೀನವಾಯ್ತು.

[ ಪ್ರಜಾವಾಣಿಯ ಸಾಪ್ತಾಹಿಕ ’ಮುಕ್ತಛಂಧದಲ್ಲಿ ಪ್ರಕಟವಾದ ಬರಹ ]




Tuesday, November 7, 2017

ನ್ಯಾನೋ ರೈಮೋ-ನಾವೂ ಕಾದಂಬರಿ ಬರೆಯೋಣವೇ?

 
ನ್ಯಾನೋ ರೈಮೋ ಲಾಂಛನ

 
ನಮಗೆಲ್ಲಾ ಗೊತ್ತಿದೆ; ನವೆಂಬರ್ ತಿಂಗಳೆಂದರೆ ಕರ್ನಾಟಕ ರಾಜ್ಯೋತ್ಸವದ ಮಾಸವೆಂದು. ಅದರೆ ಈ ತಿಂಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಇನ್ನೂ ಒಂದು ವಿಶೇಷವಿದೆ. ಅದುವೇನ್ಯಾಷನಲ್ ನಾವೆಲ್ ರೈಟಿಂಗ್ ಮಂತ್’. ಇದು ಕಾದಂಬರಿ ಬರೆಯುವ ತಿಂಗಳಂತೆ !

ಏನು ಹಾಗಂದರೆ ಅಂತ ಪ್ರಶ್ನಿಸುತ್ತಿದ್ದೀರಾ?

ಇದು ಅಂತರ್ಜಾಲದಲ್ಲಿ ಸ್ರುಜನಶೀಲ ಬರವಣಿಗಾಗಿ ಹುಟ್ಟಿಕೊಂಡ ಒಂದು ವೇದಿಕೆ.  ಅದರ ಹೆಸರು ’ನ್ಯಾನೋ ರೈಮೋ’ ಅಂದರೆ National writing month”  ಈ ಅಂತರ್ಜಾಲ ವೇದಿಕೆಯನ್ನು charis Baty ಎಂಬ ಹವ್ಯಾಸಿ ಪತ್ರಕರ್ತನೊಬ್ಬ ೧೯೯೯ರ ಜುಲೈ ೨೧ರಂದು ಸನ್ ಪ್ರಾನ್ಸಿಸ್ಕೊದಲ್ಲಿ ಆರಂಭಿಸಿದ. ಆ ವರ್ಷ ಈ ಅನ್ಲೈನ್ ವೇದಿಕೆಯಲ್ಲಿ ೨೧ ಕಾದಂಬರಿ ಬರಹಕಾಂಕ್ಷಿಗಳು ತಮ್ಮ ಹೆಸರು ನೊಂದಾಯಿಸಿಕೊಂಡಿದ್ದರು. ಹವಾಮಾನ ಏರುಪೇರು ಕಾರಣಗಳಿಂದಾಗಿ  ಮರುವರ್ಷ ಈ ಕಾರ್ಯಗಾರವನ್ನು ನವೆಂಬರ್ ತಿಂಗಳಿಗೆ ಬದಲಾಯಿಸಲಾಯ್ತು. ಮತ್ತು ನ್ಯಾನೋ ರೈಮ್ ಚಟುವಟಿಕೆಗಳಿಗಾಗಿ ಸ್ವಂತ ವೆಬ್ಸೈಟ್ ಅನ್ನು ಲಾಂಚ್ ಮಾಡಿತು. ಮರುವರ್ಷ ಈ ಕಾರ್ಯಗಾರದಲ್ಲಿ ಎರಡು ಲಕ್ಷ ಜನ ಭಾಗವಹಿಸಿದ್ದರೆಂದರೆ ಜನರಲ್ಲಿ ಬರೆಯುವ ಹಸಿವು ಎಷ್ಟಿದೆಯೆಂಬುದರ ಅರಿವಾಗಬಹುದು. ನಾವಿಲ್ಲಿ ಗಮನಿಸಬೇಕಾಗಿರುವುದು ಇವರೆಲ್ಲಾ ಸಣ್ಣಪುಟ್ಟ ಕಥೆ ಲೇಖನ ಬರೆಯಲು ಹೊರಟವರಲ್ಲ, ಕಾದಂಬರಿ ಬರೆಯಲು ಮುಂದಾದವರೆಂಬುದು ಮುಖ್ಯ.

ಪ್ರತಿಯೊಬ್ಬರ ಬದುಕಿನಲ್ಲಿಯೂ ಹಲವಾರು ಕಥೆಗಳಿರುತ್ತವೆ. ಹೆಪ್ಪುಗಟ್ಟಿದ ಕಾವ್ಯವಿರುತ್ತದೆ. ಅದನ್ನೆಲ್ಲಾ ಜಗತ್ತಿನೆದುರು ಅಕ್ಷರಗಳಲ್ಲಿ ತೆರೆದಿಡುವ ಸಾಮರ್ಥ್ಯ ಎಲ್ಲರಿಗೂ ದಕ್ಕಿರುವುದಿಲ್ಲ. ಅಂತವರು ಇಲ್ಲಿ ತಮ್ಮ ಸಾಮರ್ಥ್ಯವನ್ನು ಅಳೆದು ತೂಗಿ ನೋಡಲು ಒಂದು ಅವಕಾಶವಿದೆ. ನಾನು ಕೂಡಾ ಅಂತ ಪ್ರಯತ್ನವೊಂದನ್ನು ಮಾಡಲು ಮುಂದಾಗಿ ನನ್ನ ಹೆಸರನ್ನು ನೊಂದಾಯಿಸಿಕೊಂಡೆ. ಮತ್ತು ಮೊದಲ ದಿನದ ಒಂದು ಸಾವಿರ ಪದಗಳನ್ನು ಇದಕ್ಕಾಗಿಯೇ ನಾನು ರಚಿಸಿಕೊಂಡ ಬ್ಲಾಗ್ ನಲ್ಲಿ ಅಪ್ಡೇಟ್ ಮಾಡಿ ಬಂದು ಈ ಲೇಖನವನ್ನು ಬರೆಯಲು ಮುಂದಾದೆ. ಭಯಂಕರ ಸೋಮಾರಿಯಾದ ನಾನು ಇದನ್ನು ಯಾಕೆ ಬರೆಯಲು ಹೊರಟೆ ಅಂದರೆ ಕನ್ನಡದವಳಾದ ನನಗೆ ನವೆಂಬರ್ ಅನ್ನೋದು ಕನ್ನಡದ ತಿಂಗಳು. ಸಾವಿರಾರು ಮೈಲಿ ದೂರದಲ್ಲಿರೋ ಅವರ್ಯಾರೋ ನವೆಂಬರ್ ಅನ್ನು ’ಕಾದಂಬರಿ ತಿಂಗಳು’ ಅಂತ ಮಾಡಬೇಕಾದ್ರೆ ನಾವ್ಯಾಕೆ ನವೆಂಬರ್ ತಿಂಗಳನ್ನು ”ಕನ್ನಡ ಕಾದಂಬರಿ ತಿಂಗಳು’  ಅಂತ ಮಾಡಬಾರದು? ಆ ಮೂಲಕ ನವೆಂಬರ್ ತಿಂಗಳಿನಲ್ಲಿ ಅಂತರ್ಜಾಲದಲ್ಲಿ ಕನ್ನಡ ಮನಸ್ಸುಗಳೆಲ್ಲವನ್ನೂ ಒಟ್ಟು ಮಾಡಿಕೊಂಡು ಸ್ರುಜನಶೀಲ ಬರವಣಿಗಳನ್ನು ಆರಂಭಿಸಬಾರದು ಎನ್ನುತ್ತಾ ನ್ಯಾನೋರೈಮಿನ ವೆಬ್ ಸೈಟನ್ನು ಸಂಪರ್ಕಿಸಿ. ಪ್ರಾದೇಶಿಕ ಭಾಷೆಯಲ್ಲಿ ಬರೆಯಬಹುದೇ ಎಂದು ಮಿಂಚಂಚೆಯನ್ನು ರವಾನಿಸಿದೆ. ಅದಕ್ಕೆ ಮರು ಉತ್ತರ ಬರುವ ಮೊದಲೇ  ಆಂತರ್ಜಾಲವನ್ನು ಜಾಲಾಡಿ ಪ್ರಾದೇಶಿಕ ಭಾಷೇಯಲ್ಲಿಯೂ ಬರೆಯಬಹುದೆಂಬುದನ್ನು ಮಾಹಿತಿಯನ್ನು ಪಡೆದುಕೊಂಡು ರೈಮೋದ ವೆಬ್ ಸೈಟಿನ ಮಾರ್ಗದರ್ಶನದಲ್ಲಿ ವರ್ಡ್ ಪ್ರೆಸ್ಸ್ ನಲ್ಲಿ ಬ್ಲಾಗ ರಚಿಸಿದೆ. ಮೊದಲ ಪೋಸ್ಟ್ ಆಗಿ ’ಅವಳು ಯಾರು’ ಎಂಬ ಪೋಸ್ಟ್ ಅಪ್ಡೇಟ್ ಮಾಡಿದೆ. ಇನ್ನೂ ನಿರಂತರವಾಗಿ ಮೂವತ್ತು ದಿನ ದಿನಕ್ಕೊಂದರಂತೆ ಮೂವತ್ತು ಪೋಸ್ಟ್ ಗಳನ್ನು ಅಪ್ಡೇಟ್ ಮಾಡಬೇಕು.

ನ್ಯಾನೋ ರೈಮ್ ಗೆ ಬರೆಯಲು ಒಂಚೂರು ನಿಯಮಾವಳಿಗಳಿವೆ. ಮೊದಲನೆಯಾದಾಗಿ ರೈಮೋದ ವೆಬ್ಸೈಟಿಗೆ ಲಾಗಿನ್ ಆಗಬೇಕು. ಅಲ್ಲಿ ತಮ್ಮ ಬಗೆಗಿನ ಮತ್ತು ತಾವು ಬರೆಯಲಿರುವ ಕಾದಂಬರಿಯ ವಸ್ತುವಿನ ಬಗ್ಗೆ ಪುಟ್ಟ ಟಿಪ್ಪಣಿಯೊಂದನ್ನು ದಾಖಲಿಸಬೇಕು..ಅನಂತರದಲ್ಲಿ ವಬ್ ಸೈಟ್ ನಿಮಗೆ ಬ್ಲಾಗ್ ರಚಿಸಿಕೊಳ್ಳಲು ಮಾರ್ಗದರ್ಶನ ಮಾಡುತ್ತದೆ. ಮಿಂಚಂಚೆಯ ಮೂಲಕ ನಿಮ್ಮ ಸಂಶಯಗಳಿಗೆ ಉತ್ತರಿಸುತ್ತದೆ.

ಕಾದಂಬರಿಗೆ ಯಾವುದೇ ಸಬ್ಜೆಕ್ಟ್ ಅನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು, ಪ್ಯಾಂಟಸಿ, ಕೈಮ್, ವೈನೋದಿಕ, ಪ್ರವಾಸ. ಇತಿಹಾಸ, ವೈಜ್ನಾನಿಕ ಯಾವುದರ ಸುತ್ತ ಬೇಕಾದರೂ ಕಥೆ ಹೆಣೆಯಬಹುದು. ಬರಹದ ಮೊದಲ ಪದ ನವೆಂಬರ್ ಒಂದರ ಮಧ್ಯರಾತ್ರಿ ಬ್ಲಾಗಿನಲ್ಲಿ ದಾಖಲಾಗಿರಬೇಕು ಕೊನೆಯ ಪದ ನವೆಂಬರ್ ೩೦ರ ಮಧ್ಯರಾತ್ರಿ ೧೧.೫೯.೫೯ಕ್ಕೆ ಮುಕ್ತಾಯವಾಗಿರಬೇಕು. ಸಮಯ ಮೀರಿ ಹೋಯ್ತು ಅಂದುಕೊಂಡಿರಾ? ಪರ್ವಾಗಿಲ್ಲ. ಮುಂದಿನ ವರ್ಷ ಪ್ರಯತ್ನಿಸಬಹುದು. ಅಲ್ಲಿ ಭಾಗವಹಿಸಿದ ಕೆಲವರು ತಮ್ಮ ಬರವಣಿಗೆಯ ಬಗ್ಗೆ ಹೇಳುತ್ತಾ, ಮೊದಲ ಒಂದೆರಡು ವರ್ಷಗಳಲ್ಲಿ ಅವರ ಪ್ರಯತ್ನ ಸಫಲವಾಗಲಿಲ್ಲವಂತೆ. ಆಮೇಲೆ ತಾವು ಕಾದಂಬರಿಯನ್ನು ಕ್ಲುಪ್ತ ಸಮಯಕ್ಕೆ ಮುಗಿಸಿರುವುದಾಗಿ ಹೇಳಿಕೊಂಡಿದ್ದಾರೆ. ಇನ್ನು ಕೆಲವರು ತಮಲ್ಲಿ ಅಗಾಧ ಅನುಭವ ಮತ್ತು ವಿಷಯಗಳಿದ್ದರೂ ಬರವಣಿಗೆಗೆ ತರಲು ಹಿಂಜರಿಕೆ ಇತ್ತು. ಈಗ ತಾನು ಇದನ್ನು ಸಾಧಿಸಿದ್ದರ ಬಗ್ಗೆ ಹೆಮ್ಮೆ ವ್ಯಕ್ತಪಡಿದ್ದಾರೆ. ಇಂತಹ ಹಿಂಜರಿಕೆಯ ವ್ಯಕ್ತಿತ್ವದವರಿಗಾಗಿಯೇ ಈಗಾಗಲೇ ಹೆಸರು ಪಡೆದ ಕಾದಂಬರಿಕಾರರಿಂದ ತಾವು ತಮ್ಮ ಮೊದಲ ಕಾದಂಬರಿಯನ್ನು ಹೇಗೆ ಬರೆದೆ? ವಸ್ತುವನ್ನು ಹೇಗೆ ಆಯ್ಕೆ ಮಾಡಿಕೊಂಡೆ ಎಂಬುದರ ಕುರಿತಾಗಿ ಅನ್ಲೈನ್ ಉಪನ್ಯಾಸಗಳನ್ನು ರಿಮೋ ಏರ್ಪಡಿಸುತ್ತದೆ.

ಭಾರತದಲ್ಲಿಯೂ ರೈನೋ ಗೆ ಬರೆಯುವುದರ ಬಗ್ಗೆ ದೆಹಲಿ, ಮುಂಬೈಗಳಲ್ಲಿ ನೊಂದಾಯಿತರ ನಡುವೆ ಆಗಾಗ ಸಂವಾದಗಳು ಏರ್ಪಾಡಾಗುತ್ತಿವೆ. ಅಲ್ಲಿ ಪರಸ್ಪರ ಅನ್ನಿಸಿಕೆ, ಸಂದೇಹ, ಸಲಹೆ. ಸೂಚನೆಗಳ ವಿನಿಮಯವಾಗುತ್ತವೆ. ಹಿಂಜರಿಕೆಯಿರುವವರಿಗೆ ಪ್ರೋತ್ಸಾಹವನ್ನು ತುಂಬಲಾಗುತ್ತದೆ.

 ಯಶಸ್ವಿ ೧೬ ವರ್ಷಗಳನ್ನು ಪೂರೈಸಿದ ನ್ಯಾನೋ ರೈಮೋ ಪ್ರಸ್ತುತ ೧೭ನೇ ವರ್ಷಕ್ಕೆ ಕಾಲಿಟ್ಟಿದೆ. ಈ ವರ್ಷದಲ್ಲಿ ಎರಡು ಲಕ್ಷದ ಹದಿನೆಂಟು ಸಾವಿರದ ಎಂಟನೂರ ತೊಂಬತ್ತೇಳು ಜನ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ. ಈ ಅಂತರ್ಜಾಲ ವೇದಿಕೆ ತನ್ನನ್ನು ತಾನು ನ್ನ್ಯಾಷನಲ್ ರೈಟಿಂಗ್ ಮಂತ್ ಎಂದು ಹೇಳಿಕೊಂಡರೂ ಅದು ನಿಜಾರ್ಥದಲ್ಲಿ ಇಂತರ್ನ್ಯಾಷನಲ್ ಆಗಿದೆ.  ಭಾರತದಿಂದಲೂ ಕಳೆದ ವರ್ಷ ೪,೫೦೦ ಜನರು ತಮ್ಮ ಹೆಸರು ನೊಂದಾಯಿಸಿಕೊಂಡಿದ್ದರು.  ಸ್ರುಜನಶೀಲ ಬರವಣಿಗೆಯಲ್ಲಿ ನ್ಯಾನೋ ರೈಮೋ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡದಾದ ವೇದಿಕೆ. ಇದರಲ್ಲಿ ಭಾಗವಹಿಸಿದ ಬರಹಗಾರರು ತಮ್ಮನ್ನು ತಾವು ರೈಮೋಸ್ [’Wrimos] ಎಂದು ಹೆಮ್ಮೆಯಿಂದ ಕರೆದುಕೊಳ್ಳುತ್ತಾರೆ.

ನಾವು ಕನ್ನಡಿಗರಿಗೆ ನವಂಬರ್ ತಿಂಗಳೆಂದರೆ ಕನ್ನಡದ ತಿಂಗಳು. ಕನ್ನಡದ ಘನತೆಯನ್ನು ಎತ್ತರಿಸುವ ಕೆಲಸಕಾರ್ಯಗಳನ್ನು ಮಾಡಲು ನಾವು ಹವಣಿಸುತ್ತೇವೆ. ಆದರೆ ವಾಸ್ತವದಲ್ಲಿ ನಾವು ಕನ್ನಡದ ಹಬ್ಬವನ್ನು ಮಾತ್ರ ಆಚರಿಸುತ್ತೇವೆ. ಜನಪ್ರಿಯ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತೇವೆ. ದೂರದರ್ಶಿತ್ವವುಳ್ಳ ಯೋಜನೆಗಳನ್ನು ರೂಪಿಸುವುದೇ ಇಲ್ಲ. ನಾವು ನ್ಯಾನೋ ರೈಮೋ ದಂತಹ ಅನ್ಲೈನ್ ಚಟುವಟಿಕೆಗಳನ್ನು ಹಾಕಿಕೊಳ್ಳುವುದರ ಮುಖಾಂತರ ಕನ್ನಡದ ಯುವ ಮನಸ್ಸುಗಳನ್ನು ಒಂದಾಗಿಸುವ ಪ್ರಯತ್ನ ಮಾಡಬಹುದು. ಇದು ನವೆಂಬರ್ ತಿಂಗಳಿನಲ್ಲಿ ನಡೆಯುವ ಕನ್ನಡ ಕಟ್ಟುವ ನಿಜವಾದ ಕೆಲಸವಾಗಬಹುದು. ಯಾಕೆಂದರೆ ಮುಂಬರುವ ದಿನಮಾನಗಳು ಖಂಡಿತವಾಗಿಯೂ ಅಂತರ್ಜಾಲದ ದಿನಗಳೇ ಆಗಿರುತ್ತವೆ.
ಕಥೆ ಎಂದರೆ ಎಲ್ಲರಿಗೂ ಇಷ್ಟ.  ಪುಟ್ಟ ಮಕ್ಕಳು ಕಥೆ ಎಂದೊಡನೆ ಕಣ್ಣರಳಿಸಿ ಗಲ್ಲಕ್ಕೆ ಕೈಯಿಟ್ಟು ಅಜ್ಜಿ ಕಥೆಗಳನ್ನು ಕೇಳುತ್ತಿರುವುದನ್ನು ನೀವೆಲ್ಲಾ ಗಮನಿಸಿಯೇ ಇರುತ್ತೀರಿ. ದೊಡ್ಡವರಾದಂತೆಲ್ಲಾ ನಾವು ಕಲ್ಪನಾ ಜಗತ್ತಿನಿಂದ ಮೆಲ್ಲ ಮೆಲ್ಲನೆ ಕಟು ವಾಸ್ತವದ ಜಗತ್ತಿಗೆ ಬಂದು ಬೀಳುತ್ತೇವೆ. ಆದರೆ ಕಥೆ ಎಂಬುದು ಮತ್ತೆ ಬಾಲ್ಯಕ್ಕೆ ಸೇತುವೆ ಕಟ್ಟುತ್ತದೆ; ಮತ್ತೆ ಯೌವನಕ್ಕೆ ರೆಕ್ಕೆ ಮೂಡುತ್ತದೆ.

ನಾನಂತೂ ಬರೆಯಲು ಆರಂಬಿಸಿದ್ದೇನೆ. ಪ್ರವಾಸದ ಹಿನ್ನೆಲೆಯಲ್ಲಿ ಸಧ್ಯಕ್ಕೆ ಬ್ಲಾಗ್ ಆರಂಭಿಸಿದ್ದೇನೆ. ಮುಂದೆ ಯಾವ್ಯವ ತಿರುವುಗಳನ್ನು ಪಡೆಯುತ್ತದೋ ನನಗೇ ಗೊತ್ತಿಲ್ಲ. ಅಂತೂ ಕಳೆದು ಹೋಗುವುದಕ್ಕೆ ಸಿದ್ಧಳಾಗಿದ್ದೇನೆ. ಎಲ್ಲವೂ ಸರಿಯಾದರೆ ದಶಂಬರ ಮೊದಲ ವಾರದಲ್ಲಿ ?’ ಎಂಬ ಕಾದಂಬರಿ ಓದುಗರ ಕೈಸೇರಲೂ ಬಹುದು!


Wednesday, November 1, 2017

ಅನ್ನಪೂರ್ಣೇಶ್ವರಿ ಈ ಕನ್ನಡಾಂಬೆ

ಅನ್ನಪೂರ್ಣೇಶ್ವರಿ ಈ ಕನ್ನಡಾಂಬೆ
ಮನುಷ್ಯನಾದವನಿಗೆ ತನ್ನ ನೆಲ, ಜಲ, ನುಡಿಯ ಬಗ್ಗೆ ಅಭಿಮಾನವಿದ್ದೇ ಇರುತ್ತದೆ. ಇಂತಹ ಚೌಕಟ್ಟುಗಳನ್ನು ತಾನು ಮೀರಿದವನು\ಳು, ನಾನು ವಿಶ್ವಪ್ರೇಮಿ ಎಂದುಕೊಂಡವರು ಕೂಡಾ ತನ್ನ ಹೆತ್ತ ತಾಯಿಯನ್ನು ಪ್ರೀತಿಸದೇ ಇರಲಾರರು. ಹಾಗೆ ಪ್ರೀತಿಸಿದ್ದು ನಿಜವಾಗಿದ್ದಲ್ಲಿ ಅವರಿಗೂ ನಾಡು ನುಡಿಯ ಬಗ್ಗೆ ಅಭಿಮಾನವಿದ್ದಿರಲೇ ಬೇಕು.
ನಾನು ತುಳುನಾಡಿನವಳು. ಈಗ ರಾಜಧಾನಿಯಲ್ಲಿದ್ದೇನೆ. ನಾನಿರುವ ಪರಿಸರದಲ್ಲಿ ಎಲ್ಲಿಯಾದರು ತುಳು ಮಾತುಗಳು ನನ್ನ ಕಿವಿಗೆ ಬಿದ್ದರೆ ತಕ್ಷಣ ಕಿವಿ ಚುರುಕಾಗುತ್ತದೆ. ಒಂದು ಕ್ಷಣ ಕತ್ತು ಆ ಕಡೆಗೆ ಹೊರಳುತ್ತದೆ. ಅದುವೇ ತಾಯ್ನುಡಿಯೆಡೆಗಿನ ಸೆಳೆತ, ಮೋಹ, ಅಭಿಮಾನ.
ವಿಶ್ವಪ್ರಜ್ನೆ, ಅನಿಕೇತನ, ಗ್ಲೋಬಲ್ ವಿಲೇಜ್ ಎಂದೆಲ್ಲಾ ಮಾತಾಡುವ ನಮ್ಮ ಭಾವಕೋಶದಲ್ಲಿ ನಮಗೇ ಗೊತ್ತಿಲ್ಲದ ಹಲವಾರು ವಿಷಯಗಳು ಅಡಗಿ ಕುಳಿತಿರುತ್ತವೆ. ಅವು ಯಾವ್ಯಾವ ಸಂದರ್ಭಗಳಲ್ಲಿ ತಮ್ಮ ಇರವನ್ನು ಪ್ರಕಟಿಸಿ ಹೊರಚಿಮ್ಮುತ್ತವೆ ಎಂಬುದರ ಬಗ್ಗೆ ಕಿಂಚಿತ್ ಅರಿವೂ ನಮಗಿರುವುದಿಲ್ಲ.
 ಇಂದು ನಮ್ಮ ಕನ್ನಡ ನಾಡಿನ ಹುಟ್ಟುಹಬ್ಬ; ಕರ್ನಾಟಕ ರಾಜ್ಯ ಉದಯವಾದ ದಿನ,. ’ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು’ ಎಂದು ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿದ ನಮ್ಮ ಹಿರಿಯರಿಂದಾಗಿ ೧೯೫೬ರ ನವೆಂಬರ್ ಒಂದರಂದು ಭಾಷಾವಾರು ಪ್ರಾಂತ್ಯದಡಿ ಮೈಸೂರು ರಾಜ್ಯ  ಉದಯವಾಯ್ತು. ಅಲ್ಲಿಯವರೆಗೆ ಮದರಾಸು, ಮುಂಬೈ ಮತ್ತು ಹೈದರಾಬಾದ್ ಪ್ರಾಂತ್ಯಗಳಲ್ಲಿ ನಮ್ಮ ನಾಡು ಹಂಚಿ ಹರಿದುಹೋಗಿದ್ದವು, ೧೯೭೧ರಲ್ಲಿ ಮೈಸೂರು ರಾಜ್ಯ ಕರ್ನಾಟಕ ರಾಜ್ಯವಾಯ್ತು.
ಇಂದಿಗದು ಇತಿಹಾಸ,
ಈಗ ನಾವು ಅನ್ನವನ್ನರಸಿಕೊಂಡು ಪ್ರಪಂಚದಾದ್ಯಂತ ವಲಸೆ ಹೋಗುತ್ತಿದ್ದೇವೆ. ಹಾಗೆ ಹೋದ ಹೊರನಾಡಿನ ಕನ್ನಡಿಗರನ್ನು ನಮ್ಮ ಸಂಸ್ಕೃತಿಯ ಭಾಗವಾದ ತಾಯ್ನುಡಿ ಒಂದಾಗಿ ಬೆಸೆಯುತ್ತದೆ. ಆಯಾಯ ದೇಶಗಳಲ್ಲಿ ಕನ್ನಡ ಸಂಘಗಳನ್ನು ಸ್ಥಾಪಿಸಿಕೊಂಡು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ತಮ್ಮ ತಾಯ್ನಾಡಿನ ಜೊತೆ ಭಾವಾನಾತ್ಮಕವಾದ ನಂಟನ್ನು ಹಸಿರಾಗಿಸಿಕೊಳ್ಳಲು ಪ್ರಯತ್ನಿಸುತ್ತಾರೆ.
 ನನ್ನಂತವರು ಆಗಾಗ ಪ್ರವಾಸಕ್ಕೆಂದು ತಾಯ್ನಾಡನ್ನು ಅಲ್ಪಕಾಲದ ಮಟ್ಟಿಗೆ ತೊರೆದು ಹೋಗುತ್ತೇವೆ. ಹಾಗೆ ಹೋದಾಗ ಅಲ್ಲೆಲ್ಲೋ ಕನ್ನಡದ ಮಾತುಗಳು ಕಿವಿಗೆ ಬಿದ್ದಾಗ, ಕಣ್ಣಿಗೆ ಕನ್ನಡದ ಬರಹ ಕಂಡಾಗ ಅವರ್ಣನೀಯವಾದ ಆನಂದವುಂಟಾಗುತ್ತದೆ.
ಹಿಮಾಲಯದ ಬಹುತೇಕ ಪುಣ್ಯಕ್ಷೇತ್ರಗಳನ್ನು ಹೊಂದಿರುವ ಉತ್ತರಾಖಂಡ ರಾಜ್ಯವನ್ನು ’ದೇವಭೂಮಿ’ಯೆಂದು ಕರೆಯುತ್ತಿರುತ್ತಾರೆ.ಇತ್ತೀಚೆಗೆ ಚಾರ್ ಧಾಮಗಳಲ್ಲಿ ಒಂದಾದ ಬದರಿನಾಥಗೆ ಹೋಗಿದ್ದೆ. ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ದೊಡ್ಡದಾದ ಬೋರ್ಡ್ ನಲ್ಲಿದ್ದ ಕನ್ನಡದ ಸ್ವಾಗತ ಫಲಕವನ್ನು ಕಂಡು ಪುಳಕಗೊಂಡಿದ್ದೆ. ಅದರಲ್ಲಿ ಹೀಗೆ ಬರೆದಿತ್ತು. ’ದೇವಭೂಮಿಗೆ ನಿಮ್ಮನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇವೆ’ ಎಂಬ ಬೋರ್ಡನ್ನು ನೋಡಿ ಪುಳಕಗೊಂಡೆ. ಹಾಗೆಯೇ ಇದೇ ರಾಜ್ಯದಲ್ಲಿರುವ ಭಾರತ ಕೊನೆಯ ಗ್ರಾಮವಾದ ಮಾನ ವಿಲೇಜ್ ನಲ್ಲಿ ’ಭಾರತದ ಕೊನೆಯ ಚಾ ಅಂಗಡಿ’ ಎಂಬ ಫಲಕ ಕಂದೆ. ಅಲ್ಲೇ ಕೆಳಗೆ ಹರಿಯುತ್ತಿದ್ದ ಪರಮ ಪವಿತ್ರ ಸರಸ್ವತಿ ನದಿಯ ಬೋರ್ಗೆರೆತವನ್ನು ಆಲಿಸುತ್ತಾ ಚಹಾ ಕುಡಿದು ವ್ಯಾಸಗುಹೆಯ ಪಕ್ಕದಲ್ಲಿರುವ ಈ ಅಂಗಡಿಯ ಪೋಟೋಗಳನ್ನು ವಿವಿಧ ಆಯಾಮಗಳ ಪೋಟೋಗಳಲ್ಲಿ ಸೆರೆಹಿಡೆದೆ.
ನಾಲ್ಕೈದು ವರ್ಷಗಳ ಹಿಂದೆ ಇಲ್ಲೇ ಅಂಧ್ರಪ್ರದೇಶದ ಶ್ರೀಶೈಲಕ್ಕೆ ಹೋಗಿದ್ದೆ. ಅದು ನಮ್ಮ ಅಕ್ಕಮಹಾದೇವಿ ಶಿವನಲ್ಲಿ ಐಕ್ಯಗೊಂಡ ಕದಳಿಯ ಪಕ್ಕದಲ್ಲಿರುವ ಶೈವಸ್ಥಳ. ಅಕ್ಕನ ಆರಾಧ್ಯ ದೈವ ಚೆನ್ನಮಲ್ಲಿಕಾರ್ಜುನನ ಮಂದಿರದಲ್ಲಿ ಚಪ್ಪಲಿಯನ್ನು ಕಳಚುತ್ತಿರುವಾಗ ಅಲ್ಲಿರುವ ಕನ್ನಡ ಬೋರ್ಡ್ ನೋಡಿ  ನಗುವುಕ್ಕಿ ಬಂದಿತ್ತು ಅಲ್ಲಿ ಹೀಗೆ ಬರೆದಿತ್ತು; ’ಪಾದರಕ್ಷೆ ಭದ್ರ ಪರಚುವ ಸ್ಥಳ’ ಅಲ್ಲಿಗೆ ಭೇಟಿಕೊಡುವವರಲ್ಲಿ ಬಹುತೇಕರು ಕನ್ನಡಿಗರು ಹಾಗಾಗಿ ಅದು ಸಹ್ಯ ಎನಿಸಿತ್ತು.
ಇದೆಲ್ಲಕ್ಕಿಂತಲೂ ಒಬ್ಬ ಅಪ್ಪಟ್ಟ ಕನ್ನಡಾಭಿಮಾನಿಯನ್ನು ನಾನು ಮಣಿಪುರದ ರಾಜಧಾನಿ ಇಂಪಾಲದಲ್ಲಿ ಕಂಡಿದ್ದೆ. ಅವನ ಹೆಸರು ನನಗಿನ್ನೂ ನೆನಪಿದೆ; ಜ್ನಾನೇಶ. ೨೦೦೯ರಲ್ಲಿ ಅವನು ಬೆಂಗಳೂರಿನಲ್ಲಿ ನೌಕರಿ ಮಾಡುತ್ತಿದ್ದ ಸಮಯದಲ್ಲಿ ಓಡಾಡಲೆಂದು ಮಾಡಿಸಿದ್ದ ಬಿ.ಎಂ.ಟಿ ಬಸ್ಸ್ ಪಾಸನ್ನು ಈಗಲೂ ಸದಾ ತನ್ನ ಕಿಸೆಯಲ್ಲಿಟ್ಟುಕೊಂಡಿದ್ದನ್ನು ಕಂಡು ಅಚ್ಚರಿಗೊಂಡಿದ್ದೆ. ಅತ್ಯಂತ ಸ್ಫುಟವಾದ ಕನ್ನಡದಲ್ಲಿ ಮಾತಾಡಿದ್ದಲ್ಲದೆ ಕನ್ನಡ ಚಲಚಿತ್ರಗೀತೆಯೊಂದನ್ನು ಹಾಡಿಯೂ ತೋರಿಸಿದ್ದನ್ನು ನಾನೆಂದೂ ಮರೆಯಲಾರೆ.
ಮೇಘಾಲಯದ ಚಿರಾಪುಂಜಿಗೆ ಹೋಗುವ ದಾರಿಯಲ್ಲಿ ನಂದಿನಿ ಐಸ್ಕ್ರೀಮಿನ ಜಾಹೀರಾತು ಫಲಕವೊಂದನ್ನು ಕಂಡು ವಾಹನ ನಿಲ್ಲಿಸಿ ಐಸ್ಕ್ರೀಮ್ ಖರೀದಿಸಿ ತಿಂದಿದ್ದೆ.
ಪೂರಣಗಿರಿ ಬೆಟ್ಟವನ್ನು ಹತ್ತುತ್ತಿರುವಾಗ ಇಳಿದು ಬರುತ್ತಿದ್ದ ಒಬ್ಬ ಮಾರ್ವಾಡಿ ನಮ್ಮನ್ನು ನೋಡಿ ಕರ್ನಾಟಕದವರೆಂದು ತಿಳಿದು ಅಭಿಮಾನದಿಂದ ಮಾತಾಡಿಸಿದ್ದ. ಅರುಣಾಚಲಪ್ರದೇಶದ ತವಾಂಗ್ ನಲ್ಲಿ ನಾವು ಉಳಿದುಕೊಂಡಿದ್ದ ವಸತಿನಿಲಯದ ಮಾಲೀಕ ಕನ್ನಡದಲ್ಲೇ ಮಾತಾಡಿ ಅಚ್ಚರಿ ಹುಟ್ಟಿಸಿದ್ದ. ವಿಚಾರಿಸಿದಾಗ, ಅವರೊಬ್ಬ ಇಂಜಿನಿಯರ್. ಬೆಂಗಳೂರಿನಲ್ಲೇ ಕುಟುಂಬದೊಂದಿಗೆ ದಶಕಗಳ ಕಾಲ ವಾಸ್ತವ್ಯ ಹೂಡಿದ್ದರು. ಮಗ ಇಲ್ಲಿಯೇ ಇಂಜಿನಿಯರಿಂಗ್ ಮಾಡಿದ್ದ. ಆತನೂ ಸ್ವಚ್ಚವಾದ ಕನ್ನಡದಲ್ಲಿಯೇ ಕಕ್ಕುಲಾತಿಯಿಂದ ನಮ್ಮ ಬೇಕು-ಬೇಡಗಳನ್ನು ವಿಚಾರಿಸಿಕೊಂಡಿದ್ದ.
ಕಾರ್ಗಿಲ್ ನಲ್ಲಿ ಕೂಡಾ ಒಬ್ಬ ಒಂಜಿನಿಯರ್ ಸಿಕ್ಕಿದ್ದ. ಆತ ಕೂಡಾ ಬೆಂಗಳೂರಿನ ತನ್ನ ಸ್ಟೂಡೆಂಟ್ ಅನುಭವಗಳನ್ನು ಹೇಳುತ್ತಾ ತನ್ನ ತಾಯ್ನಾಡಿನ ಸೇವೆಗಾಗಿ ತಾನು ಕಾರ್ಗಿಲ್ ನಲ್ಲೇ ನೆಲೆಸಿರುವುದಾಗಿ ಹೇಳಿಕೊಂಡಿದ್ದ.

ಈಶಾನ್ಯ ರಾಜ್ಯಗಳ ಪ್ರವಾಸದ ಅನುಭವದಲ್ಲಿ ನನ್ನ ಅನುಭವಕ್ಕೆ ಬಂದಿದ್ದು; ಇವರೆಲ್ಲಾ ಬೆಂಗಳೂರನ್ನು ಕ್ರುತಜ್ನತೆಯಿಂದ ನೆನಪಿಸಿಕೊಳ್ಳುತ್ತಾರೆ; ಪ್ರೀತಿಸುತ್ತಾರೆ ಯಾಕೆಂದರೆ ಇವರಿಗೆಲ್ಲಾ ಬೆಂಗಳೂರು ಅನ್ನ ಕೊಟ್ಟಿದೆ. ಈ ನಾಡು ಅವರಿಗೆಲ್ಲಾ ಅನ್ನಪೂರ್ಣೇಶ್ವರಿಯ ಹಾಗೆ ಕಾಣುತ್ತದೆ.
ನನ್ನ ಪ್ರವಾಸಕಾಲದಲ್ಲಿ ಬಹಳ ಜನ ನನ್ನನ್ನು ’ನೀವು ಬೆಂಗಲಿಯಾ’ ಎಂದು ಮಾತಾಡಿಸುತ್ತಾರೆ. ಯಾಕೆ ಹೀಗೆ ಎಂದು ಯೋಚಿಸುತ್ತಿದ್ದೆ. ಕ್ರಮೇಣ ನನ್ನ ಅನುಭವಕ್ಕೆ ಬಂತು; ಬೆಂಗಾಲಿಗಳು ಮತ್ತು ಕನ್ನಡಿಗರು ಪ್ರವಾಸ ಪ್ರೀಯರು. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗಾಡಿಕೊಂಡಿರುತಾರೆ ಅಂತ. ಚಾರ್ ಧಾಮಗಳಾದ ಕೇದಾರ, ಬದರಿ, ಗಂಗೋತ್ರಿ, ಯಮುನೋತ್ರಿಗಳಲ್ಲಂತೂ ಎಲ್ಲಿ ನೋಡಿದರೂ ಕನ್ನಡಿಗರೇ ಕಾಣಸಿಗುತ್ತಾರೆ, ಕನ್ನಡನುಡಿಯೇ ಕಿವಿಗೆ ಬೀಳುತ್ತದೆ.!

[ ’ಚಲಿತ ಚಿತ್ತ’ ಕಾಲಂಗಾಗಿ ಬರೆದ ಲೇಖನ ]



Sunday, July 9, 2017

ಮಾಳವಿಕಾ ಹೇಳಿಕೆಯ ಹಿನ್ನೆಲೆಯಲ್ಲಿ,,,,


ಸೋಷಿಯಲ್ ಮೀಡಿಯಾಗಳಲ್ಲಿ ಹೆಣ್ಣು-ಗಂಡು ಬೇದವಿಲ್ಲದ ಬಹಳಷ್ಟು ಜನರು ಮಾಳವಿಕಾ ಅವಿನಾಶ್ ಮೇಲೆ ಜರಿದುಬಿದ್ದುದ್ದನ್ನು ನೋಡಿ ಆಕೆ ಏನು ಹೇಳಿರಬಹುದೆಂದು ಅಲ್ಲೆಲ್ಲಾ ಹರಿದಾಡುತ್ತಿದ್ದ ಪೇಪರ್ ಕಟ್ಟಿಂಘ್ ಅನ್ನು ಓದಿದೆ. ಅಂತಹ ಪ್ರಮಾದವೇನೂ ಕಾಣಿಸಲಿಲ್ಲ. ಎರಡು ವಾರದಿಂದ ಜ್ವರದಿಂದ ಮಲಗಿ,ಎದ್ದು ಸ್ವಕೆಲಸಗಳನ್ನು ಮಾಡುತ್ತಿದ್ದ ಕಾರಣದಿಂದಾಗಿ ಪೇಪರುಗಳನ್ನು ಸರಿಯಾಗಿ ಓದಲಾಗುತ್ತಿರಲಿಲ್ಲ. ಟೀವಿ ಕೂಡಾ ಹೆಡ್ಲೈನ್ ಗಳನ್ನು ನೋಡಿ ಹಾಗೇ ಬಿದ್ದುಕೊಳ್ಳುತ್ತಿದ್ದೆ.

ಅಂತರ್ಜಾಲ ಮ್ಯಾಗಝೀನ್ ಒಂದು ಮಾಳವಿಕಾ ಹೇಳಿಕೆಯನ್ನೇ ಮುಖ್ಯವಾಗಿಟ್ಟುಕೊಂಡು ವಿಶೇಶ ಪುರವಣಿಯೊಂದನ್ನು ತಂದಾಗ ಮಾಳವಿಕಾ ಹೇಳಿಕೆ ನೀಡಿದ ಪೇಪರನ್ನು ಹುಡುಕಿ ತೆಗೆಯಲೇಬೇಕಾಯ್ತು.
ಅದು ನಿನ್ನೆ ಶನಿವಾರ ಪ್ರಜಾವಾಣಿಯ ’ ಭೂಮಿಕಾ’ ಮಹಿಳಾ ಪುರವಣಿಯಲ್ಲಿ ಕೋಡಿಬೆಟ್ಟು ರಾಜಲಕ್ಮೀಯವರು ಬರೆದ  ’ರಕ್ತದ ಮೇಲೆ ತೆರಿಗೆ’ ಎಂಬ ಪ್ರಧಾನ ಲೇಖನಕ್ಕೆ ಪೂರಕವಾಗಿ ಐದು ಮಹಿಳೆಯರಿಂದ ತೆಗೆದುಕೊಂಡ ಅಭಿಪ್ರಾಯ ಸಂಗ್ರಹಣೆಯಲ್ಲಿ ಮಾಳವಿಕಾ ಅವರದೂ ಒಂದಾಗಿತ್ತು.

ಓದಿದೆ. 
ಸ್ವಲ್ಪ ವಿವರವಾದ ಅಭಿಪ್ರಾಯ ಅವರದು. ಹಾಗಾಗಿ ಮತ್ತೊಮ್ಮೆ ಓದಿದೆ.  ಅಂತಹ ಹೀಯಾಳಿಕೆಗೆ ಕಾರಣವಾದ ಅಂಶಗಳು ಗೊತ್ತಾಗಲಿಲ್ಲ. ನಾನು ದಡ್ಡಿ ಇದ್ದೀರಲೂಬಹುದು. ಅನಂತರ ಹೆಡ್ಡಿಂಗ್ ನೋಡಿದೆ; ’ಸ್ಯಾನಿಟರಿ ಪ್ಯಾಡ್ ಗಳು ಬೇಕಿಲ್ಲ!” ಅಲ್ಲೊಂದು ಅಶ್ಚರ್ಯಜನಕ ಚಿನ್ನೆ ಇತ್ತು. ಸಾಮಾನ್ಯವಾಗಿ ಇಂತಹ ಅಭಿಪ್ರಾಯಗಳನ್ನು ಪತ್ರಿಕೆಯವರು ಬರಹದ ಮೂಲಕ ತೆಗೆದುಕೊಳ್ಳುವುದಿಲ್ಲ. ಪೋನಿನಲ್ಲಿ ಪ್ರಶ್ನೆಗಳನ್ನು ಕೇಳುತ್ತಾರೆ. ಇವರು ಹೇಳಿದುದನ್ನು ಅವರು ಬರೆದುಕೊಳ್ಳುತ್ತಾರೆ. ಆಮೇಲೆ ಅವರೇ ತಮಗೆ ಬೇಕಾದ ಹೆಡ್ಡಿಂಗ್ ಕೊಟ್ಟ್ಕೊಳ್ಳುತ್ತಾರೆ. ಗಮನಿಸಿ: ಒಂದು ಲೇಖನಕ್ಕೆ ನೀವು ಕೊಡುವ ಹೆಡ್ಡಿಂಗ್ ಗಳಿಗೆ, ಲೇಖನದಲ್ಲಿ ಉಪಯೋಗಿಸುವ ಚಿಹ್ನೆಗಳಿಗೆ ಲೇಖನದ ಆಶಯವನ್ನೇ ಬದಲಿಸುವ ಶಕ್ತಿಯಿರುತ್ತದೆ. ಇಲ್ಲಿ ಮಾಳವಿಕಾ ಅವರ ಅಭಿಪ್ರಾಯದ ಹೆಡ್ಡಿಂಗ್ ಕೇವಲ ಒಂದು ಸ್ಟೇಟ್ಮೆಂಟ್ ಆಗಿದೆ. ಮತ್ತು ಅದಕ್ಕೊಂದು ಅಶ್ಚ್ರ್ಯಜನಕ ಚಿಹ್ನೆಯನ್ನು ತಗುಲಿಸಲಾಗಿದೆ. ಹಾಗೆಯೇ ಅವರ ಹೇಳಿಕೆಯ ಕೊನೆಯಲ್ಲಿಯೂ ಮತ್ತೊಂದು ಆಶ್ಚರ್ಯಜನಕ ಚಿಹ್ನೆಯನ್ನು ಲಗತ್ತಿಸಲಾಗಿದೆ. ಅದು ಯಾಕೆ ಅಲ್ಲಿ ನೇತಾಡಿಕೊಂಡಿದೆ ಎಂದು ನನಗರ್ಥವಾಗಲಿಲ್ಲ.

ಮಾಳವಿಕ ಹೇಳಿರುವುದನ್ನು ಒಂದೇ ಫ್ಯಾರ ಮಾಡಲಾಗಿದೆ. ಆದರೆ ಅವರು ಒಂದೇ ವಿಷ್ಯ ಹೇಳಿಲ್ಲ. ಅಲ್ಲಿ ಮೂರು ಅಭಿಪ್ರಾಯಗಳನ್ನು ಹೇಳಿದ್ದಾರೆ. ಬಹುರಾಷ್ಟ್ರೀಯ ಕಂಪೆನಿಗಳ ಸ್ಯಾನಿಟರಿ ಪ್ಯಾಡ್ಗಳ ಡಂಪಿಂಗ್ ಯಾರ್ಡ್ ಭಾರತ ಆಗುತ್ತಿರುವುದರ ಬಗ್ಗೆ ಹೇಳಿದ್ದಾರೆ. ಎರಡನೆಯದಾಗಿ ಅವರು ಪರಂಪರೆಯಿಂದ ನಮ್ಮ ತಾಯಂದಿರು ಬಳಸುತ್ತಾ ಬಟ್ಟೆ ಹೆಚ್ಚು ಹೈಜನಿಕ್ ಆಗಿರುತ್ತದೆ ಎಂದವರು ಮುಂದುವರಿದು ಪ್ರಾಯೋಗಿಕ ಕಾರಣಗಳಿಂದಾಗಿ ಅದನ್ನು ಬಳಸುವುದು ಕಷ್ಟ ಎಂದು ಮುಂದುವರಿದ ರಾಷ್ಟ್ರಗಳಂತೆ ನಾವು ಕ್ರಮೇಣ ಟ್ಯಾಂಪೂನ್ ಗಳನ್ನು ಬಳಸುವುದನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದಿದ್ದಾರೆ. ಮೂರನೆಯದಾಗಿ ಭಾರತದಲ್ಲಿ ಸ್ಯಾನಿಟರಿ ಪ್ಯಾಡ್ ಬಳಸುತ್ತಿರುವವರ ಅಂಕಿಅಂಶಗಳನ್ನು ನೀಡಿದ್ದಾರೆ. ನಾಲ್ಕನೆಯದಾಗಿ ಬಹುಮುಖ್ಯವಾದ ಅಂಶವನ್ನೊಂದು ಹೇಳಿದ್ದಾರೆ . ಅದು; ಶೇ೧೨ ಜಿಎಸ್ ಟಿಯಿಂದ ಡಿಮಾಂಡ್ –ಸಪ್ಲೈ ಆಧಾರಿತವಾದ ಪ್ಯಾಡ್ ಬಳಕೆ ಕಡಿಮೆಯಾಗುತ್ತದೆಯೆಂಬುದು ಸರಿಯಲ್ಲ. ಹಾಗೆ ಒಂದು ವೇಳೆಯಿದ್ದರೂ ಬೇರೆ ಪರಿಸರಸ್ನೇಹಿ ಪರ್ಯಾಯಗಳಿಗದು ಅನುವು ಮಾಡಿಕೊಡಲಿ. ಇದಿಷ್ಟು ಮಾಳವಿಕಾ ಹೇಳಿದ್ದು.

ಮುಟ್ಟಿನ ಸಂಕಟಗಳ ಬಗ್ಗೆ ಹೇಳ ಹೊರಟರೆ ಪ್ರತಿಯೊಬ್ಬ ಮಹಿಳೆಯೂ ಒಂದೊಂದು ಕಾದಂಬರಿ ಬರೆಯಬಹುದು. ಅಷ್ಟು ಸರಕು ಆಕೆಯಲ್ಲಿದೆ. ಅದೂ ಮನೆಯಿಂದ ಏಳು ಗಂಟೆಗೆ ಹೊರಟು ಮತ್ತೆ ಏಳುಘಂಟೆಗೆ ಮನೆ ಸೇರುವ, ದಿನಾ ಹದಿನಾರು ಮೈಲಿ ನಡೆಯಬೇಕಾದ ಅವಸ್ಥೆಯಲ್ಲಿ ನಾವು ನಮ್ಮ ಕೌಮಾರ್ಯವನ್ನು ದಾಟಿ ಬಂದುದು ಒಂದು ಸಾಹಸವೇ ಸರಿ. ಅದೂ ಮಳೆಗಾಲದ ದಿನಗಳಲ್ಲಿ ನಮ್ಮ ಅವಸ್ಥೆ ಹೇಳುವುದೇ ಬೇಡ. ನಮ್ಮ ಶಾಲೆಯಲ್ಲಿ ಶೌಚಾಲಯವೂ ಇರಲಿಲ್ಲ- ಪಿಯೂಸಿ ತನಕ- ಗಿಡ, ಪೊದೆ ಮರೆಗಳಲ್ಲಿ ನಮ್ಮ ಖಾಸಗಿತನವನ್ನು ನಾವು ಕಾಪಾಡಿಕೊಳ್ಳಬೇಕಾಗಿತ್ತು. ನಮ್ಮ ಕ್ಲಾಸಿನ ಒಂದು ಹುಡುಗಿಯ ಹತ್ತಿರ ’ಆ ದಿನಗಳಲ್ಲಿ’ ನಾವು ಎಷ್ಟು ಅಂತರವನ್ನು ಕಾಯ್ದುಕೊಳ್ಳುತ್ತಿದ್ದೆವು ಅಂದರೆ ಐದು ಜನ ಕೂತುಕೊಳ್ಳುವ ಬೆಂಚಿನ ಮೂರೇ ಜನ ಕೂತುಕೊಳ್ಳುತ್ತಿದ್ದೆವು. ಅವಳೊಂದು ತುದಿ..ಉಳಿದಿಬ್ಬರು ಇನ್ನೊಂದು ತುದಿ. ಸಹಿಸಲಸಾಧ್ಯವಾದ ವಾಸನೆ. ಆದರೆಒಂದು ದಿನವೂ ಆಕೆಯ ಮನನೋಯಿಸಿ ಮಾತಾಡಿದವರಲ್ಲ. ಉಳಿದ ದಿನಗಳಲ್ಲಿ ನಾವೆಲ್ಲಾ ಒಂದು.
ಸ್ಯಾನಿಟರಿ ನ್ಯಾಪಕಿನ್ ಗಳು ಬಂದ ಮೇಲೆ ಹುಡುಗಿಯರಿಗೆ ಬಂದ ಆತ್ಮವಿಶ್ವಾಸ ಇದೆಯಲ್ಲಾ, ಅದು ಮೇರುಪರ್ವತದಷ್ಟು. ಶಾಲೆಗಳಲ್ಲಿ ತುರ್ತುಸಂದರ್ಭಗಳಲ್ಲಿ ಮೇಡಂಗಳು ಅದನ್ನು ವಿದ್ಯಾರ್ಥಿನಿಯರಿಗೆ ವಿತರಿಸಲು ಶುರು ಮಾಡಿದ ಮೇಲೆ ನೆಮ್ಮದಿಯ ನಿಟ್ಟುಸಿರು ಬಿಟ್ಟ ಅಮ್ಮಂದಿರಲ್ಲಿ ನಾನೂ ಒಬ್ಬಳು.

ನನ್ನ ಆರಂಭದ ದಿನಗಳಲ್ಲಿ, ಮತ್ತು ನನ್ನ ಹಿಂದಿನ ತಲೆಮಾರಿನ ಮಹಿಳೆಯರು ಉಪಯೋಗಿಸುತ್ತಿದ್ದು ಬಟ್ಟೆಗಳನ್ನು. ಆಗ ಕಾಟನ್ ಬಟ್ಟೆಗಳು ಯಥೇಚ್ಚವಾಗಿ ಸಿಗುತ್ತಿದ್ದ ಕಾಲ. ಆದರೆ ಮೈಮನಗಳನ್ನು ಮುದುರಿಸಿಕೊಂಡು ಮನೆಯಿಂದ ಆಚೆಕಡೆ ’ ಕಾಗೆ ಮುಟ್ಟಿಸಿಕೊಂಡು’ ಅಸ್ಪರ್ಶ್ಯಳಾಗಿ ಮೂರು ದಿನ ಹೊರಗೆ ಕೂರುತ್ತಿದ್ದ ಕಾಲ. ಮೊದಲ ಬಾರಿ-ಋತುಮತಿಯಾದಾಗ ಫಲಭರಿತ ಮರದಡಿಯಲ್ಲಿ ಕುಳ್ಳಿರಿಸಿ ಊರವರನ್ನೆಲ್ಲಾ ಕರೆದು ಆರತಿ ಮಾಡಿಸಿಕೊಂಡು ಸೋದರಮಾವನ ಮನೆ ಸೇರುತ್ತಿದ್ದ ಕಾಲ. ಬಟ್ಟೆಗಳ ಕಾಲದ ನಂತರ ಬಂದಿದ್ದೇ ಸ್ಯಾನಿಟರಿ ಪ್ಯಾಡಿನ ಕಾಲ . ಅದೀಗ ಹೆಣ್ಣುಮಕ್ಕಳ ’ ಆ ದಿನಗಳನ್ನು’ ಆಳುತ್ತಿರುವ ವಸ್ತು. ಆದರೆ ಅದರಲ್ಲಿರುವ ಹಾನಿಕಾರಕ ಗುಣ್ಗಳನ್ನು ಕಂಡುಕೊಂಡ ಪರಿಸರತಜ್ನರು, ಎನ್ಜಿಓಗಳು ಬಟ್ಟೆಯ ಪ್ಯಾಡ್ ಗಳ ಬಗ್ಗೆ ಮಾತಾಡುತ್ತಿದ್ದಾರೆ.

 ಸ್ಯಾನಿಟರಿ ನ್ಯಾಪ್ಕೀನ್ ಗಳ ಬದಲಿಗೆ ಇನ್ನೇನಾದರೂ ಪರಿಣಾಮಕಾರಿಯಾದ ವಸ್ತು ಬಂದಿದ್ದರೆ ಚೆನ್ನಾಗಿತ್ತು ಎಂದು ಹಂಬಲಿಸಿದವಳಲ್ಲಿ ನಾನೂ ಒಬ್ಬಳು. ಅದಕ್ಕೆ ಮುಖ್ಯ ಕಾರಣವಾಗಿದ್ದು, ನಮಗೆ ಅದನ್ನು ಹೇಗೆ ಉಪಯೋಗಿಸುವುದು ಎಂಬುದು ಗೊತ್ತು? ಆದರೆ ಅದನ್ನು ಹೇಗೆ  ವಿಸರ್ಜಿಸುವುದು ಎಂಬುದರ ಬಗ್ಗೆ ಸಾಕಷ್ಟು ಜ್ನಾನವಿದ್ದ ಹಾಗಿಲ್ಲ. ನಾವು ನಡೆದಾಡುವ ಹಾದಿಗಳಲ್ಲಿ, ರಸ್ತೆಗಳಲ್ಲಿ ಅಲ್ಲಲ್ಲಿ ಉಪಯೋಗಿಸಿದ ನ್ಯಾಪಕ್ನಿನ್ ಗಳು ನಿಮಗೆ ಒಂದಲ್ಲ ಒಂದು ಬಾರಿಯಾದರೂ ಕಂಡಿರಲೇಬೇಕು. ಕೆಲವೊಮ್ಮೆ ನಾಯಿಗಳು ಅದನ್ನು ಕಚ್ಚಿ ಹರಿದು ತಿನ್ನುತ್ತಿರುವುದನ್ನು ಗಮನಿಸಿರಲೂ ಸಾಕು. ಅಗೆಲ್ಲಾ ಒಂಥರಾ ಕಸಿವಿಸ್ಗೊಂಡಿದ್ದೇನೆ. ನ್ಯಾಪ್ಕಿನ್ ಗಳಲ್ಲಿ ಪ್ಲಾಸ್ಟಿಕ್ ಅಂಶಗಳಿರುವುದರಿಂದ ಅವುಗಳನ್ನು ಭೂಮಿಯಲ್ಲಿ ಹುಗಿದರೂ ಅದು ಮಣ್ಣಿನಲ್ಲಿ ಮಿಳಿತಗೊಳ್ಳುವುದಿಲ್ಲ. ಸುಟ್ಟರೆ ಪರಿಸರಕ್ಕೆ ಹಾನಿಕಾರಕ ಅಂಶಗಳು ಸೇರಿಕೊಳ್ಳುತ್ತವೆ ಎಂದು ವರದಿಗಳು ಹೇಳುತ್ತವೆ.

ನಾನು ಆಗಾಗ ಪ್ರವಾಸ ಹೋಗುತ್ತೇನೆ. ಹಾಗಾಗಿ ಸಾರ್ವಜನಿಕ ಶೌಚಾಲಯಗಳನ್ನೂ ಬಳಸುತ್ತೇನೆ. ಅಲ್ಲಿ ಎಲ್ಲೆಂದರಲ್ಲಿ ಬಳಸಿದ ನ್ಯಾಪಕಿನ್ ಗಳು ಕಾಣಸಿಗುವುದು ಸಾಮಾನ್ಯ, ಅಲ್ಲಿ ದಕ್ಕೆಂದೇ ಪ್ರತ್ಯೇಕ ಬಕೇಟ್ ಇಟ್ಟಿದ್ದರೂ ಅದರಲ್ಲಿ ಹಾಕದೇ ಶೌಚಾಲಯದ ಮೂಲೆಯಲ್ಲೇ ಹಾಕಿರುತ್ತಾರೆ. ಕೆಲವೊಮ್ಮೆ ಶೌಚಾಲಯದ ಗುಂಡಿಗೇ ಹಾಕಿ ಅದು ಕಟ್ಟಿಕೊಳ್ಳುವಂತೆ ಮಾಡಿಬಿಡುತ್ತಾರೆ. ನಿಮಗೆ ಗೊತ್ತಾ? ಪ್ರಪಂಚದ ಅತ್ಯಂತ ಎತ್ತರದ- 18380 ಅಡಿ- ಮೋಟಾರು ರಸ್ತೆಯಾದ ಕಾರ್ದುಂಗಲ ಪಾಸ್ ನಲ್ಲಿಯೂ ಒಂದು ಮಹಿಳಾ ಶೌಚಾಲಯವಿದೆ. ಅಲ್ಲಿಯೂ ಉಪಯೋಗಿಸಿದ ನ್ಯಾಪ್ಕೀನ್ ಎಲ್ಲೆಂದರಲ್ಲಿ ಬಿಸಾಕಿಹಾಕಿದ್ದನ್ನು ನಾನು ನೋಡಿದ್ದೇನೆ. ಅದನ್ನೆಲ್ಲಾ ಎಂದಾದರೂ ನಮ್ಮ ಪುರುಷ ಜವಾನರೇ ಶುಚಿಗೊಳಿಸಬೇಕಷ್ಟೇ. ಇಂತಹ ಬೇಜವಬ್ದಾರಿತನದಿಂದಲೇ ಇರಬೇಕು ಮನಾಲಿ ರಸ್ತೆಯಲ್ಲಿ ಬರುವ ಜೋಜಿಲ ಪಾಸ್ ಹತ್ತಿರ ಸಿಕ್ಕುವ ಪುಟ್ಟ ಊರಿನಲ್ಲಿ ಸಿಗುವ ಮಹಿಳಾ ಶೌಚಾಲಯಕ್ಕೆ ಅಲ್ಲಿನ ಅಂಗಡಿಯವರು ಬೀಗ ಜಡಿದಿದ್ದರು. ನಾವು ಮನವಿ ಮಾಡಿಕೊಂಡರೂ ಬೀಗ ಕೊಡಲೇ ಇಲ್ಲ.

ನಿಜ, ನಾನು ನನ್ನ ಮಗಳಿಗೆ ಮೊದಲ ’ ಆ ದಿನದಲ್ಲಿ’ ಸ್ಯಾನಿಟರಿ ನ್ಯಾಪಕಿನ್ ಅನ್ನೇ ಪರಿಚಯಿಸಿದ್ದೆ. ಆದರೆ ಅವಳು ಪರಿಸರ ಕಾಳಜಿ ಗುಣ ಹೊಂದಿದವಳಾದ ಕಾರಣ ನ್ಯಾಪ್ಕಿನ್ ಬದಲಿಗೆ ಇನ್ನೇನಾದರೂ ಬಳಸಲು ಸಾಧ್ಯವೇ ಅಂತ ’ಶೀ ಕಪ” ತರಿ’ಸಿಕೊಂಡಳು. ಆದರೆ ಅದರ ಬಳಕೆ ಆಕೆಗೆ ಇರಿಸುಮುರಿಸು ಉಂಟಾದ ಕಾರಣದಿಂದಾಗಿ  ಲೈಪ್ ಲಾಂಗ್ ಇನ್ವೆಸ್ಟ್ ಮೆಂಟ್ ಅಂತ Eco Femme ಬಟ್ಟೆಯ ಪ್ಯಾಡ್ ತರಿಸಿಕೊಂಡಳು. ಅದನ್ನು ಪರ್ಸ್ ತರಹ ಮಡಿಚಿಟ್ಟುಕೊಳ್ಳಬಹುದಾಗಿತ್ತು. ಅದಕ್ಕೊಂದು ಪರ್ತ್ಯೇಕವಾದ ಹ್ಯಾಂಡ್ ಬ್ಯಾಗ್ ತರಹದ ಟ್ರಾವಲ್ ಪೌಚ್ ಇದೆ. ಸ್ರಾವದ ಅನುಕೂಲಕ್ಕೆತಕ್ಕಂತೆ ದೊಡ್ಡ ಮತ್ತು ಚಿಕ್ಕ ಸೈಜ್ ನ ನಾಲ್ಕು ಜೊತೆ ಪ್ಯಾಡ್ಗಳು. ಆದರೆ ತುಂಬಾ ಸ್ರಾವವಿರುವವರು, ದೀರ್ಘಕಾಲ ಮನೆಯಿಂದ ಹೊರಗಿರಬೇಕಾದವರು ಮಧ್ಯದ ಎರಡು ದಿನಗಳಲ್ಲಿ ಅಧಿಕ ಹೀರಿಕೊಳ್ಳುವ ಸಾಮರ್ತ್ಯಕ್ಕಾಗಿ ಸ್ಯಾನಿಟರಿ ನ್ಯಾಪ್ಕಿನ್ಗಳನ್ನೇ ಆಯ್ದುಕೊಳ್ಳುವುದು ಅನಿವಾರ್ಯ.

ಆ ದಿನಗಳ ವಿಷ್ಯಕ್ಕೆ ಬಂದರೆ ನಾವೆಲ್ಲಾ ಮಹಿಳೆಯರೂ ಒಂದೇ..ಹಿಂದೆ ಕಲೆ ಆದಾಗ ಅಪರಿಚಿತ ಮಹಿಳೆಯರು ಪಕ್ಕದಲ್ಲಿ ಬಂದು ಪಿಸುಗುಟ್ಟಿ ಎಚ್ಚರಿಸಿದ್ದಾರೆ. ರೈಲು, ಬಸ್ಸುಗಳಲ್ಲಿ ಅಪತ್ಕಾಲದ ಬಂಧುಗಳಂತೆ ತಮ್ಮಲ್ಲಿದ್ದ ನ್ಯಾಪ್ಕಿನ್ ಕೊಟ್ಟವರಿದ್ದಾರೆ. ಕಾಲೇಜಿನಲ್ಲಿ ಗೆಳತಿಯರೆಲ್ಲಾ ಹಿಂದೆಮುಂದೆ ಕವರ್ ಮಾಡಿಕೊಂಡು ಲೇಡಿಸ್ ರೂಂ ತನಕ ಬಿಟ್ಟವರಿದ್ದಾರೆ. ಕಷ್ಟಕಾಲದಲ್ಲಿ ಅಂಗಡಿಗೆ ಹೋಗಿ ನ್ಯಾಪ್ಕಿನ್ ತಂದು ಕೊಟ್ಟ ಗೆಳೆಯರಿದ್ದಾರೆ. ಈ ಲೇಖನ ಬರೆಯಲು ನೆಪವಾದ ಮಾಳವಿಕರೂ ನನ್ನ ಸ್ನೇಹವಲಯದವರಲ್ಲ. ಅವರನ್ನು ನಾನು ಒಮ್ಮೆಯೂ ಮಾತಾಡಿಸಿಲ್ಲ. ಆದರೆ ಆಕೆಯೂ ಒಬ್ಬ ಮಹಿಳೆ ನಾನೂ ಒಬ್ಬಮಹಿಳೆ ಹಾಗಾಗಿ ಅವರ ಹೇಳಿಕೆಯನ್ನು ಪ್ರಾಕ್ಟಿಕಲ್ ಕ್ರಿಟಿಟಿಸಿಸಂಗೆ ಒಳಪಡಿಸೋಣ ಅನ್ನಿಸಿತ್ತು. ಆಕೆ ಬಿಜೆಪಿಯ ವಕ್ತಾರೆ ಆಗಿರದೆ ಒಬ್ಬ ಸೆಲೆಬ್ರಿಟಿ ಅವರ ಹೇಳಿಕೆಗೆ ಇಷ್ಟು ಮಹತ್ವ ಬರುತ್ತಲೇ ಇರಲಿಲ್ಲವೆನಿಸುತ್ತದೆ.

ಆದೇನೆ ಇರಲಿ ಈಗ, ಭೂಮಿಗೂ ಹಿತ, ದೇಹಕ್ಕೂ ಹಿತ ಎಂಬ ಉದ್ದೇಶದಡಿ ಕೆಲವು ಎನ್ಜಿಓಗಳು ಬಟ್ಟೆಯ ಪ್ಯಾಡ್ ಗಳನ್ನು ಮಾಡುವುದನ್ನು ಆರಂಭಿಸಿದ್ದಾರೆ; ವಿತರಿಸುತ್ತಿದ್ದಾರೆ. ಅಂತದ್ದನ್ನು ಜಿಎಸ್ಟಿಯಿಂದ ಮುಕ್ತಗೊಳಿಸಿ ಸರಕಾರವೇ ಅದರಿಂದ ನೇರವಾಗಿ ಖರೀದಿ, ಶಾಲಾಬಾಲಕಿಯರಿಗೆ, ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಅತೀ ಕನಿಷ್ಟ ದರದಲ್ಲಿ ವಿತರಿಸುವ ವ್ಯವಸ್ಥೆ ಮಾಡಬೇಕು. ಆಗ ಮಹಿಳೆಯರು ಆತ್ಮವಿಶ್ವಾಸದಿಂದ ತಲೆಯೆತ್ತಿ ನಡೆಯುತ್ತಾ